Tag: Political Pressure

  • ಸಿಕ್ತು ಪ್ರಬಲವಾದ ಸಾಕ್ಷ್ಯ- ಕೊನೆಗೂ ರಾಗಿಣಿ ಅರೆಸ್ಟ್‌

    ಸಿಕ್ತು ಪ್ರಬಲವಾದ ಸಾಕ್ಷ್ಯ- ಕೊನೆಗೂ ರಾಗಿಣಿ ಅರೆಸ್ಟ್‌

    ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಕೊನೆಗೂ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಇಂದು ಬೆಳಗ್ಗೆ ಮನೆ ಮೇಲೆ ದಾಳಿ ಮಾಡಿದ ಬಳಿಕ ರಾಗಿಣಿ ಸಿಸಿಬಿ ಪೊಲೀಸರ ವಶದಲ್ಲೇ ಇದ್ದರು. ಮಧ್ಯಾಹ್ನದಿಂದ ಪೊಲೀಸರು ನಿರಂತರ ವಿಚಾರಣೆ ನಡೆಸುತ್ತಿದ್ದರು.

    ಸಂಜೆ ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಸುದ್ದಿಗೋಷ್ಠಿ ನಡೆಸಿ ರವಿಶಂಕರ್‌ ಮತ್ತು ರಾಹುಲ್‌ ಇಬ್ಬರನ್ನು ಅರೆಸ್ಟ್‌ ಮಾಡಿದ್ದೇವೆ. ರಾಗಿಣಿಯ ಮೇಲೆ ಎಫ್‌ಐಆರ್‌ ದಾಖಲಾಗಿದೆ ಎಂದು ತಿಳಿಸಿದ್ದರು.  ಇದನ್ನೂ ಓದಿ: ಎಷ್ಟು ವಿಚಾರಣೆ ಮಾಡ್ತೀರಿ? ಬೇಗ ಕಳುಹಿಸಿ – ಅಧಿಕಾರಿಯ ಮೇಲೆ ಪ್ರಭಾವಿ ರಾಜಕಾರಣಿ ಒತ್ತಡ

    ಎಫ್‌ಐಆರ್‌ ದಾಖಲಾದ ಬಳಿಕ ರಾಗಿಣಿ ಬಂಧನ ಯಾಕೆ ನಡೆದಿಲ್ಲ ಎಂಬ ಪ್ರಶ್ನೆ ಎದ್ದಿತ್ತು. ಈ ನಡುವೆ ಪ್ರಭಾವಿ ರಾಜಕಾರಣಿಯೊಬ್ಬರು ರಾಗಿಣಿಯನ್ನು ಬಂಧಿಸದಂತೆ ಒತ್ತಡ ಹೇರುತ್ತಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ಸಿಕ್ಕಿತ್ತು. ಆದರೆ ಪ್ರಭಾವಿ ರಾಜಕಾರಣಿಯ ಒತ್ತಡಕ್ಕೆ ಬಗ್ಗದ ಪೊಲೀಸರು ಕೊನೆಗೂ ರಾಗಿಣಿಯನ್ನು ಬಂಧಿಸಿದ್ದಾರೆ.

    ಆರೋಪಿಗಳು ಡ್ರಗ್ಸ್‌ ದಂಧೆಯಲ್ಲಿ ರಾಗಿಣಿ ಪಾತ್ರ ಇದೆ ಎಂದು ಹೇಳಿದ್ದರೂ ಸರಿಯಾದ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಆದರೆ ಇಂದು ಮನೆಯ ಮೇಲೆ ನಡೆದ ದಾಳಿ ವೇಳೆ ಡ್ರಗ್ಸ್‌ ಪತ್ತೆಯಾಗಿತ್ತು. ಇದು ಪ್ರಬಲವಾದ ಸಾಕ್ಷ್ಯವಾಗಿದ್ದರಿಂದ ಪೊಲೀಸರು ಸಂಜೆ ರಾಗಿಣಿಯನ್ನು ಅರೆಸ್ಟ್‌ ಮಾಡಿದ್ದಾರೆ.

    ಬಂಧನ ಭೀತಿಯಿಂದ ಪಾರಾಗಲು ಆರೋಪಿಯಾಗಿರುವ ನಟಿ ರಾಗಿಣಿ ಇಂದು ಕೋರ್ಟ್‌ ಮೊರೆ ಹೋಗಿದ್ದರು. ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ಗೆ ರಾಗಿಣಿ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡದೇ ಸಿಸಿಬಿ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ. ಸೆ.7ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಈಗ ಪೊಲೀಸರು ಪ್ರಕರಣದಲ್ಲಿ ಬಂಧನ ಮಾಡಿದ ಕಾರಣ ಜಾಮೀನು ಕೋರಿ ರಾಗಿಣಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

    ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಮೇಲೆ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಎಫ್‍ಐಆರ್ ದಾಖಲಾಗಿದೆ. ಸಿಸಿಬಿಯ ನಾರ್ಕೊಟಿಕ್ಸ್ ಎಸಿಪಿ ಗೌತಮ್ ದೂರಿನ ಆಧಾರದ ಮೇಲೆ ಎಫ್‍ಐಆರ್ ದಾಖಲಾಗಿದೆ. ಬಂಧಿತ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಸಾಕ್ಷಿ ಹಾಗೂ ಪುರಾವೆಗಳು ಸಿಕ್ಕಿರುವ ಹಿನ್ನೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಾಟ್ಸಾಪ್ ಮೆಸೇಜ್‍ಗಳು ಹಾಗೂ ಪೆಡ್ಲರ್ ಗಳ ನೀಡಿರುವ ಮಾಹಿತಿ ಅನ್ವಯ ನಟಿ ರಾಗಿಣಿ ಅವರ ಕೈವಾಡದ ಬಗ್ಗೆ ಸಾಕ್ಷಿ ಲಭ್ಯವಾಗಿದ್ದು, ಡ್ರಗ್ ಡೀಲರ್ ಗಳ ಜೊತೆ ಒಡನಾಟವನ್ನು ಹೊಂದಿದ್ದಾರೆ. ಅನೇಕ ಬಾರಿ ಡ್ರಗ್ ಡೀಲ್ ಮಾಡಿರುವ ಬಗ್ಗೆ ಮಾಹಿತಿ ಖಚಿತವಾದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

  • ಬಂಧನ ಭೀತಿ – ಕೋರ್ಟ್‌ ಮೊರೆ ಹೋದ ರಾಗಿಣಿ

    ಬಂಧನ ಭೀತಿ – ಕೋರ್ಟ್‌ ಮೊರೆ ಹೋದ ರಾಗಿಣಿ

    ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಬಂಧನ ಭೀತಿಯಿಂದ ಪಾರಾಗಲು ಆರೋಪಿಯಾಗಿರುವ ನಟಿ ರಾಗಿಣಿ ಈಗ ಕೋರ್ಟ್‌ ಮೊರೆ ಹೋಗಿದ್ದಾರೆ.

    ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ಗೆ ರಾಗಿಣಿ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡದೇ ಸಿಸಿಬಿ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ. ಸೆ.7ಕ್ಕೆ ವಿಚಾರಣೆಯನ್ನು ಮುಂದೂಡಿದೆ.

    ಇಂದು ಬೆಳಗ್ಗೆ ಮನೆ ಮೇಲೆ ದಾಳಿ ಮಾಡಿದ ಬಳಿಕ ರಾಗಿಣಿ ಈಗಲೂ ಸಿಸಿಬಿ ಪೊಲೀಸರ ವಶದಲ್ಲೇ ಇದ್ದಾರೆ. ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡದ ಕಾರಣ ಪೊಲೀಸರಿಗೆ ಈಗಲೂ ನಟಿಯನ್ನು ಬಂಧಿಸಲು ಅವಕಾಶವಿದೆ. ಇದನ್ನೂ ಓದಿ: ಒಂದೇ ಅಪಾರ್ಟ್‌ಮೆಂಟ್‌ನಲ್ಲಿ 2 ಫ್ಲ್ಯಾಟ್ ಇದ್ರೂ ಗೌಪ್ಯವಾಗಿಟ್ಟಿದ್ದ ನಟಿ

    ಪ್ರಕರಣದಲ್ಲಿ ಬಂಧನ ಮಾಡಿದರೆ ಜಾಮೀನು ಕೋರಿ ರಾಗಿಣಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

  • ಎಷ್ಟು ವಿಚಾರಣೆ ಮಾಡ್ತೀರಿ? ಬೇಗ ಕಳುಹಿಸಿ – ಅಧಿಕಾರಿಯ ಮೇಲೆ ಪ್ರಭಾವಿ ರಾಜಕಾರಣಿ ಒತ್ತಡ

    ಎಷ್ಟು ವಿಚಾರಣೆ ಮಾಡ್ತೀರಿ? ಬೇಗ ಕಳುಹಿಸಿ – ಅಧಿಕಾರಿಯ ಮೇಲೆ ಪ್ರಭಾವಿ ರಾಜಕಾರಣಿ ಒತ್ತಡ

    ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಡೀಲ್‌ನಲ್ಲಿ ನಟಿ ರಾಗಿಣಿಯನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರ ಮೇಲೆ ಪ್ರಭಾವಿ ರಾಜಕಾರಣಿಯೊಬ್ಬರು ಒತ್ತಡ ಹಾಕುತ್ತಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಡ್ರಗ್ಸ್‌ ದಂಧೆಯಲ್ಲಿ ಕೇವಲ ಸ್ಯಾಂಡಲ್‌ವುಡ್‌ ಸ್ಟಾರ್‌ಗಳು ಮಾತ್ರವಲ್ಲ ರಾಜಕೀಯ ನಾಯಕರ ಪುತ್ರರು ಭಾಗಿಯಾಗಿದ್ದಾರೆ ಎನ್ನುವುದು ಡ್ರಗ್‌ ಪೆಡ್ಲರ್‌ಗಳ ಮೊಬೈಲ್‌ನಲ್ಲಿರುವ ವಿಡಿಯೋದಲ್ಲಿ ಗೊತ್ತಾಗಿದೆ.  ಇದನ್ನೂ ಓದಿ: ಡ್ರಗ್‍ಗೆ ಚಿಕ್ಕನ್ ಪೀಸ್ ಎನ್ನುತ್ತಿದ್ದ ರಾಗಿಣಿ – ತುಪ್ಪದ ಬೆಡಗಿ ಕೋಡ್‍ವರ್ಡ್ ರೀವಿಲ್

    ಈಗ ರಾಗಿಣಿಯನ್ನು ವಿಚಾರಣೆಗೆ ಒಳಪಡಿಸುತ್ತಿರುವಾಗಲೇ ಪ್ರಭಾವಿ ರಾಜಕಾರಣಿಯೊಬ್ಬರು ಹಿರಿಯ ಪೊಲೀಸ್‌ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ. ಎಷ್ಟು ವಿಚಾರಣೆ ಮಾಡುತ್ತಿದ್ದೀರಿ? ಬೇಗ ಕಳುಹಿಸಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ಈಗ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಮುಗಿದ ಬಳಿಕ ಗೃಹ ಸಚಿವರಿಗೆ ಮಾಹಿತಿ ಹಂಚಿಕೊಳ್ಳುವುದಾಗಿ ಅಧಿಕಾರಿ ತಿಳಿಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ.

  • ರಾಜಕೀಯ ಒತ್ತಡ – ಚನ್ನರಾಯಪಟ್ಟಣ ಟೌನ್ ಎಸ್‍ಐ ಆತ್ಮಹತ್ಯೆ

    ರಾಜಕೀಯ ಒತ್ತಡ – ಚನ್ನರಾಯಪಟ್ಟಣ ಟೌನ್ ಎಸ್‍ಐ ಆತ್ಮಹತ್ಯೆ

    ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ಟೌನ್ ಪೊಲೀಸ್ ಠಾಣೆಯ ಎಸ್‍ಐ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

    ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಲಾಳಿನಕೆರೆ ಗ್ರಾಮದವಾರದ ಕಿರಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ. ಎರಡು ದಿನದಲ್ಲಿ ಚನ್ನರಾಯಟ್ಟಣದಲ್ಲಿ ಎರಡು ಕೊಲೆ ನಡೆದಿದ್ದು, ಕೊಲೆ ನಡೆದ ಸ್ಥಳಕ್ಕೆ ಹೋಗಿ ಕಿರಣ್ ಕುಮಾರ್ ಪರಿಶೀಲನೆ ಮಾಡಿದ್ದರು. ಜೊತೆಗೆ ಈ ಕೊಲೆಗೆ ಸಂಬಂಧಿದಂತೆ ಆರೋಪಿಗಳ ಬಂಧಿಸುವಲ್ಲಿ ಅವರಿಗೆ ರಾಜಕೀಯ ಒತ್ತಡವಿತ್ತು ಎಂದು ಹೇಳಲಾಗುತ್ತಿದೆ.

    ಇಂದು ವರಮಹಾಲಕ್ಷ್ಮಿ ಹಬ್ಬ ಇದ್ದರಿಂದ ಪತ್ನಿ ತಂದೆ ಮನೆಗೆ ಹೋಗಿದ್ದರು. ಇವರು ಸಹ ಮಾವನ ಮನೆಗೆ ಹೋಗಿ ಬೆಳಗ್ಗೆ ಉಪಹಾರ ತಿಂದು ಬಂದು ತಾವು ವಾಸವಿದ್ದ ಮನೆಯಲ್ಲಿ ಪ್ಯಾನ್‍ಗೆ ನೇಣು ಬಿಗಿದುಕೂಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ್ಗೆ ಎರಡು ದಿನಗಳಲ್ಲಿ ನಗರದಲ್ಲಿ ಎರಡು ಕೊಲೆಗಳಾಗಿದ್ದು ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯ ಶವಾಗಾರ ದಲ್ಲಿ ಮೃತ ದೇಹ ಇಡಲಾಗಿದೆ.