Tag: Payajar Shri

  • ಸಿಎಂ ಆದವರಿಗೆ ಸಿಟ್ಟು, ಕೋಪ ಇರಬಾರದು – ಮಮತಾ ವಿರುದ್ಧ ಪೇಜಾವರ ಶ್ರೀ ಅಸಮಾಧಾನ

    ಸಿಎಂ ಆದವರಿಗೆ ಸಿಟ್ಟು, ಕೋಪ ಇರಬಾರದು – ಮಮತಾ ವಿರುದ್ಧ ಪೇಜಾವರ ಶ್ರೀ ಅಸಮಾಧಾನ

    ಬಳ್ಳಾರಿ: ಮಮತಾ ಬ್ಯಾನರ್ಜಿಯ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿತ್ತು. ಆದರೆ ಅವರ ವರ್ತನೆಯಿಂದ ಈಗ ನನಗೆ ತುಂಬ ಅಸಮಾಧಾನವಾಗಿದೆ ಎಂದು ಉಡುಪಿಯ ಪೇಜಾವರ ಶ್ರೀಗಳು ತಿಳಿಸಿದ್ದಾರೆ.

    ಬಳ್ಳಾರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಉಡುಪಿಯ ಪೇಜಾವರ ಶ್ರೀಗಳು, ಮಮತಾ ಬ್ಯಾನರ್ಜಿಯ ಬಗ್ಗೆ ನನಗೆ ತುಂಬ ಅಸಮಾಧಾನವಿದೆ. ಮುಖ್ಯಮಂತ್ರಿಯಾಗಿ ಅವರಿಗೆ ಇಷ್ಟೊಂದು ಕೋಪ, ಸಿಟ್ಟು ಇರಬಾರದು. ಸಿಎಂ ಆದವರು ಇಷ್ಟೊಂದು ಬಿರುಸಿನಿಂದ ಮಾತನಾಡಬಾರದು. ತಾಳ್ಮೆ ಇದ್ದರೆ ಒಳ್ಳೆಯದು. ಅವರ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿತ್ತು. ಆದರೆ ಈಗ ಅವರ ವರ್ತನೆಯಿಂದ ಬೇಸರವಾಗಿದೆ ಎಂದು ಹೇಳಿದ್ದಾರೆ.

    ರಾಜಕೀಯಕ್ಕಾಗಿ ನುಸುಳುಕೋರರಿಗೆ ಅವಕಾಶ ನೀಡುತ್ತಿದ್ದಾರೆ. ಶ್ರೀರಾಮ ಹೆಸರನ್ನು ವಿವಾದ ಮಾಡುತ್ತಿದ್ದಾರೆ. ಬಾಂಗ್ಲಾದೇಶದಿಂದ ಬಂದವರಿಗೆ ವಿಚಾರಣೆ ಮಾಡದೆ ನಾಗರೀಕ ಹಕ್ಕು ಕೊಡುತ್ತಿದ್ದಾರೆ. ಅದರ ಪರಿಣಾಮ ದೇಶದ ಮೇಲೆ ಆಗುತ್ತದೆ. ಅವರ ನಿಲುವು ರಾಷ್ಟ್ರ ವಿರೋಧಿತನ ತೋರಿಸುತ್ತಿದೆ. ಸಿಎಂ ಆದವರು ಇಷ್ಟೊಂದು ಬಿರುಸಿನಿಂದ ಮಾತನಾಡಬಾರದು ಎಂದು ಮಮತಾ ಬ್ಯಾನರ್ಜಿ ಅವರ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

    ಬಿಜೆಪಿಯ ಎರಡನೇ ಅವಧಿಯಲ್ಲಿ ರಾಮಮಂದಿರ ನಿರ್ಮಾಣ ಖಚಿತವಾಗಿದೆ. ರಾಜ್ಯಸಭೆಯಲ್ಲಿ ಬಹುಮತ ಕೊರತೆ ಇದೆ. ಮುಂದಿನ ವರ್ಷ ರಾಜ್ಯಸಭೆಯಲ್ಲಿಯೂ ಬಹುಮತ ಬರಲಿದೆ. ಎಲ್ಲ ಸಂತರೂ ಸೇರಿ ಬಹುತವಿದೆ ಎಂದು ಒತ್ತಡ ಹಾಕುತ್ತೇವೆ. ನನಗೆ ಸುಪ್ರೀಂ ಕೋರ್ಟ್ ಮೇಲೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.

    ರಾಜ್ಯ ಸರ್ಕಾರ ಗೊಂದಲದಲ್ಲಿದೆ. ಎರಡೂ ಪಕ್ಷಗಳು ಸೇರಿ ಸರ್ಕಾರ ನಡೆಸಲು ತೊಂದರೆಯಾಗುತ್ತದೆ ಎಂದು ನಾನು ಮೊದಲೇ ಹೇಳಿದ್ದೆ. ಬಿಜೆಪಿಯನ್ನೂ ಹೊರಗಿಡಬೇಡಿ. ಸಂವಿಧಾನದ ಪ್ರಕಾರ ಅದು ಕೂಡ ಜಾತ್ಯಾತೀತ ಪಕ್ಷವಾಗಿದ್ದು, ಬಿಜೆಪಿಯೂ ಕೂಡ ಸಂವಿಧಾನವನ್ನು ಒಪ್ಪಿಕೊಂಡಿದೆ. ಹೀಗಾಗಿ ಬಿಜೆಪಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ವರ್ವ ಪಕ್ಷ ಸರ್ಕಾರ ಮಾಡಿದರೆ ಈ ಭಯವೇ ಇರುವುದಿಲ್ಲ ಎಂದರು.

  • ಮೋದಿ ಕುರಿತ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ – ಪೇಜಾವರ ಶ್ರೀ

    ಮೋದಿ ಕುರಿತ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ – ಪೇಜಾವರ ಶ್ರೀ

    ಮೈಸೂರು: ಕೇಂದ್ರ ಸರ್ಕಾರದ ನಾಲ್ಕು ವರ್ಷದ ಆಡಳಿತದ ಬಗ್ಗೆ ಅತೃಪ್ತಿ ವ್ಯಕ್ತಪಡಿಸುವಂತಹ ಹೇಳಿಕೆ ನೀಡಿದ್ದ ಪೇಜಾವರ ಶ್ರೀಗಳು ಇಂದು ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಆಡಳಿತದ ವಿಚಾರವಾಗಿ ನಾನು ಉಡುಪಿಯಲ್ಲಿ ಮಾತನಾಡಿದ್ದೆ, ಆದರೆ ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ. ಅಂದು ಮಾತನಾಡುವಾಗ ಸರಿಯಾಗಿ ಮೈಕ್ ಇರಲಿಲ್ಲ. ಅದು ಕೆಲವರಿಗೆ ಸರಿಯಾಗಿ ಕೇಳಿಸದೆ ತಪ್ಪಾಗಿ ಅರ್ಥೈಸಲಾಗಿದೆ. ಪತ್ರಕರ್ತರು ಮೋದಿ ಆಡಳಿತದ ಬಗ್ಗೆ ಅಭಿಪ್ರಾಯ ಕೇಳಿದ ವೇಳೆ ನಾನು ಎಲ್ಲಿಯೂ ಅತೃಪ್ತಿ ಆಗಿದೆ ಎಂದು ಎಲ್ಲಿಯೂ ಹೇಳಿಲ್ಲ. ಅವರ ಮೇಲೆ ಅಸಮಾಧಾನವನ್ನು ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಿಕರಣ ನೀಡಿದ್ದಾರೆ.  ಇದನ್ನು ಓದಿ: ಕುಮಾರಸ್ವಾಮಿ ಪೂರ್ಣಾವಧಿ ಸರ್ಕಾರ ಮಾಡಲಿ – ಪೇಜಾವರಶ್ರೀ ಹಾರೈಕೆ

    ಇದೇ ವೇಳೆ ಗಂಗಾ ನದಿ ಹೇಳಿಕೆ ಕುರಿತು ಮಾತನಾಡಿದ ಅವರು, ಗಂಗಾನದಿ ಶುಚಿತ್ವ ಹಾಗೂ ವಿದೇಶದಲ್ಲಿನ ಕಪ್ಪು ಹಣದ ಬಗ್ಗೆ ಉತ್ತಮ ಸಾಧನೆ ಆಗಿಲ್ಲ ಎಂದು ಹೇಳಿದ್ದೇನೆ. ಈ ಬಗ್ಗೆ ಮಾತ್ರ ನಾನು ಅತೃಪ್ತಿಯನ್ನು ವ್ಯಕ್ತಪಡಿಸಿದ್ದೇನೆ. ಆದರೆ ಅವರ ಸರ್ಕಾರದ ಎಲ್ಲ ಕೆಲಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ. ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದರು.

    ನನ್ನ ಹೇಳಿಕೆಯಿಂದ ಹೊಸ ಚರ್ಚೆ ಆರಂಭವಾಗಿತ್ತು. ಆ ಕಾರಣದಿಂದ ತರಾತುರಿಯಲ್ಲಿ ಸ್ಪಷ್ಟೀಕರಣ ನೀಡುತ್ತಿದ್ದೇನೆ. ನಾನು ಒಂದು ಪಕ್ಷ ಅಥವಾ ವ್ಯಕ್ತಿಯ ಪರವಾಗಿ ನಾನು ಇಲ್ಲ. ಪಕ್ಷಾತೀತವಾಗಿ ನಾನು ಸಲಹೆ ಸೂಚನೆಗಳನ್ನ ಕೊಡುತ್ತೇವೆ. ಅದೆ ರೀತಿ ಮೋದಿ ಸರ್ಕಾರಕ್ಕೂ ಸಲಹೆ ಸೂಚನೆ ನೀಡಿದ್ದೇವೆ. ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಎರಡು ಕೆಲಸಗಳು ಇನ್ನು ಉತ್ತಮವಾಗಿ ಆಗಬೇಕಿತ್ತು. ಅದರ ಬಗ್ಗೆ ಸಲಹೆ ನೀಡಿದ್ದೇವೆ ಅಷ್ಟೇ ಎಂದರು. ಇದನ್ನು ಓದಿ: ಪೇಜಾವರ ಶ್ರೀ ಸನ್ಯಾಸಿಗಳು, ಅವರು ಟಿವಿ ನೋಡದ ಕಾರಣ ಕೇಂದ್ರದ ಯೋಜನೆಗಳ ಅರಿವಿಲ್ಲ: ಕರಂದ್ಲಾಜೆ

    ಇದೇ ವೇಳೆ ಸರ್ಕಾರದ ಸಲಹೆ ನೀಡುವ ಕುರಿತು ಮಾತನಾಡಿದ ಅವರು ರಾಜ್ಯದ ಮೈತ್ರಿ ಸರಕಾರಕ್ಕೆ ಇನ್ನೂ ರೆಸಾರ್ಟ್ ರಾಜಕೀಯದ ಭಯವಿದೆ. ಆರು ತಿಂಗಳ ನಂತರ ಅವಿಶ್ವಾಸ ನಿರ್ಣಯ ಮಂಡಿಸಿಬಿಟ್ಟರೆ ಹೇಗೆ ಎಂಬ ಆತಂಕ ಆಡಳಿತ ನಡೆಸುವವರಿಗೆ ಇದೆ. ಇದುವರೆಗೂ ಸಚಿವ ಸಂಪುಟವೇ ರಚನೆ ಆಗಿಲ್ಲ. ಪರಸ್ಪರ ಆರೋಪ ಮಾಡಿಕೊಂಡವರು ಜೊತೆಯಾಗಿ ಸರಕಾರ ಮಾಡಿದ್ದಾರೆ. ಅಪ್ಪನಾಣೆ ಸಿಎಂ ಆಗಲ್ಲ ಎಂದಿದ್ದ ಸಿದ್ದರಾಮಯ್ಯ ಅವರೇ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಮೂರು ಪಕ್ಷಗಳು ಸೇರಿ ಸರಕಾರ ರಚಿಸಿ ಬಿಡಲಿ. ಆಗ ಯಾವುದೇ ಅಸ್ಥಿರತೆ ಭಯ ಇರುವುದಿಲ್ಲ ಎಂದು ಸಲಹೆ ನೀಡಿದರು.