Tag: PBUH

  • ಭಾರತ ಮತಾಂಧರನ್ನು ಪ್ರಶಂಸಿಸುವುದಿಲ್ಲ: ಪಾಕ್ ಪ್ರಧಾನಿಗೆ ಭಾರತ ಸರ್ಕಾರ ತೀವ್ರ ತರಾಟೆ

    ಭಾರತ ಮತಾಂಧರನ್ನು ಪ್ರಶಂಸಿಸುವುದಿಲ್ಲ: ಪಾಕ್ ಪ್ರಧಾನಿಗೆ ಭಾರತ ಸರ್ಕಾರ ತೀವ್ರ ತರಾಟೆ

    ನವದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್‌ರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಒಳಗಾಗಿರುವ ನೂಪುರ್ ಶರ್ಮಾ ಅವರನ್ನು ಬಿಜೆಪಿ ಅಮಾನತು ಮಾಡಿದೆ. ನೂಪುರ್ ಶರ್ಮಾ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ಷೇಪಣೆಗೆ ಒಳಗಾಗಿದ್ದು ಈ ಕುರಿತು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಹ ಟ್ವೀಟ್ ಮಾಡಿದ್ದರು.

    ಪಾಕ್ ಪ್ರಧಾನಿಯ ಟ್ವೀಟ್‌ಗೆ ಭಾರತ ಸರ್ಕಾರ ತಿರುಗೇಟು ನೀಡಿದೆ. ಪಾಕಿಸ್ತಾನದ ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ. ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮಾಡುವವರು ಮತ್ತೊಂದು ರಾಷ್ಟ್ರದಲ್ಲಿ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವುದರ ಕುರಿತು ಕಾಮೆಂಟ್ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಚರ್ಚ್‍ನಲ್ಲಿ ಹತ್ಯಾಕಾಂಡ – 50 ಮಂದಿಯನ್ನು ಗುಂಡಿಟ್ಟು ಕೊಂದ

    ಪಾಕಿಸ್ತಾನದಲ್ಲಿನ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಅಹ್ಮದೀಯರು ಸೇರಿದಂತೆ ಅಲ್ಪಸಂಖ್ಯಾತರ ವ್ಯವಸ್ಥಿತ ಕಿರುಕುಳಕ್ಕೆ ಜಗತ್ತೇ ಸಾಕ್ಷಿಯಾಗಿದೆ. ಹೀಗಿದ್ದೂ ಭಾರತದ ವಿರುದ್ಧ ಟೀಕೆ ಮಾಡುವುದು ಅಸಂಬದ್ಧ ಎಂದು MEA ವಕ್ತಾರ ಅರಿಂದಮ್ ಬಾಗ್ಚಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸಂಕುಚಿತ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ – OICಗೆ ವಿದೇಶಾಂಗ ಇಲಾಖೆಯ ತಿರುಗೇಟು

    ನಮ್ಮ ಪ್ರೀತಿಯ ಪ್ರವಾದಿ ಬಗ್ಗೆ ಭಾರತದ ಬಿಜೆಪಿ ನಾಯಕರು ನೋವುಂಟು ಮಾಡುವ ಕಾಮೆಂಟ್‌ಗಳನ್ನು ನಾನು ಪ್ರಬಲವಾದ ಪದಗಳಲ್ಲಿ ಖಂಡಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಧಾರ್ಮಿಕ ಸ್ವಾತಂತ್ರ‍್ಯವನ್ನು ತುಳಿಯುತ್ತಿದೆ. ಮುಸ್ಲಿಮರನ್ನು ಹಿಂಸಿಸುತ್ತಿದೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಜಗತ್ತು ಇದನ್ನು ಗಮನಿಸಬೇಕು ಮತ್ತು ಭಾರತದ ನಡೆಯನ್ನು ತೀವ್ರವಾಗಿ ಖಂಡಿಸಬೇಕು. ಪವಿತ್ರ ಪ್ರವಾದಿ ಅವರ ಮೇಲೆ ನಮ್ಮ ಪ್ರೀತಿ ಸರ್ವೋಚ್ಛವಾಗಿದೆ. ಎಲ್ಲಾ ಮುಸ್ಲಿಮರು ತಮ್ಮ ಪವಿತ್ರ ಪ್ರವಾದಿ ಪ್ರೀತಿ ಮತ್ತು ಗೌರವಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಬಹುದು ಎಂದು ಪಾಕ್‌ ಪ್ರಧಾನಿ ಷರೀಫ್ ಟ್ವೀಟ್ ಮಾಡಿದ್ದರು.

    ಇದಕ್ಕೆ ತಿರುಗೇಟು ನೀಡಿರುವ ಭಾರತ, ಪಾಕಿಸ್ತಾನದಲ್ಲಿ ಮತಾಂಧರನ್ನು ಪ್ರಶಂಸಿಸಲಾಗುತ್ತದೆ ಮತ್ತು ಅವರ ಗೌರವಾರ್ಥವಾಗಿ ಸ್ಮಾರಕಗಳನ್ನು ನಿರ್ಮಿಸಲಾಗುತ್ತದೆ. ಆದರೆ ಭಾರತದಲ್ಲಿ ಹಾಗಿಲ್ಲ. ಭಾರತ ಸರ್ಕಾರವು ಎಲ್ಲ ಧರ್ಮಗಳಿಗೆ ಅತ್ಯುನ್ನತ ಗೌರವ ನೀಡುತ್ತದೆ. ಇದು ಪಾಕಿಸ್ತಾನಕ್ಕಿಂತ ಭಿನ್ನವಾಗಿದೆ. ಭಾರತದಲ್ಲಿ ಕೋಮು ಸೌಹಾರ್ದತೆ ಹುಟ್ಟುಹಾಕುವ ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ.

    ಈ ರೀತಿಯ ಪ್ರಚಾರದಲ್ಲಿ ತೊಡಗುವ ಬದಲು ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮದ ಮೇಲೆ ಕೇಂದ್ರೀಕರಿಸಬೇಕು ಎಂದು ಕುಟುಕಿದ್ದಾರೆ.