Tag: planet

  • ಅಳಿವಿನಂಚಿಗೆ ಸಾಗುತ್ತಿದ್ಯಾ ಭೂಮಿ? – ಕೆಂಡದಂತಾದ ಧರಣಿಗೆ ‘ರೆಡ್‌ ಅಲರ್ಟ್‌’; ಹವಾಮಾನ ತಜ್ಞರ ಆತಂಕ!

    ಅಳಿವಿನಂಚಿಗೆ ಸಾಗುತ್ತಿದ್ಯಾ ಭೂಮಿ? – ಕೆಂಡದಂತಾದ ಧರಣಿಗೆ ‘ರೆಡ್‌ ಅಲರ್ಟ್‌’; ಹವಾಮಾನ ತಜ್ಞರ ಆತಂಕ!

    – 2014-2023 ವರದಿ ಹೇಳೋದೇನು? – ತಜ್ಞರ ಆತಂಕವೇನು?

    ಮನುಕುನ ಉಳಿಯಬೇಕು ಎಂದಿದ್ದರೆ, ಇನ್ನೂ 100 ವರ್ಷಗಳಲ್ಲಿ ಭೂಮಿ ಬಿಟ್ಟು ಹೊರಡಿ ಎಂದು ವಿಶ್ವವಿಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ಆರು ವರ್ಷಗಳ ಹಿಂದೆ ಎಚ್ಚರಿಕೆ ನೀಡಿದ್ದರು. ಅವರ ಮಾತು ನಿಜ ಎನ್ನುವಂತಹ ಒಂದೊಂದು ಸನ್ನಿವೇಶಗಳು ಈ ಭೂಮಿ ಮೇಲೆ ಜರುಗುತ್ತಿವೆ. ಜನಸಂಖ್ಯಾ ಸ್ಫೋಟ, ಭೂಮಿ ಬಿಸಿಯಾಗುತ್ತಿರುವುದು ಮತ್ತು ಮನುಕುಲದ ಭವಿಷ್ಯದ ಬಗ್ಗೆ ಹಾಕಿಂಗ್ ಎಚ್ಚರಿಕೆ ಗಂಟೆ ಬಾರಿಸುತ್ತಲೇ ಇದ್ದರು. ಇದೇ ಹೊತ್ತಿನಲ್ಲಿ ಭೂಮಿ ಕುದಿಯುತ್ತಿರುವ ಸಂಬಂಧ ವರದಿಯೊಂದು ಬಿಡುಗಡೆಯಾಗಿದ್ದು, ಆತಂಕ ಮೂಡಿಸಿದೆ.

    ಮಾನವನ ದುರಾಸೆಗೆ ಭೂಮಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ. ಕಳೆದ ವರ್ಷದ ತಾಪಮಾನವು, ಜಾಗತಿಕ ಶಾಖದ ದಾಖಲೆಯನ್ನೇ ಬ್ರೇಕ್ ಮಾಡಿದೆ ಎಂಬ ಆತಂಕಕಾರಿ ವಿಚಾರವನ್ನು ಯುಎನ್ ಈಚೆಗೆ ದೃಢಪಡಿಸಿದೆ. ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆಯು ತನ್ನ ವಾರ್ಷಿಕ ಹವಾಮಾನ ವರದಿಯನ್ನು ಬಿಡುಗಡೆ ಮಾಡಿತು. ‘2023’ ಇದುವರೆಗೆ ದಾಖಲಾದ ಅತ್ಯಂತ ಬಿಸಿಯಾದ ವರ್ಷ ಎಂದು ತಿಳಿಸಿದೆ.

    ಅಳಿವಿನಂಚಿನಲ್ಲಿದೆ ಭೂಮಿ
    ಶಾಖದ ಅಲೆಗಳು ಸಾಗರಗಳಲ್ಲಿ ಹೆಚ್ಚುತ್ತಿದೆ. ಹಿಮನದಿಗಳು ದಾಖಲೆಯ ಪ್ರಮಾಣದಲ್ಲಿ ಕರಗಿ ಹರಿಯುತ್ತಿವೆ. ನಮ್ಮ ಭೂಮಿ ಅಳವಿನಂಚಿನಲ್ಲಿದೆ ಎಂದು ಯುಎನ್ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಆತಂಕ ವ್ಯಕ್ತಪಡಿಸಿದ್ದಾರೆ. ಭೂಮಿಯು ಸಂಕಷ್ಟದ ಕರೆಯನ್ನು ನೀಡುತ್ತಿದೆ. ಪಳೆಯುಳಿಕೆ ಇಂಧನ ಮಾಲಿನ್ಯವು ಹವಾಮಾನ ಅವ್ಯವಸ್ಥೆಗೆ ಕಾರಣವಾಗಿದೆ. ಬದಲಾವಣೆಗಳು ವೇಗಗೊಳ್ಳುತ್ತಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಅಪಾಯಕಾರಿ 1.5 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೆ ಹತ್ತಿರ
    ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ 2015 ರಲ್ಲಿ ‘ಪ್ಯಾರಿಸ್ ಒಪ್ಪಂದ’ವಾಗಿತ್ತು. ಅದರಲ್ಲಿ ಹೇಳಿರುವಂತೆ 1850 ರಿಂದ 1900 ರ ವರೆಗಿನ ಅವಧಿಯಲ್ಲಿ ದಾಖಲಾದ ತಾಪಮಾನದ ಸರಾಸರಿಗಿಂತ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿತ್ತು. ಇಷ್ಟಾದರೂ, ಕನಿಷ್ಠಪಕ್ಷ 1.5 ಡಿಗ್ರಿ ಸೆಲ್ಸಿಯನಷ್ಟು ಕಡಿಮೆ ಮಾಡಬೇಕು ಎಂಬ ಆಶಯ ಹೊಂದಲಾಗಿತ್ತು. ಆದರೆ ಈಗಿನ ಹವಾಮಾನ ಬದಲಾವಣೆ ಗಮನಿಸಿದರೆ, 1.5 ಡಿಗ್ರಿಗೆ ಅಪಾಯಕಾರಿ ಹತ್ತಿರದಲ್ಲಿದೆ. ಕಳೆದ ವರ್ಷ ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ ಸರಾಸರಿ ಮೇಲ್ಮೈ ತಾಪಮಾನವು 1.45 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು ಎಂದು ಡಬ್ಲ್ಯೂಎಂಒ ತಿಳಿಸಿದೆ. ಅಲ್ಲದೇ, ಪ್ಯಾರಿಸ್ ಒಪ್ಪಂದದ 1.5 ಡಿಗ್ರಿ ಸೆಲ್ಸಿಯಸ್ ಮಿತಿಗೆ ಭೂಮಿ ತಾಪಮಾನ ಯಾವಾಗಲೂ ಹತ್ತಿರ ಇರಲಿಲ್ಲ ಎಂದು ಸ್ಪಷ್ಟಪಡಿಸಿದೆ.

    ಭೂಮಿಗೆ ರೆಡ್ ಅಲರ್ಟ್
    ಹವಾಮಾನ ಬದಲಾವಣೆಯನ್ನು ಗಮನಿಸಿದರೆ ಈ ಭೂಮಿಗೆ ರೆಡ್ ಅಲರ್ಟ್ ಘೋಷಣೆಯಾದಂತೆ ಕಾಣುತ್ತಿದೆ ಎಂದು ಆಂಡ್ರಿಯಾ ಸೆಲೆಸ್ಟ್ ಸೌಲೊ ತಿಳಿಸಿದ್ದಾರೆ. ಹವಾಮಾನ ಬದಲಾವಣೆಯೂ ತಾಪಮಾನಕ್ಕಿಂತ ಹೆಚ್ಚು. 2023 ರಲ್ಲಿ ಸಮುದ್ರದ ಉಷ್ಣತೆ ಹೆಚ್ಚಳ, ಹಿಮನದಿ ಕರಗುವಿಕೆ ಮತ್ತು ಅಂಟಾರ್ಕ್ಟಿಕ್ ಸಮುದ್ರದಲ್ಲಿ ಕರಗುತ್ತಿರುವ ಮಂಜುಗಡ್ಡೆಯ ನಿರ್ದಿಷ್ಟ ಕಾಳಜಿಗೆ ಕಾರಣವಾಗಿದೆ ಎಂದಿದ್ದಾರೆ.

    ಕಳೆದ ವರ್ಷ ಸಮುದ್ರದ ಶಾಖದ ಅಲೆಗಳು ಜಾಗತಿಕ ಸಾಗರದ ಸುಮಾರು ಮೂರನೇ ಒಂದು ಭಾಗವನ್ನು ಆವರಿಸಿವೆ ಎಂಬ ವಿಚಾರ ಸಂಶೋಧನೆಯಿಂದ ಬಹಿರಂಗವಾಗಿದೆ. 2023 ರ ಅಂತ್ಯದ ವೇಳೆಗೆ ಸಮುದ್ರದ 90 ಪ್ರತಿಶತಕ್ಕಿಂತಲೂ ಹೆಚ್ಚಿನ ಭಾಗವು ಶಾಖದ ಅಲೆ ಪರಿಣಾಮವನ್ನು ಅನುಭವಿಸಿದೆ. ಈ ಶಾಖದ ಅಲೆಗಳು ಸಮುದ್ರ ಪರಿಸರ ವ್ಯವಸ್ಥೆ ಮತ್ತು ಹವಳದ ಬಂಡೆಗಳ ಮೇಲೆ ಪರಿಣಾಮ ಬೀರುತ್ತಿವೆ. ವಿಶ್ವದಲ್ಲೇ ಪ್ರಮುಖ ಹಿಮನದಿಗಳಿರುವ ಪಶ್ಚಿಮ ಉತ್ತರ ಅಮೆರಿಕ ಮತ್ತು ಯೂರೋಪ್ ಎರಡರಲ್ಲೂ ತೀವ್ರವಾದ ಕರಗುವಿಕೆ ಉಂಟಾಗುತ್ತಿದೆ. ಆಲ್ಫೆನ್ಸ್ ಹಿಮನದಿಗಳು ಕಳೆದ 2 ವರ್ಷಗಳಲ್ಲಿ ಶೇ.10 ಕಳೆದುಕೊಂಡಿದೆ. ಅಂಟಾರ್ಕ್ಟಿಕ್ ಸಮುದ್ರದ ಮಂಜುಗಡ್ಡೆಯು ದಾಖಲೆ ಪ್ರಮಾಣದಲ್ಲಿ ಕರಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಏರುತ್ತಿದೆ ಸಮುದ್ರ ಮಟ್ಟ
    ಭೂಮಿ ಮೇಲ್ಮೈನಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ 1993 ರಿಂದ ಉಪಗ್ರಹಗಳು ಅಧ್ಯಯನ ಮಾಡುತ್ತಿವೆ. ಅದರ ದಾಖಲೆ ಪ್ರಕಾರ, ಹಿಮನದಿಗಳು ಕರಗುತ್ತಿವೆ. ಸಾಗರ ತಾಪಮಾನವೂ ಹೆಚ್ಚುತ್ತಿದೆ. ಈ ಬೆಳವಣಿಗೆಯಿಂದಾಗಿ ಸಮುದ್ರ ಮಟ್ಟ ಏರುತ್ತಿದೆ. ಕಳೆದ ದಶಕದಲ್ಲಿ (2014-2023) ಜಾಗತಿಕ ಸರಾಸರಿ ಸಮುದ್ರ ಮಟ್ಟ ಏರಿಕೆಯು, ಮೊದಲ ದಶಕದಲ್ಲಿನ ಉಪಗ್ರಹ ದಾಖಲೆಗಳ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಡಬ್ಲ್ಯೂಎಂಒ ಸಂಸ್ಥೆ ತಿಳಿಸಿದೆ.

    ಹವಾಮಾನ ಬದಲಾವಣೆಯು ಜಗತ್ತಿನಾದ್ಯಂತ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಒಂದೆಡೆ ಪ್ರವಾಹ ಮತ್ತೊಂದೆಡೆ ಬರ ಪರಿಸ್ಥಿತಿ ಕಾಣಿಸಿಕೊಳ್ಳುತ್ತಿದೆ. ಗುಳೆ ಹೋಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜೀವವೈವಿಧ್ಯ ನಶಿಸಿ ಹೋಗುತ್ತಿದೆ. ಆಹಾರ ಅಭದ್ರತೆ ಹೆಚ್ಚಾಗುತ್ತಿದೆ. ಹವಾಮಾನ ಬಿಕ್ಕಟ್ಟು ಮಾನವೀಯತೆ ಎದುರಿಸುತ್ತಿರುವ ಸವಾಲಾಗಿದೆ. ಅಸಮಾನತೆಯ ಬಿಕ್ಕಟ್ಟಿನೊಂದಿಗೆ ಇದು ನಿಕಟ ಸಂಬಂಧ ಹೊಂದಿದೆ.

    ಆಹಾರ ಬಿಕ್ಕಟ್ಟು
    ಪ್ರಪಂಚದಾದ್ಯಂತ ಜನರನ್ನು ತೀವ್ರವಾಗಿ ಆಹಾರ ಬಿಕ್ಕಟ್ಟು ಕಾಡುತ್ತಿದೆ. ಕೋವಿಡ್ ಸಾಂಕ್ರಾಮಿಕದ ಮೊದಲು ಆಹಾರ ಅಸುರಕ್ಷಿತ ಬಾಧಿತ ಜನರ ಸಂಖ್ಯೆಯು 14.90 ಕೋಟಿಯಷ್ಟಿತ್ತು. 2023 ರ ಕೊನೆಯಲ್ಲಿ ಅದು 33.03 ಕೋಟಿಗೆ ದ್ವಿಗುಣಗೊಂಡಿದೆ.

    ಭರವಸೆಯ ಬೆಳಕು
    ಹವಾಮಾನ ಬದಲಾವಣೆ ಎಫೆಕ್ಟ್‌ ತಗ್ಗಿಸಲು ಯುಎನ್‌ನ ಹವಾಮಾನ ಮತ್ತು ಹವಾಮಾನ ಏಜೆನ್ಸಿಯು ಭರವಸೆಯೊಂದನ್ನು ವ್ಯಕ್ತಪಡಿಸಿದೆ. ನವೀಕರಿಸಬಹುದಾದ ಶಕ್ತಿ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ಕಳೆದ ವರ್ಷ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದೆ. ಸೌರ, ಗಾಳಿ ಮತ್ತು ಜಲವಿದ್ಯುತ್‌ನಿಂದ 2022 ರಿಂದ ಸುಮಾರು 50% ನಷ್ಟು ಉತ್ಪಾದನೆಯು ಹೆಚ್ಚಾಗಿದೆ ಎಂದು ಡಬ್ಲ್ಯೂಎಂಒ ಮಾಹಿತಿ ನೀಡಿದೆ.

    ಕಾಲ ಮಿಂಚಿ ಹೋಗಿದೆಯೇ?
    ಭೂಮಿಯ ದೀರ್ಘಾವಧಿಯ ಉಷ್ಣತೆಯ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ ಮಿತಿಗಿಂತ ಕೆಳಗಿರಿಸಲು ಮತ್ತು ಹವಾಮಾನ ಅವ್ಯವಸ್ಥೆಯಿಂದ ಆಗುತ್ತಿರುವ ಪರಿಣಾಮವನ್ನು ತಪ್ಪಿಸಲು ಜಗತ್ತಿಗೆ ಇನ್ನೂ ಅವಕಾಶವಿದೆ ಎಂದು ಗುಟೆರಸ್ ಒತ್ತಿ ಹೇಳಿದ್ದಾರೆ. ಅದನ್ನು ಹೇಗೆ ಮಾಡಬೇಕೆಂದು ನಮಗೆ ತಿಳಿದಿದೆ ಎಂದಿದ್ದಾರೆ.

  • ಪ್ಲುಟೋದಲ್ಲಿ ಹೊಸ ವಿಸ್ಮಯ – ಸೌರವ್ಯೂಹದಲ್ಲಿ ಎಲ್ಲೂ ಕಾಣಿಸದ ಮಂಜಿನ ಜ್ವಾಲಾಮುಖಿಯ ಸುಳಿವು

    ಪ್ಲುಟೋದಲ್ಲಿ ಹೊಸ ವಿಸ್ಮಯ – ಸೌರವ್ಯೂಹದಲ್ಲಿ ಎಲ್ಲೂ ಕಾಣಿಸದ ಮಂಜಿನ ಜ್ವಾಲಾಮುಖಿಯ ಸುಳಿವು

    ವಾಷಿಂಗ್ಟನ್: ಪ್ಲುಟೋವನ್ನು ಸೌರಮಂಡಲದ ಗ್ರಹಗಳ ಗುಂಪಿನಿಂದ ಹೊರ ತಳ್ಳಿ 16 ವರ್ಷಗಳೇ ಕಳೆದಿವೆ. ಆದರೂ ಪ್ಲುಟೋವಿನ ಹೊಸ ಹೊಸ ವಿಸ್ಮಯ, ಕುತೂಹಲಗಳನ್ನು ಒಂದೊಂದಾಗಿಯೇ ವಿಜ್ಞಾನಿಗಳು ಬಯಲಿಗೆಳೆಯುತ್ತಲೇ ಇದ್ದಾರೆ.

    ಇದೀಗ ವಿಜ್ಞಾನಿಗಳು ಪ್ಲುಟೋ ಮೇಲ್ಮೈಯಲ್ಲಿ ಮಂಜುಗಡ್ಡೆಯ ಜ್ವಾಲಾಮುಖಿ ಇರುವಿಕೆಯ ಸುಳಿವನ್ನು ಪತ್ತೆಹಚ್ಚಿದ್ದಾರೆ. ಇಂತಹ ನಿಗೂಢ ಅಂಶ ಸೌರವ್ಯೂಹದ ಬೇರೆ ಯಾವ ಗ್ರಹಗಳಲ್ಲೂ ಇಲ್ಲ ಎಂಬ ವಿಷಯವನ್ನೂ ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾದ ಶಾಂಫೈನಲ್ಲಿ ಲಾಕ್‌ಡೌನ್ ಜಾರಿ – ಭಾರತದ ಮೇಲೆ ಪರಿಣಾಮ ಏನು?

    ನ್ಯೂ ಹೊರೈಜನ್ಸ್ ಮಿಷನ್‌ನ ಖಗೋಳಶಾಸ್ತ್ರಜ್ಞರ ತಂಡ ಈ ದೂರದ ಪ್ಲುಟೋ ಮೇಲ್ಮೈಯಲ್ಲಿ ಹಿಮದಿಂದ ರೂಪುಗೊಂಡ ಬೆಟ್ಟಗಳು, ದಿಬ್ಬಗಳು ಹಾಗೂ ತಗ್ಗುಗಳಿಂದ ಸುತ್ತುವರಿದ ದೊಡ್ಡ ಗುಮ್ಮಟಗಳ ಪ್ರದೇಶವನ್ನು ಪತ್ತೆಹಚ್ಚಿದೆ. ಈ ಭಾರೀ ಬೆಟ್ಟಗಳ ಸೃಷ್ಟಿಗೆ ದೊಡ್ಡ ಮಟ್ಟದ ಸ್ಫೋಟದ ಸ್ಥಳಗಳ ಅಗತ್ಯವಿದೆ. ಇದು ಅದರ ಮೇಲ್ಮೈಯಲ್ಲಿ ಇರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಎದೆ ಹಾಲಿನಿಂದ ಆಭರಣ ತಯಾರಿಸಿ ಮಾರಾಟ ಮಾಡುವ ಮಹಿಳೆ

    ಈ ಮಂಜುಗಡ್ಡೆಯ ಜ್ವಾಲಾಮುಖಿ ಪ್ರದೇಶ 1 ರಿಂದ 7 ಕಿ.ಮಿ ಗಳಷ್ಟು ಎತ್ತರ ಹಾಗೂ 30 ರಿಂದ 100 ಅಥವಾ ಅದಕ್ಕಿಂತಲೂ ಹೆಚ್ಚು ಕಿ.ಮಿ ಗಳವರೆಗಿನ ಗುಮ್ಮಟಗಳನ್ನು ಹೊಂದಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

  • ಭಾರತೀಯ ಖಗೋಳಶಾಸ್ತ್ರಜ್ಞರಿಂದ ನೂತನ ಪ್ರಯತ್ನ – ಎಐ ತಂತ್ರಜ್ಞಾನ ಬಳಸಿ ವಾಸಯೋಗ್ಯ ಗ್ರಹಗಳ ಪತ್ತೆ

    ಭಾರತೀಯ ಖಗೋಳಶಾಸ್ತ್ರಜ್ಞರಿಂದ ನೂತನ ಪ್ರಯತ್ನ – ಎಐ ತಂತ್ರಜ್ಞಾನ ಬಳಸಿ ವಾಸಯೋಗ್ಯ ಗ್ರಹಗಳ ಪತ್ತೆ

    ನವದೆಹಲಿ: ಭಾರತೀಯ ಖಗೋಳಶಾಸ್ತ್ರಜ್ಞರ ತಂಡ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ತಂತ್ರಜ್ಞಾನ ಬಳಸಿಕೊಂಡು ಭೂಮಿಯಂತಹ ಗುಣಲಕ್ಷಣಗಳುಳ್ಳ ಕೆಲವು ಗ್ರಹಗಳನ್ನು ಪತ್ತೆಹಚ್ಚಿದ್ದಾರೆ.

    ಮಲ್ಟಿ-ಸ್ಟೇಜ್ ಮೆಮೆಟಿಕ್ ಬೈನರಿ ಟ್ರೀ ಅನಾಮಲಿ ಐಡೆಂಟಿಫೈಯರ್ ಎಂದು ಕರೆಯಲಾಗುವ ಎಐ ತಂತ್ರಜ್ಞಾನ ಆಧಾರಿತ ವಿಧಾನದಿಂದ ಕೆಲವು ಭೂಮಿಯಂತಹ ಅಂಶಗಳುಳ್ಳ ಗ್ರಹಗಳನ್ನು ಗುರುತಿಸಲಾಗಿದೆ. ಈ ವಿಧಾನ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಅನುಕರಣೆ ಮಾಡುವ ರೀತಿಯಲ್ಲಿ ಕೆಲಸ ಮಾಡುತ್ತದೆ.

    ಭಾರತೀಯ ಇನ್‍ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‍ನ ಖಗೋಳಶಾಸ್ತ್ರಜ್ಞರು ಮತ್ತು ಬಿಟ್ಸ್ ಪಿಲಾನಿ ಹಾಗೂ ಗೋವಾ ಕ್ಯಾಂಪಸ್‍ನ ಖಗೋಳಶಾಸ್ತ್ರಜ್ಞರು ಭೂಮಿಯ ಅಸಂಗತತೆ(ಎನೋಮಲಿ) ಎಂಬ ಸಿದ್ಧಾಂತದ ಆಧಾರದ ಮೇಲೆ ವಾಸಿಸಲು ಯೋಗ್ಯವಿರುವ ಗ್ರಹಗಳನ್ನು ಗುರುತಿಸಿದ್ದಾರೆ. ಇದನ್ನೂ ಓದಿ: ಡಿಜಿಟಲ್ ರೂ.ಗೂ ಸಾಮಾನ್ಯ ರೂ.ಗೂ ವ್ಯತ್ಯಾಸವಿಲ್ಲ: ಶಕ್ತಿಕಾಂತ ದಾಸ್

    ಸಾವಿರಾರು ಗ್ರಹಗಳಲ್ಲಿ ಭೂಮಿ ಮಾತ್ರ ವಾಸಯೋಗ್ಯ ಗ್ರಹವಾಗಿರುವುದರಿಂದ ಅದನ್ನು ಅಸಂಗತತೆ ಎಂದು ವ್ಯಾಖ್ಯಾನಿಸಲಾಗಿದೆ. ಹೊಸ ಅಸಂಗತತೆ ಪತ್ತೆ ವಿಧಾನಗಳನ್ನು ಬಳಸಿಕೊಂಡು ಇದೇ ರೀತಿಯ ಇತರ ಗ್ರಹಗಳನ್ನು ಕಂಡುಹಿಡಿಯಬಹುದೇ ಎಂದು ನಾವು ಅನ್ವೇಷಿಸಿದ್ದೇವೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಭೂಕಾಂತೀಯ ಬಿರುಗಾಳಿಗೆ ಸ್ಟಾರ್‌ಲಿಂಕ್ನ 40 ಉಪಗ್ರಹಗಳು ನಾಶ

    ಇಲ್ಲಿಯವರೆಗೆ ಪರಿಶೀಲಿಸಲಾದ ಸುಮಾರು 5000 ಗ್ರಹಗಳಲ್ಲಿ 60 ಸಂಭಾವ್ಯ ವಾಸಯೋಗ್ಯ ಗ್ರಹಗಳಿವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.