ಸ್ಟಾರ್ ಇಮೇಜ್ ಇರುವ ಸ್ಟಾರ್ ಚಿತ್ರಗಳ ನಿರ್ದೇಶಕ ಪ್ರಶಾಂತ್ ನೀಲ್ (PrashanthNeel) ಚಿತ್ರ ಮಾಡ್ತಿದ್ದಾರೆ ಅಂದ್ರೆ ಅದು ನೂರು ಕೋಟಿ ಬಜೆಟ್ ಮೀರುವುದಂತೂ ನಿಶ್ಚಿತ. ಇದೀಗ ಪ್ರಶಾಂತ್ ನೀಲ್ ಅಡ್ಡದಿಂದ ನಯಾ ನ್ಯೂಸ್ ಬಂದಿದೆ. ಮುಂಬರುವ ಚಿತ್ರಕ್ಕಾಗಿ ಪ್ರಶಾಂತ್ ನೀಲ್ 15 ಕೋಟಿ ರೂ. ವೆಚ್ಚದಲ್ಲಿ ಕೃತಕ ಮನೆ ಅಂದರೆ ಸೆಟ್ ಅನ್ನ ನಿರ್ಮಿಸಿದ್ದಾರಂತೆ.
ಬರೋಬ್ಬರಿ 15 ಕೋಟಿ ರೂ. ವೆಚ್ಚ ಅಂದ್ರೆ ಯೋಚಿಸಿ ಆ ಸೆಟ್ ಹೇಗಿರಬೇಡ. ಇಷ್ಟು ದುಡ್ಡಿನಲ್ಲಿ ಸೈಟ್ ಖರೀದಿಸಿ ಮನೆಯನ್ನೇ ಕಟ್ಟಿಸಿಕೊಳ್ಳಬಹುದಿತ್ತು. ಹೀಗಿರುವಾಗ ಸೆಟ್ಗಾಗಿ ಇಷ್ಟೊಂದು ಕೋಟಿ ಖರ್ಚು ಮಾಡಬೇಕಾ ಎಂದು ಆಶ್ಚರ್ಯವಾಗೋದು ಖಂಡಿತ. ಆದರೆ ಪ್ರಶಾಂತ್ ನೀಲ್ ಇಷ್ಟ ಪಡುವ ಮ್ಯಾಜಿಕಲ್ ಲೋಕವೇ ಬೇರೆ. ಅವರ ಕಲ್ಪನಾ ಲಹರಿಗೆ ತಕ್ಕಂತೆ ಬಣ್ಣ, ಅದಕ್ಕೆ ತಕ್ಕಂತೆ ಸಲಕರಣೆ ಹಾಗೂ ವಿಂಗಡನೆ ನೈಜ ಬೆಳಕು ಇರಬೇಕು. ಇದೇ ಕಾರಣಕ್ಕೆ ಮುಂಬರುವ ಜೂ.ಎನ್ಟಿಆರ್ ಚಿತ್ರಕ್ಕಾಗಿ ಹೈದ್ರಾಬಾದ್ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಒಂದು ಮನೆಯ ಸೆಟ್ ನಿರ್ಮಿಸಲಾಗಿದೆ.
ಪ್ರಶಾಂತ್ ನೀಲ್ ಹಾಗೂ ಜೂ.ಎನ್ಟಿಆರ್ (JR.NTR) ನಟನೆಯ ಈ ಚಿತ್ರಕ್ಕೆ `ಡ್ರ್ಯಾಗನ್’ (Dragon) ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೆಲ ಭಾಗಗಳಲ್ಲಿ ಮೊದಲ ಶೆಡ್ಯೂಲ್ ಚಿತ್ರೀಕರಣ ನಡೆದಿದೆ. ಇದೀಗ ಎರಡನೇ ಶೆಡ್ಯೂಲ್ ಚಿತ್ರೀಕರಣಕ್ಕಾಗಿ ನಾಯಕನ ಪಾತ್ರದಲ್ಲಿ ಬರುವ ಮನೆಗಾಗಿ ಇಷ್ಟೊಂದು ಬಿಗ್ ಬಜೆಟ್ನಲ್ಲಿ ಸೆಟ್ ಹಾಕಲಾಗಿದೆ.
ಪ್ರತಿಯೊಂದರಲ್ಲೂ ಪರ್ಟಿಕ್ಯುಲರ್ ಇರುವ ಪ್ರಶಾಂತ್ ನೀಲ್, ನಾಯಕನ ಪಾತ್ರಕ್ಕೆ ಬೇಕಾದ ಸೆಟ್ ಮನೆಯ ವಿನ್ಯಾಸವನ್ನೂ ಹೇಳಿ ಮಾಡಿಸಿದ್ದಾರಂತೆ. ಇಲ್ಲಿಯೇ ಎರಡನೇ ಶೆಡ್ಯೂಲ್ ಶೂಟಿಂಗ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಇದೇ ಭಾಗದಲ್ಲಿ ನಟಿ ರುಕ್ಮಿಣಿ ವಸಂತ್ ಕೂಡ ಜಾಯಿನ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾವುದರ ಕುರಿತೂ ಚಿತ್ರತಂಡದಿಂದ ಅಧಿಕೃತ ಘೋಷಣೆ ಇಂದಿಗೂ ಹೊರಬಂದಿಲ್ಲ.
15 ಕೋಟಿ ರೂ. ವೆಚ್ಚದಲ್ಲಿ ಸೆಟ್ ನಿರ್ಮಿಸಿದ ಪ್ರೊಡಕ್ಷನ್ ಕಂಪನಿ ಯಾವುದು ಗೊತ್ತೇ? ಅದುವೇ ಮೈತ್ರಿ ಮೂವಿ ಮೇಕರ್ಸ್. ಇದೇ ಬ್ಯಾನರ್ ಹಿಂದೆ ಅದ್ಧೂರಿ ಪುಷ್ಪ ಸಿರೀಸ್ಗಳನ್ನ ನಿರ್ಮಿಸಿತ್ತು. ಪುಷ್ಪ ಮುಂದಿನ ಸೀಕ್ವೆಲ್ ಆರಂಭವಾಗೋದ್ರ ಮಧ್ಯದ ಗ್ಯಾಪ್ನಲ್ಲಿ ಡ್ರ್ಯಾಗನ್ ಚಿತ್ರವನ್ನು ತರುತ್ತಿದೆ ಈ ಸಂಸ್ಥೆ. ಅಂದಹಾಗೆ ಈ ಚಿತ್ರ 250 ಕೋಟಿ ರೂ. ಬಜೆಟ್ನ ಚಿತ್ರ ಎನ್ನಲಾಗುತ್ತಿದೆ. ಇದೀಗ 15 ಕೋಟಿ ಮನೆಯೇ ಆಶ್ಚರ್ಯ ಮೂಡಿಸುತ್ತಿದೆ. ಮುಂದೆ ಇನ್ನೆಷ್ಟು ಅದ್ಭುತ ಕಥೆಗಳು ಕಿವಿಗೆ ಬೀಳುತ್ತವೋ ಎಂದು ಕಾದು ನೋಡ್ಬೇಕಿದೆ.
ಕನ್ನಡದ ಜಾಗ್ವರ್, ಮದಗಜ, ರಾಬರ್ಟ್ ಸಿನಿಮಾಗಳಲ್ಲಿ ಬಹುಭಾಷಾ ನಟ ಜಗಪತಿ ಬಾಬು ಅವರು ‘ಸಲಾರ್’ (Salaar) ಪ್ರಭಾಸ್ ಮುಂದೆ ಜಗಪತಿ ಬಾಬು (Jagapathi Babu) ಅಬ್ಬರಿಸಲಿದ್ದಾರೆ. ಪ್ರಭಾಸ್ಗೆ ಠಕ್ಕರ್ ಕೊಡಲು ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರೆ. ಈ ಬಗ್ಗೆ ಟಿಟೌನ್ನಲ್ಲಿ ಭಾರೀ ಚರ್ಚೆ ಆಗುತ್ತಿದೆ. ಜೊತೆ ಸಲಾರ್ ಸಿನಿಮಾ ಬಗ್ಗೆ ಮೇಜರ್ ಅಪ್ಡೇಟ್ ಕೊಟ್ಟಿದ್ದಾರೆ.
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಜಗಪತಿ ಬಾಬು ಅವರಿಗೆ ಸಖತ್ ಡಿಮ್ಯಾಂಡ್ಯಿದೆ. ಸ್ಟಾರ್ ನಟರ ಸಿನಿಮಾಗಳಿಗೆ ಜಗಪತಿ ಬಾಬು ಅವರೇ ಬೇಕು ಎನ್ನುವಷ್ಟರ ಮಟ್ಟಿಗೆ ಹವಾ ಕ್ರಿಯೆಟ್ ಆಗಿದೆ. ಹೀಗಿರುವಾಗ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ಜಗಪತಿ ಬಾಬು ನಟಿಸಿದ್ದಾರೆ. ಅವರ ಪಾತ್ರಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ.
ಖಡಕ್ ರೋಲ್ನಲ್ಲಿ ಜಗಪತಿ ಬಾಬು ‘ಸಲಾರ್’ನಲ್ಲಿ (Salaar) ನಟಿಸಿದ್ದಾರೆ. ಸಲಾರ್ ಮೊದಲ ಭಾಗದಲ್ಲಿ ಜಗಪತಿ ಬಾಬು (Jagapathi Babu) ಅವರ ಪಾತ್ರದ ಪರಿಚಯವಾಗುತ್ತದೆ. ಸಲಾರ್ ಎರಡನೇ ಭಾಗದಲ್ಲಿ ಜಗಪತಿ ಬಾಬು ಪೂರ್ಣ ಪ್ರಮಾಣದಲ್ಲಿ ಪ್ರಭಾಸ್ ಜೊತೆ ಕಾಣಿಸಿಕೊಳ್ಳುತ್ತಾರೆ. ರಾಜಮಾನಾರ್ ಎಂಬ ರೋಲ್ನಲ್ಲಿ ಜಗಪತಿ ಬಾಬು ನಟಿಸಿದ್ದಾರೆ ಎಂದು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಮೂಲಕ ಕೆಜಿಎಫ್ನಂತೆಯೇ ಸಲಾರ್ ಎರಡು ಭಾಗಗಳಲ್ಲಿ ಬರೋದಾಗಿ ಜಗಪತಿ ಬಾಬು ಬಾಯ್ಬಿಟ್ಟಿದ್ದಾರೆ. ಈ ಸುದ್ದಿ ಕೇಳ್ತಿದ್ದಂತೆ ಪ್ರಶಾಂತ್ ನೀಲ್- ಪ್ರಭಾಸ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಪ್ರಭಾಸ್ ಮುಂದೆ ಅಬ್ಬರಿಸಲು ಜಗಪತಿ ಬಾಬು 4 ಕೋಟಿ ರೂಪಾಯಿ ತೆಗೆದುಕೊಂಡಿದ್ದಾರೆ. ಪಾತ್ರ ಯಾವುದೇ ಇರಲಿ, ಸಣ್ಣ ಪ್ರಾಜೆಕ್ಟ್ ಮತ್ತು ದೊಡ್ಡ ಬಜೆಟ್ ಸಿನಿಮಾ ಎಂಬುದೆಲ್ಲಾ ಏನು ಇಲ್ಲಾ. ಕಥೆ ಚೆನ್ನಾಗಿರಬೇಕು ಎನ್ನುತ್ತಾರೆ ಸಲಾರ್ ನಟ ಜಗಪತಿ ಬಾಬು. ಇದನ್ನೂ ಓದಿ:ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ‘ಪಠಾಣ್’ ಬೆಡಗಿ
ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದ ಸಲಾರ್ನಲ್ಲಿ ಪ್ರಭಾಸ್ ಜೊತೆ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಸೇರಿದಂತೆ ಹಲವರು ನಟಿಸಿದ್ದಾರೆ. ಕನ್ನಡದ ಕೆಜಿಎಫ್ 2 ನಿರ್ದೇಶಕ ಪ್ರಶಾಂತ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇದೇ ಸೆಪ್ಟೆಂಬರ್ 28ಕ್ಕೆ ತೆರೆಗೆ ಬರಲಿದೆ.
`ಅರ್ಜುನ್ ರೆಡ್ಡಿ’ ಹೀರೋ ವಿಜಯ್ ದೇವರಕೊಂಡ(Vijay Devarakonda) `ಲೈಗರ್'(Liger Film) ಸೋಲಿನ ನಂತರ ಇದೀಗ ಪ್ರಭಾಸ್ ನಟನೆಯ `ಸಲಾರ್’ (Salar) ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಲೈಗರ್ ಸೋಲಿನ ಬಿಸಿಯಲ್ಲಿರುವ ವಿಜಯ್ ಈಗ ಬಾಹುಬಲಿ (Bahubali) ನಟನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸೌತ್ ಸಿನಿರಂಗದ ಬಹುನಿರೀಕ್ಷಿತ ಚಿತ್ರ ಪ್ರಶಾಂತ್ ನೀಲ್ ನಿರ್ದೇಶನದ `ಸಲಾರ್’ ಚಿತ್ರತಂಡದ ತಾರಾಬಳಗ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಇತ್ತೀಚೆಗಷ್ಟೇ ಪೃಥ್ವಿರಾಜ್ ಸುಕುಮಾರನ್ ಕೂಡ `ಸಲಾರ್’ ತಂಡ ಸೇರಿಕೊಂಡಿದ್ದರು. ಈ ಬೆನ್ನಲ್ಲೇ ವಿಜಯ್ ದೇವರಕೊಂಡ ಕೂಡ ಸಲಾರ್ಗೆ ಸೇರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ರು `ಅಗ್ನಿಸಾಕ್ಷಿ’ಯ ವೈಷ್ಣವಿ ಗೌಡ
ಸಲಾರ್ ಸೆಟ್ನಲ್ಲಿ ವಿಜಯ್ ಕೂಡ ಇದ್ದಾರೆ ಎನ್ನಲಾಗುವಂತಹ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದು ಜಾಹಿರಾತಿನ ಫೋಟೋಗಳು ಎಂದರೆ, ಇನ್ನೂ ಕೆಲ ನೆಟ್ಟಿಗರು ಇದು ಸಲಾರ್ ಸಿನಿಮಾದ ಫೋಟೋಗಳು ಎಂದು ಸದ್ದಿಯಾಗುತ್ತಿದೆ. ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ
ಅಷ್ಟಕ್ಕೂ ವಿಜಯ್ ದೇವರಕೊಂಡ `ಸಲಾರ್’ ಸಿನಿಮಾ ತಂಡವನ್ನ ಸೇರಿಕೊಂಡಿದ್ದಾರಾ ಅಥವಾ ಇದು ಸುಳ್ಳು ಸುದ್ದಿ ಎಂಬುದನ್ನ ಚಿತ್ರತಂಡವೇ ಸ್ಪಷ್ಟಪಡಿಸಬೇಕಿದೆ. ಇದುವೆರೆಗೂ ಚಿತ್ರತಂಡದಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಚಿತ್ರತಂಡ ರಿಯಾಕ್ಷನ್ ಸಿಗುವವೆಗೂ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಬಾಲಿವುಡ್ನಲ್ಲಿ ಸದ್ಯ ಸೌಂಡ್ ಮಾಡ್ತಿರೋ ಏಕೈಕ ಚಿತ್ರ ಅಂದ್ರೆ `ಕೆಜಿಎಫ್ 2′ ಸಿನಿಮಾ. ಈ ಚಿತ್ರದದ ಯಶಸ್ಸಿನ ನಂತರ ಹಿಂದಿ ಚಿತ್ರಗಳನ್ನೇ ರಿಲೀಸ್ ಮಾಡಲು ಹಿಂದೆ ಮುಂದೆ ನೋಡ್ತಿದ್ದಾರೆ ಬಿಟೌನ್ ಮಂದಿ. ಚಿತ್ರ ಸಕ್ಸಸ್ಫುಲ್ ಪ್ರದರ್ಶನ ಕಾಣ್ತಾ ಎರಡನೇ ವಾರದತ್ತ ಮುನ್ನುಗುತ್ತಿದೆ. ಇವರೆಗೂ ಎಲ್ಲೂ ಹಿಂದೆ ಬೀಳದೇ ಸೋಮವಾರದ ಕಲೆಕ್ಷನ್ನಲ್ಲಿ 8 ಕೋಟಿ ಬಾಚಿದೆ. ಈ ಮೂಲಕ ಚಿತ್ರದ ಒಟ್ಟು ಕಲೆಕ್ಷನ್ 329 ಕೋಟಿ ರೂಪಾಯಿ ಖಜಾನೆ ಭರ್ತಿ ಮಾಡಿದೆ.
ಈ ಹಿಂದಿನ ಎಲ್ಲಾ ಸಿನಿಮಾಗಳ ದಾಖಲೆಗಳನ್ನ `ಕೆಜಿಎಫ್ 2′ ಮುರಿದಿದೆ. ಬಾಲಿವುಡ್ ಬಾಕ್ಸ್ಆಫೀಸ್ನಲ್ಲಿ ಸಖತ್ ಸದ್ದು ಮಾಡಿದ್ದ ಭಜರಂಗಿ ಭಾಯಿಜಾನ್ 320.34 ಕೋಟಿ, ಸುಲ್ತಾನ್ 300 ಕೋಟಿ, ಪದ್ಮಾವತ್ 302 ಕೋಟಿ ಬಾಚಿತ್ತು ಈಗ ಈ ಚಿತ್ರಗಳ ರೆಕಾರ್ಡ್ `ಕೆಜಿಎಫ್ 2′ ಬ್ರೇಕ್ ಮಾಡಿದೆ.
ಬಿಟೌನ್ನ ʻಸಂಜುʼ, ʻಟೈಗರ್ ಜಿಂದಾ ಹೈʼ, ʻಪಿಕೆʼ ಚಿತ್ರಗಳನ್ನು ಓವರ್ಟೆಕ್ ಮಾಡಿದೆ `ಕೆಜಿಎಫ್ 2′ ಚಿತ್ರದ ಜೊತೆ ಹಿಂದಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಅಮೀರ್ ಖಾನ್ ನಟನೆಯ `ದಂಗಲ್’ ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ 387 ಕೋಟಿ ಬಾಚಿತ್ತು ಇದೀಗ ಈ ಎಲ್ಲಾ ಚಿತ್ರಗಳನ್ನ ಮೀರಿ `ಕೆಜಿಎಫ್ 2′ ಮುನ್ನುಗುತ್ತಿದೆ ಎಂಬುದು ಸಿನಿಮಂದಿಯ ಲೆಕ್ಕಾಚಾರ.
ಇನ್ನು ಇತ್ತೀಚೆಗೆ ರಿಲೀಸ್ ಆದ `ಜೆರ್ಸಿ’ ಚಿತ್ರಕ್ಕೂ ಸೈಡ್ ಹೊಡೆದು `ಕೆಜಿಎಫ್ 2′ ಉತ್ತಮ ಪ್ರದರ್ಶನ ಕಂಡಿತ್ತು. ಬಾಕ್ಸ್ಆಫೀಸ್ನಲ್ಲಿ ಒಟ್ಟು 329.40 ಕೋಟಿ ರೂಪಾಯಿ ಲಕೋಟೆ ಬಾಚಿದೆ ಯಶ್ ನಟನೆಯ ಸಿನಿಮಾ. `ಕೆಜಿಎಫ್ 2′ ಓಟಕ್ಕೆ ಎಲ್ಲಾ ವುಡ್ಗಳ ಸಿನಿಮಾನೂ ಬೆದರಿ ನಿಲ್ಲುತ್ತಿದೆ.
ಪ್ರಶಾಂತ್ ನೀಲ್ ಮತ್ತು ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ರಿಲೀಸ್ ಆಗೋಕೆ ದಿನಗಣನೆ ಶುರುವಾಗಿದೆ. ಇದೇ ಏಪ್ರಿಲ್ 14ಕ್ಕೆ ತೆರೆಗೆ ಅಪ್ಪಳಿಸಲಿದೆ. ಚಿತ್ರತಂಡ ಕೂಡ ಬ್ಯಾಕ್ ಟು ಬ್ಯಾಕ್ ಅಪ್ಡೇಟ್ನಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡ್ತಿದ್ದಾರೆ. ಈಗ `ಕೆಜಿಎಫ್ ೨’ ಸಿನಿಮಾದಲ್ಲಿ ಸಿನಿರಸಿಕರಿಗೆ ಬಿಗ್ ಸಪ್ರೈಸ್ ಇರಲಿದೆ.
`ಕೆಜಿಎಫ್ 2′ ಶೂಟಿಂಗ್ ಗ್ಯಾಪ್ನಲ್ಲೇ ಶೂಟಿಂಗ್ ಮಾಡಿರೋ, ಪ್ರಶಾಂತ್ ನೀಲ್ ನಿರ್ದೇಶನದ `ಕೆಜಿಎಫ್ 2′ ರಿಲೀಸ್ನಲ್ಲಿ ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಇರಲಿದೆ. ಪ್ರಭಾಸ್ ನಟನೆಯ ʼಸಲಾರ್’ ಚಿತ್ರದ ಟೀಸರ್ ಕೂಡ `ಕೆಜಿಎಫ್ 2’ನಲ್ಲಿ ಅಟ್ಯಾಚ್ ಆಗಿರಲಿದೆ. ಈ ಸುದ್ದಿ ಕೇಳಿ ರಾಕಿಭಾಯ್ ಫ್ಯಾನ್ಸ್ ಜೊತೆಗೆ ಪ್ರಭಾಸ್ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.
ಬಿಗ್ ಬಜೆಜ್ ಸಿನಿಮಾಗಳು ರಿಲೀಸ್ ಆಗುವಾಗ ಬಿಡುಗಡೆಗೆ ಸಿದ್ಧವಿರೋ ಚಿತ್ರಗಳ ಟ್ರೇಲರ್ ಮತ್ತು ಟೀಸರ್ಗಳನ್ನ ಅಟ್ಯಾಚ್ ಮಾಡುವ ಪದ್ಧತಿಯಿದೆ. ಅದರಂತೆಯೇ ಪುನೀತ್ ರಾಜ್ಕುಮಾರ್ ನಟನೆಯ ಮಾರ್ಚ್.17ಕ್ಕೆ ರಿಲೀಸ್ ಆಗಿದ್ದ `ಜೇಮ್ಸ್’ ಚಿತ್ರದ ವೇಳೆ ಶಿವರಾಜ್ಕುಮಾರ್ ನಟನೆಯ `ಬೈರಾಗಿ’ ಚಿತ್ರದ ಟೀಸರ್ ಕೂಡ ಪ್ರಸಾರಗೊಂಡಿತ್ತು. ಅದೇ ರೀತಿ `ಕೆಜಿಎಫ್ 2′ ಸಿನಿಮಾ ಜೊತೆಗೆ `ಸಲಾರ್’ ಚಿತ್ರದ ಟೀಸರ್ ಕೂಡ ಪ್ರಸಾರ ಮಾಡಲಾಗುತ್ತದೆ.
`ಕೆಜಿಎಫ್ 2’ನಂತೆ `ಸಲಾರ್’ ಚಿತ್ರಕ್ಕೂ ಕೂಡ ಪ್ರಶಾಂತ್ನೀಲ್ ನಿರ್ದೇಶನದ ಜೊತೆಗೆ ಹೊಂಬಾಳೆ ಬ್ಯಾನರ್ ನಿರ್ಮಾಣ ಮಾಡುತ್ತಿದೆ. ಪ್ರಭಾಸ್ ಶ್ರುತಿ ಹಾಸನ್ ನಟನೆಯ `ಸಲಾರ್’ ಚಿತ್ರದ ಯಾವೊಂದು ಅಪ್ಡೇಟ್ ಸಿಗ್ತಿರಲಿಲ್ಲ. ಚಿತ್ರದ ಪ್ರಚಾರ ನಿಟ್ಟಿನಲ್ಲಿ `ಕೆಜಿಎಫ್ 2′ ಚಿತ್ರದ ವೇಳೆ `ಸಲಾರ್’ ಟೀಸರ್ ಕೂಡ ಅಟ್ಯಾಚ್ ಮಾಡಲಾಗುತ್ತಿದೆ. ಇದನ್ನು ಓದಿ:ಶಕ್ತಿಧಾಮ ವಿದ್ಯಾಶಾಲೆಗೆ ಶಂಕುಸ್ಥಾಪನೆ – ಜೀವ ಇರೋತನಕ ಇಲ್ಲಿನ ಮಕ್ಕಳ ಜತೆ ಇರುತ್ತೇನೆ: ಶಿವಣ್ಣ
`ಸಲಾರ್’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಚಿತ್ರದ ಶೂಟಿಂಗ್ ಇನ್ನು ಬಾಕಿಯಿದ್ದು, ಟೀಸರ್ ಗ್ಲಿಂಪ್ಸ್ನಿಂದ ಚಿತ್ರ ಹೇಗಿರಬಹುದು ಅಂತಾ ಊಹಿಸಬಹುದಾಗಿದೆ. ಒಟ್ನಲ್ಲಿ ನಿರೀಕ್ಷಿಸದೆ `ಸಲಾರ್’ ಕುರಿತು ಗುಡ್ ನ್ಯೂಸ್ ಕೊಟ್ಟಿರೋ `ಕೆಜಿಎಫ್ ೨’ ಚಿತ್ರವನ್ನ ನೋಡೋಕೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರಾಕಿಭಾಯ್ನ ಕಣ್ತುಂಬಿಕೊಳ್ಳೊಕೆ ಫ್ಯಾನ್ಸ್ ಕಾಯ್ತಿದ್ದಾರೆ.
ಬೆಂಗಳೂರು: ಕೆಜಿಎಫ್ ಟೀಂ ಅಲ್ಲ ಅದು ಫ್ಯಾಮಿಲಿ. 5 ವರ್ಷಗಳಿಂದ ಕೆಲಸ ಮಾಡಿ ಈಗ ಕುಟುಂಬವೇ ಆಗಿದೆ ಎಂದು ಶ್ರೀನಿಧಿ ಶೆಟ್ಟಿ ಹೇಳಿದ್ದಾರೆ.
ನಾನು ಕೂಡ ಪ್ರೇಕ್ಷಕರಂತೆ ಸಿನಿಮಾ ನೋಡಲು ಕಾತರಳಾಗಿದ್ದೇನೆ. ಒಳ್ಳೆಯ ನಿರ್ಧಾರದೊಂದಿಗೆ ಕೆಜಿಎಫ್-2 ಸಿನಿಮಾ ರಿಲೀಸ್ ಡೇಟ್ ಏಪ್ರಿಲ್ 14ಕ್ಕೆ ನಿಗದಿ ಮಾಡಿದ್ದಾರೆ ಎಂದು ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ 2 – ಕಪ್ಪು ಬಣ್ಣದ ಸೀರೆಯೊಂದಿಗೆ ರೀನಾ ಮಿಂಚಿಂಗ್
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶ್ರೀನಿಧಿ ಶೆಟ್ಟಿ, ತುಂಬಾ ಖುಷಿಯಾಗುತ್ತಿದೆ. ನಮ್ಮ ಚಿತ್ರ ತಂಡ ಕೆಜಿಎಫ್-2 ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಈ ಹಿಂದೆ ಹಲವು ಬಾರಿ ಇಟ್ಟ ಡೇಟ್ಗಳನ್ನು ಕೋವಿಡ್-19ನಿಂದಾಗಿ ಬದಲಾಯಿಸಲಾಗಿತ್ತು. ಆದರೆ ಇದೀಗ ಅಂತಿಮ ನಿರ್ಧಾರ ತೆಗೆದುಕೊಂಡಿರುವುದು ತುಂಬಾ ಖುಷಿ ಕೊಟ್ಟಿದೆ ಎಂದರು.
ನನಗೆ ಈ ವರ್ಷ ಅಂತ್ಯದವರೆಗೆ ರಿಲೀಸ್ ಆಗುವುದು ಡೌಟ್ ಎಂದು ಗೊತ್ತಿತ್ತು. ಯಾಕೆಂದರೆ ಕೋವಿಡ್-19 ಅಲೆಯಿಂದಾಗಿ ಬಿಡುಗಡೆಯಾಗುವುದು ಕಷ್ಟ ಎಂಬ ಬಗ್ಗೆ ಮಾಹಿತಿ ಇತ್ತು. ಆದರೆ ಇದೀಗ 2022ರ ಏ.14ಕ್ಕೆ ರಿಲೀಸ್ ಎಂಬ ಬಗ್ಗೆ ವಿಶ್ವಕ್ಕೆ ಗೊತ್ತಾಗಿದೆ. ಇದು ತುಂಬಾ ಸಂತೋಷ ಎಂದು ಹೇಳಿದರು.
ಈಗಾಗಲೇ ಸಿನಿಮಾದ ಎಲ್ಲಾ ಕೆಲಸ ಕಾರ್ಯಗಳು ಮುಗಿದಿದೆ. ಇನ್ನು ಕೆಲ ಸಣ್ಣಪುಟ್ಟ ಕೆಲಸಗಳು ಇದೆ. ಚಿತ್ರವನ್ನು ನೋಡುವುದೇ ಒಂದು ವಿಶೇಷ. ಸಿನಿಮಾದಲ್ಲಿ ಹೊಸ ಹೊಸ ಪಾತ್ರಗಳಿವೆ. ಕೆಲವೆಲ್ಲ ಹೆಸರು ರಿವೀಲ್ ಆಗಿತ್ತು, ಪಾತ್ರ ರಿವೀಲ್ ಆಗಿರಲಿಲ್ಲ. ಅಂತಹ ಪಾತ್ರಗಳನ್ನು ಸಿನಿಮಾದಲ್ಲಿ ನೋಡಬಹುದು. ಕೆಜಿಎಫ್ ಚಿತ್ರದ ನಂತರ ಇದೀಗ ಕೆಜಿಎಫ್-2ನಲ್ಲಿ ನನ್ನ ಲುಕ್ನಲ್ಲಿ ಬದಲಾವಣೆಯಿದೆ ಎಂದು ತಮ್ಮ ರೀನಾ ಪಾತ್ರದ ಬಗ್ಗೆ ಹೇಳಿಕೊಂಡರು. ನನಗೆ ಕೆಜಿಎಫ್ ಸಿನಿಮಾ ತುಂಬಾ ದೊಡ್ಡ ಅವಕಾಶ ನೀಡಿದೆ. ನಮ್ಮ ತಂಡದೊಂದಿಗೆ ಸುದೀರ್ಘವಾದ ಸಂಬಂಧವಿದೆ ಇದು ತುಂಬಾ ಸಂತೋಷ ನೀಡಿದೆ ಎಂದರು. ಇದನ್ನೂ ಓದಿ: ಕೆಜಿಎಫ್ನಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡರೂ ಅದು ದೊಡ್ಡದೇ – ವಸಿಷ್ಠ ಸಿಂಹ
ಬೆಂಗಳೂರು: ಕೆಜಿಎಫ್-2 ಚಿತ್ರದ ಕುರಿತು ಭಾರೀ ಕುತೂಹಲಗಳು ಮೂಡುತ್ತಿರುವ ಬೆನ್ನಲ್ಲೇ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸೆಟ್ನಲ್ಲಿನ ಸಂದರ್ಭವನ್ನು ನೆನೆಪು ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಕೆಜಿಎಫ್ ಚಾಪ್ಟರ್-2 ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅಕ್ಟೋಬರ್ನಲ್ಲಿ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಚಿತ್ರತಂಡ ಹೇಳಿಕೊಂಡಿದೆ. ಕೆಜಿಎಫ್ ಹಿಟ್ ಆದ ಬಳಿಕ ಇದೀಗ ಚಾಪ್ಟರ್-2 ಬಗ್ಗೆ ಕುತೂಹಲ ಹೆಚ್ಚಿದೆ. ಸಿನಿಮಾ ಬಿಡುಗಡೆಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಅದೇ ರೀತಿ ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಚಾಪ್ಟರ್ 1ಕ್ಕಿಂತಲೂ ಅದ್ಭುತವಾಗಿ ಕಟ್ಟಿಕೊಡಲು ಚಿತ್ರತಂಡ ಶ್ರಮಿಸುತ್ತಿದೆ.
ಇದೆಲ್ಲದರ ಮಧ್ಯೆ ಪ್ರಶಾಂತ್ ನೀಲ್ ಅವರು ಇದೀಗ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನರಾಚಿ ಸೆಟ್ನಲ್ಲಿ ತಾವು ಹೇಗೆಲ್ಲ ಮಜಾ ಮಾಡಿಕೊಂಡು ಚಿತ್ರೀಕರಣ ನಡೆಸಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಕ್ರಿಕೆಟ್ ಆಡುತ್ತಿರುವ ವಿವಿಧ ಭಂಗಿಗಳ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ಇದರಲ್ಲಿ ಪ್ರಶಾಂತ್ ನೀಲ್ ಕೇವಲ ಬ್ಯಾಟ್ನ್ನು ಭರ್ಜರಿಯಾಗಿಯೇ ಬೀಸಿದ್ದಾರೆ. ಮೂರು ವಿಡಿಯೋ ತುಣುಕುಗಳನ್ನು ಹಾಕಿದ್ದು, ಒಂದು ವಿಡಿಯೋದಲ್ಲಿ ಬಾಲ್ ಎಸೆಯುತ್ತಿದ್ದರೆ, ಇನ್ನೊಂದು ವಿಡಿಯೋದಲ್ಲಿ ಬ್ಯಾಟಿಂಗ್ ಪ್ರದರ್ಶನ ತೋರಿಸಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಮೂರು ವಿಡಿಯೋ ಕ್ಲಿಪ್ಗಳನ್ನು ಪೋಸ್ಟ್ ಮಾಡಿ ಬರೆದುಕೊಂಡಿರುವ ಅವರು, ನರಾಚಿ ಗ್ರೌಂಡ್ನಲ್ಲಿ ಕ್ರಿಕೆಟ್ ಆಡುತ್ತಿರುವುದು. ನೀಲ್ ಅವರಿಗೆ ಕ್ರಿಕೆಟ್ ಎಂದರೆ ಪಂಚಪ್ರಾಣ ಎಂಬುದು ತಿಳಿದೇ ಇದೆ. ಶಾಟ್ಸ್ಗಳ ಮಧ್ಯೆ ನೀಲ್ ಅವರ ಟೈಮ್ ಪಾಸ್. ಧೂಳು ಸಹ ಅವರು ಆಡುವುದನ್ನು ತಡೆಯಲಿಲ್ಲ ಎಂದಿದ್ದಾರೆ. ಅಲ್ಲದೆ ವಿಡಿಯೋ ಸೆರೆಹಿಡಿದಿರುವ ಕೊಂಡಾ ರೆಡ್ಡಿ ಅವರಿಗೆ ಥ್ಯಾಂಕ್ಯೂ ಎಂದಿದ್ದಾರೆ. ಹ್ಯಾಶ್ಟ್ಯಾಗ್ನೊಂದಿಗೆ ಕೆಜಿಎಫ್ ಶೂಟ್ ಡೈರೀಸ್ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಯಶ್ ಅಭಿನಯದ ಈ ಚಿತ್ರದ ಭಾರೀ ನಿರೀಕ್ಷೆ ಮೂಡಿಸಿದ್ದು, ದೇಶ ವಿದೇಶಗಳಲ್ಲಿ ಚಿತ್ರದ ಕುರಿತು ಕುತೂಹಲ ಹೆಚ್ಚಿದೆ. ಬಾಲಿವುಡ್ ನಟರಾದ ಸಂಜಯ್ ದತ್ ಹಾಗೂ ರವೀನಾ ಟಂಡನ್ ಅವರು ಚಿತ್ರ ತಂಡ ಸೇರಿರುವುದು ಇನ್ನೂ ಕುತೂಹಲ ಹೆಚ್ಚಿಸದೆ. ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಬೆಂಗಳೂರು: ದೇಶದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಉಘೇ, ಉಘೇ ಎಂದು ಹರ್ಷೊದ್ಘಾರ ಹೊರ ಹಾಕುತ್ತಿದ್ದಾರೆ. ಮೊದಲ ದಿನವೇ 2 ಸಾವಿರ ತೆರೆಗಳಲ್ಲಿ ಮಿಂಚಿದ ರಾಕಿ ಗಲ್ಲಾ ಪೆಟ್ಟಿಗೆಯಲ್ಲೂ ಸದ್ದು ಮಾಡಿದ್ದಾನೆ. ಎಲ್ಲ ಚಿತ್ರಮಂದಿರಗಳಲ್ಲಿಯೂ ಸಿನಿಮಾ ಬಿಡುಗಡೆಗೂ ಮುನ್ನವೇ ಅಭಿಮಾನಿಗಳು ಸಿನಿಮಾ ಟಿಕೆಟ್ ಕಾಯ್ದಿರಿಸಿದ್ದರು.
ಬಿಡುಗಡೆಯಾದ ಮೊದಲ ದಿನವೇ ಅಂದಾಜು 30 ಕೋಟಿ ಬಾಚಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ 80ರಿಂದ 90 ಕೋಟಿ ಬೊಕ್ಕಸ ಸೇರುವ ಸಾಧ್ಯತೆ ಇದೆ. ಕೆನಾಡದಲ್ಲೂ ಕೆಜಿಎಫ್ ಫಿವರ್ ಜೋರಾಗಿದೆ. ಅಭಿಮಾನಿಗಳು ಯಶ್ ಟಿ ಷರ್ಟ್ ಹಾಕ್ಕೊಂಡು ಕೆಜಿಎಫ್ಗೆ ಸ್ವಾಗತಿಸಿರೋ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ.
ಎರಡನೇ ದಿನವೂ ಕರುನಾಡಿನ ಎಲ್ಲ ಚಿತ್ರಮಂದಿರಗಳ ಮುಂದೆ ಹೌಸ್ಫುಲ್ ಎಂಬ ಬೋರ್ಡ್ ಕಾಣುತ್ತಿದೆ. ಹಿಂದಿ ಡಬ್ ಸಿನಿಮಾ 1,500 ತೆರೆಗಳಲ್ಲಿ ತೆರೆಕಂಡಿದ್ದು, ಮೊದಲ ದಿನವೇ 2.10 ಕೋಟಿ ರೂ. ಗಳಿಸಿದೆ ಎಂದು ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಹಿಂದಿ ಕೆಜಿಎಫ್ ಇದೇ ರೀತಿ ಯಶಸ್ವಿ ಪ್ರದರ್ಶನ ಕಾಣಲಿದೆ ಅಂತಾನೂ ತಿಳಿಸಿದ್ದಾರೆ.
ಶಾರೂಖ್ ಖಾನ್ ಅಭಿನಯದ ಝೀರೋ ಒಟ್ಟು 4380 ಸ್ಕ್ರೀನ್ ಗಳಲ್ಲಿ ತೆರೆಕಂಡಿದ್ದು, ಮೊದಲ ದಿನ 20.14 ಕೋಟಿ ಹಣವನ್ನು ಗಲ್ಲಾ ಪೆಟ್ಟಿಗೆಯಲ್ಲಿ ಭರ್ತಿ ಮಾಡಿಕೊಂಡಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಜನ ಟಿಕೆಟ್ ಕಾಯ್ದಿರಿಸಿದ್ದರಿಂದ ಶನಿವಾರ ಮತ್ತು ಭಾನುವಾರ ಚಿತ್ರಮಂದಿರಗಳು ಭರ್ತಿಯಾಗಲಿದೆ. ತರಣ್ ಆದರ್ಶ್ ಅವರು ಝೀರೋ ಸಿನಿಮಾಗೆ ಅರ್ಧ ಪಾಯಿಂಟ್ ನೀಡಿ ಚಿತ್ರ ನಿಷ್ಪ್ರಯೋಜಕ ಎಂದು ಹೇಳುವ ಮೂಲಕ ಚಿತ್ರದ ವಿಮರ್ಶೆ ಮಾಡಿದ್ದರು.
ಕೆಜಿಎಫ್ ಒಟ್ಟು 2460 ಥಿಯೇಟರ್ ಗಳಲ್ಲಿ ತೆರೆಕಂಡಿದೆ. ಹಿಂದಿ 1500, ಕನ್ನಡ 400, ತೆಲುಗು 400, ತಮಿಳ 100, ಮಲಯಾಳಂ 60 ತೆರೆಗಳಲ್ಲಿ ಬಿಡುಗಡೆಯಾಗಿದೆ.
#KGF Fri ₹ 2.10 cr [1500 screens]. India biz. Note: HINDI version… Performed best in Mumbai… Biz on Day 2 and Day 3 is pivotal.
– ಮಹೇಶ್ ದೇವಶೆಟ್ಟಿ ಕೊನೆಗೂ ಕನ್ನಡಿಗರು ಸಮಾಧಾನದ ಉಸಿರು ಬಿಟ್ಟಿದ್ದಾರೆ. ಕಳೆದ ಎರಡು ವರ್ಷದಿಂದ ಕಾಯುತ್ತಿದ್ದ ಅಮೃತ ಘಳಿಗೆಗೆ ಕೇಕೆ ಹೊಡೆದಿದ್ದಾರೆ. ಕೆಜಿಎಫ್ ಎನ್ನುವ ಸಿನಿಮಾ ದೇಶ ವಿದೇಶದಲ್ಲಿ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎಲ್ಲರ ಬಾಯಲ್ಲಿ ಒಂದೇ ಮಾತು, ಸಲಾಂ ರಾಕಿ ಭಾಯ್. ಅದು ಜನರ ಒನ್ ಲೈನ್ ವಿಮರ್ಶೆ. ಆದರೆ ಅದನ್ನು ಮೀರಿದ, ಕನ್ನಡ ಚಿತ್ರರಂಗ ಹಿಂದೆಂದೂ ಕಾಣದ, ಭಾರತೀಯ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದ ಅನೇಕ ಕಾಣಿಕೆಯನ್ನು ಕೆಜಿಎಫ್ ಕೊಟ್ಟಿದೆ. ಒಂದರ್ಥದಲ್ಲಿ ಕೆಜಿಎಫ್ ಕನ್ನಡ ಚಿತ್ರರಂಗಕ್ಕೆ ಮಹಾ ಕಿರೀಟ. ಹೇಗಿದೆ ರಾಕಿಂಗ್ ಸ್ಟಾರ್ ಅಬ್ಬರ? ಏನಿದರ ಕತೆ? ಯಾರ್ಯಾರು ಏನೇನು ಕಮಾಲ್ ಮಾಡಿದ್ದಾರೆ? ಅದರ ಇಂಚಿಂಚು ಮಾಹಿತಿಯೂ ಈ ಕೆಜಿಎಫ್ ಖಡಕ್ ರಿಪೋರ್ಟ್ ನಲ್ಲಿದೆ.
ಕನ್ನಡ ಚಿತ್ರರಂಗದ ಅಬ್ಬರಕ್ಕೆ ಬೆಚ್ಚಿಬಿದ್ದಿದ್ಯಾರು? ಕೆಜಿಎಫ್ ಅಶ್ವಮೇಧ ಕುದುರೆ ಕಟ್ಟುವವರ್ಯಾರು?
ಬರೋಬ್ಬರಿ ಒಂದು ತಿಂಗಳಿಂದ ಎಲ್ಲಿ ನೋಡಿದರಲ್ಲಿ ಕೆಜಿಎಫ್ ಜಾತ್ರೆ. ಟ್ರೈಲರು, ಹಾಡು… ಒಂದೊಂದೇ ಜನರ ಕಣ್ಣ ಮುಂದೆ ಹೊಳೆಯುತ್ತಿದ್ದಂತೆಯೇ ಕೆಜಿಎಫ್ ಜ್ವರ ಜನರ ನೆತ್ತಿಗೇರಿತು. ದೇವ ದೇವಾ…ಕಾಲ್ಸೂಪೇ ಇಷ್ಟೊಂದು ಖಡಕ್ ಆಗಿರುವಾಗ ಇನ್ನು ಬಾಡೂಟದ ಪಾಡೇನು ಎಂದಿದ್ದರು. ನೀವು ಊಟ ಮಾಡುವುದು ಹೆಚ್ಚಾ, ನಾವು ಅಡುಗೆ ಮಾಡಿ ತಿನ್ನಿಸುವುದು ಹೆಚ್ಚಾ? ಎಂದು ಇಡೀ ಚಿತ್ರತಂಡ ಒಂದೇ ಸಲ ಎದ್ದು ನಿಂತಿದೆ. ಅದರ ಫಲಿತಾಂಶ ಸ್ಪಷ್ಟ: ಕನ್ನಡ ಚಿತ್ರರಂಗದ ಕಿರೀಟಕ್ಕೆ ಕೆಜಿಎಫ್ ವಜ್ರದ ಹರಳನ್ನು ಪೋಣಿಸಿ ನಗುತ್ತಿದೆ.
ಕೆಜಿಎಫ್ ಕನ್ನಡ ಚಿತ್ರರಂಗವನ್ನು ಮಾತ್ರ ಅಲ್ಲ, ಇಡೀ ಭಾರತೀಯ ಚಿತ್ರ ಜಗತ್ತನ್ನು ಬೆಚ್ಚಿಬೀಳಿಸಿದೆ. ಕನ್ನಡದ ಚಿತ್ರವೊಂದು ಹಾಲಿವುಡ್ ಮಟ್ಟದ ತೂಕವನ್ನು ಉಳಿಸಿಕೊಂಡು ನಿರ್ಮಾಣವಾಗಿದೆಯಲ್ಲ ಎಂದು ಅಚ್ಚರಿ ಮೂಡಿಸುತ್ತಿದೆ. ಅಕ್ಷರಶಃ ಸ್ಯಾಂಡಲ್ವುಡ್ ಎದೆ ಉಬ್ಬಿಸಿ ಬೀಗುವಂತೆ ಮಾಡಿದೆ. ಅದಕ್ಕೆ ಮೊಟ್ಟ ಮೊದಲು ಕಾರಣವಾಗಿದ್ದು ನಿರ್ದೇಶಕ ಪ್ರಶಾಂತ್ ನೀಲ್. ಉಗ್ರಂ ನಂತರ ಇವರು ಮಾಡಿದ ಸಿನಿಮಾ ಕೆಜಿಎಫ್. ಉಗ್ರಂನಲ್ಲೇ ಪ್ರಶಾಂತ್ ತಾವೆಂಥ ತಂತ್ರಜ್ಞ ಎಂದು ಸಾಬೀತು ಪಡಿಸಿದ್ದರು. ಅದರ ಮುಂದುವರೆದ ಭಾಗವೇ ಕೆಜಿಎಫ್. ಪ್ರತಿ ಫ್ರೇಮ್, ಪ್ರತಿ ದೃಶ್ಯದಲ್ಲಿ ಪ್ರಶಾಂತ್ ಟಚ್ ಕಾಣುತ್ತದೆ. ಆ ವ್ಯಕ್ತಿಯ ಸಿನಿಮಾ ನಿಯತ್ತು, ಭಕ್ತಿ ಮತ್ತು ಪ್ರೀತಿಗೆ ಸಾಕ್ಷಿ ನೀಡುತ್ತದೆ.
ಕೆಜಿಎಫ್ ಹೆಸರು ಕೇಳಿದಾಕ್ಷಣ ಎಲ್ಲರ ತಲೆಯಲ್ಲಿ ಮೊದಲು ಏಳುವ ಪ್ರಶ್ನೆಯೇ ಏನಿದರ ಕತೆ? ಅಂಥ ಹೊಸದೇನಿದೆ? ಯಾಕೆ ಇಷ್ಟೊಂದು ಮೆಚ್ಚುಗೆಗೆ ಪಾತ್ರವಾಗಿದೆ? ಇದಕ್ಕೆಲ್ಲ ಒಂದೇ ಸಾಲಿನಲ್ಲಿ ಒಂದೇ ಗುಕ್ಕಿನಲ್ಲಿ ಉತ್ತರ ಹೇಳುವುದು ಇಂಪಾಸಿಬಲ್. ಯಾಕೆಂದರೆ ಇದು ಅದನ್ನೆಲ್ಲಾ ಮೀರಿ ನಿಂತ ಸಿನಿಮಾ, ಕನ್ನಡಕ್ಕೆ ಹೊಸತನವನ್ನು ಕೊಟ್ಟ ಸಿನಿಮಾ, ಹೀಗೂ ಮೇಕಿಂಗ್ ಮಾಡಬಹುದು ಎಂದು ತೋರಿಸಿದ ಸಿನಿಮಾ, ಲಾಸ್ಟ್ ಬಟ್ ನಾಟ್ ಲೀಸ್ಟ್. ಇಂಡಿಯನ್ ಫಿಲ್ಮ್ ಇಂಡಸ್ಟ್ರಿಗೆ `ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲೂ ತಾಕತ್ತಿದೆ ಕಣ್ರೋ…’ ಎಂದು ತೊಡೆ ತಟ್ಟುವಂತೆ ಮಾಡಿದ ಸಿನಿಮಾ…
ನಿರ್ದೇಶಕನ ಸಿನಿಮಾ ಭಕ್ತಿಗೆ ಉಘೇ ಉಘೇ! – ಶರಣೆನ್ನುತ್ತೀರಿ ಪ್ರಶಾಂತ್ ನೀಲ್ ದಿಕ್ಕೆಡಿಸುವ ತಾಕತ್ತಿಗೆ!: ನಿಮಗೆ ಹೆಚ್ಚು ಕಾಯಿಸುವುದಿಲ್ಲ. ಕತೆಯನ್ನು ಖುಲ್ಲಂಖುಲ್ಲ ಬಿಚ್ಚಿಡುತ್ತೇವೆ. ಆದರೆ ಎಲ್ಲವನ್ನೂ ಇಲ್ಲೇ ಹೇಳಿಬಿಟ್ಟರೆ ಥೇಟರ್ ಗೆ ಹೋಗಿ ಪಾಪ್ ಕಾರ್ನ್ ತಿಂತಾ ಕೂಡ್ಬೇಕಾಗುತ್ತದೆ. ಸೋ…ಮುತ್ತು ಕೊಟ್ಟ ಹಾಗೆ ಇರಬೇಕು, ಆದರೆ ಕೊಡಲೂ ಬಾರದು. ಅಷ್ಟು ಮತ್ತು ಅಷ್ಟನ್ನೇ ಇಲ್ಲಿ ಹರವಿಡುತ್ತೇವೆ. ಮುಂಬೈನ ಡಾನ್ ಕೋಲಾರದ ಗಣಿಗೆ ಎಂಟ್ರಿ ಕೊಡುತ್ತಾನೆ, ಆತನ ಉದ್ದೇಶ ಬೇರೇನೋ ಆಗಿರುತ್ತದೆ. ಆದರೆ ಆ ಚಿನ್ನದ ಗಣಿಯಲ್ಲಿ ನಡೆಯುತ್ತಿರುವ ಅಮಾನುಷ ಕೃತ್ಯಗಳನ್ನು ನೋಡಿ ಹೈರಾಣಾಗುತ್ತಾನೆ. ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ನರಕ ಅನುಭವಿಸುತ್ತಿರುವುದಕ್ಕೆ ಕಣ್ಣೀರಾಗುತ್ತಾನೆ. ಮುಂದೇನಾಗುತ್ತದೆ ಅನ್ನೋದನ್ನ ಬಡಾ ಪರದೆ ಮೇಲೆ ವಾಚ್ ಇಟ್., ಬಾಯಿಗೆ ಮಾತ್ರ ಅಲ್ಲ, ಕಣ್ಣು ಮತ್ತು ಮನಸಿಗೂ ಒಬ್ಬಟ್ಟು.
ಅಪರೂಪದಲ್ಲೊಂದು ಅಪರೂಪಕ್ಕೆ ಇಂಥ ಸಿನಿಮಾ ಬರುತ್ತದೆ. ಎಲ್ಲರೂ ಹೀರೋ, ಹೀರೋಯಿಸಂಗೆ ಹೆಚ್ಚು ಸ್ಕೋಪ್ ಕೊಡುತ್ತಿರುವಾಗ, ನಡುವೆ ಸದ್ದಿಲ್ಲದೆ ಎದ್ದು ನಿಲ್ಲುತ್ತಾನೆ ನಿರ್ದೇಶಕ. ಪುಟ್ಟಣ್ಣ ಕಣಗಾಲ್ ಅಂಥ ಮಾದರಿ ಸಿನಿಮಾ ಮಾಡುತ್ತಿದ್ದರು. ಹಿಂದಿಯಲ್ಲಿ ಅಮೀರ್ ಖಾನ್ ಅಭಿನಯದ ಲಗಾನ್ ಬಂದಾಗಲೂ ಇದೇ ಮಾತು ಹೆಚ್ಚು ಸೌಂಡ್ ಮಾಡಿತ್ತು. ಅದರ ನಿರ್ದೇಶಕ ಅಶುತೋಷ್ ಗೌರೀಕರ್ ಸಡನ್ಲಿ ಸ್ಟಾರ್ ಆಗಿದ್ದರು. ಒನ್ಸ್ ಅಗೇನ್ ಆಂಡ್ ಆಫ್ಟರ್ ಲಾಂಗ್ ಈಯರ್ಸ್ ಕನ್ನಡದಲ್ಲಿ ನಿರ್ದೇಶಕನ ಸಿನಿಮಾವೊಂದು ಧಗಧಗಿಸುತ್ತಿದೆ. ಡೈರೆಕ್ಟರ್ ಅನ್ನೋದು ಕೇವಲ ನಾಲ್ಕು ಅಕ್ಷರದ ಪದವಲ್ಲ ಎಂದು ತೋರಿಸಿದೆ. ಒಬ್ಬ ನಿರ್ದೇಶಕ ಸರಿಯಾಗಿ ನಿಂತರೆ, ಅದೆಂಥಾ ಹುಚ್ಚೆದ್ದು ಕುಣಿಸುವ ದೃಶ್ಯ ಕಾವ್ಯ ಅರಳಿಸುತ್ತಾನೆ ಅನ್ನೋದಕ್ಕೆ ಇದು ಸ್ಯಾಂಪಲ್. ಹೀಗೊಂದು ಗರ್ವಕ್ಕೆ, ಹೆಮ್ಮೆಗೆ ಮತ್ತು ಅಗತ್ಯಕ್ಕಿಂತ ಹೆಚ್ಚಲ್ಲದ ಅಹಂಕಾರಕ್ಕೆ ಸಾಕ್ಷಿಯಾಗಿದ್ದಾರೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್.
ಏನಿದು ಮೂವತ್ತರ ಆಸುಪಾಸಿನ ಈ ಹುಡುಗನ ತಾಕತ್ತು? ಅದೆಲ್ಲಿ ಇಷ್ಟು ದಿನ ಹೂತಿಟ್ಟಿದ್ದರು? ಎಲ್ಲರೂ ಒಂದೊಂದೇ ಅಸ್ತ್ರವನ್ನು ಬಳಸುತ್ತಿರುವಾಗ ಈ ವ್ಯಕ್ತಿ ಒಂದೇ ಹೊಡೆತಕ್ಕೆ ಹೇಗೆ ಪಾಶು ಪತಾಸ್ತ್ರವನ್ನೇ ಹೆಗಲೇರಿಸಿಕೊಂಡರು? ಎಲ್ಲಿಂದ ಮೊಗೆಮೊಗೆದು ತಂದರು ಚಿನ್ನದ ಗಣಿಯ ಲೋಕವನ್ನು? ಅದೆಷ್ಟು ನಡುರಾತ್ರಿ ನಿದ್ದೆ ಇಲ್ಲದೆ ಸಿನಿಮಾಕ್ಕಾಗಿ ಒದ್ದಾಡಿದರು? ಸಾವಿರಾರು ಜನರನ್ನು ಒಗ್ಗೂಡಿಸಿ ಕೇಕೆ ಹಾಕಿದರು? ಎಲ್ಲವೂ ಪ್ರಶ್ನೆಗಳೇ ಮತ್ತು ಆ ಪ್ರಶ್ನೆಯಲ್ಲೇ ಉತ್ತರವೂ ಇದೆ. ಇದೆಲ್ಲವನ್ನೂ ನಿಭಾಯಿಸುವ, ನಿರ್ವಹಿಸುವ ಮೆದುಳನ್ನು ಆ ದೇವರು ಪ್ರಶಾಂತ್ ತಲೆಯಲ್ಲಿ ತುಂಬಿ ಕಳಿಸಿದ್ದಾನೆ. ಅಫ್ಕೋರ್ಸ್ ಕನ್ನಡ ಚಿತ್ರರಂಗಕ್ಕೆ ಧಾರೆ ಎರೆದಿದ್ದಾನೆ.
ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಅಮರ – ಯಾರೂ ಅಳಿಸಲು ಸಾಧ್ಯವಿಲ್ಲ ಡೈರೆಕ್ಟರ್ ಹೆಸರ!: ಪ್ರಶಾಂತ್ ನೀಲ್… ಇದೊಂದು ಹೆಸರು ಇನ್ನು ಮುಂದೆ ಭಾರತೀಯ ಚಿತ್ರರಂಗದ ಇತಿಹಾಸಕ್ಕೆ ಹೊಸ ಭಾಷ್ಯ ಬರೆದಿದೆ. ಸಂಜಯ್ ಲೀಲಾ ಬನ್ಸಾಲಿ, ರಾಮ್ ಗೋಪಾಲ್ ವರ್ಮಾ, ರಾಜ್ ಕುಮಾರ್ ಹಿರಾನಿ, ಪುಟ್ಟಣ್ಣ ಕಣಗಾಲ್, ಅಶುತೋಷ್ ಗೌರೀಕರ್, ತಮಿಳಿನ ಬಾಲಾ ಇಂಥ ದಿ ಗ್ರೇಟ್ ಡೈರೆಕ್ಟರ್ ಪಟ್ಟಿಯಲ್ಲಿ ಮೆರೆಯುತ್ತಿದೆ. ಅದಕ್ಕೆ ಸಿಂಗಲ್ ಅಂಡ್ ಸಿನಿಮ್ಯಾಟಿಕ್ ಕಾರಣ ‘ಕೆಜಿಎಫ್’.
ಕತೆ, ಚಿತ್ರಕತೆ, ಸಂಭಾಷಣೆ, ಹಾಡು, ಕ್ಯಾಮೆರಾ, ಸಂಗೀತ, ಕಲಾ ನಿರ್ದೇಶನ, ಸಾಹಸ, ಅಭಿನಯ, ಪಾತ್ರವರ್ಗ, ಕಾಸ್ಟ್ಯೂಮ್…ಒಂದೊಂದು ವಿಭಾಗ ಒಂದೊಂದು ರಣರಂಗ. ಇದರಲ್ಲಿ ಒಂದೇ ಒಂದು ಎಡವಟ್ಟಾದರೂ ಹೂರಣ ಹದಗೆಡುತ್ತದೆ, ಒಗ್ಗರಣೆ ಸಪ್ಪೆಯಾಗುತ್ತದೆ, ಊಟ ರುಚಿಗೆಡುತ್ತದೆ. ಹಾಗಾಗದಂತೆ ಮೈ ತುಂಬಾ ಕಣ್ಣಾಗಿ ಕೆಲಸ ಮಾಡಿದ್ದಾರೆ ಪ್ರಶಾಂತ್. ಒಂದಗುಳು ಹೆಚ್ಚಿಲ್ಲ ಒಂದಗುಳೂ ಕಮ್ಮಿ ಇಲ್ಲ. ಎಲ್ಲವೂ ಆಗ ತಾನೇ ಸ್ನಾನ ಮಾಡಿಬಂದ ಹುಡುಗಿಯ ಹೊಕ್ಕಳಿಂದ ಜಾರುವ ಬಿಸಿ ನೀರು.. ನಿದ್ದೆಯಿಂದ ಎದ್ದು ಆಕಳಿಸುವ ಮಗುವಿನ ಅಬೋಧ ನಗು… ಅಂಥದ್ದೊಂದು ನಿಯತ್ತು ಇದ್ದಿದ್ದಕ್ಕೆ ಇಂದು ಕೆಜಿಎಫ್ ಜನರಿಂದ ಶಿಳ್ಳೆ ಚಪ್ಪಾಳೆ ಹೊಡೆಸಿಕೊಳ್ಳುತ್ತಿದೆ. ಕನ್ನಡದ ಮಣ್ಣಿನ ಘಮಲನ್ನು ದೇಶದ ತುಂಬಾ ಚೆಲ್ಲುತ್ತಿದೆ.
ಪ್ರಶಾಂತ್ ಪ್ರತಿಭೆಗೆ ಚಿನ್ನದ ಗಣಿ ಲೋಕವೊಂದೇ ಸಾಕು. ವಿರಾಮದ ನಂತರ ಬಿಚ್ಚಿಕೊಳ್ಳುವ ಕರಾಳ ಜಗತ್ತನ್ನು ಅವರು ಕ್ಯಾಮೆರಾದ ಮೂಲಕವೇ ಕವಿತೆಯಂತೆ ಕೆತ್ತಿದ್ದಾರೆ. ಒಂದೊಂದು ಫ್ರೇಮಿಗೂ ಉಸಿರು ಇಟ್ಟಿದ್ದಾರೆ. ಕಪ್ಪು ಕಪ್ಪು ಮಣ್ಣು, ನಿತ್ರಾಣದ ದೇಹಗಳ ಆಕ್ರಂದನ, ಕ್ರೂರಿಗಳ ಅಟ್ಟಹಾಸ, ಎಂಬತ್ತರ ದಶಕದ ವಾಸನೆ. ಎಲ್ಲ ಅಂದರೆ ಎಲ್ಲವೂ ನಿಮ್ಮನ್ನು ಹಿಡಿದು ಹೆಡಮುರಿಗಿ ಕಟ್ಟುತ್ತದೆ. ನಾವೇ ನಿಜಕ್ಕೂ ಆ ಭಯಾನಕ ಪ್ರಪಂಚದಲ್ಲಿ ವಾಸಿಸುತ್ತಿದ್ದೇವೆ ಎನ್ನುವ ಭ್ರಮೆ ಮೂಡಿಸುತ್ತದೆ.
ಬಾಲಿವುಡ್ ಗೆ ಬಾಲಿವುಡ್ಡೇ ಧಡಬಡಿಸಿ ಎದ್ದು ನಿಂತಿದೆ. ಎಲ್ಲಿದ್ದ ಈ ಕೆಂಡ ಉಗುಳುವ ಕಣ್ಣಿನ ಹುಡುಗ ಎನ್ನುತ್ತಾ ಮುಖ ಅರಳಿಸಿದೆ. ಹೀಗೊಂದು ಅದ್ಭುತಕ್ಕೆ ಕಾರಣವಾಗಿದ್ದು ರಾಕಿಂಗ್ಸ್ಟಾರ್ ಯಶ್. ಎರಡೂವರೆ ವರ್ಷದಿಂದ ಈ ಹುಡುಗ ಸುರಿಸಿದ ಬೆವರಿನಲ್ಲಿ ಎಷ್ಟೆಷ್ಟು ನೋವು, ಖುಷಿ, ಕಷ್ಟ, ಶ್ರದ್ಧೆ ಇದೆ ಎನ್ನುವುದನ್ನು ಇದೊಂದು ಸಿನಿಮಾ ತೋರಿಸಿದೆ.
ಬೆಚ್ಚಿಬೀಳಿಸುತ್ತದೆ ರಾಕಿಂಗ್ ಸ್ಟಾರ್ ರೋರಿಂಗ್ ಅಭಿನಯ! – ಯಶ್ ಅಬ್ಬರಕ್ಕೆ ಆಣೆಕಟ್ಟು ಕಟ್ಟಲು ಆಗದಯ್ಯ!: `ಇಡೀ ಇಂಡಿಯಾನೇ ನಮ್ ಕನ್ನಡ ಇಂಡಸ್ಟ್ರಿ ಕಡೆ ತಿರುಗಿ ನೋಡ್ಬೇಕು…ಅದು ನನ್ನ ದೊಡ್ಡ ಆಸೆ…’ ಅದ್ಯಾವ ದಿವ್ಯ ಗಳಿಗೆಯಲ್ಲಿ ಯಶ್ ಈ ಮಾತನ್ನು ಹೇಳಿದರೋ ಏನೋ, ದೇವರು ದೂಸರಾ ಕೆಮ್ಮದೇ ಅದಕ್ಕೆ ತಥಾಸ್ತು ಎಂದಿದ್ದಾನೆ. ಅದರ ಪರಿಣಾಮ ಕೆಜಿಎಫ್ ಅಖಾಡದಲ್ಲಿ ಯಶ್ ಧಗಧಗಿಸುತ್ತಿದ್ದಾರೆ. ಒಬ್ಬ ನಟನಿಗೆ ಎಲ್ಲಾ ಸಮಯದಲ್ಲೂ ಇಂಥ ಅವಕಾಶ ಸಿಗುವುದಿಲ್ಲ. ಸಿಕ್ಕರೂ ಕೆಲವರು ಅದನ್ನು ಬಳಸಿಕೊಳ್ಳಲ್ಲ. ಆದರೆ ಪಡುವಾರಹಳ್ಳಿಯ ಈ ಹೈದ ಕೈಗೆ ಬಂದ ತುತ್ತಿನ ಹಣೆಗೆ ಮುತ್ತಿಟ್ಟು ನಾಲಿಗೆ ಮೇಲೆ ಇಟ್ಟುಕೊಂಡಿದ್ದಾರೆ. ಆ ತುತ್ತಿನ ಪ್ರತಿ ಅಗುಳನ್ನು ಅಗೆದು ಜಗಿದಾಗಲೆಲ್ಲಾ ಹೊಸ ಹೊಸ ಯಶ್ ಜನ್ಮ ತಾಳುತ್ತಾರೆ. ಅದು ಅಸಲಿ ಕಲಾವಿದನ ಲಕ್ಷಣ.
ಕಣ್ಣು, ಕೈ, ಕಾಲು, ಬಾಯಿ, ದೇಹ, ಮಾತು. ಎಲ್ಲಾ ನಟರಿಗೂ ಇರುತ್ತವೆ. ಅಫ್ಕೋರ್ಸ್ ಸಾಮಾನ್ಯ ಮನುಷ್ಯರಿಗೂ. ಆದರೆ ಅದನ್ನು ಒಬ್ಬ ಕಲಾವಿದ ಯಾವ ರೀತಿ ತಿದ್ದಿ ತೀಡುತ್ತಾನೆ, ದೇಹವನ್ನೇ ಆಯುಧ ಮಾಡಿಕೊಳ್ಳುತ್ತಾನೆ, ಅದರಿಂದಲೇ ಹೇಗೆ ಜನರನ್ನು ಆವರಿಸಿಕೊಳ್ಳುತ್ತಾನೆ, ಯಾವ ರೀತಿ ತನ್ನನ್ನು ತಾನು ಬಿಚ್ಚಿಡುತ್ತಾನೆ, ಬೆರಗುಗೊಳಿಸುತ್ತಾನೆ. ಫೈನಲೀ ಬೆಚ್ಚಿಬೀಳಿಸುತ್ತಾನೆ? ಆ ನಿಗರ್ವ ಕಾಯಕವನ್ನು ಯಶ್ ಈ ಸಿನಿಮಾದಲ್ಲಿ ಮಾಡಿ ನಕ್ಕಿದ್ದಾರೆ. ನಿಮಗೊಂದು ಮಾತು ನೆನಪಿರಲಿ, ಒಬ್ಬ ಅಪ್ಪಟ ಕಲಾವಿದ ಬೇರೇನೂ ಮಾಡದಿದ್ದರೂ ನಡೆಯುತ್ತದೆ. ಆದರೆ ಬೆಚ್ಚಿ ಬೀಳಿಸಿದಾಗ ಮಾತ್ರ ಇಡೀ ಲೋಕ ಧಡಕ್ಕನೇ ತಿರುಗಿ ನೋಡುತ್ತದೆ. ಯಶ್ ಆ ಹಾದಿಯಲ್ಲಿದ್ದಾರೆ.
ಭೂಗತ ಲೋಕದ ದೊರೆಯಾಗಿ ರಾಕಿಂಗ್ ಸ್ಟಾರ್ ಮೆರವಣಿಗೆ ಹೊರಟಿದ್ದಾರೆ. ಒರಟು ಒರಟು, ಹಸಿ ಹಸಿ, ಡೋಂಟ್ ಕೇರ್ ನೇಚರ್, ಐ ಆಮ್ ರಾಕಿ ಭಾಯ್ ಆಟಿಟ್ಯೂಡ್. ಇದರ ನಡುವೆ ಲೈಟಾದ ರೊಮ್ಯಾಂಟಿಕ್ ಎಳೆಯ ಚುಮುಚುಮು. ಆರಂಭದಿಂದ ಹಿಡಿದು ಕೊನೇ ದೃಶ್ಯದವರೆಗೆ ಯಶ್ ಎಲ್ಲೂ ಕಣ್ಣನ್ನು ಆಚೀಚೆ ಮಾಡದಂತೆ ಕುರ್ಚಿ ತುದಿಗೆ ಕೂಡಿಸುತ್ತಾರೆ. ಬಾಡಿ ಲ್ಯಾಂಗ್ವೇಜ್ ಅನ್ನೋದನ್ನು ಹೀಗೇ ಯೂಸ್ ಮಾಡಿಕೊಳ್ಳಬೇಕೆಂದು ಪಾಠ ಮಾಡಿದ್ದಾರೆ. ಒಂದಳತಿ ರಾಕಿ ಭಾಯ್ ಪಾತ್ರವನ್ನು ಇಂಚಿಂಚು ಬದುಕಿದ್ದಾರೆ. ಅದೇ ಕಾರಣಕ್ಕೆ ನಿಮಗೆ ಹೊಸ ಲೋಕವನ್ನು ತೋರಿಸಿದ್ದಾರೆ.
ಕೇವಲ ತಮ್ಮ ಅಭಿಮಾನಿಗಳಿಗೆ ಮಾತ್ರ ಯಶ್ ಖುಷಿ ಕೊಡುವುದಿಲ್ಲ. ಎಲ್ಲ ವರ್ಗದ ಮನಸುಗಳನ್ನು ಕದ್ದು ಎದ್ದು ಹೋಗುತ್ತಾರೆ. ಅದರಲ್ಲೂ ಕ್ಲ್ಯೆಮ್ಯಾಕ್ಸ್ನಲ್ಲಿ ಕೆಂಡ ಕೆಂಡ ಉಗುಳುವ ಕಣ್ಣು, ಮುಖ ಮುಚ್ಚುವ ಜೊಂಪೆ ಜೊಂಪೆ ಬೆವರಿನ ಕೂದಲು, ಎದುರಿದ್ದವರನ್ನು ನುಂಗಿ ಹಾಕುವಂಥ ಲುಕ್ಕು. ಒಂದೊಂದು ಮುಖಭಾವದಲ್ಲಿ ಒಂದೊಂದು ಕಿಕ್ ಕೊಡುತ್ತಾ, ಇನ್ನೆಷ್ಟು ಬೇಕು ಎನ್ನುತ್ತಾ, ಸೋಲುತ್ತಾ, ದಣಿಯುತ್ತಾ ಗೆದ್ದು ಮೀಸೆ ತಿರುವುತ್ತಾರೆ. ಅಲ್ಲಿಗೆ ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಇಟ್ಟುಕೊಂಡಿದ್ದ ದಿಗ್ಭ್ರಮೆ ಹುಟ್ಟಿಸುವ ಕಲೆಯ ಹೊಕ್ಕಳ ಹುರಿಯನ್ನು ಕತ್ತರಿಸಿದ್ದಾರೆ. ಆ ಮಗು ಎಂಬ ಯಶ್ ನಿಮ್ಮ ಮಡಿಲಲ್ಲಿ ಕೇಕೆ ಹಾಕುತ್ತಿದೆ.
ಇನ್ನು ನಾಯಕಿ ಶ್ರೀನಿಧಿ ಮೊದಲ ಚಿತ್ರದಲ್ಲೇ `ನಾನು ಹೀಗೆ ಬಂದು ಹಾಗೆ ಹೋಗುವ ಹುಡುಗಿಯಲ್ಲ’ ಎಂದು ಪ್ರೂವ್ ಮಾಡಿದ್ದಾರೆ. ಉಳಿದಂತೆ ಶ್ರೀನಿವಾಸಮೂರ್ತಿ, ನೀನಾಸಂ ಅಶ್ವತ್ಥ, ವಸಿಷ್ಟ, ಅಚ್ಯುತ್ ಕುಮಾರ್, ಹೊಸ ಪ್ರತಿಭೆ ರಾಮ್, ಜಗದೀಶ್ ಮಂಗಳೂರ್ ಸೇರಿದಂತೆ ಎಲ್ಲರೂ ನಾನಾ ನೀನಾ ಎನ್ನುವಂತೆ ಅಭಿನಯಿಸಿದ್ದಾರೆ. ಬಾಲಕ ಯಶ್ ಪಾತ್ರದಲ್ಲಿ ಅನ್ಮೋಲ್ ಗೆದ್ದು ಬೀಗುತ್ತಾನೆ. ಅಮ್ಮನಾಗಿ ಅರ್ಚನಾ ಜೋಯಿಸ್ ಕಣ್ಣೀರು ಹಾಕಿಸುತ್ತಾರೆ. ಅಂದ ಹಾಗೆ ಇದರಲ್ಲಿ ಬಹುತೇಕ ಹೊಸಬರೇ ಹಬ್ಬ ಮಾಡಿದ್ದಾರೆ. ಅದರೆ ಯಾರೂ ಹೊಸಬರೆನಿಸಲ್ಲ. ಅದಕ್ಕೆ ನಿರ್ದೇಶಕರು ಇವರಿಂದ ತೆಗೆಸಿರುವ ಕೆಲಸ ಸಾಕ್ಷಿ. ಕೆಜಿಎಫ್ ತಾರಾಗಣದ ವೈಭವ ಹೀಗಿದೆ ನೋಡಿ.
ಒಂದು ಸಿನಿಮಾಕ್ಕೆ ತಂತ್ರಜ್ಞರು ಎಷ್ಟು ಮುಖ್ಯ ಅನ್ನೋದು ತುಂಬಾ ಜನಕ್ಕೆ ಗೊತ್ತಿಲ್ಲ. ಅಸಲಿಗೆ ಇವರನ್ನು ಉದ್ಯಮ ಕೂಡ ಅಷ್ಟೊಂದು ಗಂಭೀರವಾಗಿ ಪರಿಗಣಿಸಲ್ಲ. ಇದರಲ್ಲಿ ಕೆಲವರು ಅಪವಾದ ಇರಬಹುದು. ಬಹುತೇಕ ನಿರ್ಲಕ್ಷ್ಯಕ್ಕೇ ಇವರು ಗುರಿಯಾಗುತ್ತಾರೆ. ಆದರೆ ಕೆಜಿಎಫ್ ರಣರಂಗದಲ್ಲಿ ಯುದ್ಧವನ್ನು ಮಾಡಿ ಗೆದ್ದವರು ಇದೇ ತಂತ್ರಜ್ಞರು. ಪ್ರತಿಯೊಂದು ವಿಭಾಗದಲ್ಲಿ ಇವರು ಮಿಂಚಿದ್ದಾರೆ. ಅಷ್ಟೇ ಅಲ್ಲ, ಒಂದು ಚಿತ್ರಕ್ಕೆ ಇವರು ಹೇಗೆ ಎದೆ ಕೊಟ್ಟು ನಿಲ್ಲಬಲ್ಲರು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.
ಸಂಗೀತ-ಸಂಭಾಷಣೆ-ಛಾಯಾಗ್ರಹಣ ಹಬ್ಬವೋ ಹಬ್ಬ! – ತಂತ್ರಜ್ಞರ ಅಮೋಘ ಕಾಯಕಕ್ಕೆ ಕನ್ನಡಿಗರು ಅಬ್ಬಬ್ಬಾ!: ಛಾಯಾಗ್ರಾಹಕ ಇಡೀ ಚಿತ್ರಕ್ಕೆ ದೊಡ್ಡ ಕಣ್ಣು. ನಟ ನಟಿಯರು ಯಾರನ್ನಾದರೂ ಎದುರು ಹಾಕಿಕೊಂಡಾರು. ಆದರೆ ಕ್ಯಾಮೆರಾಮೆನ್ಗಳನ್ನು ಮಾತ್ರ ಮುದ್ದುಮುದ್ದು ಮಾಡುತ್ತಿರುತ್ತಾರೆ. ಯಾಕೆಂದರೆ ಆತ ಯಾವಾಗ ಹೇಗೆ ಬೇಕಾದರೂ ಇವರನ್ನು ತೆರೆ ಮೇಲೆ ತೋರಿಸಬಲ್ಲ. ಅದರರ್ಥ ಇದೇ ಕ್ಯಾಮೆರಾಮೆನ್ ಕೆಲಸ ಎಂದು ತಿಳಿಯಬೇಡಿ. ಅದನ್ನೆಲ್ಲ ಮೀರಿದ ಭುವನ್ ಗೌಡರಂಥ ಸಿನಿಮಾ ಪ್ರೀತಿಯ ಛಾಯಾಗ್ರಾಹಕರೂ ಇರುತ್ತಾರೆ. ಅದು ಏನು ಅನ್ನೋದನ್ನು ಭುವನ್ ಇದೊಂದು ಚಿತ್ರದಲ್ಲಿ ಕೆತ್ತಿ ಕೆತ್ತಿ ತೋರಿಸಿದ್ದಾರೆ.
ಇಡೀ ಸಿನಿಮಾದಲ್ಲಿ ನಿಮಗೆ ಎಲ್ಲೂ ಲೈಟಿಂಗ್ ಕಾಣಿಸುವುದಿಲ್ಲ. ಎಲ್ಲವೂ ನ್ಯಾಚುರಲ್ ಅಥವಾ ಸಹಜ ಬೆಳಕಿನಲ್ಲಿ ಚಿತ್ರಿಸಿದ್ದಾರೆ. ಅದು ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ಮಸುಕು ಮಸುಕು ನೀಲಿ, ಮಬ್ಬು ಮಬ್ಬು ಕತ್ತಲು, ಹಳದಿ ಹಳದಿ ಬೆಂಕಿ, ಕಪ್ಪು ಕಪ್ಪು ರಾತ್ರಿ… ಯಾವುದನ್ನು ಹೇಳುವುದು ಯಾವುದನ್ನು ಬಿಡುವುದು. ಪ್ರತಿಯೊಂದು ಫ್ರೇಮ್ನಲ್ಲಿ ಗೌಡರ ಒಳಗಣ್ಣು ಎಚ್ಚರವಾಗಿದೆ. ನಿಚ್ಚಳವಾಗಿದೆ. ನೋಡುಗರನ್ನು ಅಚ್ಚರಿ ಮೇಲೆ ಅಚ್ಚರಿ ಹುಟ್ಟಿಸುತ್ತದೆ. ಕೆಲವೊಮ್ಮೆ ಹಿಂದೆಂದೂ ತೇಲದ ಲೋಕದಲ್ಲಿ ಮನೆ ಮಾಡಿಸುತ್ತದೆ. ಅದು ಭುವನ್ ಗೌಡರ ಅಸಲಿ ಹಕೀಕತ್ತು. ಉಳಿದಿದ್ದು ಅವರ ಸಿನಿಮಾ ನಿಗಿ ನಿಗಿ ನಿಯತ್ತು.
ಚಿನ್ನದ ಗಣಿ… ಇಂದಿನ ಜನಾಂಗಕ್ಕೆ ಅಂಥದ್ದೊಂದು ಜಗತ್ತು ಹೇಗಿದೆ ಎಂದೇ ಗೊತ್ತಿಲ್ಲ. ಗಣಿ ಜೀವಂತ ಇದ್ದಾಗಲೂ ಅದನ್ನು ಬಹುತೇಕರು ಇಷ್ಟೊಂದು ಹತ್ತಿರದಿಂದ ನೋಡಿರಲಿಕ್ಕಿಲ್ಲ. ಸೈನೈಡ್ ಬೆಟ್ಟ, ಕಡುಗಪ್ಪು ಗುಡ್ಡ, ಅದರ ಮೇಲೆ ಜೋಪಡಿಗಳು, ಗಣಿಗಾರಿಕೆಯ ಗುಂಗು ಹಿಡಿಸುವ ಧೂಳು, ವಾಟರ್ ಟ್ಯಾಂಕು, ಅದಿರನ್ನು ಸಾಗಿಸುವ ಆ ಕಾಲದ ವಾಹನಗಳು, ಆಗ ಬಳಸುತ್ತಿದ್ದ ಬೃಹತ್ ಸುತ್ತಿಗೆ, ಸಲಾಕೆ, ಹಾರೆ, ಕಬ್ಬಿಣದ ಬುಟ್ಟಿ, ಗುದ್ದಲಿ, ತಗಡಿನ ಶೀಟು… ಪ್ರತಿಯೊಂದನ್ನು ಎಲ್ಲೆಲ್ಲಿಂದಲೋ ತಂದು ನಿಮ್ಮ ಅಂಗೈಯಲ್ಲಿ ನಯಾ ದುನಿಯಾ ತೋರಿಸುತ್ತಾರೆ. ಆ ದಿಕ್ಕೆಡಿಸುವ ಲೋಕವನ್ನು ಜತನದಿಂದ ಕಟ್ಟಿದ್ದು ಕಲಾ ನಿರ್ದೇಶಕ ಶಿವು.
ಸತತ 9 ತಿಂಗಳು ನಿತ್ಯ ಎರಡು ನೂರಕ್ಕೂ ಹೆಚ್ಚು ಜನರು ಕೆಜಿಎಫ್ ಸೆಟ್ ನಿರ್ಮಿಸಲು ಬೆವರು ಸುರಿಸಿದ್ದಾರೆ. ಮಳೆ, ಗಾಳಿಗೆ ಅದು ಮಗುಚಿ ಬಿದ್ದಾಗಲೆಲ್ಲಾ ಮತ್ತೆ ಮತ್ತೆ ಅಷ್ಟೇ ಭಕ್ತಿಯಿಂದ ನಿರ್ಮಿಸಿದ್ದಾರೆ. ಕಲಾ ನಿರ್ದೇಶಕ ಜನ ಸಾಮಾನ್ಯರ ಕಣ್ಣಲ್ಲಿ ನಾಯಕನಂತೆ ಮೆರೆಯುವುದು ಹೀಗೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆರ್ಟ್ ಡೈರೆಕ್ಷನ್ ವಿಭಾಗಕ್ಕೆ ಶಿವು ಅಂಡ್ ಟೀಮ್ ಹೊಸ ಭರವಸೆ ಕೊಟ್ಟಿದೆ. ಅದೇ ರೀತಿ ಎಪ್ಪತ್ತು, ಎಂಬತ್ತರ ದಶಕದ ಕಾಸ್ಟ್ಯೂಮ್ ಗಳಿಗೆ ಜೀವ ತುಂಬಿದ್ದು ಡಿಸೈನರ್ ಯೋಗಿ. ನಾಯಕ ನಾಯಕಿಯಿಂದ ಹಿಡಿದು ವಿಲನ್, ಸಹ ಕಲಾವಿದರೆಲ್ಲರಿಗೂ ಅಂದಿನ ಕಾಲದ ಉಡುಪನ್ನು ಜೋಡಿಸಿದ್ದಾರೆ. ಅದಕ್ಕೆ ಅಧಿಕೃತತೆ ನೀಡಿದ್ದಾರೆ.
ಸಂಗೀತ ನಿರ್ದೇಶಕ ರವಿ ಬಸ್ರೂರ್ ನಿಮ್ಮನ್ನು ಥೇಟರ್ ನಿಂದ ಹೊರಗೆ ಬಂದ ಮೇಲೂ ಬೆನ್ನು ಹತ್ತುತ್ತಾರೆ. ಅದೆಲ್ಲಿಂದ ಹುಡುಕಾಡಿ ತಂದರು? ಅದ್ಯಾವ ಗಂಧರ್ವ ಲೋಕದಿಂದ ಎತ್ತಿಕೊಂಡು ಬಂದರು? ಒಂದೊಂದು ಮಾತಿಗೂ, ಒಂದೊಂದು ದೃಶ್ಯಕ್ಕೂ, ಒಂದೊಂದು ಮಜಲಿಗೂ, ಒಬ್ಬೊಬ್ಬ ಕಲಾವಿದನಿಗೂ ಅದು ಹೇಗೆ ಅಷ್ಟೊಂದು ಭಿನ್ನ ವಿಭಿನ್ನ ರಾಗಕ್ಕೆ ಕೈಯಾದರು? ಈ ಎಲ್ಲ ಅನುಮಾನಕ್ಕೆ ಸನ್ಮಾನದ ಮೂಲಕ ಎದುರು ನಿಲ್ಲುತ್ತಾರೆ ರವಿ ಬಸ್ರೂರ್. ಹಾಡಿಗಿಂತ ಹಿನ್ನೆಲೆ ಸಂಗೀತದಲ್ಲಿ ಈ ದೈತ್ಯ ಕೊಟ್ಟ ನಾದ ಇದೆಯಲ್ಲ, ಅದು ಅಜರಾಮರ.
`ಕೆಜಿಎಫ್’ಗೆ ಚಿನ್ನದ ಚೌಕಟ್ಟು ಹಾಕಿದ್ಯಾರು! – ಅವರ ಹೆಸರೇ ವಿಜಯ್ ಕಿರಗಂದೂರು!: ಕೆಜಿಎಫ್ ನ ಮಹಾ ಪ್ರಾಣ ಇನ್ನೊಂದಿದೆ. ಅದೇ ಸಂಭಾಷಣೆ. ಕೆಲವು ಮಾತುಗಳನ್ನು ಯಶ್ ಬಾಯಿಂದ ಕೇಳಿದಾಗಲೇ ತೂಕ ಹೆಚ್ಚಾಗುತ್ತದೆ. ಬಿಲ್ಡಪ್ ಅಂಡ್ ಸೆಂಟಿಮೆಂಟ್ ಡೈಲಾಗ್ ಗಳು ಪ್ರೇಕ್ಷಕರಲ್ಲಿ ಕಿಚ್ಚು ಹೊತ್ತಿಸುತ್ತವೆ. ಅದರ ಕೆಲವು ಸ್ಯಾಂಪಲ್ ಇಲ್ಲಿವೆ ನೋಡಿ.
1. ಗಾಯಗೊಂಡ ಸಿಂಹದ ಘರ್ಜನೆಗಿಂತ ಅದರ ಉಸಿರೇ ಭಯಾನಕ.!! 2. ಯಾರು ಮೊದಲು ಹೊಡೆದರು ಅನ್ನೋದು ಮುಖ್ಯ ಆಗಲ್ಲ, ಯಾರು ಮೊದಲು ಕೆಳಗೆ ಬಿದ್ರು ಅನ್ನೋದೇ ಮುಖ್ಯ 3. ಮುಂಬೈ ನಿಮ್ಮಪ್ಪಂದೆ ಕಣೋ… ಆದ್ರೆ ನಿಮ್ಮಪ್ಪ ನಾನು… 4. ಎದೆಯಲ್ಲಿ ಕಲ್ ಇಟ್ಕೊಂಡೋರ್ಗೇ ಯಾವ್ ರಕ್ತಾನೂ ಅಂಟೋದಿಲ್ಲ… 5. ಕ್ಯಾ ಚಾಹಿಯೆರೇ ತೇರೇಕೋ… ದುನಿಯಾ.!! 6. ಇವನು ಹೀರೋ ಅಲ್ಲಾ.. ವಿಲನ್..!!
ಕೆಜಿಎಫ್ ನ ಇನ್ನೊಂದು ಜೀವಾಳ ಸ್ಟಂಟ್ಸ್. ಯಶ್ ಅದಕ್ಕೆ ಇಡಿ ಇಡಿಯಾಗಿ ಜೀವ ತುಂಬಿದ್ದಾರೆ. ಸಿನಿಮಾದ ಉದ್ದಕ್ಕೂ ವೆರೈಟಿ ವೆರೈಟಿ ಫೈಟಿಂಗ್ ದೃಶ್ಯಗಳು ಜೋಶ್ ತುಂಬುತ್ತವೆ. ಹೀಗೆ ಪ್ರಶಾಂತ್ ನೀಲ್ ಪ್ರತಿಯೊಂದು ವಿಭಾಗದಿಂದಲೂ ಕೆಲಸ ತೆಗೆದಿದ್ದಾರೆ. ಕೆಜಿಎಫ್ ದೇಶ ವಿದೇಶದಲ್ಲಿ ಮೆರೆಯುವಂತೆ ಮಾಡಿದ್ದಾರೆ. ಆದರೆ ಇದಕ್ಕೆಲ್ಲ ಒಂದು ಚಿನ್ನದ ಚೌಕಟ್ಟನ್ನು ಹಾಕಿದ ಏಕೈಕ ವ್ಯಕ್ತಿ ಅಂದರೆ ಅದು ನಿರ್ಮಾಪಕ ವಿಜಯ್ ಕಿರಗಂದೂರ್. ಒಂದೊಂದು ಫ್ರೇಮು, ಒಂದೊಂದು ಶಾಟ್, ಒಂದೊಂದು ಸೆಟ್ಟಿಗೆ ಅದೆಷ್ಟು ಲಕ್ಷ ಲಕ್ಷ, ಕೋಟಿ ಕೋಟಿಗಳನ್ನು ಸುರಿದಿದ್ದಾರೋ ಆ ದೇವರಿಗೇ ಗೊತ್ತು. ಬಹುಶಃ ಆ ದೇವರಿಗೆ ಮಾತ್ರ ಸತ್ಯ ಗೊತ್ತಿದ್ದಿದ್ದಕ್ಕೇ ಇಂದು ಕೆಜಿಎಫ್ ಚಿತ್ರವನ್ನು ಜಗತ್ತಿನಾದ್ಯಂತ ಜಾತ್ರೆ ಮಾಡಿಸುತ್ತಿದ್ದಾನೆ ಆ ದೇವ. ಕನ್ನಡ ಚಿತ್ರರಂಗಕ್ಕೆ ಒಬ್ಬ ವಿಜಯ್ ಕಿರಗಂದೂರ್ ಇದ್ದರೆ, ನೂರು ಮುತ್ತಿನಂಥ ಚಿತ್ರಗಳು ತೇರನ್ನೇರಿ ಹೊರಡುತ್ತವೆ. ಹ್ಯಾಟ್ಸಾಫ್ ಟು ಯು ಪೀಪಲ್… ಚಿಯರ್ಸ್…!
ಕೆಜಿಎಫ್ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯವನ್ನೂ ಕಮೆಂಟ್ ಮಾಡಿ.