– ಪಕ್ಷ, ಜನಪ್ರತಿನಿಧಿಗಳು ಜೋಡೆತ್ತುಗಳಂತೆ ಕಾರ್ಯ ನಿರ್ವಹಿಸಬೇಕಿದೆ
ಶಿವಮೊಗ್ಗ: ಕಾಂಗ್ರೆಸ್ ಬಿಟ್ಟ ವೈರಸ್ ನಮ್ಮ ಪಕ್ಷದಲ್ಲಿಯೂ ಬಂದು ಸೇರಿಕೊಂಡಿದೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದ್ದಾರೆ.
ನಗರದಲ್ಲಿ ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೋಡೆತ್ತು ಪದ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ರೀತಿ ಉಪಯೋಗವಾಗಿವೆ. ಆದರೆ ನಾನು ಈ ಪದವನ್ನು ಇಲ್ಲಿ ಬಳಸುತ್ತಿದ್ದೇನೆ. ಪಕ್ಷ ಮತ್ತು ಜನಪ್ರತಿನಿಧಿಗಳು ಜೋಡೆತ್ತು ರೀತಿಯಲ್ಲಿ ಕಾರ್ಯ ನಿರ್ವಹಿಸಿ, ಜನರನ್ನು ಕೊಂಡೊಯ್ಯಬೇಕಿದೆ. ಜನರು ಕೂಡ ಇದನ್ನೇ ಅಪೇಕ್ಷೆ ಪಡುತ್ತಾರೆ ಎಂದರು.
ಜನರು ಜನಪ್ರತಿನಿಧಿ ಯಾರು, ಪಕ್ಷ ಯಾರು ಎಂದು ನೋಡುವುದಿಲ್ಲ. ಬದಲಾಗಿ ಜನರಿಗೆ ಗಾಡಿ ಲಯಬದ್ಧವಾಗಿ ಮುಂದೆ ಸಾಗಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜನಪ್ರತಿನಿಧಿಗಳು ಕರ್ತವ್ಯ ನಿರ್ವಹಿಸಬೇಕಿದೆ. ಮುಂಬರುವ ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲಿ ಈಗಿನ ಜಿಲ್ಲಾ ತಂಡ ಇರಲಿದೆಯೋ ಅಥವಾ ಬೇರೆ ತಂಡ ಬರಲಿದೆಯೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಜಿ.ಪಂ. ಮತ್ತು ಗ್ರಾ.ಪಂ. ಚುನಾವಣೆಗಳು ಬರಲಿದೆ. ಆ ಸಂದರ್ಭದಲ್ಲಿ ಹೊಸ ತಂಡಗಳ ಜೊತೆಗೂ ಸೇರಿಕೊಂಡು ನಾವು ಚುನಾವಣೆ ಎದುರಿಸಬೇಕಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಅನೇಕ ಸಮಸ್ಯೆಗಳನ್ನು ಒಂದು ರೀತಿಯ ವೈರಸ್ ರೀತಿಯಲ್ಲಿ ಇಂಜೆಕ್ಟ್ ಮಾಡಿಬಿಟ್ಟಿದೆ. ನೆಹರು ನಂತರ ಬಂದಂತಹ ಕಾಂಗ್ರೆಸ್ ರಾಜಕೀಯ ಪಕ್ಷಗಳಲ್ಲಿ ಅನೇಕ ವೈರಸ್ ಬಿಟ್ಟು, ನಮ್ಮ ದೇಶಕ್ಕೆ ಅತಿ ದೊಡ್ಡ ಅನ್ಯಾಯ ಮಾಡಿದೆ. ಅದು ಎಲ್ಲಾ ಪಾರ್ಟಿಗಳಲ್ಲಿಯೂ ಈಗ ಬಂದು ಸೇರಿಕೊಂಡಿವೆ. ನಮ್ಮ ಪಕ್ಷದಲ್ಲಿಯೂ ಬಂದು ಸೇರಿಕೊಂಡಿವೆ. ವ್ಯಕ್ತಿಗಳಲ್ಲ, ವೈರಸ್ಗಳು ಬಂದು ಸೇರಿಕೊಂಡಿವೆ. ಅವೆಲ್ಲವನ್ನು ನಿವಾರಿಸಿಕೊಂಡು ಪರ್ಯಾಯ ರಾಜಕೀಯ ನೀಡಲು ಆಗುತ್ತಾ ಎಂಬ ಪ್ರಶ್ನೆ ಇದೀಗ ಎದುರಾಗಿದ್ದು, ಇವೆಲ್ಲವನ್ನು ಸರಿದೂಗಿಸಿಕೊಂಡು ಮುನ್ನಡೆಯಬೇಕಿದೆ ಎಂದು ಮಾರ್ಮಿಕವಾಗಿ ಸಂತೋಷ್ ಹೇಳಿದರು.
ಕೊಡಗು ವಿರಾಜಪೇಟೆ ಮೂಲದ ಸಚಿನ್ ಕಣ್ಮರೆಯಾಗಿರುವ ಟೆಕ್ಕಿ. ಸಚಿನ್ ಮತ್ತು ಆರ್ಟಿ ನಗರದ ಉಲ್ಲಾಸ್ ಇಬ್ಬರೂ ಟೆಕ್ಕಿಗಳಾಗಿದ್ದು, ಶುಕ್ರವಾರ ರಾತ್ರಿ ಕಲ್ಕೆರೆಯಲ್ಲಿ ಪಾರ್ಟಿ ಮಾಡಿದ್ದರು. ಮುಂಜಾನೆ ಸುಮಾರು 3 ಗಂಟೆಗೆ ಇಬ್ಬರು ಕೆಲ್ಕೆರೆ ಕೆರೆ ಏರಿ ಮೇಲೆ ಬಂದಿದ್ದರು. ಈ ವೇಳೆ ಕೆರೆ ಏರಿ ಮೇಲೆ ತೆಪ್ಪ ಕಂಡು ತೆಪ್ಪದಲ್ಲಿ ವಿಹಾರಕ್ಕೆ ಹೊರಟ್ಟಿದ್ದರು.
ತೆಪ್ಪದಲ್ಲಿ ಹೋಗುವಾಗ ಹುಟ್ಟು ಜಾರಿ ನೀರಿಗೆ ಬಿದ್ದಿದೆ. ಈ ವೇಳೆ ಕೈಯಲ್ಲಿ ತೆಪ್ಪ ನಡೆಸುವಾಗ ತೆಪ್ಪ ಮಗುಚಿ ಇಬ್ಬರು ಟೆಕ್ಕಿಗಳು ಕೆರೆಗೆ ಬಿದ್ದಿದ್ದಾರೆ. ಟೆಕ್ಕಿ ಉಲ್ಲಾಸ ಈಜಿ ದಡ ಸೇರಿದ ಬದುಕುಳಿದ್ದಾರೆ. ಆದರೆ ಸಚಿನ್ ಮಾತ್ರ ಎಲ್ಲೂ ಪತ್ತೆಯಾಗಿಲ್ಲ. ತಕ್ಷಣ ಉಲ್ಲಾಸ್ ತನ್ನ ಅಣ್ಣನಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬಂದು ಕಲ್ಕೆರೆ ಕೆರೆಯಲ್ಲಿ ಟೆಕ್ಕಿ ಸಚಿನ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಮಧ್ಯಾಹ್ನನವಾದರೂ ಸಚಿನ್ ಪತ್ತೆಯಾಗಿಲ್ಲ.
ಉಲ್ಲಾಸ್ ಬ್ಯಾಗ್ ಹಾಕಿಕೊಂಡಿದ್ದರು. ಹೀಗಾಗಿ ಬ್ಯಾಗ್ ಹಾಕಿದ್ದರಿಂದ ಸೇಫ್ ಆಗಿ ಉಲ್ಲಾಸ್ ದಡ ಸೇರಿದ್ದಾರೆ. ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಈ ನಡೆದ ಘಟನೆ ನಡೆದಿದೆ. ಸಚಿನ್ ಮಾನ್ಯತಾ ಟೆಕ್ ಪಾರ್ಕ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಅಲ್ಲದೇ ಸಚಿನ್ಗೆ ಈಜು ಬರುತ್ತಿತ್ತು ಎಂದು ಹೇಳಲಾಗುತ್ತಿದೆ. ಆದರೆ ತೆಪ್ಪ ಮಗುಚಿದಾಗ ಈಜಿ ದಡ ತಲುಪಲು ವಿಫಲರಾಗಿದ್ದಾರೆ.
ರಾತ್ರಿ ಸುಮಾರು 12 ಗಂಟೆಗೆ ಬೀಟ್ ಬಂದಿದ್ದೆ. ಬಳಿಕ ಮತ್ತೆ 3 ಗಂಟೆಗೆ ಬೀಟ್ಗೆ ಬಂದೆ. ಆದರೆ ಈ ವೇಳೆ ರಸ್ತೆ ಪಕ್ಕ ಕುಳಿತುಕೊಂಡು ಓರ್ವ ಅಳುತಿದ್ದರು. ಏನಾಯ್ತು ಅಂತ ಕೇಳಿದಾಗ ಕೆರೆಯಲ್ಲಿ ಮುಳುಗಿರುವ ಬಗ್ಗೆ ಹೇಳಿದರು. ರಾತ್ರಿ ಪಾರ್ಟಿ ಮಾಡೊಕೆ ಬಂದಿದ್ದಾರೆ. ಕುಡಿದು ಹೋದಾಗ ಈ ಘಟನೆ ಆಗಿದೆ. ಶುಕ್ರವಾರ ನಾನೊಬ್ಬನೇ ಇದ್ದೆ. ನಾನು ಬರುವ ವೇಳೆಗಾಗಲೇ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು. ಯಾರನ್ನೂ ಕೂಡ ಕೆರೆ ಒಳಗೆ ಬಿಡೋದಿಲ್ಲ. ಇವರು ಕುಡಿದು ಬಂದು ತೆಪ್ಪ ತೆಗೆದುಕೊಂಡು ಹೋಗಿದ್ದಾರೆ ಎಂದು ಕೆರೆಯ ಸೆಕ್ಯೂರಿಟಿ ರಾಜೇಶ್ ಹೇಳಿದ್ದಾನೆ.
ಅಪರೂಪಕ್ಕೆ ಗೆಳೆಯರು ಭೇಟಿ:
ಸಚಿನ್ ಮತ್ತು ಉಲ್ಲಾಸ್ ಇಬ್ಬರ ಅಪರೂಪಕ್ಕೆ ಭೇಟಿಯಾಗಿದ್ದರು. ಈ ಹಿಂದೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಇಬ್ಬರು ಬೇರೆ ಕಂಪನಿಗೆ ಕೆಲಸ ಬದಲಾಯಿಸಿದ್ದರು. ಅದರಂತೆ ಸಚಿನ್ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಉದ್ಯೋಗದಲ್ಲಿದ್ದರು. ವೀಕೆಂಡ್ ಹಿನ್ನೆಲೆಯಲ್ಲಿ ಶುಕ್ರವಾರ ಇಬ್ಬರು ಭೇಟಿಯಾಗಿದ್ದರು. ಈ ವೇಳೆ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿಸಿಕೊಂಡು ಕೆರೆಯಲ್ಲಿ ವಿಹಾರ ಮಾಡುವುದಕ್ಕೆ ಇಬ್ಬರು ಬಂದಿದ್ದರು. ಆಗ ಸಚಿನ್ ಬಲವಂತ ಮಾಡಿ ಉಲ್ಲಾಸ್ ಕರೆತಂದಿದ್ದರು. ಈ ಹಿಂದೆ ಒಂದು ಬಾರಿ ಇದೇ ರೀತಿ ತೆಪ್ಪದಲ್ಲಿ ವಿಹಾರ ಹೋಗಿ ಬಂದಿದ್ದರು. ಅದೇ ರೀತಿ ರಾತ್ರಿ ತೆಪ್ಪದಲ್ಲಿ ವಿಹಾರ ಮಾಡಲು ಬಂದಿದ್ದರು. ಇಬ್ಬರು ಬಂದ ವೇಳೆ ಈ ಅವಘಡ ಸಂಭವಿದೆ.
ಉಲ್ಲಾಸ್ ಹಾಗೂ ಸಚಿನ್ ಕೆರೆ ಮಧ್ಯದ ಐಲ್ಯಾಂಡ್ಗೆ ತೆರಳಲು ಮುಂದಾಗಿದ್ದರು. ಆದರೆ ಸಚಿನ್ ಹೆಚ್ಚು ಭಾರವಿದ್ದ, ಹೀಗಾಗಿ ಒಂದೇ ಕಡೆ ತೆಪ್ಪ ವಾಲಿತ್ತು. ಆದ್ದರಿಂದ ಕೆರೆ ಏರಿಯಿಂದ 100 ಮೀಟರ್ ತೆರಳುತ್ತಿದ್ದಂತೆ ತೆಪ್ಪ ಆಯ ತಪ್ಪಿದೆ. ಈ ವೇಳೆ ನೀರಿನಲ್ಲೇ ಹುಟ್ಟನ್ನು ಬಿಟ್ಟಿದ್ದಾರು. ಆಗ ತೆಪ್ಪದೊಳಗೆ ನೀರು ತುಂಬಿ ಮುಗುಚಿ ಬಿದ್ದಿತ್ತು. ಇಬ್ಬರು ನುರಿತ ಈಜಿಗಾರರಲ್ಲ, ಸಾಧಾರಣ ಈಜು ಕಲಿತಿದ್ದರು. ಸಚಿನ್ ಹೆಚ್ಚು ಭಾರ ಹಾಗೂ ಮದ್ಯಪಾನ ಮಾಡಿದ್ದರಿಂದ ಈಜಲಾಗದೇ ನೀರಿನಲ್ಲಿ ಮುಳುಗಿರೋ ಸಾಧ್ಯತೆ ಇದೆ ಎಂದು ಶಂಕಿಸಲಾಗುತ್ತಿದೆ.
ವರ್ಷದ ಹಿಂದೆ ಮದುವೆ:
ಉಲ್ಲಾಸ್ ಹಾಗೂ ಸಚಿನ್ ಇಬ್ಬರೂ ವರ್ಷದ ಹಿಂದೆ ಮದುವೆಯಾಗಿದ್ದರು. ಕಲ್ಕೆರೆಯ ಯುವತಿಯನ್ನು ಉಲ್ಲಾಸ್ ಮದುವೆಯಾಗಿದ್ದರು. ಅಲ್ಲದೇ ಉಲ್ಲಾಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿಯ ಸಹೋದರ ಕೃಷ್ಣಪ್ಪರ ಅಳಿಯರಾಗಿದ್ದಾರೆ. ಉಲ್ಲಾಸ್ ಹೆಂಡತಿ, ಉಲ್ಲಾಸ್ ಮತ್ತು ಅವರ ಸ್ನೇಹಿತ ಕೆರೆ ಬಳಿ ಹೋಗಿದ್ದರಂತೆ. ಆದರೆ ತೆಪ್ಪ ಮಗುಚಿ ಸಚಿನ್ ಕಾಣಿಸುತ್ತಿಲ್ಲ ಎಂದು ಅಪ್ಪನ ಬಳಿ ವಿಚಾರ ಹೇಳಿದ್ದಾರೆ. ಕೂಡಲೇ ಉಲ್ಲಾಸ್ ಮಾವ ಕೃಷ್ಣಪ್ಪ ಮೀನುಗಾರರಿಗೆ ಫೋನ್ ಮಾಡಿ ಕೆರೆ ಬಳಿ ಬಂದಿದ್ದಾರೆ. ಕಾರಿನಲ್ಲಿ ಇಡೀ ಪ್ರದೇಶವನ್ನು ಒಂದು ರೌಂಡ್ ಬಂದಿದ್ದಾರೆ. ಸಚಿನ್ ಕಾಣದಾದಾಗ ಅವರ ಪತ್ನಿ ಮತ್ತು ಕುಟುಂಬಸ್ಥರಿಗೆ ಕರೆ ಮಾಡಿದ್ದಾರೆ. ಈ ಘಟನೆಯ ಹಿನ್ನೆಲೆಯನ್ನು ಉಲ್ಲಾಸ್ ಮಾವ ಕೃಷ್ಣಪ್ಪ ಸಂಪೂರ್ಣವಾಗಿ ವಿವರಿಸಿದ್ದಾರೆ.
ಬೆಂಗಳೂರು: ರಿಯಾಲಿಟಿ ಶೋ ‘ಬಿಗ್ಬಾಸ್ ಸೀಸನ್ 7’ ಮುಕ್ತಾಯವಾಗಿದ್ದು, ಈ ಬಾರಿ ಬಿಗ್ಬಾಸ್ ಮನೆಯಲ್ಲಿದ್ದ ಅನೇಕರಿಗೆ ಕಿಚ್ಚ ಸುದೀಪ್ ಸ್ಪೆಷಲ್ ಉಡುಗೊರೆಯನ್ನು ಕೊಟ್ಟಿದ್ದಾರೆ. ಇದೀಗ ಬಿಗ್ಬಾಸ್ ಮುಗಿಯುತ್ತಿದ್ದಂತೆ ಹರೀಶ್ ರಾಜ್ಗೆ ಸುದೀಪ್ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ.
ಸುದೀಪ್ ಅವರು ಹರೀಶ್ ರಾಜ್ಗೆ ತಮ್ಮ ದುಬಾರಿ ವಾಚನ್ನು ಉಡುಗೊಡೆಯಾಗಿ ಕೊಟ್ಟಿದ್ದಾರೆ. ಬಿಗ್ಬಾಸ್ ಮನೆಯಲ್ಲಿದ್ದಾಗ ಹರೀಶ್ ಫಿನಾಲೆ ವಾರದಲ್ಲಿ ಮಿಡ್ವೀಕ್ ಎಲಿಮಿನೇಟ್ ಆಗುವ ಮೂಲಕ ರಾತ್ರೋರಾತ್ರಿ ಮನೆಯಿಂದ ಹೊರ ಬಂದಿದ್ದರು. ಅಂದು ಮನೆಯಿಂದ ಹೊರ ಬಂದವರು ಬಿಗ್ಬಾಸ್ ಫಿನಾಲೆಯಲ್ಲಿ ಸುದೀಪ್ ಜೊತೆ ವೇದಿಕೆ ಹಂಚಿಕೊಡಿದ್ದರು.
ಬಿಗ್ಬಾಸ್ ಮನೆಯಲ್ಲಿದ್ದಾಗ ಹರೀಶ್ ಅವರು ಯುವಕರಿಗೆ ಪೈಪೋಟಿ ಕೊಟ್ಟು ಟಾಸ್ಕ್ ಗಳಲ್ಲಿ ಅದ್ಭುತವಾಗಿ ಆಟವಾಡಿದ್ದರು. ಅಲ್ಲದೇ ಮನೆಯಲ್ಲಿದ್ದಷ್ಟು ದಿನ ವೀಕ್ಷಕರಿಗೆ ತಮ್ಮ ನಟನೆ, ಮಿಮಿಕ್ರಿ ಮೂಲಕ ಮನರಂಜನೆ ನೀಡಿದ್ದರು. ಇದು ಸುದೀಪ್ಗೆ ತುಂಬಾ ಇಷ್ಟವಾಗಿತ್ತು. ಹೀಗಾಗಿ ಹರೀಶ್ಗೆ ತಾವು ಹಾಕಿಕೊಂಡಿದ್ದ ವಾಚನ್ನು ಉಡುಗೊರೆಯಾಗಿ ನೀಡಿದ್ದಾರೆ…
ಈ ಬಗ್ಗೆ ಮಾತನಾಡಿದ ಹರೀಶ್ ರಾಜ್, ಸುದೀಪ್ ಸರ್ ಹೇಳಿದ್ದಂತೆ ಬಿಗ್ಬಾಸ್ ಮುಗಿಯುತ್ತಿದ್ದಂತೆ ಎಲ್ಲಾ ಸ್ಪರ್ಧಿಗಳು ಪಾರ್ಟಿ ಮಾಡಿದ್ವಿ. ಈ ವೇಳೆ ಮಾತನಾಡಿದ ಸುದೀಪ್ ಸರ್, ಹರೀಶ್ ರಾಜ್ ಎಲ್ಲರನ್ನು ಮನರಂಜನೆ ನೀಡಿದ್ದಾರೆ. ಅವರಿಗೆ ನಾನು ಏನಾದರು ಕೊಡಬೇಕು ಎಂದು ಎಲ್ಲರ ಮುಂದೆ ಹೇಳಿದರು. ಅಲ್ಲದೇ ಮಾತು ಮುಗಿಯುವ ಮುನ್ನವೇ ತಮ್ಮ ಕೈಯಲ್ಲಿದ್ದ ದುಬಾರಿ ವಾಚನ್ನು ತೆಗೆದು ನನಗೆ ಹಾಕಿದರು ಎಂದರು.
ಸುದೀಪ್ ಸರ್ ನನಗೆ ವಾಚ್ ಹಾಕಿದ ತಕ್ಷಣ ಎಮೋಷನಲ್ ಆದೆ. ಆ ಸಂದರ್ಭದಲ್ಲಿ ನಾನು ಏನು ಮಾತನಾಡಲು ಸಾಧ್ಯವಾಗಿಲ್ಲ. ಆಗ ಸುದೀಪ್ ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕಿದೆ ಎಂದು ಹರೀಶ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ‘ಬಿಗ್ಬಾಸ್ ಸೀಸನ್ 7’ ರಲ್ಲಿ ಶೈನ್ ಶೆಟ್ಟಿ ವಿನ್ನರ್ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದು, ಕುರಿ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ.
ಮೈಸೂರು: ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಅತಿಯಾಗಿ ಮದ್ಯ ಸೇವಿಸಿ ಮೈಸೂರಿನಲ್ಲಿ ಕಾನೂನು ವಿಧ್ಯಾರ್ಥಿಯೋರ್ವ ಸಾವನ್ನಪ್ಪಿದ್ದಾನೆ.
ಮೈಸೂರಿನ ಎರಡನೇ ಈದ್ಗಾ ನಿವಾಸಿ ಕಾರ್ತಿಕ್(22) ಮೃತ ದುರ್ದೈವಿ. ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಕಾರ್ತಿಕ್ ಅಂತಿಮ ವರ್ಷದ ಕಾನೂನು ಪದವಿ ವಿದ್ಯಾರ್ಥಿಯಾಗಿದ್ದನು. ಹೊಸ ವರ್ಷಾಚರಣೆ ಹಿನ್ನಲೆ ಮೂವರು ಸ್ನೇಹಿತರ ಜೊತೆ ಕಾರ್ತಿಕ್ ಪಾರ್ಟಿ ಮಾಡಿದ್ದನು. ಈ ವೇಳೆ ಪಾರ್ಟಿ ಜೋಶ್ನಲ್ಲಿ ಗೆಳೆಯರೊಂದಿಗೆ ಸೇರಿ ಮಿತಿ ಮೀರಿ ಮದ್ಯ ಸೇವಿಸಿದ್ದಾನೆ.
ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಮಿತಿಮೀರಿ ಮದ್ಯ ಸೇವಿಸಿದ ಪರಿಣಾಮ ಕಾರ್ತಿಕ್ ತೀವ್ರ ಅಸ್ವಸ್ಥಗೊಂಡಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಆಸ್ಪತ್ರೆಯಲ್ಲಿಯೇ ಕಾರ್ತಿಕ್ ಸಾವನ್ನಪ್ಪಿದ್ದಾನೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಹೊಸ ವರ್ಷಾಚರಣೆಗೆ ಎಲ್ಲೆಡೆ ಭರದ ಸಿದ್ಧತೆ ನಡೆಯುತ್ತಿದ್ದು, ಕಡಲನಗರಿ ಮಂಗಳೂರಿನಲ್ಲಿಯೂ ನ್ಯೂ ಇಯರ್ ಸೆಲಬ್ರೇಷನ್ಗೆ ಹೋಟೆಲ್, ರೆಸ್ಟೋರೆಂಟ್, ಕ್ಲಬ್ಗಳು ಸಿದ್ಧತೆ ಮಾಡಿಕೊಂಡಿದೆ.
ಆದರೆ ಮಂಗಳೂರು ನಗರ ಪೊಲೀಸರು ಒಂದಿಷ್ಟು ಕಠಿಣ ಸೂಚನೆಯನ್ನು ಆಯೋಜಕರಿಗೆ ನೀಡಿದ್ದಾರೆ. ಸಂಜೆ ಆರು ಗಂಟೆಯಿಂದ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಆರಂಭಿಸಬಹುದಾಗಿದ್ದು, ರಾತ್ರಿ 12 ಗಂಟೆ 5 ನಿಮಿಷಕ್ಕೆ ಮಾತ್ರ ವರ್ಷಾಚರಣೆ ಮಾಡಲು ಅವಕಾಶ. ಆ ನಂತರ ಕಾರ್ಯಕ್ರಮವನ್ನು ಬಂದ್ ಮಾಡಬೇಕು. ಬಳಿಕ 15 ನಿಮಿಷದಲ್ಲಿ ಅಂದರೆ 12:20ಕ್ಕೆ ಕಾರ್ಯಕ್ರಮ ಆಯೋಜಕರು ಸಂಪೂರ್ಣವಾಗಿ ತೆರವು ಮಾಡಬೇಕೆಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್ ಹರ್ಷ ಖಡಕ್ ಸೂಚನೆ ನೀಡಿದ್ದಾರೆ.
ಪೊಲೀಸರು ಸೂಚಿಸಿರುವ ನಿಯಮ ತಪ್ಪಿದರೆ ಮುಲಾಜಿಲ್ಲದೆ ಪೊಲೀಸ್ ಕ್ರಮ ಕೈಗೊಳ್ಳಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ಪಾರ್ಟಿ ನೆಪದಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸಿದರೆ ಹುಷಾರ್ ಎಂದಿರುವ ಕಮಿಷನರ್, ಮಂಗಳೂರಿನ ಎಲ್ಲಾ ಪಾರ್ಟಿಗಳಿಗೆ ಮಹಿಳಾ ಸುರಕ್ಷಾ ಸಿಬ್ಬಂದಿಯನ್ನು ನೇಮಿಸುವಂತೆ ಆಯೋಜಕರಿಗೆ ಸೂಚಿಸಿದ್ದಾರೆ.
ಮಫ್ತಿಯಲ್ಲಿ ಪೊಲೀಸರು ಕಾರ್ಯನಿರ್ವಹಿಸಲಿದ್ದು, ಹೆಜ್ಜೆ ಹೆಜ್ಜೆಗೂ ಪೊಲೀಸರು ಭದ್ರತೆ ನೀಡಲಿದ್ದಾರೆ. ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಶುಭಕೋರುವ ನೆಪದಲ್ಲಿ ಕೀಟಲೆ, ಅಸಭ್ಯವಾಗಿ ವರ್ತಿಸುವುದನ್ನು ತಡೆಯಲು ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ.
ಹಾಗೆಯೇ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ನಿಗಾವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ಹಿಂಸಾಚಾರ ನಡೆದಿರುವುದರಿಂದ ಪೊಲೀಸ್ ಇಲಾಖೆ ಈ ಬಾರಿಯ ಹೊಸ ವರ್ಷ ಆಚರಣೆಗೆ ಹದ್ದಿನ ಕಣ್ಣು ಇಟ್ಟಿದ್ದಾರೆ.
ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ತುದಿಗಾಲಲ್ಲಿ ನಿಂತಿರುವ ಸಿಲಿಕಾನ್ ಸಿಟಿ ಮಂದಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಗುಡ್ ನ್ಯೂಸ್ ನೀಡಿದ್ದಾರೆ.
ಪಾರ್ಟಿ ಪ್ರಿಯರಿಗೆ ಪೊಲೀಸ್ ಆಯುಕ್ತರು ಗುಡ್ ನ್ಯೂಸ್ ನೀಡಿದ್ದು, ಹೊಸ ವರ್ಷದ ದಿನ ಮಧ್ಯರಾತ್ರಿ ಎರಡು ಗಂಟೆಯವರೆಗೆ ನೈಟ್ ಲೈಫ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷದ ದಿನದಂದು ಬಾರ್, ಪಬ್ ರೆಸ್ಟೊರೆಂಟ್, ಹೋಟೆಲುಗಳ ವ್ಯಾಪಾರದ ಸಮಯವನ್ನು ಮಧ್ಯರಾತ್ರಿ ಎರಡು ಗಂಟೆಯವರೆಗೆ ವಿಸ್ತರಿಸಿದ್ದಾರೆ.
ಪ್ರತಿ ದಿನ ರಾತ್ರಿ ಒಂದು ಗಂಟೆಗೆ ಮುಚ್ಚುತ್ತಿದ್ದ ನೈಟ್ ಲೈಫ್ ಅವಧಿ, 31ರ ರಾತ್ರಿ ಒಂದು ಗಂಟೆ ವಿಸ್ತರಣೆಯಾಗಿದ್ದು, ರಾತ್ರಿ 2 ಗಂಟೆಯವರೆಗೆ ಎಂಜಾಯ್ ಮಾಡಬಹುದಾಗಿದೆ. ಪಾರ್ಟಿ ಪ್ರಿಯರು ಯಾವುದೇ ಭಯ ಆತಂಕವಿಲ್ಲದೆ, ಎರಡು ಗಂಟೆಯವರೆಗೆ ಪಾರ್ಟಿ ನಡೆಸಬಹುದಾಗಿದೆ.
ಮೆಟ್ರೋ ಅವಧಿ ವಿಸ್ತರಣೆ
ಹೊಸ ವರ್ಷ ಆಚರಣೆ ಹಿನ್ನೆಲೆ ಡಿ.31ರಂದು ಮಧ್ಯರಾತ್ರಿ 2ಗಂಟೆಯವರೆಗೂ ಮೆಟ್ರೋ ಸೇವೆ ವಿಸ್ತರಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದ್ದು, ಪಾರ್ಟಿ ಮುಗಿಸಿ ಮೆಟ್ರೋದಲ್ಲಿ ಮನೆಗೆ ತೆರಳಬಹುದಾಗಿದೆ.
ಡಿಸೆಂಬರ್ 31ರಂದು ಮಧ್ಯರಾತ್ರಿ 2ಗಂಟೆ ವರೆಗೂ ಮೆಟ್ರೋ ಸಂಚರಿಸಲಿದೆ. ಇದರ ಜೊತೆಗೆ ಬಂಪರ್ ಕೊಡುಗೆಯನ್ನು ಸಹ ನೀಡಿದ್ದು, 50 ರೂ. ಮೇಲ್ಪಟ್ಟು ಟಿಕೆಟ್ ಖರೀದಿಸಿದರೆ ಯಾವುದೇ ನಿಲ್ದಾಣದಲ್ಲಿ ಹತ್ತಿ ಯಾವುದೇ ನಿಲ್ದಾಣದಲ್ಲಿ ಇಳಿಯಬಹುದಾಗಿದೆ. ಇದರ ಜೊತೆಗೆ ಷರತ್ತನ್ನು ಸಹ ವಿಧಿಸಿದ್ದು, ಕುಡಿದು ಪ್ರಯಾಣಿಸುವವರಿಗೆ ಎಚ್ಚರಿಕೆ ನೀಡಿದೆ. ಕುಡಿದು ಅಸಭ್ಯವಾಗಿ ವರ್ತಿಸಿದರೆ ಮೆಟ್ರೋದಿಂದ ಕಿಕ್ ಔಟ್ ಮಾಡುವುದಾಗಿ ಬಿಎಂಆರ್ಸಿಎಲ್ ತಿಳಿಸಿದೆ.
ಬೆಂಗಳೂರು: ಹೊಂಬಾಳೆ ಫಿಲಂಸ್ ಬ್ಯಾನರ್ಗೆ ಆರನೇ 6ನೇ ವಸಂತ ಸಂಭ್ರಮ. ಹೀಗಾಗಿ ನಗರದಲ್ಲಿ ಭರ್ಜರಿಯಾಗಿ ಔತಣ ಕೂಟ ನಡೆದಿದೆ. ಈ ಸಮಾರಂಭದಲ್ಲಿ ಸೂಪರ್ ಸ್ಟಾರ್ಗಳ ಸಮಾಗಮವಾಗಿದೆ.
ಹೊಂಬಾಳೆ ಫಿಲಂಸ್ ಶನಿವಾರ ಆರನೇ ವಸಂತದ ಸಂಭ್ರಮದಲ್ಲಿತ್ತು. ಹೀಗಾಗಿ ಖಾಸಗಿ ಹೋಟೆಲಿನಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ಔತಣ ಕೂಟವನ್ನು ಏರ್ಪಡಿಸಿದ್ದರು. ಈ ಅದ್ಧೂರಿ ಪಾರ್ಟಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ಸೇರಿದಂತೆ ‘ರಾಜಕುಮಾರ’ ಹಾಗೂ ‘ಕೆಜಿಎಫ್’ ಚಿತ್ರತಂಡ ಭಾಗಿಯಾಗಿತ್ತು.
ಹೊಂಬಾಳೆ ಸ್ಯಾಂಡಲ್ವುಡ್ನ ಜನಪ್ರಿಯ ಬ್ಯಾನರ್ ಆಗಿದ್ದು, ‘ನಿನ್ನಿಂದಲೇ’, ‘ಮಾಸ್ಟರ್ ಪೀಸ್’, ‘ರಾಜಕುಮಾರ’, ‘ಕೆಜಿಎಫ್’ ನಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟಿರುವ ಕೀರ್ತಿ ಈ ಬ್ಯಾನರ್ಗೆ ಸಲ್ಲುತ್ತದೆ. ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವಂತಹ ಸಿನಿಮಾವನ್ನು ಬ್ಯಾನರ್ ಹೊಂಬಾಳೆ ಕೊಟ್ಟಿದೆ.
ಸದ್ಯಕ್ಕೆ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ‘ಕೆಜಿಎಫ್ ಚಾಪ್ಟರ್ 2’ ಹಾಗೂ ‘ಯುವರತ್ನ’ ಸಿನಿಮಾ ನಿರ್ಮಾಣಗೊಳ್ಳುತ್ತಿವೆ. ಕಳೆದ ದಿನವೇ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಕಳೆದ ವರ್ಷ ಇದೇ ದಿನದಂದು ‘ಕೆಜಿಎಫ್’ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಇಡೀ ದೇಶ ಚಂದನವನದತ್ತ ತಿರುಗಿ ನೋಡುವಂತೆ ಮಾಡಿತ್ತು. ಈಗ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಫಸ್ಟ್ ಲುಕ್ ನೋಡಿ ಮತ್ತೆ ದಂಗಾಗುವಂತೆ ಮಾಡಿದೆ.
ಡಿಸೆಂಬರ್ 21 ‘ಕೆಜಿಎಫ್’ ರಿಲೀಸ್ ಆದ ದಿನ. ‘ಕೆಜಿಎಫ್ ಚಾಪ್ಟರ್ 2’ ಫಸ್ಟ್ ಲುಕ್ ಬಿಡುಗಡೆಯಾಗಿರುವ ದಿನ. ಎಲ್ಲದಕ್ಕಿಂತ ಹೆಚ್ಚಾಗಿ ಹೊಂಬಾಳೆ ಎಂಬ ಬ್ಯಾನರ್ ಲಾಂಚ್ ಆದ ದಿನ. ಇದೇ ಖುಷಿಯಲ್ಲಿ ಎಲ್ಲಾ ಒಟ್ಟಾಗಿ ಸೇರಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಕರುನಾಡ ಮಂದಿಗೆ, ಸಿನಿಮಾ ಪ್ರೇಮಿಗಳಿಗೆ, ಸಪೋರ್ಟ್ ಮಾಡಿದ ಎಲ್ಲರಿಗೂ ನಿರ್ಮಾಪಕ ವಿಜಯ್ ಕಿರಗಂದೂರ್ ಧನ್ಯವಾದ ತಿಳಿಸಿದ್ದಾರೆ. ತಮ್ಮ ಬ್ಯಾನರ್ ನಲ್ಲಿ ಕೆಲಸ ಮಾಡಿದ ಸುಮಾರು 400 ಮಂದಿಗೆ ಭರ್ಜರಿ ಔತಣ ಕೂಟ ಏರ್ಪಡಿಸಿದ್ದರು.
ಧಾರವಾಡ: ಉಪಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಭಾರೀ ವೈರಲ್ ಆಗಿದ್ದ ಹೌದು ಹುಲಿಯಾ ಉದ್ಘೋಷ ಈಗ ದೂರದ ಚೀನಾ ದೇಶವನ್ನೂ ತಲುಪಿದೆ.
ಹೌದು. ಚೀನಾ ದೇಶದ ಶೆಂಜಿನ್ ನಗರದಲ್ಲಿ ಭಾರತೀಯ ದೇಸಿ ಶೈಲಿಯಲ್ಲಿ ಪಾರ್ಟಿ ಮಾಡಿರುವ ನಾಲ್ವರು ಚೀನಿ ಯುವಕರು ವಿಸ್ಕಿ ಕುಡಿಯುತ್ತ ಹೌದು ಹುಲಿಯಾ ಡೈಲಾಗ್ ಹೇಳಿ ಖುಷಿಪಟ್ಟಿದ್ದಾರೆ. ಚೀನಾ ದೇಶ ಶೆಂಜಿನ್ ನಗರದ ಜೆಮ್ಮಿ, ಹೆನ್ರಿ, ಜೆಫ್ ಹಾಗೂ ಜಾಯ್ ಕ್ಸೋ ಟ್ಯಾಂಗ್ ಅವರು ಭಾರತೀಯ ದೇಸಿ ಶೈಲಿಯಲ್ಲಿ ಪಾರ್ಟಿ ಮಾಡುತ್ತ ಹೌದು ಹುಲಿಯಾ ಎಂದಿದ್ದಾರೆ.
ಧಾರವಾಡ ಮೂಲದ ಶಶಿ ಶಿರಗುಪ್ಪಿ ಅವರು ಸದ್ಯ ಚೀನಾದಲ್ಲಿ ನೆಲೆಸಿದ್ದಾರೆ. ಅವರ ಜೊತೆಯಲ್ಲಿ ಚೀನಿ ಸ್ನೇಹಿತರು ಪಾರ್ಟಿ ಮಾಡುತ್ತಿದ್ದಾಗ ಶಶಿ ಅವರ ಬಾಯಿಂದ ಹೌದು ಹುಲಿಯಾ ಎಂಬುದನ್ನು ಕೇಳಿ ಅವರು ಹಾಗೆಯೇ ಉದ್ಘೋಷ ಹೊರಡಿಸಿದ್ದಾರೆ. ಕನ್ನಡದ ದೊಡ್ಮನೆ ಹುಡ್ಗ ಚಿತ್ರದ ‘ತ್ರಾಸ್ ಆಕ್ಕತಿ’ ಹಾಡು ಹಾಕಿಕೊಂಡು ಪಾರ್ಟಿ ಮಾಡಿರುವ ಈ ಚೀನಿಯರನ್ನು ಪಾರ್ಟಿ ಹೇಗಿತ್ತು? ಊಟ ಹೇಗಿತ್ತು? ಡ್ರಿಂಕ್ಸ್ ಹೇಗಿತ್ತು ಎಂದು ಕೇಳಿದಾಗ ಹೌದು ಹುಲಿಯಾ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ದೃಶ್ಯವನ್ನು ಶಶಿ ಅವರು ವಿಡಿಯೋ ಮಾಡಿ ತಮ್ಮ ಯುಟ್ಯೂಬ್ ಚಾನಲ್ಗೆ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಚೀನಿಯರ ಬಾಯಲ್ಲಿ ನಮ್ಮ ಕನ್ನಡ ಭಾಷೆ ಕೇಳುತ್ತಿರುವುದು ಖುಷಿಯಾಗುತ್ತಿದೆ ಎಂದು ಶಶಿ ಹೇಳಿದ್ದಾರೆ.
ಗದಗ: ಗದಗ ನಗರದ ಎಪಿಎಂಸಿ ಯಾರ್ಡ್ ನಲ್ಲಿರುವ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ “ಓರಿಯೆಂಟಲ್ ಇನ್ಸೂರೆನ್ಸ್ ಕಂಪನಿ”ಯ ಕಚೇರಿಯಲ್ಲಿ ಸಿಬ್ಬಂದಿ ಹಾಗೂ ಏಜೆಂಟ್ ಇಬ್ಬರು ಸೇರಿಕೊಂಡು ಭರ್ಜರಿ ಎಣ್ಣೆ ಪಾರ್ಟಿ ನಡೆಸಿದ್ದಾರೆ.
ಈ ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯ ಸಿಬ್ಬಂದಿಗಳಾದ ಅಶೋಕ್ ಮತ್ತು ಏಜೆಂಟರಾದ ವಿಶ್ವನಾಥ್ ಗುಂಡು-ತುಂಡಿನ ಜೊತೆಯಲ್ಲಿ ತಲ್ಲೀನರಾಗಿದ್ದರು. ಸರ್ಕಾರಿ ಕೆಲಸ ಅಂದರೆ ದೇವರ ಕೆಲಸ ಅಂತಾರೆ. ಆದರೆ ಈ ಸಿಬ್ಬಂದಿ ಅನ್ನ ಕೊಡುವ ಕಚೇರಿಯನ್ನ ಬಾರ್ ಮಾಡಿಕೊಂಡಿದ್ದಾರೆ. ಈ ಇಬ್ಬರು ಸಿಬ್ಬಂದಿ, ಎಜೆಂಟ್ ಅನೇಕ ದಿನಗಳಿಂದ ಇದೇ ರೀತಿ ಪಾರ್ಟಿ ಮಾಡಿಕೊಂಡು ಬಂದಿದ್ದಾರೆ ಎನ್ನುವ ವಿಚಾರ ಕೂಡ ಬೆಳಕಿಗೆ ಬಂದಿದೆ.
ಅಷ್ಟೇ ಅಲ್ಲದೆ ಕೆಲವು ಬಾರಿ ಹಾಡಹಗಲೇ ಕಚೇರಿಯಲ್ಲಿ ಎಣ್ಣೆ ಪಾರ್ಟಿ ಮಾಡುವ ಮೂಲಕ ಮೋಜು ಮಸ್ತಿಗೆ ಮುಳುಗುತ್ತಿದ್ದರು ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಕಚೇರಿಯಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ಓರಿಯಂಟಲ್ ಇನ್ಸೂರೆನ್ಸ್ ಕಂಪನಿಗೆ ಗದಗದ ಬಡಾವಣೆ ಠಾಣೆ ಪೋಲಿಸರು ಬಂದಾಗ ಇವರಿಬ್ಬರು ಕಂಗಾಲಾದರು. ಈ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆಹಿಡಿಯುವ ವೇಳೆ ಈ ಸಿಬ್ಬಂದಿ, ಎಜೆಂಟ್ ಅಡ್ಡಿಪಡಿಸಿದರು. ಅಲ್ಲದೆ ಕಚೇರಿಗೆ ಬೀಗ ಹಾಕಿ ಇಬ್ಬರೂ ಸ್ಥಳದಿಂದಲೇ ಪರಾರಿಯಾದರು. ಆದ್ದರಿಂದ ಗದಗ ಬೆಟಗೇರಿ ಬಡಾವಣೆ ಪೊಲೀಸರು ಇವರಿಬ್ಬರ ಮೇಲೆ ಈಗ ಹದ್ದಿನ ಕಣ್ಣಿಟ್ಟಿದ್ದಾರೆ.
– ಕಚೇರಿ ಸಮಯದಲ್ಲಿ ಪಾರ್ಟಿ
– ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕರ ಪರದಾಟ
ಚಿಕ್ಕಬಳ್ಳಾಪುರ: ಸರ್ಕಾರದ ಸಂಬಳ ಪಡೆದು ಸಾರ್ವಜನಿಕರ ಕೆಲಸ ಮಾಡಬೇಕಾದ ಅಧಿಕಾರಿ, ಸಿಬ್ಬಂದಿ ಕಚೇರಿ ಸಮಯದಲ್ಲಿ ಪಾರ್ಟಿ ಮಾಡಿ ಮೋಜು ಮಸ್ತಿ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.
ಚಿಂತಾಮಣಿ ತಹಶೀಲ್ದಾರ್ ವಿಶ್ವನಾಥ್ ಅವರು ಡಿ.6 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅಂದು ಸಿಬ್ಬಂದಿಗೆ ಊಟೋಪಚಾರ ಪಾರ್ಟಿ ವ್ಯವಸ್ಥೆ ಮಾಡದ್ದಕ್ಕೆ ಇಂದು ತಮ್ಮ ಹುಟ್ಟು ಹಬ್ಬದ ಸವಿನೆನಪಿಗಾಗಿ ತಹಶೀಲ್ದಾರ್ ಕಚೇರಿಯ ಅಧಿಕಾರಿ ಸಿಬ್ಬಂದಿ ಸ್ಥಳೀಯ ವಿಲೇಜ್ ಅಕೌಂಟೆಂಟ್, ಪಿಡಿಓಗಳು ಸೇರಿದಂತೆ ಗ್ರಾಮಪಂಚಾಯತಿಗಳ ನೌಕರರಿಗೆ ಊಟೋಪಚಾರ ವ್ಯವಸ್ಥೆ ಮಾಡಿದ್ದಾರೆ.
ಚಿಂತಾಮಣಿ ನಗರ ಹೊರವಲಯದ ಪೆರಮಾಚನಹಳ್ಳಿ ಬಳಿಯ ನೇಚರ್ ಆರೋಮ ರೆಸ್ಟೋರೆಂಟ್ ನಲ್ಲಿ ಎಲ್ಲರಿಗೂ ತಹಶೀಲ್ದಾರ್ ಊಟೋಪಚಾರದ ವ್ಯವಸ್ಥೆ ಮಾಡಿದ್ದು ಮಧ್ಯಾಹ್ನ ಊಟದ ಸಮಯದ ನಂತರ ಎಲ್ಲಾ ಸಿಬ್ಬಂದಿಗಳು ತಮ್ಮ ಕಚೇರಿಗಳಿಗೆ ಬೀಗ ಜಡಿದು ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಸಹಜವಾಗಿ ತಹಶೀಲ್ದಾರ್ ಕಚೇರಿಗೆ ಬಂದ ಸಾರ್ವಜನಿಕರಿಗೆ ತಮ್ಮ ಕೆಲಸ ಕಾರ್ಯಗಳು ಆಗದೆ ಪರದಾಡಿದ್ದಾರೆ.
ಈ ವಿಚಾರವನ್ನು ಸಾರ್ವಜನಿಕರು ಪಬ್ಲಿಕ್ ಟಿವಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಬಗ್ಗೆ ಪರೀಶೀಲನೆ ನಡೆಸಿದಾಗ ತಾಲೂಕು ಕಚೇರಿಯ ಅಧಿಕಾರಿ ಸಿಬ್ಬಂದಿ ಊಟೋಪಚಾರದಲ್ಲಿ ಭಾಗಿಯಾಗಿರೋದು ಖಾತ್ರಿಯಾಗಿದೆ. ಈ ಬಗ್ಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ತಹಶೀಲ್ದಾರ್ ವಿಶ್ವನಾಥ್, ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದ ಸಿಬ್ಬಂದಿಗೆ ಊಟೋಪಚಾರ ವ್ಯವಸ್ಥೆ ಮಾಡಿದ್ದೆವು. ಆದರೆ ಮಧ್ಯಾಹ್ನ ಊಟದ ಸಮಯದಲ್ಲಿ ಹೋಗಿ ಪುನಃ ಕಚೇರಿಗೆ ಹಾಜರಾಗಿದ್ದು, ಕಚೇರಿ ಎಂದಿನಂತೆ ಕಾರ್ಯನಿರ್ವಹಿಸಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಕಚೇರಿಯ ಬಹುತೇಕ ಸಿಬ್ಬಂದಿ ಹಾಗೂ ಅಧಿಕಾರಿಗಳು ತಹಶೀಲ್ದಾರ್ ವಿಶ್ವನಾಥ್ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದಕ್ಕೆ ದೂರದ ಊರಿನಿಂದ ಬಂದಿದ್ದ ಸಾರ್ವಜನಿಕರು ಪರದಾಡಿ ಹಿಡಿಶಾಪ ಹಾಕಿ ತೆರಳಿದ್ದಾರೆ.