ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ನವವಿವಾಹಿತ ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಆಸ್ಟಿನ್ ಟೌನ್ನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಪೇದೆಯನ್ನು ಬಳ್ಳಾರಿ ಮೂಲದ ಗೋವಿಂದ.ಕೆ ಎಂದು ಗುರುತಿಸಲಾಗಿದೆ. ಅವರು ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಕೌಟುಂಬಿಕ ಕಲಹದಿಂದ ಬೇಸತ್ತು ನಗರದ ಕ್ವಾಟ್ರಸ್ನಲ್ಲಿರುವ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.
ವಿವೇಕ ನಗರ ಠಾಣೆಯಲ್ಲಿ ಅವರು ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಘಟನೆ ಸಂಬಂಧ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕೇಸ್ ದಾಖಲಾಗಿದೆ.
ಇತ್ತೀಚಿಗಷ್ಟೇ ಆಸ್ಟಿನ್ ಟೌನ್ ಕ್ವಾಟ್ರಸ್ಗೆ ಗೋವಿಂದ ಅವರು ಬಂದಿದ್ದರು ಎಂದು ತಿಳಿದು ಬಂದಿದೆ.
ರಾಯ್ಪುರ: ಛತ್ತೀಸ್ಗಢದ (Chhattisgarh) ಮುಂಗೇಲಿ ಜಿಲ್ಲೆಯಲ್ಲಿ ಉಕ್ಕಿನ ಸ್ಥಾವರದ ಸಂಗ್ರಹಣ ಘಟಕ (Silo Collapses) ಕುಸಿದು ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, 25 ಜನ ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮುಂಗೇಲಿಯ ಸರಗಾಂವ್ ಪ್ರದೇಶದಲ್ಲಿರುವ ಕುಸುಸ್ಮ್ ಸ್ಟೀಲ್ ಸ್ಥಾವರದಲ್ಲಿ ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ಬೃಹತ್ ವಸ್ತುಗಳನ್ನು ಸಂಗ್ರಹಿಸಲು ಬಳಸುವ ಎತ್ತರದ ಸಿಲಿಂಡರಾಕಾರದ ಕಬ್ಬಿಣದ ಸಂಗ್ರಣ ಘಟಕ ಕುಸಿದಿದೆ. ಈ ವೇಳೆ ಸ್ಥಳದಲ್ಲಿದ್ದ ನಾಲ್ವರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಅಲ್ಲದೇ 25 ಮಂದಿ ಘಟಕದ ಅವಶೇಷಗಳ ಅಡಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ಪೊಲೀಸರು (Police ) ಹಾಗೂ ರಕ್ಷಣಾ ಸಿಬದಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇನ್ನೂ ಅವಶೇಷಗಳ ಅಡಿ ಸಿಲುಕಿದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.
ಚಿಕ್ಕೋಡಿ\ಮುಂಬೈ: ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನೊಬ್ಬ ನೂರಾರು ಜನರ ಮುಂದೆಯೇ ಯುವತಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ (Maharashtra) ಪುಣೆ ಜಿಲ್ಲೆಯ ಯರವಾಡದಲ್ಲಿ ನಡೆದಿದೆ.
ಹತ್ಯೆಯಾದ ಯುವತಿಯನ್ನು ಕತ್ರಜ್ ನಿವಾಸಿ ಶುಭದಾ ಶಂಕರ್ ಕೊಡಾರೆ (28) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿಯನ್ನು ಕೃಷ್ಣ ಸತ್ಯನಾರಾಯಣ್ ಕನೋಜ (30) ಎಂದು ಗುರುತಿಸಲಾಗಿದೆ. ಇಬ್ಬರು ಒಂದೇ ಖಾಸಗಿ ಕಂಪನಿಯ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದರು. ಯುವಕ ಯುವತಿ ನಡುವೆ ಪ್ರೀತಿ ಹಾಗೂ ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿದೆ. ಇದೇ ಕಾರಣಕ್ಕೆ ಆರೋಪಿ ಯುವತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ ಎಂದು ತಿಳಿದು ಬಂದಿದೆ.
ಹಲ್ಲೆಯಿಂದ ಗಾಯಗೊಂಡ ಯುವತಿಯನ್ನು ಸಾರ್ವಜನಿಕರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ಚಿಕಿತ್ಸೆ ಫಲಿಸಿದೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮಚ್ಚು ಎಸೆದ ತಕ್ಷಣ, ಜನರು ಆತನನ್ನು ಹಿಡಿದು, ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಜ.7ರ ಸಂಜೆ ಈ ಘಟನೆ ನಡೆದಿದ್ದು, ಚಾಕು ಇರಿಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಳ್ಳಾರಿ: ಲೋಕಾಯುಕ್ತ ಪೊಲೀಸರು (Lokayukta Police) ಬಳ್ಳಾರಿಯ ತಾಲೂಕು ಬಿಸಿಎಂ ಅಧಿಕಾರಿ ಲೋಕೇಶ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬಳ್ಳಾರಿಯ (Ballari) ರಾಮಾಂಜನೇಯ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ವಾರ್ಡನ್ ಆಗಿ ನೇಮಕವಾಗಿದ್ದ ಲೋಕೇಶ್ ಈಗ ಬಿಸಿಎಂ (BCM) ಅಧಿಕಾರಿಯಾಗಿದ್ದಾರೆ. ಲೋಕೇಶ್ ಸರ್ಕಾರಿ ಕೆಲಸ ಮಾಡುತ್ತಿದ್ದರೂ ವರ್ಗಾವಣೆ ಮಾಡುವುದು, ಮಾಡಿಸುವುದೇ ಕಾಯಕ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಇದನ್ನೂ ಓದಿ: 8 ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾ ದಾಳಿ – ಯಾರ ಮೇಲೆ ದಾಳಿ?
ಲೋಕೇಶ್ ಹುಟ್ಟುಹಬ್ಬಕ್ಕೆ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿನಿಯರು ಹೂವಿನ ಮಳೆ ಸುರಿಸುತ್ತಿದ್ದರು. ಹೂ ಮಳೆ ಸುರಿಸದೇ ಇದ್ದರೆ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದರು. ಕೇವಲ ವಿದ್ಯಾರ್ಥಿನಿಯರಷ್ಟೇ ಅಲ್ಲ, ಮಹಿಳಾ ಸಿಬ್ಬಂದಿಗೂ ಕಿರುಕುಳ ನೀಡುತ್ತಿದ್ದರೂ ಎಂಬ ಗಂಭೀರ ಆರೋಪ ಈಗ ಕೇಳಿ ಬರುತ್ತಿದೆ.
ಚಿಕ್ಕಮಗಳೂರು: ಕರ್ನಾಟಕದಲ್ಲಿ ಆರು ನಕ್ಸಲರು (Six Naxals) ಮುಖ್ಯ ವಾಹಿನಿಗೆ ಬರಲು ಮುಂದಾಗಿದ್ದಾರೆ. ವಿಕ್ರಂಗೌಡ (Vikram Gowda) ಎನ್ಕೌಂಟರ್ ಪ್ರಕರಣದ ಬೆನ್ನಲ್ಲೇ ಕರ್ನಾಟಕದ (Karnataka) ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ತಮಿಳುನಾಡಿನ ಕೆ ವಸಂತ ಮತ್ತು ಕೇರಳದ ಟಿಎನ್ ಜೀಶಾ ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬರಲು ಒಪ್ಪಿದ್ದಾರೆ.
ಯಾರ ಮೇಲೆ ಏನು ಕೇಸ್?
ಮುಂಡಗಾರು ಲತಾ (Mundagaru Latha) ವಿರುದ್ಧ 59 ಪ್ರಕರಣಗಳು ದಾಖಲಾಗಿವೆ. ಸುಂದರಿ (Sundari) ವಿರುದ್ಧ ಉಡುಪಿ, ದ.ಕನ್ನಡದಲ್ಲಿ 3 ಕೇಸ್ಗಳು, ಜಯಣ್ಣ ಮೇಲೆ ಉಡುಪಿ, ಮಂಗಳೂರಿನಲ್ಲಿ 3 ಪ್ರಕರಣಗಳಿವೆ, ವನಜಾಕ್ಷಿ ವಿರುದ್ಧ15 ಕೇಸ್ ದಾಖಲಾಗಿವೆ. ಕೆ.ವಸಂತ ಮತ್ತು ಟಿ.ಎನ್. ಜೀಶಾ ವಿರುದ್ಧ ಹಲವು ಕೇಸ್ಗಳಿವೆ.
ಮುಂಡಗಾರು ಲತಾ
ಮುಂಡಗಾರು ಲತಾ ಶೃಂಗೇರಿಯ ಜೆ.ಸಿ.ಬಿ.ಎಂ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಪಿಯುಸಿ ವ್ಯಾಸಂಗ ಅರ್ಧಕ್ಕೆ ಮೊಟಕುಗೂಳಿಸಿದ್ದಾರೆ. ಕುದುರೆಮುಖ ವಿಮೋಚನಾ ಚಳುವಳಿ ಮುಖಾಂತರ ನಕ್ಸಲ್ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಉಳಿಸಿ ವಿರೋಧಿ ಹೋರಾಟ ಸಮಿತಿಯ ನಾಯಕಿಯಾಗಿದ್ದರು.
ಸುಂದರಿ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕುತ್ಲೂರಿನ ನಿವಾಸಿಯಾಗಿದ್ದ ಸುಂದರಿ ಸಹೋದರ ವಸಂತ ಅಲಿಯಾಸ್ ಆನಂದ್ ಕೂಡ ನಕ್ಸಲ್ ಆಗಿದ್ದನು. ಸಹೋದರನ ಹಿಂದೆಯೇ ಸುಂದರಿ ಕೂಡ ನಕ್ಸಲ್ ಚಟುವಟಿಕೆಗೆ ಎಂಟ್ರಿಯಾಗಿದ್ದರು. 2010ರ ಎನ್ಕೌಂಟರ್ನಲ್ಲಿ ಆನಂದ್ ಹತ್ಯೆಯಾಗಿದ್ದ. ಸದ್ಯ ಕುದುರೆಮುಖ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಾಯಕಿ ಸುಂದರಿ ಇದ್ದಾರೆ.
ವನಜಾಕ್ಷಿ
ಭೂ ಮಾಲೀಕರ ವಿರುದ್ಧ ಹೋರಾಟಕ್ಕೆ ಧುಮುಕಿ ನಕ್ಸಲರ ಹಾದಿಗೆ ಎಂಟ್ರಿ. ವಿದ್ಯಾಭ್ಯಾಸಕ್ಕೂ ಕೊರತೆಯಾಗಿದ್ದ ವನಜಾಕ್ಷಿ ಉಳ್ಳವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ನಕ್ಸಲಿಸಂಗೆ ಎಂಟ್ರಿಯಾಗಿ ಅಲ್ಲಿಂದ ಹೋರಾಟದಲ್ಲಿ ನಿರಂತರವಾಗಿ ಸಾಗಿದ್ದರು.
ಮಾರೆಪ್ಪ ಅರೋಳಿ @ ಜಯಣ್ಣ
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಆರೋಳಿ ಗ್ರಾಮದ ನಿವಾಸಿಯಾ ಮಾರೆಪ್ಪ ಬಡವರ ಮೇಲೆ ಶ್ರೀಮಂತರ ದಬ್ಬಾಳಿಕೆ ವಿರೋಧಿಸಿ ನಕ್ಸಲಿಸಂಗೆ ಎಂಟ್ರಿಯಾಗಿದ್ದರು. ಪಶ್ಚಿಮ ಘಟಗಳ ಆದಿವಾಸಿಗಳ ಹಕ್ಕುಗಳಿಗೆ ನಕ್ಸಲ್ ಚಳುವಳಿಯಲ್ಲಿ ಭಾಗಿ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಉಳಿಸಿ ವಿರೋಧಿ ಹೋರಾಟದಲ್ಲೂ ಸಕ್ರಿಯ
ಕೆ.ವಸಂತ
ಮೂಲತಃ ತಮಿಳುನಾಡಿನವರಾಗಿರುವ ಕೆ ವಸಂತ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಉಳಿಸಿ ವಿರೋಧಿ ಹೋರಾಟದಲ್ಲಿ ಸಕ್ರಿಯ.
ಟಿ.ಎನ್. ಜೀಶಾ
ಕೇರಳದ ಮೂಲದವರಾಗಿದ್ದು ನಕ್ಸಲ್ ಹೋರಾಟದ ಮೂಲಕ ರಾಜ್ಯಕ್ಕೆ ಎಂಟ್ರಿ. ಕರ್ನಾಟಕದ ಕರಾವಳಿ ಭಾಗದ ಹೋರಾಟದಲ್ಲೂ ಸಕ್ರಿಯ.
ಮಂಗಳೂರು: ಪಿಸ್ತೂಲ್ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು (Mangaluru) ಹೊರವಲಯದ ಮೂಡುಶೆಡ್ಡೆ ಎಂಬಲ್ಲಿ ನಡೆದಿದೆ.
ಗಾಯಾಳುವನ್ನು ಸಫ್ವಾನ್ (25) ಎಂದು ಗುರುತಿಸಲಾಗಿದೆ. ಸೆಕೆಂಡ್ ಹ್ಯಾಂಡ್ ವಸ್ತುಗಳ ಮಾರಾಟ ಮಳಿಗೆಯಲ್ಲಿ ಈ ಘಟನೆ ನಡೆದಿದೆ. ಪರವಾನಗಿ ಹೊಂದಿರುವ ಪಿಸ್ತೂಲ್ನಿಂದ ಗುಂಡು ಸಿಡಿದಿದೆ ಎಂದು ತಿಳಿದು ಬಂದಿದೆ. ಪಿಸ್ತೂಲ್ ಕ್ಲೀನ್ ಮಾಡುವಾಗ ಆಕಸ್ಮಿಕವಾಗಿ ಗುಂಡು ಹಾರಿದೆ ಎಂದು ಶಂಕಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಸಫ್ವಾನ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿ ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಪೊಲೀಸರು (Police) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಚಿಕ್ಕಮಗಳೂರು: ಎಸ್ಟೇಟ್ ಮ್ಯಾನೇಜರ್ ಒಬ್ಬರ ಮೇಲೆ ಅಕ್ರಮ ಬಾಂಗ್ಲಾ ವಲಸಿಗರು (Illegal Bangladeshi immigrants) ಕಲ್ಲು ತೂರಾಟ ನಡೆಸಿದ ಘಟನೆ ಕೊಪ್ಪ (Koppa) ತಾಲೂಕಿನ ಹೂವಿನಗುಂಡಿ ಗ್ರಾಮದಲ್ಲಿ ನಡೆದಿದೆ.
ಅಕ್ರಮ ಬಾಂಗ್ಲಾ ವಲಸಿಗರಿಂದ ಕಲ್ಲು ತೂರಾಟಕ್ಕೊಳಗಾದ ಎಸ್ಟೇಟ್ ಮ್ಯಾನೇಜರ್ನನ್ನು ಕೀರ್ತಿರಾಜ್ ಎಂದು ಗುರುತಿಸಲಾಗಿದೆ. ಇಷ್ಟೇ ಅಲ್ಲದೇ ಮರದ ದಿಮ್ಮೆಯಿಂದ ಹಲ್ಲೆಗೆ ಯತ್ನಿಸಲಾಗಿದೆ. ಸುಮಾರು 50 ಜನರಿಂದ ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಿದ್ದಾರೆ.
ಕೀರ್ತಿರಾಜ್ ಹಾಗೂ ಭದ್ರಾ ಎಸ್ಟೇಟ್ ಮಧ್ಯೆ ಜಮೀನು ವಿವಾದ ಇತ್ತು. 50 ವರ್ಷದ ವಿವಾದ ಹೈಕೋರ್ಟಿನಲ್ಲಿ ಸುಬ್ಬಣ್ಣ ಅವರ ಪರ ಆಗಿತ್ತು. ಸುಬ್ಬಣ್ಣ ಅವರ ಮಗ ಕೀರ್ತಿರಾಜ್ ತೋಟಕ್ಕೆ ಹೋದಾಗ ಕಲ್ಲು ತೂರಾಟ ನಡೆದಿದೆ. ಕಲ್ಲೇಟಿನಿಂದ ಗಾಯಗೊಂಡಿರುವ ಕೀರ್ತಿರಾಜ್ ಅವರನ್ನು ಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಸ್ಸಾಂನವರು ಎಂದು ಇಲ್ಲಿಗೆ ಕೆಲಸಕ್ಕೆ ಬರುತ್ತಾರೆ. ಅವರೆಲ್ಲಾ ಅಕ್ರಮ ಬಾಂಗ್ಲಾ ನಿವಾಸಿಗಳು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯೊಬ್ಬಳನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಸಕಲೇಶಪುರದ (Sakleshpura) ಇಬ್ಬಡಿ ಕೊಣ್ಣೂರು ಗ್ರಾಮದ ಬಳಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಅನಿತಾ (35) ಎಂದು ಗುರುತಿಸಲಾಗಿದೆ. ಭಾನುವಾರ ಬಾಕ್ಸ್ನಲ್ಲಿ ಊಟ ತುಂಬಿಕೊಂಡು ಗದ್ದೆ ಕೆಲಸಕ್ಕೆ ಮಹಿಳೆ ತೆರಳಿದ್ದಳು. ಆದರೆ ರಾತ್ರಿಯಾದರೂ ಆಕೆ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ಮಹಿಳೆಯ ಪತಿ ಚಂದ್ರಶೇಖರ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಬಳಿಕ ಹುಡುಕಾಟ ನಡೆಸಿದ್ದ. ಹುಡುಕಾಟ ನಡೆಸುತ್ತಿದ್ದ ವೇಳೆ ಹೊಳೆ ಸಾಲಿನಲ್ಲಿ ಅನಿತಾ ಮೃತದೇಹ ಪತ್ತೆಯಾಗಿತ್ತು.
ಹನ್ನೆರಡು ವರ್ಷದ ಹಿಂದೆ ಇಬ್ಬಡಿ ಕೊಣ್ಣೂರು ಗ್ರಾಮದ ಚಂದ್ರಶೇಖರ್ ಹೆಬ್ಬಸಾಲೆ ಗ್ರಾಮದ ಅನಿತಾ ಜೊತೆ ಮದುವೆಯಾಗಿದ್ದ. ಅಕ್ರಮ ಸಂಬಂಧದ ವಿಚಾರಕ್ಕೆ ಪತ್ನಿಯನ್ನೇ ಚಂದ್ರಶೇಖರ್ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಎರಡು ವರ್ಷ ಹಿಂದೆ ಜಮೀನು ವಿಚಾರವಾಗಿ ಒಡಹುಟ್ಟಿದ ಅಣ್ಣನ ಪತ್ನಿಯನ್ನೇ ಚಂದ್ರಶೇಖರ್ ಕೊಲೆಗೈದಿದ್ದ.
ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ್ (Dr.Dhananjaya Sarji) ಸರ್ಜಿ ಹೆಸರಿನಲ್ಲಿ ಮೂರು ಮಂದಿ ಗಣ್ಯರಿಗೆ ಹೊಸ ವರ್ಷಕ್ಕೆ ವಿಷಪೂರಿತ ಸ್ವೀಟ್ ಬಾಕ್ಸ್ ಕಳುಹಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಲವ್ ಬ್ರೇಕಪ್ ಆಗಿದ್ದಕ್ಕೆ ಈ ಕೃತ್ಯ ಎಸಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಭದ್ರಾವತಿ (Bhadravathi) ಮೂಲದ ಸೌಹಾರ್ದ ಪಟೇಲ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆರೋಪಿ ವೈದ್ಯರೊಬ್ಬರ ಪುತ್ರಿಯನ್ನು ಪ್ರೀತಿಸುತ್ತಿದ್ದ. ಇದು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಎಂಬವರಿಗೆ ಗೊತ್ತಾಗಿ ಆತನ ಪೋಷಕರನ್ನು ಕರೆಸಿ ತಿಳುವಳಿಕೆ ಹೇಳಿದ್ದರು. ಬಳಿಕ ಹುಡುಗಿಯ ಸಹವಾಸ ಬಿಡಿಸಿದ್ದರು.
ಇದೇ ವಿಚಾರಕ್ಕೆ ನಾಗರಾಜ್ ಮೇಲೆ ಆರೋಪಿ ಕೋಪಗೊಂಡಿದ್ದ. ಇದಾದ ನಂತರ ಆರೋಪಿ ಮಾನಸಿಕ ರೋಗದಿಂದ ಬಳಲುತ್ತಿದ್ದ. ಆತನ ಪೋಷಕರು ಮಾನಸಿಕ ತಜ್ಞರಾದ ಡಾ. ಅರವಿಂದ್ ಹಾಗೂ ಡಾ.ಪವಿತ್ರ ಬಳಿ ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆ ವೇಳೆ ತನಗೆ ಸಾಕಷ್ಟು ಮಾತ್ರೆ ನುಂಗುವಂತೆ ಮಾಡಿದ್ದಾರೆ ಎಂದು ಆರೋಪಿ ಕೋಪಗೊಂಡಿದ್ದ. ಜೊತೆಗೆ ಈ ಮೂವರು ಗಣ್ಯರಿಗೆ ಎಂಎಲ್ಸಿ ಡಾ.ಧನಂಜಯ್ ಸರ್ಜಿಯವರು ಆಪ್ತರು ಎಂಬ ವಿಷಯ ಮನಗಂಡು ಅವರ ಹೆಸರಿನಲ್ಲಿ ವಿಷಪೂರಿತ ಸ್ವೀಟ್ನ್ನು ಕೊರಿಯರ್ ಮಾಡಿದ್ದಾನೆ ಎಂಬುದು ತಿಳಿದು ಬಂದಿದೆ.
ಏನಿದು ಪ್ರಕರಣ?
ಬಿಜೆಪಿ ಎಂಎಲ್ಸಿ ಹಾಗೂ ಖ್ಯಾತ ಮಕ್ಕಳ ವೈದ್ಯ ಡಾ.ಸರ್ಜಿ ಅವರ ಹೆಸರಿನಲ್ಲಿ ಹೊಸ ವರ್ಷಕ್ಕೆ ಶುಭಾಶಯ ಕೋರಿ ಶಿಕ್ಷಣ ಸಂಸ್ಥೆಯೊಂದರ ಕಾರ್ಯದರ್ಶಿ ನಾಗರಾಜ್, ವೈದ್ಯರಾದ ಡಾ.ಅರವಿಂದ್, ಡಾ.ಪವಿತ್ರ ಅವರ ಹೆಸರಿಗೆ ಭದ್ರಾವತಿಯಿಂದ ಸ್ವೀಟ್ ಬಾಕ್ಸ್ ಕೊರಿಯರ್ ಮಾಡಲಾಗಿತ್ತು. ನಾಗರಾಜ್ ಅವರು ಸರ್ಜಿ ಅವರು ಸ್ವೀಟ್ ಕಳುಹಿಸಿದ್ದಾರೆ ಎಂದು ಬಾಕ್ಸ್ ತೆರೆದು ಸ್ವಲ್ಪ ತಿಂದಿದ್ದಾರೆ. ಆದರೆ ಅದು ಪೂರ್ತಿ ಕಹಿಯಾಗಿತ್ತು. ತಕ್ಷಣ ತಮಗಾದ ಅನುಭವವನ್ನು ನಾಗರಾಜ್ ಅವರು ಮತ್ತೊಬ್ಬ ಎಂಎಲ್ಸಿ ಡಿ.ಎಸ್.ಅರುಣ್ ಅವರ ಗಮನಕ್ಕೆ ತಂದಿದ್ದರು. ಅರುಣ್ ಅವರು ಸರ್ಜಿ ಅವರಿಗೆ ದೂರವಾಣಿ ಕರೆ ಮಾಡಿ ಯಾವ ಅಂಗಡಿಯಿಂದ ಸ್ವೀಟ್ ಖರೀದಿ ಮಾಡಿದ್ದೀರಿ. ಅದು ಪೂರ್ತಿ ಕಹಿ ಇದೆಯಂತೆ ಎಂದಿದ್ದಾರೆ. ತಕ್ಷಣ ಎಚ್ಚೆತ್ತ ಸರ್ಜಿ ಅವರು ನಾನು ಯಾವುದೇ ಸ್ವೀಟ್ ಕಳುಹಿಸಿಲ್ಲ ಎಂದಿದ್ದರು.
ಸರ್ಜಿಯವರು ತಮ್ಮ ಆಪ್ತ ಕಾರ್ಯದರ್ಶಿ ಅವರಿಂದ ಕೋಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದರು. ಇದೀಗ ಆರೋಪಿಯನ್ನು ಬಂಧಿಸಿದ್ದು, ಆರೋಪಿಯನ್ನು ಪೊಲೀಸರು (Police) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಶಿವಮೊಗ್ಗ: ಕೌಟುಂಬಿಕ ಕಲಹದಿಂದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೊರಬ(Sorab) ತಾಲೂಕಿನ ಶಿವಪುರದಲ್ಲಿ ನಡೆದಿದೆ.
ನೇಣಿಗೆ ಶರಣಾದ ಮಹಿಳೆಯನ್ನು ಶೈಲಜಾ (28) ಎಂದು ಗುರುತಿಸಲಾಗಿದೆ. ಮೃತಳ ಪತಿ (Husband) ಹಾಗೂ ಅತ್ತೆ ಮಹಿಳೆಗೆ ಹೊಡೆದು ಹತ್ಯೆಗೈದು ನೇಣು ಬಿಗಿದಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಪ್ರಕರಣದ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಅಲ್ಲದೇ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಸೊರಬ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.