Tag: parking issue

  • ಪಾರ್ಕಿಂಗ್ ವಿಚಾರಕ್ಕೆ ಕೋಳಿ ವ್ಯಾಪಾರಿಗೆ ಶಿವಸೇನಾ ನಾಯಕನಿಂದ ಹಲ್ಲೆ – ವಿಡಿಯೋ

    ಪಾರ್ಕಿಂಗ್ ವಿಚಾರಕ್ಕೆ ಕೋಳಿ ವ್ಯಾಪಾರಿಗೆ ಶಿವಸೇನಾ ನಾಯಕನಿಂದ ಹಲ್ಲೆ – ವಿಡಿಯೋ

    ಮುಂಬೈ: ಮಾಜಿ ಮೇಯರ್, ಶಿವ ಸೇನಾ ಕಾರ್ಪೋರೇಟರ್ ಮಿಲಿಂದ್ ವೈದ್ಯ ಅವರು ಕೋಳಿ ವ್ಯಾಪಾರಿ ಮೇಲೆ ಹಲ್ಲೆ ಮಾಡಿ ಘಟನೆ ಶುಕ್ರವಾರ ಮುಂಬೈನಲ್ಲಿ ನಡೆದಿದೆ.

    ಕೋಳಿಗಳನ್ನು ಸಾಗಿಸುತ್ತಿದ್ದ ಕಂಟೇನರ್ ಅನ್ನು ಚಾಲಕ ಮಹಿಂ ರೈಲ್ವೇ ನಿಲ್ದಾಣದ ಬಳಿ ನಿಲ್ಲಿಸಿದ್ದ. ಈ ವೇಳೆ ಅಲ್ಲಿಗೆ ಬಂದ ಮಿಲಿಂದ್ ವೈದ್ಯ ಅವರು ಏಕಾಏಕಿ ಚಾಲಕ ಹಾಗೂ ಸಹಾಯಕನ ಮೇಲೆ ಹಲ್ಲೆ ಮಾಡಿದ್ದಾರೆ. ಮಿಲಿಂದ್ ವೈದ್ಯ ಅವರ ಬೆಂಬಲಿಗರು ಕೂಡ ಕೆಲ ಚಾಲಕರನ್ನು ಥಳಿಸಿದ್ದಾರೆ.

    ಚಾಲಕರ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ಸೆರೆ ಹಿಡಿದಿದ್ದು, ವಿಡಿಯೋವನ್ನು ಸಾಮಾಜಿಕ ಜಾಲಯಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಕಾರ್ಪೋರೇಟರ್ ವರ್ತನೆ ಬಗ್ಗೆ ಟೀಕೆ ವ್ಯಕ್ತವಾಗಿದೆ.

    ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಮಿಲಿಂದ್ ವೈದ್ಯ ಅವರು, ಪಾರ್ಕಿಂಗ್ ಸಮಸ್ಯೆ ಕುರಿತು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ)ಗೆ ದೂರು ನೀಡಿದ್ದೇನೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಾನೇ ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದರು.

    ಘಟನೆಯು ಬೆಳಗ್ಗೆ 10 ಗಂಟೆಗೆ ನಡೆದಿದೆ. ಈ ಸ್ಥಳದಲ್ಲಿ ನಿತ್ಯವೂ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದರಿಂದ ನೈರ್ಮಲ್ಯ ಉಂಟಾಗಿತ್ತು. ಅಷ್ಟೇ ಅಲ್ಲದೆ ಸಂಚಾರ ಅಸ್ತವ್ಯಸ್ತವಾಗುತಿತ್ತು. ಹೀಗಾಗಿ ಮಿಲಿಂದ್ ವೈದ್ಯ ಕೋಪಗೊಂಡ ಹಲ್ಲೆ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

  • 100 ವರ್ಷ ಹಳೆಯ ದೇವಾಲಯ ಧ್ವಂಸ – ಹಳೆ ದೆಹಲಿಯಲ್ಲಿ ಪರಿಸ್ಥಿತಿ ಉದ್ವಿಗ್ನ

    100 ವರ್ಷ ಹಳೆಯ ದೇವಾಲಯ ಧ್ವಂಸ – ಹಳೆ ದೆಹಲಿಯಲ್ಲಿ ಪರಿಸ್ಥಿತಿ ಉದ್ವಿಗ್ನ

    ನವದೆಹಲಿ: ಹಳೆ ದೆಹಲಿ ಭಾಗದ ಚಾಂದಿನಿ ಚೌಕ್ ಹೌಜ್ ಖಾಜಿ ಪ್ರದೇಶದಲ್ಲಿದ್ದ 100 ವರ್ಷ ಹಳೆಯ ದುರ್ಗಾ ದೇವಿಯ ದೇವಾಲಯವನ್ನು ಗುಂಪೊಂದು ಧ್ವಂಸಗೊಳಿಸಿದೆ. ದೇವಾಲಯ ಧ್ವಂಸಗೊಂಡ ಬಳಿಕ ಎರಡು ಗುಂಪುಗಳ ನಡುವೆ ಗಲಾಟೆ ನಡೆಯುತ್ತಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

    ಹೌಜ್ ಖಾಜಿ ಪ್ರದೇಶದಲ್ಲಿ ಪಾರ್ಕಿಂಗ್ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆಯುತಿತ್ತು. ಈ ಹಿನ್ನೆಲೆಯಲ್ಲಿ ಒಂದು ಗುಂಪು ಸ್ಥಳದಲ್ಲಿದ್ದ ದೇವಸ್ಥಾನವನ್ನು ಸಂಪೂರ್ಣ ಧ್ವಂಸ ಮಾಡಿದೆ. ಇದರಿಂದ ಇನ್ನೊಂದು ಗುಂಪಿನ ಜನರು ರೊಚ್ಚಿಗೆದ್ದಿದ್ದು, ಎರಡು ಗುಂಪಿನ ನಡುವೆ ಘರ್ಷಣೆ ನಡೆಯಲು ಕಾರಣವಾಗಿದೆ.

    ಈ ಸಂಬಂಧ ಪೊಲೀಸ್ ಉಪ ಆಯುಕ್ತರಾದ ಮಂದೀಪ್ ಸಿಂಗ್ ರಾಂಧವ ಅವರು ಟ್ವೀಟ್ ಮಾಡಿ, ಸ್ಥಳದಲ್ಲಿ ಶಾಂತಿ ಕಾಪಾಡಲು, ಈ ಗಲಾಟೆಯನ್ನು ಹತೋಟಿಗೆ ತರಲು ಸ್ಥಳೀಯರು ಪೊಲೀಸರಿಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

    “ಹೌಜ್ ಖಾಜಿಯಲ್ಲಿ ಪಾರ್ಕಿಂಗ್ ಸಮಸ್ಯೆಯ ಬಗ್ಗೆ ಕೆಲವು ವಾಗ್ವಾದ ಮತ್ತು ಗಲಾಟೆ ನಡೆದ ನಂತರ, ವಿವಿಧ ಸಮುದಾಯಗಳ ಎರಡು ಗುಂಪುಗಳ ನಡುವೆ ಗಲಾಟೆ ಆಗಿ ಉದ್ವಿಗ್ನ ಪರಿಸ್ಥಿತಿ ಉಂಟುಮಾಡಿದೆ. ನಾವು ಕಾನೂನು ಕ್ರಮ ಕೈಗೊಂಡಿದ್ದೇವೆ ಮತ್ತು ಭಾವನೆಗಳನ್ನು ಸಮಾಧಾನಪಡಿಸಿ ಸೌಹಾರ್ದತೆಯನ್ನು ತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸ್ಥಳದಲ್ಲಿ ಶಾಂತಿ ಸ್ಥಾಪಿಸಲು ಸಹಾಯ ಮಾಡಿ” ಎಂದು ಡಿಸಿಪಿ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಈ ಗಲಾಟೆ ಸಂಬಂಧ ಒಂದು ವಿಡಿಯೋ ಹರಿದಾಡುತ್ತಿದೆ. ಪಾರ್ಕಿಂಗ್ ವಿಚಾರಕ್ಕೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೋರ್ವ ಹಾಗೂ ಒಂದು ಗುಂಪು ನಡುವೆ ಜಗಳ ನಡೆದು, ಬಳಿಕ ಅದು ತಾರಕ್ಕಕ್ಕೇರಿ ಗಲಾಟೆ ನಡೆದು ವ್ಯಕ್ತಿಯನ್ನು ಗುಂಪಿನಲ್ಲಿದ್ದ ಮಂದಿ ಥಳಿಸಿದ್ದಾರೆ. ಬಳಿಕ ಗಲಾಟೆ ಜೋರಾಗಿ ಹಲ್ಲೆಗೊಳಗಾದ ವ್ಯಕ್ತಿಯ ಕಡೆಯವರು ಹಲ್ಲೆ ನಡೆಸಿದ ಗುಂಪಿನ ಜೊತೆ ಹೊಡೆದಾಟ ನಡೆಸಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

    ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಗಲಾಟೆ ನಡೆದಿದ್ದು, ಇದಾದ ಬಳಿಕ ಗುಂಪೊಂದು ಸ್ಥಳದಲ್ಲಿದ್ದ ದೇವಾಲಯವನ್ನು ಧ್ವಂಸಗೊಳಿಸಿದೆ. ಪರಿಣಾಮ ಎರಡು ಗುಂಪಿನ ನಡುವೆ ನಡೆದ ಗಲಾಟೆ ಈಗ ಎರಡು ಕೋಮಿನ ನಡುವೆ ಬಿರುಕು ಉಂಟುಮಾಡಿದೆ.

    ಈ ಗಲಾಟೆ ದೊಡ್ಡದಾಗುವ ಸಾಧ್ಯತೆ ಹೆಚ್ಚಾಗಿದ್ದು, ಈ ಘಟನೆ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮವಾಗಿ ಹೌಜ್ ಖಾಜಿ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.