Tag: Papa Pandu

  • ಶಿಕ್ಷಕನಾಗಬೇಕೆಂದು ಹೆದರಿ ನಟನಾದೆ: ಕಿರುತೆರೆ ನಟ ಜಹಂಗೀರ್

    ಶಿಕ್ಷಕನಾಗಬೇಕೆಂದು ಹೆದರಿ ನಟನಾದೆ: ಕಿರುತೆರೆ ನಟ ಜಹಂಗೀರ್

    ಪಾಪಾ ಪಾಂಡು, ಪಾಂಡುರಂಗ ವಿಠಲ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಅತ್ಯಲ್ಪ ಕಾಲದಲ್ಲೇ ಮಿಂಚಿ ತೆರೆಮರೆಗೆ ಸರಿದ ಹಾಸ್ಯನಟ ಜಹಂಗೀರ್ ಈಗೇನು ಮಾಡುತ್ತಿದ್ದಾರೆ. ಅವರ ಜರ್ನಿ ಹೇಗಿತ್ತು ಎನ್ನುವುದರ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದಾರೆ. ಬನ್ನಿ ಅವರ ಮಾತುಗಳಲ್ಲೇ ಅವರ ಬಗ್ಗೆ ತಿಳಿದುಕೊಳ್ಳೋಣ.

    • ನಿಮ್ಮ ಹಿನ್ನೆಲೆ ಬಗ್ಗೆ ಹೇಳಿ?
    ನಾನು ಮೂಲತಃ ಹೊಸಪೇಟೆಯ ಒಂದು ಪುಟ್ಟ ಹಳ್ಳಿಯವನು. ನನ್ನ ತಂದೆ ವೃತ್ತಿಯಲ್ಲಿ ಶಿಕ್ಷಕರು. ನಾವು ನಾಲ್ಕು ಜನ ಮಕ್ಕಳು. ತಂದೆ ಶಿಕ್ಷಕರಾಗಿದ್ದರಿಂದ ವಿದ್ಯಾಭ್ಯಾಸದಲ್ಲಿ ನಾವು ಚುರುಕಾಗಿದ್ದೇವು. ನನ್ನ ಅಣ್ಣ ಅಕ್ಕ ಇಬ್ಬರೂ ಓದಿ ಶಿಕ್ಷಕ ವೃತ್ತಿ ಸೇರಿಕೊಂಡರು. ಆದ್ರೆ ನನಗೆ ಶಿಕ್ಷಕ ವೃತ್ತಿ ಇಷ್ಟವಿರಲಿಲ್ಲ. ನಾನೂ ಚೆನ್ನಾಗಿ ಓದಿದರೆ ನನ್ನನ್ನು ಶಿಕ್ಷಕನಾಗಿ ಮಾಡುತ್ತಾರೆ ಎಂದು ಹೆದರಿ ಪಿಯುಸಿಯಲ್ಲಿ ಬೇಕಂತಲೇ ಫೇಲಾದೆ. ಬೇರೇನಾದರೂ ಮಾಡಬೇಕು ಎಂದು ಆಲೋಚಿಸುವ ಹೊತ್ತಲ್ಲಿ ನಾಟಕಗಳಲ್ಲಿ ಅಭಿನಯಿಸಬೇಕು ಎಂದು ಮನಸ್ಸಾಯಿತು. ಪಿಯುಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಅತ್ತ ಗಮನ ಹರಿಸಿದೆ.

    • ನೀನಾಸಂ ಹೆಗ್ಗೋಡು ನಿಮಗೆ ಸ್ಫೂರ್ತಿಯಾದದ್ದು ಹೇಗೆ?
    ಅದು 1995-96 ಸಮಯ. ಒಂದು ವರ್ಷದ ನಟನೆಯ ಡಿಪ್ಲೋಮ ತರಗತಿ ಸೇರಲು ನೀನಾಸಂ ಹೋದವನು ನಾನು. ಆದರೆ ಒಂದು ದಶಕದಲ್ಲೇ ಉಳಿದು ಬಿಡುತ್ತೇನೆಂದು ಎಂದಿಗೂ ಅಂದುಕೊಂಡಿರಲಿಲ್ಲ. ಒಂದು ವರ್ಷದ ನಟನೆಯ ಕೋರ್ಸ್ ಮುಗಿದ ಬಳಿಕ ಅಲ್ಲಿಯೇ ರೆಪೆಟ್ರಿಯಲ್ಲಿ ನಾಟಕಕಾರನಾಗಿ ಸೇರಿಕೊಂಡೆ. ಅಷ್ಟರ ಮಟ್ಟಿಗೆ ಅಲ್ಲಿನ ವಾತಾವರಣ ನನ್ನ ಮೇಲೆ ಪ್ರಭಾವ ಬೀರಿತ್ತು. ಸುಬ್ಬಣ್ಣ ಅವರ ಆಲೋಚನೆಗಳು, ಒಡನಾಟ, ಅವರ ವ್ಯಕ್ತಿತ್ವ ತುಂಬಾ ಆಕರ್ಷಿಸಿತು. ನಟನೆಯಲ್ಲಿ ನನಗೆ ಮದ ಮುದ ನೀಡಿದ್ದು ನೀನಾಸಂ ಎಂದು ನಾನು ಯಾವಾಗಲೂ ಹೇಳಿಕೊಳ್ಳುತ್ತೇನೆ, ಅಷ್ಟು ಥ್ರಿಲ್ ಕೊಟ್ಟಿದೆ ಅಲ್ಲಿನ ದಿನಗಳು. ಒಬ್ಬ ರಂಗಭೂಮಿ ಕಲಾವಿದನಾಗಿ ತೆರೆದುಕೊಳ್ಳಲು ನೀನಾಸಂ ಅಷ್ಟು ಕೊಡುಗೆ ನೀಡಿದೆ ನನಗೆ. ಇದನ್ನೂ ಓದಿ: ಅಣ್ಣಾವ್ರ ಕೈ ಸ್ಪರ್ಶಿಸಿದ್ದೇ ನನ್ನ ಭಾಗ್ಯ: ನಟ ಗಣೇಶ್ ರಾವ್ ಕೇಸರ್ಕರ್

    • ನಿಮ್ಮ ಜೀವನದಲ್ಲಿ ಡಾ.ಅಂಬಣ್ಣ ಅವರ ಪಾತ್ರ ಬಹಳ ದೊಡ್ಡದು ಅವರ ಬಗ್ಗೆ ಹೇಳಿ.
    ನಾಟಕದಲ್ಲಿ ಆಸಕ್ತಿ ಮನದಲ್ಲಿ ಮೊಳಕೆಯೊಡೆದ ಮೇಲೆ ಮುಂದೇನು ಎತ್ತ ಎಂದು ಯೋಚಿಸುತ್ತಿದ್ದೆ. ಆಗ ನೆನಪಿಗೆ ಬಂದವರೇ ನಮ್ಮ ಊರಿನ ವೈದ್ಯರಾದ ಡಾ.ಅಂಬಣ್ಣ. ಅವರಿಗೆ ರಂಗಭೂಮಿ, ನಟನೆ ಇದರಲ್ಲೆಲ್ಲಾ ಆಸಕ್ತಿ ಇತ್ತು ಎನ್ನುವುದು ನನಗೆ ತಿಳಿದಿತ್ತು. ನಾನು ಸೀದಾ ಅವರ ಬಳಿ ಹೋದೆ. ನಾಟಕಗಳಲ್ಲಿ ಪಾತ್ರ ಮಾಡಲು ಆಸಕ್ತಿ ಇದೆ. ಆದ್ರೆ ಮನೆಯಲ್ಲಿ ಇದಕ್ಕೆ ಒಪ್ಪಿಗೆಯಿಲ್ಲ ಎಂದು ನನ್ನ ಸಮಸ್ಯೆ ಹೇಳಿಕೊಂಡೆ. ಅವರು ನೀನಾಸಂ ಕಡೆ ದಾರಿ ತೋರಿಸಿದ್ರು. ಸ್ವಲ್ಪ ದಿನದ ಮಟ್ಟಿಗೆ ಮನೆ ಬಿಟ್ಟು ಹೋಗು ಎಂದೂ ಹೇಳಿದ್ರು. ನನ್ನ ಬಳಿ ದುಡ್ಡು ಇರಲಿಲ್ಲ. ಮನೆಯಲ್ಲೂ ವಿರೋಧ ಇದ್ದಿದ್ದರಿಂದ ಹಣ ಸಿಗುತ್ತೆ ಎಂಬ ಗ್ಯಾರಂಟಿ ಇರಲಿಲ್ಲ. ಆಗ ಅವರೇ ಹಣ ಕೊಟ್ಟು ನೀನಾಸಂಗೆ ನಟನೆಯಲ್ಲಿ ಡಿಪ್ಲೋಮ ಮಾಡಲು ಕಳಿಸಿದ್ರು. ಸುಮಾರು ಎರಡು ವರ್ಷ ಮನೆ ಬಿಟ್ಟು ದೂರ ಇದ್ದಿದ್ದರಿಂದ ಹಣಕಾಸಿನ ಸಹಾಯವನ್ನು ಮಾಡಿದ್ರು. ನಾನು ಕಲಾವಿದನಾಗಲು ರೆಕ್ಕೆ ಪುಕ್ಕ ಕಟ್ಟಿ ಹಾರಲು ಬಿಟ್ಟವರು ಡಾ. ಅಂಬಣ್ಣ ಎಂದು ಹೇಳಿದ್ರೆ ತಪ್ಪಾಗೋದಿಲ್ಲ.

    • ಅಮೇರಿಕಾದ ಬ್ರೆಡ್ ಅಂಡ್ ಪೊಪೆಟ್ ರಂಗಭೂಮಿಯಲ್ಲೂ ನೀವು ಗುರುತಿಸಿಕೊಂಡ್ರಿ. ಹೇಗೆ ಸಾಧ್ಯಸಾದ್ಯವಾಯಿತು ಇದು?
    ನೀನಾಸಂನಲ್ಲಿದ್ದಾಗ ಅಮೆರಿಕಾದ ವರ್ಮೌಂಟ್‍ನ ಖ್ಯಾತ ರಂಗಕರ್ಮಿ ಹಾಗೂ ಬ್ರೆಡ್ ಅಂಡ್ ಪೊಪೆಟ್ ರಂಗಭೂಮಿ ಸಂಸ್ಥಾಪಕ ಪೀಟರ್ ಶ್ಯೂಮನ್ ನೀನಾಸಂಗೆ ಭೇಟಿ ನೀಡಿದ್ರು. ಅವರ ಯೋಚನೆ ಆಲೋಚನೆ, ರಂಗಭೂಮಿ ಶೈಲಿ ಬಹಳ ಭಿನ್ನ. ನೀನಾಸಂಗೆ ಅವರು ಭೇಟಿ ನೀಡಿದಾಗ ಅವರ ಪ್ರಭಾವಕ್ಕೆ ಒಳಗಾಗಿ ಅವರಿಗೆ ಆತ್ಮೀಯನಾದೆ ಅವರು ನನ್ನನ್ನು ಅಮೆರಿಕಾಕ್ಕೆ ಕರೆದುಕೊಂಡು ಹೋದ್ರು. ಅಲ್ಲಿ ಸುಮಾರು ಎರಡು ತಿಂಗಳ ಕಾಲ ಬ್ರೆಡ್ ಅಂಡ್ ಪೊಪೆಟ್‍ನಲ್ಲಿ ಕೆಲಸ ಮಾಡಿದೆ. ಈ ಹಂತದಲ್ಲೇ ರಂಗಭೂಮಿ ಕಡೆಗಿನ ನನ್ನ ನೋಟ, ಪರಿಕಲ್ಪನೆ ಬದಲಾಯಿತು. ನನ್ನ ವೈಯಕ್ತಿಕ ಬೆಳವಣಿಗೆಗೂ ಇದು ಸಹಕಾರಿಯಾಯ್ತು. ಇದನ್ನೂ ಓದಿ: ಪರಿಶ್ರಮ ಪ್ರಯತ್ನದ ಜೊತೆ ತಾಳ್ಮೆ ಇರಲಿ: ನಟಿ ದೀಪಾ ಭಾಸ್ಕರ್

    • ಮನೆಯವರ ವಿರೋಧದ ನಡುವೆಯೂ ಕಲಾವಿದನಾಗಿ ಬೆಳೆದಿದ್ದು ಹೇಗೆ?
    ನಾನು ನಾಟಕ ರಂಗಭೂಮಿಯಲ್ಲಿ ತೊಡಗಿಸಿಕೊಂಡಾಗಲೇ ಮನೆಯಲ್ಲಿ ನನಗೆ ವಿರೋಧ ವ್ಯಕ್ತಪಡಿಸಿದ್ರು. ನಟನೆ ಕಡೆ ನಿನ್ನ ಗಮನವಿದ್ರೆ ಮನೆಬಿಟ್ಟು ಹೋಗು ಎಂದು ತಂದೆ ಖಡಾಖಂಡಿತವಾಗಿ ಹೇಳಿದ್ರು. ನನಗೆ ಶಿಕ್ಷಕನಾಗಲು ಇಷ್ಟವಿಲ್ಲದಿದ್ದರಿಂದ ನಾನು ಮನೆಬಿಟ್ಟು ಹೋಗಲು ನಿರ್ಧರಿಸಿದೆ. ಎರಡು ವರ್ಷಗಳ ಕಾಲ ಮನೆಯಿಂದ ದೂರವಿದ್ದೆ. ಯಾವಾಗ ಪಾಪಾ ಪಾಂಡು ಮೂಲಕ ಕಿರುತೆರೆಯಲ್ಲಿ ಅವಕಾಶ ಸಿಕ್ಕಿತೋ ಆಗ ನನ್ನ ಮನೆಯವರು ನನ್ನ ಬಗ್ಗೆ ಖುಷಿ ಪಟ್ರು. ಮಗ ದಾರಿ ತಪ್ಪಿಲ್ಲ ಏನೋ ಸಾಧಿಸಿದ್ದಾನೆ ಎಂದು ಹೆಮ್ಮೆ ಪಟ್ರು.

    • ಕಿರಿತೆರೆಯಲ್ಲಿ ಅವಕಾಶ ಸಿಕ್ಕಿದ್ದು ಹೇಗೆ?
    ನಟನೆಯನ್ನು ಪ್ರೊಫೆಶನ್ ಆಗಿ ತಗೋತೀನಿ ಎಂದು ಯಾವತ್ತೂ ಆಲೋಚನೆ ಮಾಡಿರಲಿಲ್ಲ. ರಂಗಭೂಮಿಯಲ್ಲೇ ಮುಂದುವರಿಯಬೇಕು ಊರೂರು ಅಲೆಯಬೇಕೆಂದು ಅಲ್ಲಿಯೇ ಬದುಕು ಸಾಗಿಸುತ್ತಿದ್ದೆ. ಈ ಸಂದರ್ಭದಲ್ಲಿ ಸಿಹಿಕಹಿ ಚಂದ್ರು ಅವರಿಗೆ ನನ್ನ ಬಗ್ಗೆ ತಿಳಿದು ನನ್ನನು ಸಂಪರ್ಕಿಸಿ ಪಾಪಾ ಪಾಂಡು ಕಾಮಿಡಿ ಸೀರಿಯಲ್ ಬಗ್ಗೆ ತಿಳಿಸಿದ್ರು. ಅಷ್ಟೊತ್ತಿಗಾಗಲೇ ಪಾಪಾ ಪಾಂಡು 500 ಎಪಿಸೋಡ್ ಪೂರ್ಣಗೊಳಿಸಿತ್ತು. ಮುಂದುವರಿದ ಭಾಗದಲ್ಲಿ ಪಾಂಡುವಿನ ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತು. ಅವರ ತಂಡದಲ್ಲಿ ನಟನೆಗೆ ಮುಕ್ತ ಅವಕಾಶವಿತ್ತು. ಇದು ನನಗೆ ಬಹಳ ಇಷ್ಟವಾಯ್ತು ಮುಂದೆ ಅವರ ತಂಡದಲ್ಲೇ ಹಲವು ವರ್ಷಗಳ ಕಾಲ ಗುರುತಿಸಿಕೊಂಡೆ. ಪಾಪಾ ಪಾಂಡು, ಪಾಂಡುರಂಗ ವಿಠಲ, ಪಾತು ಸಾತು ಹೀಗೆ ಬ್ಯಾಕ್ ಟು ಬ್ಯಾಕ್ ಕಾಮಿಡಿ ಸೀರಿಯಲ್‍ನಲ್ಲಿ ನಟಿಸಿದೆ. ಇದನ್ನೂ ಓದಿ: ನನ್ನ ಕಡೆ ಎಸೆದ ಕಲ್ಲುಗಳನ್ನು ಮೆಟ್ಟಿಲು ಮಾಡಿಕೊಂಡು ಬೆಳೆದೆ- ಪಾಪಾ ಪಾಂಡು ಖ್ಯಾತಿಯ ಚಿದಾನಂದ್

    • ಇದ್ದಕಿದ್ದಂತೆ ಕಿರುತೆರೆಯಿಂದ ಮಾಯವಾಗಿ ಬಿಟ್ರಲ್ಲ ನೀವು?
    ಮುರ್ನಾಲ್ಕು ಧಾರಾವಾಹಿಗಳಲ್ಲಿ ನಟಿಸಿದ ನಂತರ ನನಗೆ ಎಕಾತನತೆ ಕಾಡ ತೊಡಗಿತು. ಯಾಕೋ ಇದೆಲ್ಲ ಸಾಕು ಎಂದೆನಿಸಿ ಊರ ಕಡೆ ಬಂದು ಬಿಟ್ಟೆ. ವೈವಾಹಿಕ ಜೀವನಕ್ಕೂ ಕಾಲಿಟ್ಟೆ. ವ್ಯವಸಾಯದಲ್ಲಿ ತೊಡಗಿಕೊಳ್ಳಬೇಕು ಎಂದು ನಿರ್ಧರಿಸಿದೆ. ಆದರೆ ಆ ಕನಸು ಈಗಲೂ ನನಸಾಗಿಲ್ಲ. ನಟನೆಯಿಂದ ದೂರ ಉಳಿದು ಆರೇಳು ವರ್ಷಗಳೇ ಆಯಿತು. ಹಾಗಂತ ಸಂಪೂರ್ಣವಾಗಿಯೂ ದೂರವಾಗಿಲ್ಲ. ಆಗೊಂದು ಈಗೊಂದು ಪಾತ್ರ ಮಾಡುತ್ತೇನೆ. ಇಷ್ಟು ವರ್ಷದಲ್ಲಿ ಕಳೆದ ವರ್ಷ ಬಿಡುಗಡೆಯಾದ ಯಜಮಾನ ಹಾಗೂ ಮಂಗಳವಾರ ರಜಾ ದಿನ ಸಿನಿಮಾದಲ್ಲಿ ನಟಿಸಿದ್ದೇನೆ.

    • ಈಗೇನು ಮಾಡುತ್ತಿದ್ದೀರಾ, ಭವಿಷ್ಯದ ಆಲೋಚನೆಗಳೇನು?
    ಪ್ರಸ್ತುತ ಹುಬ್ಬಳ್ಳಿಯಲ್ಲಿ ನೆಲೆಸಿದ್ದೇನೆ. ಹುಬ್ಬಳ್ಳಿಯ ಹಳ್ಳಿಯೊಂದರಲ್ಲಿ ನನ್ನ ಪತ್ನಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ನಾನು ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿದ್ದೇನೆ. ಮುಂದೇನು ಮಾಡಬೇಕು ಎನ್ನುವುದರ ಬಗ್ಗೆ ಯಾವುದೇ ಆಲೋಚನೆ ಇಲ್ಲ. ನಾನು ಕಿರುತೆರೆ ಹಿರಿತೆರೆಯನ್ನು ತುಂಬಾ ಹತ್ತಿರದಿಂದ ಬಲ್ಲೆ. ನಟನೆ ನಂಬಿಕೊಂಡು ಭವಿಷ್ಯದ ಯೋಜನೆ ಹಾಕಿಕೊಳ್ಳಲು ಸಾಧ್ಯವಿಲ್ಲ. ಅಂದುಕೊಂಡಿದ್ದನ್ನು ಸಾಧಿಸೋದು ಸುಲಭದ ಮಾತಲ್ಲ. ಜೀವನ ಹೇಗೆ ದಾರಿ ತೋರಿಸುತ್ತೋ ಹಾಗೆ ಹೋಗುತ್ತಿದ್ದೇನೆ. ಇದನ್ನೂ ಓದಿ: ಹಂಡ್ರೆಡ್ ಪರ್ಸೆಂಟ್ ಹ್ಯಾಪಿ ನಾನು- ಖ್ಯಾತ ಕಿರುತೆರೆ ನಟ, ನಿರ್ದೇಶಕ ರವಿಕಿರಣ್

  • ನನ್ನ ಕಡೆ ಎಸೆದ ಕಲ್ಲುಗಳನ್ನು ಮೆಟ್ಟಿಲು ಮಾಡಿಕೊಂಡು ಬೆಳೆದೆ- ಪಾಪಾ ಪಾಂಡು ಖ್ಯಾತಿಯ ಚಿದಾನಂದ್

    ನನ್ನ ಕಡೆ ಎಸೆದ ಕಲ್ಲುಗಳನ್ನು ಮೆಟ್ಟಿಲು ಮಾಡಿಕೊಂಡು ಬೆಳೆದೆ- ಪಾಪಾ ಪಾಂಡು ಖ್ಯಾತಿಯ ಚಿದಾನಂದ್

    ಪಾಪಾ ಪಾಂಡು ಸೂಪರ್ ಹಿಟ್ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ನಟ ಚಿದಾನಂದ್. ಹಿರಿತೆರೆ ಕಿರುತೆರೆಯಲ್ಲಿ ಸಕ್ರಿಯರಾಗಿ ಮನರಂಜನೆ ನೀಡುತ್ತಿರುವ ಚಿದಾನಂದ್ ತಮ್ಮ 30 ವರ್ಷದ ಕಲಾ ಜೀವನದ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದಾರೆ.

    • ಕಲೆಯನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ?
    ನಾನು ಮೂಲತಃ ದಾವಣಗೆರೆಯವನು. ಎಸ್‍ಎಸ್‍ಎಲ್‍ಸಿ ನಂತರ ಕಾಲೇಜು ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಬಂದೆ. ಆದರೆ ಇದೆಲ್ಲದ್ರ ಮಧ್ಯೆ ಏನಾದರೂ ಮಾಡಬೇಕು ಏನಾದರೂ ಸಾಧಿಸಬೇಕು ಎಂದು ಮನಸು ತುಡಿಯುತ್ತಿತ್ತು. ಪತ್ರಿಕೆಗಳಲ್ಲಿ ಸಿನಿಮಾ ಸುದ್ದಿ ನೋಡುತ್ತಿದ್ದಾಗ ನಾನು ಕಲಾವಿದನಾಗಬೇಕು ನಾಟಕಗಳಲ್ಲಿ ನಟಿಸಬೇಕು ಎಂದು ಅನ್ನಿಸುತ್ತಿತ್ತು. ಹೇಗೂ ಬೆಂಗಳೂರಿಗೆ ಬಂದಿದ್ದೀನಿ ನಟನೆಯನ್ನು ಕಲಿಯೋಣ ಎಂದು ನಿರ್ಧಾರ ಮಾಡಿದೆ. ಅಲ್ಲಿವರೆಗೂ ನಟನೆ ಬಗ್ಗೆ ಗಂಧ ಗಾಳಿಯೂ ತಿಳಿದಿರಲಿಲ್ಲ. ಅಲ್ಲಿಂದ ಓದಿಗೆ ಫುಲ್ ಸ್ಟಾಪ್ ಇಟ್ಟು ನಟನೆ ಕಡೆ ವಾಲಿದೆ.

    • ಬೆಂಗಳೂರಿನ ಆರಂಭಿಕ ದಿನಗಳ ಬಗ್ಗೆ ಹೇಳಿ?
    ಕಲಾವಿದನಾಗಬೇಕು ಎಂದು ತೀರ್ಮಾನಿಸಿದ ಮೇಲೆ ನಟನಾ ತರಗತಿ ಹುಡುಕಿಕೊಂಡು ಬೆಂಗಳೂರಿನಲ್ಲಿ ಅಲೆದಾಟ ಶುರು ಮಾಡಿದೆ. ಆದ್ರೆ ನನ್ನಿಂದ ಹೆಚ್ಚಿನ ಫೀಸ್ ಕಟ್ಟುವ ಶಕ್ತಿ ಇರಲಿಲ್ಲ. ಮೊದಲು ಉದಯ ಕುಮಾರ್ ಅವರ ಕಲಾನಿಕೇತನಕ್ಕೆ ಹೋದೆ ಅಲ್ಲಿನ ಫೀಸ್ ಕಟ್ಟುವ ಸಾಮರ್ಥ್ಯ ನನಗಿರಲಿಲ್ಲ ವಾಪಾಸ್ಸು ಬಂದೆ. ಒಮ್ಮೆ ಕನ್ನಡ ಪ್ರಭ ಪತ್ರಿಕೆಯಲ್ಲಿ ಅಭಿನಯ ತರಂಗದ ಬಗ್ಗೆ ಜಾಹೀರಾತೊಂದನ್ನ ನೋಡಿ ಅಲ್ಲಿ ವಿಚಾರಿಸಿದೆ. ನನ್ನಲ್ಲಿದ್ದ ಹಣಕ್ಕೆ ಫೀಸ್ ಹೊಂದಾಣಿಕೆಯಾಗುತ್ತಿತ್ತು, ಅಲ್ಲಿಯೇ ಸೇರಿಕೊಳ್ಳಲು ನಿರ್ಧರಿಸಿದೆ. ಅಭಿನಯ ತರಂಗದಲ್ಲಿ 1989-1990ರ ಬ್ಯಾಚ್ ನನ್ನದು.

    • ನೀವು ನಿಮ್ಮ ಸ್ನೇಹಿತರೊಬ್ಬರು ಸೇರಿ ಕಟ್ಟಿದ ಮೂಕಿ ಟಾಕಿ ಸಂಸ್ಥೆ ಬಗ್ಗೆ ಹೇಳಿ.
    ಅಭಿನಯ ತರಂಗದಲ್ಲಿ ನಟನೆಯ ಕೋರ್ಸ್ ಮುಗಿದ ನಂತರ ಮುಂದೇನು ಎಂದು ತೋಚಲಿಲ್ಲ. ಆಗ ನಾನು ನನ್ನ ಸ್ನೇಹಿತರೊಬ್ಬರು ಸೇರಿ ಮೂಕಿ ಟಾಕಿ ಎಂಬ ನಾಟಕ ಕಂಪನಿ ಕಟ್ಟಿದ್ವಿ. ಮೂಕಿ ಟಾಕಿ ಮೂಲಕ ಬೀದಿ ನಾಟಕ ಮಾಡಲು ನಿರ್ಧರಿಸಿ ಪ್ರಸ್ತುತ ಸನ್ನೀವೇಶಗಳನ್ನಿಟ್ಟುಕೊಂಡು ಕಥೆ ಬರೆದು ನಿರ್ದೇಶನ ಮಾಡಿ ಬೀದಿ ನಾಟಕ ಮಾಡಲು ಆರಂಭಿಸಿದೆವು. 1992ರಲ್ಲೇ ಕರ್ನಾಟಕದ ಕೆಲ ಭಾಗಗಳಲ್ಲಿ 100ಕ್ಕೂ ಹೆಚ್ಚು ಬೀದಿ ನಾಟಕ ಪ್ರದರ್ಶನಗಳನ್ನು ನಾವಿಬ್ಬರೇ ಮಾಡಿದ್ವಿ.

    • ಮೂಕಿ ಟಾಕಿ ರಾಷ್ಟ್ರ ಮಟ್ಟದಲ್ಲಿ ತಂದು ಕೊಟ್ಟ ಖ್ಯಾತಿ ಬಗ್ಗೆ ಹೇಗೆ?
    ಕ್ಷೇಮ ಸಮಾಚಾರ ಎಂಬ ಪತ್ರಿಕೆಯಲ್ಲಿ ನಮ್ಮ ಬೀದಿ ನಾಟಕದ ಬಗ್ಗೆ ಒಂದು ಚಿಕ್ಕ ಆರ್ಟಿಕಲ್ ಬಂದಿತ್ತು. ಆ ರ್ಟಿಕಲ್ ನಮ್ಮ ಆರಂಭದ ಕಲೆಯ ಬದುಕಿಕೆ ತುಂಬಾ ಸಹಕಾರಿಯಾಯ್ತು. ಇಬ್ಬರೇ ನೂರಕ್ಕೂ ಅಧಿಕ ಶೋಗಳನ್ನು ನೀಡಿದ್ದಾರೆ ಎಂದು ಲೇಖನ ಪ್ರಕಟವಾದ ನಂತರ ಏಶಿಯನ್ ಏಜ್ ಎಂಬ ಪತ್ರಿಕೆ ನಮ್ಮನ್ನು ಸಂಪರ್ಕಿಸಿ ನಮ್ಮಿಬ್ಬರ ಬಗ್ಗೆ ಹಾಗೂ ನಮ್ಮ ಬೀದಿ ನಾಟಕದ ಬಗ್ಗೆ ದೊಡ್ಡ ಲೇಖನವೊಂದನ್ನ ಪ್ರಕಟಿಸಿತು. ಅದಾದ ನಂತರ 1992ರಲ್ಲಿದ್ದ ಸ್ಟಾರ್ ಎಂಬ ಟಿವಿ ವಾಹಿನಿಯವರು ನಮ್ಮ ನಾಟಕದ ಬಗ್ಗೆ ಎರಡು ನಿಮಿಷದ ಸ್ಟೋರಿ ಮಾಡಿ ಟಿವಿಯಲ್ಲಿ ಪ್ರಸಾರ ಮಾಡಿದ್ರು. ಇದ್ರಿಂದ ನ್ಯಾಷನಲ್ ಲೆವೆಲ್‍ನಲ್ಲಿ ನಮಗೆ ಪ್ರಶಂಸೆ ಸಿಕ್ಕಿತು. ಇದು ನಮ್ಮಲ್ಲಿ ಇನ್ನೇನಾದ್ರು ಮಾಡಬೇಕು ಎಂಬ ಉತ್ಸಾಹ ದುಪ್ಪಟ್ಟು ಮಾಡಿತು.

    • ಟಿವಿ ಸೀರಿಯಲ್‍ನಲ್ಲಿ ಅವಕಾಶ ಒಲಿದು ಬಂದಿದ್ದು ಹೇಗೆ?
    ಮೂಕಿ ಟಾಕಿ ಮೂಲಕ ದೊಡ್ಡ ಮಟ್ಟದ ಹೆಸರು ನಮಗೆ ಸಿಕ್ಕಿದರೂ ಕೂಡ ಸ್ಟೇಜ್ ನಾಟಕ ಮಾಡುವಷ್ಟು ಹಣ ಇರಲಿಲ್ಲ. ಬೇರೆ ಬೇರೆ ನಾಟಕ ತಂಡಗಳಲ್ಲಿ ನಟಿಸಿ ಜೀವನ ಮಾಡಲು ಆರಂಭಿಸಿದೆ. ನಂತರ ವಾರ್ತಾ ಇಲಾಖೆಯಲ್ಲಿ ಒಂದು ವರ್ಷ ಜ್ಯೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದೆ. ಅಲ್ಲಿಂದ ಸಿನಿಮಾ, ಸೀರಿಯಲ್, ಡಾಕ್ಯುಮೆಂಟ್ರಿಗಳಲ್ಲಿ ಅಸಿಸ್ಟೆಂಟ್, ಅಸೋಸಿಯೇಟ್ ಆಗಿ ದುಡಿದೆ. ಈ ಸಂದರ್ಭದಲ್ಲಿಯೇ ಪಿ.ಶೇಷಾದ್ರಿ ಅವರ ಕಣ್ಣಾಮುಚ್ಚಾಲೆ ಧಾರಾವಾಹಿಯಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದು. ಕಣ್ಣಾಮುಚ್ಚಾಲೆ ನಾನು ನಟಿಸಿದ ಮೊಟ್ಟ ಮೊದಲ ಸೀರಿಯಲ್. ಅಲ್ಲಿಂದ ನನ್ನ ಕಿರುತೆರೆ ಪಯಣ ಆರಂಭವಾಯಿತು.

    • ಕಣ್ಣಾಮುಚ್ಚಾಲೆ ಧಾರಾವಾಹಿ ನಿಮ್ಮಲ್ಲಿದ್ದ ಕಲಾವಿದನನ್ನು ಜಾಗೃತಿಗೊಳಿಸಿತು ಎಂದು ನೀವು ಯಾವಾಗಲೂ ಹೇಳುತ್ತೀರಿ?
    ಹೌದು. ನಟನೆ ಮಾಡಬೇಕು ನಟನೆಯಲ್ಲೇ ಮುಂದುವರೆಯಬೇಕು ಎಂದು ಪ್ರೇರಣೆ, ಬುನಾದಿ ಹಾಕಿಕೊಟ್ಟಿದ್ದು ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಣ್ಣಾ ಮುಚ್ಚಾಲೆ ಸೀರಿಯಲ್. ಪುಟ್ಟ ಪಾತ್ರವಾದರೂ ನನ್ನ ನಟನೆ ನೋಡಿ ಪಿ.ಶೇಷಾದ್ರಿ ಮೆಚ್ಚಿಕೊಂಡು ಈ ಪಾತ್ರವನ್ನು ಮುಂದುವರಿಸುತ್ತೇನೆ ನೀನೇ ಮಾಡಬೇಕು ಎಂದು ಹುರಿದುಂಬಿಸಿದ್ರು. ಈ ಪಾತ್ರ ನನಗೆ ಸ್ವಲ್ಪ ಮಟ್ಟಿನ ಹೆಸರು ಹಾಗೂ ಪ್ರಚಾರವನ್ನು ತಂದು ಕೊಡ್ತು. ಅಲ್ಲಿಂದ ನಟನೆಯಲ್ಲೇ ಮುಂದುವರೆದು ಇಲ್ಲಿವರೆಗೆ ಬಂದು ನಿಂತಿದ್ದೇನೆ.

    • ಪಾಪಾ ಪಾಂಡು ನಿಮ್ಮ ಕಲಾ ಬದುಕಿನ ಅತಿ ದೊಡ್ಡ ಟರ್ನಿಂಗ್ ಪಾಯಿಂಟ್ ಇದ್ರೆ ಬಗ್ಗೆ ಏನ್ ಹೇಳ್ತಿರಾ?
    ಒಮ್ಮೆ ಸಿಹಿ ಕಹಿ ಚಂದ್ರು ಸರ್ ಫೋನ್ ಮಾಡಿ ಪಾಪಾ ಪಾಂಡು ಎಂಬ ಹೊಸ ಸೀರಿಯಲ್ ಆರಂಭಿಸುತ್ತಿದ್ದೇನೆ ಗೋಪಿ ಎಂಬ ಪಾತ್ರವಿದೆ ಎಂದು ತಿಳಿಸಿದ್ರು. ಮುಖ್ಯ ಪಾತ್ರ ನಾನು ನನ್ನ ಪತ್ನಿ ಮಾಡುತ್ತೇವೆ ಒಂದು ವೇಳೆ ನಾನು ಮಾಡಿಲ್ಲವಾದ್ರೆ ನೀವೇ ಮುಖ್ಯ ಪಾತ್ರ ಮಾಡುತ್ತೀರಾ ಎಂದೂ ತಿಳಿಸಿದ್ರು. ನಾನು ಯಾವುದಾದರೇನು ಜೀವನ ನಿರ್ವಹಣೆಗೆ ಕೆಲಸ, ಸಂಬಳ ಸಿಕ್ಕಿತಲ್ಲ ಎಂಬ ಖುಷಿಯಿಂದ ಒಪ್ಪಿಕೊಂಡೆ. ಒಂದೆರಡು ದಿನದಲ್ಲೇ ಸಿಹಿ ಕಹಿ ಚಂದ್ರು ಅವರು ಫೋನ್ ಮಾಡಿ ಪಾಪಾ ಪಾಂಡು ಮೈನ್ ರೋಲ್ ನೀವೇ ಮಾಡುತ್ತಿದ್ದೀರಾ ಎಂದು ತಿಳಿಸಿದ್ರು. ಮುಂದೆ ಆಗಿದೆಲ್ಲ ಪವಾಡ. ಪಾಪಾ ಪಾಂಡು ದೊಡ್ಡ ಹಿಟ್ ನೀಡಿ ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು.

    • ಸಿನಿಮಾದಲ್ಲೂ ಹೀರೋ ಆಗಿ ಮಿಂಚಿದ್ರಿ ನೀವು?
    ಇದೆಲ್ಲ ಸಾಧ್ಯವಾಗಿದ್ದು ಪಾಪಾ ಪಾಂಡು ಸೀರಿಯಲ್ ನೀಡಿದ ಪಾಪ್ಯುಲ್ಯಾರಿಟಿಯಿಂದ. ನನ್ನ ಜೀವನದ ಮರೆಯಲಾರದ ದಿನಗಳು ಅಂದ್ರೆ ಒಂದು ನಾನು ಮದುವೆಯಾದ ದಿನ ಇನ್ನೊಂದು ಪಾಪಾ ಪಾಂಡು ಆರಂಭವಾದ ದಿನ. ಅಷ್ಟು ಖ್ಯಾತಿಯನ್ನು ನನಗೆ ಈ ಸೀರಿಯಲ್ ತಂದು ಕೊಡ್ತು. ಇದರ ಯಶಸ್ಸೇ ಸುಮಾರು ಆರು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಲು ಅವಕಾಶ ಮಾಡಿಕೊಡ್ತು. ಹೀರೋ ಅಲ್ಲದೆ ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದೇನೆ.

    • ಪಾಪಾ ಪಾಂಡು ಸೀಸನ್-2 ಆರಂಭವಾದಾಗ ಸಂಭ್ರಮ ಹೇಗಿತ್ತು?
    ನನಗೆ ಅನ್ನ ಕೊಟ್ಟ ಪಾಪಾ ಪಾಂಡು ಧಾರಾವಾಹಿ ಹದಿನೈದು ವರ್ಷದ ನಂತರ ಮತ್ತೆ ಬರುತ್ತಿದೆ ಅಂದಾಗ ನನಗಾದ ಖುಷಿಗೆ ಪಾರವೇ ಇರಲಿಲ್ಲ. ಹೊತನದಲ್ಲಿ ಮತ್ತೆ ಬಂದಾಗ ನನಗೆ ನನ್ನ ಕುಟುಂಬಕ್ಕೆ ಡಬಲ್ ಖುಷಿಯನ್ನು ತಂದು ಕೊಡ್ತು.

    • ಈಗೇನು ಮಾಡುತ್ತಿದ್ದೀರಿ?
    ಸದ್ಯಕ್ಕೆ ನಾನು ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಲಾಕ್‍ಡೌನ್ ಸಮಯದಲ್ಲಿ ಸಿಕೆ9 ಎಂಬ ಯುಟ್ಯೂಬ್ ಚಾನೆಲ್ ಮಾಡಿಕೊಂಡು ಪಾಂಡು ಪಂಚ್ ವೆಬ್ ಸಿರೀಸ್ ಆರಂಭಿಸಿದ್ದೇನೆ. ನಾನೇ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದೇನೆ. ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ ಅದನ್ನೇ ಇಂಪ್ರೂ ಮಾಡುತ್ತಿದ್ದೇನೆ.

    • ಕಲಾವಿದನ ಜೀವನ ಕಲಿಸಿದ ದೊಡ್ಡ ಪಾಠವೇನು?
    ಅವಕಾಶಗಳು ಇದ್ದಾಗ ಮಾತ್ರ ನಮ್ಮ ಹೆಸರು ಚಾಲ್ತಿಯಲ್ಲಿರುತ್ತೆ. ಇಲ್ಲವಾದಾಗ ಕಲಾವಿದರ ಬದುಕು ಕಷ್ಟ. ಆದ್ರೆ ನಾನ್ಯಾವತ್ತೂ ಅವಕಾಶಗಳು ಸಿಗದಿದ್ದಾಗ ಬೇಸರ ಮಾಡಿಕೊಳ್ಳೋದಿಲ್ಲ. ಅವಕಾಶಗಳು ನಮ್ಮ ಮಧ್ಯೆಯೇ ಇದೆ. ಕೆಲವೊಮ್ಮೆ ನಾವೇ ಅವಕಾಶಗಳನ್ನ ಸೃಷ್ಟಿಸಿಕೊಳ್ಳಬೇಕು. ಹೊಸದೇನಾದರೂ ಮಾಡಬೇಕು. ಆಗ ಅವಕಾಶಗಳು ತನ್ನಿಂದ ತಾನೇ ಬರುತ್ತವೆ. ಸದ್ಯ ನಾನು ಹುಡುಕಿಕೊಂಡಿರೋ ದಾರಿ ಪಾಂಡು ಪಂಚ್ ವೆಬ್ ಸಿರೀಸ್. ಏರಿಳಿತ, ಅಪಮಾನ ಅವಮಾನಗಳು ಎಲ್ಲಾ ಕಡೆಯೂ ಇದ್ದೆ ಇರುತ್ತೆ. ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು ಸಹಜ ಅಲ್ವೇ, ಆದ್ರೆ ಆ ಕಲ್ಲನ್ನೇ ಮೆಟ್ಟಿಲು ಮಾಡಿಕೊಂಡು ಹೋಗೋದು ನನ್ನ ಪಾಲಿಸಿ.

    • ನಿಮ್ಮ ಕನಸೇನು?
    ನನ್ನದೇ ಪ್ರೊಡಕ್ಷನ್ ಹೌಸ್ ತೆರೆಯಬೇಕು ಎಂದು ತುಂಬಾ ಆಸೆ ಇದೆ. ಜೊತೆಗೆ ಒಂದು ಸಿನಿಮಾ ನಿರ್ದೇಶನ ಮಾಡಬೇಕು ಎಂದು ಕನಸಿದೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಅಷ್ಟೇ.