Tag: Poor

  • ಮನೆ ಕೆಲ್ಸದ ಜೊತೆ ಬಿಡುವಿನ ವೇಳೆ ಮಾಸ್ಕ್ ತಯಾರಿಸಿ ಬಡವರಿಗೆ ವಿತರಣೆ

    ಮನೆ ಕೆಲ್ಸದ ಜೊತೆ ಬಿಡುವಿನ ವೇಳೆ ಮಾಸ್ಕ್ ತಯಾರಿಸಿ ಬಡವರಿಗೆ ವಿತರಣೆ

    ಮಡಿಕೇರಿ: ಕೊರೊನಾ ಬಗ್ಗೆ ಸರ್ಕಾರ ಎಷ್ಟೇ ಅರಿವು ಮೂಡಿಸುತ್ತಿದ್ದರೂ ಜನತೆ ಎಚ್ಚೆತ್ತುಕೊಳ್ಳತ್ತಿಲ್ಲ. ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ಮನವಿ ಮಾಡುತ್ತಿದ್ದರೂ ಅದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

    ಇದೇ ಸಂದರ್ಭವನ್ನು ಬಂಡವಾಳ ಮಾಡಿಕೊಂಡ ಹಲವರು ತುರ್ತು ಅಗತ್ಯವಿರುವ ಮಾಸ್ಕ್ ಗಳನ್ನು ದುಬಾರಿ ಬೆಲೆಗೆ ಮಾರಿ ಜನರ ಜೇಬಿಗೆ ಕತ್ತರಿ ಹಾಕಲು ಹೊರಟಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮಡಿಕೇರಿ ನಗರದ ಮುಳಿಯ ಲೇಔಟ್‍ನ ನಿವಾಸಿ ಗೌರಿಯವರು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ತಾವೇ ಮಾಸ್ಕ್ ಹೊಲೆದು ಬಡವರಿಗೆ ಹಂಚುತ್ತಿದ್ದಾರೆ.

    ಜೀವನ ನಡೆಸಲು ನಾಲ್ಕೈದು ಮನೆಗಳಲ್ಲಿ ಕೆಲಸ ಮಾಡಿಕೊಂಡು ಬಿಡುವಿನ ಸಮಯದಲ್ಲಿ ತಾವು ಇರುವ ಬಾಡಿಗೆ ಮನೆಯಲ್ಲೆ ಮಷಿನ್ ಮೂಲಕ ಗೌರಿ ಅವರೇ ಮಾಸ್ಕ್ ಹೊಲೆದು ಬಡವರಿಗೆ ಹಂಚುತ್ತಿದ್ದಾರೆ. ಜೊತೆಗೆ ಮನೆ ಕೆಲಸಕ್ಕೆ ಹೋಗುವ ಬಿಡುವಿನ ವೇಳೆಯಲ್ಲಿ ಮನೆ, ಮನೆಗಳಿಗೆ ತೆರಳಿ ಮಾಸ್ಕ್ ಹಂಚಿ ಬರುತ್ತಾರೆ. ಈ ವೇಳೆ ಜನರಿಗೆ ಕೊರೊನಾದಿಂದ ಪಾರಾಗುವಂತೆ ಮನವರಿಕೆ ಮಾಡಿ ಸಮಾಜ ಸೇವೆ ಕೂಡ ಮಾಡುತ್ತಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಗೌರಿಯವರು, ಔಷಧಿ ಅಂಗಡಿಯಲ್ಲಿ ಮಾಸ್ಕ್ ಹೆಚ್ಚಾಗಿ ಸಿಗುತ್ತಿಲ್ಲ ಬಡವರು ಹೋಗಿ ಕೇಳಿದರೆ ಸುಮಾರು 100, 50, 30 ಹೀಗೆಲ್ಲಾ ಹಣವನ್ನು ತೆಗೆದುಕೊಳ್ಳುತ್ತಾರೆ. ಮೊದಲೇ ಜನ ಸಮಾನ್ಯರು ಹಣವಿಲ್ಲದೆ ತುಂಬ ಕಷ್ಟದಲ್ಲಿ ಇದ್ದಾರೆ. ಹಾಗಾಗಿ ಈ ರೀತಿಯಲ್ಲಿ ಸೇವೆ ಮಾಡುತ್ತಿರುವುದು ಒಂದು ರೀತಿಯಲ್ಲಿ ಖುಷಿ ಹಾಗೂ ತೃಪ್ತಿ ತಂದಿದೆ ಎಂದು ತಾವು ಮಾಡುವ ಕೆಲಸದ ಬಗ್ಗೆ ಗೌರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕಳಪೆ ಬಿತ್ತನೆ ಬೀಜ ಮಾರಾಟ ಮಾಡೋರ ಮೇಲೆ ನಿರ್ದಾಕ್ಷಿಣ್ಯ ಕ್ರಮ: ಬಿ.ಸಿ ಪಾಟೀಲ್

    ಕಳಪೆ ಬಿತ್ತನೆ ಬೀಜ ಮಾರಾಟ ಮಾಡೋರ ಮೇಲೆ ನಿರ್ದಾಕ್ಷಿಣ್ಯ ಕ್ರಮ: ಬಿ.ಸಿ ಪಾಟೀಲ್

    – ರೈತರಿಗೆ ಅಗತ್ಯವಿರುವಷ್ಟು ಪೆಟ್ರೋಲ್, ಡೀಸೆಲ್ ನೀಡಬೇಕು

    ಹಾವೇರಿ: ರೈತರ ವಸ್ತುಗಳನ್ನು ಸಾಗಾಣಿಕೆ ಮಾಡಲು ಯಾವುದೇ ನಿರ್ಬಂಧವಿಲ್ಲ. ಕೃಷಿ ಮತ್ತು ಕೃಷಿಗೆ ಪೂರಕವಾದ ಚಟುವಟಿಕೆಗಳಿಗೆ ಸರ್ಕಾರದಿಂದ ನಿರ್ಬಂಧವಿಲ್ಲ. ರೈತರಿಗೆ ಅಗತ್ಯವಿರುವಷ್ಟು ಬಂಕ್‍ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಿತರಣೆ ಮಾಡಬೇಕು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

    ಹಾವೇರಿ ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು ಸಭೆ ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದರು. ಪೊಲೀಸರು ಸಹ ರೈತರಿಗೆ ಯಾವುದೇ ತೊಂದರೆ ಮಾಡದಂತೆ ಸೂಚಿಸಿದರು. ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕಬಾರದು ಅಧಿಕಾರಿಗಳ ಜೊತೆಗೆ ನಾವಿದ್ದೇವೆ ಎಂದರು.

    ಒಂದು ವೇಳೆ ಕಳಪೆ ಬಿತ್ತನೆ ಬೀಜದಿಂದ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅದು ಆತ್ಮಹತ್ಯೆ ಅಲ್ಲ ಅವರ ಕೊಲೆ ಮಾಡಿದಂತೆ. ಹೀಗಾಗಿ ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಲಾಕ್‍ಡೌನ್‍ನಿಂದ ಹೂವಿನ ಮಾರುಕಟ್ಟೆಗೂ ತೊಂದರೆ ಆಗಿರುವುದು ನಿಜ. ಎಷ್ಟು ಪ್ರಮಾಣದ ಹಾನಿಯಾಗಿದೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸಿ ವರದಿ ಕೊಡಲು ಸಿಎಂ ಸೂಚಿಸಿದ್ದಾರೆ. ವರದಿ ನಂತರ ಸೂಕ್ತ ಪರಿಹಾರ ವಿತರಣೆ ಮಾಡಲಾಗುವುದು. ಇದರ ಜೊತೆಗೆ ಬಿತ್ತನೆ ಬೀಜ, ರಸಗೊಬ್ಬರವನ್ನು ಎಂ.ಆರ್.ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂಥವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಪಾಟೀಲ್ ಹೇಳಿದರು.

  • ಬಡವರಿಗೆ, ನಿರಾಶ್ರಿತರಿಗೆ ಊಟ ಪ್ಯಾಕ್ ಮಾಡಿದ ಕರಂದ್ಲಾಜೆ

    ಬಡವರಿಗೆ, ನಿರಾಶ್ರಿತರಿಗೆ ಊಟ ಪ್ಯಾಕ್ ಮಾಡಿದ ಕರಂದ್ಲಾಜೆ

    ಬೆಂಗಳೂರು: ಸಂಸದೆ ಶೋಭಾ ಕರಂದ್ಲಾಜೆ ಇಂದು ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬಸವಣ್ಣದೇವರ ಮಠಕ್ಕೆ ಭೇಟಿ ನೀಡಿದ್ದಾಗ ಬಡವರಿಗೆ, ನಿರಾಶ್ರಿತರಿಗೆ ತಾವೇ ಊಟ ಪ್ಯಾಕ್ ಮಾಡಿದ್ದಾರೆ.

    ಪ್ರತಿನಿತ್ಯ ಸುಮಾರು 2,000 ಜನಕ್ಕೆ ಊಟ ತಯಾರಿಸುವ ಕೇಂದ್ರ ಇದ್ದಾಗಿದ್ದು, ಬಸವಣ್ಣದೇವರ ಮಠಕ್ಕೆ ಸಂಸದೆ 250 ಕೆ.ಜಿ ಅಕ್ಕಿ, 50 ಕೆ.ಜಿ ಬೇಳೆ ಪ್ಯಾಕೆಟ್ ನೀಡಿ, ಶ್ರೀಗಳ ಹಾಗೂ ಸ್ವಯಂ ಸೇವಕ ತಂಡಕ್ಕೆ ಧನ್ಯವಾದ ಹೇಳಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ, ಲಾಕ್‍ಡೌನ್ ಮುಂದುವರಿಕೆ ವಿಚಾರದ ಬಗ್ಗೆ ಪ್ರಧಾನಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯುತ್ತಿದೆ. ದೇಶದ ಪರಿಸ್ಥಿತಿಯನ್ನು ನೋಡಿಕೊಂಡು ಪ್ರಧಾನಿಗಳು ಕ್ರಮ ಕೈಗೊಳ್ತಾರೆ ಅದನ್ನು ಪಾಲಿಸಬೇಕು ಎಂದಿದ್ದಾರೆ.

    14ನೇ ತಾರೀಖಿಗೆ ಲಾಕ್‍ಡೌನ್ ಮುಗಿಯುವ ವಿಶ್ವಾಸ ಇತ್ತು. ಆದರೆ ದೆಹಲಿಯ ತಬ್ಲಿಘಿ ಸಂಘಟನೆ ಸಮಾವೇಶದಿಂದ ಕೊರೊನಾ ಸೋಂಕು ಹೆಚ್ಚಾಗಿ ಹರಡಿದೆ. ಸುಮಾರು 40% ಕೊರೊನಾ ಹಬ್ಬಲು ತಬ್ಲಿಘಿ ಕೊಡುಗೆ ಇದೆ. ತಬ್ಲಿಘಿ ಸಂಘಟನೆಯಲ್ಲಿ ಭಾಗಿಯಾದವರು ಸಾವಿರಾರು ಮಂದಿಗೆ ಕೊರೊನಾ ಹಬ್ಬಿಸಿದ್ದಾರೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ ಎಂದರು.

    ಈ ವೇಳೆ ಪವಾಡ ಶ್ರೀ ಬಸವದೇವರ ಮಠದ ಸಿದ್ಧಲಿಂಗ ಸ್ವಾಮೀಜಿ, ಮಾಜಿ ಶಾಸಕ ನಾಗರಾಜು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಯ್ಯ, ತಹಶಿಲ್ದಾರ್ ಶ್ರೀನಿವಾಸಯ್ಯ, ಪಿಎಸ್‍ಐ ಮಂಜುನಾಥ್ ಹಾಗೂ ಸ್ವಯಂ ಸೇವಕರು ದಾನಿಗಳು ಹಾಜರಿದ್ದರು.

  • ಮಂಗಳಮುಖಿಯರು ಸೇರಿ ಹಲವು ಬಡವರಿಗೆ ರಾಧಿಕಾ ಸಹಾಯ ಹಸ್ತ

    ಮಂಗಳಮುಖಿಯರು ಸೇರಿ ಹಲವು ಬಡವರಿಗೆ ರಾಧಿಕಾ ಸಹಾಯ ಹಸ್ತ

    ಬೆಂಗಳೂರು: ಕೊರೊನಾ ವೈರಸ್ ಯಾವ ರೀತಿಯ ಅವಂತಾರ ಸೃಷ್ಟಿಸಿದೆ ಎಂಬುದು ತಿಳಿದೇ ಇದೆ. ಬಡವರು ಕೊರೊನಾ ವೈರಸ್ ಹಾಗೂ ಲಾಕ್‍ಡೌನ್ ಸುಳಿಗೆ ಸಿಕ್ಕಿ ನಲುಗಿ ಹೋಗಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಹತೋಟಿಗೆ ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಲವು ನಟ, ನಟಿಯರು ಹಾಗೂ ಧನಿಕರು ಸಹಾಯಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಸಹ ನೆರವಾಗುತ್ತಿದ್ದಾರೆ.

    ಸದಾ ಭಿಕ್ಷಾಟನೆ ಮಾಡಿಯೇ ಜೀವನ ಸಾಗಿದುತ್ತಿದ್ದ ಮಂಗಳಮುಖಿಯರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಅಲ್ಲದೆ ಲಾಕ್‍ಡೌನ್ ಸುಳಿಗೆ ಹಲವು ದಿನಗೂಲಿ ಕಾರ್ಮಿಕರು ಸಹ ಸಿಲುಕಿಕೊಂಡಿದ್ದಾರೆ. ಅಂತಹವರಿಗೆ ರಾಧಿಕಾ ಕುಮಾರಸ್ವಾಮಿಯವರು ಸಹಾಯ ಮಾಡಿದ್ದಾರೆ.

    ಮಂಗಳಮುಖಿಯರು ಹಾಗೂ ಬಡವರನ್ನು ಹುಡುಕಿಕೊಂಡು ಹೋಗಿ ಅಕ್ಕಿ, ಬೇಳೆ ಸೇರಿದಂತೆ ವಿವಿಧ ರೀತಿಯ ಆಹಾರ ಸಾಮಗ್ರಿಗಳನ್ನು ದಾನ ಮಾಡುತ್ತಿದ್ದಾರೆ. ಈ ಮೂಲಕ ಅವರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಸಹಾಯ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿವಿಧ ರೀತಿಯ ಆಹಾರ ಸಾಮಾಗ್ರಿಗಳನ್ನು ಸ್ವತಃ ಅವರೇ ಕೈಯಾರೇ ಹಂಚಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ವಿಡಿಯೋ ಪೋಸ್ಟ್ ಮಾಡಿರುವ ಅವರು, ನಾವೆಲ್ಲರೂ ಮಾನವರು, ಇಂತಹ ಸಮಯದಲ್ಲಿ ದುರ್ಬಲರಿಗೆ, ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಭಾವಿಸುತ್ತೇನೆ. ಹೀಗಾಗಿ ಬೆಂಗಳೂರಿನಲ್ಲಿ ಅಗತ್ಯವಿರುವವರಿಗೆ ಸ್ವಯಂ ಪ್ರೇರಣೆಯಿಂದ ಆಹಾರ ಪದಾರ್ಥ ವಿತರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ನಟಿ ರಾಧಿಕಾ ಕುಮಾರಸ್ವಾಮಿಯವರು ಮಾಗಡಿ ರೋಡ್, ಕೆಂಗೇರಿ, ನಾಯಂಡಹಳ್ಳಿ ಮುಂತಾದ ಏರಿಯಾಗಳಲ್ಲಿ ದಿನಸಿ ವಿತರಿಸಿದ್ದು, 1200ಕ್ಕೂ ಹೆಚ್ಚು ಮನೆಗಳಿಗೆ ಹಂಚಿಕೆ ಮಾಡಿದ್ದಾರೆ. ವಿಶೇಷವಾಗಿ ಮಂಗಳ ಮುಖಿಯರಿಗೆ ರಾಧಿಕಾ, ದಿನಸಿ ಹಂಚಿದ್ದಾರೆ.

    ಈಗಾಗಲೇ ಹಲವು ನಟ, ನಟಿಯರು ಸಹಾಯ ಮಾಡಿದ್ದು, ಪಿಎಂ ಕೇರ್ಸ್ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಸಂದಾಯ ಮಾಡಿದ್ದಾರೆ. ಇನ್ನೂ ಕೆಲವರು ನೇರವಾಗಿ ಸಿನಿಮಾ ದಿನಗೂಲಿ ಕಾರ್ಮಿಕರು ಹಾಗೂ ಬಡವರ ಖಾತೆಗೆ ನೇರವಾಗಿ ಹಣ ಹಾಕಿದ್ದಾರೆ. ಇನ್ನೂ ಹಲವರು ಅಗತ್ಯ ಇರುವವರ ಮನೆಗಳಿಗೆ ಆಹಾರ ಪದಾರ್ಥ ಹಾಗೂ ಅಗತ್ಯ ವಸ್ತುಗಳನ್ನು ತಲುಪಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಇದೀಗ ರಾಧಿಕಾ ಕುಮಾರಸ್ವಾಮಿಯವರು ಸಹಾಯ ಮಾಡಿದ್ದಾರೆ.

  • ಸರ್ಕಾರದ ದಿಟ್ಟ ಕ್ರಮದಿಂದ ರಾಜ್ಯದಲ್ಲಿ ಕೊರೊನಾ ಹತೋಟಿಯಲ್ಲಿದೆ: ಆರ್. ಅಶೋಕ್

    ಸರ್ಕಾರದ ದಿಟ್ಟ ಕ್ರಮದಿಂದ ರಾಜ್ಯದಲ್ಲಿ ಕೊರೊನಾ ಹತೋಟಿಯಲ್ಲಿದೆ: ಆರ್. ಅಶೋಕ್

    ನೆಲಮಂಗಲ: ಅಸಂಘಟಿತ ವಲಯ, ಕಡು ಬಡವರು ಹಾಗೂ ನಿರ್ಗತಿಕರ ಹಸಿವು ನೀಗಿಸಲು ಸರ್ಕಾರ ಸರ್ವ ಸನ್ನದ್ಧವಾಗಿದ್ದು, ದಿನಸಿ ಹಾಗೂ ಸಿದ್ಧ ಆಹಾರ ಪೂರೈಕೆಗೆ ದಿಟ್ಟ ಕ್ರಮ ಕೈಗೊಂಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

    ಬೆಂಗಳೂರು ಹೊರವಲಯ ಟಿ. ದಾಸರಹಳ್ಳಿಯ ಮಲ್ಲಸಂದ್ರ ವಾರ್ಡಿನ ಸೆಲೆಕ್ಷನ್ ಕಾರ್ನರ್ ನಲ್ಲಿ ಯಡಿಯೂರಪ್ಪ ಕ್ಯಾಂಟೀನ್‍ಗೆ ಚಾಲನೆ ನೀಡಿ ಆರ್. ಅಶೋಕ್ ಅವರು ಮಾತನಾಡಿದರು. ಲಾಕ್‍ಡೌನ್ ತುರ್ತು ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿರುವುದರಿಂದ ಕೊರೊನಾ ಸೋಂಕು ಹತೋಟಿಯಲ್ಲಿದೆ. ಜನರ ಆರೋಗ್ಯದ ದೃಷ್ಟಿಯಿಂದ ಲಾಕ್‍ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಓಡಾಡವರಿಗೆ ಎಚ್ಚರಿಕೆ ನೀಡಲಾಗಿದೆ, ಜೊತೆಗೆ ಮುಲಾಜಿಲ್ಲದೆ ಅವರ ವಾಹನಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ ಎಂದರು.

    ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಈಗಾಗಲೇ 20 ಕೋಟಿ ಹಣ ವ್ಯಯಿಸಲಾಗಿದೆ. ಇತ್ತ 395 ಕೋಟಿ ರೂ. ಕೇಂದ್ರ ಸರ್ಕಾರದಿಂದ ಬಂದಿದ್ದು, ಕಡು ಬಡವರ ಊಟ ವಸತಿ ಸೇರಿದಂತೆ ತುರ್ತು ಕೆಲಸಗಳಿಗೆ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು. ಅಸಂಘಟಿತ ವಲಯದ ಒಂದು ಲಕ್ಷ ಕಾರ್ಮಿಕರಿಗೆ 15 ಕೆಜಿ ಆಹಾರ ಪದಾರ್ಥ ಗಳಿರುವ ಚೀಲವನ್ನು ಒದಗಿಸಲು ತೀರ್ಮಾನಿಸಲಾಗಿದ್ದು, ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ 20 ಸಾವಿರ ಫಲಾನುಭವಿಗಳಿಗೆ ಆಹಾರ ಸಾಮಾಗ್ರಿ ನೀಡಲಾಗಿದೆ. ಇನ್ನೂ 30 ಸಾವಿರ ಕಾರ್ಮಿಕರಿಗೆ ಸಾಮಾಗ್ರಿನೀಡಲಾಗುವುದು, ಅದನ್ನು ನಗರದ ವಿಧಾನಸಭಾ ಕ್ಷೇತ್ರಗಳಲ್ಲಿ ಜನಪ್ರತಿನಿಧಿಗಳ ಸಹಯೋಗದೊಂದಿಗೆ ವಿತರಿಸಲಾಗುವುದು ಎಂದು ಸಚಿವರು ತಿಳಿಸಿದರು.

    ಕಂದಾಯ ಇಲಾಖೆಯಿಂದ ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ಇತರೆ ಮಾಸಾಶನಗಳನ್ನು ಎರಡು ತಿಂಗಳಿಗೆ ಮುಂಗಡವಾಗಿ ಬಿಡುಗಡೆಗೊಳಿಸಲಾಗಿದೆ. ರೈತರ ತೋಟಗಾರಿಕಾ, ಕೃಷಿ ಉತ್ಪನ್ನಗಳ ಮಾರಾಟ, ಸಾಗಾಟಕ್ಕೆ ಈಗಾಗಲೇ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಮಾರುಕಟ್ಟೆಗೆ ಬರಲು ತೊಂದರೆಯಾಗುವ ರೈತರ ಉತ್ಪನ್ನಗಳನ್ನು ಖರೀದಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

    ಈ ವೇಳೆ ಮಾಜಿ ಶಾಸಕ ಮುನಿರಾಜು ಅವರು ಮಾತನಾಡಿ, ಬಡವರ ಹಸಿವು ನೀಗಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕ್ಷೇತ್ರದ ಮಟ್ಟದಲ್ಲಿ ಪಡಿತರ ಚೀಟಿ ಇಲ್ಲದ ಕಡು ಬಡವರಿಗೆ ತಿಂಡಿ, ಊಟ ಹಾಗೂ ಅಗತ್ಯ ದಿನಸಿಗಳನ್ನು ಯಡಿಯೂರಪ್ಪ ಕ್ಯಾಂಟೀನ್ ಮೂಲಕ ಪೂರೈಸಲಾಗುತ್ತಿದೆ. ಎಷ್ಟೇ ಜನ ಬಂದರೂ ಶುಚಿ, ರುಚಿಯ ಆಹಾರ ಪಟ್ಟಣಗಳನ್ನು ವಿತರಿಸಲಾಗುವುದು ಜೊತೆಗೆ ಸೋಂಕು ಹರಡದಂತೆ ಜಾಗೃತಿಯನ್ನೂ ಮೂಡಿಸಲಾಗುವುದು ಎಂದರು.

    ದಾಸರಹಳ್ಳಿ ಬಿಜೆಪಿ ಕ್ಷೇತ್ರಾಧ್ಯಕ್ಷ ಎನ್. ಲೋಕೇಶ್, ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ದಾನಿಗಳ ನೆರವಿನಿಂದ ಕ್ಯಾಂಟೀನ್ ನಡೆಸಲಾಗುತ್ತಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ತನಕ ಮುಂದುವರಿಸಲಾಗುವುದು ಎಂದರು. ಈ ವೇಳೆ ಬೆಂಗಳೂರು ಜಿ.ಪಂ ಅಧ್ಯಕ್ಷ ಮರಿಸ್ವಾಮಿ, ಮುಖಂಡರಾದ ಬಿಎಂ ನಾರಾಯಣ್, ಗಂಗರಾಜು, ರವಿಗೌಡ ಮತ್ತಿತರು ಉಪಸ್ಥಿತರಿದ್ದರು.

  • ಬಡವರಿಗೆ ಊಟ ನೀಡದೆ ಖಾಸಗಿ ಆಸ್ಪತ್ರೆಗೆ ಕಟೀಲಿನಿಂದ ಆಹಾರ ರವಾನೆ

    ಬಡವರಿಗೆ ಊಟ ನೀಡದೆ ಖಾಸಗಿ ಆಸ್ಪತ್ರೆಗೆ ಕಟೀಲಿನಿಂದ ಆಹಾರ ರವಾನೆ

    ಮಂಗಳೂರು: ನಿರ್ವಸಿತ ಕೂಲಿ ಕಾರ್ಮಿಕರಿಗೆ ಮತ್ತು ನಿರ್ಗತಿಕರಿಗೆ ಮುಜರಾಯಿ ಇಲಾಖೆಯ ಎ ದರ್ಜೆಯ ದೇವಸ್ಥಾನಗಳಿಂದ ಊಟ ನೀಡಲು ಸರಕಾರ ಆದೇಶ ಮಾಡಿದೆ. ಆದರೆ ಎ ದರ್ಜೆಯ ಹೆಚ್ಚಿನ ದೇವಸ್ಥಾನಗಳಿಂದ ಈ ಆದೇಶ ಪಾಲನೆಯಾಗುತ್ತಿಲ್ಲ.

    ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಎ ದರ್ಜೆಯ ದೇವಸ್ಥಾನ ಆಗಿರುವ ಕಟೀಲು ದುರ್ಗಾಪರಮೇಶ್ವರಿ ದೇಗುಲದಿಂದ ಖಾಸಗಿ ಕೆಎಂಸಿ ಆಸ್ಪತ್ರೆಗೆ ಗುಪ್ತವಾಗಿ ಊಟ ರವಾನಿಸುತ್ತಿರುವ ವಿಡಿಯೋ ಈಗ ಹರಿದಾಡುತ್ತಿದೆ. ದೇವಸ್ಥಾನದ ಅಕ್ಕಿ ಬಳಸಿ, ಅಲ್ಲಿನ ಅಡುಗೆ ಕಾರ್ಮಿಕರ ಮೂಲಕ ಊಟ ರೆಡಿ ಮಾಡಲಾಗುತ್ತಿದ್ದು ದಿನವೊಂದಕ್ಕೆ ಎರಡು ಸಾವಿರ ಜನರಿಗೆ ಊಟ ತಯಾರಿಸಿ ಕೊಡಲಾಗುತ್ತಿದೆ. ದೇವಸ್ಥಾನದ ದುಡ್ಡಲ್ಲಿ ಊಟ ರೆಡಿ ಮಾಡಿಸಿ, ಕೆಎಂಸಿ ಆಸ್ಪತ್ರೆಗೆ ಮಾರಾಟ ಮಾಡಲಾಗುತ್ತಿದೆ ಅನ್ನುವ ಆರೋಪ ಕೇಳಿಬಂದಿದೆ.

    ದೇವಸ್ಥಾನಕ್ಕೆ ಸಾರ್ವಜನಿಕರಿಗೆ ಪ್ರವೇಶ ಇಲ್ಲದಿರುವ ಸಂದರ್ಭ ಇಷ್ಟೊಂದು ಭೋಜನ ತಯಾರಿಸುತ್ತಿರುವುದಲ್ಲದೆ, ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್ ನಲ್ಲಿ ಊಟ ರವಾನಿಸುತ್ತಿರುವ ಬಗ್ಗೆ ಸಾರ್ವಜನಿಕರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ದೇವಸ್ಥಾನದ ಆಡಳಿತ ವಹಿಕೊಂಡಿರುವ ಆಸ್ರಣ್ಣರ ಕಾರುಬಾರಿನಲ್ಲಿ ಸರ್ಕಾರಿ ದೇವಸ್ಥಾನದಿಂದ ಊಟ ಮಾರಾಟ ಮಾಡಲಾಗುತ್ತಿದೆಯೇ ಅನ್ನುವ ಪ್ರಶ್ನೆ ಎದುರಾಗಿದೆ.

    ಬಡ ಕೂಲಿ ಕಾರ್ಮಿಕರಿಗೆ ಊಟ ಪೂರೈಸುವ ಬಗ್ಗೆ ಪ್ರಶ್ನೆ ಮಾಡಿದರೆ ಅಡುಗೆ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ ಎಂದು ನೆಪ ಹೇಳುತ್ತಾರೆ. ಈಗ ಕೆಎಂಸಿ ಅಂಬುಲೆನ್ಸ್ ನಲ್ಲಿ ಊಟ ರವಾನಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

  • ಜಾತಿ-ಭೇದ ಮರೆತು ಬಡವರಿಗೆ ದಿನನಿತ್ಯದ ಸಾಮಾಗ್ರಿಗಳನ್ನು ನೀಡಿದ ಅರ್ಚಕರು

    ಜಾತಿ-ಭೇದ ಮರೆತು ಬಡವರಿಗೆ ದಿನನಿತ್ಯದ ಸಾಮಾಗ್ರಿಗಳನ್ನು ನೀಡಿದ ಅರ್ಚಕರು

    ಕೋಲಾರ: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಕೋಲಾರ ವರದರಾಜ ಸ್ವಾಮಿ ದೇವಾಲಯದ ಅರ್ಚಕರು ಹಾಗೂ ಸಿಬ್ಬಂದಿ ಹಲವೆಡೆ ಬಡವರಿಗೆ ದಿನ ನಿತ್ಯದ ಸಾಮಗ್ರಿಗಳನ್ನು ವಿತರಣೆ ಮಾಡಿದರು.

    ನಿತ್ಯ ಕೂಲಿ ಮಾಡಿ ಬದುಕುತ್ತಿದ್ದ ಜನರಿಗೆ ಲಾಕ್‍ಡೌನ್ ಹಿನ್ನೆಲೆ ನಿತ್ಯದ ಬದುಕು ಕಷ್ಟವಾಗಿದೆ. ಹೀಗಾಗಿ ಸುಮಾರು ನೂರು ಜನರಿಗೆ ಅರ್ಚಕರುಗಳು ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ತರಕಾರಿ ಸೇರಿದಂತೆ ನಿತ್ಯದ ವಸ್ತುಗಳನ್ನ ಬ್ಯಾಗ್‍ನಲ್ಲಿ ಸಂಗ್ರಹಿಸಿ, ಕೋಲಾರ ನಗರದ ವಿನೋಭ ನಗರದ ದಲಿತ ಕಾಲೋನಿಗಳಲ್ಲಿ ಹಂಚಿಕೆ ಮಾಡಿದರು.

    ಇದೇ ವೇಳೆ ಮುಂದಿನ ದಿನಗಳಲ್ಲಿ ಸರಿ ಸುಮಾರು 1,000 ಕುಟುಂಬಗಳಿಗೆ ಹೀಗೆ ದವಸ ದಾನ್ಯಗಳನ್ನು ವಿತರಣೆ ಮಾಡುವುದಾಗಿ ಹೇಳಿದರು. ಜಾತಿ-ಭೇದ ಮರೆತು ಹಸಿದವರಿಗೆ ಅನ್ನ ಕೊಡುವ ಕೆಲಸ ಮಾಡಲಾಗುತ್ತಿದೆ ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟ ಪಡಿಸಿದರು.

  • ಹಸಿವಿನಿಂದ ಬಳಲುತ್ತಿದ್ದ ಬಡವರಿಗೆ 1 ವಾರದಿಂದ ಆಹಾರ ನೀಡುತ್ತಿರುವ ಕುಮಟಾ ಯುವಕ

    ಹಸಿವಿನಿಂದ ಬಳಲುತ್ತಿದ್ದ ಬಡವರಿಗೆ 1 ವಾರದಿಂದ ಆಹಾರ ನೀಡುತ್ತಿರುವ ಕುಮಟಾ ಯುವಕ

    ಕಾರವಾರ: ಇಡೀ ಭಾರತವೇ ಲಾಕ್‍ಡೌನ್ ಆಗಿದೆ. ಹಲವು ಭಾಗದಲ್ಲಿ ದಿನದ ಮೂಲಭೂತ ಅಗತ್ಯ ವಸ್ತುಗಳೂ ಜನರಿಗೆ ಸಿಗುವುದು ಕಷ್ಟವಾಗಿದೆ. ಜಿಲ್ಲಾಡಳಿತಗಳು ಅಗತ್ಯ ವಸ್ತುಗಳ ಪೂರೈಕೆಗೆ ಪ್ರಯತ್ನ ಮಾಡುತ್ತಿದ್ದರೂ ಬೀದಿಯಲ್ಲಿರುವ ಅನಾಥರು, ಕೂಲಿ ಕಾರ್ಮಿಕರಿಗೆ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದಂತಾಗಿದೆ. ಇಂತವರಿಗೆ ಅಲ್ಲಿ ಇಲ್ಲಿ ಸಿಗುವ ನಳದ ನೀರೇ ಹಸಿವು ನೀಗಿಸಿಕೊಳ್ಳಲು ಆಧಾರವಾಗಿದೆ.

    ಆದರೆ ಇವರ ಸ್ಥಿತಿಯನ್ನು ಅರಿತ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದ ಶ್ರೀಧರ್ ಕುಮಟೇಕರ್ ಅವರು ಬೀದಿಯಲ್ಲಿರುವ ಭಿಕ್ಷುಕರಿಗೆ, ನಿರ್ಗತಿಕರಿಗೆ ಕಳೆದ ಒಂದು ವಾರದಿಂದ ತಮ್ಮ ಸ್ವಂತ ಹಣ ಖರ್ಚು ಮಾಡಿ ಮೂರು ಹೊತ್ತು ಊಟ, ತಿಂಡಿಗಳನ್ನು ನೀಡುತ್ತಾ ಹಸಿದವರಿಗೆ ನೆರವಾಗುತ್ತಿದ್ದಾರೆ.

    ಕುಮಟಾ ನಗರದಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಶ್ರೀಧರ್ ರವರು ಲಾಕ್‍ಡೌಕ್ ಘೋಷಿಸಿದ ನಂತರ ಮನೆಯಲ್ಲಿದ್ದರು. ಆದರೆ ರಸ್ತೆ ಬದಿ ಊಟವಿಲ್ಲದೇ ಹಸುವಿನಿಂದ ಬಳಲಿ ಬೆಂಡಾಗಿದ್ದ ಭಿಕ್ಷುಕರನ್ನು, ನಿರ್ಗತಿಕರನ್ನು ನೋಡಿ ತಮ್ಮ ಮನೆಯಲ್ಲಿಯೇ ಪ್ರತಿ ದಿನ ಊಟ, ತಿಂಡಿಯನ್ನು ತಯಾರಿಸಿ ನೀಡುತ್ತಿದ್ದಾರೆ. ಇವರ ಈ ಕೆಲಸವನ್ನು ನೋಡಿದ ಸ್ಥಳೀಯ ಪತ್ರಕರ್ತರು ಸಹ ಸಾಥ್ ನೀಡಿದ್ದು, ಒಂದಿಷ್ಟು ದಿನಸಿ, ಅಗತ್ಯ ವಸ್ತುಗಳನ್ನು ಕೊಡಿಸಿ ಇವರ ಕೆಲಸಕ್ಕೆ ಸಹಕರಿಸುತ್ತಿದ್ದಾರೆ.

    ಪ್ರತಿ ದಿನ ಆಹಾರವನ್ನು ತಯಾರಿಸಿ ಬಸ್ ನಿಲ್ದಾಣ, ರಸ್ತೆಗಳಲ್ಲಿರುವ ಅನಾಥರಿಗೆ, ಕೂಲಿ ಕೆಲಸದವರಿಗೆ ನೀಡುವ ಮೂಲಕ ಮಾನವೀಯತೆ ಮೆರೆದು ಶ್ರೀಧರ್ ಎಲ್ಲರಿಗೂ ಮಾದರಿಯಾಗಿದ್ದಾರೆ.

  • ಕಡು ಬಡತನಕ್ಕೆ ಸೆಡ್ಡು ಹೊಡೆದು ಯುವಕ ಸೇನೆಗೆ ಆಯ್ಕೆ

    ಕಡು ಬಡತನಕ್ಕೆ ಸೆಡ್ಡು ಹೊಡೆದು ಯುವಕ ಸೇನೆಗೆ ಆಯ್ಕೆ

    ಯಾದಗಿರಿ: ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲ ಎಲ್ಲರಿಗೂ ಇರುತ್ತೆ. ಕೆಲವರು ಅದರಲ್ಲಿ ಯಶಸ್ಸು ಕಾಣುತ್ತಾರೆ. ಇನ್ನೂ ಕೆಲವರಿಗೆ ಬಡತನ ಅಡ್ಡಿಯಾಗುತ್ತದೆ. ಆದರೆ ಯಾದಗಿರಿಯ ಯುವಕರೊಬ್ಬರು ತಮ್ಮ ಕಡು ಬಡತನಕ್ಕೆ ಸೆಡ್ಡು ಹೊಡೆದು ಸೈನ್ಯಕ್ಕೆ ಆಯ್ಕೆಯಾಗಿದ್ದಾರೆ.

    ಹೌದು. ಯಾದಗಿರಿ ತಾಲೂಕಿನ ಸಾವೂರು ಎಂಬ ಪುಟ್ಟ ಗ್ರಾಮದ ಬುಡಕಟ್ಟು ಜನಾಂಗದಲ್ಲಿ ಹುಟ್ಟಿದ ಫಕೀರಪ್ಪ ತನ್ನ ಬಡತನವನ್ನು ಮೆಟ್ಟಿನಿಂತಿದ್ದಾರೆ. ಕಷ್ಟಪಟ್ಟು ಓದಿ ಇದೀಗ ಸೈನ್ಯಕ್ಕೆ ಆಯ್ಕೆ ಆಗಿದ್ದಾರೆ.

    ಫಕೀರಪ್ಪ ಗ್ರಾಮದ ಹಗಲು ವೇಷಗಾರರ ಹುಸೇನಪ್ಪ ಮತ್ತು ಅನಂತಮ್ಮನ ಮಗ. ಈ ದಂಪತಿಯ 6 ಮಕ್ಕಳ ಪೈಕಿ ಫಕೀರಪ್ಪ 4 ನೇಯವರು. ಹುಸೇನಪ್ಪ ಕುಟುಂಬ ಸಣ್ಣ ಜೊಪಡಿಯಲ್ಲಿ ವಾಸ ಮಾಡುತ್ತಿದೆ. ವಿವಿಧ ಹಗಲು ವೇಷಗಳನ್ನು ಹಾಕಿಕೊಂಡು ಬಡತನದ ನಡುವೆಯೇ ಮಗನನ್ನು ಬಿಎ ಪದವಿ ಓದಿಸಿ, ಇದೀಗ ದೇಶ ಕಾಯುವ ಸೈನಿಕನನ್ನಾಗಿ ಮಾಡಿದ್ದಾರೆ.

    ಫಕೀರಪ್ಪ ಕೂಡ ತನ್ನ ಬಡತನಕ್ಕೆ ಸೆಡ್ಡು ಹೊಡೆದು ಸತತ ಮೂರು ಬಾರಿ ಪ್ರಯತ್ನಿಸಿ ನಾಲ್ಕನೆಯ ಬಾರಿಗೆ ಸೇನೆ ಆಯ್ಕೆ ಆಗಿದ್ದಾರೆ. ಗ್ರಾಮಸ್ಥರು ಫಕೀರಪ್ಪನ್ನ ಸಾಧನೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಬಡವರಿಗಾಗಿ ಈ ವರ್ಷದಲ್ಲಿ 50 ಸಾವಿರ ಮನೆಗಳ ನಿರ್ಮಾಣ – ಸೋಮಣ್ಣ ಭರವಸೆ

    ಬಡವರಿಗಾಗಿ ಈ ವರ್ಷದಲ್ಲಿ 50 ಸಾವಿರ ಮನೆಗಳ ನಿರ್ಮಾಣ – ಸೋಮಣ್ಣ ಭರವಸೆ

    ಬೆಂಗಳೂರು: ಬಡವರಿಗೆ ಸೂರು ಕಲ್ಪಿಸುವ ಸಲುವಾಗಿ ವರ್ಷಾಂತ್ಯದ ವೇಳೆಗೆ 50 ಸಾವಿರ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

    ನೆಲಮಂಗಲ ಸಮೀಪದ ದಾಸನಪುರ ಹೋಬಳಿಯ ಅಗ್ರಹಾರಪಾಳ್ಯದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸೋಮಣ್ಣ ಅವರು ಈ ಬಗ್ಗೆ ಭರವಸೆ ನೀಡಿದರು. ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ ಜಿ+3 ಮಾದರಿಯಲ್ಲಿ ನಿರ್ಮಿಸುತ್ತಿರುವ ವಸತಿ ಸಮುಚ್ಚಯ ಕಾಮಗಾರಿಗೆ ಸೋಮಣ್ಣ ಅವರು ಶಂಕುಸ್ಥಾಪನೆ ನೆರವೇರಿಸಿದರು.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರದಿಂದ 600 ಕೋಟಿ ರೂ. ಅನುದಾನ ನೀಡಿದ್ದರೂ ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರ್ಕಾರಗಳ ಅವಧಿಯಲ್ಲಿ ಚಾಲನೆ ಸಿಗದೆ, ಈ ಯೋಜನೆಯು ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ವಸತಿ ಯೋಜನೆಯ ಭಾಗವಾಗಿ ಇಂದು 843 ಬಹುಮಹಡಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಒಂದು ವರ್ಷದ ಅವಧಿಯಲ್ಲಿ ಕನಿಷ್ಟ 50 ಸಾವಿರ ಮನೆ ನಿರ್ಮಾಣ ಮಾಡಿ ಬಡವರಿಗೆ ಹಸ್ತಾಂತರ ಮಾಡಲಾಗುವುದು. ಯಲಹಂಕ ಕ್ಷೇತ್ರದಲ್ಲಿ 3 ಸಾವಿರ ಮನೆಗಳ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

    ಸರ್ಕಾರದಿಂದ ಕಟ್ಟುತ್ತಿರುವ ಆಸ್ಪತ್ರೆ, ಆಟದ ಮೈದಾನ, ಕೊಳಚೆ ನೀರು ಸಂಸ್ಕರಣಾ ಘಟಕ ಸೇರಿ ಅಗತ್ಯ ಮೂಲಸೌಲಭ್ಯಗಳನ್ನು ಸಮುಚ್ಚಯಗಳಲ್ಲಿ ಒದಗಿಸುವ ಮೂಲಕ ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರ ಮಹತ್ವಾಕಾಂಕ್ಷಿ ವಸತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆಗಳಲ್ಲಿ ಲಭ್ಯವಿರುವ ಸುಮಾರು 4 ಲಕ್ಷ ರೂ. ಅನುದಾನ ಹಾಗೂ ಬ್ಯಾಂಕ್‍ಗಳಲ್ಲಿ 2 ಲಕ್ಷ ರೂ. ಸಾಲ ಸೌಲಭ್ಯ ಒದಗಿಸುವ ಮೂಲಕ ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಬಡವರ ಕನಸನ್ನು ನನಸು ಮಾಡಲು ಬದ್ಧವಿರುವುದಾಗಿ ತಿಳಿಸಿದರು.

    ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಮಾತನಾಡಿ, ಯಲಹಂಕವನ್ನು ಗುಡಿಸಲು ರಹಿತ ಮಾದರಿ ಕ್ಷೇತ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಹಿಂದಿನ ಸರ್ಕಾರಗಳ ಆಡಳಿತದ ಅವಧಿಯಲ್ಲಿ ಕಾರಣಾಂತರಗಳಿಂದ ಮನೆ ಬಡವರಿಗೆ ನೀಡಲು ಸಾಧ್ಯವಾಗಿರಲಿಲ್ಲ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಕ್ಷೇತ್ರದ, ಕುಕ್ಕನಹಳ್ಳಿ, ತೋಟಗೆರೆ, ಪಿಳ್ಳಹಳ್ಳಿ, ಲಕ್ಷ್ಮಿಪುರ, ಬಿಳಿಜಾಜಿ, ದಾಸನಪುರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಮನೆ ನಿರ್ಮಾಣ ಮಾಡಲಾಗುವುದು. ಕ್ಷೇತ್ರದಲ್ಲಿ 10 ಸಾವಿರ ಮನೆ ನಿರ್ಮಾಣ ಮಾಡುವ ಗುರಿ ಇದೆ. ಸರ್ಕಾರದಿಂದ ಸಿಗುವ ಎಲ್ಲಾ ಯೋಜನೆಗಳನ್ನು ಕ್ಷೇತ್ರಕ್ಕೆ ತರುವುದಾಗಿ ಭರವಸೆ ನೀಡಿದರು.

    ಜಿಲ್ಲಾಧಿಕಾರಿ ಶಿವಮೂರ್ತಿ, ರಾಜೀವ್ ಗಾಂಧಿ ವಸತಿ ನಿಗಮ ನಿ. ಎಂಡಿ ಡಾ.ರಾಮ ಪ್ರಸಾದ್ ಮನೋಹರ್, ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಜಿ.ಮರಿಸ್ವಾಮಿ, ಜಿ.ಪಂ ಸದಸ್ಯ ರವಿಕುಮಾರ್, ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ಶಿವರಾಜ್, ಗೋಪಾಲಪುರ ಗ್ರಾ.ಪಂ ಅಧ್ಯಕ್ಷ ಟಿ.ಎಂ ಬಸವೇಗೌಡ ಸೇರಿ ಯಲಹಂಕ ಕ್ಷೇತ್ರ ಬಿಜೆಪಿ ಅಧ್ಯಕ್ಷ ಹನುಮಯ್ಯ ಇನ್ನಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಮನೆಗಳು ಹೇಗಿರಲಿವೆ?
    ಸುಮಾರು 5 ಎಕ್ರೆ ಜಮೀನಿನಲ್ಲಿ ಜಿ+3 ಮಾದರಿಯಲ್ಲಿ ನಿರ್ಮಿಸುತ್ತಿರುವ ವಸತಿ ಸಮುಚ್ಚಯದಲ್ಲಿ 836 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಮನೆಯನ್ನು 30 ಚ.ಮೀ ವಿಸ್ತೀರ್ಣದಲ್ಲಿ ಒಂದು ಹಾಲ್, ಬೆಡ್ ರೂಂ, ಅಡುಗೆಮನೆ ಸೇರಿದಂತೆ ಪ್ರತ್ಯೇಕ ಸ್ಥಾನದ ಮನೆ, ಶೌಚಾಲಯ, ಕಾಂಕ್ರೀಟ್ ಗೋಡೆಗಳು, ನೆಲಹಾಸಿಗೆಗೆ ವೆಟ್ರಿಫೈಡ್ ಟೈಲ್ಸ್, ಗ್ರಾನೈಟ್ ಬಳಸಿ ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿದೆ. ಜೊತೆಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರು, ಪಂಪ್ ರೂಂ, ಮಳೆ ನೀರು ಕೊಯ್ಲು ಮುಂತಾದ ವ್ಯವಸ್ಥೆಯನ್ನು ಕೂಡ ಒದಗಿಸಲಾಗುತ್ತಿದೆ.