Tag: Prana Pratishta

  • ಕೆಲ ಧರ್ಮದ್ವೇಷಿಗಳಿಂದ ಅಪಪ್ರಚಾರ: ಶೃಂಗೇರಿ ಮಠದಿಂದ ಸ್ಪಷ್ಟನೆ

    ಕೆಲ ಧರ್ಮದ್ವೇಷಿಗಳಿಂದ ಅಪಪ್ರಚಾರ: ಶೃಂಗೇರಿ ಮಠದಿಂದ ಸ್ಪಷ್ಟನೆ

    ಚಿಕ್ಕಮಗಳೂರು: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಬಾಲ ರಾಮನ ಪ್ರಾಣಪ್ರತಿಷ್ಠಾ (Prana Pratishta) ಕಾರ್ಯಕ್ರಮಕ್ಕೆ ನಾಲ್ಕು ಶಂಕರ ಮಠಗಳು ವಿರೋಧ ವ್ಯಕ್ತಪಡಿಸಿವೆ ಎಂಬ ಸುದ್ದಿಗಳ ಬೆನ್ನಲ್ಲೇ ಶ್ರೀ ಶೃಂಗೇರಿ ಶಾರದಾ ಪೀಠ(Sri Sringeri Sharada Peetham) ಸ್ಪಷ್ಟನೆ ನೀಡಿದೆ.

    ಜ.8 ರಂದೇ ಶೃಂಗೇರಿ ಮಠದ ಪರವಾಗಿ ಆಡಳಿತ ಅಧಿಕಾರಿ ಗೌರಿಶಂಕರ್‌ (V.R.Gowrishankar) ಅವರು ಆಸ್ತಿಕ ಜನರೆಲ್ಲರ ಗಮನಕ್ಕೆ ಒಂದು ಮುಖ್ಯವಾದ ವಿಷಯ ಎಂದು ಹೇಳಿ ಪ್ರಕಟಣೆ ನೀಡಿದ್ದರು.

    ಕೆಲ ಧರ್ಮದ್ವೇಷಿಗಳು ಸಾಮಾಜಿಕ ಜಾಲತಾಣದಲ್ಲಿ ಶೃಂಗೇರಿ ಶಾರದಾಪೀಠ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಫೋಟೋದ ಜೊತೆಗೆ ಶ್ರೀಗಳು ಪ್ರಾಣಪ್ರತಿಷ್ಠಾ ಕಾರ್ಯಕ್ರಮವನ್ನು ವಿರೋಧಿಸುತ್ತಿದ್ದಾರೆ ಎಂಬ ಅರ್ಥ ಬರುವಂತೆ ಸಂದೇಶವನ್ನು ಹಾಕಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಶ್ರೀಗಳು ಆ ರೀತಿಯ ಯಾವುದೇ ಸಂದೇಶ ನೀಡಿಲ್ಲ. ಇದು ಕೇವಲ ಧರ್ಮದ್ವೇಷಿಗಳಾದ ಕೆಲವು ಮಾಡುತ್ತಿರುವ ಮಿಥ್ಯಾಪ್ರಚಾರ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Ayodhya Ram Mandir: ರಾಮಮಂದಿರಕ್ಕೆ ಹರಿದುಬಂದ ದೇಣಿಗೆ ಎಷ್ಟು? ಅತಿ ಹೆಚ್ಚು ದೇಣಿಗೆ ಕೊಟ್ಟವರ‍್ಯಾರು ಗೊತ್ತಾ?

    ಮಾಧ್ಯಮ ಹೇಳಿಕೆಯಲ್ಲಿ ಏನಿದೆ?
    ಆಸ್ತಿಕ ಜನರೆಲ್ಲರ ಗಮನಕ್ಕೆ ಒಂದು ಮುಖ್ಯವಾದ ವಿಷಯ. ಸುಮಾರು ಐದುನೂರು ವರ್ಷಗಳ ಸುದೀರ್ಘವಾದ ಹೋರಾಟದ ನಂತರ ಶ್ರೀರಾಮಚಂದ್ರನ ಅವತಾರ ಕ್ಷೇತ್ರವಾದ ಪವಿತ್ರ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನಿಗೆ ಭವ್ಯವಾದ ದೇವಸ್ಥಾನದ ನಿರ್ಮಾಣವು ನೆರವೇರಿ ಇದೇ ಶೋಭಕೃತ್ ಪುಷ್ಯ ಶುಕ್ಲ ದ್ವಾದಶಿಯಂದು ಪ್ರಾಣ ಪ್ರತಿಷ್ಠಾ ಮಹೋತ್ಸವವು ಅತ್ಯಂತ ವೈಭವೋಪೇತವಾಗಿ ಸಂಪನ್ನಗೊಳ್ಳಲಿದೆ. ಈ ವಿಷಯವು ಸಮಸ್ತ ಆಸ್ತಿಕಸ್ತೋಮಕ್ಕೂ ಅತ್ಯಂತಾನಂದದಾಯಕವಾಗಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಚಿನ್ನದ ಬಾಗಿಲು – ಇನ್ನು 3 ದಿನದಲ್ಲಿ 13 ಬಾಗಿಲು ಅಳವಡಿಕೆ

    ಆದರೆ ಇಂತಹ ಸಂದರ್ಭದಲ್ಲಿ ಕೆಲವರು ಧರ್ಮದ್ವೇಷಿಗಳು ಸಾಮಾಜಿಕ ಜಾಲತಾಣದಲ್ಲಿ “www.dainikjagran.com” ಎಂಬ ಹೆಸರನ್ನು ಉಪಯೋಗಿಸಿಕೊಂಡು ಶೃಂಗೇರಿ ಶಾರದಾಪೀಠದ ಪ್ರಸ್ತುತ ಅಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಛಾಯಾಚಿತ್ರದ ಜೊತೆಗೆ ಶ್ರೀಗಳು ಈ ಪವಿತ್ರ ಪ್ರಾಣಪ್ರತಿಷ್ಠಾ ಮಹೋತ್ಸವವನ್ನು ವಿರೋಧಿಸುತ್ತಿದ್ದಾರೆ ಎಂಬ ಅರ್ಥವು ಬರುವ ಹಾಗೆ ಸಂದೇಶವನ್ನು ಹಾಕಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಇಂತಹ ಯಾವುದೇ ಸಂದೇಶವನ್ನು ನೀಡಿರುವುದಿಲ್ಲ. ಇದು ಕೇವಲ ಧರ್ಮದ್ವೇಷಿಗಳಾದ ಕೆಲವರು ಮಾಡುತ್ತಿರುವ ಮಿಥ್ಯಾ ಪ್ರಚಾರವೇ ಸರಿ. ಆದ್ದರಿಂದ ಆಸ್ತಿಕ ಮಹಾಜನರು ಯಾವುದೇ ಕಾರಣಕ್ಕೆ ಇಂತಹ ಅಪಪ್ರಚಾರಗಳಿಗೆ ಬೆಲೆಯನ್ನು ಕೊಡಬಾರದು. ಹಾಗೆಯೇ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಅಧಿಕೃತವಾದ www.sringeri.net ಎಂಬ ವೆಬ್‌ಸೈಟಿನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ವಿಷಯಗಳನ್ನು ಮಾತ್ರವೇ ಪ್ರಾಮಾಣಿಕವಾಗಿ ಪರಿಗಣಿಸಬೇಕೆಂದು ಈ ಮೂಲಕ ನಿವೇದಿಸುತ್ತಿದ್ದೇವೆ.

     

    “sharadapeetham” ಯೂಟ್ಯೂಬ್ ಚ್ಯಾನೆಲ್ ಮೂಲಕ ಕಳೆದ ದೀಪಾವಳಿಯ (12-11-2023) ಸಂದರ್ಭದಲ್ಲಿ ಈ ಪವಿತ್ರ ಪ್ರಾಣಪ್ರತಿಷ್ಠಾ ಮಹೋತ್ಸವವನ್ನು ಮನಸ್ಸಿನಲ್ಲಿಟ್ಟುಕೊಂಡು ಶ್ರೀರಾಮತಾರಕ ಮಹಾಮಂತ್ರವನ್ನು ಜಪಿಸುವಂತೆ ಎಲ್ಲಾ ಆಸ್ತಿಕರಿಗೂ ಶೃಂಗೇರಿ ಜಗದ್ಗುರುಗಳು ಸಂದೇಶವನ್ನು ನೀಡಿದ್ದರು. ಅದನ್ನ ಅನುಸರಿಸಿ ಆಸ್ತಿಕರು ಅತ್ಯಧಿಕ ಸಂಖ್ಯೆಯಲ್ಲಿ ಮಂತ್ರಜಪವನ್ನು ಮಾಡುತ್ತಿರುವುದು ಈ ಸಂದರ್ಭದಲ್ಲಿ ಗಮನಾರ್ಹವಾಗಿದೆ. ಹಾಗೆಯೇ ಅತ್ಯಂತ ಪವಿತ್ರವೂ ಅಪರೂಪವು ಆದ ಈ ಪ್ರಾಣಪ್ರತಿಷ್ಠಾ ಮಹೋತ್ಸವದ ಸುಸಂದರ್ಭದಲ್ಲಿ ಎಲ್ಲಾ ಆಸ್ತಿಕರು ಯಥಾಯೋಗ್ಯವಾಗಿ ಭಾಗವಹಿಸಿ ಶ್ರೀರಾಮನ ಪರಿಪೂರ್ಣ ಕೃಪೆಗೆ ಪಾತ್ರರಾಗಿ ಕೃತಾರ್ಥರಾಗಬೇಕೆಂದು ಜಗದ್ಗುರು ಮಹಾಸ್ವಾಮಿಗಳವರು ಆಶೀರ್ವದಿಸಿದ್ದಾರೆ.

     

  • ಗರ್ಭಗುಡಿಯಲ್ಲಿ ರಾಮ – ಮಂದಿರದ ಬೇರೆ ಗುಡಿಗಳಲ್ಲಿ ಯಾವ ದೇವರು ಇರುತ್ತಾರೆ?

    ಗರ್ಭಗುಡಿಯಲ್ಲಿ ರಾಮ – ಮಂದಿರದ ಬೇರೆ ಗುಡಿಗಳಲ್ಲಿ ಯಾವ ದೇವರು ಇರುತ್ತಾರೆ?

    ಅಯೋಧ್ಯೆ: ರಾಮಮಂದಿರದಲ್ಲಿ (Ram Mandir) ಬಾಲ ರಾಮನ ಪ್ರಾಣಪ್ರತಿಷ್ಠೆ (Prana Pratishta) ಆಗುವುದರ ಜೊತೆಗೆ ಆವರಣದಲ್ಲಿ 6 ದೇವರ ಗುಡಿಗಳು ಇರಲಿದೆ.

    ಆವರಣದ 4 ಮೂಲೆಯಲ್ಲಿ ಸೂರ್ಯ ದೇವ, ದೇವಿ ಭಗವತಿ, ಗಣೇಶ, ಮತ್ತು ಶಿವನ ಗುಡಿಗಳು ಇರಲಿದೆ. ಇಷ್ಟೇ ಅಲ್ಲದೇ ಉತ್ತರ ಭಾಗದಲ್ಲಿ ಅನ್ನಪೂರ್ಣ ಮತ್ತು ದಕ್ಷಿಣದಲ್ಲಿ ಹನುಮಂತನ ಗುಡಿ ಇರಲಿದೆ.

    ಅಯೋಧ್ಯೆ ರಾಮಮಂದಿರ ಸಂಕೀರ್ಣದ ಒಳಗೆ, ಮಹರ್ಷಿ ವಾಲ್ಮೀಕಿ, ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ನಿಶಾದ್ ರಾಜ್, ಮಾತಾ ಶಬರಿ ಮತ್ತು ದೇವಿ ಅಹಲ್ಯಾ ಗುಡಿಗಳಿರಲಿವೆ. ಬಾಲ ರಾಮನ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿದ್ದರೆ ಮೊದಲ ಮಹಡಿಯಲ್ಲಿ ಶ್ರೀರಾಮ ದರ್ಬಾರ್ ಇರುತ್ತದೆ.

    ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಮಂದಿರದಲ್ಲಿ ಪೂಜೆ-ಪುನಸ್ಕಾರಕ್ಕೆ ಅರ್ಚಕರ ಆಯ್ಕೆಯೂ ಆಗಿದೆ. ದೇಶಾದ್ಯಂತ ಆಯ್ಕೆಯಾದ 24 ಅರ್ಚಕರಲ್ಲಿ ಇಬ್ಬರು ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಒಬ್ಬರು ಹಿಂದುಳಿದ ವರ್ಗ (ಒಬಿಸಿ)ಕ್ಕೆ ಸೇರಿದವರಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ದಿನದವರೆಗೆ ಯುಪಿ ಸರ್ಕಾರಿ ಬಸ್‌ಗಳಲ್ಲಿ ರಾಮ ಭಜನೆ ಪ್ರಸಾರ

    ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಮಂದಿರ ನಿರ್ಮಾಣ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಲು ಹೆಚ್ಚುವರಿ 500 ಕಾರ್ಮಿಕರನ್ನು ಕರೆತರಲಾಗಿದೆ.

    ಜನವರಿ 22ರ ಮಧ್ಯಾಹ್ನ 12 ಗಂಟೆ 29 ನಿಮಿಷ 8 ಸೆಕೆಂಡ್‌ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್‌ ನಡುವಿನ 84 ಸೆಕೆಂಡ್‌ಗಳ ಅವಧಿಯನ್ನು ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ. ರಾಮಮಂದಿರದಲ್ಲಿ ರಾಮನ ಪ್ರತಿಷ್ಠಾಪನೆ ಮುಹೂರ್ತಕ್ಕೆ ಸಮಯ ಸೂಚಿಸುವಂತೆ ದೇಶಾದ್ಯಂತ ಇರುವ ವಿದ್ವಾಂಸರು ಹಾಗೂ ಪ್ರಖ್ಯಾತ ಜ್ಯೋತಿಷಿಗಳಲ್ಲಿ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ ಮನವಿ ಮಾಡಿತ್ತು. ಎಲ್ಲರಿಂದ ಬಂದ ಮಾಹಿತಿಯನ್ನು ಸಮನ್ವಯಗೊಳಿಸಿ ಕೊನೆಗೆ ಮುಹೂರ್ತ ಸಮಯ ಅಂತಿಮಗೊಳಿಸಲಾಗಿದೆ.  ಇದನ್ನೂ ಓದಿ: Ayodhya Ram Mandir: ಆನೆ, ಸಿಂಹ, ಹನುಮಾನ್, ಗರುಡ ಮೂರ್ತಿಗಳ ಫೋಟೋ ಬಿಡುಗಡೆ

    ಕಾಶಿಯ ಜ್ಯೋತಿಷಿಯ ಮುಹೂರ್ತ ಆಯ್ಕೆ
    ಕಾಶಿಯ ಜ್ಯೋತಿಷಿ ಪಂಡಿತ್‌ ಗಣೇಶ್ವರ್‌ ಶಾಸ್ತ್ರಿ ದ್ರಾವಿಡ ಅವರು 84 ಸೆಕೆಂಡ್‌ ಅವಧಿಯ ಮುಹೂರ್ತವನ್ನು ಸೂಚಿಸಿದ್ದರು. ಜನವರಿ 22ರಂದು ಮಧ್ಯಾಹ್ನ 12 ಗಂಟೆ 29 ನಿಮಿಷ 08 ಸೆಕೆಂಡ್‌ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್‌ ನಡುವಿನ 84 ಸೆಕೆಂಡ್ ಶುಭ ಮುಹೂರ್ತ ಎಂದು ಸೂಚಿಸಿದ್ದರು.

    5 ದಿನಾಂಕಗಳು ಮುಂದಿತ್ತು!
    ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ರಾಮನ ಮೂರ್ತಿ ಸ್ಥಾಪನೆಗೆ ದಿನಾಂಕಗಳನ್ನು ಸೂಚಿಸಿತ್ತು. ಇದಕ್ಕೆ ಉತ್ತರವಾಗಿ ದಿನಾಂಕಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಇದರಲ್ಲಿ ಜನವರಿ ತಿಂಗಳ 17ರಿಂದ 25ನೇ ತಾರೀಕಿನ ನಡುವೆ 5 ದಿನಾಂಕಗಳು ಇದ್ದವು. ಕೊನೆಗೆ ಪಂಡಿತ್‌ ಗಣೇಶ್ವರ್‌ ಶಾಸ್ತ್ರಿ ದ್ರಾವಿಡ ಅವರು ಜನವರಿ 22ರ ದಿನಾಂಕ ಹಾಗೂ ಪುಣ್ಯ ಮುಹೂರ್ತವನ್ನು ಆಯ್ಕೆ ಮಾಡಿದರು. ಜನವರಿ 22ರ ಮುಹೂರ್ತ ದೇಶಕ್ಕೆ ಸಂಜೀವಿನಿ ಯೋಗ ತರುತ್ತದೆ ಎಂದು ಗಣೇಶ್ವರ ಶಾಸ್ತ್ರಿ ಹೇಳಿದ್ದಾರೆ.