Tag: parking fee

  • ಪ್ರಯಾಣಿಕರಿಗೆ ಶಾಕ್ ನೀಡಿದ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್!

    ಪ್ರಯಾಣಿಕರಿಗೆ ಶಾಕ್ ನೀಡಿದ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್!

    ಬೆಂಗಳೂರು: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ದಿನನಿತ್ಯ ಸಾವಿರಾರು ಜನ ಆಗಮಿಸುತ್ತಾರೆ. ಜೊತೆಗೆ ನೂರಾರು ವಾಹನಗಳನ್ನು ಪಾರ್ಕ್ ಮಾಡಲಾಗುತ್ತದೆ. ಆದರೆ ಕೆಎಸ್‍ಆರ್ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಶುಲ್ಕವನ್ನು ದಿಢೀರ್ ಹೆಚ್ಚಿಸಿ ಶಾಕ್ ನೀಡಲಾಗಿದೆ.

    ಸಿಟಿ ರೈಲ್ವೆ ಸ್ಟೇಷನ್‍ನಲ್ಲಿ ಮೀಟರ್ ರೀತಿಯಲ್ಲೇ ವಾಹನ ಪಾರ್ಕಿಂಗ್ ಶುಲ್ಕ ಏರಿಕೆಯಾಗುತ್ತಿದೆ. ಯಾವುದೇ ಖಾಸಗಿ ಮಾಲ್‍ಗೂ ಕಡಿಮೆ ಇಲ್ಲದಂತೆ ಶುಲ್ಕ ವಸೂಲಿಗಿಳಿದಿದ್ದು, ಗಂಟೆ ಲೆಕ್ಕದಲ್ಲಿ ಭಾರೀ ಶುಲ್ಕವನ್ನು ಪ್ರಯಾಣಿಕರು ಪಾವತಿಸಬೇಕಾಗಿದೆ.

    ಮೊದಲ ಎರಡು ಗಂಟೆ ಕಾರ್ ಪಾರ್ಕಿಂಗ್‍ಗೆ 25 ರೂ., 2 ಗಂಟೆ ಅವಧಿ ಮುಗಿದರೆ 25 ರೂ, ಪಾವತಿಸಬೇಕು. ಒಂದು ವೇಳೆ ಮೂರು ಗಂಟೆ ಮೀರಿದರೆ ಪ್ರತಿ ಗಂಟೆಗೆ 20 ರೂ. ಶುಲ್ಕ ಕಟ್ಟಬೇಕು. 16 ಗಂಟೆ ಮೇಲ್ಪಟ್ಟ 24 ಗಂಟೆ ಒಳಗೆ 400 ರೂ. ಪಾವತಿಸಬೇಕು. ಹಳದಿ ಬೋರ್ಡ್ ಕಾರಿಗೆ ಮೊದಲ 1 ಗಂಟೆ ಅವಧಿಗೆ 25 ರೂ. 1 ಗಂಟೆ ನಂತರ ಪ್ರತಿ ಗಂಟೆಗೆ 20 ರೂ ಕಟ್ಟಬೇಕು.

    ದ್ವಿಚಕ್ರ ವಾಹನಗಳ ಪಾರ್ಕಿಂಗ್ ಶುಲ್ಕ ಕೂಡ ಹೆಚ್ಚಾಗಿದ್ದು, ಮೊದಲ ಎರಡು ಗಂಟೆಗೆ 12 ರೂ. ಕಟ್ಟಬೇಕು. 2 ಗಂಟೆ ನಂತರ 16 ಗಂಟೆ ಒಳಗೆ ಪ್ರತಿ ಗಂಟೆಗೆ 10 ರೂ. ಫೀ ಪಾವತಿಸಬೇಕು. 16 ಗಂಟೆ ಮೇಲ್ಪಟ್ಟ 24 ಗಂಟೆ ಒಳಗೆ 80 ರೂ. ಶುಲ್ಕ ನೀಡಬೇಕು.

    ಪ್ರಯಾಣಿಕರು ನಾಲ್ಕು ಚಕ್ರದ ವಾಹನಕ್ಕೆ 3,000 ರೂ. ಹಾಗೂ ದ್ವಿಚಕ್ರ ವಾಹನಕ್ಕೆ 1,000 ರೂ. ನೀಡಿ ತಿಂಗಳ ಪಾಸ್ ಸಹ ಪಡೆಯಬಹುದಾಗಿದೆ. 7 ನಿಮಿಷದ ಒಳಗೆ ಪಿಕ್ ಅಪ್ ಅಂಡ್ ಡ್ರಾಪ್‍ಗೆ ಖಾಸಗಿ ಮತ್ತು ಹಳದಿ ಬೋರ್ಡ್ ಕಾರು, ದ್ವಿಚಕ್ರ ಚಾಹನಕ್ಕೆ ಯಾವುದೇ ಶುಲ್ಕ ಇಲ್ಲ. 7 ನಿಮಿಷ ದಾಟಿದರೆ ನಾಲ್ಕು ಚಕ್ರದ ವಾಹನಗಳು ಕನಿಷ್ಠ 25 ರೂ. ಪಾವತಿಸಬೇಕು. ದ್ವಿಚಕ್ರ ವಾಹನಗಳು 7 ನಿಮಿಷ ದಾಟಿದರೆ 15 ರೂ. ಶುಲ್ಕ ಕಟ್ಟಬೇಕು.

    ರೈಲ್ವೆ ನಿಲ್ದಾಣದಲ್ಲಿರುವ ಬ್ಯಾರಿಯರ್ ಆಕ್ಸೆಸ್ ಸಿಸ್ಟಂ ವಾಹನ ನಿಲ್ದಾಣಕ್ಕೆ ಬರುವ ಮತ್ತು ಹೊರಹೋಗುವ ವೇಳೆಯನ್ನು ದಾಖಲಿಸಿಕೊಳ್ಳುತ್ತದೆ. ಎಕ್ಸಿಟ್ ಗೇಟಿನಲ್ಲಿ ಶುಲ್ಕವನ್ನು ನೀಡಬೇಕಾಗುತ್ತದೆ. ಪ್ರತಿನಿತ್ಯ ಸುಮಾರು 2 ಸಾವಿರ ದ್ವಿಚಕ್ರ ವಾಹನಗಳು ಹಾಗೂ ಸುಮಾರು 600 ಕಾರುಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗುತ್ತವೆ.

  • ಟ್ರೀಟ್‍ಮೆಂಟಿಗೆ 5 ರೂ., ಪಾರ್ಕಿಂಗ್‍ಗೆ 30 ರೂ. – ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಪಾರ್ಕಿಂಗ್ ದಂಧೆ

    ಟ್ರೀಟ್‍ಮೆಂಟಿಗೆ 5 ರೂ., ಪಾರ್ಕಿಂಗ್‍ಗೆ 30 ರೂ. – ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಪಾರ್ಕಿಂಗ್ ದಂಧೆ

    ಬೆಂಗಳೂರು: ನಗರದಲ್ಲಿರುವ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆ ಒಳಗಡೆ ನಡೆಯುತ್ತಿರುವ ದಂಧೆ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಟೆಂಡರ್ ಆಗಿರುವುದು ಒಂದು, ವಸೂಲಿ ಮಾಡುತ್ತಿರುವುದು ಮತ್ತೊಂದು. ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುವ ಪಾರ್ಕಿಂಗ್ ದಂಧೆ ಇದೀಗ ಹೊರಬಿದ್ದಿದೆ.

    ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಾದ ವಿಕ್ಟೋರಿಯಾ, ಬೋರಿಂಗ್, ಕೆ.ಸಿ ಜನರಲ್ ಮತ್ತು ನಿಮ್ಹಾನ್ಸ್ ಗಳಲ್ಲಿ ಚಿಕಿತ್ಸೆಗೆ ಚಾರ್ಜ್ ಕೇವಲ 5 ರೂ. ಆದರೆ ಪಾರ್ಕಿಂಗ್ ಚಾರ್ಜ್ ಮಾತ್ರ ಅದರ 10 ಪಟ್ಟು ಇದೆ. ಟೆಂಡರ್ ನಲ್ಲಿ 5 ರೂ., 10 ರೂ. ಪಾರ್ಕಿಂಗ್ ಚಾರ್ಜ್ ಇದ್ದರೆ ಕಾಂಟ್ರ್ಯಾಕ್ಟ್ ದಾರರು ಟಿಕೆಟ್ ಪ್ರಿಂಟ್ ಮಾಡಿಕೊಂಡು ದ್ವಿಚಕ್ರ ವಾಹನಗಳಿಗೆ 20 ರೂ., ಕಾರಿಗೆ 30 ರೂಪಾಯಿ ಕಲೆಕ್ಟ್ ಮಾಡಿ ದೊಡ್ಡ ದಂಧೆಯನ್ನೇ ನಡೆಸುತ್ತಿದ್ದಾರೆ. ಪಬ್ಲಿಕ್ ಟಿವಿ ರಹಸ್ಯ ತಂಡ ಪಾರ್ಕಿಂಗ್ ದಂಧೆಯನ್ನ ಬೆನ್ನತ್ತಿದಾಗ ಕರಾಳದರ್ಶನ ಬಯಲಾಗಿದೆ.

    ಕೆಸಿ ಜನರಲ್ ಆಸ್ಪತ್ರೆ:
    ಕೆಸಿ ಜನರಲ್ ಆಸ್ಪತ್ರೆಗೆ ದಿನಕ್ಕೆ ಸಾವಿರಾರು ಜನ ಬರುತ್ತಿರುತ್ತಾರೆ. ಇಲ್ಲಿಗೆ ಬರುವ ದ್ವಿಚಕ್ರ ವಾಹನ ಪಾರ್ಕ್ ಮಾಡಲು 5 ರೂ. ಮತ್ತು ಕಾರಿಗೆ 10 ರೂ. ಟೆಂಡರ್ ನಲ್ಲಿ ನಿಗದಿ ಮಾಡಿದ್ದಾರೆ. ಇದನ್ನು ಕೆಸಿ ಜನರಲ್ ಆದ ವೈದ್ಯ ಅಧೀಕ್ಷರಾದ ಭಾನುಮೂರ್ತಿ ಅವರೇ ಹೇಳುತ್ತಾರೆ. ಆದರೆ ಹೊರಗಡೆ ಬೈಕಿಗೆ 10 ರೂ., ಕಾರಿಗೆ 20 ರೂ. ಮಾಡಿ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ವೈದಕೀಯ ಅಧೀಕ್ಷಕರಾದ ಭಾನು ಮೂರ್ತಿಯವರನ್ನು ಪ್ರಶ್ನಿಸಿದಾಗ ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.

    ಕೆಸಿ ಜರನಲ್ ಆಸ್ಪತ್ರೆ ಒಳಗಡೆ ಪಾರ್ಕಿಂಗ್ ದಂಧೆ:
    ಪಬ್ಲಿಕ್ ಟಿವಿ ಪ್ರತಿನಿಧಿ: ಸರ್ ಎಷ್ಟು ಸರ್ ಪಾರ್ಕಿಂಗ್ ಜಾರ್ಜ್
    ಪಾರ್ಕಿಂಗ್ ಕಾಂಟ್ರ್ಯಾಕ್ಟರ್: ಬೈಕ್‍ಗೆ 10, ಕಾರಿಗೆ 20
    ಪ್ರತಿನಿಧಿ: ಯಾಕೆ ಇಷ್ಟೊಂದು ?
    ಕಾಂಟ್ರಾಕ್ಟರ್: ಟೆಂಡರ್ ಆಗಿರೋದೆ ಅಷ್ಟು
    ಪ್ರತಿನಿಧಿ: ಟ್ರೀಟ್‍ಮೆಂಟ್ ಚಾರ್ಜ್ 5 ರೂ. ಆಯಿತಲ್ಲ ಬ್ರದರ್
    ಕಾಂಟ್ರಾಕ್ಟರ್: ಇದೆಯಪ್ಪ ಸೂಪರ್‌ಡೆಂಟ್‌ ನಾ ಕೇಳಿ
    ಪ್ರತಿನಿಧಿ: ಟೆಂಡರ್ ಕಾಪಿ ಕೊಡಿ ನೋಡೋಣ
    ಕಾಂಟ್ರಾಕ್ಟರ್: ಟೆಂಡರ್ ಕಾಪಿ ಇಲ್ಲ. ಸೂಪರ್‌ಡೆಂಟ್‌ ಹತ್ತಿರ ಇದೆ
    ಪ್ರತಿನಿಧಿ:ನೀವು ಇಟ್ಟಿಕೊಂಡಿಲ್ವ
    ಕಾಂಟ್ರಾಕ್ಟರ್: ನಮ್ಮ ಹತ್ತಿರ ಇಲ್ಲ
    ಪ್ರತಿನಿಧಿ ಟೆಂಡರ್ ಇಲ್ಲದೇ ಡಬ್ಬಲ್ ಡಬ್ಬಲ್ ಕಲೆಕ್ಟ್ ಮಾಡ್ತಿರಾ
    ಕಾಂಟ್ರಾಕ್ಟರ್: ನಾವೇನು ಮಾಡೋಣ ಕೂಲಿ ಕೆಲಸಗಾರು
    ಪ್ರತಿನಿಧಿ: ಇದೆಲ್ಲಾ ತಪ್ಪು ತಾನೇ

    ವಿಕ್ಟೋರಿಯಾ ಆಸ್ಪತ್ರೆ;
    ರಾಜ್ಯದ ಮೂಲೆ ಮೂಲೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ. ಅವರ ಜೊತೆ ಸಂಬಂಧಿಕರು ಕೂಡ ಬರುತ್ತಾರೆ. ಆಸ್ಪತ್ರೆ ಚಿಕಿತ್ಸೆ ಶುಲ್ಕಕ್ಕಿಂತ ಪಾರ್ಕಿಂಗ್ ಶುಲ್ಕವೇ ದುಪ್ಪಟ್ಟಿದೆ. ಬೈಕಿಗೆ 5 ರೂ., ಕಾರಿಗೆ 10 ರೂ. ಇದೆ. ಆದರೆ ವಿಕ್ಟೋರಿಯಾದಲ್ಲಿ ಬೈಕ್ 10 ರೂ., ಕಾರಿಗೆ 30 ರೂ., ಆಟೋಗೆ 20 ರೂ. ಚಾರ್ಜ್ ಮಾಡುತ್ತಿದ್ದಾರೆ.

    ಅನ್ಯಾಯದ ಬಗ್ಗೆ ಪ್ರಶ್ನಿಸಿದ್ದರೆ ಕಾಂಟ್ರಾಕ್ಟ್ ದಾರರು ಹೇಳುವುದು ಹೀಗೆ:
    ಪಬ್ಲಿಕ್ ಪ್ರತಿನಿಧಿ: ಎಷ್ಟು ಅಣ್ಣ ಪಾರ್ಕಿಂಗ್ ಜಾರ್ಜ್
    ಪಾರ್ಕಿಂಗ್ ಕಾಂಟ್ರ್ಯಾಕ್ಟರ್: ಬೈಕಿಗೆ 10, ಆಟೋಗೆ 20, ಕಾರಿಗೆ 30
    ಪ್ರತಿನಿಧಿ: ಯಾಕೆ ಇಷ್ಟೊಂದು ?
    ಕಾಂಟ್ರಾಕ್ಟರ್: ಅಷ್ಟೇ ಅಣ್ಣ ಇರೋದು
    ಪ್ರತಿನಿಧಿ: ಚಿಕಿತ್ಸೆಗೆ ಚಾರ್ಜ್ 5 ರೂ. ಅಲ್ವಾ ಬ್ರದರ್
    ಕಾಂಟ್ರಾಕ್ಟರ್: ಇಷ್ಟೇ ಹಾಕಿರೋದು
    ಪ್ರತಿನಿಧಿ: 30 ರೂ. ಜಾಸ್ತಿ ಆಯಿತಲ್ರಿ
    ಕಾಂಟ್ರಾಕ್ಟರ್: ವಿಕ್ಟೋರಿಯಾ ಜನ ಬರುತ್ತಾರೆ ನೋಡಿಕೊಳ್ಳಬೇಕಲ್ಲ
    ಪ್ರತಿನಿಧಿ: ಇದು ತಪ್ಪು ಅಲ್ವ ಗುರು
    ಕಾಂಟ್ರಾಕ್ಟರ್: ಇರೋದೆ ಇಷ್ಟು ಟೆಂಡರ್
    ಪ್ರತಿನಿಧಿ: ಟೆಂಡರ್ ಇಲ್ಲದೇ ಡಬ್ಬಲ್ ಡಬ್ಬಲ್ ಕಲೆಕ್ಟ್ ಮಾಡ್ತಿರ
    ಕಾಂಟ್ರಾಕ್ಟರ್: ಇರೋದೆ ಇಷ್ಟು
    ಪ್ರತಿನಿಧಿ: ಎಷ್ಟು ಇದೆ ತೋರಿಸಿ ಟೆಂಡರ್ ಕಾಫಿ
    ಕಾಂಟ್ರಾಕ್ಟರ್: ಇಲ್ಲ ಇಲ್ಲಿ

    ಬೋರಿಂಗ್ ಆಸ್ಪತ್ರೆ;
    ಇತ್ತ ಬೋರಿಂಗ್ ಆಸ್ಪತ್ರೆಯಲ್ಲೂ ಇದೆ ರೀತಿಯ ಪಾರ್ಕಿಂಗ್ ದಂಧೆ ಮುಂದುವರಿದಿದೆ. ವೈದ್ಯಾಧಿಕಾರಿಗಳಾದ ಮಂಜುನಾಥ್ ಅವರು ಕೇವಲ 5 ರೂ., 10 ರೂ. ನಿಗದಿ ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಹೊರಗಡೆ ಮಾತ್ರ 10 ರೂ. 20 ಕಲೆಕ್ಟ್ ಮಾಡುತ್ತಿದ್ದಾರೆ. ಈ ರೀತಿ ಮಾಡುವುದು ಅನ್ಯಾಯ ಇದು ತಪ್ಪು. ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ವೈದ್ಯಕೀಯ ಅಧೀಕರಾದ ಮಂಜುನಾಥ್ ಅವರು ತಿಳಿಸಿದ್ದಾರೆ.

  • ದೆಹಲಿ ವಾಯುಮಾಲಿನ್ಯ: ಪಾರ್ಕಿಂಗ್ ಶುಲ್ಕ 4 ಪಟ್ಟು ಹೆಚ್ಚಳ, ಮೆಟ್ರೋ ದರ ಇಳಿಕೆಗೆ EPCA ಆದೇಶ

    ದೆಹಲಿ ವಾಯುಮಾಲಿನ್ಯ: ಪಾರ್ಕಿಂಗ್ ಶುಲ್ಕ 4 ಪಟ್ಟು ಹೆಚ್ಚಳ, ಮೆಟ್ರೋ ದರ ಇಳಿಕೆಗೆ EPCA ಆದೇಶ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣವನ್ನು ನಿಯಂತ್ರಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ನೇಮಿಸಿರುವ ಪರಿಸರ ಮಾಲಿನ್ಯ ಹಾಗೂ ನಿಯಂತ್ರಣ ಮಂಡಳಿ(EPCA) ಪಾರ್ಕಿಂಗ್ ಶುಲ್ಕವನ್ನು 4 ಪಟ್ಟು ಹೆಚ್ಚಿಸಬೇಕೆಂದು ಮಂಗಳವಾರದಂದು ಆದೇಶ ಹೊರಡಿಸಿದೆ. ಇದರ ಜೊತೆಗೆ ಮೆಟ್ರೋ ಪ್ರಯಾಣ ದರದಲ್ಲಿ ಇಳಿಕೆ ಮಾಡಬೇಕೆಂದು ಹೇಳಿದೆ.

    ಮಾಲಿನ್ಯ ಪ್ರಮಾಣ ತುರ್ತು ಮಿತಿ ತಲುಪಿದರೆ ಸಮ-ಬೆಸ (ಆಡ್- ಈವನ್) ಯೋಜನೆಗೆ ತಯಾರಾಗಿರುವಂತೆ ದೆಹಲಿ ಹಾಗೂ ಅಕ್ಕಪಕ್ಕದ ರಾಜ್ಯಗಳ ಸರ್ಕಾರಕ್ಕೆ ಮಂಡಳಿ ಹೇಳಿದೆ. ಪಾರ್ಕಿಂಗ್ ಶುಲ್ಕ ಹೆಚ್ಚಳ ಎನ್‍ಸಿಆರ್(ನ್ಯಾಷನಲ್ ಕ್ಯಾಪಿಟಲ್ ರೀಜಿಯನ್)ನ ಎಲ್ಲಾ ನಗರಗಳಲ್ಲಿ ಅನ್ವಯಿಸಲಿದೆ.

    ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿರುವ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಯೋಜನೆಯಡಿ ವಾಯು ಮಾಲಿನ್ಯವನ್ನ ನಿಭಾಯಿಸಲು ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಈ) 500ಕ್ಕಿಂತ ಹೆಚ್ಚಾದಾಗ ತುರ್ತು ಸಂದರ್ಭವನ್ನ ಘೋಷಿಸಲಾಗುತ್ತದೆ. ಮಂಗಳವಾರ ಸಂಜೆ 4.30ರ ವೇಳೆಗೆ ಎಕ್ಯೂಈ 436 ಇತ್ತು ಎಂದು ವರದಿಯಾಗಿದೆ.

    ದೆಹಲಿ ಹಾಗೂ ಎನ್‍ಸಿಆರ್ ನ ಎಲ್ಲಾ ರಾಜ್ಯ ಸರ್ಕಾರಗಳು ಕೂಡಲೇ ಸಾರ್ವಜನಿಕ ಸಾರಿಗೆ ಸೇವೆಯನ್ನು ಹೆಚ್ಚಿಸಬೇಕು. ರಸ್ತೆಗಳಲ್ಲಿ ಹೆಚ್ಚಿನ ಬಸ್‍ಗಳು ಓಡಾಡುವಂತೆ ನೋಡಿಕೊಳ್ಳಬೇಕು. ಮೆಟ್ರೋ ಸಂಚಾರವನ್ನೂ ಕೂಡ ಹೆಚ್ಚು ಮಾಡಬೇಕು. ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಹಾಗೂ ಆಫ್ ಪೀಕ್ ಹವರ್‍ಗಳಲ್ಲಿ ಪ್ರಯಾಣ ದರವನ್ನು ಕಡಿಮೆ ಮಾಡಬೇಕು ಎಂದು EPCA ಹೇಳಿದೆ.

    ಈ ಎಲ್ಲಾ ಕ್ರಮಗಳನ್ನು ಘೋಷಣೆ ಮಾಡಿದ EPCA, ರಾಜಧಾನಿ ಸಂಕಷ್ಟ ಸ್ಥಿತಿಯಲ್ಲಿದ್ದು ಮುಂದಿನ ಕೆಲವು ದಿನಗಳ ಕಾಲ ಇದು ಮುಂದುವರೆಯಲಿದೆ ಎಂದು ಹೇಳಿದೆ.