Tag: PPE Kit

  • N95 ಮಾಸ್ಕ್‌ಗೆ 22, ಸರ್ಜಿಕಲ್ ಮಾಸ್ಕ್‌ಗೆ-4, ಪಿಪಿಇ ಕಿಟ್‍ಗೆ 273 ರೂ.!

    N95 ಮಾಸ್ಕ್‌ಗೆ 22, ಸರ್ಜಿಕಲ್ ಮಾಸ್ಕ್‌ಗೆ-4, ಪಿಪಿಇ ಕಿಟ್‍ಗೆ 273 ರೂ.!

    – ಕೇರಳ ಸರ್ಕಾರದಿಂದ ದರ ನಿಗದಿಗೊಳಿಸಿ ಆದೇಶ

    ತಿರುವನಂತಪುರಂ: ಕೋವಿಡ್ ಹರಡುವಿಕೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಅವಶ್ಯಕವಾದ ವಸ್ತುಗಳ ಬೆಲೆ ನಿಗದಿಗೊಳಿಸಿ ಆದೇಶ ಹೊರಡಿಸಿದೆ.

    ಯಾವುದಕ್ಕೆ ಎಷ್ಟು?: ಪಿಪಿಇ ಕಿಟ್‍ಗಳನ್ನು ಗರಿಷ್ಠ 273 ರೂಪಾಯಿಗೆ ಮಾತ್ರ ಮಾರಾಟ ಮಾಡಬಹುದು. ಒಂದು ಎನ್95 ಮಾಸ್ಕ್‌ಗೆ 22 ರೂ., ಸರ್ಜಿಕಲ್ ಮಾಸ್ಕ್‌ಗೆ 3 ರೂಪಾಯಿ 90 ಪೈಸೆ ಎಂದು ನಿಗದಿಗೊಳಿಸಲಾಗಿದೆ.

    ಅಲ್ಲದೆ ಕೋವಿಡ್ ಹರಡುವಿಕೆ ನಿಯಂತ್ರಿಸಲು ಬಳಸುವ ಸ್ಯಾನಿಟೈಸರ್ ಮಾರಾಟಕ್ಕೂ ದರ ನಿಗದಿಗೊಳಿಸಲಾಗಿದ್ದು, ಅರ್ಧ ಲೀಟರ್ ಸ್ಯಾನಿಟೈಸರ್‍ಗೆ ಗರಿಷ್ಠ 192 ರೂ. ಮಾತ್ರ ಪಡೆಯಬಹುದು. ಕೋವಿಡ್ ವೇಗವಾಗಿ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ವಸ್ತುಗಳನ್ನು ದೊರಕಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ನಿರ್ದೇಶನದನ್ವಯ ಕೇರಳ ಸರ್ಕಾರ ಈ ದರ ನಿಗದಿಗೊಳಿಸಿದೆ.

    ಪಿಪಿಇ ಕಿಟ್-273, ಎನ್95 ಮಾಸ್ಕ್ – 22 ರೂ., ಟ್ರಿಪಲ್ ಲೇಯರ್ ಮಾಸ್ಕ್- 3.90 ರೂ., ಫೇಸ್ ಶೀಲ್ಡ್-21 ರೂ., ಡಿಸ್ಪೋಸೇಬಲ್ ಏಪ್ರನ್-12 ರೂ., ಸರ್ಜಿಕಲ್ ಗೌನ್- 65 ರೂ., ಎಕ್ಸಾಮಿನೇಷನ್ ಗ್ಲೌಸ್- 5.75 ರೂ., ಹ್ಯಾಂಡ್ ಸ್ಯಾನಿಟೈಸರ್ (500 ಎಂಎಲ್) – 192 ರೂ., ಹ್ಯಾಂಡ್ ಸ್ಯಾನಿಟೈಸರ್ (200 ಎಂಎಲ್) – 98 ರೂ., ಹ್ಯಾಂಡ್ ಸ್ಯಾನಿಟೈಸರ್ (100 ಎಂಎಲ್) – 55 ರೂ., ಸ್ಟೆರೈಲ್ ಗ್ಲೌಸ್ (1 ಜೊತೆ) – 12 ರೂ., ಎನ್‌ಆರ್‌ಬಿ ಮಾಸ್ಕ್ – 80 ರೂ., ಹ್ಯೂಮಿಡಿಫೈರ್ ಫ್ಲೋ ಮೀಟರ್-1520 ರೂ., ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್- 1500 ರೂ.

  • ಪಿಪಿಇ ಕಿಟ್ ಧರಿಸಿ ಕೋವಿಡ್ ಅಸ್ಪತ್ರೆ ಸಮಸ್ಯೆಗಳನ್ನು ಪರಿಶೀಲಿಸಿದ ಅಪ್ಪಚ್ಚು ರಂಜನ್

    ಪಿಪಿಇ ಕಿಟ್ ಧರಿಸಿ ಕೋವಿಡ್ ಅಸ್ಪತ್ರೆ ಸಮಸ್ಯೆಗಳನ್ನು ಪರಿಶೀಲಿಸಿದ ಅಪ್ಪಚ್ಚು ರಂಜನ್

    ಮಡಿಕೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಅಲ್ಲದೇ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಪಾಸಿಟಿವ್ ಬಂದ ರೋಗಿಗಳು ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಮಡಿಕೇರಿ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ ಇಂದು ಸೋಮವಾರಪೇಟೆ ಮತ್ತು ಮಡಿಕೇರಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಕೊರೊನ ಸೋಂಕಿತರರನ್ನು ಉಪಚರಿಸಿ ಆಸ್ಪತ್ರೆಯಲ್ಲಿ ಅಗುತ್ತಿರುವ ಸಮಸ್ಯೆಗಳನ್ನು ಪರಿಶೀಲನೆ ಮಾಡಿದರು.

    ಆಸ್ಪತ್ರೆಯಲ್ಲಿ ಇರುವ ಕೋವಿಡ್ ವಾರ್ ಅಲ್ಲದೆ ಇತರೆ ವಾರ್ಡ್ ಗಳನ್ನು ಪರಿಶೀಲಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅಪ್ಪಚ್ಚು ರಂಜನ್, ಕೊರೊನ ಸೋಂಕಿತರು ಆಸ್ಪತ್ರೆಯಲ್ಲಿ ದೊರಕುತ್ತಿರುವ ಚಿಕಿತ್ಸೆ ಮತ್ತು ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಅರೋಗ್ಯ ಇಲಾಖೆಯ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ರೀತಿಯಲ್ಲಿ ಚಿಕಿತ್ಸೆಗಳನ್ನು ನೀಡುತ್ತಿದ್ದು ಜನರು ಇಲ್ಲಿಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

    ಸದ್ಯಕ್ಕೆ 250 ಹಾಸಿಗೆಗಳು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿದೆ. ಬೇರೆ ಕಡೆ ಹೋಲಿಸಿದರೆ ಕೊಡಗಿನ ಕೋವಿಡ್ ಆಸ್ಪತ್ರೆಯಲ್ಲಿ ಉತ್ತಮವಾದ ಚಿಕಿತ್ಸೆ ದೊರಕುತ್ತಿದೆ. ಕೆಲವೊಂದು ಸಣ್ಣಪುಟ್ಟ ಲೋಪಗಳನ್ನೇ ದೊಡ್ಡದು ಮಾಡಿ ಹೇಳುವುದು ಸರಿಯಲ್ಲ. ಅಪಪ್ರಚಾರಗಳಿಗೆ ಕಿವಿಕೊಡದೆ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಆಸ್ಪತ್ರೆಗೆ ಬನ್ನಿ. ದಯವಿಟ್ಟು ಕೊಡಗಿನ ಜನತೆ ಮಾಸ್ಕ್ ಧರಿಸಿಕೊಳ್ಳಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ. ಕೊರೊನ ನಿರ್ಮೂಲನೆ ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಡಾ.ಲೋಕೇಶ್, ಡಾ.ರೂಪೇಶ್, ಗೋಪಾಲ್, ಮತ್ತು ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಪಿಪಿಇ ಕಿಟ್ ಧರಿಸಿ 13 ಕೋಟಿ ಮೌಲ್ಯದ ಚಿನ್ನಾಭರಣ ಕದ್ದು ಸಿಕ್ಕಿಬಿದ್ದ ಖದೀಮ!

    ಪಿಪಿಇ ಕಿಟ್ ಧರಿಸಿ 13 ಕೋಟಿ ಮೌಲ್ಯದ ಚಿನ್ನಾಭರಣ ಕದ್ದು ಸಿಕ್ಕಿಬಿದ್ದ ಖದೀಮ!

    ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭ ಬಳಸುತ್ತಿದ್ದ ಪಿಪಿಇ ಕಿಟ್ ಅನ್ನು ಕಳ್ಳತನಕ್ಕೆ ಬಳಸಿಕೊಂಡ ಖದೀಮನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಪಶ್ಚಿಮ ಬಂಗಾಳ ಮೂಲದ ಶೇಖ್ ನೂರ್ ರೇಹಮಾನ್ (25) ಎಂದು ಗುರುತಿಸಲಾಗಿದೆ. ಈತ ಪಿಪಿಇ ಕಿಟ್ ಧರಿಸಿ ಆಭರಣ ಅಂಗಡಿಯೊಂದರ ಒಳಗೆ ನುಗ್ಗಿ 20 ಕೋಟಿ ರೂಪಾಯಿ ಬೆಲೆಬಾಳುವ ಚಿನ್ನ ಹಾಗೂ ನಗದನ್ನು ಕದ್ದಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಬೆನ್ನತ್ತಿದ ಪೊಲೀಸರು ರೇಹಮಾನ್‍ನ್ನು ಘಟನೆ ನಡೆದು ಒಂದು ದಿನದ ಒಳಗಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಪೊಲೀಸರು ತನಿಖೆ ನಡೆಸಿದ ವೇಳೆ ರೇಹಮಾನ್ 3ನೇ ಮಹಡಿಲ್ಲಿದ್ದ ಸ್ಟೋರ್ ರೂಮ್‍ನ ಬೀಗ ಒಡೆದು ಅದರ ಮೂಲಕ ಅಂಗಡಿ ಪ್ರವೇಶಿಸಿರುವುದು ತಿಳಿದು ಬಂದಿದೆ. ಈ ಕಳ್ಳತನದ ಹಿಂದೆ ಇದೇ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಲೆಕ್ಟ್ರಿಷನ್ ಒಬ್ಬರ ಕೈವಾಡ ಇರುವುದು ಬೆಳಕಿಗೆ ಬಂದಿದೆ. ನಂತರ ಕದ್ದ ಚಿನ್ನಾಭರಣಗಳೆಲ್ಲಾ ಕರೋಲ್ ಬಾಗ್‍ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶೇಖ್ ನೂರ್ ರೆಹಮಾನ್ ಹಲವು ಸಾಮಾಜಿಕ ಜಾಲತಾಣಗದಲ್ಲಿ ಖಾತೆಯನ್ನು ಹೊಂದಿದ್ದಾನೆ. ಈತ ಈ ಹಿಂದೆ ಪದವಿ ವ್ಯಾಸಂಗವನ್ನು ಅರ್ಧದಲ್ಲಿ ನಿಲ್ಲಿಸಿ ಆಭರಣ ಅಂಗಡಿಯೊಂದರಲ್ಲಿ 2 ವರ್ಷ ಕೆಲಸ ಮಾಡುತ್ತಿದ್ದ. ಹಾಗೆ ಕಳ್ಳತನಕ್ಕೆ ಬಳಸುವ ಆಯುಧಗಳಾದ ಪ್ರೆಶರ್ ಕಟ್ಟರ್, ಗ್ಯಾಸ್ ಕಟ್ಟರ್, ಅಲೆನ್ ಕೀ ಮತ್ತು ಸ್ಕ್ರೂಡ್ರೈವರ್ ಬಳಕೆಯ ಬಗ್ಗೆ ಉತ್ತಮ ತಿಳುವಳಿಕೆ ಹೊಂದಿದ್ದ ಮತ್ತು ಕಳ್ಳತನದ ಮುಂಚೆ ಸರಿಯಾದ ಸ್ಕೆಚ್ ಹಾಕಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಈತ ವಾಸವಿದ್ದ ಕೊಠಡಿಗೆ ತೆರಳಿ ಪೊಲೀಸರು ನೋಡಿದಾಗ ಕಳ್ಳತನಕ್ಕೆ ಬಳಸಿದ್ದ ಪ್ರೆಶರ್ ಕಟ್ಟರ್, ಗ್ಯಾಸ್ ಕಟ್ಟರ್, ಅಲೆನ್ ಕೀ ಮತ್ತು ಸ್ಕ್ರೊಡೈವರ್ ಮತ್ತು 20 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.

  • ಸಮಯಕ್ಕೆ ಸರಿಯಾಗಿ ಊಟವಿಲ್ಲ, ಉಸಿರುಗಟ್ಟಿಸುತ್ತೆ ಪಿಪಿಇ ಕಿಟ್- ಇದು ವಾರಿಯರ್ಸ್ ದುಃಸ್ಥಿತಿ

    ಸಮಯಕ್ಕೆ ಸರಿಯಾಗಿ ಊಟವಿಲ್ಲ, ಉಸಿರುಗಟ್ಟಿಸುತ್ತೆ ಪಿಪಿಇ ಕಿಟ್- ಇದು ವಾರಿಯರ್ಸ್ ದುಃಸ್ಥಿತಿ

    ಬೆಂಗಳೂರು: ಕೊರೊನಾ ವಾರಿಯರ್ಸ್ ತಮ್ಮ ಜೀವನದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲೂ ಮೊಬೈಲ್ ಯುನಿಟ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ವಾರಿಯರ್ಸ್ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿರುತ್ತದೆ. ಈ ವಿಚಾರ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ವೇಳೆ ಬಯಲಾಗಿದೆ.

    ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ವಾರಿಯರ್ಸ್ ಗೆ ಸಮಯಕ್ಕೆ ಸರಿಯಾಗಿ ಊಟ ಇಲ್ಲ. ಅಲ್ಲದೆ ಪಿಪಿಐ ಕಿಟ್ ಉಸಿರುಗಟ್ಟಿಸುತ್ತೆ. ದಿನಕ್ಕೆ 6 ರಿಂದ 8 ಗಂಟೆ ಪಿಪಿಇ ಕಿಟ್ ಧರಿಸಿಯೇ ಇರುವಂತಹ ಸ್ಥಿತಿ, ಮೊಬೈಲ್ ಟೆಸ್ಟಿಂಗ್ ಯುನಿಟ್‍ನಲ್ಲಿರೋ ವಾರಿಯರ್ಸ್ ಗೆ ಎದುರಾಗಿದೆ. ಗುಣಮಟ್ಟದ ಪಿಪಿಇ ಕಿಟ್ ಸಿಗದೇ ಕೊರೊನಾ ವಾರಿಯರ್ಸ್ ಗೆ ಆತಂಕ ಉಂಟಾಗಿದೆ.

    ಸ್ಥಳ: ಕೆ.ಆರ್ ಮಾರುಕಟ್ಟೆ
    ಪ್ರತಿನಿಧಿ – ಪಿಪಿಇ ಕಿಟ್ ಹೆಂಗಿದೆ ಮೇಡಂ
    ವಾರಿಯರ್ – 4-6 ಗಂಟೆ ಹಾಕಿಕೊಂಡು ಇರುವುದು ಕಷ್ಟವಾಗುತ್ತದೆ. ಮತ್ತೆ ಡ್ಯೂಟಿ ಮಾಡೊದು 8 ಗಂಟೆ ಆಗುತ್ತದೆ.
    ಪ್ರತಿನಿಧಿ – ರೆಸ್ಟ್ ರೂಂ ಯೂಸ್ ಮಾಡಬೇಕಾದಾಗ?
    ವಾರಿಯರ್ – ರೆಸ್ಟ್ ರೂಂ ತುಂಬಾನೆ ಕಷ್ಟ ಆಗುತ್ತದೆ. ಸಾರ್ವಜನಿಕ ಶೌಚಾಲಯ ಯೂಸ್ ಮಾಡ್ತಾ ಇರೊದು.. ಸ್ಟಾಫ್ ಗೆ ಅಂತ ಕೊಟ್ಟಿದ್ದರೆ ಚೆನ್ನಾಗಿ ಇರುತ್ತಿತ್ತು.
    ಪ್ರತಿನಿಧಿ – ಪಿಪಿಇ ಕಿಟ್ ಸೇಫಾ ಅಲ್ಲ? ಒಳ್ಳೆಯ ಕ್ವಾಲಿಟಿ ಪಿಪಿಇ ಕಿಟ್ ಬೇಕು ಅಂತ?
    ವಾರಿಯರ್ – ಕೊಡಬಹುದಾಗಿತ್ತು…ಎರಡ್ ಎರಡ್ ಬಾರಿ ಇದನ್ನೇ ಹಾಕಿ…
    ಪ್ರತಿನಿಧಿ – ಎಲ್ಲರ ಕಷ್ಟ ನೋಡ್ತೀರಾ?
    ವಾರಿಯರ್ – ಹೌದು.. ನಮ್ ಕಷ್ಟನೂ ನೋಡಬೇಕಿತ್ತಲ್ವ ?
    ಪ್ರತಿನಿಧಿ – ನೀರ್ ಬಿದ್ರೆ ಒಳಗೆ ಹೋಗುತ್ತಾ?
    ವಾರಿಯರ್ – ಸದ್ಯ ಇದ್ ಕಾಟನ್.. ಏನ್ ಆಗುತ್ತೆ ನೋಡಬೇಕು.. ಸ್ವಲ್ಪ ಭಯ ಆಗುತ್ತದೆ.. ಅದು ವಾಟರ್ ಪ್ರೂಪ್…

    ಸ್ಥಳ: ಶ್ರೀನಗರ ಬಸ್ ನಿಲ್ದಾಣ
    ಪ್ರತಿನಿಧಿ – ಕಿಟ್ ಕಂಫರ್ಟ್ ಇದೆಯಾ..?
    ವಾರಿಯರ್ – 5 ಗಂಟೆ ಹಾಕಿಕೊಳ್ಳಬೇಕು.
    ಪ್ರತಿನಿಧಿ – ಬೇವರು ಬರೊದು, ಬೇರೆ ಏನಾದ್ರೂ ತೊಂದರೆ ಇದೆಯಾ..?
    ವಾರಿಯರ್ – ಇದು ಕಾಟನ್ ಪರವಾಗಿಲ್ಲ, ಇನ್ನೊಂದು ಇದೆ ಅದು ಸ್ಟೆಟ್ ಆಗುತ್ತದೆ..
    ಪ್ರತಿನಿಧಿ – ಹೇಗಿದೆ..?
    ವಾರಿಯರ್ – ಪಿಪಿಇ ಕಿಟ್ ನಲ್ಲಿ ಎರಡ್ ಬಗೆ ಇದೆ..
    ಪ್ರತಿನಿಧಿ – ಇದು ಪರವಾಗಿಲ್ಲ, ಇನ್ನೊಂದ್ ಉಸಿರಾಡಲು ಆಗಲ್ಲ .. ಕಷ್ಟ ಆಗುತ್ತದೆ..
    ವಾರಿಯರ್ – ತುಂಬಾ ಭಾರ ಎನ್ನಿಸುತ್ತದೆ.. ಹೆವಿ ಅನ್ನಿಸುತ್ತದೆ.. ಕಷ್ಟ ಇದು..

    ಇದು ಕೊರೊನಾ ವಿರುದ್ಧ ಹೋರಾಟ ಮಾಡುವವರ ಕಷ್ಟವಾಗಿದೆ. ಮೊಬೈಲ್ ಕೋವಿಡ್ ಟೆಸ್ಟ್ ಸೆಂಟರಿನಲ್ಲಿರುವ ಕೊರೊನಾ ವಾರಿಯರ್ಸ್ ಗೆ ಬಿಬಿಎಂಪಿ ರಕ್ಷಣೆ ಕೊಡಲ್ಲ. ಜನಜಂಗುಳಿಯಲ್ಲಿ ನಿಂತು ಕೋವಿಡ್ ಟೆಸ್ಟ್ ಮಾಡಿಸುತ್ತಾರೆ. ಈ ಮೂಲಕ ಇದೇನಾ ಕೊರೊನಾ ವಿರುದ್ಧ ಹೋರಾಟ ಎಂಬ ಪ್ರಶ್ನೆ ಹುಟ್ಟಿದೆ. ಬಿಬಿಎಂಪಿ ಇನ್ನಷ್ಟು ಒಳ್ಳೆಯ ಕ್ವಾಲಿಟಿ ಕಿಟ್ ಕೊಡಬಹುದಿತ್ತು. ಒಟ್ಟಿನಲ್ಲಿ ಶೌಚಾಲಯ ಸಮಸ್ಯೆ, ಪಿಪಿಇ ಕಿಟ್ ಕ್ವಾಲಿಟಿ ಚಾಲೆಂಜ್ ಆಗಿದೆ.

  • ರಸ್ತೆಯ ಪಕ್ಕದಲ್ಲಿ ನೂರಾರು ಲೀಟರ್ ಹಾಲಿನ ಪ್ಯಾಕೆಟ್‍ಗಳು ಪತ್ತೆ

    ರಸ್ತೆಯ ಪಕ್ಕದಲ್ಲಿ ನೂರಾರು ಲೀಟರ್ ಹಾಲಿನ ಪ್ಯಾಕೆಟ್‍ಗಳು ಪತ್ತೆ

    ಬೆಂಗಳೂರು: ಆನೇಕಲ್ ತಾಲೂಕಿನ ಹುಸ್ಕೂರು ರಸ್ತೆಯ ಪಕ್ಕದಲ್ಲಿ ನೂರಾರು ಲೀಟರ್ ಹಾಲಿನ ಪ್ಯಾಕೆಟ್‍ಗಳು ಪತ್ತೆಯಾಗಿದೆ.

    ಹಾಲಿನ ಪ್ಯಾಕೆಟ್ ಜೊತೆಗೆ ಮೂಟೆಯಲ್ಲಿ ಪಿಪಿಇ ಕಿಟ್‍ಗಳು ಕೂಡ ಪತ್ತೆಯಾಗಿವೆ. ಆನೇಕಲ್ ತಾಲೂಕಿನ ಹುಸ್ಕೂರು ಆರ್‌ಟಿಒ ಕಚೇರಿ ಮುಂದೆ ಹಾಲಿನ ಪಾಕೆಟ್‍ಗಳು ಪತ್ತೆಯಾಗಿವೆ. ನಂದಿನಿ, ಅಕ್ಷಯಕಲ್ಪ ಕಂಪನಿಯ ಹಾಲಿನ ಪ್ಯಾಕೆಟ್‍ಗಳು ಬಿದ್ದಿವೆ. ರಸ್ತೆಯ ಪಕ್ಕದಲ್ಲಿ ಬಿದ್ದಿರುವುದರಿಂದ ವಾಸನೆ ಬರುತ್ತಿದ್ದು, ಸಾರ್ವಜನಿಕರಿಗೆ ಓಡಾಡಲು ಪರದಾಡುತ್ತಿದ್ದಾರೆ.

    ಹಾಲಿನ ಪ್ಯಾಕೆಟ್‍ಗಳ ಮೇಲೆ 9ನೇ ಡೇಟ್ ಇದೆ. ಆದರೆ ಇಷ್ಟೊಂದು ಹಾಲಿನ ಪ್ಯಾಕೆಟ್‍ಗಳು ಎಲ್ಲಿಂದ ಬಂದವು ಎನ್ನುವುದೇ ಪ್ರಶ್ನೆಯಾಗಿದೆ. ಅಲ್ಲದೇ ಎರಡು ದಿನದಿಂದ ರಸ್ತೆಯ ಪಕ್ಕದಲ್ಲೇ ಹಾಲಿನ ಪ್ಯಾಕೆಟ್‍ಗಳು ಬಿದ್ದಿವೆ. ಆದರೂ ಬಿಬಿಎಂಪಿ ಸಿಬ್ಬಂದಿ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

    ಪಿಪಿಇ ಕಿಟ್ ಜೊತೆಗೆ ಹಾಲಿನ ಪ್ಯಾಕೆಟ್‍ಗಳು ಎಲ್ಲಿಂದ ಬಂದವು. ನೂರಾರು ಲೀಟರ್ ಹಾಲನ್ನು ಈ ರೀತಿ ಬಿಡಸಾಡಲು ಕಾರಣ ಏನು ಎಂಬುದು ತಿಳಿದುಬಂದಿದೆ.

  • ಪಿಪಿಇ ಕಿಟ್ ಧರಿಸಿ ಯುಎಇಗೆ ಪ್ರಯಾಣಿಸಿದ ರಾಜಸ್ಥಾನ ರಾಯಲ್ಸ್ ಕ್ರಿಕೆಟಿಗರು

    ಪಿಪಿಇ ಕಿಟ್ ಧರಿಸಿ ಯುಎಇಗೆ ಪ್ರಯಾಣಿಸಿದ ರಾಜಸ್ಥಾನ ರಾಯಲ್ಸ್ ಕ್ರಿಕೆಟಿಗರು

    ದುಬೈ: ಐಪಿಎಲ್ 2020ರ ಆವೃತ್ತಿಗಾಗಿ ಯುಎಇಗೆ ಗುರುವಾರದಿಂದ ತಂಡಗಳು ಯುಎಇಗೆ ಪ್ರಯಾಣ ಬೆಳೆಸಿವೆ. ಸೆ.19 ರಿಂದ ನ.10 ರವರೆಗೂ ಈ ಬಾರಿಯ ಟೂರ್ನಿ ನಡೆಯಲಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ದುಬೈಗೆ ತೆರಳಿವೆ.

    ಮಾಸ್ಕ್ ಹಾಗೂ ಸಾಮಾಜಿಕ ಅಂತರ ನಿಯಮಗಳನ್ನು ಪಾಲಿಸಿ ಪಂಜಾಬ್ ತಂಡದ ಆಟಗಾರರು ತೆರಳಿದರೆ, ರಾಜಸ್ಥಾನ ತಂಡದ ಆಟಗಾರರು ಪಿಪಿಇ ಕಿಟ್ ಧರಿಸಿ ಪ್ರಯಾಣಿಸುವ ಮೂಲಕ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿದ್ದರು. ರಾಜಸ್ಥಾನ ತಂಡದ ಜಯದೇವ್ ಉನದ್ಕತ್, ರಾಬಿನ್ ಉತ್ತಪ್ಪ ಪಿಪಿಇ ಕಿಟ್ ಧರಿಸಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಐಪಿಎಲ್ 2020ರ ಆವೃತ್ತಿ 53 ದಿನಗಳು ನಡೆಯಲಿದ್ದು, 60 ಪಂದ್ಯಗಳ ಶೆಡ್ಯೂಲ್ ನಿಗದಿಯಾಗಿದೆ. ಇದರಲ್ಲಿ 10 ಡಬಲ್ ಹೇಡರ್ ಪಂದ್ಯಗಳಿವೆ. ಯುಎಇಗೆ ಆಟಗಾರರನ್ನು ಕಳುಹಿಸುವ ಮುನ್ನ ಎರಡನೇ ಬಾರಿ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಅಲ್ಲದೇ ತೆರಳಿದ ಬಳಿಕ ಮೊದಲ ದಿನ ಹಾಗೂ 14 ದಿನಗಳ ಬಳಿಕ 2 ಬಾರಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ಪ್ರತಿ ಆಟಗಾರನಿಗೆ 5 ಬಾರಿ ಕೊರೊನಾ ಟೆಸ್ಟ್ ನಡೆಸಲಾಗುತ್ತದೆ. ಎಲ್ಲಾ ಟೆಸ್ಟ್ ನಲ್ಲಿ ನೆಗೆಟಿವ್ ವರದಿ ಬಂದ ಆಟಗಾರರೊಂದಿಗೆ ಮಾತ್ರ ಬಯೋ-ಸೆಕ್ಯೂಲರ್ ವಾತಾವರಣದಲ್ಲಿ ಟೂರ್ನಿ ನಡೆಸಲಾಗುತ್ತದೆ.

  • ಪಿಪಿಇ ಕಿಟ್ ಧರಿಸಿ ಬೈಕಿನಲ್ಲಿ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ದ ಟಿಎಂಸಿ ನಾಯಕ!

    ಪಿಪಿಇ ಕಿಟ್ ಧರಿಸಿ ಬೈಕಿನಲ್ಲಿ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ದ ಟಿಎಂಸಿ ನಾಯಕ!

    – ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಪಿಪಿಇ ಕಿಟ್ ಧರಿಸಿ ಬೈಕಿನಲ್ಲಿ ಕೊರೊನಾ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ದ ಘಟನೆ ಪಶ್ಚಿಮ ಬಂಗಾಳದ ಜಾಗ್ರ್ರಾಮ್ ಜಿಲ್ಲೆಯಲ್ಲಿ ನಡೆದಿದೆ.

    ಗೋಪಿಬಲ್ಲವ್ ಪುರದ ಪಕ್ಷದ ಯುವ ವಿಭಾಗದ ಅಧ್ಯಕ್ಷ ಸತ್ಯಕಂ ಪಟ್ನಾಯಕ್ ಅವರಿಗೆ ತಮ್ಮ ಪಕ್ಷದ ಕಾರ್ಯಕರ್ತರಿಂದಾಗಿ ವ್ಯಕ್ತಿಯೊಬ್ಬ ಅಂಬುಲೆನ್ಸ್ ವ್ಯವಸ್ಥೆ ಸಿಗದೆ ಪರದಾಡುತ್ತಿದ್ದಾರೆ ಎಂಬ ವಿಚಾರ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಗ್ರಾಮಕ್ಕೆ ತೆರಳಿದಾಗ ವಲಸೆ ಕಾರ್ಮಿಕ ಐದಾರು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿರುವುದನ್ನು ಕಂಡರು.

    ಇತ್ತ ಕಾರ್ಮಿಕನ ಕುಟುಂಬಸ್ಥರಿಗೆ ಅಂಬುಲೆನ್ಸ್ ಅಥವಾ ವಾಹನ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ಅಲ್ಲದೆ ಈ ಕುಟುಂಬಕ್ಕೆ ಸಹಾಯ ಮಾಡಲು ಕೂಡ ಯಾರೂ ಮುಂದೆ ಬರುತ್ತಿರಲಿಲ್ಲ. ಕಾರ್ಮಿಕನಿಗೆ ಕೊರೊನಾ ವೈರಸ್ ತಗಲಿರಬಹುದೆಂಬ ಶಂಕೆಯಿಂದ ಯಾರೂ ಸಹಾಯಕ್ಕೆ ಬಂದಿರಲಿಲ್ಲ.

    ಈ ಬಗ್ಗೆ ತಿಳಿದುಕೊಂಡು, ಒಬ್ಬ ವ್ಯಕ್ತಿಯನ್ನು ಇಂತಹ ಪರಿಸ್ಥಿಯಲ್ಲಿ ಹೀಗೆ ಬಿಡುವುದು ಸರಿಯಲ್ಲ ಎಂದು ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ಬೈಕ್ ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಂಡೆ. ಅಲ್ಲದೆ ಮೆಡಿಕಲ್ ಶಾಪ್ ಗೆ ತೆರಳಿ ಪಿಪಿಇ ಕಿಟ್ ಖರೀದಿಸಿದೆ. ಬಳಿಕ ವ್ಯಕ್ತಿಯ ಮನೆಗೆ ತೆರಳಿ ಆತನನ್ನು ಆಸ್ಪತ್ರೆಗೆ ಕರೆದೊಯ್ದೆ ಎಂದು ಪಟ್ನಾಯಕ್ ತಿಳಿಸಿದರು.

     

    ಕಾರ್ಮಿಕನ ಪತ್ನಿ ಹಾಗೂ ಮಕ್ಕಳು ಸ್ಥಿತಿಯ ಬಗ್ಗೆ ಕಣ್ಣೀರು ಹಾಕಿದರು. ಅಲ್ಲದೆ ಪತ್ನಿ ಕಾರ್ಮಿಕನ ಜೊತೆ ಆಸ್ಪತ್ರೆಗೆ ಹೋಗಬೇಕು ಎಂದು ಮನವಿ ಮಾಡಿಕೊಂಡರು. ಆದರೆ ನಾನು ಅವರ ಮನವೊಲಿಸಿ ಕಾರ್ಮಿಕನನ್ನು ಬೈಕಿನಲ್ಲಿ ಕೂರಿಸಿಕೊಂಡು ಗೋಪಿಬಲ್ಲವಪುರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿರುವುದಾಗಿ ಹೇಳಿದರು.

    ಆಸ್ಪತ್ರೆಯಲ್ಲಿ ವೈದ್ಯರು ಕಾರ್ಮಿಕನನ್ನು ಪರೀಕ್ಷಿಸಿ, ಕೆಲವೊಂದು ಔಷಧಿಗಳನ್ನು ನಿಡಿ ಮನೆಯಲ್ಲಿರುವಂತೆ ಸೂಚಿಸಿದರು. ನಂತರ ಪುನಃ ಕಾರ್ಮಿಕನನ್ನು ಅವರ ಮನೆಗೆ ಬಿಟ್ಟು ಬಂದೆ ಎಂದರು. ಸದ್ಯ ಪಟ್ನಾಯಕ್ ಅವರು ಪಿಪಿಇ ಕಿಟ್ ಧರಿಸಿ ಬೈಕಿನಲ್ಲಿ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಯಕನ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಬೇಕಾಬಿಟ್ಟಿ ಪಿಪಿಇ ಕಿಟ್ ಎಸೆದ ಕೊರೊನಾ ಸೋಂಕಿತನ ವಿರುದ್ಧ ಬಿತ್ತು ಕೇಸ್

    ಬೇಕಾಬಿಟ್ಟಿ ಪಿಪಿಇ ಕಿಟ್ ಎಸೆದ ಕೊರೊನಾ ಸೋಂಕಿತನ ವಿರುದ್ಧ ಬಿತ್ತು ಕೇಸ್

    – ಗುಣಮುಖವಾಗುತ್ತಿದ್ದಂತೆ ಸೋಂಕಿತನ ಬಂಧನ

    ನವದೆಹಲಿ: ಬೇಕಾಬಿಟ್ಟಿಯಾಗಿ ಪಿಪಿಇ ಕಿಟ್ ಎಸೆದಿದ್ದ ಕೊರೊನಾ ಸೋಂಕಿತನ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಪಾಠ ಕಲಿಸಲಾಗಿದೆ.

    ದಕ್ಷಿಣ ದೆಹಲಿಯ ಸಿ.ಆರ್.ಪಾರ್ಕ್ ಬಳಿ ಘಟನೆ ನಡೆದಿದ್ದು, ಸೋಂಕಿತನ ವಿರುದ್ಧ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೊರೊನಾ ಸೋಂಕಿತ ಗುಣಮುಖವಾದ ತಕ್ಷಣ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಿವುಡ್ ಸಂಗೀತ ಸಂಯೋಜಕ ಶಾಂತನು ಮೊಯಿತ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವಿಡಿಯೋ ಆಧರಿಸಿ ಪೊಲೀಸರು ಎಚ್ಚೆತ್ತುಕೊಂಡು ಪ್ರಕರಣ ದಾಖಲಿಸಿದ್ದಾರೆ.

    ಸೋಂಕಿತನ ಮನೆಯ ಸುತ್ತ ಹಲವು ವೃದ್ಧರಿದ್ದಾರೆ. ಕೊರೊನಾ ಸೋಂಕಿತರು ಈ ರೀತಿ ಪಿಪಿಇ ಕಿಟ್ ರಸ್ತೆಗೆ ಎಸೆದರೆ ಏನು ಗತಿ ಎಂದು ಜಾಲತಾಣಗಳಲ್ಲಿ ಪ್ರಶ್ನಿಸಲಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

    ಕಲ್ಕಾಜಿ ಎಎಪಿ ಶಾಸಕ ಅತಿಶಿ ಮರ್ಲೆನಾ ಅವರಿಗೆ ಟ್ಯಾಗ್ ಮಾಡಿ ಮೊಯಿತ್ರಾ ಟ್ವೀಟ್ ಮಾಡಿದ್ದರು. ಈ ಗಲ್ಲಿಯಲ್ಲಿ ಯಾರೋ ಪಿಪಿಇ ಕಿಟ್ ಎಸೆದಿದ್ದಾರೆ. ಇದು ಬಹುಶಃ ಕೊರೊನಾ ಸೋಂಕಿತರ ಪಿಪಿಇ ಕಿಟ್ ಇರಬಹುದು. ಇದು ತುಂಬಾ ಅಪಾಯಕಾರಿ. ಈ ಭಾಗದಲ್ಲಿ ತುಂಬಾ ಜನ ಹಿರಿಯ ನಾಗರಿಕರಿದ್ದಾರೆ. ಅಧಿಕಾರಿಗಳು ತುರ್ತಾಗಿ ಇದನ್ನು ಗಮನಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ಈ ಕುರಿತು ತನಿಖೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಸೋಂಕಿತ ಗುಣಮುಖವಾಗುತ್ತಿದ್ದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • ಹರಿದ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸಬೇಕಿದೆ ಕಿಮ್ಸ್ ಸಿಬ್ಬಂದಿ

    ಹರಿದ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸಬೇಕಿದೆ ಕಿಮ್ಸ್ ಸಿಬ್ಬಂದಿ

    ಧಾರವಾಡ/ಹುಬ್ಬಳ್ಳಿ: ಕೋವಿಡ್ ವಿರುದ್ಧದ ಹೋರಾಟದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್ ಜೀವಕ್ಕೆ ದಕ್ಕೆಯನ್ನುಂಟು ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ದೋಷಪೂರಿತ ಸುರಕ್ಷತಾ ಕಿಟ್ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

    ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಗುಣಮಟ್ಟದ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ ಕಿಟ್), ಎನ್ 95 ಮಾಸ್ಕ್ ಧರಿಸಬೇಕಾಗುತ್ತದೆ. ಆದರೆ ಕಿಮ್ಸ್ ನ ಕೆಲ ಸಿಬ್ಬಂದಿಗೆ ನೀಡಲಾದ ಪಿಪಿಇ ಕಿಟ್‍ಗಳು ಹರಿದು ಹೋಗಿದ್ದು, ಯಾವ ಧೈರ್ಯದ ಮೇಲೆ ವೈದ್ಯಕೀಯ ಸಿಬ್ಬಂದಿ ಸೇವೆಗೆ ಮುಂದಾಗಿದ್ದಾರೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ.

    ಕೋವಿಡ್ ವಾರ್ಡ್‍ನ ಐಸಿಯು ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮಾತ್ರ ಗುಣಮಟ್ಟದ ಕಿಟ್‍ಗಳನ್ನು ನೀಡಲಾಗಿದೆ. ಸೋಂಕಿತರ ಸಾಮಾನ್ಯ ವಾರ್ಡ್ ಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ಶುಶ್ರೂಷಕರಿಗೆ ಎರಡು, ಮೂರನೇ ದರ್ಜೆಯ ಸುರಕ್ಷತಾ ಕಿಟ್‍ಗಳನ್ನು ನೀಡಲಾಗಿದೆ. ಹರಿದ ಪಿಪಿಇ ಕಿಟ್‍ಗಳು, ಮಧ್ಯದಲ್ಲಿ ಕಿಂಡಿ ಬಿದ್ದಿರುವ ಮಾಸ್ಕ್ ಗಳ ಚಿತ್ರಗಳನ್ನು ಕಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳ ಸಂಘದ ಸದಸ್ಯರೇ ಬಹಿರಂಗಪಡಿಸಿದ್ದಾರೆ.

  • ಕುಡಿದ ಮತ್ತಿನಲ್ಲಿ ಆಸ್ಪತ್ರೆಯಿಂದ ಪಿಪಿಇ ಕಿಟ್ ಕದ್ದವನಿಗೆ ಕೊರೊನಾ ಪಾಸಿಟಿವ್!

    ಕುಡಿದ ಮತ್ತಿನಲ್ಲಿ ಆಸ್ಪತ್ರೆಯಿಂದ ಪಿಪಿಇ ಕಿಟ್ ಕದ್ದವನಿಗೆ ಕೊರೊನಾ ಪಾಸಿಟಿವ್!

    – ರೈನ್ ಕೋಟ್ ಅಂತ ಕದ್ದು ಪೇಚಿಗೆ ಸಿಲುಕಿದ

    ಮುಂಬೈ: ಮಹಾಮಾರಿ ಕೊರೊನಾ ವೈರಸ್ ಭಾರತಕಕೆ ಕಾಲಿಟ್ಟ ಬಳಿಕ ಅನೇಕ ಅನಾಹುತಗಳು ನಡೆದು ಹೋಗಿವೆ. ಮದ್ಯ ಸಿಗದೆ ಕೆಲವರು ಸ್ಯಾನಿಟೈಸರ್ ಕುಡಿದು ಮೃತಪಟ್ಟಿದ್ದಾರೆ. ಆದರೆ ಇಲ್ಲೊಬ್ಬ ಕುಡಿದ ಮತ್ತಿನಲ್ಲಿ ರೈನ್ ಕೋಟ್ ಅಂತ ತಿಳಿದು ಪಿಪಿಇ ಕಿಟ್ ಕದ್ದು ಪೇಚಿಗೆ ಸಿಲುಕಿದ್ದಾನೆ.

    ಈ ವಿಲಕ್ಷಣ ಘಟನೆ ಮಹಾರಾಷ್ಟ್ರದ ನಾಗ್ಪುರ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಕಂಠಪೂರ್ತಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ರೈನ್ ಕೋಟ್ ಎಂದು ಪಿಪಿಇ ಕಿಟ್ ಕದ್ದಿದ್ದು, ಈಗ ಆತನಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.

    ವ್ಯಕ್ತಿ ತರಕಾರಿ ಮಾರುತ್ತಾ ಜೀವನ ಸಾಗಿಸುತ್ತಿದ್ದನು. ಆದರೆ ಕಳೆದ ವಾರ ಮದ್ಯಪಾನ ಮಾಡಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಚರಂಡಿಗೆ ಬಿದ್ದು ಗಾಯಗೊಂಡಿದ್ದನು. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆಂದು ನಾಗ್ಪುರದ ಮಯೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಹೀಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮನೆಗೆ ಬಂದಾಗ ಈತನ ಬಳಿ ಪಿಪಿಯ ಕಿಟ್ ಇರುವುದು ಬೆಳಕಿಗೆ ಬಂದಿದೆ. ಅಲ್ಲದೆ ಈತ ತನ್ನ ಗೆಳೆಯರ ಬಳಿ, 1 ಸಾವಿರ ಕೊಟ್ಟು ರೈನ್ ಕೋಟ್ ತೆಗೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆದರೆ ಗೆಳೆಯರಿಗೆ ಮಾತ್ರ ಅದು ರೈನ್ ಕೋಟ್ ಅಲ್ಲ, ಪಿಪಿಇ ಕಿಟ್ ಎಂದು ಗೊತ್ತಾಗಿದೆ. ಕೂಡಲೇ ಅವರು ನಗರದ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ವ್ಯಕ್ತಿಯಿಂದ ಪಿಪಿಇ ಕಿಟ್ ವಶಕ್ಕೆ ಪಡೆದು ಅಲ್ಲೇ ಸುಟ್ಟು ಹಾಕಿದ್ದಾರೆ.

    ಬಳಿಕ ವ್ಯಕ್ತಿಯನ್ನು ಪ್ರಶ್ನಿಸಿದಾಗ ಆತ ಚಿಕಿತ್ಸೆಯ ಸಂದರ್ಭದಲ್ಲಿ ಆಸ್ಪತ್ರೆಯಿಂದ ಪಿಪಿಇ ಕಿಟ್ ಕದ್ದಿರುವುದಾಗಿ ಬಾಯ್ಬಿಟ್ಟಿದ್ದಾನೆ. ಆ ಬಳಿಕ ಆತನನ್ನು ಕೋವಿಡ್ 19 ಟೆಸ್ಟ್ ಗೆ ಒಳಪಡಿಸಿದ್ದು, ವರದಿ ಪಾಸಿಟಿವ್ ಎಂದು ಬಂದಿದೆ. ಕೂಡಲೇ ಅಧಿಕಾರಿಗಳು, ಆತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಟೆಸ್ಟ್ ಗೆ ಒಳಪಡಿಸಿದ್ದಾರೆ.