Tag: Pratap Chandra Shetty

  • ಸಹಕಾರ ಕೊಟ್ಟ ಪ್ರತಿಯೊಬ್ಬರಿಗೂ ಕೃತಜ್ಞತೆಗಳು – ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ

    ಸಹಕಾರ ಕೊಟ್ಟ ಪ್ರತಿಯೊಬ್ಬರಿಗೂ ಕೃತಜ್ಞತೆಗಳು – ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ

    ಬೆಂಗಳೂರು: ಮೇಲ್ಮೆನೆಯಲ್ಲಿ ಸಭಾಪತಿಗಳ ರಾಜೀನಾಮೆ ಪ್ರಹಸನಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಭಾಪತಿಗಳ ವಿರುದ್ಧ ಬಿಜೆಪಿ-ಜೆಡಿಎಸ್ ಅವಿಶ್ವಾಸ ನಿರ್ಣಯ ಮಂಡಿಸಿದ ಕಾರಣ ಪ್ರತಾಪ್‍ಚಂದ್ರ ಶೆಟ್ಟಿ, ಕಲಾಪ ಮುಗಿಯಲು ಒಂದು ದಿನ ಇರುವಾಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    ಇಂದಿನ ಕಲಾಪದ ಅಂತ್ಯದ ವೇಳೆಗೆ ಅವಿಶ್ವಾಸ ನಿರ್ಣಯದ ಕುರಿತು ಚರ್ಚೆಯಾಗುತ್ತಿದ್ದಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡುವುದಕ್ಕೂ ಮುನ್ನ ಮಾತನಾಡಿದ ಅವರು, ಈಗ ನನ್ನ ಜವಾಬ್ದಾರಿ ಮುಗಿದಿದೆ. ನಾನು ನಿರಾಳನಾಗಿದ್ದೇನೆ. ಸದನದ ಬಲಾಬಲಗಳು ಬದಲಾಗಿರುವುದು ನನ್ನ ಗಮನಕ್ಕೆ ಬಂದಿದೆ ಎಂದರು.

    ತಾಂತ್ರಿಕವಾಗಿ ಬಹುಮತ ಸಾಬೀತು ಮಾಡುವುದಕ್ಕೆ ನನಗೆ ಮುಂದಿನ ಅಧಿವೇಶನದ ತನಕವೂ ಸಮಯಾವಕಾಶ ಇದೆ. ಆದರೆ ಬದುಕಿನಲ್ಲಿ ನೈತಿಕತೆಗೆ ಅಪಾರವಾದ ಬೆಲೆ ಕೊಡುತ್ತಾ ಬಂದವನು ನಾನು. ಈ ಹಿನ್ನೆಲೆಯಲ್ಲಿ ಚರ್ಚೆಗೆ ಆಸ್ಪದ ಕೊಡದೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆಯನ್ನು ಸದನದ ನಿಯಮದಂತೆ ಉಪ ಸಭಾಪತಿಗಳಿಗೆ ಕಲಾಪ ಮುಗಿದ ತಕ್ಷಣ ಸಲ್ಲಿಸುತ್ತಿದ್ದೇನೆ. ಪೀಠ ತ್ಯಾಗ ಮಾಡುತ್ತಿದ್ದೇನೆ. ನನಗೆ ಸಹಕಾರ ಕೊಟ್ಟ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ಎಂದು ತಿಳಿಸಿದರು.

    ಸಭಾ ನಾಯಕರು, ಪ್ರತಿ ಪಕ್ಷದ ನಾಯಕರು, ಸದನದ ಸಿಬ್ಬಂದಿ ಎಲ್ಲರ ಸಹಕಾರ ನೆನೆಯುತ್ತೇನೆ. ಮುಂದಿನ ದಿನಗಳಲ್ಲಿ ಬರಲಿರುವ ವ್ಯವಸ್ಥೆಗೂ ತಮ್ಮೆಲ್ಲರ ಸಹಕಾರ ಸಿಗಲಿ ಎಂದು ಆಶಿಸುತ್ತೇನೆ ಎಂದು ಹೇಳಿ ರಾಜೀನಾಮೆ ಸಲ್ಲಿಸಿದ್ದಾರೆ.

    ಇದಕ್ಕೂ ಮುನ್ನ, ಪ್ರತಾಪ್ ಚಂದ್ರಶೆಟ್ಟಿ ಮತ್ತು ಬಸವರಾಜ್ ಹೊರಟ್ಟಿ ಮಾತುಕತಡೆ ನಡೆಸಿದ್ದು ಕಂಡು ಬಂತು. ಕಳೆದ ತಿಂಗಳೇ ಸಭಾಪತಿ ಚುನಾವಣೆ ಸಂಬಂಧ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ವು. ಆಗಲೇ ಸಭಾಪತಿಗಳು ರಾಜೀನಾಮೆ ನೀಡಬೇಕಿತ್ತು. ಈ ಸಂಬಂಧ ಕಳೆದ ತಿಂಗಳು ಪರಿಷತ್‍ನಲ್ಲಿ ದೊಡ್ಡ ಗಲಾಟೆಯೇ ಆಗಿತ್ತು. ಇದಾದ 10 ದಿನಕ್ಕೆ ಅಂದಿನ ಉಪಸಭಾಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ರು.

    ಪ್ರತಾಪ್‍ಚಂದ್ರ ಶೆಟ್ಟಿ ರಾಜೀನಾಮೆಯಿಂದಾಗಿ ಇದೀಗ ಬಸವರಾಜ್ ಹೊರಟ್ಟಿ ಸಭಾಪತಿಗಳಾಗೋದು ಬಹುತೇಕ ಖಚಿತವಾಗಿದೆ. ಆದ್ರೆ, ಈ ಪ್ರಕ್ರಿಯೆ ಮುಗಿಯಲು ಒಂದೆರಡು ದಿನ ಬೇಕಾಗುತ್ತದೆ. ಹೀಗಾಗಿ ಪರಿಷತ್ ಕಲಾಪವನ್ನು ಎರಡು ದಿನ ವಿಸ್ತರಿಸಲು ಸರ್ಕಾರ ಪತ್ರ ಬರೆದಿದೆ.

  • ಮಂಗಳವಾರ ಪರಿಷತ್ ಕಲಾಪ – ಸಭಾಪತಿ ಪದಚ್ಯುತಿ ಆಗುತ್ತಾ?

    ಮಂಗಳವಾರ ಪರಿಷತ್ ಕಲಾಪ – ಸಭಾಪತಿ ಪದಚ್ಯುತಿ ಆಗುತ್ತಾ?

    ಬೆಂಗಳೂರು: ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದ ನಂತರ ಇದೇ ಮೊದಲ ಬಾರಿಗೆ ಕಲಾಪವನ್ನು ಮತ್ತೆ ನಡೆಸುವ ಮೂಲಕ ರಾಜ್ಯ ವಿಧಾನ ಪರಿಷತ್ ಇತಿಹಾಸ ಸೃಷ್ಟಿಸುತ್ತಿದೆ. ನಾಳೆ ಪರಿಷತ್ ಕಲಾಪ ಆರಂಭವಾದ ಕೂಡಲೇ ಸಭಾಪತಿ ಪೀಠದಲ್ಲಿ ಉಪಸಭಾಪತಿ ಧರ್ಮೇಗೌಡರನ್ನು ಕೂರಿಸಲು ಬಿಜೆಪಿ ಪ್ಲಾನ್ ಎ ರೆಡಿ ಮಾಡಿದೆ.

    ಒಂದೊಮ್ಮೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮೊದಲೇ ಪೀಠದ ಮೇಲೆ ಬಂದು ಕೂತರೆ, ಪಕ್ಕದಲ್ಲೇ ಮತ್ತೊಂದು ಪೀಠ ಹಾಕಿ ಅದರಲ್ಲಿ ಉಪಸಭಾಪತಿ ಧರ್ಮೇಗೌಡರನ್ನು ಕೂರಿಸಲು ಸಹ ಬಿಜೆಪಿ ಪ್ಲಾನ್ ಮಾಡ್ಕೊಂಡಿದೆ. ಅವಿಶ್ವಾಸ ನಿರ್ಣಯದ ನೋಟಿಸ್ ಕೊಟ್ಟಿರುವ ಹಿನ್ನೆಲೆಯಲ್ಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಪೀಠದ ಮೇಲೆ ಕೂರುವುದಕ್ಕೆ ಅವಕಾಶ ಕೊಡದೇ ಬಿಜೆಪಿ ಗದ್ದಲ ನಡೆಸುವ ಸಂಭವ ಇದೆ.

    ಸಭಾಪತಿ ಬದಲಾವಣೆ ಆದಲ್ಲಿ ಮಾತ್ರ ಗೋಹತ್ಯೆ ಮಸೂದೆ ಮಂಡಿಸಿ ಅಂಗೀಕಾರ ಪಡೆಯಲು ಬಿಜೆಪಿ ಪ್ಲಾನ್ ಮಾಡಿದೆ. ಸಭಾಪತಿ ಬದಲಾವಣೆ ವಿಚಾರದಲ್ಲಿ ಜೆಡಿಎಸ್ ಬೆಂಬಲ ಸಿಗುವ ವಿಶ್ವಾಸದಲ್ಲಿ ಬಿಜೆಪಿ ಇದೆ. ಸಭಾಪತಿ ಸ್ಥಾನಕ್ಕೆ ಬಿಜೆಪಿಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ, ಸುಶೀಲ್ ನಮೋಶಿ, ಮಹಾಂತೇಶ ಕವಟಗಿಮಠ, ಅರುಣ್ ಶಹಾಪೂರ ಹೆಸರುಗಳು ಕೇಳಿಬರುತ್ತಿವೆ.

    ನಾಳೆ ಬೆಳಗ್ಗೆ ಸಭಾಪತಿ ಸ್ಥಾನದ ಅಭ್ಯರ್ಥಿ ಹೆಸರನ್ನು ಬಿಜೆಪಿ ಅಖೈರು ಮಾಡಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸದನದಲ್ಲಿ ಜೆಡಿಎಸ್ ಪಾತ್ರ ಸ್ಪಷ್ಟವಾಗಿದೆ. ಸಭಾಪತಿ ವಿರುದ್ಧದ ಅವಿಶ್ವಾಸ ಗೊತ್ತುವಳಿ ವಿಚಾರದಲ್ಲಿ ಪಕ್ಷದ ತೀರ್ಮಾನ ನಾಳೆ ಪ್ರಕಟಿಸಲಾಗುವುದು ಎಂದಿದ್ದಾರೆ.

    ವಿಪಕ್ಷ ನಾಯಕ ಎಸ್‍ಆರ್ ಪಾಟೀಲ್ ಮಾತನಾಡಿ, ಸಭಾಪತಿಗಳ ವಿರುದ್ದ ಅವಿಶ್ವಾಸ ಗೊತ್ತುವಳಿ ಕ್ರಮಬದ್ಧವಾಗಿಲ್ಲ ಅಂತ ತಿರಸ್ಕೃತವಾಗಿದೆ. ಈ ಬಗ್ಗೆ ಕಾನೂನು ಸಲಹೆ ಪಡೆದು ಸಭಾಪತಿಗಳು ಸದಸ್ಯರಿಗೆ ಹಿಂಬರಹ ನೀಡಿದ್ದಾರೆ. ಹಾಗಾಗಿ ಕಲಾಪದಲ್ಲಿ ಆ ಬಗ್ಗೆ ಚರ್ಚೆಗೆ ಅವಕಾಶ ಇಲ್ಲ ಎಂದು ತಿಳಿಸಿದರು.