Tag: Prakash hukkeri

  • ಪ್ರಕಾಶ್ ಹುಕ್ಕೇರಿ ಗೆದ್ದ ಬಳಿಕ ಚಪ್ಪಲಿ ಹಾಕ್ತೀನಿ – ಅಭಿಮಾನಿಯಿಂದ ವಿಶಿಷ್ಟ ಹರಕೆ

    ಪ್ರಕಾಶ್ ಹುಕ್ಕೇರಿ ಗೆದ್ದ ಬಳಿಕ ಚಪ್ಪಲಿ ಹಾಕ್ತೀನಿ – ಅಭಿಮಾನಿಯಿಂದ ವಿಶಿಷ್ಟ ಹರಕೆ

    ಬೆಳಗಾವಿ/ಚಿಕ್ಕೋಡಿ: ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಇಲ್ಲೊಬ್ಬ ಕಾಂಗ್ರೆಸ್ ಅಭಿಮಾನಿ ತಮ್ಮ ಅಭ್ಯರ್ಥಿ ಗೆದ್ದ ಮೇಲೆಯೇ ಚಪ್ಪಲಿ ಹಾಕುತ್ತೇನೆ ಎಂದು ಹರಕೆ ಹೊತ್ತಿದ್ದಾರೆ.

    ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ನಿವಾಸಿ ಭೀಮಗೌಡ ಬಸಗೌಡ ಅಮ್ಮಣಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಗೆದ್ದ ಮೇಲೆಯೇ ಚಪ್ಪಲಿ ಹಾಕುತ್ತೇನೆ ಎಂದು ಹರಕೆ ಹೊತ್ತಿದ್ದಾರೆ.

    ಪ್ರಕಾಶ್ ಹುಕ್ಕೇರಿ ಗೆಲುವಿಗಾಗಿ ಅಕ್ಕಿವಾಟ ಮಲ್ಲಯ್ಯ (ಈಶ್ವರ) ಹರಕೆ ಹೊತ್ತಿದ್ದಾರೆ. ಚುನಾವಣಾ ಮುಗಿದ ದಿನದಿಂದಲೇ ಭೀಮಗೌಡ ಹರಕೆ ಹೊತ್ತಿದ್ದು, ಬಿರು ಬಿಸಿಲಿನಲ್ಲೂ ಚಪ್ಪಲಿ ಇಲ್ಲದೇ ನಡೆದಾಡುತ್ತಿದ್ದಾರೆ.

    2014ರ ಲೋಕಸಭಾ ಚುನಾವಣೆಯಲ್ಲೂ ಇವರು ಪ್ರಕಾಶ್ ಹುಕ್ಕೇರಿ ಅವರ ಗೆಲುವಿಗಾಗಿ ಇದೇ ರೀತಿಯ ಹರಕೆ ಹೊತ್ತಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರಕಾಶ್ ಹುಕ್ಕೇರಿ 3,003 ಮತಗಳ ಅಂತರದಿಂದ ಗೆದ್ದಿದ್ದರು. ಈಗ ಮತ್ತೆ ಹರಕೆ ಹೊತ್ತಿದ್ದು, ಅಕ್ಕಿವಾಟ ಮಲ್ಲಯ್ಯ ಮತ್ತೆ ಪ್ರಕಾಶ್ ಹುಕ್ಕೇರಿ ಅವರನ್ನ ಗೆಲ್ಲಿಸುತ್ತಾನೆ ಎನ್ನುವ ವಿಶ್ವಾಸವನ್ನು ಭೀಮಗೌಡ ವ್ಯಕ್ತಪಡಿಸಿದ್ದಾರೆ.

  • ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಫ್ಯಾಮಿಲಿ ವಾರ್

    ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಫ್ಯಾಮಿಲಿ ವಾರ್

    ಚಿಕ್ಕೋಡಿ/ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸದ್ಯಕ್ಕೆ ಫ್ಯಾಮಿಲಿ ವಾರ್ ಪ್ರಾರಂಭವಾಗಿದೆ. ಒಂದು ಕಡೆ ಅಪ್ಪ ಗೆಲ್ಲಬೇಕು ಅಂತ ಕಾಂಗ್ರೆಸ್ ಗಣೇಶ್ ಮತಯಾಚನೆ ಮಾಡುತ್ತಿದ್ದರೆ, ಇನ್ನೊಂದು ಕಡೆ ಪತಿ ಗೆಲ್ಲಬೇಕು ಎಂದು ಶಶಿಕಲಾ ಜೊಲ್ಲೆ ಪ್ರಚಾರ ಮಾಡುತ್ತಿದ್ದಾರೆ.

    ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮತ್ತು ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ರಾಜ್ಯದಲ್ಲಿ ಚಿಕ್ಕೋಡಿ ಮತಕ್ಷೇತ್ರ ಗಮನ ಸೆಳೆಯುತ್ತಿದೆ. ಯಾಕೆಂದರೆ ಇಲ್ಲಿರುವ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಹಿಂದೆ ನಿಂತು ಮನೆಯಲ್ಲಿನ ಎಂಎಲ್‍ಎಗಳು ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಸಂಸದ ಪ್ರಕಾಶ್ ಹುಕ್ಕೇರಿ ಪರವಾಗಿ ಮಗ ಗಣೇಶ್ ಹುಕ್ಕೇರಿ ಗ್ರಾಮ ಗ್ರಾಮಗಳನ್ನು ಸುತ್ತಿ ತಂದೆಯ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇತ್ತ ಬಿಜೆಪಿಯ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪತ್ನಿ ಶಶಿಕಲಾ ಜೊಲ್ಲೆಯವರು ಕೂಡ ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ.

    ಈ ಬಗ್ಗೆ ಶಾಸಕಿ ಶಶಿಕಲಾ ಜೊಲ್ಲೆ ಅವರಿಗೆ ಕೇಳಿದರೆ, ನನಗೆ ಹೆಗಲಿಗೆ ಹೆಗಲು ಕೊಟ್ಟು ಬೆಳೆಸಿದ ಪತಿ ಅಣ್ಣಾಸಾಹೇಬ ಜೊಲ್ಲೆ ಅವರ ಪರವಾಗಿ ಪ್ರಚಾರ ನಡೆಸಿದ್ದೇನೆ. ನಾನು ಹೆಂಡತಿಯಾಗಿಯೂ ಮತ್ತು ಪಕ್ಷದ ಒಬ್ಬ ಶಾಸಕಿಯಾಗಿಯೂ ಕೆಲಸ ಮಾಡುತ್ತಿದ್ದೇನೆ. ಅವರಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇತ್ತ ನಮ್ಮ ತಂದೆಯ ಹೆಗಲಿಗೆ ಹೆಗಲು ಕೊಟ್ಟು ದುಡಿದು ಅವರನ್ನ ಆರಿಸಿ ಮತ್ತೆ ಪಾರ್ಲಿಮೆಂಟ್‍ಗೆ ಕಳುಹಿಸುತ್ತೀನಿ ಎಂದು ಗಣೇಶ್ ಹುಕ್ಕೇರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇನ್ನು ಕಳೆದ ಬಾರಿ ನಡೆದ ವಿಧಾನಸಭೆ ಚುಣಾವಣೆಯಲ್ಲಿಯೂ ಸಹ ಬೆಳಗಾವಿ ಜಿಲ್ಲೆಯ ಈ ಪ್ರತಿಷ್ಠಿತ ಎರಡು ಮನೆತನಗಳು ಎದುರಾಗಿದ್ದವು. ಆಗ ಶಾಸಕ ಪ್ರಕಾಶ್ ಹುಕ್ಕೇರಿ ವಿರುದ್ಧ ಅಣ್ಣಾಸಾಹೇಬ ಜೊಲ್ಲೆ ಎದುರಾಳಿಯಾಗಿ ಸ್ಪರ್ಧಿಸಿದ್ದರು. ಈಗ ಲೋಕಸಭೆ ಚುಣಾವಣೆಯಲ್ಲೂ ಸಹ ಅದೇ ರೀತಿಯ ವಾತಾವರಣ ಮುಂದುವರೆದಿದ್ದು, ಗಣೇಶ್ ಹುಕ್ಕೇರಿಯವರ ತಂದೆ ಸಂಸದ ಪ್ರಕಾಶ್ ಹುಕ್ಕೇರಿ ವಿರುದ್ಧ ಅಣ್ಣಾಸಾಹೇಬ ಜೊಲ್ಲೆ ಸೆಣಸಲು ರೆಡಿಯಾಗಿದ್ದಾರೆ.

  • ಹೊಸ ರಾಜಕೀಯ ದಾಳ ಉರುಳಿಸಲು ಮುಂದಾದ ಮಾಜಿ ಸಿಎಂ..!

    ಹೊಸ ರಾಜಕೀಯ ದಾಳ ಉರುಳಿಸಲು ಮುಂದಾದ ಮಾಜಿ ಸಿಎಂ..!

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆಯಲ್ಲಿ ಹೊಸ ರಾಜಕೀಯ ದಾಳ ಉರುಳಿಸಲು ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

    ಸಿದ್ದರಾಮಯ್ಯ ಅವರು ತಮ್ಮ ಶಿಷ್ಯ ಸತೀಶ್ ಜಾರಕಿಹೊಳಿ ಮೂಲಕ ಹೊಸ ರಾಜಕೀಯ ದಾಳ ಉರುಳಿಸಲು ಮುಂದಾಗಿದ್ದು, ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಸೆಳೆಯಲು ಸತೀಶ್ ಜಾರಕಿಹೊಳಿಗೆ ಜವಾಬ್ದಾರಿಯನ್ನು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಬೆಳಗಾವಿಯಲ್ಲಿ ಎರಡು ಲೋಕಸಭೆ ಕ್ಷೇತ್ರಗಳಿವೆ. ಆದರೆ ಈ ಬಾರಿ ಚಿಕ್ಕೋಡಿಯಿಂದ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ತಪ್ಪಿದೆ. ಹೀಗಾಗಿ ಕತ್ತಿ ಕುಟುಂಬವೂ ಕೂಡ ಬಿಜೆಪಿಯೊಂದಿಗೆ ಅಸಮಾಧಾನ ಹೊಂದಿದೆ. ಈ ಸಂದರ್ಭವನ್ನು ದಾಳವಾಗಿ ಉರುಳಿಸಿಕೊಂಡು ಅವರನ್ನು ಕಾಂಗ್ರೆಸ್ಸಿಗೆ ಏಕೆ ಕರೆತರಬಾರದು ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಶುರುವಾಗಿದೆ.

    ಈಗಾಗಲೇ ಬೆಳಗಾವಿಯಲ್ಲಿ ವಿರುಪಾಕ್ಷ ಸಾದನವರ್ ಹಾಗೂ ಚಿಕ್ಕೋಡಿಗೆ ಪ್ರಕಾಶ್ ಹುಕ್ಕೇರಿಗೆ ಬಿ- ಫಾರಂ ನೀಡಲಾಗಿದೆ. ಈಗ ಇಬ್ಬರು ಅಭ್ಯರ್ಥಿಗಳನ್ನು ಕೂರಿಸಿ ಮಾತುಕತೆ ನಡೆಸಿ ಟಿಕೆಟ್ ತ್ಯಾಗ ಮಾಡಲು ಒಪ್ಪಿಸಿದ್ದಾರೆ. ರಮೇಶ್ ಕಾಂಗ್ರೆಸ್ಸಿಗೆ ಬಂದರೆ ಚಿಕ್ಕೋಡಿಯಿಂದ ರಮೇಶ್ ಕತ್ತಿಗೆ ಟಿಕೆಟ್ ನೀಡಲು ನಿರ್ಧಾರ ಮಾಡಿದ್ದಾರೆ. ಆದ್ದರಿಂದ ಈ ಜವಾಬ್ದಾರಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸತೀಶ್ ಜಾರಕಿಹೊಳಿಗೆ ನೀಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

    ಪ್ರಕಾಶ್ ಹುಕ್ಕೇರಿ ಅವರು ಕೂಡ ಕಳೆದ ಬಾರಿ ಚಿಕ್ಕೋಡಿಯಿಂದ ಸ್ಪರ್ಧಿಸಲು ಇಷ್ಟಪಟ್ಟಿರಲಿಲ್ಲ. ಈ ಬಾರಿಯೂ ಅಲ್ಲಿಯೇ ಸ್ಪರ್ಧೆ ಮಾಡಲು ಇಷ್ಟವಿರಲಿಲ್ಲ. ಆದರೆ ಪಕ್ಷದ ಸೂಚನೆ ಮೇರೆಗೆ ಅಲ್ಲಿಯೇ ಅನಿವಾರ್ಯವಾಗಿ ನಿಂತಿದ್ದಾರೆ. ಚಿಕ್ಕೋಡಿಯ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನ ಮಾಡಿದ್ದಾರೆ.

    ಒಂದು ವೇಳೆ ಕತ್ತಿ ಸಹೋದರರು ಕಾಂಗ್ರೆಸ್ಸಿಗೆ ಬಂದರೆ ಸುಲಭವಾಗಿ ಚಿಕ್ಕೋಡಿ ಗೆಲ್ಲಬಹುದು. ಇತ್ತ ಕತ್ತಿ ಸಹೋದರರ ನೆರವಿನೊಂದಿಗೆ ಬೆಳಗಾವಿಯಲ್ಲೂ ಗೆಲುವಿನ ಬಾವುಟ ಹಾರಿಸಬಹುದು ಅನ್ನೋದು ಕೈ ಪಾಳಯದ ಲೆಕ್ಕಾಚಾರವಾಗಿದೆ. ರಮೇಶ್ ಕತ್ತಿಗೆ ಚಿಕ್ಕೋಡಿ ಬಿಟ್ಟುಕೊಟ್ಟು ಬೆಳಗಾವಿಯಿಂದ ಸ್ಪರ್ಧಿಸಲು ಪ್ರಕಾಶ್ ಹುಕ್ಕೇರಿ ಸಮ್ಮತಿ ನೀಡಿದ್ದಾರೆ ಎನ್ನಲಾಗುತ್ತಿದೆ.

  • ಜನರ ಸಮಸ್ಯೆ ಬಗೆಹರಿಸಲು ಶಾಸಕ ಗಣೇಶ ಹುಕ್ಕೇರಿ ಹೊಸ ಪ್ಲ್ಯಾನ್

    ಜನರ ಸಮಸ್ಯೆ ಬಗೆಹರಿಸಲು ಶಾಸಕ ಗಣೇಶ ಹುಕ್ಕೇರಿ ಹೊಸ ಪ್ಲ್ಯಾನ್

    ಬೆಳಗಾವಿ: ದಿ.ದೇವರಾಜ್ ಅರಸು ಹಾಗೂ ರಾಜೀವ ಗಾಂಧಿ ಜನ್ಮ ದಿನದ ನಿಮಿತ್ಯವಾಗಿ ಶಾಸಕ ಗಣೇಶ್ ಹುಕ್ಕೇರಿ ಹೆಸರಿನ ಗೂಗಲ್ ಆ್ಯಪ್‍ನ್ನು ಸಂಸದ ಪ್ರಕಾಶ ಹುಕ್ಕೇರಿ ಇಂದು ಬಿಡುಗಡೆ ಮಾಡಿದರು.

    ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ 1300 ಜನರಿಗೆ ಉಚಿತ ಗ್ಯಾಸ್ ವಿತರಣಾ ಸಮಾರಂಭದಲ್ಲಿ ಈ ಆ್ಯಪ್ ನ್ನು ಬಿಡುಗಡೆಗೊಳಿದರು.

    ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮಾದರಿಯಲ್ಲಿ ಶಾಸಕ ಗಣೇಶ್ ಹುಕ್ಕೇರಿ ಹೆಸರಿನಲ್ಲಿ ಸರಕಾರದ ವಿವಿಧ ಯೋಜನೆಗಳ ಕುಂದು ಕೊರೆತೆಯನ್ನು ನಿವಾರಿಸಲು ಈ ಗೂಗಲ್ ಆ್ಯಪ್ ಹಾಗೂ ಟೋಲ್ ಫ್ರೀ ದೂರವಾಣಿ ಸಂಖ್ಯೆಯನ್ನ ಸಿದ್ಧಪಡಿಸಲಾಗಿದೆ. ಈ ಆ್ಯಪ್ ಮೂಲಕ ಸಾರ್ವಜನಿಕರು ಶಾಸಕರಿಗೆ ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ.

    ಈ ವೇಳೆ ಶಾಸಕ ಗಣೇಶ್ ಹುಕ್ಕೇರಿ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಸಂಧ್ಯಾ ಸುರಕ್ಷಾ, ಪಿಂಚಣಿ, ವಿಧವಾ ವೇತನ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳನ್ನ ಪಡೆದುಕೊಳ್ಳಲು ಈ ಆ್ಯಪ್ ಮೂಲಕ ಸಂಪರ್ಕ ಮಾಡಲಾಗಿದೆ. ಹಾಗಾಗಿ ತಕ್ಷಣವೇ ಫಲಾನುಭವಿಗಳನ್ನ ಸಂಪರ್ಕಿಸಿ ಅವರಿಂದ ಅಗತ್ಯ ದಾಖಲಾತಿಗಳನ್ನು ಪಡೆದು ಯೋಜನೆಯನ್ನ ಅನುಷ್ಠಾನಗೊಳಿಸಿದೆ. ನಂತರ ಶಾಸಕರೇ ಅವರ ಮನೆಗೆ ಹೋಗಿ ಯೋಜನೆಯ ಆದೇಶ ಪ್ರತಿಗಳನ್ನು ಹಸ್ತಾಂತರಿಸಲು ಈ ಆ್ಯಪ್‍ನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

    ಪ್ರತಿಯೊಬ್ಬರ ಮನೆಯಲ್ಲೂ ಈಗ ಸ್ಮಾರ್ಟ್ ಫೋನ್ ಬಳಕೆಯಾಗುತ್ತಿರುವ ಕಾರಣ ಈ ಆ್ಯಪ್ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.