Tag: Power StarPuneeth Rajkumar

  • ಯುವರತ್ನನ ಬೈಕ್ ಚೇಸಿಂಗ್ ಸಾಹಸ!

    ಯುವರತ್ನನ ಬೈಕ್ ಚೇಸಿಂಗ್ ಸಾಹಸ!

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ನಿನ ಎರಡನೇ ಚಿತ್ರ ಯುವರತ್ನ. ಈ ಚಿತ್ರವೀಗ ಅಂತಿಮ ಘಟ್ಟದಲ್ಲಿದೆ. ಸಾಮಾನ್ಯವಾಗಿ ಒಂದು ಸೂಪರ್ ಹಿಟ್ ಸಿನಿಮಾ ಕೊಟ್ಟ ನಟ ಮತ್ತು ನಿರ್ದೇಶಕ ಮತ್ತೊಂದು ಚಿತ್ರದಲ್ಲಿ ಒಂದಾದರೆ ಅದರ ಬಗ್ಗೆ ಅಗಾಧ ಪ್ರಮಾಣದಲ್ಲಿಯೇ ನಿರೀಕ್ಷೆಗಳು ಮೂಡಿಕೊಳ್ಳುತ್ತವೆ. ಹಾಗೆಂದ ಮೇಲೆ ರಾಜಕುಮಾರ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ನಿನಲ್ಲಿ ಮೂಡಿ ಬರುತ್ತಿರುವ ಯುವರತ್ನ ಚಿತ್ರದ ಬಗ್ಗೆ ಕಾತರ ಮೂಡದಿರಲು ಸಾಧ್ಯವೇ ಇಲ್ಲ. ಇದೀಗ ಯುವರತ್ನ ಸಿನಿಮಾ ಕಡೆಯಿಂದ ಇಂಟರೆಸ್ಟಿಂಗ್ ಆದೊಂದು ಸಂಗತಿ ಹೊರ ಬಿದ್ದಿದೆ.

    ಯುವರತ್ನ ಚಿತ್ರದ ಬಗ್ಗೆ ಇಂಚಿಂಚು ಮಾಹಿತಿಗಳಿಗಾಗಿ ಪ್ರೇಕ್ಷಕರು ಕಾದು ಕೂತಿದ್ದಾರೆ. ಅಪ್ಪು ಅಭಿಮಾನಿಗಳಲ್ಲಂತೂ ಈ ಕಾತರ ತುಸು ಹೆಚ್ಚೇ ಇದೆ. ಆದರೆ ಇದರ ಕಥೆಯ ಬಗ್ಗೆಯಾಗಲಿ, ಇನ್ನಿತರ ವಿಚಾರಗಳ ಬಗ್ಗೆಯೇ ಆಗಲಿ ಚಿತ್ರತಂಡ ಗೌಪ್ಯತೆ ಕಾಪಾಡಿಕೊಂಡೇ ಸಾಗಿ ಬಂದಿದೆ. ತಾರಾಗಣಕ್ಕೆ ಕಲಾವಿದರನ್ನು ವೆಲ್‍ಕಮ್ ಮಾಡುವ ಮೂಲಕವಷ್ಟೇ ಈ ಸಿನಿಮಾ ಬಗ್ಗೆ ಒಂದಷ್ಟು ಅಂಶಗಳು ಜಾಹೀರಾಗುತ್ತಿದ್ದವು. ಆದರೆ ಆ ಪಾತ್ರಗಳ ಬಗ್ಗೆ ಯಾವುದೇ ಮಾಹಿತಿಯನ್ನೂ ಚಿತ್ರತಂಡ ಬಿಟ್ಟು ಕೊಡುತ್ತಿರಲಿಲ್ಲ. ಆದರೀಗ ಚಿತ್ರತಂಡವೇ ಒಂದು ಮಹತ್ತರ ವಿಚಾರವನ್ನು ಜಾಹೀರು ಮಾಡಿದೆ.

    ಅದರನ್ವಯವಾಗಿ ಹೇಳೋದಾದರೆ, ಯುವರತ್ನ ಚಿತ್ರದಲ್ಲಿ ಮೈನವಿರೇಳಿಸುವಂಥಾ ಬೈಕ್ ಚೇಸಿಂಗ್ ಸೀನುಗಳಿರಲಿವೆಯಂತೆ. ಈ ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿ ನಟಿಸಿದ್ದಾರೆಂಬ ವಿಚಾರ ಈಗಾಗಲೇ ಗೊತ್ತಾಗಿದೆ. ಇಲ್ಲಿ ಶಿಕ್ಷಣ ಮಾಫಿಯಾ ಬಗೆಗಿನ ಕಥೆಯಿದೆ ಎಂಬ ಸಣ್ಣ ಸುಳಿವೂ ಹರಿದಾಡುತ್ತಿದೆ. ಇದೀಗ ಬೈಕ್ ಚೇಸಿಂಗ್ ಸೀನಿದೆ ಎಂಬ ಅಂಶ ಹೊರ ಬಿದ್ದಿರೋದು ಇಲ್ಲಿ ಪಕ್ಕಾ ಆಕ್ಷನ್ ಸೀನುಗಳೂ ಇವೆಯೆಂಬುದರ ಸಂಕೇತ. ಪವರ್ ಸ್ಟಾರ್ ಚಿತ್ರಗಳೆಂದ ಮೇಲೆ ಅದರಲ್ಲಿ ಆಕ್ಷನ್ ದೃಷ್ಯಾವಳಿಗಳು ಇದ್ದೇ ಇರುತ್ತವೆ. ಯುವರತ್ನದಲ್ಲಿ ಆ ಅಂಶಗಳು ಹೆಚ್ಚೇ ಇರಲಿವೆಯಂತೆ. ಅಂದಹಾಗೆ, ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮುಹೂರ್ತ ಕಂಡಿದ್ದ ಯುವರತ್ನ ಚಿತ್ರವೀಗ ಚಿತ್ರೀಕರಣದ ಅಂತಿಮ ಘಟ್ಟದಲ್ಲಿದೆ.

  • ಸಾರ್ವಜನಿಕರಿಗೆ ಅಪ್ಪು ಹಾಡಿದ ಉಪ್ಪಿನ ಸಾಂಗು ಕೇಳೋ ಸುವರ್ಣಾವಕಾಶ!

    ಸಾರ್ವಜನಿಕರಿಗೆ ಅಪ್ಪು ಹಾಡಿದ ಉಪ್ಪಿನ ಸಾಂಗು ಕೇಳೋ ಸುವರ್ಣಾವಕಾಶ!

    ಬೆಂಗಳೂರು: ಕನ್ನಡ ಚಿತ್ರರಂಗದ ಪಾಲಿಗೆ ಹೊಸ ಅಲೆಯ ಚಿತ್ರಗಳ ಹಬ್ಬದಂಥಾ ಕಾಲ. ಈ ಸಾಲಿನಲ್ಲಿಯೇ ಮೂಡಿ ಬಂದಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರವೀಗ ನಾನಾ ಥರದಲ್ಲಿ ಸುದ್ದಿ ಕೇಂದ್ರದಲ್ಲಿದೆ. ಇದೀಗ ಚಿತ್ರತಂಡ ಸಾರ್ವಜನಿಕರಿಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಡಿರುವ ಮಜವಾದ ಹಾಡೊಂದನ್ನು ಕೇಳೋ ಸುವರ್ಣಾವಕಾಶ ಕಲ್ಪಿಸಿದೆ. ಪ್ರೀತಿಯಲ್ಲಿ ಏಟು ತಿಂದ ಪಡ್ಡೆಗಳ ತಲೆಯಲ್ಲಿ ವಾಸ್ತವದ ವೇದಾಂತ ಗಿರಕಿ ಹೊಡೆಯುತ್ತದಲ್ಲಾ? ಅಂಥಾ ಭಾವಗಳನ್ನೇ ಬಸಿದುಕೊಂಡಂತಿರೋ ಸಾಹಿತ್ಯವಿರುವ ಈ ಹಾಡು ಇದೀಗ ಬಿಡುಗಡೆಯಾಗಿದೆ. ಹೆಚ್ಚಿನ ವೀಕ್ಷಣೆ ಪಡೆದುಕೊಳ್ಳುತ್ತಾ ಮುಂದುವರೆಯುತ್ತಿರೋ ಈ ಹಾಡು ಇಷ್ಟರಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಲಕ್ಷಣಗಳೂ ದಟ್ಟವಾಗಿವೆ.

    ಏನು ಸ್ವಾಮಿ ಮಾಡೋಣ ಆಗಿಹೋಯ್ತು ಅದ್ವಾನ ಹಾಕಿ ಬಿಟ್ಲು ಕಿಟಕಿ ಬಾಗ್ಲನ್ನ ಅಂತ ಶುರುವಾಗೋ ಮಜವಾದ ಈ ಹಾಡು ಆ ನಂತರದಲ್ಲಿ ಬದುಕಿನ ವಾಸ್ತವವನ್ನು ಕೂಡಾ ಅಷ್ಟೇ ಮಜವಾಗಿ ತೆರೆದಿಡುತ್ತದೆ. ಮಿದುನ್ ಮುಕುಂದನ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಮೆಲೋಡಿ ಹಾಡುಗಳ ಮೂಲಕವೇ ಮನಗೆದ್ದಿರೋ ನಾಗೇಂದ್ರ ಪ್ರಸಾದರ ಪಾಂಡಿತ್ಯದ ಮತ್ತೊಂದು ಮಜಲು ಈ ಹಾಡಿನ ಮೂಲಕ ಅನಾವರಣಗೊಂಡಿದೆ. ಈ ಹಾಡು ಪನೀತ್ ರಾಜ್‍ಕುಮಾರ್ ಕಂಠಸಿರಿಯಲ್ಲಿ ಎಲ್ಲರಿಗೂ ಇಷ್ಟವಾಗುವಂತೆ ಮೂಡಿ ಬಂದಿದೆ.

    ಈ ಹಾಡಿನಲ್ಲಿ ನಾಯಕ ರಿಷಿಯಂತೂ ಪಡ್ಡೆ ಹುಡುಗರ ಭಾವಾವೇಷವನ್ನು ಆವಾಹಿಸಿಕೊಂಡವರಂತೆ ಹೆಜ್ಜೆ ಹಾಕಿದ್ದಾರೆ. ಅನೂಪ್ ರಾಮಸ್ವಾಮಿ ಕಶ್ಯಪ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಸೇರಿಕೊಂಡು ನಿರ್ಮಾಣ ಮಾಡಿದ್ದಾರೆ. ಸಿದ್ದು ಮೂಲಿಮನಿ, ರಂಗಾಯಣ ರಘು, ದತ್ತಣ್ಣ ಪ್ರಧಾನ ಪಾತ್ರಗಳನ್ನು ನಿರ್ವಹಿಸಿರೋ ಈ ಸಿನಿಮಾದಲ್ಲಿ ಧನ್ಯಾ ರಿಷಿಗೆ ಜೋಡಿಯಾಗಿ ನಟಿಸಿದ್ದಾರೆ. ಈ ಹಿಂದೆ ಕವಲು ದಾರಿ ಎಂಬ ಸಿನಿಮಾದಲ್ಲಿಯೂ ರಿಷಿಗೆ ಸಾಥ್ ಕೊಟ್ಟಿದ್ದ ಪುನೀತ್ ರಾಜ್ ಕುಮಾರ್ ಈ ಸಿನಿಮಾಗೆ ಹಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಸಂಪೂರ್ಣವಾಗಿ ಭಿನ್ನ ಕಥಾನಕ ಹೊಂದಿರೋ ಈ ಚಿತ್ರವೀಗ ಬಿಡುಗಡೆಯ ಹಾದಿಯಲ್ಲಿದೆ.