Tag: Pariksha Pe Charcha

  • ವಿದ್ಯಾರ್ಥಿಗಳಿಗೆ ಎಕ್ಸಾಮ್ ವಾರಿಯರ್ಸ್ ಪುಸ್ತಕ ವಿತರಿಸಿದ ಪ್ರಹ್ಲಾದ್‌ ಜೋಶಿ

    ವಿದ್ಯಾರ್ಥಿಗಳಿಗೆ ಎಕ್ಸಾಮ್ ವಾರಿಯರ್ಸ್ ಪುಸ್ತಕ ವಿತರಿಸಿದ ಪ್ರಹ್ಲಾದ್‌ ಜೋಶಿ

    ಧಾರವಾಡ: ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಪರೀಕ್ಷಾ ಪೇ ಚರ್ಚಾ (Pariksha Pe Charcha) ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ವಿದ್ಯಾರ್ಥಿಗಳ ನಡುವೆ ಕುಳಿತು ವೀಕ್ಷಿಸಿದರು. ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮೋದಿ (Narendra Modi) ಅವರ ಚರ್ಚೆ ಬಳಿಕ ಹುಬ್ಬಳ್ಳಿಯಲ್ಲಿ ಜೋಶಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.‌

    ಮೋದಿಯವರ ಆಶಯದಂತೆ, ವಿದ್ಯಾರ್ಥಿಗಳು ಪರೀಕ್ಷೆಗಳ ಬಗ್ಗೆ ಭಯಪಡದೇ, ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಜೋಶಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಉತ್ತಮ ತಯಾರಿ ಹಾಗೂ ಆತ್ಮಸ್ಥೈರ್ಯದಿಂದ ಯಾವುದೇ ಪರೀಕ್ಷೆಯನ್ನು ಕೂಡ ಯಶಸ್ವಿಯಾಗಿ ಎದುರಿಸಬಹುದು ಎಂಬ ಸ್ಪೂರ್ತಿದಾಯಕ ನುಡಿಗಳನ್ನಾಡಿ ವಿದ್ಯಾರ್ಥಿಗಳಲ್ಲಿ ಸ್ಥೈರ್ಯ ತುಂಬಿದರು.

    ಕಾರ್ಯಕ್ರಮದ ನಂತರ ಸವಾಯೀ ಗಂಧರ್ವ ಸಭಾಭವನದಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಗೆ, ಮೋದಿ ಅವರು ಬರೆದ ಎಕ್ಸಾಮ್ ವಾರಿಯರ್ಸ್ (Exam Warriors) ಪುಸ್ತಕವನ್ನು ಜೋಶಿ ವಿತರಿಸಿದರು. ಭಾರತದ ಭವಿಷ್ಯವಾದ ಈ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅನುಭವ ತುಂಬಾ ಆನಂದ ನೀಡಿತು. ಈ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸಿದರು.  ಇದನ್ನೂ ಓದಿ: ಕಾಂಪೌಂಡ್ ಕಟ್ಟೋಕೆ ಹಣ ಕೊಡೋದು ಬಿಡಿ; ಮಕ್ಕಳ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿ – ಬೊಮ್ಮಾಯಿ

    ಸುಮಾರು ಐದು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಣೆ ಮಾಡಿದರು. ಜೋಶಿಯವರು ವಿದ್ಯಾರ್ಥಿಗಳ ಜೊತೆ ಕುಳಿತು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಿಸುವಾಗ ರಾಜ್ಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪರೀಕ್ಷೆಯ ಒತ್ತಡ ನಿಭಾಯಿಸುವುದು ಹೇಗೆ- ವಿದ್ಯಾರ್ಥಿಗಳಿಗೆ ಮೋದಿ ಟಿಪ್ಸ್‌

    ಪರೀಕ್ಷೆಯ ಒತ್ತಡ ನಿಭಾಯಿಸುವುದು ಹೇಗೆ- ವಿದ್ಯಾರ್ಥಿಗಳಿಗೆ ಮೋದಿ ಟಿಪ್ಸ್‌

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪರೀಕ್ಷಾ ಪೇ ಚರ್ಚಾದ ಐದನೇ ಆವೃತ್ತಿಯನ್ನು ನಡೆಸಿಕೊಟ್ಟರು. ದೇಶಾದ್ಯಂತ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಮೋದಿ ಸಂವಾದ ನಡೆಸಿದರು.

    ಪರೀಕ್ಷೆಗಳಿಗೆ ಸಿದ್ಧತೆ, ಓದು ಕುರಿತು ವಿದ್ಯಾರ್ಥಿಗಳು ಪ್ರಧಾನಿ ಮೋದಿ ಅವರಿಗೆ ಪ್ರಶ್ನೆಗಳನ್ನು ಕೇಳಿದರು. ಪರೀಕ್ಷೆ ಸಂದರ್ಭದಲ್ಲಿ ಒತ್ತಡಗಳನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಧಾನಿ ಹಲವು ಟಿಪ್ಸ್‌ಗಳನ್ನು ನೀಡಿದರು. ಇದನ್ನೂ ಓದಿ: 2 ವರ್ಷದಿಂದ ಜಾರಿಯಲ್ಲಿದ್ದ ಕಡ್ಡಾಯ ಮಾಸ್ಕ್ ನಿಯಮವನ್ನ ತೆಗೆದು ಹಾಕಿದ ತೆಲಂಗಾಣ ಸರ್ಕಾರ

    ಪರೀಕ್ಷೆಗೆ ಮೋದಿ ಸಲಹೆ
    * ಪರೀಕ್ಷೆಯ ಸಮಯದಲ್ಲಿ ನಾವು ಹಬ್ಬಗಳನ್ನು ಸಂಭ್ರಮಿಸಲು ಸಾಧ್ಯವಿಲ್ಲ. ಆದರೆ ನಾವು ಪರೀಕ್ಷೆಗಳನ್ನೇ ಹಬ್ಬವನ್ನಾಗಿ ಮಾಡಿದರೆ, ನಾವು ಅವುಗಳನ್ನು ಆನಂದಿಸಬಹುದು.

    * ನೀವು ಪರೀಕ್ಷೆ ದೃಷ್ಟಿಯಿಂದ ಪಠ್ಯದ ಕೆಲವು ವಿಷಯಗಳ ಅಧ್ಯಯನ ಮಾಡಲು ಸಾಧ್ಯವಾಗದಿರಬಹುದು. ಆದರೆ ನೀವು ಅಧ್ಯಯನ ಮಾಡಿದ್ದರಲ್ಲಿ ನಂಬಿಕೆಯನ್ನು ಇಟ್ಟುಕೊಳ್ಳಿ. ಇದು ನಿಮಗೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಉಕ್ರೇನ್ ನಿರಾಶ್ರಿತರಿಗಾಗಿ ಅಪ್ಲಿಕೇಶನ್ ರೆಡಿ ಮಾಡಿದ 15ರ ಭಾರತೀಯ ಬಾಲಕ

    * ಹೆದರಬೇಡಿ ಮತ್ತು ಅತಿಯಾಗಿ ಯೋಚಿಸಬೇಡಿ. ಅದು ನಿಮ್ಮನ್ನು ಇನ್ನಷ್ಟು ಗಾಬರಿಗೊಳಿಸುವಂತೆ ಮಾಡುತ್ತದೆ.

    * ಆನ್‌ಲೈನ್‌ನಲ್ಲಿ ಮಾಹಿತಿಯನ್ನು ಹುಡುಕಬಹುದು ಮತ್ತು ಅದನ್ನು ಆಫ್‌ಲೈನ್‌ಗೆ ತಾಳೆಹಾಕಿ ನೋಡಬಹುದು.

    * ನಿಮ್ಮ ಗಮನವನ್ನು ಕೇಂದ್ರೀಕರಿಸಲು ಸಮಯ ಗೊತ್ತುಪಡಿಸಿಕೊಳ್ಳಿ. ಈ ಸಮಯದಲ್ಲಿ ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಲ್ಲ, ಅದರ ಒಳಗಿನ ಸಾಲಿನಲ್ಲಿರುತ್ತೀರಿ. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಮೋದಿಗೆ ಸ್ಟಾಲಿನ್ ಮನವಿ

  • ಕುಂಬ್ಳೆ, ಲಕ್ಷ್ಮಣ್, ದ್ರಾವಿಡ್ ಉದಾಹರಿಸಿ ಮಕ್ಕಳಿಗೆ ಮೋದಿ ಪಾಠ

    ಕುಂಬ್ಳೆ, ಲಕ್ಷ್ಮಣ್, ದ್ರಾವಿಡ್ ಉದಾಹರಿಸಿ ಮಕ್ಕಳಿಗೆ ಮೋದಿ ಪಾಠ

    ನವದೆಹಲಿ: ಸೋಲೇ ಗೆಲುವಿನ ಸೋಪಾನ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ವಿವಿಧ ಉದಾಹರಣೆಗಳ ಮೂಲಕ ವಿವರಿಸಿದರು.

    ಮೂರನೇ ಆವೃತ್ತಿಯ ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಕೆಟ್ ಆಟಗಾರರು ಸೇರಿದಂತೆ ವಿವಿಧ ಸಾಧಕರ ಉದಾಹರಣೆ ನೀಡಿದ್ದು, ಜೀವನದಲ್ಲಿ ಸೋಲಿನಿಂದಲೇ ಗೆಲ್ಲಲು ಸಾಧ್ಯ. ಹೀಗಾಗಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಚಿಂತೆಗೊಳಗಾಗಬೇಡಿ ಎಂದು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದರು.

    ಪ್ರಧಾನಿ ನರೇಂದ್ರ ಮೋದಿಯವರು ಕ್ರಿಕೆಟ್ ಸಾಧಕರ ನಿದರ್ಶನಗಳನ್ನು ವಿವರಿಸುವ ಮೂಲಕ ಮಕ್ಕಳಲ್ಲಿ ಧೈರ್ಯ ತುಂಬಿದರು. 2001ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಪಂದ್ಯದ ಕುರಿತು ಮತನಾಡಿ, ಅನಿಲ್ ಕುಂಬ್ಳೆ ಅವರ ಉದಾಹರಣೆ ನೀಡಿದರು. ಪಂದ್ಯ ಆಡುತ್ತಿರುವ ವೇಳೆ ಕುಂಬ್ಳೆ ಗಾಯಗೊಂಡಿದ್ದರು. ಆದರೂ ಪಂದ್ಯದಲ್ಲಿ ಆಡುವ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ್ದರು. ನಾವು ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ನಮ್ಮ ಜಯ ನಿಂತಿರುತ್ತದೆ ಎಂದು ಕಿವಿ ಮಾತು ಹೇಳಿದರು.

    ರಾಹುಲ್ ಡ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದ ಉದಾಹರಣೆಯನ್ನೂ ನೀಡಿದ ಅವರು, ನಮ್ಮ ತಂಡವು ಹಿನ್ನಡೆ ಅನುಭವಿಸುತಿತ್ತು. ಆಗ ಆಟಗಾರರ ಮನಸ್ಥಿತಿ ಉತ್ತಮವಾಗಿರಲಿಲ್ಲ. ಆದರೆ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರು ಪಂದ್ಯವನ್ನು ಹೇಗೆ ಗೆಲುವಿನತ್ತ ತಿರುಗಿಸಿದರು ಎಂಬುದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದೇ ಸಕಾರಾತ್ಮಕ ಚಿಂತನೆ ಹಾಗೂ ಪ್ರೇರಣೆಯ ಶಕ್ತಿ ಎಂದು ಮಕ್ಕಳಿಗೆ ತಿಳಿಸಿದರು.

    ಅಲ್ಲದೆ ದೇಶದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆ ಚಂದ್ರಯಾನ-2 ವಿಫಲತೆಯ ಕುರಿತು ಸಹ ಪ್ರಧಾನಿ ಮೋದಿ ಮಾತನಾಡಿದರು. ಇದು ವಿಫಲವಾದರೆ ಏನು ಗತಿ, ಈ ಬಗ್ಗೆ ಖಚಿತತೆ ಇಲ್ಲ, ಹೀಗಾಗಿ ನೀವು ಅಲ್ಲಿಗೆ ಹೋಗದಿರುವುದೇ ಉತ್ತಮ ಎಂದು ಹಲವರು ನನಗೆ ತಿಳಿಸಿದರು. ಆದರೆ ನಾನು ಇದಕ್ಕೆ ಉತ್ತರಿಸಿ, ಅಲ್ಲಿಗೆ ಹೋಗಿಯೇ ಸಿದ್ಧ ಎಂದು ಇಸ್ರೋ ಕೇಂದ್ರಕ್ಕೆ ತೆರಳಿದೆ. ಚಂದ್ರಯಾನ-2 ವಿಫಲವಾದ್ದರಿಂದ ನನಗೂ ನೋವಾಗಿತ್ತು. ಆದರೆ ವಿಜ್ಞಾನಿಗಳ ಬಳಿ ತೆರಳಿ ಅವರಿಗೆ ಆತ್ಮಸ್ಥೈರ್ಯ ತುಂಬಿದೆ. ನನ್ನ ಭಾವನೆಗಳನ್ನು ಅವರ ಬಳಿ ಹಂಚಿಕೊಂಡೆ. ರಾಷ್ಟ್ರದ ಕನಸಿಗೆ ಅವರು ವಹಿಸಿದ ಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದೆ. ಆಗ ಮನಸ್ಥಿತಿ ಬದಲಾಯಿತು. ಕೇವಲ ಅಲ್ಲಿ ಮಾತ್ರವಲ್ಲ ದೇಶಾದ್ಯಂತ ಬದಲಾವಣೆಯಾಯಿತು. ನಂತರ ಏನಾಯಿತು ಎಂಬುದು ನಿಮಗೆಲ್ಲ ತಿಳಿದಿದೆ. ಕೆಲವು ಬಾರಿ ನೀವು ಸೋಲಿನಿಂದ ಕಲಿಯಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

    ಕೇಂದ್ರ ಸರ್ಕಾರದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಗಿರುವ ಪರೀಕ್ಷಾ ಒತ್ತಡವನ್ನು ನಿವಾರಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಧಾನಿ ಮೋದಿಯವರು ಮಕ್ಕಳು ಪರೀಕ್ಷಾ ಒತ್ತಡ ನಿಭಾಯಿಸುವುದು ಹೇಗೆ ಎಂಬುದರ ಕುರಿತು ಸಲಹೆಯನ್ನು ಹಂಚಿಕೊಳ್ಳುತ್ತಿದ್ದಾರೆ.

    ದೇಶಾದ್ಯಂತ ಸುಮಾರು 2 ಸಾವಿರ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇದರಲ್ಲಿ 1,050 ವಿದ್ಯಾರ್ಥಿಗಳನ್ನು ಪ್ರಬಂಧ ಸ್ಪರ್ಧೆ ಮೂಲಕ ಆಯ್ಕೆ ಮಾಡಲಾಗಿದೆ. ರಾಜ್ಯದಿಂದ 42 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • ಮಕ್ಕಳ ಜೊತೆ ಸುರೇಶ್ ಕುಮಾರ್ ಪರೀಕ್ಷಾ ಪೇ ಚರ್ಚಾ

    ಮಕ್ಕಳ ಜೊತೆ ಸುರೇಶ್ ಕುಮಾರ್ ಪರೀಕ್ಷಾ ಪೇ ಚರ್ಚಾ

    ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಮಕ್ಕಳ ಪರೀಕ್ಷಾ ಆತಂಕ ನಿವಾರಣೆಗಾಗಿ ಮಕ್ಕಳ ಜೊತೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಸಿದರೆ ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಕ್ಕಳ ಜೊತೆ ಪರೀಕ್ಷಾ ಪೇ ಚರ್ಚೆ ನಡೆಸಿ ಮಕ್ಕಳ ಆತಂಕವನ್ನು ದೂರ ಮಾಡುವ ಪ್ರಯತ್ನ ಮಾಡಿದರು.

    ರಾಜಾಜಿನಗರದ ಕೆ.ಎಲ್.ಇ ಶಾಲೆಯಲ್ಲಿ ಸುತ್ತ ಮುತ್ತಲಿನ ಶಾಲಾ ಮಕ್ಕಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ವೀಕ್ಷಣೆ ಮಾಡಿದರು. ಜೊತೆಗೆ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.

    ಈ ವೇಳೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಮೋದಿ ಅವರ ಕನಸಿನ ಭಾರತವನ್ನು ಮಕ್ಕಳಿಗೆ ತೆರೆದಿಟ್ಟರು. ಮಕ್ಕಳು ಪರೀಕ್ಷೆಗೆ ಆತಂಕ ಪಡಬೇಡಿ. ಪರೀಕ್ಷೆ ಕೇವಲ ಶೈಕ್ಷಣಿಕ ಗುಣಮಟ್ಟ ಅಳೆಯಲು ಮಾತ್ರ. ಅದು ಜೀವನದ ಪರೀಕ್ಷೆ ಅಲ್ಲ. ಹೀಗಾಗಿ ಮಕ್ಕಳು ಆತಂಕ ಇಲ್ಲದೆ ಪರೀಕ್ಷೆ ಬರೆಯಬೇಕು ಅಂತ ಸಲಹೆ ನೀಡಿದರು.

    ಮೋದಿ ಅವರ ಪರೀಕ್ಷಾ ಆಂತಕ ನಿವಾರಣೆಯ ಪುಸ್ತಕ ಓದುವಂತೆ ಸಲಹೆ ನೀಡಿದರು. ಇದಲ್ಲದೆ ಮಕ್ಕಳ ಜೊತೆ ಸಮಸ್ಯೆಗಳ ಕುರಿತು ಚರ್ಚೆ ಮಾಡಿದರು. ಪರೀಕ್ಷೆ ಕುರಿತು ಮಕ್ಕಳ ಪ್ರಶ್ನೆಗೆ ತಾಳ್ಮೆಯಿಂದ ಉತ್ತರ ಕೊಟ್ಟ ಸಚಿವರು ಮಕ್ಕಳ ಅನುಕೂಲವಾಗುವ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದರು.

  • ಮೋದಿ ಪರೀಕ್ಷಾ ಪೆ ಚರ್ಚಾಗೆ ಗದಗ ವಿದ್ಯಾರ್ಥಿ ಆಯ್ಕೆ

    ಮೋದಿ ಪರೀಕ್ಷಾ ಪೆ ಚರ್ಚಾಗೆ ಗದಗ ವಿದ್ಯಾರ್ಥಿ ಆಯ್ಕೆ

    ಗದಗ: ದೇಶದ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಡೆಸುವ ಪರೀಕ್ಷಾ ಪೆ ಚರ್ಚಾ ಸಂವಾದ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯ ವಿದ್ಯಾರ್ಥಿ ಆಯ್ಕೆ ಆಗಿದ್ದಾನೆ.

    ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಅಭಯ್ ರಂಗ್ರೇಜಿ ಆಯ್ಕೆಯಾಗಿದ್ದಾನೆ. ಈ ಮೂಲಕ ಗದಗ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ.

    ವಿದ್ಯಾರ್ಥಿ ಸಂವಾದಕ್ಕೆ ಆಯ್ಕೆಯಾಗಿದ್ದಕ್ಕೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ 9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ದೇಶಾದ್ಯಂತ ಆನ್ ಲೈನ್ ಮೂಲಕ ಇಂಗ್ಲಿಷ್ ನಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. 23 ರಂದು ಸಂವಾದ ನಡೆಯಲಿದ್ದು, ಇದಕ್ಕಾಗಿ ಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರಧಾನಿ ಮೋದಿಯೊಂದಿಗಿನ ಸಂವಾದ ಕಾರ್ಯಕ್ರಮಕ್ಕೆ ಕಳುಹಿಸಲಾಗುತ್ತಿದೆ.

    ಜಿಲ್ಲೆಯ ವಿದ್ಯಾರ್ಥಿ ‘ಯುವರ್ ಫ್ಯೂಚರ್ ದಿ ಫ್ರೆಂಡ್ಸ್ ಆನ್ ಯುವರ್ ಆಸ್ಪಿರೇಷನ್ಸ್’ ವಿಷಯ ಕುರಿತು ಆನ್ ಲೈನ್ ನಲ್ಲಿ 500 ಪದಗಳ ಪ್ರಬಂಧ ಮಂಡಿಸಿದ್ದ. ಗದಗ ಜಿಲ್ಲೆಯ ಆದರ್ಶ ಶಾಲೆಯ 68 ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಪ್ರಬಂಧ ಬರೆದಿದ್ದು, ದಾಖಲೆಯಾಗಿದೆ. ಮೋದಿ ಜೊತೆ ಸಂವಾದಕ್ಕೆ ಆಯ್ಕೆಯಾದ ವಿದ್ಯಾರ್ಥಿ ಸಾಧನೆಗೆ ಸ್ಥಳಿಯ ಶಾಸಕ ಕಳಕಪ್ಪ ಬಂಡಿ ಸಹ ಸಿಹಿ ತಿನಿಸಿ ಅಭಿನಂದಿಸಿದ್ದಾರೆ.

    ಅಭಯ್ ಈ ಕುರಿತು ಪ್ರತಿಕ್ರಿಯಿಸಿ, ಕಾರ್ಯಕ್ರಮದಲ್ಲಿ ಭಾಗವಹಿದ ಬಳಿಕ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಾತಾವರಣ ನಿರ್ಮಿಸಲು, ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಡಿಜಿಟಲ್ ಲೈಬ್ರರಿ ತೆರೆಯಬೇಕೆಂದು ಪ್ರಧಾನಿ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾನೆ.

  • ಪ್ರಧಾನಿ ಮೋದಿ ಜೊತೆಯ ಸಂವಾದಕ್ಕೆ ಗ್ರಾಮೀಣ ಪ್ರತಿಭೆ ವಿದ್ಯಾರ್ಥಿ ಆಯ್ಕೆ

    ಪ್ರಧಾನಿ ಮೋದಿ ಜೊತೆಯ ಸಂವಾದಕ್ಕೆ ಗ್ರಾಮೀಣ ಪ್ರತಿಭೆ ವಿದ್ಯಾರ್ಥಿ ಆಯ್ಕೆ

    ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಆತ್ಮಸ್ಥೆರ್ಯ ಹಾಗೂ ಪರೀಕ್ಷಾ ಭಯವನ್ನು ದೂರಗೊಳಿಸುವ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಗ್ರಾಮೀಣ ಪ್ರತಿಭೆ ವಿದ್ಯಾರ್ಥಿಯೊಬ್ಬ ಆಯ್ಕೆಯಾಗಿದ್ದಾನೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕುಗ್ರಾಮ ಭೈರನಾಯ್ಕನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿಯ ಯಶವಂತ್, ಈ ಸಂವಾದಕ್ಕೆ ಆಯ್ಕೆಯಾಗಿದ್ದಾನೆ. ಪರೀಕ್ಷೆಗಳ ಪ್ರಾಶಾಸ್ತ್ಯ ಮತ್ತು ಮಹತ್ವದ ಕುರಿತು ಯಶವಂತ ಬರೆದಿದ್ದ ಕನ್ನಡ ಪ್ರಬಂಧ ಪ್ರಧಾನಿ ನರೇಂದ್ರ ಮೋದಿಯವರ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗುವಂತೆ ಮಾಡಿದೆ.

    ಶಾಲೆಯ ವಿದ್ಯಾರ್ಥಿ ಕನ್ನಡದಲ್ಲಿ ಬರೆದಿದ್ದ ಪ್ರಬಂಧವನ್ನು ಶಾಲೆಯ ಮುಖ್ಯ ಶಿಕ್ಷಕರು ಇಂಗ್ಲಿಷ್‍ನಲ್ಲಿ ತರ್ಜುಮೆ ಮಾಡಿ ಕಳುಹಿಸಿದ್ದರು. ಒಟ್ಟಾರೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಯ ಪರಿಶ್ರಮದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಯೊಬ್ಬ ಪ್ರಧಾನಿಗಳ ಸಂವಾದಕ್ಕೆ ಆಯ್ಕೆಯಾಗಿದ್ದಾನೆ. ದೆಹಲಿಗೆ ತೆರಳಲು ಶಿಕ್ಷಕರು ಎಲ್ಲಾ ತಯಾರಿಯನ್ನು ನಡೆಸುತ್ತಿದ್ದಾರೆ.

    ಯಶವಂತ್ ಕಡು ಬಡತನದ ಕುಟುಂಬದ ವಿದ್ಯಾರ್ಥಿ. ತಂದೆ ಡ್ರೈವಿಂಗ್ ಕೆಲಸ ಮಾಡುತ್ತಿದ್ದರೆ, ತಾಯಿ ಮನೆ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಶಿಕ್ಷಕರ ಹಾಗೂ ಸಹಪಾಠಿಗಳ ಸಹಯೋಗದಿಂದ ಶಿಕ್ಷಣದ ಆಸಕ್ತಿಗೆ ಇಂದು ಒಂದು ದಾರಿ ಸಿಕ್ಕ ಆಗಿದೆ. ಈ ಖುಷಿಯಲ್ಲಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಯಶವಂತ್‍ಗೆ ಸನ್ಮಾನಿಸಿ ಗೌರವಿಸಿದರು.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಯಶವಂತ್ ಸಂತಸವನ್ನು ವ್ಯಕ್ತಪಡಿಸಿ, ಈ ಪರಿಶ್ರಮಕ್ಕೆ ನನ್ನ ತಂದೆ-ತಾಯಿ, ಪರಿಶ್ರಮ, ಮುಖ್ಯವಾಗಿ ನನ್ನ ಮೆಚ್ಚಿನ ಗುರುಗಳು, ಹೀಗಾಗಿ ಪ್ರಧಾನಿಯವರ ಕಾರ್ಯಕ್ರಮ ಹಾಗೂ ಅವರನ್ನು ನೇರವಾಗಿ ನೋಡುವ ಅವಕಾಶ ಸಿಕ್ಕಿದೆ. ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾನೆ.

  • ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಲಿಂಗಸುಗೂರಿನ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆ

    ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಲಿಂಗಸುಗೂರಿನ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆ

    ರಾಯಚೂರು: ಭಾರತ ಸರ್ಕಾರ ಹಾಗೂ ಸರ್ವ ಶಿಕ್ಷಣ ಕರ್ನಾಟಕ ಸಹಯೋಗದಲ್ಲಿ ನಡೆಯಲಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಜಿಲ್ಲೆಯ ಲಿಂಗಸುಗೂರಿನ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಮೋದಿ ಜೊತೆ ಪರೀಕ್ಷಾ ಪೇ ಚರ್ಚೆಗೆ ಚಿಕ್ಕಬಳ್ಳಾಪುರದ ವಿದ್ಯಾರ್ಥಿ ಆಯ್ಕೆ

    ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ಜನವರಿ 20 ರಂದು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ. ಲಿಂಗಸುಗೂರಿನ ಸರ್ಕಾರಿ ಪ್ರೌಢಶಾಲೆಯ ಗುಂಡಮ್ಮ ಹಾಗೂ ಜ್ಞಾನ ಸಂಜೀವಿನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಯಶಸ್ವಿನಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ಗಡಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

    ರಾಜ್ಯದಿಂದ ಒಟ್ಟು 42 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಜಿಲ್ಲೆಯಿಂದ ಈ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. ಪ್ರಧಾನಿ ಜೊತೆ ಮಾತನಾಡಲು ಅವಕಾಶ ಸಿಕ್ಕರೆ ರಾಜ್ಯದ ಪ್ರವಾಹದ ಪರಿಹಾರ ಬಗ್ಗೆ, ವಿದ್ಯಾರ್ಥಿನಿಯರ ರಕ್ಷಣೆ ಬಗ್ಗೆ ಮತ್ತು ಪರೀಕ್ಷಾ ಭಯದ ಬಗ್ಗೆ ಪ್ರಶ್ನೆ ಕೇಳುವುದಾಗಿ ವಿದ್ಯಾರ್ಥಿನಿಯರು ಹೇಳಿದ್ದಾರೆ.

  • ಪರೀಕ್ಷಾ ಪೇ ಚರ್ಚಾ ಗಡಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

    ಪರೀಕ್ಷಾ ಪೇ ಚರ್ಚಾ ಗಡಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

    ಚಾಮರಾಜನಗರ: ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಲು ಹಾಗೂ ಪರೀಕ್ಷಾ ಸಮಯದಲ್ಲಿ ಹೇಗೆಲ್ಲಾ ತಯಾರಿ ನಡೆಸಬೇಕು? ಯಾವ ರೀತಿ ಪರೀಕ್ಷೆಗೆ ಸಿದ್ಧರಾಗಬೇಕು ಎಂಬುದರ ಬಗ್ಗೆ ಸ್ಪತ: ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಆಯ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಜನವರಿ 20ರಂದು ನವದೆಹಲಿಯಲ್ಲಿ ನಡೆಯುಲಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಗಡಿ ಜಿಲ್ಲೆ ಚಾಮರಾಜನಗರದಿಂದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

    ಪರೀಕ್ಷೆ ಬಂತೆಂದೆರೆ ಸಾಕು ವಿದ್ಯಾರ್ಥಿಗಲ್ಲಿ ಆತಂಕ ಮನೆ ಮಾಡುತ್ತದೆ. ಪರೀಕ್ಷಾ ಭಯ ಇನ್ನಿಲ್ಲದಂತೆ ಅವರನ್ನು ಕಾಡುತ್ತದೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಸಮಪರ್ಕವಾಗಿ ಎದುರಿಸಲಾಗದೆ ಫೇಲ್ ಆಗುವುದು ಸಾಮಾನ್ಯವಾಗಿದೆ. ಕಡಿಮೆ ಅಂಕಗಳಿಸಿ ಖಿನ್ನತೆಗೆ ಗುರಿಯಾಗುತ್ತಾರೆ. ಇದೆನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಆಯ್ದ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೇ ಚರ್ಚಾ ಎಂಬ ಕಾರ್ಯಕ್ರಮ ನಡೆಸುತ್ತಿದ್ದು, ಈ ಬಾರಿ ಚಾಮರಾಜನಗರ ಜಿಲ್ಲೆಯಿಂದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

    ಸ್ವತ: ಮೋದಿಯವರೇ ನೇರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳ ಬಯಸುವ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಒಂದು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿರುವ ಆದರ್ಶ ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿನಿ ಅಪೂರ್ವ ಹಾಗೂ ಯಳಂದೂರಿನಲ್ಲಿರುವ ಆದರ್ಶ ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿ ಅರ್ಫತ್ ಪ್ರಬಂಧ ಬರೆದು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಸ್ವತ: ಮೋದಿ ಅವರೊಡನೆ ಸಂವಾದ ನಡೆಸಲು ಖುಷಿಯಾಗುತ್ತಿದೆ ಎನ್ನುವ ಯಳಂದೂರಿನ ಅರ್ಫತ್, ದೇಶದ ಎಲ್ಲಾ ರಾಜ್ಯಗಳಲ್ಲು ಪ್ರಾಥಮಿಕ ಹಂತದಿಂದಲೇ ಏಕರೂಪ ಶಿಕ್ಷಣ ಪದ್ದತಿ ಜಾರಿಗೆ ತರುವಂತೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡುವುದಾಗಿ ಹೇಳುತ್ತಾನೆ.

    ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದರೂ ಅನಾರೋಗ್ಯ ಕಾರಣದಿಂದ ಭಾಗವಹಿಸಲು ಹಿಂಜರಿದಿದ್ದ ಗುಂಡ್ಲುಪೇಟೆ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಅಪೂರ್ವ ಇದೀಗ ತನ್ನ ನಿರ್ಧಾರ ಬದಲಿಸಿದ್ದಾಳೆ. ಪ್ರಧಾನಿಯವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಹಾಗಾಗಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತೇನೆ ಎನ್ನುವ ಅಪೂರ್ವ ವಿದ್ಯಾರ್ಥಿಗಳಲ್ಲಿ ಕೃಷಿ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಹಾಗಾಗಿ ಶಿಕ್ಷಣದಲ್ಲಿ ಕೃಷಿಗೆ ಆದ್ಯತೆ ನೀಡುವಂತೆ ಪ್ರಧಾನಿ ಮೋದಿ ಅವರ ಗಮನ ಸೆಳೆಯುವುದಾಗಿ ಆಯ್ಕೆಯಾದ ಶಾಲಾ ವಿಧ್ಯಾರ್ಥಿ ಅಪೂರ್ವ ಮಾತು.

    ಜನವರಿ 20 ರಂದು ನವದೆಹಲಿಯಲ್ಲಿ ನಡೆಯುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಹಿಂದುಳಿದ ಚಾಮರಾಜನಗರ ಜಿಲ್ಲೆಯಿಂದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ.

  • ‘ಪರೀಕ್ಷಾ ಪೇ ಚರ್ಚಾ’- ತುಮಕೂರಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

    ‘ಪರೀಕ್ಷಾ ಪೇ ಚರ್ಚಾ’- ತುಮಕೂರಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

    – ಜ.20ರಂದು ಮೋದಿ ಜೊತೆ ಸಂವಾದ

    ತುಮಕೂರು: ಪ್ರಧಾನಿ ಮಂತ್ರಿಯ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮಕ್ಕೆ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

    ಶಿರಾ ತಾಲೂಕಿನ ಚಿಕ್ಕನಹಳ್ಳಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸಾಗರ್ ಹಾಗೂ ಚಂಗಾವರ ಪ್ರೌಢ ಶಾಲೆಯ ವಿದ್ಯಾರ್ಥಿನಿ ದೀಪಿಕಾ.ಆರ್ ಆಯ್ಕೆಯಾಗಿದ್ದು. ಪ್ರಧಾನಿ ಭೇಟಿ ಮಾಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

    ವಿದ್ಯಾರ್ಥಿ ಸಾಗರ್ ತಂದೆ ಆಟೋ ಚಾಲಕರಾಗಿದ್ದು, ವಿದ್ಯಾರ್ಥಿನಿ ದೀಪಿಕಾ ಅವರ ತಂದೆ ರೈತರಾಗಿದ್ದಾರೆ. ಇಬ್ಬರಿಗೂ ಜಿಲ್ಲೆಯಿಂದ ಅವಕಾಶ ಸಿಕ್ಕಿರುವುದರಿಂದ ಕುಟುಂಬದವರಲ್ಲಿ ಸಂತಸ ಮನೆ ಮಾಡಿದೆ. ಜ.19 ರಂದು ಇಬ್ಬರು ವಿದ್ಯಾರ್ಥಿಗಳು ದೆಹಲಿಗೆ ಹಾರಲಿದ್ದು, ಜ.20 ರಂದು ನಡೆಯುವ ಪ್ರಧಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

    ವಿದ್ಯಾರ್ಥಿ ಸಾಗರ್ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳಿಗೆ ಮೊಬೈಲ್ ಬಳಸದಂತೆ ಕರೆ ನೀಡಬೇಕೆಂದು ಪ್ರಶ್ನೆ ಕೇಳಲು ಮುಂದಾಗಿದ್ದಾರೆ. ವಿದ್ಯಾರ್ಥಿನಿ ದೀಪಿಕಾ ಗ್ರಾಮೀಣ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಪ್ರಧಾನಿಯವರಲ್ಲಿ ಮನವಿ ಮಾಡಿಕೊಳ್ಳಲು ತಯಾರಿಸಿ ನಡೆಸಿದ್ದಾರೆ.

    ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೆರವಾಗಿ ಪ್ರಧಾನಿ ನರೇಂದ್ರ ಮೋದಿರೊಂದಿಗೆ ಚರ್ಚೆ ನಡೆಸಲು ಅವಕಾಶ ನೀಡಲಾಗುತ್ತದೆ. ಆಯ್ಕೆಯಾದ ಮಕ್ಕಳಿಗೆ ಪ್ರಧಾನಿಗಳು ಕೆಲ ಸಲಹೆಗಳನ್ನು ನೀಡುತ್ತಾರೆ. 10ನೇ ತರಗತಿಯ ವಿದ್ಯಾರ್ಥಿಗಳಾಗಿರುವುದರಿಂಧ ಪರೀಕ್ಷಾ ಸಮಯದಲ್ಲಿ ಹೇಗೆಲ್ಲಾ ತಯಾರಿ ನಡೆಸಬೇಕು. ಯಾವ ರೀತಿ ಪರೀಕ್ಷೆಗೆ ಸಿದ್ಧರಾಗಬೇಕು ಎಂಬ ಸಲಹೆಗಳನ್ನು ನೀಡಲಾಗುತ್ತದೆ.

    ಪ್ರಧಾನಿ ಮೋದಿ ಅವರ ಸಂವಾದ ಕಾರ್ಯಕ್ಕೆ ಆಯ್ಕೆಯಾಗುತ್ತೇನೆ ಎಂದು ಸಾಗರ್ ನಿರೀಕ್ಷೆಯನ್ನೇ ಮಾಡಿರಲಿಲ್ಲ. ನಮ್ಮ ಶಾಲೆಯಲ್ಲಿ 10 ವಿದ್ಯಾರ್ಥಿಗಳ ಪಟ್ಟಿ ಮಾಡಿ ಕಳಿಸಿದ್ದರು. ಅದರಲ್ಲಿ ನಾನು ಆಯ್ಕೆ ಆಗಿರುವುದು ತುಂಬಾ ಸಂತೋಷ ತಂದಿದ್ದು, ಎಕ್ಸೈಟ್ ಮೆಂಟ್ ಹೆಚ್ಚಾಗಿದೆ ಎಂದು ಸಾಗರ್ ಹೇಳಿದ್ದಾರೆ. ನಾನು ಪ್ರಧಾನ ಮಂತ್ರಿಗಳ ಎದುರು ಮಕ್ಕಳು ಮೊಬೈಲ್ ಬಳಕೆ ಮಾಡುವುದು ಎಷ್ಟು ಸರಿ? ಮಕ್ಕಳ ಕೈಗೆ ಮೊಬೈಲ್ ನೀಡದಂತೆ ನೋಡಿಕೊಳ್ಳುವುದು ಹೇಗೆ? ಹಾಗೂ ಗ್ರಾಮೀಣ ಪ್ರದೇಶದ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ.

    ವಿದ್ಯಾರ್ಥಿನಿ ದೀಪಿಕಾ ಕೂಡ ಆಯ್ಕೆ ಕುರಿತು ಖುಷಿ ಹಂಚಿಕೊಂಡಿದ್ದು, ಪ್ರಧಾನಿ ಭೇಟಿಗೆ ಅವಕಾಶ ಸಿಕ್ಕಿರುವುದು ಪುಣ್ಯ ಎಂದು ದೀಪಾ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ‘ಬೇಟಿ ಪಡಾವೋ ಬೇಟಿ ಬಚಾವೋ’ ಕಾರ್ಯಕ್ರಮದಂತೆ ಹೆಣ್ಣು ಮಕ್ಕಳಿಗಾಗಿ ಮತ್ತಷ್ಟು ಕಾರ್ಯಕ್ರಮ ರೂಪಿಸುವಂತೆ ಪ್ರಧಾನಿಗಳ ಬಳಿ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.