Tag: Police Commissioner

  • ನಾನು ಕನ್ನಡಿಗ, ಇಲ್ಲೇ ಹುಟ್ಟಿದ್ದೀನಿ ಇಲ್ಲೇ ಸಾಯ್ತಿನಿ: ಭಾಸ್ಕರ್ ರಾವ್

    ನಾನು ಕನ್ನಡಿಗ, ಇಲ್ಲೇ ಹುಟ್ಟಿದ್ದೀನಿ ಇಲ್ಲೇ ಸಾಯ್ತಿನಿ: ಭಾಸ್ಕರ್ ರಾವ್

    ಬೆಂಗಳೂರು: ನಾನು ಹುಟ್ಟು ಕನ್ನಡಿಗನಾಗಿದ್ದೇನೆ. ಇಲ್ಲೇ ಹುಟ್ಟಿದ್ದೇನೆ. ಇಲ್ಲೇ ಸಾಯುತ್ತೇನೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

    ಸಿಎಎ ಮತ್ತು ಗುರುವಾರದ ಕರ್ನಾಟಕ ಬಂದ್‍ಗೆ ಭಾಸ್ಕರ್ ರಾವ್ ಅನುಮತಿ ನಿರಾಕರಿಸಿದರು. ಕೆಲ ಸಂಘಟನೆ ಮುಖ್ಯಸ್ಥರು ಪೊಲೀಸ್ ಕಮಿಷನರ್ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿಗರಂತೆ ವರ್ತಿಸುತ್ತಿದ್ದಾರೆ. ಅವರು ಬಿಜೆಪಿ ಸೇರಿಕೊಳ್ಳಲಿ. ಭಾಸ್ಕರ್ ರಾವ್ ಕನ್ನಡ ವಿರೋಧಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸಿದ ಭಾಸ್ಕರ್ ರಾವ್, ನಾನು ಹುಟ್ಟು ಕನ್ನಡಿಗ, ಇಲ್ಲೇ ಹುಟ್ಟಿದ್ದೇನೆ ಇಲ್ಲೇ ಸಾಯುತ್ತೇನೆ. ಇಲ್ಲೇ ನೌಕರಿ ಕೂಡ ಮಾಡುತ್ತಿದ್ದೀನಿ. ಯಾರೋ ಕನ್ನಡ ಪರ ಸಂಘಟನೆ ಸದಸ್ಯರಿಂದ ಕಲಿಯುವ ಆಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

    ಅಲ್ಲದೆ ಕಾನೂನು ಇರೋದು ಜನರ ರಕ್ಷಣೆಗೆಗಾಗಿ, ನಾನಿರೋದು 1 ಕೋಟಿ 44 ಲಕ್ಷ ಜನ ಬೆಂಗಳೂರಿಗರ ರಕ್ಷಣೆಗೆಗಾಗಿ. ನಿಮ್ಮಿಂದ ನಾನು ಕನ್ನಡ ಕಲಿಯೋ ಆಗತ್ಯವಿಲ್ಲ ಎಂದು ಸಂಘಟನೆ ಮುಖ್ಯಸ್ಥರ ವಿರುದ್ಧ ಗರಂ ಆದರು.

  • ಬಾಂಬ್ ಪತ್ತೆ ಪ್ರಕರಣದ ಬಗ್ಗೆ ನಾಯಕರು ಜವಾಬ್ದಾರಿ ಅರಿತು ಮಾತನಾಡಬೇಕು: ಹರ್ಷ

    ಬಾಂಬ್ ಪತ್ತೆ ಪ್ರಕರಣದ ಬಗ್ಗೆ ನಾಯಕರು ಜವಾಬ್ದಾರಿ ಅರಿತು ಮಾತನಾಡಬೇಕು: ಹರ್ಷ

    – ಕುಮಾರಸ್ವಾಮಿ ಭೇಟಿಗೆ ಸ್ಪಷ್ಟನೆ

    ಮಂಗಳೂರು: ಬಾಂಬ್ ಪತ್ತೆಯಾದ ಪ್ರಕರಣ ತುಂಬಾ ಗಂಭೀರ ವಿಷಯವಾಗಿದ್ದು, ಈ ಕುರಿತು ನಾಯಕರು ಜವಾಬ್ದಾರಿಯನ್ನರಿತು ಮಾತನಾಡಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ಮನವಿ ಮಾಡಿದ್ದಾರೆ.

    ಈ ಕುರಿತು ಎರಡು ಟ್ವೀಟ್ ಮಾಡಿರುವ ಅವರು, ಬಾಂಬ್ ಪತ್ತೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ನಾಯಕರು ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಇದು ತುಂಬಾ ಸೂಕ್ಷ್ಮ ವಿಚಾರವಾಗಿದೆ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

    ಇನ್ನೊಂದು ಟ್ವೀಟಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಕುರಿತು ಸ್ಪಷ್ಟನೆ ನೀಡಿದ ಅವರು, ಶಿಷ್ಟಾಚಾರದ ಪ್ರಕಾರ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದೇನೆ. ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾತುಕತೆ ನಡೆದಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಮನವಿ ಮಾಡಿದ್ದೇನೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೇರೆ ಯಾವುದೇ ರೀತಿಯ ಮಾತುಕತೆ ನಡೆದಿಲ್ಲ ಎಂದು ಹರ್ಷ ಸ್ಪಷ್ಟಪಡಿಸಿದ್ದಾರೆ.

    ಬಾಂಬ್ ಪತ್ತೆ ವಿಚಾರದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಎಚ್‍ಡಿಕೆ, ಹರ್ಷ ಅವರು ಇಂದು ಎಲ್ಲಿ ಬಾಂಬ್ ಪತ್ತೆ ಹಚ್ಚಿದ್ದಾರೆ, ಎಲ್ಲಾದರೂ ಬಾಂಬ್ ಸಿಕ್ಕಿದೆಯಂತಾ ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ಮಂಗ್ಳೂರು ಕಮಿಷನರ್ ಇವತ್ತು ಎಲ್ಲಾದ್ರೂ ಬಾಂಬ್ ಹಾಕ್ಸಿದ್ರಾ?- ಎಚ್‍ಡಿಕೆ ವಿವಾದಾತ್ಮಕ ಹೇಳಿಕೆ

    ಬಾಂಬ್ ಪತ್ತೆ ಕುರಿತು ಸೋಮವಾರವೂ ಪ್ರತಿಕ್ರಿಯಿಸಿದ್ದ ಅವರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವ ಕುರಿತು ಸಿಸಿಟಿವಿ ದೃಶ್ಯ ಆಧರಿಸಿ ಕೂಡಲೇ ಆರೋಪಿ ಪತ್ತೆ ಮಾಡಬೇಕು. ಇದಕ್ಕೇ ಹದಿನೈದು ದಿನ ಅಥವಾ ತಿಂಗಳ ಸಮಯ ಪಡೆದು, ಬಳಿಕ ಪೊಲೀಸರು ಮತ್ತೊಂದು ಕಥೆ ಸೃಷ್ಟಿಸಬಾರದು. ಅಲ್ಲಿ ಸುತ್ತ ಸಿಸಿಟಿವಿಗಳಿವೆ, ಬಾಂಬ್ ಯಾರು ಇಟ್ಟಿದ್ದೆಂದು ಪತ್ತೆ ಹಚ್ಚುವುದು ದೊಡ್ಡದಲ್ಲ. ತನಿಖೆ ನಡೆಸಲು ಪೊಲೀಸರು ಮತ್ತೊಂದು ತಿಂಗಳು ತೆಗೆದುಕೊಳ್ಳಬಾರದು. ನಂತರ ತಿಂಗಳು ಬಿಟ್ಟು ಮತ್ತೊಂದು ಕಥೆ ಸೃಷ್ಟಿಸಬಾರದು. ವಾಸ್ತವಾಂಶವನ್ನು ಜನರ ಮುಂದಿಡಬೇಕು ಎಂದು ಬಾಂಬ್ ಪತ್ತೆಯಾದ ಕುರಿತು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.

    ಸರ್ಕಾರ ಕೆಲ ಪೊಲೀಸರಿಂದ ಜನತೆಯಲ್ಲಿ ಗೊಂದಲದ ವಾತಾವರಣ ನಿರ್ಮಿಸುತ್ತಿದೆ ಎಂಬುದು ನನ್ನ ಭಾವನೆ. ಟೌನ್‍ಹಾಲ್ ಬಳಿ ಸಿಎಎ ವಿರುದ್ಧ ನಡೆದ ಪ್ರತಿಭಟನೆ ವೇಳೆ ಕಲ್ಲು ತೂರಿದ ಘಟನೆಗೆ ಸಂಬಂಧಿಸಿದಂತೆ ಭಾಸ್ಕರ್ ರಾವ್ ಏಳು ಕಲ್ಲುಗಳು ಬಿದ್ದಿವೆ ಎನ್ನುತ್ತಾರೆ. ಆದರೆ ಒಂದು ತಿಂಗಳಿಂದ ಯಾಕೆ ಹೇಳಿಲ್ಲ, ಒಂದು ವರ್ಗದ ಜನರನ್ನು ಓಲೈಸಲು ಅಮಾಯಕರನ್ನು ಬಲಿ ಕೊಡಲಾಗುತ್ತಿದೆ. ಅಲ್ಲಿ ಮಾಧ್ಯಮದ ಕ್ಯಾಮರಾಗಳು ಇದ್ದವು. ಕಲ್ಲು ಹೊಡೆದ ಸೂಕ್ಷ್ಮ ವಸ್ತುವು ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ದೇಶದ ಜನರ ನಡುವೆ ಪರಸ್ಪರ ಅಪನಂಬಿಕೆಯನ್ನುಂಟು ಮಾಡುವ ಕೆಲಸವನ್ನು ಸರ್ಕಾರವೇ ಮಾಡುತ್ತಿದ್ದು, ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

  • ಆಯ್ದ ವಿಡಿಯೋಗಳನ್ನು ಮಾತ್ರ ಬಿಡುಗಡೆ ಮಾಡೋದನ್ನು ನಿಲ್ಲಿಸಿ: ಪೊಲೀಸ್ ಆಯುಕ್ತ ಹರ್ಷ

    ಆಯ್ದ ವಿಡಿಯೋಗಳನ್ನು ಮಾತ್ರ ಬಿಡುಗಡೆ ಮಾಡೋದನ್ನು ನಿಲ್ಲಿಸಿ: ಪೊಲೀಸ್ ಆಯುಕ್ತ ಹರ್ಷ

    ಮಂಗಳೂರು: ನಗರದಲ್ಲಿ ಡಿಸೆಂಬರ್ 18ರಂದು ನಡೆದ ಗೋಲಿಬಾರ್ ಹಾಗೂ ಗಲಭೆಗೆ ಸಂಬಂಧಿಸಿದ ಆಯ್ದ ವಿಡಿಯೋಗಳನ್ನು ಮಾತ್ರ ಬಿಡುಗಡೆ ಮಾಡುವುದನ್ನು ನಿಲ್ಲಿಸಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ಹೇಳಿದ್ದಾರೆ.

    ಮಂಗಳೂರು ಗಲಭೆ ಸಂಬಂಧ ವಾಟ್ಸಪ್‍ನಲ್ಲಿ ಹರಿದಾಡುತ್ತಿರುವ ವಿಡಿಯೋ ಕುರಿತು ಮಾತನಾಡಿದ ಅವರು, ಇತ್ತೀಚೆಗೆ ಕೆಲವರು ಆಯ್ದ ವಿಡಿಯೋವನ್ನು ತಮಗೆ ಬೇಕಾದ ರೀತಿ ಎಡಿಟ್ ಮಾಡಿ ಬಿಡುಗಡೆ ಮಾಡಿದ್ದಾರೆ. ಗಲಭೆಗೆ ಸಂಬಂಧಿಸಿದ ವಿಡಿಯೋಗಳನ್ನು ಅನುಕ್ರಮದಲ್ಲಿ ಹಾಗೂ ಸರಿಯಾದ ಸಂದರ್ಭಗಳೊಂದಿಗೆ ಹೊಂದಿಸಿ ನೋಡದಿದ್ದರೆ ನೈಜ ಚಿತ್ರಣವನ್ನು ಅರಿಯಲು ಸಾಧ್ಯವಾಗುವುದಿಲ್ಲ ಎಂದರು.

    ಸಿಐಡಿ ಮತ್ತು ಮ್ಯಾಜಿಸ್ಟ್ರೀಯಲ್ ತನಿಖೆ ಬಳಿಕ ಮಂಗಳೂರು ಗಲಭೆಯ ಮೂಲ ಸತ್ಯ ಬಯಲಾಗಲಿದೆ. ಅಲ್ಲಿಯವರೆಗೆ ಎಡಿಟ್ ಮಾಡಿದ ವಿಡಿಯೋಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದರು.

    ಗಲಭೆಯ ಸತ್ಯಾಂಶ ಮುಂದೆ ತನಿಖೆಯಲ್ಲಿ ತಿಳಿದು ಬರಲಿದೆ. ಈಗಾಗಲೇ ಪೊಲೀಸರು ಗಲಭೆಯ ಎಲ್ಲಾ ವಿಡಿಯೋಗಳನ್ನು ತನಿಖಾ ಸಂಸ್ಥೆಗಳಿಗೆ ನೀಡಿದ್ದಾರೆ. ಡಿಸೆಂಬರ್ 19ರಂದು ಮಂಗಳೂರು ಪೊಲೀಸರು ಗಲಭೆ ನಿಯಂತ್ರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

  • ಹುಬ್ಬಳ್ಳಿಯಲ್ಲಿ ಐಪಿಎಸ್ ಅಧಿಕಾರಿಗಳ ವಾರ್

    ಹುಬ್ಬಳ್ಳಿಯಲ್ಲಿ ಐಪಿಎಸ್ ಅಧಿಕಾರಿಗಳ ವಾರ್

    ಹುಬ್ಬಳ್ಳಿ: ಧಾರವಾಡ-ಹುಬ್ಬಳ್ಳಿ ಪೊಲೀಸ್ ಆಯುಕ್ತರು ಹಾಗೂ ಉಪ ಆಯುಕ್ತರ ಮಧ್ಯೆ ವಾಗ್ವಾದ ಉಂಟಾಗಿದ್ದು, ಇಬ್ಬರು ಐಪಿಎಸ್ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಶುಕ್ರವಾರ ಹುಬ್ಬಳ್ಳಿಯ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪೊಲೀಸ್ ಕಮಿಷನರ್ ಆರ್ ದಿಲೀಪ್ ಹಾಗೂ ಡಿಸಿಪಿ ನಾಗೇಶ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಮಧ್ಯೆ ಎಸಿಪಿ ಮಲ್ಲಾಪುರೆ ಪೊಲೀಸ್ ಆಯುಕ್ತರ ವರ್ತನೆಗೆ ಬೇಸತ್ತು ಸ್ವಯಂ ನಿವೃತ್ತಿ ತೆಗೆದುಕೊಳ್ಳುವುದಾಗಿ ಆಯುಕ್ತರಿಗೆ ಎಚ್ಚರಿಕೆ ನೀಡಿರುವುದು ಐಪಿಎಸ್ ಅಧಿಕಾರಿಗಳ ವಾರ್ ಗೆ ಕಾರಣವಾಗಿದೆ ಎನ್ನಲಾಗಿದೆ.

    ನಿನ್ನೆ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಗಳ ಕಾಲ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿಸಿಪಿ, ಎಸಿಪಿ, ಪಿಐಗಳ ಸಭೆ ನಡೆಯಿತು. ಸಭೆಯಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯ ಬಂದೋಬಸ್ತ್, ಹೊಸ ವರ್ಷಾಚರಣೆ ವೇಳೆ ಕೈಗೊಂಡ ಬಂದೋಬಸ್ತ್ ಗಳ ಬಗ್ಗೆ ಅಧಿಕಾರಿಗಳ ಮಧ್ಯೆ ಚರ್ಚೆ ನಡೆದಿದೆ. ಈ ವೇಳೆ ಕಮಿಷನರ್ ಕಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲು ಮುಂದಾಗುತ್ತಿದ್ದಂತೆ ಕಮಿಷನರ್ ವರ್ತನೆ ವಿರುದ್ದ ಡಿಸಿಪಿ ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು.

    ಈ ವೇಳೆ ಇಬ್ಬರು ಐಪಿಎಸ್ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದ ಪರಿಣಾಮ ಡಿಸಿಪಿ ನಾಗೇಶ್, ನಾನು ಐಪಿಎಸ್ ಇದ್ದೀನಿ, ನನಗೆ ಹೇಗೆ ಕರ್ತವ್ಯ ನಿರ್ವಹಿಸಬೇಕು ಅನ್ನೋ ಬಗ್ಗೆ ಹೇಳಬೇಡಿ ಎಂದು ಕಮಿಷನರ್ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ ಸಭೆಯಲ್ಲಿದ್ದ ಕೆಲ ಅಧಿಕಾರಿಗಳು ಇಬ್ಬರನ್ನು ಸಮಾಧಾನಪಡಿಸಲು ಮುಂದಾದ ಪ್ರಸಂಗವೂ ನಡೆಯಿತು.

    ಸಿಟ್ಟಿನಿಂದಲೇ ಹೊರನಡೆದ ಡಿಸಿಪಿ!
    ಕಮಿಷನರ್ ಹಾಗೂ ಡಿಸಿಪಿ ಮಧ್ಯೆ ಮಾತಿನ ಚಕಮಕಿ ನಡೆದು ಇಬ್ಬರ ಮಧ್ಯೆ ವಾಗ್ವಾದ ನಡೆದ ನಂತರ ಡಿಸಿಪಿ ನಾಗೇಶ್ ಅಸಮಾಧಾನದಿಂದಲೇ ಸಭೆಯಿಂದ ಹೊರ ನಡೆದರು. ಡಿಸಿಪಿ ಸಭೆಯಿಂದ ಹೊರಬರುತ್ತಿದ್ದಂತೆಯೇ ಉಳಿದ ಕಿರಿಯ ಅಧಿಕಾರಿಗಳ ಜೊತೆ ಪೊಲೀಸ್ ಆಯುಕ್ತರು ಸಭೆಯನ್ನ ಮುಂದುವರಿಸಿದರು.

    ಪೊಲೀಸ್ ಆಯುಕ್ತ ಆರ್ ದಿಲೀಪ್ ಹಾಗೂ ಡಿಸಿಪಿ ನಾಗೇಶ್ ಮಧ್ಯೆ ಕಳೆದ ಹಲವಾರು ತಿಂಗಳಿನಿಂದ ಎಲ್ಲವೂ ಸರಿಯಿಲ್ಲದಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಆದರೆ ಎಲ್ಲ ಅಧಿಕಾರಿಗಳ ಮುಂದೆಯೂ ಇದೀಗ ಇಬ್ಬರೂ, ಒಬ್ಬರ ವಿರುದ್ಧ ಮತ್ತೊಬ್ಬರು ಅಸಮಾಧಾನ ಹೊರಹಾಕಿರುವುದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಅಧಿಕಾರಿಗಳ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋದು ಸ್ಪಷ್ಟವಾಗಿದೆ.

  • ವಿದೇಶದಿಂದ ಫೇಕ್ ಮೆಸೇಜ್ ಕಳಿಸುವವರ ವಿರುದ್ಧ ಕಠಿಣ ಕ್ರಮ: ಕಮಿಷನರ್ ಡಾ.ಪಿ.ಎಸ್.ಹರ್ಷ

    ವಿದೇಶದಿಂದ ಫೇಕ್ ಮೆಸೇಜ್ ಕಳಿಸುವವರ ವಿರುದ್ಧ ಕಠಿಣ ಕ್ರಮ: ಕಮಿಷನರ್ ಡಾ.ಪಿ.ಎಸ್.ಹರ್ಷ

    – 38 ಆರೋಪಿಗಳು ಅರೆಸ್ಟ್
    – ಅನುಮತಿ ಪಡೆದವರಿಗೆ ಮಾತ್ರ ಪ್ರತಿಭಟನೆಗೆ ಅವಕಾಶ

    ಮಂಗಳೂರು: ಪೌರತ್ವ ಮಸೂದೆ ಜಾರಿ ವಿರುದ್ಧ ವಿದೇಶದಿಂದ ಸುಳ್ಳು ಸಂದೇಶ ಕಳುಹಿಸುವವರು ಹಾಗೂ ಮಸೂದೆಯನ್ನು ಖಂಡಿಸಿ ಅನುಮತಿ ಪಡೆಯದೇ ಪ್ರತಿಭಟನೆ ನಡೆಸುವವರ ಮೇಲೆ ಪೊಲೀಸರು ನಿಗಾ ವಹಿಸಲಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತದ ಸಂವಿಧಾನದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇದೆ. ಆದ್ರೆ ಅಭಿಪ್ರಾಯ ಮಂಡಿಸುವವರು ಕಾನೂನಾತ್ಮಕವಾಗಿ ಅಭಿಪ್ರಾಯ ವ್ಯಕ್ತಪಡಿಸಬಹುದು. ಈಗಾಗಲೇ ಪ್ರತಿಭಟನೆ ನಡೆಸಲು ಅನುಮತಿ ಕೋರಿ 6 ಅರ್ಜಿ ಬಂದಿತ್ತು, ಅರ್ಜಿ ಪರಿಶೀಲಿಸಿ ಅವರಿಗೆ ಅನುಮತಿ ನೀಡಿದ್ದೇವೆ. ಆದರೆ ಕೆಲವು ಸಂಘಟನೆಯವರು ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಮಂಗಳೂರು ನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು

    ರಸ್ತೆ ತಡೆ ನಡೆಸಿದ 38 ಜನರನ್ನು ಬಂಧಿಸಿದ್ದೇವೆ. ಬೇರೆ ರಾಜ್ಯದವರು ಮಂಗಳೂರಿಗೆ ಬಂದು ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ಕೇಳಿದ ಬಗ್ಗೆಯೂ ಮಾಹಿತಿ ನೀಡಿದ ಕಮಿಷನರ್ ಅವರು ಪ್ರತಿಭಟನೆಗೆ ಅನುಮತಿ ನೀಡಿಲ್ಲ. ಇದೇ ತಿಂಗಳ 20 ರಿಂದ 23ನೇ ತಾರೀಖಿನವರೆಗೆ ವಿವಿಧ ಸಂಘಟನೆಯ ಹೆಸರಿನಲ್ಲಿ ಮಂಗಳೂರಿನ ನೆಹರು ಮೈದಾನದಲ್ಲಿ ಬೃಹತ್ ಪ್ರತಿಭಟನೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಸಂದೇಶ ಹರಿಯ ಬಿಡಲಾಗುತ್ತಿದೆ. ಅಂತವರಿಗೆ ಈಗಾಗಲೇ ನೋಟಿಸ್ ನೀಡಿದ್ದೇವೆ. ಹಾಗೂ ಪ್ರತಿಭಟನೆ ನಡೆಸುವುದಕ್ಕೆ ಯಾರು ಅನುಮತಿ ಕೋರಿಲ್ಲ ಎಂದು ಕಮಿಷನರ್ ಸ್ಪಷ್ಟಪಡಿಸಿದ್ದಾರೆ.

    ವಿದೇಶದಿಂದ ಈ ಮಸೂದೆಯ ವಿರುದ್ಧ ಫೇಕ್ ಸಂದೇಶಗಳನ್ನು ಕಳುಹಿಸುತ್ತಿರುವವರು ಯಾರು ಎಂಬುದನ್ನು ಈಗಾಗಲೇ ಪತ್ತೆಹಚ್ಚಲಾಗಿದ್ದು, ಅವರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳುತ್ತೇವೆ. ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನಾ ಎಚ್ಚರಿಕೆ ಹಿನ್ನೆಲೆಯಲ್ಲಿ ಡಿಸೆಂಬರ್ 20 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತದೆ ಎನ್ನುವ ಸುದ್ದಿ ಹಬ್ಬಿರೋದ್ರಿಂದ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಮಂಗಳೂರು ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ.

    ಇಂದು ರಾತ್ರಿ 9 ಗಂಟೆಯಿಂದ ಡಿಸೆಂಬರ್ 20 ರ ಮಧ್ಯರಾತ್ರಿ ತನಕ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಿದ್ದು ಹೆಚ್ಚಿನ ಪೊಲೀಸ್ ನಿಯೋಜನೆಯನ್ನೂ ಮಾಡಿದ್ದಾರೆ. ಅಂದು ಯಾವುದೇ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆಗಾಗಿ ಅನುಮತಿ ಪಡೆದಿಲ್ಲ. ಒಂದು ವೇಳೆ ಅನುಮತಿ ಪಡೆಯದೆ ಪ್ರತಿಭಟಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಎಚ್ಚರಿಸಿದ್ದಾರೆ.

  • ಹನಿಟ್ರ್ಯಾಪ್ ಕೇಸ್‍ನಲ್ಲಿ ಸ್ಯಾಂಡಲ್‍ವುಡ್ ನಟಿಯರು – ಶೀಘ್ರವೇ ಮೂವರ ವಿಚಾರಣೆ

    ಹನಿಟ್ರ್ಯಾಪ್ ಕೇಸ್‍ನಲ್ಲಿ ಸ್ಯಾಂಡಲ್‍ವುಡ್ ನಟಿಯರು – ಶೀಘ್ರವೇ ಮೂವರ ವಿಚಾರಣೆ

    ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು, ಹನಿಟ್ರ್ಯಾಪ್ ಕೇಸ್‍ನಲ್ಲಿ ಸ್ಯಾಂಡಲ್‍ವುಡ್ ನಟಿಯರು ಭಾಗಿಯಾಗಿದ್ದಾರೆ ಎಂಬ ಮಾಹಿತಿಯೊಂದು ಬಯಲಾಗಿದೆ.

    ಸ್ಯಾಂಡಲ್‍ವುಡ್ ನಟಿಯರ ಪಾತ್ರದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಒಬ್ಬರು ಒಂದು ಕಾಲದ ಸ್ಟಾರ್ ನಟಿ, ಇನ್ನಿಬ್ಬರು ಎರಡು ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡವರಾಗಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಇವರು ಹೆಸರುವಾಸಿಯಾಗಿದ್ದಾರೆ. ಶೀಘ್ರವೇ ಈ ಮೂವರು ನಟಿಯರನ್ನು ವಿಚಾರಣೆ ಮಾಡಲಾಗುವುದು ಎಂಬ ಸ್ಫೋಟಕ ರಹಸ್ಯವನ್ನು ಪೊಲೀಸ್ ಕಮಿಷನರ್ ಬಯಲು ಮಾಡಿದ್ದಾರೆ.

    ಹನಿಟ್ರ್ಯಾಪ್‍ನಲ್ಲಿ ಸಿಲುಕಿರುವ ಓರ್ವಳು ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದಳು. ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದ ಈಕೆಗೆ ಇತ್ತೀಚೆಗೆ ಅವಕಾಶಗಳ ಕೊರತೆ ಕಂಡುಬಂತು. ಸ್ಟಾರ್ ಹೀರೋಗಳ ಜೊತೆಗೂ ಈಕೆ ನಟಿಸಿದ್ದಾಳೆ. ಅಲ್ಲದೆ ನಿರ್ಮಾಪಕರ ಜೊತೆಗೂ ಈಕೆ ನಂಟು ಹೊಂದಿದ್ದಾಳೆ. ಈಕೆ ಕನ್ನಡದ ನಟಿಯಲ್ಲ ಬದಲಾಗಿ ಪರರಾಜ್ಯ ನಟಿಯಾಗಿದ್ದಾಳೆ.

    ಎರಡನೇಯ ನಟಿ ಕೂಡ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾಳೆ. ಹೀರೋಯಿನ್ ಜೊತೆಗೆ ಸಹನಟಿಯಾಗಿ ಅಭಿನಯ ಮಾಡಿದ್ದಾಳೆ. ಈ ನಟಿ ಕರ್ನಾಟಕ ಮೂಲದವಳು ಎಂದು ಹೇಳಲಾಗುತ್ತಿದ್ದು, ರಿಯಾಲಿಟಿ ಶೋ, ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಬಹುಬೇಡಿಕೆ ನಟಿ ಅಲ್ಲದಿದ್ದರೂ ಈಕೆಗೆ ಬೇಡಿಕೆ ಬಹಳ ಇತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

    ಮೂರನೇಯವಳು ಒಂದು ರೀತಿ ಬಹುಭಾಷಾ ನಟಿಯಾಗಿದ್ದಾಳೆ. ಹಸಿಬಿಸಿ ದೃಶ್ಯಾವಳಿಗಳಿಗೆ ಈ ನಟಿ ಹೆಸರುವಾಸಿವಾಗಿದ್ದು, ಕನ್ನಡ ಮಾತ್ರವಲ್ಲದೆ ಪರಭಾಷಾ ಚಿತ್ರಗಳಲ್ಲೂ ನಟನೆ ಮಾಡಿದ್ದಾಳೆ. ಈಕೆಗೆ ಉದ್ಯಮಿಗಳು, ಅಧಿಕಾರಿಗಳ ಜೊತೆಗೂ ನಂಟಿದೆ. ಈ ಹಿಂದೆಯೂ ಈಕೆಯ `ವ್ಯವಹಾರ’ ಭಾರೀ ಸುದ್ದಿಯಾಗಿತ್ತು ಎಂಬುದಾಗಿ ತಿಳಿದುಬಂದಿದೆ.

  • ಕರೆ ಮಾಡಿದ ಏಳು ಸೆಕೆಂಡಿನಲ್ಲಿ ಉತ್ತರ, ಒಂಬತ್ತು ನಿಮಿಷದಲ್ಲಿ ಸ್ಥಳದಲ್ಲಿ- ಭಾಸ್ಕರ್ ರಾವ್ ಭರವಸೆ

    ಕರೆ ಮಾಡಿದ ಏಳು ಸೆಕೆಂಡಿನಲ್ಲಿ ಉತ್ತರ, ಒಂಬತ್ತು ನಿಮಿಷದಲ್ಲಿ ಸ್ಥಳದಲ್ಲಿ- ಭಾಸ್ಕರ್ ರಾವ್ ಭರವಸೆ

    – ಸುರಕ್ಷ ಆ್ಯಪ್ ಬಳಸಲು ಸೂಚನೆ

    ಬೆಂಗಳೂರು: ಪಶು ವೈದ್ಯೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ನಂತರ ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದು, ಯಾರೇ ಕರೆ ಮಾಡಿದರೂ ಕೇವಲ ಏಳು ಸೆಕೆಂಡ್‍ನಲ್ಲಿ ಪೊಲೀಸರು ಉತ್ತರಿಸುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭರವಸೆ ನೀಡಿದ್ದಾರೆ.

    ಹೈದ್ರಾಬಾದ್ ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಾವುದೇ ಸಮಸ್ಯೆ ಇದ್ದರೂ ತಕ್ಷಣ ಸಹಾಯವಾಣಿ 100ಕ್ಕೆ ಕರೆ ಮಾಡಿ. ಕರೆ ಮಾಡಿದ ಏಳು ಸೆಕೆಂಡ್ ನಲ್ಲಿ ಸ್ವೀಕರಿಸಿ, ನಿಮ್ಮ ಸಮಸ್ಯೆ ಆಲಿಸುತ್ತಾರೆ. ಬೆಂಗಳೂರಿಗರು ಮಾತ್ರವಲ್ಲ ಹೊರಗಿನಿಂದ ಬಂದವರು ಸಹ ಕರೆ ಮಾಡಿ ದೂರು ನೀಡಿದರೆ ತಕ್ಷಣ ಸ್ಪಂದಿಸಲಾಗುವುದು. ಈ ಕುರಿತು ನಾನು ಶೇ.100ರಷ್ಟು ಭರವಸೆ ನೀಡುತ್ತೇನೆ. ಕರೆ ಮಾತ್ರವಲ್ಲ ಸಂದೇಶವನ್ನು ಸಹ ಕಳುಹಿಸಬಹುದು ಎಂದರು.

    ಕರೆ ಮಾಡಿದ ಕೆಲವೇ ಸೆಕೆಂಡ್‍ನಲ್ಲಿ ಉತ್ತರಿಸುತ್ತಾರೆ. ಮಾತ್ರವಲ್ಲದೆ ಕೆಲವೇ ನಿಮಿಷಗಳಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸುತ್ತಾರೆ. ಬೆಂಗಳೂರಿಗರು ಭಯ ಪಡುವ ಅಗತ್ಯವಿಲ್ಲ. ಸಾರ್ವಜನಿಕ ಪ್ರತಿಯೊಂದು ಕರೆಗೆ ನಾವು ಸ್ಪಂದಿಸುತ್ತೇವೆ. ಸಾರ್ವಜಕರು ಈ ಕ್ಷಣದಿಂದಲೆ ಕರೆ ಮಾಡಬಹುದು. ಕರೆ ಮಾಡಿದ ಒಂಬತ್ತು ನಿಮಿಷದಲ್ಲಿ ನಾವು ಸ್ಥಳಕ್ಕೆ ಬರುತ್ತೇವೆ ಎಂದು ತಿಳಿಸಿದರು.

    ಮಹಿಳೆಯರು ‘ಸುರಕ್ಷ’ ಆಪ್ ಬಳಸಬೇಕು, ಕೇವಲ ಮಹಿಳೆಯರು ಮಾತ್ರವಲ್ಲ ಪುರುಷರು ಸಹ ಈ ಆ್ಯಪ್ ಬಳಸಬೇಕು. ನಿಮಗೆ ಸಮಸ್ಯೆ ಆದಾಗ ಆಪ್ ನಿಮಗೆ ಸಹಾಯ ಮಾಡುತ್ತದೆ. ಕೇವಲ ಒಂದು ಬಟನ್ ಒತ್ತುವುದರಿಂದ ಪೊಲೀಸರು ನೀವಿದ್ದ ಸ್ಥಳಕ್ಕೆ ಬರುತ್ತಾರೆ. ಅಲ್ಲದೆ ನಿಮ್ಮ ಮೊಬೈಲ್ ಕ್ಯಾಮೆರಾ ಆನ್ ಅಗುತ್ತೆ, ನಿಮಗೆ ಏನಾಗಿದೆ ಎಂಬುದು ಕಂಟ್ರೋಲ್ ರೂಮ್ ನಲ್ಲಿರುವವರಿಗೆ ತಿಳಿಯುತ್ತದೆ. ಎಲ್ಲರೂ ಇದನ್ನು ಬಳಸಬೇಕು ಎಂದರು.

    26 ವರ್ಷದ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮಹ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು 14 ದಿನಗಳ ಕಾಲ ರಿಮ್ಯಾಂಡ್‍ನಲ್ಲಿ ಇರಿಸುವಂತೆ ಕೋರ್ಟ್ ಆದೇಶಿಸಿದೆ.

    ರಿಮ್ಯಾಂಡ್ ಹೋಂನಲ್ಲಿ ಆರೋಪಿಗಳಿಂದ ಪೊಲೀಸರು ಸತ್ಯ ಕಕ್ಕಿಸುತ್ತಿದ್ದು, ತೆಲಂಗಾಣ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಉಸಿರುಗಟ್ಟಿಸಿ ಕೊಂದ ಮೇಲೂ ಪಾಪಿಗಳು ಶವವನ್ನೂ ಬಿಡದೆ ಅತ್ಯಾಚಾರಗೈದಿದ್ದರು ಎನ್ನುವ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ. ದಿನ ಕಳೆದಂತೆ ಆರೋಪಿಗಳು ಪೊಲೀಸರ ಬಳಿ ಪಶುವೈದ್ಯೆಗೆ ಯಾವ ರೀತಿಯಲ್ಲೆಲ್ಲ ಹಿಂಸೆಕೊಟ್ಟು ಕೊಲೆ ಮಾಡಲಾಯ್ತು ಎನ್ನುವ ಸತ್ಯವನ್ನು ಬಾಯಿಬಿಡುತ್ತಿದ್ದಾರೆ. ಪ್ರಕರಣವನ್ನು ಪಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ವಿಚಾರಣೆ ನಡೆಸಬೇಕೆಂದು ಹೋರಾಟ ನಡೆಸಲಾಗುತ್ತಿದ್ದು, ವಿವಿಧ ರಾಜಕೀಯ ನಾಯಕರು ಸಹ ಈ ಕುರಿತು ಒತ್ತಾಯಿಸುತ್ತಿದ್ದಾರೆ.

  • ಮಕ್ಕಳ ಜೊತೆ ಮಕ್ಳಾಗೋಕೆ ಕರೆಸಿದ್ದೀರಿ ಅನಿಸತ್ತೆ- ಯಶ್

    ಮಕ್ಕಳ ಜೊತೆ ಮಕ್ಳಾಗೋಕೆ ಕರೆಸಿದ್ದೀರಿ ಅನಿಸತ್ತೆ- ಯಶ್

    ಬೆಂಗಳೂರು: ನಗರದ ಇನ್ ಫ್ಯಾಂಟ್ರಿ ರಸ್ತೆಯ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಮಕ್ಕಳ ಜಾತ್ರೆ ಕಾರ್ಯಕ್ರಮದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್, ಕೆಜಿಎಫ್ ಚಿತ್ರದ ಡೈಲಾಗ್ ಹೇಳಿ ಮಕ್ಕಳನ್ನು ರಂಜಿಸಿದ್ದಾರೆ.

    ಇಂದು ಮಕ್ಕಳ ದಿನಾಚರಣೆ ಹಿನ್ನಲೆಯಲ್ಲಿ ನಗರ ಪೊಲೀಸ್ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯಶ್, ಮೊದಲು ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸಿದರು.

    ನಮ್ಮನ್ನ ಮಕ್ಕಳ ದಿನಾಚರಣೆಗೆ ಕರೆಸಿದ್ದು ನನ್ನನ್ನು ಮಕ್ಕಳ ಜೊತೆ ಮಕ್ಕಳಾಗೋಕೆ ಅನಿಸ್ತಿದೆ. ಪೊಲೀಸರ ಕೆಲಸ ತುಂಬಾ ರಿಸ್ಕಿ ಕೆಲಸವಾಗಿದೆ. ನಮ್ಮ ರಕ್ಷಣೆಗೆ ಪೊಲೀಸರು ಸದಾ ದುಡಿಯುತ್ತಿರುತ್ತಾರೆ. ಪರಿಹಾರ ಸಂಸ್ಥೆ ತುಂಬಾ ಒಳ್ಳೆ ಕೆಲಸ ಮಾಡುತ್ತಿದೆ ಎಂದರು.


    ಕಮಿಷನರ್ ಕಚೇರಿಯಲ್ಲಿ ಮಕ್ಕಳ ದಿನಾಚರಣೆ ಆಚರಿಸುತ್ತಿರುವುದು ತುಂಬಾ ಖುಷಿಯ ವಿಚಾರ. ಮಕ್ಕಳು ಪೊಲೀಸರು ಬಂದರೆ ಹೆದರಿಕೊಳ್ಳಬಾರದು, ಧೈರ್ಯ ಬರುತ್ತೆ ಅಂದುಕೊಳ್ಳಬೇಕು ಎಂದು ತಿಳಿಸಿದರು.

    ಇದೇ ವೇಳೆ ಕೆಜಿಎಫ್ ಚಿತ್ರದ ಡೈಲಾಗ್ ಹೊಡೆದರು. ‘ಹತ್ತು ಜನರನ್ನ ಹೊಡೆದು ಡಾನ್ ಆದವನಲ್ಲ ನಾನು. ನಾನು ಹೊಡೆದಿರೋ ಹತ್ತು ಜನನೂ ಡಾನೇ..’ ಎಂದಾಗ ನೆರೆದಿದ್ದವರು ಶಿಳ್ಳೆ ಹೊಡೆದರು. ಈ ಮೂಲಕ ಕಾರ್ಯಕ್ರಮದಲ್ಲಿ ಕೆಜಿಎಫ್ ಚಿತ್ರದ ಡೈಲಾಗ್ ಹೇಳಿ ಮಕ್ಕಳನ್ನ ರಂಜಿಸಿದರು.

    ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಮಕ್ಕಳೆಲ್ಲರಿಗೂ ಶುಭಾಶಯಗಳು. ಯಶ್ ಅವರಿಗೂ ಶುಭಾಶಯಗಳು. ಹೆಣ್ಮಕ್ಕಳಿಗೆ ಧೈರ್ಯ ಇರಬೇಕು. ನಿಮ್ಮನ್ನು ಇಲ್ಲಿಗೆ ಕರೆಸಲು ಉದ್ದೇಶ ಇದೆ. ನಿಮಗೆ ಪೊಲೀಸರು ಅಂದರೆ ನಿಮ್ಮ ಸ್ನೇಹಿತರಿದ್ದ ಹಾಗೆ. ಇದು ದೊಡ್ಡ ಕಚೇರಿ ಅದಕ್ಕೆ ನಿಮಗೆ ಧೈರ್ಯ ಬರಲಿ ಅಂತ ಕರೆಸಿದ್ದು. ಮಕ್ಕಳ ಹಾಗೂ ಮಹಿಳೆಯರ ಸುರಕ್ಷತೆ ಬಗ್ಗೆ ನಾವು ಇನ್ನು ಹೆಚ್ಚಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

    ಕಾರ್ಯಕ್ರಮದಲ್ಲಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೆಚ್ಚುವರಿ ಆಯುಕ್ತ ಉಮೇಶ್ ಉಪಸ್ಥಿತರಿದ್ದರು.

  • ನವೆಂಬರ್ 10 ರಂದು ಬೆಂಗಳೂರಿನಾದ್ಯಂತ ಮದ್ಯ ಮಾರಾಟ ಬಂದ್

    ನವೆಂಬರ್ 10 ರಂದು ಬೆಂಗಳೂರಿನಾದ್ಯಂತ ಮದ್ಯ ಮಾರಾಟ ಬಂದ್

    ಬೆಂಗಳೂರು: ನವೆಂಬರ್ 10 ರಂದು ಬೆಂಗಳೂರಿನಾದ್ಯಂತ ಬೆಳಗ್ಗೆ 6 ಗಂಟೆಯಿAದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

    ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಆದೇಶ ಹೊರಡಿಸಿದ್ದಾರೆ. ನವೆಂಬರ್ 10 ರಂದು ಮುಸ್ಲಿಂ ರ ಹಬ್ಬ ಈದ್ ಮಿಲಾದ್ ಇರುವ ಕಾರಣ ಅಂದು ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೂ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಆದೇಶದಲ್ಲಿ ಏನಿದೆ?
    ನ.10 ರಂದು ಬೆಂಗಳೂರು ನಗರಾದ್ಯಂತ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಆಚರಿಸುವ ಪ್ರಯುಕ್ತ ಮಸೀದಿಗಳಲ್ಲಿ ಪ್ರಾರ್ಥನೆ ಮುಗಿಸಿ ನಂತರ ಮೆರವಣಿಗಯಲ್ಲಿ ಸ್ಥಬ್ಧ ಚಿತ್ರಗಳು ಧ್ವನಿ ವರ್ಧಕಗಳನ್ನು ಉಪಯೋಗಿಸಿಕೊಂಡು, ಆಯುಧಗಳನ್ನು ಹಾಗೂ ಇನ್ನಿತರೆ ವಸ್ತುಗಳನ್ನು ಪ್ರದರ್ಶಿಸಿ ಕುಣಿಯುತ್ತಾ ರಸ್ತೆಗಳಲ್ಲಿ ವಾಹನಗಳಲ್ಲಿ ನಡಿಗೆಯಲ್ಲಿ ವೈಎಂಸಿಎ ಮೈದಾನ ಹಾಗೂ ನಗರದ ಇತರೆ ಮೈದಾನಗಳಲ್ಲಿ ನಡೆಯುವ ಕಾರ್ಯಕ್ರದಲ್ಲಿ ಭಾಗವಹಿಸಲಿದ್ದಾರೆ.

    ಈ ಮೆರವಣಿಗೆಯಲ್ಲಿ ಹೆಚ್ಚಿನ ಜನರು ಭಾಗವಹಿಸಲಿದ್ದು, ಮೆರವಣಿಗೆ ನಡೆಯುವ ಸಮಯದಲ್ಲಿ ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಕೃತ್ಯಗಳನ್ನೆಸಗಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ಸಂಭವಿರುತ್ತದೆ. ಈದ್ ಮಿಲಾದ್ ಮೆರವಣಿಗೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಉದ್ದೇಶದಿಂದ ಹಾಗೂ ಕಾನೂನು ಸುವ್ಯಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮದ್ಯಪಾನ ಮಾರಾಟವನ್ನು ನಿಷೇಧಿಸುವುದು ಸೂಕ್ತವೆಂದು ಈ ನಿರ್ಧಾರ ಮಾಡಲಾಗಿದೆ ಎಂದು ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

    ಭಾರತೀಯದಂಡ ಪ್ರಕ್ರಿಯ ಸಂಹಿತೆ ಕಲಂ 144 ರ ಉಪ ಕಲಂ (1) ಮತ್ತು (3) ರ ಅನ್ವಯ ದಿನಾಂಕ 10.11.2019 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ಬಾರ್‌ಗಳು, ವೈನ್ಸ್ಶಾಪ್‌ಗಳು, ಪಬ್‌ಗಳು ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಬೇಕು ಎಂದು ತಿಳಿಸಲಾಗಿದೆ.

  • ಪೊಲೀಸ್ ಕಮಿಷನರ್‌ಗೆ ರೌಡಿ ಯಶಸ್ವಿನಿಯಿಂದ ಸನ್ಮಾನ

    ಪೊಲೀಸ್ ಕಮಿಷನರ್‌ಗೆ ರೌಡಿ ಯಶಸ್ವಿನಿಯಿಂದ ಸನ್ಮಾನ

    ಬೆಂಗಳೂರು: ಮೀಟರ್ ಬಡ್ಡಿ ದುಡ್ಡಿಗೆ ಅಮಾಯಕರ ಪ್ರಾಣ ತೆಗೆದಿದ್ದು, ಅಲ್ಲದೆ ಹಣ ಕೊಡಲಿಲ್ಲ ಅಂದರೆ ಚಪ್ಪಲಿ ಕಾಲಿನಲ್ಲೇ ಒದೀತಿದ್ದಾಕೆ ಇದೀಗ ಸಾಮಾಜಿಕ ಕಾರ್ಯಕರ್ತೆ ವೇಷ ಹಾಕಿ ಕಮಿಷನರ್ ಅವರಿಗೇ ಸನ್ಮಾನ ಮಾಡಿರುವುದು ಬೆಳಕಿಗೆ ಬಂದಿದೆ.

    ಹೌದು, ರೌಡಿ ಯಶಸ್ವಿನಿ ಬೆಂಗಳೂರು ಪೊಲೀಸ್ ಕಮಿಷನರ್‌ ಭಾಸ್ಕರ್ ರಾವ್‍ಗೆ ಸನ್ಮಾನ ಮಾಡಿದ್ದಾರೆ. ಶ್ರೀರಾಮಸೇನೆಯ ಮುತಾಲಿಕ್ ಜೊತೆ ನಿಂತು ಭಾಸ್ಕರ್ ರಾವ್ ಅವರಿಗೆ ಶಾಲು ಹೊದಿಸಿ, ಗಂಧದ ಹಾರ ಹಾಕಿದ್ದಾರೆ. ಯಶಸ್ವಿನಿ ಮತ್ತು ಈಕೆಯ ಪತಿ ದಡಿಯಾ ಮಹೇಶ್ ಅವರ ಸನ್ಮಾನವನ್ನು ನಗುಮೊಗದಿಂದಲೇ ಭಾಸ್ಕರ್ ರಾವ್ ಸ್ವೀಕರಿಸಿದ್ದಾರೆ.

    ಅಂದಹಾಗೆ, ನಿನ್ ಹೆಂಡತಿಯದ್ದು ಜಾಸ್ತಿ ಆಯ್ತು, ಬುದ್ಧಿ ಕಲಿಸೋಕೆ ಆಗಲ್ವ ಅವಳಿಗೆ ಎಂದು ಸಿಸಿಬಿ ಡಿಸಿಪಿಯಾಗಿದ್ದ ಗಿರೀಶ್ ಈ ಹಿಂದೆ ಅವಾಜ್ ಹಾಕಿದ್ದರು. ಈ ವೇಳೆ, ನನ್ ಮಾತು ಕೇಳಲ್ಲ ಸರ್ ಅವಳು, ನೀವೇ ಬುದ್ಧಿ ಕಲಿಸಿ ಅಂತ ರೌಡಿ ದಡಿಯಾ ಮಹೇಶ್ ಹೇಳಿದ್ದನು. ಅಂದು ಗಢ ಗಢ ನಡುಗಿದ್ದ ರೌಡಿಶೀಟರ್‍ಗಳು ಇಂದು ಪೊಲೀಸರಿಗೆ ಫುಲ್ ಕ್ಲೋಸ್ ಆಗಿದ್ದಾರೆ.

    ಅಲೋಕ್ ಕುಮಾರ್, ಗಿರೀಶ್ ರಂತಹ ಅಧಿಕಾರಿಗಳು ಎತ್ತಂಗಡಿಯಾಗಿದ್ದೇ ತಡ, ಕಮಿಷನರ್‌ ಗೆ ಸನ್ಮಾನ ಮಾಡೋವಷ್ಟು ಬೆಳೆದು ಬಿಟ್ಟಿದ್ದಾರೆ. ಸದ್ಯ ಶ್ರೀ ರಾಮಸೇನೆಯಲ್ಲಿ ಗುರುತಿಸಿಕೊಂಡಿರುವ ಯಶಸ್ವಿನಿ, ಈಗ ಕಮಿಷನರ್ ಗೆ ಸನ್ಮಾನ ಮಾಡಿದ ಫೊಟೊಗಳು ವೈರಲ್ ಆಗುತ್ತಿವೆ. ರೌಡಿಗಳಿಂದ ಸನ್ಮಾನ ಮಾಡಿಸಿಕೊಂಡ ಕಮಿಷನರ್‌ ಭಾಸ್ಕರ್ ರಾವ್ ನಡೆಗೆ ಆಕ್ರೋಶ ವ್ಯಕ್ತವಾಗಿದೆ.