Tag: Poison Prasada

  • ಸುಳ್ವಾಡಿ ಪ್ರಕರಣದ ಆರೋಪಿಯ ಜಾಮೀನು ಅರ್ಜಿ ವಜಾ

    ಸುಳ್ವಾಡಿ ಪ್ರಕರಣದ ಆರೋಪಿಯ ಜಾಮೀನು ಅರ್ಜಿ ವಜಾ

    ಚಾಮರಾಜನಗರ: ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿ ಅಮಾಯಕ ಭಕ್ತರ ಸಾವಿಗೆ ಕಾರಣನಾಗಿರುವ ಇಮ್ಮಡಿ ಮಹದೇವಸ್ವಾಮಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

    ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾಗೊಂಡ ಬಳಿಕ ಸುಪ್ರಿಂ ಕೋರ್ಟಿಗೆ ಇಮ್ಮಡಿ ಮಹದೇವಸ್ವಾಮಿ ದುವಾ ಅಸೋಸಿಯೆಟ್ ಮೂಲಕ ನವೆಂಬರ್ 5ರಂದು ಅರ್ಜಿ ಸಲ್ಲಿಸಲಾಗಿತ್ತು. ನವೆಂಬರ್ 21 ರಂದು ಅರ್ಜಿ ಸ್ವೀಕರಿಸಿದ್ದ ನ್ಯಾಯಾಧೀಶರಾದ ಅಜಯ್ ರಸ್ಟೋಗಿ, ಎನ್ ವಿ. ರಮಣ ಮತ್ತು ವಿ.ರಾಮಸುಬ್ರಮಣಿಯನ್ ನೇತೃತ್ವದ ತ್ರಿಸದಸ್ಯ ಪೀಠ ಇಂದು ಸುದೀರ್ಘ ವಿಚಾರಣೆ ನಡೆಸಿ, ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ನೀಡಿದೆ.

    ಡಿಸೆಂಬರ್ 14, 2018ರಂದು ಕಿಚ್‍ಗುತ್ ಮಾರಮ್ಮ ದೇಗುಲಕ್ಕೆ ಗೋಪುರ ಮತ್ತು ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈ ವೇಳೆ ಭಕ್ತರಿಗೆ ನೀಡಿದ ಪ್ರಸಾದಕ್ಕೆ ವಿಷ ಸೇರಿಸಲಾಗಿತ್ತು. ವಿಷ ಮಿಶ್ರಿತ ಆಹಾರ ಸೇವಿಸಿದ್ದ ಭಕ್ತರಲ್ಲಿ 17 ಜನರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಮಲೈ ಮಹದೇಶ್ವರ ಬೆಟ್ಟದ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಪ್ರಮುಖ ಆರೋಪಿಯಾಗಿ ಜೈಲು ಪಾಲಾಗಿದ್ದನು.

    ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ ಇಮ್ಮಡಿ ಮಹದೇವಸ್ವಾಮಿ ಜಾಮೀನಿಗಾಗಿ ಇನ್ನಿಲ್ಲದ ಹರಸಾಹಸ ಮಾಡಿದ್ದನು. ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಆರೋಪಿ ಪರ ವಕಾಲತ್ತು ವಹಿಸಲು ಸ್ಥಳೀಯವಾಗಿ ಯಾವುದೇ ವಕೀಲರು ಮುಂದೆ ಬಾರದ ಕಾರಣ, ಜಾಮೀನು ಅರ್ಜಿ ವಜಾಗೊಂಡು ರಾಜ್ಯ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು. ಇಮ್ಮಡಿ ಮಹದೇವಸ್ವಾಮಿ ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನು ಮೂಲಕ ಹೊರ ಬಂದಲ್ಲಿ ಪ್ರಕರಣದ ಸಾಕ್ಷಿಗಳನ್ನ ನಾಶ ಪಡಿಸುವ ಸಂಭವವಿದೆ ಎಂದು ತೀರ್ಪು ನೀಡಿದ್ದ ಹೈಕೋರ್ಟ್ ಜಾಮೀನು ಅರ್ಜಿಯನ್ನ ವಜಾಗೊಳಿಸಿತ್ತು.

  • ಚಿಂತಾಮಣಿ ಗಂಗಮ್ಮ ವಿಷ ಪ್ರಸಾದ ಪ್ರಕರಣಕ್ಕೆ ರೋಚಕ ಟ್ವಿಸ್ಟ್

    ಚಿಂತಾಮಣಿ ಗಂಗಮ್ಮ ವಿಷ ಪ್ರಸಾದ ಪ್ರಕರಣಕ್ಕೆ ರೋಚಕ ಟ್ವಿಸ್ಟ್

    -ಅಂದು ಅಂಬಿಕಾ, ಇಂದು ಲಕ್ಷ್ಮಿ!

    ಚಿಕ್ಕಬಳ್ಳಾಪುರ: ಚಾಮರಾಜನಗರದ ಸುಳ್ವಾಡಿಯ ಮಾರಮ್ಮ ದೇವಿ ವಿಷ ಪ್ರಸಾದ ಮಾಸುವ ಮುನ್ನವೇ ಚಿಂತಾಮಣಿ ಗಂಗಮ್ಮ ಗುಡಿ ಪ್ರಸಾದ ದುರಂತ ನಡೆದು ಹೋಯಿತು. ಪ್ರಕರಣದ ಪೊಲೀಸರ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ಪ್ರಸಾದ ತಯಾರಿಸಿ ಹಂಚಿದ ಲಕ್ಷ್ಮಿಯೇ ವಿಷಕನ್ಯೆ ಅನ್ನೋ ಅಘಾತಕಾರಿ ಅಂಶ ಬಲವಾಗುತ್ತಿದೆ. ತನ್ನ ಅನೈತಿಕ ಸಂಬಂಧ ಉಳಿಸಿಕೊಳ್ಳೊಕೆ ಪ್ರಿಯಕರನನ್ನ ಪಡೆದುಕೊಳ್ಳೋಕೆ ಲಕ್ಷ್ಮಿಯೇ ವಿಷಪ್ರಸಾದದ ಪ್ಲಾನ್ ರೂಪಿಸಿದ್ದಾಳಾ ಅನ್ನೋ ಅನುಮಾನ ವ್ಯಕ್ತವಾಗಿದೆ.

    ಸುಳ್ವಾಡಿ ವಿಷ ಪ್ರಸಾದವೇ ಸ್ಫೂರ್ತಿ ಎಂಬಂತೆ ಪ್ರಸಾದ ತಯಾರಿಸಿ ಹಂಚಿಸಿದ್ದ ಲಕ್ಷ್ಮಿ ವಿರುದ್ಧ ಅನೈತಿಕ ಸಂಬಂಧದ ಗಂಭೀರ ಆರೋಪ ಕೇಳಿ ಬಂದಿದೆ. ಚಿಂತಾಮಣಿ ಗಂಗಮ್ಮ ಗುಡಿ ಪ್ರಸಾದ ದುರಂತ ಪ್ರಕರಣದಲ್ಲಿ ಪ್ರಸಾದವೇ ವಿಷವಾಯ್ತಾ, ಇಲ್ಲ. ಪ್ರಸಾದದಲ್ಲೇ ಉದ್ದೇಶಪೂರ್ವಕವಾಗಿಯೇ ವಿಷ ಬೆರೆಸಲಾಯ್ತಾ..? ಅನ್ನೋ ಪ್ರಶ್ನೆಗೆ ಉತ್ತರ ಸಿಗುತ್ತಿದೆ. ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಅನೈತಿಕ ಸಂಬಂಧದ ವಾಸನೆ ಮೂಗಿಗೆ ಬಡಿದಿದೆ.

    ಗಂಗಮ್ಮನ ದೇಗುಲದಲ್ಲಿ ಅಮರವಾತಿ ಮೂಲಕ ಪ್ರಸಾದ ಹಂಚಿಸಿದ್ದ ಲಕ್ಷ್ಮಿಯೇ ವಿಷ ಕನ್ಯೆ ಎಂಬ ಅನುಮಾನ ದೃಢವಾಗ್ತಿದೆ. ಅಸಲಿಗೆ ಗಂಗಮ್ಮ ಗುಡಿ ಎದುರು ಮನೆಯ ಲಕ್ಷ್ಮಿಗೆ ಹಾಗೂ ದೇವಾಲಯದ ಪಕ್ಕದ ಮನೆಯ ಲೋಕೇಶ್ ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತಂತೆ. ಆದ್ರೂ ಲೋಕೇಶ್ ಎರಡೂವರೆ ವರ್ಷದ ಹಿಂದೆ ಗೌರಿಯನ್ನ ಮದುವೆಯಾಗಿದ್ದ. ಮದುವೆ ನಂತರ ಲೋಕೇಶ್ ಲಕ್ಷ್ಮಿ ಸಂಬಂಧ ಗೌರಿಗೆ ಗೊತ್ತಾಗಿ ದೊಡ್ಡ ಜಗಳವೇ ನಡೆದಿತ್ತು. ಹೀಗಾಗಿ ಮೂರೂವರೆ ತಿಂಗಳ ಹಿಂದೆ ಲೋಕೇಶ್ ಮನೆ ಬಿಟ್ಟು ಚಿಂತಾಮಣಿಯಿಂದಲೇ ನಾಪತ್ತೆಯಾಗಿದ್ದಾನೆ. ಇದು ಲಕ್ಷ್ಮಿಗೆ ಅರಗಿಸಿಕೊಳ್ಳಲಾಗಿಲ್ಲ. ಲೋಕೇಶ್ ಪತ್ನಿಯಾದ ನನ್ನನ್ನು ಮುಗಿಸಿಬಿಟ್ರೇ ತನ್ನ ಅನೈತಿಕ ಸಂಬಂಧದ ಹಾದಿ ಸುಗಮವಾಗುತ್ತೆ ಅಂತ ಲಕ್ಷ್ಮಿ ಈ ಸಂಚು ರೂಪಿಸರಬಹುದು ಎಂದು ಗೌರಿ ಆರೋಪಿಸುತ್ತಾರೆ.

    ಗೌರಿ ಕೊಲೆಗೆ ಲಕ್ಷ್ಮಿ ಸ್ಕೆಚ್!
    ಈ ಗೌರಿ ಬೇರೆ ಯಾರು ಅಲ್ಲ, ವಿಷ ದುರಂತದಲ್ಲಿ ಸಾವನ್ನಪ್ಪಿದ ಸರಸ್ವತಮ್ಮನ ಪುತ್ರ್ರಿ. ಗೌರಿ ಮೇಲೆ ಹತ್ಯಾ ಪ್ರಯತ್ನ ನಡೆಯುತ್ತಿರೋದು ಎರಡನೇ ಬಾರಿ ಎಂಬ ಮಾಹಿತಿ ಲಭ್ಯವಾಗುತ್ತಿವೆ. ಈ ಬಾರಿ ಪ್ರಸಾದಕ್ಕೆ ಬಂಗಾರಕ್ಕೆ ಬಳಸಲಾಗುವ ಸೈನೆಡ್ ಬಳಸಿದ್ಲು ಅನ್ನೋ ಸ್ಫೋಟಕ ಅಂಶ ಬಯಲಾಗಿದೆ. ಈ ಹಿಂದೆಯೂ ಗೌರಿ ಹತ್ಯೆಗೆ ಲಕ್ಷ್ಮಿ ಪ್ರಸಾದದಲ್ಲಿ ವಿಷ ಬೆರೆಸಿದ್ಳು, ಇದು ಗೊತ್ತಿಲ್ಲದೇ ತಿಂದ ಗೌರಿ, ತೀವ್ರ ವಾಂತಿಯಿಂದ ಆಸ್ಪತ್ರೆ ಸೇರಿದ್ದರು. ಇದರಿಂದ ಗಂಗಮ್ಮನ ಗುಡಿಗೆ ಹೋಗಿದ್ರೂ ಪ್ರಸಾದ ತಿನ್ನದೇ, ತನ್ನ ತಾಯಿಗೆ ಅಂತ ಸ್ವಲ್ಪ ತಂದಿದ್ದರಂತೆ. ಇದನ್ನು ತಿಂದ ಸರಸ್ವತಮ್ಮ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಕೂಡಲೇ ತಾಯಿಯನ್ನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

    ಇಷ್ಟೆಲ್ಲಾ ಅನೈತಿಕ ಸಂಬಂಧದ ಕಹಾನಿ ತಿಳಿದುಕೊಂಡಿರೋ ಪೊಲೀಸರು ಗೌರಿ ಹೇಳಿಕೆ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ. ಲಕ್ಷ್ಮಿ ಪತಿ ಮಂಜುನಾಥ್, ಲೋಕೇಶ್ ಸಂಬಂಧಿ ಚೊಕ್ಕಹಳ್ಳಿ ರವಿಯನ್ನ ವಶಕ್ಕೆ ಪಡೆದ ಪೊಲೀಸರು ನಾಪತ್ತೆಯಾಗಿರೊ ಲೋಕೇಶ್‍ಗಾಗಿ ಶೋಧ ಆರಂಭಿಸಿದ್ದಾರೆ. ಈ ನಡುವೆ ಗೌರಿ ತಂದೆ ಶಿವಪ್ಪ, ಪ್ರಸಾದದದಲ್ಲಿ ವಿಷ ಬೆರೆಸಿ ಇಬ್ಬರ ಸಾವಿಗೆ ಕಾರಣಲಾದ ಲಕ್ಷ್ಮಿಗೆ ತಕ್ಕ ಶಾಸ್ತಿ ಆಗಬೇಕು ಅಂತ ಆಗ್ರಹಿಸಿದ್ದಾರೆ.

    ಸದ್ಯ ಎಫ್ ಎಸ್ ಎಲ್ ರಿಪೋರ್ಟ್ ಸಹ ಪೊಲೀಸರ ಕೈ ಸೇರಿದೆ. ಪೊಲೀಸರ ವಶದಲ್ಲಿರೋ ವಿಷ ಕನ್ಯೆ ಸಹ ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ ಎನ್ನಲಾಗ್ತಿದೆ. ಈ ವಿಚಾರವಾಗಿ ಚಿಕ್ಕಬಳ್ಳಾಪುರ ಎಸ್ಪಿ ಇಂದು ಮಹತ್ವದ ಸುದ್ದಿಗೋಷ್ಟಿ ನಡೆಸೋ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಂಗಮ್ಮಗುಡಿ ವಿಷ ಪ್ರಸಾದ ದುರಂತಕ್ಕೆ 2ನೇ ಬಲಿ – ಇಬ್ಬರು ಮಹಿಳೆಯರು ಅರೆಸ್ಟ್!

    ಗಂಗಮ್ಮಗುಡಿ ವಿಷ ಪ್ರಸಾದ ದುರಂತಕ್ಕೆ 2ನೇ ಬಲಿ – ಇಬ್ಬರು ಮಹಿಳೆಯರು ಅರೆಸ್ಟ್!

    – ಮಗಳ ಮನೆಗೆ ಬಂದಿದ್ದ ತಾಯಿ ಸರಸ್ವತಮ್ಮ ಸಾವು

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಗಂಗಮ್ಮ ಗುಡಿ ವಿಷ ಪ್ರಸಾದ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬರ ಬಲಿಯಾಗಿದೆ. ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸರಸ್ವತಮ್ಮ ಎಂಬವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ ಎರಡಕ್ಕೇರಿದೆ. 56 ವರ್ಷದ ಸರಸ್ವತಮ್ಮ ಶಿಡ್ಲಘಟ್ಟ ತಾಲೂಕಿನ ಗಡಿಮಿಂಚೇನಹಳ್ಳಿಯ ನಿವಾಸಿ. ಊರ ಹಬ್ಬಕ್ಕೆಂದು ಮಗಳು ಗೌರಿ ಮನೆಗೆ ಬಂದಿದ್ರು. ಆದರೆ ವಿಧಿಯ ಆಟವೇ ಬೇರೆ ಇದ್ದಿದರಿಂದ ಬಾರದ ಲೋಕಕ್ಕೆ ಸರಸ್ವತಮ್ಮ ಹೋಗಿದ್ದಾರೆ. ಇನ್ನೂ 11 ಮಂದಿ ಕೋಲಾರ-ಚಿಕ್ಕಬಳ್ಳಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸುಳ್ವಾಡಿ ವಿಷ ದುರಂತದ ಬಳಿಕ ಎಲ್ಲವನ್ನು ಅನುಮಾನದಿಂದ ನೋಡಬೇಕಾಗಿ ಬಂದಿದೆ. ಗಂಗಮ್ಮನ ಪ್ರಸಾದಕ್ಕೆ ಯಾರಾದ್ರೂ ಉದ್ದೇಶಪೂರ್ವಕವಾಗಿ ವಿಷ ಬೆರೆಸಿ ಮಾರಣಹೋಮಕ್ಕೆ ಸ್ಕೆಚ್ ಹಾಕಿದ್ರಾ ಎಂಬ ಅನುಮಾನ ಕಾಡುತ್ತಿದೆ. ಇದೇ ಅನುಮಾನದ ಮೇಲೆ ಅಮರಾವತಿ, ಲಕ್ಷ್ಮಿ ಸೇರಿದಂತೆ ಹಲವರನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೃತ ಕವಿತಾ ಸಂಬಂಧಿ ನೀಡಿದ ದೂರಿನ ಮೇರೆಗೆ ಎಫ್‍ಐಆರ್ ಕೂಡ ದಾಖಲಾಗಿದೆ. ನಾವು ವಿಷ ಬೆರೆಸಿಲ್ಲ ಎಂದು ಲಕ್ಷ್ಮಿ ಹಾಗೂ ಅಮರಾವತಿ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ.

    ವೈದ್ಯರ ಹೇಳಿಕೆ ಪ್ರಕಾರ, ಗಂಗಮ್ಮನ ದೇವಸ್ಥಾನದಲ್ಲಿ ಭಕ್ತರು ಸೇವಿಸಿದ ಪ್ರಸಾದದಲ್ಲಿ ವಿಷ ಬೆರೆತಿರುವ ಸಾಧ್ಯತೆ ಇಲ್ಲ. ಬೆಳಗ್ಗೆ ಸಿದ್ಧಪಡಿಸಿದ್ದ ಪ್ರಸಾದವನ್ನ ಸಂಜೆ ವಿತರಿಸಲಾಗಿದೆ. ಪ್ರಸಾದ ರೆಡಿಯಾಗಿ ಹೆಚ್ಚು ಸಮಯ ಆಗಿದ್ದರಿಂದ ಅದು ವಿಷಾಹಾರವಾಗಿ ಪರಿವರ್ತನೆಗೊಂಡಿರಬಹುದು. ಅಥವಾ ಪ್ರಸಾದ ಸಿದ್ಧಪಡಿಸಿದ ವ್ಯಕ್ತಿಗೆ ಸ್ಟೈಫಲೋ ಕೋಕುಸ್ ಸೋಂಕು ತಗುಲಿರುವ ಸಾಧ್ಯತೆ ಇದೆ. ಸೋಂಕಿನ ಬ್ಯಾಕ್ಟೀರಿಯಾ ಪ್ರಸಾದದ ಜೊತೆ ಭಕ್ತರ ಉದರ ಸೇರಿ ವಿಷಾಹಾರವಾಗಿ ಬದಲಾಗಿರಬಹುದು.

    ಪ್ರಸಾದ ತಯಾರಿಕೆ ವೇಳೆ ಕೆಟ್ಟು ಹೋದ ಕೊಬ್ಬರಿ, ಅವಧಿ ಮೀರಿದ ತುಪ್ಪ ಬಳಸಿದ್ದ ವಿಚಾರವನ್ನ ಲಕ್ಷ್ಮಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ. ಇನ್ನು ದೇವಾಲಯದಲ್ಲಿ ನೂರಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗಿತ್ತು.. ಆದರೆ ಮೂರು ಕುಟುಂಬಗಳ ಸದಸ್ಯರು ಮಾತ್ರ ಅಸ್ವಸ್ಥರಾಗಿದ್ದಾರೆ. ಇದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ. ತನಿಖೆ ಮುಂದುವರೆದಿದೆ. ಇದು ಸುಳ್ವಾಡಿ ವಿಷ ದುರಂತ ಆಗದಿದ್ರೆ ಅಷ್ಟೇ ಸಾಕು ಎಂದು ಜನರು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

    https://www.youtube.com/watch?v=5ev4AgezPd4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv