Tag: Patanjali

  • ಪತಂಜಲಿ ಚವನ್‌ಪ್ರಾಶ್ ಉತ್ಪನ್ನದ ಜಾಹೀರಾತು ನಿಲ್ಲಿಸಲು ದೆಹಲಿ ಹೈಕೋರ್ಟ್ ಸೂಚನೆ

    ಪತಂಜಲಿ ಚವನ್‌ಪ್ರಾಶ್ ಉತ್ಪನ್ನದ ಜಾಹೀರಾತು ನಿಲ್ಲಿಸಲು ದೆಹಲಿ ಹೈಕೋರ್ಟ್ ಸೂಚನೆ

    ನವದೆಹಲಿ: ಪತಂಜಲಿಯ (Patanjali) ಚವನ್‌ಪ್ರಾಶ್ ಉತ್ಪನ್ನದ ಕುರಿತಾಗಿ ಯಾವುದೇ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ದೆಹಲಿ ಹೈಕೋರ್ಟ್ ನಿರ್ಬಂಧ ವಿಧಿಸಿದೆ. ಪತಂಜಲಿ ವಿರುದ್ಧ ಡಾಬರ್ (Dabur) ಸಂಸ್ಥೆ ಸಲ್ಲಿಸಿದ್ದ ಮಾನಹಾನಿ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

    ಜಾಹೀರಾತಿನಲ್ಲಿ, ಪತಂಜಲಿ ಆಯುರ್ವೇದ ಗ್ರಂಥಗಳು ಮತ್ತು ಶಾಸ್ತ್ರೀಯ ಗ್ರಂಥಗಳ ಪ್ರಕಾರ ಚವನ್‌ಪ್ರಾಶ್ (Chyawanprash) ತಯಾರಿಸಿದ ಏಕೈಕ ಸಂಸ್ಥೆ ಎಂದು ಹೇಳಿಕೊಂಡಿದ್ದು, ಡಾಬರ್‌ನಂತಹ ಇತರ ಬ್ರ‍್ಯಾಂಡ್‌ಗಳಿಗೆ ಅಧಿಕೃತ ಜ್ಞಾನದ ಕೊರತೆಯಿದೆ ಎಂದು ಸೂಚಿಸುತ್ತದೆ. ಈ ಜಾಹೀರಾತುಗಳಿಗೆ ತಕ್ಷಣ ತಡೆಯಾಜ್ಞೆ ನೀಡುವಂತೆ ಕೋರಿ ಡಾಬರ್ ದೆಹಲಿ ಹೈಕೋರ್ಟ್ (Delhi High Court) ಮೊರೆ ಹೋಗಿ, ಬ್ರ‍್ಯಾಂಡ್‌ನ ಖ್ಯಾತಿಗೆ ಉಂಟಾದ ಹಾನಿಗೆ ಪರಿಹಾರವಾಗಿ 2 ಕೋಟಿ ರೂ.ಗಳನ್ನು ನೀಡುವಂತೆ ಕೋರಿತು. ಇದನ್ನೂ ಓದಿ: 2026ರ ಹಾಲಿವುಡ್ ವಾಕ್ ಆಫ್ ಫೇಮ್‌ ಗೌರವಕ್ಕೆ ಪಾತ್ರರಾದ ದೀಪಿಕಾ ಪಡುಕೋಣೆ

    ಜಾಹೀರಾತುಗಳು ಗ್ರಾಹಕರನ್ನು ದಾರಿ ತಪ್ಪಿಸುತ್ತವೆ. ಕಟ್ಟುನಿಟ್ಟಾದ ನಿಯಂತ್ರಕ ಮಾನದಂಡಗಳಿಂದ ನಿಯಂತ್ರಿಸಲ್ಪಡುವ ಉತ್ಪನ್ನಗಳ ಮೇಲಿನ ವಿಶ್ವಾಸವನ್ನು ದುರ್ಬಲಗೊಳಿಸುತ್ತವೆ ಎಂದು ಡಾಬರ್ ತನ್ನ ಅರ್ಜಿಯಲ್ಲಿ ವಾದಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು ಮಧ್ಯಂತರ ಆದೇಶ ನೀಡಿದರು. ಮುಂದಿನ ವಿಚಾರಣೆಯು ಜುಲೈ 14ರಂದು ನಡೆಯಲಿದೆ. ಇದನ್ನೂ ಓದಿ: ಕೋವಿಶೀಲ್ಡ್‌ ಲಸಿಕೆ ಸುರಕ್ಷಿತವಾಗಿದೆ, ಹಠಾತ್‌ ಸಾವಿಗೆ ಸಂಬಂಧವಿಲ್ಲ: ಸೀರಮ್‌ ಇನ್‌ಸ್ಟಿಟ್ಯೂಟ್‌

    ಈ ಹಿಂದೆಯೂ ಕೋವಿಡ್ ವ್ಯಾಕ್ಸಿನ್ ಜಾಹೀರಾತು ವಿಚಾರದಲ್ಲೂ ಪತಂಜಲಿ ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿತ್ತು. ಪತಂಜಲಿ ವ್ಯಾಕ್ಸಿನ್‌ನಿಂದ ಕೊರೊನಾ ಗುಣಮುಖವಾಗಲಿದೆ ಎಂದು ಹೇಳಿಕೊಂಡಿತ್ತು. ಇದರ ವಿರುದ್ಧ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಅರ್ಜಿ ಸಲ್ಲಿಸಿತ್ತು. ಬಳಿಕ ಇಂತಹ ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಇತರ ಭರವಸೆ ನೀಡುವುದನ್ನು ನಿಲ್ಲಿಸಲು ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ಸೂಚಿಸಲಾಗಿತ್ತು. ಈ ಆದೇಶ ಪಾಲನೆ ಮಾಡದ ಹಿನ್ನೆಲೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿ ಆಗಲಿ: ಸಂಸದ ಯದುವೀರ್

  • ಪತಂಜಲಿ ಸಸ್ಯಾಹಾರಿ ಹರ್ಬಲ್ ಟೂತ್ ಪೌಡರ್‌ನಲ್ಲಿ ಮಾಂಸಾಹಾರಿ ಅಂಶ – ದೆಹಲಿ ಹೈಕೋರ್ಟ್‌ಗೆ ಅರ್ಜಿ

    ಪತಂಜಲಿ ಸಸ್ಯಾಹಾರಿ ಹರ್ಬಲ್ ಟೂತ್ ಪೌಡರ್‌ನಲ್ಲಿ ಮಾಂಸಾಹಾರಿ ಅಂಶ – ದೆಹಲಿ ಹೈಕೋರ್ಟ್‌ಗೆ ಅರ್ಜಿ

    ನವದೆಹಲಿ: ಸಸ್ಯಾಹಾರಿ ಎಂದು ಮಾರಾಟವಾಗುವ ಪತಂಜಲಿ (Patanjali) ಬ್ರ‍್ಯಾಂಡ್‌ನ ಹರ್ಬಲ್ ಟೂತ್ ಪೌಡರ್ ‘ದಿವ್ಯ ಮಂಜನ್’ನಲ್ಲಿ ಮಾಂಸಾಹಾರಿ ಅಂಶಗಳಿವೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್‌ಗೆ (Delhi High Courtt) ಅರ್ಜಿ ಸಲ್ಲಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿರುವ ಹೈಕೋರ್ಟ್ ಪತಂಜಲಿ ಕಂಪನಿ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

    ವಕೀಲ ಯತಿನ್ ಶರ್ಮಾ ಅವರು ಅರ್ಜಿ ಸಲ್ಲಿಸಿದ್ದು, ಪತಂಜಲಿಯ ದಿವ್ಯ ಮಂಜನ್ (Divya Manjan) ಪ್ಯಾಕೇಜಿಂಗ್ ಸಸ್ಯಾಹಾರಿ ಉತ್ಪನ್ನಗಳನ್ನು ಸೂಚಿಸುವ ಹಸಿರು ಚುಕ್ಕೆಯನ್ನು ಹೊಂದಿದೆ. ಹೀಗಾಗಿ ನಾನು ದೀರ್ಘಕಾಲದಿಂದ ಬಳಸುತ್ತಿದ್ದೇನೆ. ಆದರೆ ಈ ಹಲ್ಲಿನ ಪುಡಿಯಲ್ಲಿ ಸೆಪಿಯಾ ಅಫಿಷಿನಾಲಿಸ್ ಅಥವಾ ಮೀನಿನ ಸಾರ ಇದೆ ಎಂದು ಸಂಶೋಧನೆಯೊಂದು ಹೇಳಿದೆ. ಇದನ್ನೂ ಓದಿ: BMTC ನಿರ್ವಾಹಕ ಹುದ್ದೆಗೆ ಪರೀಕ್ಷೆ, ಕಟ್ಟುನಿಟ್ಟಿನ ನಿಗಾವಹಿಸುವಂತೆ ಕ್ರಮ – ಕೆಇಎ

    ‘ದಿವ್ಯ ಮಂಜನ್’ನಲ್ಲಿ ಸಮುದ್ರಫೆನ್ ಪ್ರಾಣಿ ಆಧಾರಿತ ಉತ್ಪನ್ನವಾಗಿದೆ ಎಂದು ರಾಮ್‌ದೇವ್ ಸ್ವತಃ ಯೂಟ್ಯೂಬ್ ವೀಡಿಯೊದಲ್ಲಿ ಒಪ್ಪಿಕೊಂಡಿದ್ದಾರೆ. ಇದು ಮಿಸ್ ಬ್ರ‍್ಯಾಂಡಿಂಗ್ ಮತ್ತು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯ ಉಲ್ಲಂಘನೆಯಾಗಿದೆ. ಗ್ರಾಹಕರ ಧಾರ್ಮಿಕ ನಂಬಿಕೆಗಳು ಹಾನಿಯಾಗಿದೆ. ಈ ಸಂಶೋಧನೆಯು ತನಗೆ ಮತ್ತು ಕುಟುಂಬಕ್ಕೆ ವಿಶೇಷವಾಗಿ ದುಃಖಕರವಾಗಿದೆ ಎಂದು ಶರ್ಮಾ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ತ್ವರಿತ ತೀರ್ಪಿನ ಅಗತ್ಯವಿದೆ: ಮೋದಿ

    ದೆಹಲಿ ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ಮತ್ತು ಆಯುಷ್ ಸಚಿವಾಲಯ ಸೇರಿದಂತೆ ವಿವಿಧ ಸರ್ಕಾರಿ ಏಜೆನ್ಸಿಗಳಿಗೆ ದೂರು ಸಲ್ಲಿಸಿದ್ದರೂ ಸಹ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನೂ ಓದಿ: ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಗೆ 200ನೇ ದಿನ – ಅನ್ನದಾತರ ಹೋರಾಟದಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದ ವಿನೇಶ್ ಫೋಗಟ್

    ಉತ್ಪನ್ನದ ತಪ್ಪು ಲೇಬಲ್ ಅನ್ನು ಪರಿಹರಿಸಲು ಮತ್ತು ಪ್ರತಿವಾದಿಗಳನ್ನು ಹೊಣೆಗಾರರನ್ನಾಗಿ ಮಾಡಲು ನ್ಯಾಯಾಂಗದ ಮಧ್ಯಸ್ಥಿಕೆಯನ್ನು ಮನವಿ ಬಯಸುತ್ತಿದ್ದು ಜೊತೆಗೆ ಮಾಂಸಾಹಾರಿ ಉತ್ಪನ್ನವನ್ನು ಸೇವಿಸುವುದರಿಂದ ಉಂಟಾಗುವ ತೊಂದರೆಗೆ ಪರಿಹಾರವನ್ನು ಸಹ ಅರ್ಜಿದಾರರು ಕೋರಿದ್ದಾರೆ. ಇದನ್ನೂ ಓದಿ: ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಪುರುಷರಿಗೆ ವಂಚಿಸುತ್ತಿದ್ದ ಮಹಿಳೆ ಅರೆಸ್ಟ್

    ಅರ್ಜಿಯನ್ನು ಕೈಗೆತ್ತಿಕೊಂಡ ನಂತರ ದೆಹಲಿ ಹೈಕೋರ್ಟ್ ಪತಂಜಲಿ ಆಯುರ್ವೇದ, ಬಾಬಾ ರಾಮ್‌ದೇವ್, ಕೇಂದ್ರ ಸರ್ಕಾರ ಮತ್ತು ಉತ್ಪನ್ನವನ್ನು ತಯಾರಿಸುವ ಪತಂಜಲಿಯ ದಿವ್ಯ ಫಾರ್ಮಸಿಗೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ನವೆಂಬರ್ 28ರಂದು ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ಶಂಕಿತ ಉಗ್ರ ಅರೆಸ್ಟ್‌

    ಪತಂಜಲಿ ಮತ್ತು ಅದರ ಸಹ-ಸಂಸ್ಥಾಪಕರಾದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರನ್ನು ಈ ಹಿಂದೆ ಮೋಸಗೊಳಿಸುವ ಜಾಹೀರಾತು ಅಭ್ಯಾಸಗಳಲ್ಲಿ ತೊಡಗಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ನಿಂದ ತರಾಟೆಗೆ ತೆಗೆದುಕೊಳ್ಳಲಾಗಿತ್ತು. ಕೋರ್ಟ್ ಎಚ್ಚರಿಕೆ ಬಳಿಕ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಬಹಿರಂಗ ಕ್ಷಮೆಯಾಚಿಸಿದ್ದರು. ಇದನ್ನೂ ಓದಿ: ಸರ್ಕಾರಗಳು ತರ್ಲೆ ಮಾಡೋದು ಕಡಿಮೆ ಮಾಡಿದ್ರೆ ನಮ್ಮ ಶಿಕ್ಷಣ ವ್ಯವಸ್ಥೆ ಇನ್ನೂ ಚೆನ್ನಾಗಿರುತ್ತೆ: ರಂಗನಾಥ್‌

  • ಬಾಬಾ ರಾಮ್‍ದೇವ್, ಆಚಾರ್ಯ ಬಾಲಕೃಷ್ಣಗೆ ಬಿಗ್ ರಿಲೀಫ್ – ನ್ಯಾಯಾಂಗ ನಿಂದನೆ ಆರೋಪ ಕೈಬಿಟ್ಟ ಸುಪ್ರೀಂ

    ಬಾಬಾ ರಾಮ್‍ದೇವ್, ಆಚಾರ್ಯ ಬಾಲಕೃಷ್ಣಗೆ ಬಿಗ್ ರಿಲೀಫ್ – ನ್ಯಾಯಾಂಗ ನಿಂದನೆ ಆರೋಪ ಕೈಬಿಟ್ಟ ಸುಪ್ರೀಂ

    ನವದೆಹಲಿ: ಗ್ರಾಹಕರ ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ ಆಯುರ್ವೇದ (Patanjali) ಮತ್ತು ಅದರ ಸಂಸ್ಥಾಪಕ ಬಾಬಾ ರಾಮ್‍ದೇವ್ (Baba Ramdev) ಮತ್ತು ಆಚಾರ್ಯ ಬಾಲಕೃಷ್ಣ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಆರೋಪವನ್ನು ಸುಪ್ರೀಂ ಕೋರ್ಟ್ (Supreme Court) ಕೈಬಿಟ್ಟಿದೆ.

    ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ದ್ವಿಸದಸ್ಯ ಪೀಠವು ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿ, ತೀರ್ಪು ಪ್ರಕಟಿಸಿದೆ.

    ಕಂಪನಿ ಮತ್ತು ಅದರ ಸಂಸ್ಥಾಪಕ ನ್ಯಾಯಾಲಯದ ಆದೇಶದ ಉಲ್ಲಂಘನೆ ಹಿನ್ನಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. ಬಳಿಕ ರಾಮ್‍ದೇವ್ ಅವರು ನವೆಂಬರ್ 2023ರ ಸುದ್ದಿಗೋಷ್ಠಿಯಲ್ಲಿ ಕ್ಷಮೆಯಾಚಿಸಿದ್ದರು. ಈ ಬಗ್ಗೆ ಪತ್ರಿಕೆಗಳಲ್ಲಿಯೂ ಕ್ಷಮಾಪಣೆ ಪ್ರಕಟಿಸಿದ್ದರು.

    ಕೋವಿಡ್-19 ವ್ಯಾಕ್ಸಿನೇಷನ್ ಮತ್ತು ಆಧುನಿಕ ಔಷಧದ ವಿರುದ್ಧ ಪತಂಜಲಿ ಟೀಕೆ ಮಾಡಿತ್ತು. ಪತಂಜಲಿ ಉತ್ಪನ್ನಗಳು ಕೊರೊನಾ ಗುಣಪಡಿಸುತ್ತದೆ ಎಂದು ಜಾಹೀರಾತು ನೀಡಿತ್ತು. ಈ ಜಾಹೀರಾತಿನ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ಪ್ರಾರಂಭಿಸಿತ್ತು.

    ಈ ವರ್ಷ ಫೆಬ್ರವರಿಯಲ್ಲಿ, ನ್ಯಾಯಾಲಯವು ಅಂತಹ ಜಾಹೀರಾತುಗಳ ಮೇಲೆ ತಾತ್ಕಾಲಿಕ ನಿಷೇಧವನ್ನು ವಿಧಿಸಿತ್ತು. ತಪ್ಪುದಾರಿಗೆಳೆಯುವ ಜಾಹಿರಾತಿನ ಸಲುವಾಗಿ ಕಂಪನಿ ಮತ್ತು ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತ್ತು. ನವೆಂಬರ್ 2023 ರಲ್ಲಿ, ಪತಂಜಲಿ ಆಯುರ್ವೇದ ಉತ್ಪನ್ನಗಳ ಪ್ರತಿ ಜಾಹೀರಾತಿನಲ್ಲಿ ರೋಗಗಳನ್ನು ಗುಣಪಡಿಸುತ್ತದೆ ಎಂದು ಹೇಳುವ ಪ್ರತಿ ಜಾಹಿರಾತಿಗೆ 1 ಕೋಟಿ ರೂ. ದಂಡ ವಿಧಿಸುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತ್ತು. ಭವಿಷ್ಯದಲ್ಲಿ ಸುಳ್ಳು ಜಾಹೀರಾತುಗಳನ್ನು ಪ್ರಕಟಿಸದಂತೆ ಪತಂಜಲಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.

  • ಉತ್ತರಾಖಂಡ ಪ್ರಾಧಿಕಾರದಿಂದ 14 ಪತಂಜಲಿ ಉತ್ಪನ್ನಗಳ ಲೈಸನ್ಸ್‌ ರದ್ದು

    ಉತ್ತರಾಖಂಡ ಪ್ರಾಧಿಕಾರದಿಂದ 14 ಪತಂಜಲಿ ಉತ್ಪನ್ನಗಳ ಲೈಸನ್ಸ್‌ ರದ್ದು

    ಡೆಹ್ರಾಡೂನ್‌: ಬಾಬಾ ರಾಮ್‌ದೇವ್ (Baba Ramdev) ಅವರ ದಿವ್ಯ ಫಾರ್ಮಸಿ ಮತ್ತು ಪತಂಜಲಿ (Patanjali) ಆಯುರ್ವೇದ್ ಲಿಮಿಟೆಡ್ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಿರುವುದಾಗಿ ಉತ್ತರಾಖಂಡ ಸರ್ಕಾರವು ಅಫಿಡವಿಟ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಔಷಧ ಜಾಹೀರಾತು ಕಾನೂನನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕಾಗಿ ಅವರ 14 ಉತ್ಪನ್ನಗಳ ಉತ್ಪಾದನಾ ಪರವಾನಗಿಯನ್ನು ರದ್ದುಗೊಳಿಸಿದೆ.

    ಕಾನೂನಿಗೆ ವಿರುದ್ಧವಾದ ಜಾಹೀರಾತುಗಳನ್ನು ಪ್ರಕಟಿಸಿದರೆ ದಂಡ, ಜೈಲು ಶಿಕ್ಷೆ ಅಥವಾ ಎರಡನ್ನೂ ಒಳಗೊಂಡಂತೆ ಕಠಿಣ ಶಿಸ್ತು ಮತ್ತು ಕಾನೂನು ಕ್ರಮಗಳನ್ನು ರಾಜ್ಯ ಪರವಾನಗಿ ಪ್ರಾಧಿಕಾರವು (ಎಸ್‌ಎಲ್‌ಎ) ತೆಗೆದುಕೊಳ್ಳುತ್ತದೆ ಎಂದು ಉತ್ತರಾಖಂಡ ಸರ್ಕಾರವು ಅಫಿಡವಿಟ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ತೀವ್ರವಾದ ಬಿಸಿ ಗಾಳಿ- ಜಾರ್ಖಂಡ್‌ನಲ್ಲಿ 8 ತರಗತಿವರೆಗೆ ಇಂದಿನಿಂದ ರಜೆ ಘೋಷಣೆ

    ಎಸ್‌ಎಲ್‌ಎ ಏ.15 ರಂದು ದಿವ್ಯ ಫಾರ್ಮಸಿ ಮತ್ತು ಪತಂಜಲಿ ಆಯುರ್ವೇದ್ ಲಿಮಿಟೆಡ್‌ಗೆ ಆದೇಶ ಹೊರಡಿಸಿದ್ದು, ಅದರಲ್ಲಿ ಅವರ 14 ಉತ್ಪನ್ನಗಳಾದ ಸ್ವಸರಿ ಗೋಲ್ಡ್, ಸ್ವಸರಿ ವಟಿ, ಬ್ರಾಂಕೋಮ್, ಸ್ವಸರಿ ಪ್ರವಾಹಿ, ಸ್ವಸರಿ ಅವಳೇಹ್, ಮುಕ್ತಾವತಿ ಎಕ್ಸ್‌ಟ್ರಾ ಪವರ್, ಲಿಪಿಡೋಮ್, ಬಿಪಿ ಗ್ರಿಟ್, ಮಧುಗ್ರಿತ್, ಮಧುನಾಶಿನಿವತಿ ಎಕ್ಸ್‌ಟ್ರಾ ಪವರ್, ಲಿವಾಮೃತ್ ಅಡ್ವಾನ್ಸ್, ಲಿವೋಗ್ರಿಟ್, ಐಗ್ರಿಟ್ ಗೋಲ್ಡ್ ಮತ್ತು ಪತಂಜಲಿ ದೃಷ್ಟಿ ಐ ಡ್ರಾಪ್ ಅನ್ನು ದಿ ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ರೂಲ್ಸ್, 1945 ರ ನಿಯಮ 159 (1) ರ ಅಡಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಪರವಾನಗಿ ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.

    ದಿವ್ಯ ಫಾರ್ಮಸಿ ಮತ್ತು ಪತಂಜಲಿ ಆಯುರ್ವೇದ್ ಲಿಮಿಟೆಡ್ ವಿರುದ್ಧ ಕಾನೂನಿನಲ್ಲಿ ಸೂಚಿಸಲಾದ ಕಾರ್ಯವಿಧಾನ ಮತ್ತು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳ ಪ್ರಕಾರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುವುದಾಗಿ SLA ಹೇಳಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ; ಕೊಚ್ಚಿ ಹೋದ ಮನೆಗಳು, ರಸ್ತೆಗಳಿಗೂ ಹಾನಿ

  • ಸುಪ್ರೀಂ ಚಾಟಿ ಬೆನ್ನಲ್ಲೇ ದೊಡ್ಡ ಗಾತ್ರದಲ್ಲಿ ಪ್ರಕಟಿಸಿ ಕ್ಷಮೆ ಕೋರಿದ ಪತಂಜಲಿ

    ಸುಪ್ರೀಂ ಚಾಟಿ ಬೆನ್ನಲ್ಲೇ ದೊಡ್ಡ ಗಾತ್ರದಲ್ಲಿ ಪ್ರಕಟಿಸಿ ಕ್ಷಮೆ ಕೋರಿದ ಪತಂಜಲಿ

    ನವದೆಹಲಿ: ಸುಪ್ರೀಂ ಕೋರ್ಟ್‌ (Supreme Court) ತರಾಟೆ ಬೆನ್ನಲ್ಲೇ ಪತಂಜಲಿ (Patanjali) ಸಂಸ್ಥೆ ಪತ್ರಿಕೆಗಳಲ್ಲಿ ದೊಡ್ಡ ಗಾತ್ರದಲ್ಲಿ ಪ್ರಕಟಿಸಿ ಕ್ಷಮೆ (Apology) ಕೇಳಿದೆ.

    ಯೋಗ ಗುರು ಬಾಬಾ ರಾಮದೇವ್‌ (Yoga Guru Ramdev) ಮತ್ತು ಆಚಾರ್ಯ ಬಾಲಕೃಷ್ಣ (Acharya Balkrishna) ಅವರು, ನಮ್ಮ ಜಾಹೀರಾತುಗಳನ್ನು ಪ್ರಕಟಿಸುವಲ್ಲಿ ಮಾಡಿದ ತಪ್ಪಿಗೆ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಮುಂದೆ ಅಂತಹ ದೋಷಗಳು ಪುನರಾವರ್ತನೆಯಾಗುವುದಿಲ್ಲ. ಇದು ನೀಡುತ್ತಿರುವ ಹೃದಯಪೂರ್ವಕ ಬದ್ಧತೆ ಎಂದು ಪ್ರಕಟಿಸಿ ಕ್ಷಮೆ ಕೋರಿದ್ದಾರೆ. ಇದನ್ನೂ ಓದಿ: ವ್ಯಕ್ತಿಯ ಸಾವಿನ ನಂತರವೂ ಆಸ್ತಿ ಕಿತ್ತುಕೊಳ್ಳುವ ಮೂಲಕ ಕಾಂಗ್ರೆಸ್‌ ಲೂಟಿಗೆ ಇಳಿದಿದೆ: ನರೇಂದ್ರ ಮೋದಿ

    ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ಹಿಂದೆ ಪತ್ರಿಕೆಗಳಲ್ಲಿ ಕ್ಷಮೆ ಕೇಳಬೇಕೆಂದು ಸೂಚಿಸಿತ್ತು. ಆದರೆ ಪತಂಜಲಿ ಸಂಸ್ಥೆ ಸಣ್ಣ ಗಾತ್ರದ ಜಾಹೀರಾತು ನೀಡಿ ಕ್ಷಮೆ ಕೇಳಿತ್ತು. ಇದಕ್ಕೆ ಸಿಟ್ಟಾದ ಕೋರ್ಟ್‌ ಜಾಹೀರಾತು ಯಾವ ಗಾತ್ರದಲ್ಲಿ ಪ್ರಕಟವಾಗಿದೆಯೋ ಅದೇ ಗಾತ್ರದಲ್ಲಿ ಕ್ಷಮೆ ಕೇಳುವಂತೆ ಆದೇಶಿಸಿತ್ತು. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ಪ್ರಜ್ಞೆ ತಪ್ಪಿದ ನಿತಿನ್ ಗಡ್ಕರಿ

    ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನ್ಯಾ.ಹಿಮಾ ಕೊಹ್ಲಿ ಮತ್ತು ನ್ಯಾ. ಅಮಾನುಲ್ಲಾ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ನಡೆಯುತ್ತಿದ್ದು ಮುಂದಿನ ವಿಚಾರಣೆಯನ್ನು ಏ.30ಕ್ಕೆ ಮುಂದೂಡಿದೆ. ಅಂದು ನ್ಯಾಯಾಲಯಕ್ಕೆ ಪತಂಜಲಿ ಸಂಸ್ಥಾಪಕರಾದ ರಾಮ್‌ದೇವ್ ಮತ್ತು ಬಾಲಕೃಷ್ಣ ಹಾಜರಾಗಬೇಕೆಂದು ಸೂಚಿಸಿದೆ.

     

  • ಯಾವ ರೀತಿ ಜಾಹೀರಾತು ಪ್ರಕಟಿಸಿದ್ದೀರಿ ಅದೇ ಗಾತ್ರದಲ್ಲಿ ಪತ್ರಿಕೆಯಲ್ಲಿ ಕ್ಷಮೆ ಕೇಳಿ: ಪತಂಜಲಿಗೆ ಸುಪ್ರೀಂ ಸೂಚನೆ

    ಯಾವ ರೀತಿ ಜಾಹೀರಾತು ಪ್ರಕಟಿಸಿದ್ದೀರಿ ಅದೇ ಗಾತ್ರದಲ್ಲಿ ಪತ್ರಿಕೆಯಲ್ಲಿ ಕ್ಷಮೆ ಕೇಳಿ: ಪತಂಜಲಿಗೆ ಸುಪ್ರೀಂ ಸೂಚನೆ

    – ಪತಂಜಲಿ ವಿರುದ್ಧ ಕ್ರಮ ಕೈಗೊಳ್ಳದ್ದಕ್ಕೆ ಕೇಂದ್ರದ ವಿರುದ್ಧವೂ ತರಾಟೆ

    ನವದೆಹಲಿ: ಯಾವ ರೀತಿ ಜಾಹೀರಾತು (Advertisements) ಪ್ರಕಟಿಸಿದ್ದೀರಿ ಅದೇ ಗಾತ್ರದಲ್ಲಿ ಪತ್ರಿಕೆಯಲ್ಲಿ ಕ್ಷಮೆಯನ್ನು ಕೇಳಬೇಕೆಂದು ಪತಂಜಲಿ (Patanjali) ಸಂಸ್ಥೆಗೆ ಸುಪ್ರೀಂ ಕೋರ್ಟ್‌ (Supreme Court) ಆದೇಶಿಸಿದೆ. ಅದೇ ರೀತಿಯಾಗಿ ಪತಂಜಲಿ ವಿರುದ್ಧ ಕ್ರಮ ಕೈಗೊಳ್ಳದ್ದಕ್ಕೆ ಕೇಂದ್ರ ಸರ್ಕಾರವನ್ನು (Union Government) ಸುಪ್ರೀಂ ತರಾಟೆಗೆ ತೆಗೆದುಕೊಂಡಿದೆ.

    ಯೋಗ ಗುರು ಬಾಬಾ ರಾಮದೇವ್ (Baba Ramdev) ಮತ್ತು ಆಚಾರ್ಯ ಬಾಲಕೃಷ್ಣ (Acharya Balkrishna) ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಇಂದು ನ್ಯಾ.ಹಿಮಾ ಕೊಹ್ಲಿ ಮತ್ತು ನ್ಯಾ. ಅಮಾನುಲ್ಲಾ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ನಡೆಯಿತು.

    ಬಾಬಾ ರಾಮ್‌ದೇವ್ ಪರ ವಾದ ಮಂಡಿಸಿದ ವಕೀಲ ಮುಕುಲ್ ರೋಹಟಗಿ, ಪತ್ರಿಕೆಗಳಲ್ಲಿ ಕ್ಷಮಾಪಣೆ ಪ್ರಕಟವಾಗಿದೆ ಎಂದು ಕೋರ್ಟ್‌ ಗಮನಕ್ಕೆ ತಂದರು. ಈ ವೇಳೆ ನಿನ್ನೆ ಯಾಕೆ ಕ್ಷಮಾಪಣೆ ಪ್ರಕಟವಾಗಿದೆ ಎಂದು ಪ್ರಶ್ನಿಸಿದ ಪೀಠ ಜಾಹೀರಾತು ಯಾವ ಗಾತ್ರದಲ್ಲಿ ಪ್ರಕಟವಾಗಿದೆಯೇ ಅದೇ ರೀತಿಯಾಗಿ ಕ್ಷಮೆ ಕೇಳಬೇಕೆಂದು ಆದೇಶಿಸಿತು. ಇದನ್ನೂ ಓದಿ: ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳೋದು ಅಪರಾಧ: ಬೆಂಗ್ಳೂರಿನ ಹಲ್ಲೆ ಪ್ರಸ್ತಾಪಿಸಿ ಮೋದಿ ಕಿಡಿ

    ಇಂಡಿಯನ್ ಮೆಡಿಕಲ್ ಅಸೋಷಿಯನ್ (IMA) ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದುವರಿಸಿದ ಪೀಠ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡುವ ಇತರ FMCG ಕಂಪನಿಗಳ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಕೇಂದ್ರವನ್ನು ಈ ವೇಳೆ ಪ್ರಶ್ನಿಸಿತು.

    ಪತಂಜಲಿ ವಿರುದ್ಧ ಕ್ರಮ ಕೈಗೊಳ್ಳುವ ಬದಲು 1945 ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ನಿಯಮಗಳ 170ನೇ ನಿಯಮದ ಅಡಿಯಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಆಯುಷ್ ಸಚಿವಾಲಯವು 2023 ರಲ್ಲಿ ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರವನ್ನು ಕಳುಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿತು.

    ಅಧಿಕಾರಿಗಳು ಆದಾಯವನ್ನು ನೋಡುವಲ್ಲಿ ನಿರತರಾಗಿದ್ದಂತೆ ತೋರುತ್ತಿದೆ ಎಂದು ನ್ಯಾ. ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಒಂದು ಸುದ್ದಿಟಿವಿಯಲ್ಲಿ ಆಂಕರ್ ಪತಂಜಲಿ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಏನಾಯಿತು ಎಂಬುದರ ಕುರಿತು ಓದುತ್ತಿದ್ದಾರೆ. ಇದೆ ಅವಧಿಯಲ್ಲಿ ಜಾಹೀರಾತು ಪತಂಜಲಿ ಕೂಡಾ ಚಾಲನೆಯಲ್ಲಿದೆ ಎಂತಹ ಪರಿಸ್ಥಿತಿ ಎಂದು ನ್ಯಾ. ಅಮಾನುಲ್ಲಾ ಟೀಕಿಸಿದರು. ಇದನ್ನೂ ಓದಿ: ನೇಹಾ ಹಿರೇಮಠ ತಂದೆಯ ಬಳಿ ಕ್ಷಮೆಯಾಚಿಸಿದ ಸಿಎಂ!

     

    ಪತಂಜಲಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸರ್ಕಾರ ಹೇಗೆ ಪತ್ರ ಬರೆಯಿತು ಎಂಬುದನ್ನು ವಿವರಿಸಬೇಕು ಎಂದು ಹೇಳಿದ ಪೀಠ, ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್ ಮತ್ತು ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆಯಂತಹ ಕಾನೂನುಗಳ ಅನುಷ್ಠಾನವನ್ನು ಸೂಕ್ಷ್ಮವಾಗಿ ಗಮನಿಸುವುದಾಗಿ ಕೋರ್ಟ್‌  ತಿಳಿಸಿತು.

    ತಪ್ಪುದಾರಿಗೆಳೆಯುವ ಜಾಹೀರಾತುಗಳಿಂದ ಪ್ರಭಾವಿತರಾಗಿ ಔಷಧಗಳನ್ನು ಸೇವಿಸುವ ಶಿಶುಗಳು ಮತ್ತು ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ. ನಾವು ನಿರ್ದಿಷ್ಟವಾಗಿ ಒಬ್ಬರ ಮೇಲೆ ಅರೋಪಿಸುತ್ತಿಲ್ಲ, ಗ್ರಾಹಕರು/ಸಾರ್ವಜನಿಕರನ್ನು ಹೇಗೆ ದಾರಿ ತಪ್ಪಿಸಲಾಗುತ್ತಿದೆ ಎಂಬುದರ ಕುರಿತು ಹೆಚ್ಚಿನ ಹಿತಾಸಕ್ತಿಯಾಗಿದೆ ಎಂದು ಎಂದು ನ್ಯಾಯಾಲಯ ಹೇಳಿತು. ಅಲ್ಲದೇ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಸೇರಿಸಲು ನ್ಯಾಯಾಲಯ ನಿರ್ಧರಿಸಿದೆ.

    ಪ್ರಕರಣದ ಅರ್ಜಿ ವಿಚಾರಣೆಯನ್ನು ಏ.30ಕ್ಕೆ ಮುಂದೂಡಿದ ಪೀಠ ಅಂದು ನ್ಯಾಯಾಲಯಕ್ಕೆ ಪತಂಜಲಿ ಸಂಸ್ಥಾಪಕರಾದ ರಾಮ್‌ದೇವ್ ಮತ್ತು ಬಾಲಕೃಷ್ಣ ಹಾಜರಾಗಬೇಕೆಂದು ಸೂಚಿಸಿದೆ.

  • ಬಾಬಾ ರಾಮ್‌ದೇವ್‌ಗೆ ಮತ್ತೆ ಸುಪ್ರೀಂ ತಪರಾಕಿ

    ಬಾಬಾ ರಾಮ್‌ದೇವ್‌ಗೆ ಮತ್ತೆ ಸುಪ್ರೀಂ ತಪರಾಕಿ

    ನವದೆಹಲಿ: ಸುಳ್ಳು ಜಾಹೀರಾತು ಸಂಬಂಧ ಪತಂಜಲಿ(Patanjali) ಸಂಸ್ಥೆಯ ಬಾಬಾ ರಾಮದೇವ್ (Baba Ramdev) ಮತ್ತು ಆಚಾರ್ಯ ಬಾಲಕೃಷ್ಣಗೆ(Acharya Balkrishna) ಸುಪ್ರೀಂಕೋರ್ಟ್ ಮತ್ತೆ ತಪರಾಕಿ ಹಾಕಿದೆ.

    ಕ್ಷಮೆಯಾಚನೆಯ ನೈಜತೆ ತಿಳಿಯಲು ಇಂದು ಇಬ್ಬರ ಜೊತೆ ಸುಪ್ರೀಂಕೋರ್ಟ್ (Supreme Court) ವೈಯಕ್ತಿಕವಾಗಿ ಸಂವಹನ ನಡೆಸಿತು. ಈ ಹಂತದಲ್ಲಿ ಇಬ್ಬರು ಕ್ಷಮೆಯಾಚಿದರೂ, ಅದನ್ನು ಹಿಮಾ ಕೊಹ್ಲಿ, ಅಮಾನುಲ್ಲಾ ಅವರಿದ್ದ ನ್ಯಾಯಪೀಠ ಸಂಪೂರ್ಣವಾಗಿ ಒಪ್ಪಲಿಲ್ಲ.  ಇದನ್ನೂ ಓದಿ: ಸುರ್ಜೇವಾಲಾಗೆ ಶಾಕ್‌ – 2 ದಿನ ಚುನಾವಣಾ ಪ್ರಚಾರಕ್ಕೆ ನಿಷೇಧ

    ನಿಮ್ಮನ್ನು ಕ್ಷಮಿಸಿದ್ದೇವೆ ಎಂದು ನಾವು ಹೇಳುವುದಿಲ್ಲ. ನೀವೇನು ಅಮಾಯಕರಲ್ಲ. ನಿಮ್ಮ ಹಿಂದಿನ ಇತಿಹಾಸದ ಬಗ್ಗೆ ನಾವು ಕುರುಡರಾಗಿರಲು ಸಾಧ್ಯವಿಲ್ಲ. ನಿಮ್ಮ ಕ್ಷಮೆಯಾಚನೆ ಬಗ್ಗೆ ಆಲೋಚಿಸ್ತೇವೆ. ನಿಮ್ಮನ್ನು ಕುಣಿಕೆಯಿಂದ ಬಿಡಿಸಲಾಗಿದೆ ಎಂದು ನಾವು ಹೇಳುತ್ತಿಲ್ಲ. ಮುದ್ರಿಸುವ ಮೂಲಕ ಬಹಿರಂಗವಾಗಿ ಕ್ಷಮೆ ಕೇಳಿ ಎಂದು ಎಚ್ಚರಿಕೆಯ ಧಾಟಿಯಲ್ಲಿ ಸುಪ್ರೀಂಕೋರ್ಟ್ ಚಾಟಿ ಬೀಸಿದೆ.  ಇದನ್ನೂ ಓದಿ: ಅವಕಾಶ ಕೇಳಿ ಬಂದಿದ್ದ ಶೈಲಜಾ ಜೊತೆ 2ನೇ ಮದುವೆಯಾದರು ದ್ವಾರಕೀಶ್

    ಪತಂಜಲಿ ಮತ್ತದರ ಸಂಸ್ಥೆಗಳು ತಮ್ಮನ್ನು ತಾವು ಸುಧಾರಿಸಿಕೊಳ್ಳುವುದಾಗಿ ನೀಡಿದ ಹೇಳಿಕೆ ದಾಖಲಿಸಿಕೊಂಡ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿತು.

     

  • ತಣಿಯದ ಸಿಟ್ಟು- ಪತಂಜಲಿ ವಿರುದ್ಧ ಸುಪ್ರೀಂಕೋರ್ಟ್ ಕೆಂಡಾಮಂಡಲ

    ತಣಿಯದ ಸಿಟ್ಟು- ಪತಂಜಲಿ ವಿರುದ್ಧ ಸುಪ್ರೀಂಕೋರ್ಟ್ ಕೆಂಡಾಮಂಡಲ

    ನವದೆಹಲಿ: ಪತಂಜಲಿ (Patanjali) ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ಮತ್ತು ಯೋಗ ಗುರು ಬಾಬಾ ರಾಮದೇವ್ (Baba Ramdev) ಅವರ ಬೇಷರತ್ ಕ್ಷಮೆಯನ್ನು ಸುಪ್ರೀಂಕೋರ್ಟ್ (Supreme Court) ತಿರಸ್ಕರಿಸಿದೆ. ಸಂಸ್ಥೆಯ ಕ್ರಮಗಳು ‘ಉದ್ದೇಶಪೂರ್ವಕ, ಮತ್ತು ನ್ಯಾಯಲಯದ ಆದೇಶ ಧಿಕ್ಕರಿಸುವ ಪ್ರಯತ್ನ. ಹೀಗಾಗಿ ಅವರು ಸಲ್ಲಿಸಿರುವ ಅಫಿಡವಿಟ್‌ನಿಂದ ನಾವು ಸಮಾಧಾನಗೊಂಡಿಲ್ಲ ಎಂದು ಕೋರ್ಟ್ ಆಕ್ರೋಶ ಹೊರ ಹಾಕಿದೆ.

    ದಾರಿ ತಪ್ಪಿಸುವ ಜಾಹೀರಾತುಗಳ (Adevertisement) ಪ್ರಸಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ನ್ಯಾ. ಹಿಮ ಕೊಹ್ಲಿ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆಯಲ್ಲಿ ಮತ್ತಷ್ಟು ಕಠಿಣವಾಗಿ ಟೀಕಿಸಿತು. ಪತಂಜಲಿ ಸಂಸ್ಥಾಪಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಜನರು ಜೀವನದಲ್ಲಿ ತಪ್ಪುಗಳನ್ನು ಮಾಡುತ್ತಾರೆ. ಕೆಲವೊಮ್ಮೆ ಅಂತಹ ತಪ್ಪುಗಳಿಂದ ಬೇರೆ ವ್ಯಕ್ತಿಗಳು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ವಕೀಲರಿಗೆ ಛೀಮಾರಿ ಹಾಕಿತು. ನಾವು ಕುರುಡರಲ್ಲ, ಈ ಪ್ರಕರಣದಲ್ಲಿ ನಾವು ಉದಾರವಾಗಿರಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿತು.

    ಬಳಿಕ ವಕೀಲ ರೋಹಟಗಿ ಅವರು, ಪತಂಜಲಿ ಮತ್ತು ಅದರ ಎಂಡಿ ಆಚಾರ್ಯ ಬಾಲಕೃಷ್ಣ ಅವರು ಸಲ್ಲಿಸಿದ ಎರಡು ಅಫಿಡವಿಟ್‌ಗಳನ್ನು ಮತ್ತು ಬಾಬಾ ರಾಮ್‌ದೇವ್ ಅವರ ಇನ್ನೊಂದು ಅಫಿಡವಿಟ್‌ಗಳನ್ನು ಓದಿದರು. ಈ ಅಫಿಡೆವಿಟ್ ಗೆ ಪ್ರತಿಕ್ರಿಯಿಸಿದ ಪೀಠ, ಕ್ಷಮಾಪಣೆಯು ಕಾಗದದ ಮೇಲಿದೆ, ನಿರ್ಧಾರಗಳು ಅದರ ವಿರುದ್ಧವಾಗಿದೆ. ನಾವು ಇದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತೇವೆ. ಈ ತಪ್ಪುಗಳು ಉದ್ದೇಶಪೂರ್ವಕ ಉಲ್ಲಂಘನೆ ಎಂದು ನಾವು ಪರಿಗಣಿಸುತ್ತೇವೆ. ಮುಂದೆ ಏನೇ ಆದರೂ ಎದುರಿಸಲು ಸಿದ್ಧರಾಗಿರಿ ಎಚ್ಚರಿಕೆ ನೀಡಿತು. ಇದನ್ನೂ ಓದಿ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಕೇಜ್ರಿವಾಲ್ ಮೇಲ್ಮನವಿ ಸಲ್ಲಿಕೆ

    ವಿಚಾರಣೆ ವೇಳೆ ಪೀಠವು, ಬಾಬಾ ರಾಮ್‌ದೇವ್ ಅವರನ್ನು ತರಾಟೆಗೆ ತೆಗೆದುಕೊಂಡಿತು. ಅವರು ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಕೋರಿ, ವಿದೇಶಿ ಪ್ರಯಾಣ ಉಲ್ಲೇಖಿಸಿ ಮತ್ತು ಟಿಕೆಟ್ ಸಹಿತ ಅಫಿಡವಿಟ್‌ನಲ್ಲಿ ಸಲ್ಲಿಸಿದರು. ಆದರೆ ಕೋರ್ಟ್‌ಗೆ ನೀಡುವ ಮೊದಲು ಅದನ್ನು ಮಾಧ್ಯಮಗಳಿಗೆ ಪ್ರಕಟಿಸಿದೆ. ಇದು ಪ್ರಚಾರ ಪಡೆಯುವುದಲ್ಲದೇ ಇನ್ನೇನು ಎಂದು ಪ್ರಶ್ನಿಸಿತು. ಇದನ್ನೂ ಓದಿ: ಯೋಗ ಗುರು ಬಾಬಾ ರಾಮ್‌ದೇವ್, ಪತಂಜಲಿ ಮುಖ್ಯಸ್ಥನಿಗೆ ಸುಪ್ರೀಂ ಸಮನ್ಸ್

    ಪತಂಜಲಿ ಉತ್ಪನ್ನಗಳಿಗೆ ಪರವಾನಗಿ ನೀಡಿದ್ದಕ್ಕಾಗಿ ಉತ್ತರಾಖಂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪೀಠ, ಮೂವರು ಔಷಧಿ ಪರವಾನಗಿ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಅದೇಶಿಸಿತು. ಪತಂಜಲಿ ನಿಯಮ ಉಲ್ಲಂಘಿಸುವ ವೇಳೆ ನಿವೇನು ಮಾಡುತ್ತಿದ್ದೀರಿ ಕೋರ್ಟ್ ಮಧ್ಯಪ್ರವೇಶಿಸುವ ತನಕ ಕಾಯುತ್ತಿದ್ದೀರಾ ಎಂದು ಕೇಳಿತು. ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರದ ಉತ್ತರಾಖಂಡ ಜಂಟಿ ನಿರ್ದೇಶಕ ಮಿಥಿಲೇಶ್ ಕುಮಾರ್ ಮುಂದಿನ ಕ್ರಮದ ಭರವಸೆ ನೀಡಿದರು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 16 ರಂದು ನಡೆಯಲಿದ್ದು, ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಕೋರ್ಟ್‌ ಮುಂದೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಹೇಳಿದೆ.

  • ಆಯುರ್ವೇದ ಉತ್ಪನ್ನ ಉತ್ತೇಜಿಸಲು ದಾರಿತಪ್ಪಿಸುವ ಜಾಹೀರಾತು ಪ್ರಸಾರ; ಬಾಬಾ ರಾಮದೇವ್ ಕ್ಷಮೆ ಒಪ್ಪದ ಸುಪ್ರೀಂ

    ಆಯುರ್ವೇದ ಉತ್ಪನ್ನ ಉತ್ತೇಜಿಸಲು ದಾರಿತಪ್ಪಿಸುವ ಜಾಹೀರಾತು ಪ್ರಸಾರ; ಬಾಬಾ ರಾಮದೇವ್ ಕ್ಷಮೆ ಒಪ್ಪದ ಸುಪ್ರೀಂ

    – ಏಪ್ರಿಲ್‌ 10ಕ್ಕೆ ವಿಚಾರಣೆ ಮುಂದೂಡಿಕೆ – ಖುದ್ದು ಹಾಜರಾಗಲು ಸೂಚನೆ

    ನವದೆಹಲಿ: ಆಯುರ್ವೇದ ಉತ್ಪನ್ನಗಳನ್ನು ಉತ್ತೇಜಿಸಲು ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಕೋರ್ಟ್ ಆದೇಶ ಉಲ್ಲಂಘಿಸಿದ ಪತಂಜಲಿ ಸಂಸ್ಥೆಯ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ (Acharya Balkrishna) ಮತ್ತು ಯೋಗ ಗುರು ಬಾಬಾ ರಾಮದೇವ್ ಅವರು ಕೋರಿದ ಕ್ಷಮೆಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ.

    ಭಾರತೀಯ ವೈದ್ಯಕೀಯ ಸಂಸ್ಥೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ. ಹಿಮಕೊಹ್ಲಿ (Hima Kohli) ನೇತೃತ್ವದ ದ್ವಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದ್ದು, ಮಂಗಳವಾರವಾದ ಇಂದು ಕೋರ್ಟ್ ಮುಂದೆ ಹಾಜರಾಗಿದ್ದ ಆಚಾರ್ಯ ಬಾಲಕೃಷ್ಣ ಮತ್ತು ಯೋಗ ಗುರು ಬಾಬಾ ರಾಮದೇವ್ (Baba Ramdev) ವಿರುದ್ಧ ತೀವ್ರ ಅಸಮಧಾನ ಹೊರ ಹಾಕಿದೆ. ಇದನ್ನೂ ಓದಿ: ಸುಳ್ಳು ಜಾಹೀರಾತು, ಸುಪ್ರೀಂ ಚಾಟಿ ಬಳಿಕ ಕ್ಷಮೆ ಕೋರಿದ ಬಾಬಾ ರಾಮ್‌ದೇವ್

    ಕಳೆದ ನವೆಂಬರ್‌ನಲ್ಲಿ ಪತಂಜಲಿ ಸಂಸ್ಥೆ ಪರ ವಕೀಲರು ನ್ಯಾಯಾಲಯದ ಮುಂದೆ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ತಡೆಯುವುದಾಗಿ ಭರವಸೆ ನೀಡಿದ ಹೊರತಾಗಿಯೂ ಪತಂಜಲಿ ಸಂಸ್ಥೆ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡಿತ್ತು. ಈ ಹಿನ್ನಲೆ ಕೋರ್ಟ್ ಫೆಬ್ರವರಿ 27 ರಂದು ಪತಂಜಲಿ ಸಂಸ್ಥೆ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರಾದ ಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿತ್ತು, ಖುದ್ದು ಹಾಜರಾಗಲು ಸೂಚಿಸಿತ್ತು.

    ಮಂಗಳವಾರ (ಏಪ್ರಿಲ್‌ 2) ಕೋರ್ಟ್ ಮುಂದೆ ಹಾಜರಾದ ಆಚಾರ್ಯ ಬಾಲಕೃಷ್ಣ ಮತ್ತು ಬಾಬಾ ರಾಮದೇವ್ ಬೇಷರತ್ ಕ್ಷಮೆ ಕೋರಿ ಅಫಿಡವಿಟ್ ಸಲ್ಲಿಸಿದರು. ಅಫಿಡೆವಿಟ್ ನಲ್ಲಿ ಜಾಹೀರಾತು ಪ್ರಸಾರಕ್ಕೆ ತಡೆ ನೀಡುವ ಆದೇಶ ನಮ್ಮ ಮಾಧ್ಯಮ ವಿಭಾಗಕ್ಕೆ ತಿಳಿದಿರಲಿಲ್ಲ ಹೀಗಾಗೀ ತಪ್ಪಾಗಿದೆ ಎಂದು ಆಚಾರ್ಯ ಬಾಲಕೃಷ್ಣ ಕ್ಷಮೆ ಕೇಳಿದ್ದರು, ಆದರೆ ಈ ಕಾರಣವನ್ನು ಕೋರ್ಟ್ ನಿರಾಕರಿಸಿತು. ಇದನ್ನೂ ಓದಿ: ಕಾಂಗ್ರೆಸ್‌ಗೆ ಕೇಂದ್ರದಿಂದ ಬಿಗ್‌ ರಿಲೀಫ್‌ – ಚುನಾವಣೆ ಮುಗಿಯವರೆಗೂ ತೆರಿಗೆ ವಸೂಲಿ ಇಲ್ಲ

    ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಈ ವಿಷಯದಲ್ಲಿ ʻಅಜ್ಞಾನವನ್ನು ತೋರಿಸಲುʼ ಸಾಧ್ಯವಿಲ್ಲ ಮತ್ತು ಮಾಧ್ಯಮ ವಿಭಾಗವನ್ನು ʻಸ್ವತಂತ್ರ ದ್ವೀಪʼ ಎಂದು ಪರಿಗಣಿಸಲಾಗುವುದಿಲ್ಲ. ಒಮ್ಮೆ ನ್ಯಾಯಾಲಯಕ್ಕೆ ಭರವಸೆ ನೀಡಿದರೆ ನಂತರ ಅದನ್ನು ಸಂಪೂರ್ಣವಾಗಿ ಪಾಲಿಸಬೇಕು. ಕೆಳ ಹಂತಕ್ಕೆ ನಿರ್ದೇಶಿಸುವುದು ಯಾರ ಕರ್ತವ್ಯ? ಎಂದು ನ್ಯಾಯಮೂರ್ತಿ ‌ಹಿಮ ಕೊಹ್ಲಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಚಾರ್ಯ ಬಾಲಕೃಷ್ಣ ಪರ ವಕೀಲರು ಇದರಲ್ಲಿ ಲೋಪವಾಗಿದೆ ಎಂದು ಒಪ್ಪಿಕೊಂಡರು, ಅದಕ್ಕಾಗಿ ವಿಷಾದ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ನ್ಯಾ. ಹಿಮ ಕೊಹ್ಲಿ, ನಿಮ್ಮ ಪಶ್ಚಾತ್ತಾಪವು ನ್ಯಾಯಾಲಯಕ್ಕೆ ಸಾಕಾಗದೇ ಇರಬಹುದು. ಈಗ ನೀವು ಕ್ಷಮಿಸಿ ಎಂದು ಹೇಳಿದ್ದಕ್ಕೆ, ನಾವು ಕ್ಷಮಿಸಿದ್ದೇವೆ ಅಂತ ಹೇಳಬಹುದು. ಅಂತಹ ವಿವರಣೆಯನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ, ನಿಮ್ಮ ಮಾಧ್ಯಮ ವಿಭಾಗವು ಸ್ವತಂತ್ರ ಇಲಾಖೆಯಲ್ಲ, ಅಲ್ಲವೇ? ನ್ಯಾಯಾಲಯದ ವಿಚಾರಣೆಯಲ್ಲಿ ಏನಾಗುತ್ತಿದೆ ತಿಳಿದಿಲ್ಲ ಎಂದರೆ ಹೇಗೆ? ಈ ರೀತಿ ಸಮಾಧಾನಪಡಿಸುವ ಮಾತುಗಳು ಬೇಡ ಎಂದು ಅಸಮಾಧಾನ ಹೊರಹಾಕಿದರು.

    ಬಳಿಕ ಕೋರ್ಟ್ ಮುಂದೆ ಹಾಜರಾಗಿದ್ದ ಯೋಗ ಗುರು ಬಾಬಾ ರಾಮದೇವ್ ಯಾವುದೇ ಅಫಿಡೆವಿಟ್ ಸಲ್ಲಿಸಿದಿರುವುದು ಗಮನಿಸಿದ ಕೋರ್ಟ್ ಇದನ್ನು ಪ್ರಶ್ನಿಸಿತು. ಈ ವಿಷಯವನ್ನು ಅದರ ತಾರ್ಕಿಕ ತೀರ್ಮಾನಕ್ಕೆ ತೆಗೆದುಕೊಳ್ಳಬೇಕಾಗಿದೆ ಎಂದು ಸ್ಪಷ್ಟಪಡಿಸಿತು. ಇದಕ್ಕೆ ಬಾಬಾ ರಾಮ್‌ದೇವ್ ಪರ ವಾದ ಮಂಡಿಸಿದ ಹಿರಿಯ ವಕೀಲ ಬಲ್ಬೀರ್ ಸಿಂಗ್, ಕಕ್ಷಿದಾರರು ಭೌತಿಕವಾಗಿ ಕೋರ್ಟ್‌ಗೆ ಹಾಜರಾಗಿದ್ದಾರೆ, ವೈಯಕ್ತಿಕವಾಗಿ ಕ್ಷಮೆಯಾಚಿಸಲು ಸಿದ್ಧರಾಗಿದ್ದಾರೆ. ಅಫಿಡೆವಿಟ್ ಮೂಲಕ ಕ್ಷಮೆ ಕೋರುವುದಾದರೆ ಸಿದ್ಧ ಎಂದು ಹೇಳಿದರು.

    ಒದಕ್ಕೆ ಒಪ್ಪದ ಕೋರ್ಟ್‌, ಸಂಸ್ಥೆಯ ಸಹ ಸಂಸ್ಥಾಪಕರಾಗಿರುವುದರಿಂದ ನ್ಯಾಯಾಲಯದ ಆದೇಶದ ಬಗ್ಗೆ ಅವರಿಗೆ ತಿಳಿದಿಲ್ಲ ಅಂತ ನಂಬೋದಕ್ಕೆ ಸಾಧ್ಯವಿಲ್ಲ. ಅಲ್ಲದೆ, ಅವರು ನಮ್ಮ ಆದೇಶದ 24 ಗಂಟೆಗಳ ಒಳಗೆ ಪತ್ರಿಕಾಗೋಷ್ಠಿ ಸಹ ಮಾಡಿದ್ದಾರೆ. ನೀವು ಆದೇಶದ ಬಗ್ಗೆ ತಿಳಿದಿದ್ದೀರಿ ಮತ್ತು ಅದರ ಹೊರತಾಗಿಯೂ ಉಲ್ಲಂಘಿಸಿದ್ದೀರಿ ಎಂದು ನಿಮ್ಮ ನಡುವಳಿಕೆ ತೋರಿಸುತ್ತದೆ ಎಂದು ಹೇಳಿತು. ಇದನ್ನೂ ಓದಿ: ಬಾವನನ್ನು ಗೆಲ್ಲಿಸಲು ಪಣ – ಬೆಂಗಳೂರು ಗ್ರಾಮಾಂತರವನ್ನು ಪ್ರತಿಷ್ಠೆಯಾಗಿ ಹೆಚ್‌ಡಿಕೆ ತೆಗೆದುಕೊಂಡಿದ್ದು ಯಾಕೆ?

    ವಾದ-ಪ್ರತಿವಾದದ ಬಳಿಕ ಕೋರ್ಟ್‌ ಮುಂದಿನ ವಿಚಾರಣೆಯನ್ನು ಏಪ್ರಿಲ್‌ 10ಕ್ಕೆ ಮುಂದೂಡಿತು. ಅಲ್ಲದೇ ಮುಂದಿನ ವಿಚಾರಣೆಗೂ ವೈಯಕ್ತಿಕವಾಗಿ ಹಾಜರಾಗಬೇಕು, ಜೊತೆಗೆ ಪತಂಜಲಿ ಸಂಸ್ಥೆ ಮತ್ತು ಅದರ ಆಡಳಿತ ಮಂಡಳಿಗೆ ಕ್ಷಮಾಪಣೆಯನ್ನು ಅಫಿಡವಿಟ್ ಮೂಲಕ ಸಲ್ಲಿಸಲು ಪೀಠ ಆದೇಶಿಸಿತು.

  • ಸುಳ್ಳು ಜಾಹೀರಾತು, ಸುಪ್ರೀಂ ಚಾಟಿ ಬಳಿಕ ಕ್ಷಮೆ ಕೋರಿದ ಬಾಬಾ ರಾಮ್‌ದೇವ್

    ಸುಳ್ಳು ಜಾಹೀರಾತು, ಸುಪ್ರೀಂ ಚಾಟಿ ಬಳಿಕ ಕ್ಷಮೆ ಕೋರಿದ ಬಾಬಾ ರಾಮ್‌ದೇವ್

    ನವದೆಹಲಿ: ಯೋಗ ಗುರು ಹಾಗೂ ಪತಂಜಲಿ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ಬಾಬಾ ರಾಮ್‌ದೇವ್ (Baba Ramdev) ಅವರು ಸುಪ್ರೀಂ ಕೋರ್ಟ್ (Supreme Court) ಚಾಟಿ ಬೀಸಿದ ಬಳಿಕ ಬೇಷರತ್ ಕ್ಷಮೆಯಾಚಿಸಿದ್ದಾರೆ.

    ತಪ್ಪು ಮಾಹಿತಿಯೊಂದಿಗೆ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿ ಪತಂಜಲಿ (Patanjali) ಸಂಸ್ಥೆ ವಿರುದ್ಧ ಭಾರತೀಯ ವೈದ್ಯಕೀಯ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಏಕೆ ಪ್ರಾರಂಭಿಸಬಾರದು? ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಸಂಸ್ಥೆಯು ಕ್ಷಮೆಯಾಚಿಸಿದೆ. ಇದನ್ನೂ ಓದಿ: INDIA ಗೆದ್ದರೆ ಮೇಕೆದಾಟು ಯೋಜನೆಗೆ ತಡೆ: ಪ್ರಣಾಳಿಕೆಯಲ್ಲಿ ಡಿಎಂಕೆ ಘೋಷಣೆ

    ಈ ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯವು ಪತಂಜಲಿ ಆಯುರ್ವೇದ ಔಷಧಿಗಳ ಜಾಹೀರಾತುಗಳಿಗೆ ತಾತ್ಕಾಲಿಕ ನಿಷೇಧವನ್ನು ವಿಧಿಸಿತ್ತು. ಅಲ್ಲದೇ ತಪ್ಪುದಾರಿಗೆಳೆಯುವ ಜಾಹೀರಾತು ನೀಡಿದ್ದಕ್ಕಾಗಿ ಅದರ ಸಂಸ್ಥಾಪಕರಾದ ರಾಮ್‌ದೇವ್ ಮತ್ತು ಬಾಲಕೃಷ್ಣ (Acharya Balkrishna) ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿ, 2 ವಾರಗಳ ಅವಧಿಯಲ್ಲಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಕೋರ್ಟ್ ಎಚ್ಚರಿಕೆ ನೀಡಿದ 2 ದಿನಗಳಲ್ಲಿ ಸಂಸ್ಥೆ ಕ್ಷಮೆ ಕೋರಿದೆ. ಇದನ್ನೂ ಓದಿ: ರಾಹುಲ್‌ ಗಾಂಧಿ ವಿರುದ್ಧ ಚುನಾವಣಾ ಆಯೋಗದ ಮೊರೆ ಹೋದ ಬಿಜೆಪಿ

    ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆಯ ಬಳಿಕ ಆಚಾರ್ಯ ಬಾಲಕೃಷ್ಣ ಅವರು ಸುಪ್ರೀಂ ಕೋರ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ದೇಶದ ಕಾನೂನಿನ ಬಗ್ಗೆ ಪತಂಜಲಿ ಸಂಸ್ಥೆಗೆ ಅಪಾರವಾದ ಗೌರವವಿದೆ. ಕೋರ್ಟ್‌ಗೆ ಕಂಪನಿಯು ಬೇಷರತ್ ಕ್ಷಮೆಯಾಚಿಸುತ್ತದೆ. ಪತಂಜಲಿ ಸಂಸ್ಥೆಯು ಭವಿಷ್ಯದಲ್ಲಿ ಇಂತಹ ಜಾಹೀರಾತುಗಳನ್ನು ನೀಡುವುದಿಲ್ಲ. ಮುಂದೆ ನೀಡುವ ಜಾಹೀರಾತುಗಳು ಕಾನೂನಿನ ಅನ್ವಯವಾಗಿ ಇರುತ್ತವೆ. ಪತಂಜಲಿ ಸಂಸ್ಥೆಯ ಉತ್ಪನ್ನಗಳನ್ನು ಸೇವಿಸುವ ಮೂಲಕ ದೇಶದ ಜನ ಆರೋಗ್ಯದಿಂದ ಇರಲಿ ಎಂಬುದಷ್ಟೇ ನಮ್ಮ ಜಾಹೀರಾತಿನ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.

    ಏನಿದು ಕೇಸ್?
    ತಪ್ಪು ಮಾಹಿತಿಯೊಂದಿಗೆ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿ ಪತಂಜಲಿ ವಿರುದ್ಧ ಭಾರತೀಯ ವೈದ್ಯಕೀಯ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹಿಮಕೊಹ್ಲಿ ನೇತೃತ್ವದ ದ್ವಿ ಸದಸ್ಯ ಪೀಠ, ರಾಮ್‌ದೇವ್ ಮತ್ತು ಪತಂಜಲಿ ಅಧ್ಯಕ್ಷ ಆಚಾರ್ಯ ಬಾಲಕೃಷ್ಣ ಅವರು ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ-1954ರ ಸೆಕ್ಷನ್-3 ಮತ್ತು 4 ಅನ್ನು ಪ್ರಾಥಮಿಕವಾಗಿ ಉಲ್ಲಂಘಿಸಿದ್ದಾರೆ ಎಂದು ಟೀಕಿಸಿತ್ತು. ತಾತ್ಕಾಲಿಕವಾಗಿ ಪತಂಜಲಿ ಜಾಹೀರಾತು ನಿರ್ಬಂಧಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.

    ಸುಪ್ರೀಂ ಕೋರ್ಟ್ ನೋಟಿಸ್‌ಗೆ ಉತ್ತರಿಸದ ಹಿನ್ನೆಲೆ ಸುಪ್ರೀಂ ಕೋರ್ಟ್ ಗರಂ ಆಗಿ, ನಮ್ಮ ಆದೇಶಗಳನ್ನು ನಿರ್ಲಕ್ಷ್ಯಿಸಿದ್ದೀರಿ. ಈ ಹಿನ್ನಲೆ ಬಾಬಾ ರಾಮ್‌ದೇವ್ ಮತ್ತು ಪತಂಜಲಿ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಕೋರ್ಟ್ ಮುಂದೆ ಹಾಜರಾಗಬೇಕು ಎಂದು ತಾಕೀತು ಮಾಡಿತ್ತು. ಪತಂಜಲಿ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಮುಕುಲ್ ರೊಹ್ಟಗಿ ರಾಮದೇವ್ ಪ್ರಕರಣಕ್ಕೆ ಹೇಗೆ ಸಂಬಂಧಿಸಿದ್ದಾರೆ, ಅವರಿಗೆ ಯಾಕೆ ಸಮನ್ಸ್? ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ನೀವೂ ವಿಚಾರಣೆ ಹಾರಾಗುತ್ತಿದ್ದೀರಿ, ಹಾಜರಾಗಬೇಕು ಎಂದಷ್ಟೆ ಹೇಳಿತು.

    ನಂತರ ಮುಕುಲ್ ರೋಹ್ಟಗಿ ಅವರು ಕಾನೂನು ಉಲ್ಲಂಘನೆ ನ್ಯಾಯಾಲಯದ ನಿಂದನೆ ಅಲ್ಲ ಮತ್ತು ತೆರೆದ ನ್ಯಾಯಾಲಯದಲ್ಲಿ ಹಾಜರಾಗುವ ಅವಶ್ಯಕತೆ ಏನಿದೆ ಎಂಬುದನ್ನು ಆದೇಶದಲ್ಲಿ ದಾಖಲಿಸಬೇಕು ಎಂದು ಹೇಳಿದರು. ಆದರೆ ನ್ಯಾಯಾಲಯ ಮಣಿಯದೇ ರಾಮ್‌ದೇವ್ ಖುದ್ದು ಹಾಜರಾಗಬೇಕು, ಇಲ್ಲದಿದ್ದರೆ, ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.