ನವದೆಹಲಿ: ಐಪಿಎಲ್ (IPL) ಪ್ಲೇ ಆಫ್ನ (Playoffs) 4ನೇ ಸ್ಥಾನಕ್ಕಾಗಿ ಈಗ ಮೂರು ತಂಡಗಳ ಮಧ್ಯೆ ಪೈಪೋಟಿ ಆರಂಭವಾಗಿದೆ.
ಡೆಲ್ಲಿ (DC) ವಿರುದ್ಧ ಗುಜರಾತ್ ಜೈಂಟ್ಸ್ ಜಯಗಳಿಸುವುದರೊಂದಿಗೆ ಗುಜರಾತ್ ಟೈಟಾನ್ಸ್, ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಪ್ಲೇ ಆಫ್ ಪ್ರವೇಶಿಸಿದೆ. ಈಗ ಮುಂಬೈ ಇಂಡಿಯನ್ಸ್ (Mumbai Indians), ಲಕ್ನೋ (Lucknow Super Giants) ಮತ್ತು ಡೆಲ್ಲಿ ಮಧ್ಯೆ 4ನೇ ಸ್ಥಾನಕ್ಕಾಗಿ ಸ್ಪರ್ಧೆ ಆರಂಭವಾಗಿದೆ.
ಮುಂಬೈ ವಿರುದ್ಧ ಡೆಲ್ಲಿ ಸೋತರೆ, ಡೆಲ್ಲಿ ಹೊರಬೀಳಲಿದೆ. ಮುಂಬೈ ಸೋತರೆ, ಆಗ ಪಂಜಾಬ್ ವಿರುದ್ಧ ಕೊನೆಯ ಪಂದ್ಯದಲ್ಲಿ ಗೆಲ್ಲಬೇಕು. ಜೊತೆಗೆ ಡೆಲ್ಲಿ ತನ್ನ ಕೊನೆ ಪಂದ್ಯದಲ್ಲಿ ಪಂಜಾಬ್ಗೆ ಶರಣಾಗಿ, ಲಕ್ನೋ 3 ರಲ್ಲಿ 1 ಪಂದ್ಯ ಸೋಲಬೇಕು. ಸದ್ಯ 10 ಅಂಕ ಪಡೆದಿರುವ ಲಕ್ನೋ ಮೂರಕ್ಕೆ ಮೂರೂ ಪಂದ್ಯ ಗೆಲ್ಲಬೇಕಾಗುತ್ತದೆ. ಇದನ್ನೂ ಓದಿ: ಪಾಕಿಗೆ ಶಾಕ್ – ಏಷ್ಯಾಕಪ್ನಿಂದ ಹಿಂದೆ ಸರಿದ ಭಾರತ!
ಈಗಾಗಲೇ ಪ್ಲೇ-ಆಫ್ಗೇರಿರುವ 3 ತಂಡ ಗಳ ನಡುವೆ ಮೊದಲ 2 ಸ್ಥಾನಕ್ಕೆ ಪೈಪೋಟಿ ಇದೆ. ಅಗ್ರ-2ರಲ್ಲಿ ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್-1ನಲ್ಲಿ ಆಡಲಿದ್ದು, ಆ ಪಂದ್ಯ ಗೆಲ್ಲುವ ತಂಡ ನೇರವಾಗಿ ಫೈನಲ್ಗೆ ಅರ್ಹತೆ ಪಡೆಯಲಿದೆ. ಕ್ವಾಲಿಫಯರ್ನಲ್ಲಿ ಸೋತ ತಂಡಕ್ಕೂ ಎಲಿಮಿನೇಟರ್ ಪಂದ್ಯವಿದೆ.
ಮುಂಬೈ: ಶನಿವಾರ ನಡೆದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಆರ್ಭಟ ಮತ್ತು ಯಜುವೇಂದ್ರ ಚಾಹಲ್ ಬೌಲಿಂಗ್ ಮೋಡಿಗೆ ರಾಜಸ್ಥಾನ್ ರಾಯಲ್ಸ್ ತಂಡವು ಆರು ವಿಕೆಟ್ಗಳ ಅಂತರದಿಂದ ಜಯಭೇರಿ ಸಾಧಿಸಿದೆ.
ಗೆಲುವಿನ ಹಾದಿಗೆ ಮರಳಿರುವ ರಾಜಸ್ಥಾನ್, ಪ್ಲೇ-ಆಫ್ನತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಮಯಂಕ್ ಅಗರವಾಲ್ ಪಡೆಯ ಪ್ಲೇ-ಆಫ್ ಹಾದಿ ಇನ್ನಷ್ಟೂ ಕಠಿಣವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಂಜಾಬ್ ತಂಡವು ಜಾನಿ ಬೆಸ್ಟೊನ ಆಕರ್ಷಕ ಅರ್ಧಶತಕದ ನೆರವಿನಿಂದ (56) ತಂಡವು ಐದು ವಿಕೆಟ್ ನಷ್ಟಕ್ಕೆ 189 ರನ್ಗಳ ಗುರಿ ನೀಡಿತ್ತು.
ರಾಜಸ್ಥಾನ್ ಪರ ಚಾಹಲ್ ಸ್ಪಿನ್ ಮೋಡಿ ಮಾಡಿ ಮೂರು ವಿಕೆಟ್ ಕಬಳಿಸುವ ಮೂಲಕ ಪಂಜಾಬ್ನ ಬ್ಯಾಟಿಂಗ್ ಕ್ರಮಾಂಕವನ್ನು ಕಟ್ಟಿ ಹಾಕಿದರು. ನಂತರದಲ್ಲಿ ಮಯಂಕ್ ಪಡೆ ನೀಡಿದ್ದ 190 ರನ್ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್, ಜೈಸ್ವಾಲ್ನ ಅರ್ಧಶತಕದ ನೆರವಿನಿಂದ ಇನ್ನೂ ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ 19.4 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು.
ಇದರೊಂದಿಗೆ ರಾಜಸ್ಥಾನ ಆಡಿರುವ 11 ಪಂದ್ಯಗಳಲ್ಲಿ ಏಳನೇ ಗೆಲುವಿನೊಂದಿಗೆ ಒಟ್ಟು 14 ಅಂಕ ಸಂಪಾದಿಸಿರುವ ರಾಜಸ್ಥಾನ್, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ. ಪಂಜಾಬ್ 11 ಪಂದ್ಯಗಳಲ್ಲಿ ಆರನೇ ಸೋಲಿನ ಕಹಿಯುಂಡಿದ್ದು, ಏಳನೇ ಸ್ಥಾನದಲ್ಲಿದೆ.
ರಾಜಸ್ಥಾನ್ನ ಆರಂಭಿಕ ಬ್ಯಾಟ್ಸ್ಮನ್ಗಳಾದ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಬಿರುಸಿನ ಆಟವಾಡಿ ನಾಲ್ಕು ಓವರ್ಗಳಲ್ಲೇ 46 ರನ್ ಪೇರಿಸಿ ಗೆಲುವಿಗೆ ಬುನಾದಿ ಹಾಕಿಕೊಟ್ಟರು.
ನಾಲ್ಕನೇ ಓವರ್ನಲ್ಲಿ ರಬಾಡ ಬೌಲಿಂಗ್ಗೆ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಬಟ್ಲರ್ ಅಬ್ಬರಿಸಿದರು. ಅದೇ ಓವರ್ನ ಕೊನೆಯ ಎಸೆತದಲ್ಲಿ ರಬಾಡಾಗೆ ವಿಕೆಟ್ ಒಪ್ಪಿಸಿದರು. ಒಟ್ಟು 16 ಎಸೆತಗಳನ್ನು ಎದುರಿಸಿದ ಬಟ್ಲರ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ನೊಂದಿಗೆ 30 ರನ್ ಗಳಿಸಿದರು. ಈ ಮೂಲಕ ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ 600 ರನ್ ಸಾಧನೆ ಮಾಡಿದರು.
ಪವರ್ ಪ್ಲೇ ಅಂತ್ಯಕ್ಕೆ ರಾಜಸ್ಥಾನ್ ಒಂದು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿತ್ತು. ನಾಯಕ ಸಂಜು ಸ್ಯಾಮ್ಸನ್ 23 ರನ್ಗಳ (12 ಎಸೆತ, 4 ಬೌಂಡರಿ) ಕಾಣಿಕೆ ನೀಡಿದರು. ನಂತರದಲ್ಲಿ ಜೊತೆಯಾದ ಯಶಸ್ವಿ ಜೈಸ್ವಾಲ್ ಹಾಗೂ ದೇವದತ್ತ ಪಡಿಕ್ಕಲ್ ಮೂರನೇ ವಿಕೆಟ್ಗೆ ಮಹತ್ವದ 50 ರನ್ಗಳ ಜೊತೆಯಾಟವನ್ನಾಡಿ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟರು. ಆಕರ್ಷಕ ಬ್ಯಾಟಿಂಗ್ ಮೂಲಕ ಜೈಸ್ವಾಲ್, ಕೇವಲ 33 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. ಈ ಮೂಲಕ ತಮ್ಮ ಸಾಮಥ್ರ್ಯವನ್ನು ಸಾಬೀತು ಮಾಡಿದರು.
41 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 68 ರನ್ ಗಳಿಸಿದರು. ಅವರ ಈ ಬಿರುಸಿನ ಇನ್ನಿಂಗ್ಸ್ನಲ್ಲಿ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದ್ದವು. ಅಂತಿಮ 30 ಎಸೆತಗಳಲ್ಲಿ ರಾಜಸ್ಥಾನ್ ಗೆಲುವಿಗೆ 47 ರನ್ ಬೇಕಾಗಿತ್ತು. ಈ ವೇಳೆ ಬಿರುಸಿನ ಆಟವಾಡಿದ ಶಿಮ್ರಾನ್ ಹೆಟ್ಮೆಯರ್ ಆರ್ಆರ್ಗೆ ಅರ್ಹ ಗೆಲುವು ಒದಗಿಸಿಕೊಡಲು ನೆರವಾದರು. ಅವರಿಗೆ ದೇವದತ್ತ ಪಡಿಕ್ಕಲ್ ತಕ್ಕ ಸಾಥ್ ಕೊಟ್ಟರು.
ಅಂತಿಮವಾಗಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಕೇವಲ 16 ಎಸೆತಗಳನ್ನು ಎದುರಿಸಿದ ಹೆಟ್ಮೆಯರ್ 31 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ಪಡಿಕ್ಕಲ್ 32 ಎಸೆತಗಳಲ್ಲಿ 31 ರನ್ ಗಳಿಸಿದರು. ಪಂಜಾಬ್ ಪರ ಅರ್ಶದೀಪ್ ಎರಡು ವಿಕೆಟ್ ಗಳಿಸಿದರು.
ಈ ಮೊದಲು ಜಾನಿ ಬೆಸ್ಟೊನ ಆಕರ್ಷಕ ಅರ್ಧಶತಕದ ನೆರವಿನಿಂದ (56) ಪಂಜಾಬ್ ಕಿಂಗ್ಸ್ ತಂಡವು ಐದು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಪಂಜಾಬ್ ಉತ್ತಮ ಆರಂಭವನ್ನು ಪಡೆದುಕೊಂಡಿತ್ತು. ಜಾನಿ ಬಿರುಸಿನ ಆಟವಾಡುವ ಮೂಲಕ ಎಲ್ಲರ ಗಮನ ಸೆಳೆದರು. ಅಲ್ಲದೆ ಮೊದಲ ವಿಕೆಟ್ಗೆ ಶಿಖರ್ ಧವನ್ ಜೊತೆಗೆ 5.1 ಓವರ್ಗಳಲ್ಲಿ 47 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು. ಧವನ್ 12 ರನ್ ಗಳಿಸಿ ಔಟ್ ಆದರು. ಭಾನುಕ ರಾಜಪಕ್ಸ 27 ರನ್ಗಳ (18 ಎಸೆತ, 2 ಬೌಂಡರಿ, 2 ಸಿಕ್ಸರ್) ಹೊಡೆದಿದ್ದು ಯಜುವೇಂದ್ರ ಚಾಹಲ್ಗೆ ತಮ್ಮ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. 15ನೇ ಓವರ್ನಲ್ಲಿ ನಾಯಕ ಮಯಂಕ್ ಅಗರವಾಲ್ (15) ಹಾಗೂ ಬೆಸ್ಟೊ ವಿಕೆಟ್ ಗಳಿಸಿದ ಚಾಹಲ್ ಡಬಲ್ ಆಘಾತ ನೀಡಿದರು. 40 ಎಸೆತಗಳನ್ನು ಎದುರಿಸಿದ ಬೆಸ್ಟೊ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು.
ಕೊನೆಯ ಹಂತದಲ್ಲಿ ಜಿತೇಶ್ ಶರ್ಮಾ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಅರ್ಧಶತಕದ ಜೊತೆಯಾಟ ಕಟ್ಟುವ ಮೂಲಕ ಪಂಜಾಬ್ ಸವಾಲಿನ ಮೊತ್ತವನ್ನು ಪೇರಿಸಲು ನೆರವಾದರು. ಈ ಮೂಲಕ ಪಂಜಾಬ್ ಐದು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. 18 ಎಸೆತಗಳನ್ನು ಎದುರಿಸಿದ ಜಿತೇಶ್ 38 ರನ್ (18 ಎಸೆತ, 4 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ಮತ್ತೊಂದೆಡೆ ಲಿವಿಂಗ್ಸ್ಟೋನ್ 22 ರನ್ (14 ಎಸೆತ, 2 ಸಿಕ್ಸರ್) ಗಳಿಸಿದರು.
ಚೆನ್ನೈ : ಈ ಬಾರಿ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಚೆನ್ನೈ ತಂಡ ಖ್ಯಾತ ಮೂವರು ಆಟಗಾರನ್ನು ಕೈ ಬಿಡುವ ಸಾಧ್ಯತೆಯಿದೆ.
2008 ರಿಂದ ಆರಂಭಗೊಂಡ ಐಪಿಎಲ್ನಲ್ಲಿ ಚೆನ್ನೈ ತಂಡ ಪ್ರತಿ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಪ್ಲೇ ಆಫ್ ಪ್ರವೇಶಿಸದೇ 7ನೇ ಸ್ಥಾನ ಪಡೆದು ಟೂರ್ನಿಯಿಂದ ಹೊರ ಬಿದ್ದಿದೆ.
ಈ ಬಾರಿಯ ಕಳಪೆ ಪ್ರದರ್ಶನಕ್ಕೆ ಬ್ಯಾಟಿಂಗ್, ಬೌಲಿಂಗ್ ವೈಫಲ್ಯ ಎದ್ದು ಕಾಣುತ್ತಿರುವ ಹಿನ್ನೆಲೆಯಲ್ಲಿ ಖ್ಯಾತ ಬ್ಯಾಟ್ಸ್ಮನ್ ಮತ್ತು ಬೌಲರ್ಗಳನ್ನು ಕೈ ಬಿಡಲು ಚೆನ್ನೈ ತಂಡ ಚಿಂತನೆ ನಡೆಸಿದೆ. ಅದರಲ್ಲೂ ಮುಖ್ಯವಾಗಿ ಆಸ್ಟ್ರೇಲಿಯಾದ ಶೇನ್ ವಾಟ್ಸನ್, ಕೇದಾರ್ ಜಾಧವ್, ಪಿಯೂಶ್ ಚಾವ್ಲಾ ಅವರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿದೆ.
ಶೇನ್ ವಾಟ್ಸನ್:
ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವಾಟ್ಸನ್ 2008ರಲ್ಲಿ ರಾಜಸ್ಥಾನ ಪರ ಆಡಿದ್ದರು. ಈ ಆವೃತ್ತಿಯಲ್ಲಿ ರಾಜಸ್ಥಾನ ಚಾಂಪಿಯನ್ ಆಗಿದ್ದು ವಾಟ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು. ಬಳಿಕ ಆರ್ಸಿಬಿ ಪರ ಆಡಿದ್ದ ವಾಟ್ಸನ್ 2018ರಲ್ಲಿ ಚೆನ್ನೈ ಪರ ಆಡಲು ಆರಂಭಿಸಿದ್ದರು. ಚೆನ್ನೈ 4 ಕೋಟಿ ರೂ. ನೀಡಿ ವಾಟ್ಸನ್ ಅವರನ್ನು ಖರೀದಿಸಿತ್ತು.
2018 ರಲ್ಲಿ 15 ಪಂದ್ಯಗಳಿಂದ 555 ರನ್, 2019 ರಲ್ಲಿ 17 ಪಂದ್ಯಗಳಿಂದ 398 ರನ್ ಹೊಡೆದಿದ್ದ ವಾಟ್ಸನ್ ಈ ಬಾರಿಯ 11 ಪಂದ್ಯ ಮಾತ್ರ ಆಡಿದ್ದರು. 247 ಬಾಲ್ ಎದುರಿಸಿದ್ದ ವಾಟ್ಸನ್ 29.90 ಸರಾಸರಿಯಲ್ಲಿ 299 ರನ್ ಮಾತ್ರ ಹೊಡೆದಿದ್ದರು.
ಪಿಯೂಶ್ ಚಾವ್ಲಾ:
2008ರಲ್ಲಿ ರಾಜಸ್ಥಾನ ರಾಯಲ್ಸ್ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ಪಿಯೂಶ್ ಚಾವ್ಲಾರನ್ನು 2020ರ ಹರಾಜಿನಲ್ಲಿ ಚೆನ್ನೈ ತಂಡ 6.75 ಕೋಟಿ ರೂ. ನೀಡಿ ಖರೀದಿಸಿತ್ತು.ಹರ್ಭಜನ್ ಸಿಂಗ್ ತವರಿಗೆ ಮರಳಿದ ಹಿನ್ನೆಲೆಯಲ್ಲಿ ಈ ಬಾರಿ ಚಾವ್ಲಾ ಮೇಲೆ ಒತ್ತಡ ಜಾಸ್ತಿ ಇತ್ತು. ಈ ಬಾರಿ ಒಟ್ಟು 126 ಬಾಲ್ ಎಸೆದಿದ್ದು 191 ರನ್ ನೀಡಿ 6 ವಿಕೆಟ್ ಪಡೆದಿದ್ದರು.
ಕೇದಾರ್ ಜಾಧವ್:
ಡೆಲ್ಲಿ ಡೇರ್ ಡೆವಿಲ್ಸ್ , ಕೊಚ್ಚಿ ಟಸ್ಕರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪರ ಆಡಿದ್ದ ಕೇದಾರ್ ಜಾಧವ್ ಅವರನ್ನು ಚೆನ್ನೈ ತಂಡ 2018ರಲ್ಲಿ 7.8 ಕೋಟಿ ರೂ. ನೀಡಿ ಖರೀದಿಸಿತ್ತು. ಈ ಬಾರಿ ಯಾವುದೇ ಅತ್ಯುತ್ತಮ ಆಟ ಜಾಧವ್ ಅವರಿಂದ ಬರಲಿಲ್ಲ. ಈ ವರ್ಷ 8 ಪಂದ್ಯವಾಡಿದ್ದ ಜಾಧವ್ 62 ರನ್ ಮತ್ರ ಹೊಡೆದಿದ್ದರು. 2019ರಲ್ಲಿ 14 ಪಂದ್ಯಗಳಿಂದ 162 ರನ್ ಹೊಡೆದಿದ್ದರು.