ಭೋಪಾಲ್: ಮಧ್ಯಪ್ರದೇಶದ (Madhya Pradesh) ಮೊರೆನಾ ನಗರದ ರಾಥೋಡ್ ಕಾಲೋನಿಯಲ್ಲಿ ಸೋಮವಾರ ಮಧ್ಯರಾತ್ರಿಯ ಸುಮಾರಿಗೆ ನಿಗೂಢ ಸ್ಫೋಟ (Explosion) ಸಂಭವಿಸಿದ್ದು ಮೂರು ಮನೆಗಳು ಕುಸಿದಿವೆ. ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಸ್ಫೋಟದ ಸ್ಥಳಕ್ಕೆ ಫೊರೆನ್ಸಿಕ್ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದೆ ಎಂದು ಪೊಲೀಸ್ (Police) ವರಿಷ್ಠಾಧಿಕಾರಿ ಸಮೀರ್ ಸೌರಭ್ ಹೇಳಿದ್ದಾರೆ.
ಚಿಕ್ಕಮಗಳೂರು: ತಾಲೂಕಿನ (Chikkamagaluru) ಕೊಳಗಾಮೆ ಗ್ರಾಮದಲ್ಲಿ ನಡೆದಿದ್ದ ವೃದ್ಧ ದಂಪತಿಯ ಜೋಡಿ ಕೊಲೆ (Murder) ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನಗಿರುವ ಕಾಯಿಲೆ ಹುಷಾರಾಗಲಿ ಎಂದು ತನ್ನ ಅಜ್ಜಿಯ ಮೇಲೆ ಮೊಮ್ಮಗನೇ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆಗೈದಿದ್ದಾನೆ. ಇನ್ನೂ ಅತ್ಯಾಚಾರಕ್ಕೆ ಯತ್ನಿಸುವ ಮುನ್ನವೇ ಆರೋಪಿ ತನ್ನ ಅಜ್ಜನನ್ನು ಕೊಲೆಗೈದಿದ್ದ ಎಂದು ತನಿಖೆ ವೇಳೆ ಬಯಲಾಗಿದೆ.
ನ.21 ರಂದು ಕೊಳಗಾಮೆ ಗ್ರಾಮದಲ್ಲಿ ಡಬಲ್ ಮರ್ಡರ್ ನಡೆದಿತ್ತು. ಕರಿಬಸವಯ್ಯ (65) ಅವರ ಪತ್ನಿ ಲಲೀತಮ್ಮ (60) ಎಂಬವರ ಕೊಲೆಯಾಗಿತ್ತು. ಪ್ರಕರಣ ನಡೆದ 48 ಗಂಟೆಯಲ್ಲಿ ಮಲ್ಲಂದೂರು ಪೊಲೀಸರು (Police) ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು. ಇದೀಗ ಆರೋಪಿಯ ಬಾಯಿಯಿಂದ ಕೊಲೆಗೆ ಕಾರಣ ಏನು ಎಂಬುದನ್ನು ಬಾಯಿ ಬಿಡಿಸಿದ್ದಾರೆ.
ನಿಶಾಂತ್ ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ಮಹಿಳೆಯರ ಬಳಿ ಹೋಗುವ ಅಭ್ಯಾಸ ಇತ್ತಂತೆ. ಇತ್ತೀಚೆಗೆ ಆತನ ಮೈನಲ್ಲಿ ಸಾಕಷ್ಟು ಕಜ್ಜಿಗಳಾಗಿದ್ದವು. ಆತನ ಸ್ನೇಹಿತರು, ನೀನು ಮಹಿಳೆಯರ ಬಳಿ ಹೋದಾಗ ಕಾಂಡೋಮ್ ಬಳಸಬೇಡ. ಆಗ ಕಜ್ಜಿ ಹೋಗುತ್ತೆ ಎಂದು ಹೇಳಿದ್ದರಂತೆ. ಅದಕ್ಕೆ ಬೆಂಗಳೂರಿನಲ್ಲಿ ಯಾರು ಒಪ್ಪದ ಕಾರಣ ಅಜ್ಜ-ಅಜ್ಜಿಯ ಮನೆಗೆ ಬಂದಿದ್ದನು. ಅಜ್ಜಿಯ ಮೇಲೆ ಅತ್ಯಾಚಾರ ಮಾಡುವುದು ಆತನ ಮೂಲ ಉದ್ದೇಶವಾಗಿತ್ತು. ಹಾಗಾಗಿ, ಮೊದಲಿಗೆ ಅಜ್ಜನನ್ನ ಕಲ್ಲಿನಿಂದ ಚಚ್ಚಿ, ಕೊಲೆ ಮಾಡಿ ನಂತರ ಅಜ್ಜಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಅಜ್ಜಿ ವಿರೋಧ ವ್ಯಕ್ತಪಡಿಸಿದಾಗ ಆಕೆಯ ಬಾಯಿಯನ್ನು ಬಿಗಿಯಾಗಿ ಹಿಡಿದಿದ್ದರಿಂದ ಆಕೆಯು ಸಾವನ್ನಪ್ಪಿದ್ದಳು ಎಂದು ತಿಳಿದು ಬಂದಿದೆ.
ಕೊಲೆಯಾದ ದಂಪತಿಗೆ ಮಕ್ಕಳಿರಲಿಲ್ಲ. ಮೃತ ಲಲಿತಮ್ಮನ ತಂಗಿಯ ಮೊಮ್ಮಗ ನಿಶಾಂತ್ (21) ಎಂಬ ಯುವಕ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಆತ ಅಜ್ಜ ಅಜ್ಜಿಯ ಬಳಿ ಒಡವೆ ಹಾಗೂ ಹಣವನ್ನೂ ಪಡೆದುಕೊಂಡು ಅಡವಿಟ್ಟಿದ್ದ. ಒಡವೆ ಬಿಡಿಸಿಕೊಡದ ಹಿನ್ನೆಲೆ ಆಗಾಗ ಗಲಾಟೆ ಕೂಡ ನಡೆಯುತ್ತಿತ್ತು. ಹಣಕ್ಕಾಗಿ ಅಜ್ಜ ಅಜ್ಜಿಯನ್ನು ಕೊಲೆ ಮಾಡಿದ್ದಾನೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಪೊಲೀಸರು ಕೂಡ ಅದೇ ದೃಷ್ಟಿಕೋನದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇದೀಗ ಕೊಲೆಗೆ ಅಸಲಿ ಕಾರಣ ತಿಳಿದು ಪೊಲೀಸರು ಸಹ ಕಂಗಾಲಾಗಿದ್ದಾರೆ.
ಹಾಸನ: ಮದುವೆಗೆ ನಿರಾಕರಿಸಿದ ಪ್ರೇಯಸಿಗೆ ಯುವಕನೊಬ್ಬ ಚಾಕು ಇರಿದ ಘಟನೆ ಹಾಸನದ (Hassan) ಆಲೂರು ಪಟ್ಟಣದಲ್ಲಿ ನಡೆದಿದೆ.
ಆಲೂರಿನ ಕಾರಗೋಡು ಗ್ರಾಮದ ಮೋಹಿತ್ ಹಾಗೂ ಅದೇ ಗ್ರಾಮದ ಯುವತಿ ಪರಸ್ಪರ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕೆಲವು ದಿನಗಳಿಂದ ಮೋಹಿತ್ನಿಂದ ಯುವತಿ ದೂರವಾಗಿದ್ದಳು. ಆದರೂ ಪ್ರೇಯಸಿಯನ್ನು ಮದುವೆಯಾಗುವಂತೆ ಯುವಕ ಕಾಡುತ್ತಿದ್ದ ಎಂದು ತಿಳಿದು ಬಂದಿದೆ.
ಯುವಕನ ಕಾಟದಿಂದ ಬೇಸತ್ತಿದ್ದ ಯುವತಿ, ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಳು. ಬಳಿಕ ಎರಡೂ ಕುಟುಂಬದಿಂದ ರಾಜಿ ಸಂಧಾನಕ್ಕೆ ಮುಂದಾಗಿದ್ದರು. ಈ ಸಂಬಂಧ ಎರಡು ಕುಟುಂಬಗಳು ಯಾರ ತಂಟೆಗೂ ಯಾರು ಬರದಂತೆ ಮಾತುಕತೆ ನಡೆಸಿದ್ದರು. ಬಳಿಕ ಗ್ರಾಮಸ್ಥರ ಜೊತೆಗೆ ಬಂದು ನೋಟರಿ (ದಸ್ತಾವೇಜು) ಮಾಡಿಸಲು ಎರಡು ಕುಟುಂಬಸ್ಥರು ಬಂದಿದ್ದರು. ಈ ವೇಳೆ ಪಾನಮತ್ತನಾಗಿ ಬಂದಿದ್ದ ಯುವಕ ಏಕಾಏಕಿ ಯುವತಿಯ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದಾನೆ. ಹಲ್ಲೆಯ ಬಳಿಕ ಆರೋಪಿ ಪರಾರಿಯಾಗಿದ್ದಾನೆ.
ದಾಳಿಯಿಂದ ಯುವತಿಯ ತಲೆ ಹಾಗೂ ಕೈಗಳಿಗೆ ತೀವ್ರ ಗಾಯಗಳಾಗಿವೆ. ಗಾಯಳುವಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಆಲೂರು ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ: ಟ್ರ್ಯಾಕ್ಟರ್ಗಳಲ್ಲಿ (Tractor) ಅತಿಯಾದ ಸೌಂಡ್ ಬಳಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಚಾಲಕರಿಗೆ ಬೆಳಗಾವಿ ಪೊಲೀಸರು (Belagavi Police) ಬಿಸಿ ಮುಟ್ಟಿಸಿದ್ದಾರೆ.
ಬೆಳಗಾವಿ ಜಿಲ್ಲೆಯಾದ್ಯಂತ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ (Sugar Factory) ಕಬ್ಬು ನುರಿಸುವ ಪ್ರಕ್ರಿಯೆ ಆರಂಭವಾಗಿದೆ. ಜಮೀನಿನಿಂದ ಕಾರ್ಖಾನೆಗೆ ಕಬ್ಬು ಒಯ್ಯುವ ಟ್ರ್ಯಾಕ್ಟರ್ಗಳಲ್ಲಿ ಚಾಲಕರು ವಿಪರೀತ ಸೌಂಡ್ ಬಳಸ್ತಿದ್ದಾರೆ. ಜಾನಪದ ಹಾಡುಗಳನ್ನು ಹಚ್ಚಿ ಅಧಿಕ ಸೌಂಡ್ನೊಂದಿಗೆ ಚಾಲಕರು ಕಬ್ಬು ಒಯ್ಯುತ್ತಿದ್ದಾರೆ.
ಮುನವಳ್ಳಿ ಪಟ್ಟಣದಲ್ಲಿ ಟ್ರ್ಯಾಕ್ಟರ್ಗಳ ಮೇಲೆ ಸವದತ್ತಿ ಪೊಲೀಸರು ದಾಳಿ ನಡೆಸಿದ್ದಾರೆ. ಟೇಪ್ಗಳನ್ನು ಟ್ರ್ಯಾಕ್ಟರ್ ಚಕ್ರಕ್ಕೆ ಇಟ್ಟು ಹಾನಿಗೊಳಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಮಾಡಿದ್ರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. ಇದನ್ನೂ ಓದಿ: ಒಕ್ಕಲಿಗರ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡಿ ಮುಜುಗರಕ್ಕೀಡಾದ ಜಾರ್ಜ್
ಭೋಪಾಲ್: 15 ವರ್ಷದ ಬಾಲಕಿಯ ಮೇಲೆ ಟ್ರಕ್ ಚಾಲಕನೊಬ್ಬ ಅತ್ಯಾಚಾರ ಎಸಗಿರುವುದು ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಸಿಯಾರ್ಮೌ ಅರಣ್ಯದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಕ್ ಚಾಲಕ ಹಾಗೂ ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಟ್ರಕ್ ಚಾಲಕನನ್ನು ಸಂಜು ಆದಿವಾಸಿ (21) ಎಂದು ಗುರುತಿಸಲಾಗಿದೆ. ಅಲ್ಲದೇ ಆತನ ಸಹಚರ ಶಿವನಾರಾಯಣ ಅಡ್ವಾಸಿಯನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ಅಕ್ಷಯ್ ಅಹಿರ್ವಾರ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ತನ್ನ ಸ್ನೇಹಿತನೊಂದಿಗೆ ವನದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದಳು. ಈ ವೇಳೆ ಅರಣ್ಯ ಪ್ರದೇಶದ ಬಳಿ ಬೈಕ್ ನಿಲ್ಲಿಸಿ ಕಾಡಿನೊಳಗೆ ತೆರಳಿದ್ದಾರೆ. ಇದೇ ವೇಳೆ ಆ ಜಾಗದಲ್ಲಿ ಟ್ರಕ್ ಕೆಟ್ಟು ನಿಂತಿದ್ದು, ಬಾಲಕಿಯನ್ನು ಗಮನಿಸಿದ ಟ್ರಕ್ ಚಾಲಕ ಹಾಗೂ ಆತನ ಸ್ನೇಹಿತರು ಅಪ್ರಾಪ್ತೆಯ ಸ್ನೇಹಿತನ ಬೈಕ್ ಕೀ ಕಸಿದುಕೊಂಡು ಆತನಿಗೆ ಥಳಿಸಿದ್ದಾರೆ. ಬಳಿಕ ಬಾಲಕಿಯ ಮೇಲೆ ಟ್ರಕ್ ಚಾಲಕ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 64 (ಅತ್ಯಾಚಾರ), 70-1 (ಗ್ಯಾಂಗ್ ರೇಪ್) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತುಮಕೂರು: ಕೊರಟಗೆರೆ (Koratagere) ಪಟ್ಟಣ ಸೇರಿದಂತೆ ತುಮಕೂರು (Tumakuru) ತಾಲೂಕಿನ ಕೆಲವೆಡೆಗಳಲ್ಲಿ ಗಾಂಜಾ (Marijuana) ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಕ್ಯಾತಸಂದ್ರ ನಿವಾಸಿ ಚೇತನ್, ಗೋಕುಲ ಬಡಾವಣೆಯ ನಾಗರಾಜು, ಊರುಕೆರೆಯ ಪ್ರೀತಂ, ಊರುಕೆರೆ ಚೆಕ್ಪೋಸ್ಟ್ ಬಳಿಯ ಸಿಂಗಾವೇಲು ಬಂಧಿತ ಆರೋಪಿಗಳು. ಬಂಧಿತರು ಬೇರೆಡೆಯಿಂದ ಗಾಂಜಾವನ್ನು ಪ್ಯಾಕೆಟ್ಗಳಲ್ಲಿ ತಂದು ಪಟ್ಟಣ ಸೇರಿದಂತೆ ಕೆಲವು ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ‘ಮಹಾಯುತಿ’ ವಿಜಯ – ಎನ್ಡಿಎ ಮೈತ್ರಿಕೂಟ ಪ್ರಮಾಣ ವಚನ ನಾಳೆ?
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ದರ್ಶನ್ಗೆ (Darshan) ಒಂದಲ್ಲಾ ಒಂದು ಕಂಟಕ ಎದುರಾಗಿದೆ. ತನಿಖೆ ವೇಳೆ ಸಿಕ್ಕಿರುವ 8 ಫೋಟೋಗಳು ಪ್ರಕರಣದ ಮಹತ್ವದ ಸಾಕ್ಷಿಯಾಗಿ ಪರಿಣಮಿಸಿದೆ.
ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿ ಪುನಿತ್ ಮೊಬೈಲ್ನಲ್ಲಿ ಸಿಕ್ಕ ಮಹತ್ವದ ಸಾಕ್ಷಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫೋಟೋ ಸಿಕ್ಕರೇ ನನಗೆ ಕಂಟಕವಾಗುತ್ತೆ ಎಂಬ ಭಯದಲ್ಲಿದ್ದ ಪ್ರತ್ಯಕ್ಷದರ್ಶಿ ಪುನೀತ್ ಅವುಗಳನ್ನು ಡಿಲೀಟ್ ಮಾಡಿದ್ದ. ಇದೀಗ ತನಿಖಾಧಿಕಾರಿಗಳು ರಿಟ್ರೀವ್ ಮಾಡಿದ್ದು ಪುನೀತ್ ಮೊಬೈಲ್ನಲ್ಲಿದ್ದ 8 ಫೋಟೋಗಳನ್ನು ರಿಕವರಿ ಮಾಡಿದ್ದಾರೆ.
ರಿಕವರಿಯಾದ ಫೋಟೋದಲ್ಲಿ, ಕೊಲೆ ನಡೆದ ಶೆಡ್ನಲ್ಲಿ ಆರೋಪಿಗಳ ಜೊತೆ ದರ್ಶನ್ ನೀಲಿ ಟೀ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಪೋಸ್ ಕೊಟ್ಟಿದ್ದಾರೆ. ಆರೋಪಿ ವಿನಯ್ ರ್ಯಾಗ್ಲಂರ್ ಕಾರಿನ ಮುಂದೆ, ಎ2 ಆರೋಪಿ ನಟ ದರ್ಶನ್, ಮೂವರು ಆರೋಪಿಗಳಾದ ಎ6 ಜಗ್ಗ, ಎ7 ಅನುಕುಮಾರ್, ಎ8 ರವಿಶಂಕರ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆರೋಪಿಗಳು ಪುನೀತ್ಗೆ ಹಾಯ್ ಎಂದು ಮೇಸೇಜ್ ಮಾಡಿ ಫೋಟೊಗಳನ್ನ ತರಿಸಿಕೊಂಡಿರುವುದು ತನಿಖೆ ವೇಳೆ ಬಯಲಾಗಿದೆ.
ಇದೇ ಪ್ರಕರಣದ ವಿಚಾರವಾಗಿ ಬೆಂಗಳೂರಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ (G.Parameshwar) ಪ್ರತಿಕ್ರಿಯಿಸಿದ್ದಾರೆ. ಮೊಬೈಲ್ನ್ನು ಪೊಲೀಸರು ಎಫ್ಎಸ್ಎಲ್ಗೆ ಕಳುಹಿಸಿ ಮೊಬೈಲ್ನಲ್ಲಿ ಕೊಲೆಯಾದ ಜಾಗದಲ್ಲಿ ನಟ ದರ್ಶನ್ ಇರೋ ಪೋಟೋ ರಿಟ್ರೀವ್ ಆಗಿದೆ. ಚಿಕಿತ್ಸೆಗಾಗಿ ಬೇಲ್ ಪಡೆದಿರೋ ದರ್ಶನ್ಗೆ ಇನ್ನು ಆಪರೇಷನ್ ಆಗಿಲ್ಲ. ಹೀಗಾಗಿ ಅವರ ಜಾಮೀನು ರದ್ದು ಮಾಡುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡ್ತೇವೆ ಎಂದು ಹೇಳಿದ್ದಾರೆ.
ಮಂಗಳೂರು: ಎದುರಾಳಿ ತಂಡದ ವಿರುದ್ಧ ಸಂಚು ರೂಪಿಸುತ್ತಿದ್ದಾಗಲೇ ನಟೋರಿಯಸ್ ರೌಡಿಶೀಟರ್ ಒಬ್ಬನನ್ನು ಸಿಸಿಬಿ ಪೊಲೀಸರು (Police) ಬಂಧಿಸಿದ ಘಟನೆ ಉಳ್ಳಾಲದಲ್ಲಿ (Ullal) ನಡೆದಿದೆ.
ಬಂಧಿತ ಆರೊಪಿಯನ್ನು, ದಾವುದ್ (43) ಎಂದು ಗುರುತಿಸಲಾಗಿದೆ. ಆರೋಪಿ ಉಳ್ಳಾಲದ ಧರ್ಮನಗರದ ಆತನ ಮನೆಯಲ್ಲಿ ಎದುರಾಳಿ ತಂಡದ ವಿರುದ್ಧ ಸಂಚು ಮಾಡುತ್ತಿದ್ದ. ಈ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಆತನನ್ನು ಬಂಧಿಸಿದ್ದಾರೆ.
ಬಂಧನದ ವೇಳೆ ಸಿಸಿಬಿ ಪೊಲೀಸರ ಮೇಲೆ ಆರೋಪಿ ಮಚ್ಚಿನಿಂದ ದಾಳಿ ಮಾಡಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವುದ್ ವಿರುದ್ಧ ಟಾರ್ಗೆಟ್ ಇಲ್ಯಾಸ್ ಕೊಲೆ ಸೇರಿದಂತೆ 10 ಪ್ರಕರಣಗಳಿವೆ.