Tag: pigeon

  • ಪಾಕಿಸ್ತಾನದಿಂದ ಹಾರಿ ಬಂದ ಪಾರಿವಾಳ!

    ಪಾಕಿಸ್ತಾನದಿಂದ ಹಾರಿ ಬಂದ ಪಾರಿವಾಳ!

    ಚಂಡೀಗಢ: ಪಾಕಿಸ್ತಾನದಿಂದ ಹಾರಿ ಬಂದಿದೆ ಎನ್ನಲಾದ ಪಾರಿವಾಳವನ್ನು ಪಂಜಾಬ್ ರಾಜ್ಯದ ಅಜನಾಲಾ ಕ್ಷೇತ್ರದ ದಯಾಲಪುರ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.

    ದಯಾಲಪುರ ಗ್ರಾಮದ ಮುಖಂಡ ಜಸ್ಬೀರ್ ಸಿಂಗ್ ಎಂಬವರ ಮನೆಯಂಗಳದಲ್ಲಿ ಪಾರಿವಾಳ ಕಾಣಿಸಿಕೊಂಡಿತ್ತು. ಪಾರಿವಾಳದ ಕಾಲಿಗೆ ಗುಲಾಬಿ ಬಣ್ಣದ ಬ್ಯಾಂಡ್ ಕಟ್ಟಲಾಗಿತ್ತು. ಬ್ಯಾಂಡ್‍ನಲ್ಲಿ 03404061730 ಎಂಬ ಮೊಬೈಲ್ ನಂಬರ್ ಜೊತೆಗೆ ಶಕೀಲ್ ಎಂಬ ಹೆಸರನ್ನು ಬರೆಯಲಾಗಿತ್ತು.

    ಮೊದಲಿಗೆ ಮನೆಯಂಗಳದಲ್ಲಿ ಪಾರಿವಾಳ ಕಾಣಿಸಿಕೊಂಡಾಗ ಜಸ್ಬೀರ್ ಸಿಂಗ್ ಅದರತ್ತ ಲಕ್ಷ್ಯ ನೀಡಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಬೇರೆ ಪಾರಿವಾಳಗಿಂತ ಭಿನ್ನವಾಗಿ ಕಂಡಿದ್ದರಿಂದ ಕಾಳು ನೀಡಿ ಹಿಡಿದಿದ್ದಾರೆ. ಆದ್ರೆ ಪಾರಿವಾಳ ಹೆಚ್ಚು ದೂರ ಹಾರುವ ಶಕ್ತಿ ಹೊಂದಿರದ ಕಾರಣ ಜಸ್ಬೀರ್ ಕೈಗೆ ಸಿಕ್ಕಿದೆ. ಬ್ಯಾಂಡ್‍ನಲ್ಲಿ ಅನುಮಾನಾಸ್ಪದ ನಂಬರ್ ಹಾಗೂ ಹೆಸರು ಬರೆದಿದ್ದರಿಂದ ಸ್ಥಳೀಯ ಗಗ್ಗೋಮಾಹಲ್ ಪೊಲೀಸರ ವಶಕ್ಕೆ ಪಾರಿವಾಳವನ್ನು ನೀಡಿದ್ದಾರೆ.

    ಅನುಮಾನಾಸ್ಪದ ರೀತಿಯಲ್ಲಿ ಹಾರಿ ಬಂದ ಪಾರಿವಾಳವನ್ನು ವಶಕ್ಕೆ ಪಡೆದಿರುವ ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಗೆ ರವಾನಿಸಲಾಗಿದೆ. ಅಲ್ಲದೇ ಪಾರಿವಾಳ ಕುರಿತಾಗಿ ಸ್ಥಳೀಯರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಗಗ್ಗೋಮಾಹಲ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸುಖ್‍ದೇವ್ ಸಿಂಗ್ ತಿಳಿಸಿದ್ದಾರೆ.

  • ಪಾರಿವಾಳ ಹಿಡಿಯೋ ನೆಪದಲ್ಲಿ ಕಳ್ಳತನ ಎಸಗ್ತಿದ್ದ ಕಳ್ಳರು ಅಂದರ್: ಸಿಕ್ಕಿಬಿದ್ದಿದ್ದು ಹೇಗೆ?

    ಪಾರಿವಾಳ ಹಿಡಿಯೋ ನೆಪದಲ್ಲಿ ಕಳ್ಳತನ ಎಸಗ್ತಿದ್ದ ಕಳ್ಳರು ಅಂದರ್: ಸಿಕ್ಕಿಬಿದ್ದಿದ್ದು ಹೇಗೆ?

    ಬೆಂಗಳೂರು: ಪಾರಿವಾಳ ಹಿಡಿಯುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಹಿಡಿಯುವಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಅನಿಲ್‍ಕುಮಾರ್ ಜಾನಿ (19), ರಾಹುಲ್ ನಾಯ್ಕ (20) ಹಾಗೂ ಓರ್ವ ಬಾಲಾಪರಾಧಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 2 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಬಂಧನದಿಂದಾಗಿ ಐದಕ್ಕೂ ಹೆಚ್ಚು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹೇಗೆ ಸಂಚು ರೂಪಿಸುತ್ತಿದ್ದರು?
    ಆರೋಪಿಗಳು ಕ್ಯಾಪ್ ಧರಿಸಿ ಬೈಕ್ ನಲ್ಲಿ ಬಂದು ಬೀಗ ಹಾಕಿರುವ ಮನೆಗಳನ್ನ ಗುರುತಿಸಿ ಮನೆಗಳ್ಳತನಕ್ಕೆ ಪ್ಲಾನ್ ಹಾಕಿಕೊಳ್ಳುತ್ತಿದ್ದರು. ಬೀಗ ಹಾಕಿರುವ ಮನೆಗಳ ಮೇಲೆ ಹಾರಲು ಬಾರದ ಪಾರಿವಾಳ ಬಿಟ್ಟು ಯಾರಿಗೂ ಅನುಮಾನ ಬಾರದಂತೆ ಕಳ್ಳತನ ಮಾಡುತ್ತಿದ್ದರು. ಕಳ್ಳತನದ ವೇಳೆ ಯಾರಾದರೂ ಅನುಮಾನಿಸಿ ಪ್ರಶ್ನಿಸಿದರೆ ಪಾರಿವಾಳ ಟೆರೆಸ್ ಮೇಲೆ ಬಂದಿದೆ ಹಿಡಿದುಕೊಳ್ಳೋಕೆ ಬಂದಿದ್ದೇವೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು.

    ಸಿಕ್ಕಿಬಿದ್ದಿದ್ದು ಹೇಗೆ?
    ಕುಮಾರಸ್ವಾಮಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ಘಟನಾ ಸ್ಥಳದಲ್ಲಿದ್ದ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಓರ್ವ ಬಾಲಕ ಅನುಮಾನಸ್ಪದವಾಗಿ ಪಾರಿವಾಳ ಹಿಡಿದು ಓಡಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಸಿಸಿ ಟಿವಿಯ ಜಾಡನ್ನು ಹಿಡಿದು ಬೆನ್ನತ್ತಿದ್ದಾರೆ. ಈ ವೇಳೆ ಪೊಲೀಸರಿಗೆ ಓರ್ವ ಬಾಲಕ ಸಿಕ್ಕಿದ್ದಾನೆ. ವಿಚಾರಣೆಗೆ ಒಳಪಡಿಸಿದಾಗ ಬಾಲಕ ಕಳ್ಳತನವನ್ನು ಒಪ್ಪಿಕೊಂಡಿದ್ದು, ಕೃತ್ಯದಲ್ಲಿ ಇನ್ನೂ ಇಬ್ಬರು ಭಾಗಿಯಾಗಿರುವುದಾಗಿ ತಿಳಿಸಿದ್ದಾನೆ. ಈ ವೇಳೆ ಆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ.

  • ಮನೆಯೊಳಗೆ ಪಾರಿವಾಳ ಬರುವುದನ್ನ ತಪ್ಪಿಸಲು ಹೋಗಿ 5ನೇ ಮಹಡಿಯಿಂದ ಬಿದ್ದು ಗೃಹಿಣಿ ಸಾವು

    ಮನೆಯೊಳಗೆ ಪಾರಿವಾಳ ಬರುವುದನ್ನ ತಪ್ಪಿಸಲು ಹೋಗಿ 5ನೇ ಮಹಡಿಯಿಂದ ಬಿದ್ದು ಗೃಹಿಣಿ ಸಾವು

    ಮುಂಬೈ: ಮನೆಯೊಳಗೆ ಪಾರಿವಾಳ ಬರುವುದನ್ನು ತಪ್ಪಿಸಲು ಹೋಗಿ ಗೃಹಿಣಿಯೊಬ್ಬರು 5ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಮುಂಬೈನ ನೆಹರು ನಗರದಲ್ಲಿ ನಡೆದಿದೆ.

    ಕರುಣಾ (57) ಮೃತ ದುರ್ದೈವಿ. ಕುರ್ಲಾದ ಕಟ್ಟಡವೊಂದರಲ್ಲಿ 5ನೇ ಮಹಡಿಯಲ್ಲಿ ವಾಸವಿದ್ದರು. ಇವರು ಶುಕ್ರವಾರ ಬೆಡ್‍ರೂಂನ ಕಿಟಕಿಯ ಗ್ರಿಲ್ ಮೂಲಕ ಪಾರಿವಾಳ ಒಳಗೆ ಬರುವುದನ್ನು ತಪ್ಪಿಸಲೆಂದು ಗ್ರಿಲ್‍ಗೆ ತಂತಿ ಕಟ್ಟಲು ಹೋದಾಗ ಗ್ರಿಲ್ ಕುಸಿದಿದ್ದು, ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

    ಕರುಣಾ ಅವರ ಪತಿ ವಿಜಯ್ ಸ್ವಂತ ಉದ್ಯಮ ನಡೆಸುತ್ತಿದ್ದು, ಮಗಳು ವೈಷ್ಣವಿ ಎಂಬಿಎ ಮಾಡಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವು ದಶಕಗಳಿಂದ ಇರುವ ಸುಮಾರು 6 ಮಿಲಿಮೀಟರ್‍ನಷ್ಟು ದಪ್ಪವಿರೋ ಗ್ರಿಲ್ ಹೀಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿರೋದು ಕಟ್ಟಡದ ಇತರೆ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಒಂದು ಕಡೆಗೆ ಬಾಗಿರುವುದು ಬಿಟ್ಟರೆ ಗ್ರಿಲ್‍ಗೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ ಗ್ರಿಲ್‍ಗೆ ಹಾಕಲಾಗಿದ್ದ ಮೊಳೆ/ಸ್ಕ್ರೂ ಸಡಿಲಗೊಂಡು ಈ ರೀತಿ ಆಗಿರಬಹುದು ಅಥವಾ ಗೋಡೆಯಲ್ಲೇ ಸಮಸ್ಯೆ ಇರಬಹುದು ಎಂದು ವರದಿಯಾಗಿದೆ.

    ಗ್ರಿಲ್ ಬಹಳ ಗಟ್ಟಿಯಾಗಿದೆ ಎಂದು ಕಟ್ಟಡದ ನಿವಾಸಿಗಳು ಮಕ್ಕಳನ್ನ ಅದರೊಳಗೆ ಆಟವಾಡಲು ಬಿಡುತ್ತಿದ್ದರು. ಕೆಲವರು ಕೆಲವು ಭಾರವಾದ ಅನವಶ್ಯಕ ವಸ್ತುಗಳನ್ನು ಕೂಡ ಇದೇ ಗ್ರಿಲ್‍ನಲ್ಲಿ ರಾಶಿ ಹಾಕುತ್ತಿದ್ದರು. ಆದ್ರೆ ಈ ಘಟನೆಯಿಂದ ಗ್ರಿಲ್ ಹೆಚ್ಚು ಭಾರ ತಡೆಯುವ ಸಾಮಥ್ರ್ಯ ಹೊಂದಿಲ್ಲ ಎಂಬುದು ಅವರಿಗೆ ಮನವರಿಕೆಯಾಗಿದೆ.

    ಶುಕ್ರವಾರ ಸುಮಾರು 10.15ರ ವೇಳೆಯಲ್ಲಿ ವೈಷ್ಣವಿ ಒಂದು ರೂಮಿನಲ್ಲಿದ್ದರು. ಆಕೆಯ ತಾಯಿ ಮತ್ತೊಂದು ರೂಮಿನಲ್ಲಿ ಗ್ರಿಲ್‍ಗೆ ತಂತಿ ಕಟ್ಟುತ್ತಿದ್ದರು. ಆಗ ಗ್ರಿಲ್ ಕುಸಿದು ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.

    ನನಗೆ ಜೋರಾದ ಶಬ್ದ ಕೇಳಿಸಿತು. ತಕ್ಷಣ ಹೊರಗೆ ಬಂದು ನೋಡಿದೆ. ಕಿಟಕಿಯ ಗ್ರಿಲ್ ಬಾಕ್ಸ್ ಸಮೇತ ಅಮ್ಮ ಕೂಡ ಕೆಳಗೆ ಬಿದ್ದಿದ್ದರು. ನಾನು ಕೆಳಗೆ ಓಡಿ ಹೋದೆ ಆದರೆ. ಅಷ್ಟರಲ್ಲಿ ಅಮ್ಮ ಮೃತಪಟ್ಟಿದ್ದರು ಎಂದು ವೈಷ್ಣವಿ ಹೇಳಿದ್ದಾರೆ.

    ಈ ಬಗ್ಗೆ ನೆಹರು ನಗರ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ಗ್ರಿಲ್‍ನ ಮೊಳೆಗಳು ರಸ್ಟ್ ಹಿಡಿದಿದ್ದವು. ಅದು ಮೃತ ಮಹಿಳೆಯ ದೇಹದ ಭಾರವನ್ನು ಹೊರುವಷ್ಟು ಸಾಮಥ್ರ್ಯ ಹೊಂದಿರಲಿಲ್ಲ. ಇದರಲ್ಲಿ ಕಟ್ಟಡ ಮಾಲೀಕರ ನಿರ್ಲಕ್ಷ್ಯ ಇದೆಯಾ ಎಂದು ಪರಿಶೀಲನೆ ಮಾಡುತ್ತೇವೆ ಎಂದು ಡಿಸಿಪಿ ಶಶಿ ಉಮ್ಯಾಪ್ ತಿಳಿಸಿದರು.

    ಈ ರೀತಿ ಗ್ರಿಲ್ ಕುಸಿದು ಬಿದ್ದಿರುವುದನ್ನು ನಾನು 25 ವರ್ಷಗಳ ವೃತ್ತಿಯಲ್ಲಿ ಕಂಡಿಲ್ಲ. ಕೆಲವೊಮ್ಮೆ ಸ್ಕ್ರೂಗಳು ಸ್ವಲ್ಪ ಸಡಿಲವಾಗುವುದು ಮತ್ತು ತುಕ್ಕು ಹಿಡಿಯುತ್ತವೆ. ಬಹುಶಃ ಗೋಡೆಯಲ್ಲೇ ಸಮಸ್ಯೆ ಇರಬಹುದು ಎಂದು ಗ್ರಿಲ್ ತಯಾರಿಕೆಯಲ್ಲಿ ಪರಿಣತರಾಗಿರೋ ಹರೂನ್ ಖಾನ್ ಹೇಳಿದ್ದಾರೆ.