Tag: palimaru swamiji

  • ರಾಮ ಮಂದಿರದ ಹೋರಾಟದ ನೆನಪು ತೆರೆದಿಟ್ಟ ಉಡುಪಿಯ ಪಲಿಮಾರು ಸ್ವಾಮೀಜಿ

    ರಾಮ ಮಂದಿರದ ಹೋರಾಟದ ನೆನಪು ತೆರೆದಿಟ್ಟ ಉಡುಪಿಯ ಪಲಿಮಾರು ಸ್ವಾಮೀಜಿ

    -ಉತ್ತರ ಪ್ರದೇಶದ ಪೊಲೀಸ್ ಠಾಣೆಯಲ್ಲೇ ಪೂಜೆ, ಸ್ನಾನ
    -ಜಾಗಟೆ ಬಾರಿಸಿದ್ದ ಪೊಲೀಸ್ ಕಾನ್‍ಸ್ಟೇಬಲ್

    ಉಡುಪಿ: ರಾಮಮಂದಿರಕ್ಕೆ ಶಿಲಾನ್ಯಾಸ ಆಗುತ್ತಿರುವುದು ನಮಗೆಲ್ಲ ಹೆಮ್ಮೆಯ, ಸ್ವಾಭಿಮಾನದ, ಪರಮ ಪಾವನವಾದ ದಿನ. ಈ ಕಾಲದಲ್ಲಿ ನಾವಿದ್ದೇವೆ ಎಂಬುವುದು ಹೆಮ್ಮೆಯ ವಿಚಾರ ಎಂದು ಉಡುಪಿ ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿ ನೆನಪು ತೆರೆದಿಟ್ಟರು.

    ಈ ದಿನಕ್ಕಾಗಿ ನಾವೆಲ್ಲ ಹಲವು ವರ್ಷಗಳಿಂದ ಕಾಯುತ್ತಿದ್ದೇವೆ. ರಾಮ ಮಂದಿರಕ್ಕಾಗಿ ಬೇರೆ ಬೇರೆ ಕಡೆಗಳಲ್ಲಿ ಇಟ್ಟಿಗೆ ಪೂಜೆ, ರಾಮ ತಾರಕ ಮಂತ್ರ ಯಜ್ಞಗಳು ನಡೆದಿತ್ತು. ಅವುಗಳಲ್ಲಿ ಭಾಗವಹಿಸುವ ಅವಕಾಶ ನನಗೂ ಲಭಿಸಿದೆ. ಅಯೋಧ್ಯೆಯಲ್ಲೊಮ್ಮೆ ಕರಸೇವೆ ನಡೆಸುವ ಘೋಷಣೆಯಾದಾಗ ಗುರುಗಳು, ಪೇಜಾವರ ಶ್ರೀಗಳು, ಅದಮಾರು ಶ್ರೀಗಳ ಜೊತೆಗೆ ನಾವೆಲ್ಲ ಅಲ್ಲಿಗೆ ಹೋಗಿದ್ದೆವು. ಅಲ್ಲಿ ಉತ್ತರ ಪ್ರದೇಶಕ್ಕೆ ಪ್ರವೇಶವಾದಾಗಲೇ ನಮ್ಮ ವಾಹನಗಳನ್ನು ಅಡ್ಡಗಟ್ಟಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಆ ಘಟನೆಯನ್ನು ಇನ್ನೂ ಮರೆಯಲು ಸಾಧ್ಯವಾಗುತ್ತಿಲ್ಲ ಎಂದರು.

    ನಾವೆಲ್ಲ ಯತಿಗಳು ಅಲ್ಲಿದ್ದೆವು. ಪೊಲೀಸರು ನಿಮ್ಮನ್ನು ಬಿಡಲು ಆಗುವುದಿಲ್ಲ ಎಂದಿದ್ದರು. ಅಲ್ಲಿದ್ದವರಲ್ಲಿ ಯಾರೋ ಒಬ್ಬರು ನಾವು ಪ್ರಯಾಗಕ್ಕೆ ಹೋಗುತ್ತಿದ್ದೇವೆ ಎಂದು ಸುಳ್ಳು ಹೇಳಿದರು. ಆಗ ಪೇಜಾವರ ಶ್ರೀಗಳು ವಿರೋಧ ಮಾಡಿ, ಇಲ್ಲ ನಾವು ಅಯೋಧ್ಯೆಗೇ ಹೋಗುವುದು, ಕರಸೇವೆಗೇ ಹೋಗುತ್ತಿದ್ದೇವೆ ಎಂದು ಹೇಳಿದರು. ಪೊಲೀಸರಿಗೆ ಸಾಕ್ಷಿ ಸಿಕ್ಕಿತು. ಹಾಗಾಗಿ ನಮ್ಮನ್ನು ಅಲ್ಲಿಯೇ ಕೂರಿಸಿದರು. ಅಲ್ಲೇ ಪಕ್ಕದಲ್ಲಿ ಬಾವಿ ಇತ್ತು, ಅಲ್ಲಿ ಸ್ನಾನ ಮಾಡಿ ಮಧ್ಯಾಹ್ನ 12 ಗಂಟೆಗೆ ದೇವರ ಪೂಜೆ ನಡೆಸಲಾಯಿತು. ಪೊಲೀಸರೇ ದೇವರ ಪೂಜೆ ನೋಡಿ, ಕಣ್ತುಂಬಿಕೊಂಡು ಘಂಟೆ ಭಾರಿಸಿದ್ದರು.

    ಜನರು ಬರಬಾರದು ಎಲ್ಲರನ್ನು ತಡೆಯಬೇಕು ಎಂದು ಮುಲಾಯಂ ಸಿಂಗ್ ಹೇಳಿದ್ದು, ಆದರೆ ಅಲ್ಲಿಯೇ ರಾಮ ದೇವರು, ಪಟ್ಟದ ದೇವರಿಗೆ ರಾಮೋತ್ಸವ ನಡೆಯಿತು. ಅಲ್ಲಿ ಸ್ವಾಮೀಜಿಗಳು ಸೇರಿದ್ದಾರೆ ಎನ್ನುವ ಸಂದೇಶ ಸಿಗುತ್ತಲೇ ನಮ್ಮ ಸ್ಥಳವನ್ನು ಬದಲಿಸಲಾಯಿತು. ಅಲ್ಲಿಂದ ಒಂದು ಶಾಲೆಗೆ ಕರೆದುಕೊಂಡು ಹೋದರು. ಶಂಕರಘಡದ ಶಾಲೆಯೇ ನಮಗೆ ಜೈಲಾಗಿತ್ತು. ಶಾಲೆಯನ್ನು ಜೈಲಾಗಿ ನಾವು ನೋಡುವುದಿಲ್ಲ, ಅದನ್ನು ಖುಷಿಯಿಂದ ಸಂಭ್ರಮಿಸುವವರು ನಾವು. ಅದು ಕಾರ್ತಿಕ ಮಾಸ, ಸಂಜೆ ತುಳಸೀಪೂಜೆ, ಸಂಕೀರ್ತನೆಗಳನ್ನು ನೋಡುವುದಕ್ಕೆ ಸಾವಿರ ಸಾವಿರ ಮಂದಿ ಬರುತ್ತಿದ್ದರು. ಇದು ರೋಚಕ ಅನುಭವ. ಅಲ್ಲಿಂದ ಅಯೋಧ್ಯೆಗೆ ನಮಗೆ ಹೋಗಲು ಸಾಧ್ಯವಾಗಿಲ್ಲ. ಅಲ್ಲಿಂದಲೇ ವಾಪಸ್ ಬರಬೇಕಾಯಿತು. ಆದರೆ ಖುಷಿ ಇತ್ತು, ಕರಸೇವೆಯಲ್ಲಿ ಭಾಗವಹಿಸದೇ ಇದ್ದರೂ ರಾಮ ದೇವರಿಗಾಗಿ ನಾವು ಕೆಲವು ದಿನ ಹೀಗೆ ಎಲ್ಲವನ್ನು ಬಿಟ್ಟು ಗೃಹ ಬಂಧನಕ್ಕೆ ಒಳಗಾಗಿದ್ದೆವು.

    ಕಲ್ಯಾಣಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಇನ್ನೊಮ್ಮೆ ಕರಸೇವೆ ಘೋಷಣೆಯಾಗಿತು. ಆಗಲೂ ಗುರುಗಳು, ಪೇಜಾವರ ಶ್ರೀಗಳ ನೇತ್ವದೊಂದಿಗೆ ಭಾಗವಹಿಸಿದ್ದೆವು. ಮರುದಿನ ಪೇಜಾವರ ಶ್ರೀಗಳು ರಾಮಲಲ್ಲಾನ ವಿಗ್ರಹವನ್ನು ಪ್ರತಿಷ್ಠೆ ಮಾಡಿದರು. ಆಗಲೂ ಸಾಕ್ಷಿಯಾಗಿದ್ದೆವು, ಪೂಜೆ ಮಾಡುವ ಯೋಗವನ್ನು ಮರೆಯಲಾಗುವುದಿಲ್ಲ. ದೇವರು ಎಲ್ಲರ ಪ್ರಾರ್ಥನೆಗೆ ಅನುಗ್ರಹಿಸಿದ್ದಾನೆ.

    ಅಯೋಧ್ಯೆ ಎಂದರೆ ಯುದ್ಧವಿಲ್ಲದ್ದು ಎಂದರ್ಥ. ನಾವು ಇದನ್ನು ಅಸಂಭವ ಎಂದು ತಿಳಿದುಕೊಂಡಿದ್ದೆವು. ಅಸಾಧ್ಯದಾದದ್ದು ಸಾಧ್ಯವಾಗುತ್ತದೆ ಎಂದಾಗ ಮೈ ರೋಮಾಂಚನವಾಗುತ್ತದೆ. ಸರ್ವೋಚ್ಚ ನ್ಯಾಯಾಲಯ ಐಕ್ಯಮತದಿಂದ ಉತ್ತಮ ತೀರ್ಪು ನೀಡಿದೆ. ಇದೀಗ ರಾಮಮಂದಿರ ನಿರ್ಮಾಣದ ಸುಯೋಗ ಸನ್ನಿಹಿತವಾಗಿದೆ. ಅಲ್ಲಿ ಒಬ್ಬ ವ್ಯಕ್ತಿ ನಿಂತು ಭೂಮಿ ಪೂಜನ ನಡೆಸುತ್ತಿಲ್ಲ. ಅಲ್ಲಿ ರಾಮ ದೇವರು, ಆಂಜನೇಯ ದೇವರೇ ಕೂತು ಶಿಲಾನ್ಯಾಸ ಮಾಡುತ್ತಿದ್ದಾರೆ ಎಂದು ನಾವು ಅನುಸಂಧಾನ ಮಾಡಬೇಕು, ಪ್ರಧಾನಿಗಳ ಕೈಗೆ ನಾವೆಲ್ಲರೂ ಕೈ ಜೋಡಿಸಬೇಕು. ನಾವೆಲ್ಲರೂ ಅಲ್ಲಿ ಹೋಗಲು ಸಾಧ್ಯವಿಲ್ಲ ಎಂದು ಚಿಂತೆ ಬೇಡ, ಇಲ್ಲೇ ಕೂತು ನಾವು ಸಂಕಲ್ಪ ಮಾಡಿದರೆ, ಅಲ್ಲಿ ಹೋಗಿ ಅದು ಕಾರ್ಯಕಾರಿಯಾಗುತ್ತದೆ. ಸುಂದರವಾದ ಮಂದಿರ ನಿರ್ಮಾಣವಾಗುತ್ತದೆ ಎಂದು ಪಲಿಮಾರು ಸ್ವಾಮೀಜಿ ಶಿಲಾನ್ಯಾಸ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

  • ಅಬ್ಬರದ ಮುಂಗಾರು ಮಳೆಯಲ್ಲಿ ಉಡುಪಿ ಕೃಷ್ಣನಿಗೆ ಚಿನ್ನದ ರಥೋತ್ಸವ

    ಅಬ್ಬರದ ಮುಂಗಾರು ಮಳೆಯಲ್ಲಿ ಉಡುಪಿ ಕೃಷ್ಣನಿಗೆ ಚಿನ್ನದ ರಥೋತ್ಸವ

    ಉಡುಪಿ: ಮುಂಗಾರು ಮಳೆಯ ಅಬ್ಬರದ ನಡುವಲ್ಲೇ ಉಡುಪಿ ಕೃಷ್ಣನ ಉತ್ಸವ ನಡೆದಿದೆ. ರಥಬೀದಿಯಲ್ಲಿ ಮೊಣಕಾಲುವರೆಗೆ ನೀರು ತುಂಬಿಕೊಂಡಿದ್ದು ಮಳೆನೀರಿನ ನಡುವೆ ಶ್ರೀಕೃಷ್ಣನನ್ನು ಚಿನ್ನದ ರಥದಲ್ಲಿ ಕುಳ್ಳಿರಿಸಿ ಉತ್ಸವ ಮಾಡಲಾಯಿತು.

    ಈ ಬಾರಿಯ ಬರಗಾಲದ ಬಿಸಿ ಶ್ರೀ ಕೃಷ್ಣ ಮಠಕ್ಕೂ ತಟ್ಟಿತ್ತು. ಮಠದ ಮಧ್ವ ಸರೋವರ ಬತ್ತಿ ಹೋಗಿತ್ತು. ಇಂದು ಬೆಳಗ್ಗೆ ಬೀಸಿದ ಭಾರೀ ಗಾಳಿ ಮಳೆ, ಕೃಷ್ಣ ದೇವರಿಗೂ ಹಿತಾನುಭವ ನೀಡಿದೆ. ರಾತ್ರಿಯ ಉತ್ಸವ ಆರಂಭವಾಗುವ ವೇಳೆಯಲ್ಲೇ ಭಾರೀ ಮಳೆ ಸುರಿಯಿತು. ಚಿನ್ನದ ರಥವೇರಿದ ಕೃಷ್ಣ ಮುಂಗಾರು ಮಳೆಗೆ ಮೈಯ್ಯೊಡ್ಡಿ ಮೆರಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.

    ಮೊದಲ ಮಳೆಯ ರೋಮಾಂಚನವನ್ನು ಶ್ರೀಕೃಷ್ಣನ ಜೊತೆ ನೂರಾರು ಭಕ್ತರು ಕೂಡಾ ಅನುಭವಿಸಿದರು. ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥರು ಹಾಗೂ ಅದಮಾರು ಮಠದ ಈಶಪ್ರಿಯ ತೀರ್ಥರು ಮಳೆಯಲ್ಲಿ ನೆನೆಯುತ್ತಲೇ ಕೃಷ್ಣ ನನ್ನು ನೆನೆದರು. ಭಕ್ತರು ಮಳೆಯಲ್ಲಿ ತೋಯುತ್ತಲೇ ಕೃಷ್ಣಜಪ ಮಾಡಿ ರಥವೆಳೆದರು.

    ಮೊದಲ ಮಳೆಯಾದ ಕಾರಣ ರಥಬೀದಿಯಲ್ಲಿ ಕಾಲು ಮುಳುಗುವಷ್ಟು ನೀರಿತ್ತು. ಹರಿಯುವ ಜಲದ ನಡುವೆ ಹರಿಯ ರಥೋತ್ಸವ ಉತ್ಸವ ನಡೆದದ್ದು ವಿಶೇಷವೆನಿಸಿತು. ಇನ್ನಾದರೂ ಬರಗಾಲ ಕಳೆದು ಮುಂಗಾರು ಜನರನ್ನು ಹರಸಲಿ ಎಂದು ಭಕ್ತರು ಕೃಷ್ಣನನ್ನು ಬೇಡಿಕೊಂಡರು.

    ಈ ಸಂದರ್ಭ ಮಾತನಾಡಿದ ಪರ್ಯಾಯ ಪಲಿಮಾರು ಸ್ವಾಮೀಜಿ, ಭಾಗೀರತಿ ಜನ್ಮದಿನದ ಈ ಉತ್ಸವ ಸದಾ ನೆನಪುಳಿಯುವಂತದ್ದು. ಜಲಧಾರೆ ದೇವರ ನೆತ್ತಿ ಮೇಲೆ ಸುರಿಯುತ್ತಿತ್ತು. ದೇವರು ರಥಬೀದಿಯಲ್ಲಿ ಉತ್ಸವ ಹೊರಟಿದ್ದ. ಈ ಬಾರಿ ಯಾರೂ ಚಿಂತಿಸುವ ಅಗತ್ಯವಿಲ್ಲ. ಜನ ಜಾನುವಾರುಗಳಿಗೆ ನೀರು. ರೈತರಿಗೆ ಉತ್ತಮ ಬೆಳೆ ಸಿಗಲಿದೆ. ಮಳೆಗಾಲದಲ್ಲಿ ನಿರಂತರ ಮಳೆಯಾಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

  • ಅಣ್ಣಾಮಲೈ 10 ವರ್ಷ ಬಿಟ್ಟು ರಾಜೀನಾಮೆ ನೀಡಿ- ಪಲಿಮಾರು ಸ್ವಾಮೀಜಿ

    ಅಣ್ಣಾಮಲೈ 10 ವರ್ಷ ಬಿಟ್ಟು ರಾಜೀನಾಮೆ ನೀಡಿ- ಪಲಿಮಾರು ಸ್ವಾಮೀಜಿ

    ಉಡುಪಿ: ದಕ್ಷ ಅಧಿಕಾರಿಯಾಗಿರುವ ಅಣ್ಣಾಮಲೈ ಕಾನೂನು ಸುವ್ಯವಸ್ಥೆ ನಿಭಾಯಿಸುವ ತಜ್ಞರು. ಹೀಗಾಗಿ ಅವರು ಇನ್ನೂ ಹತ್ತು ವರ್ಷ ಪೊಲೀಸ್ ಸೇವೆ ಮಾಡುವಂತಾಗಲಿ ಎಂದು ಕೃಷ್ಣಮಠದ ಪರ್ಯಾಯ ಪಲಿಮಾರು ಮಠದ ಯತಿ ಶ್ರೀ ವಿದ್ಯಾಧೀಶ ಸ್ವಾಮೀಜಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷ ನೇತಾರ ರಾಜಕೀಯಕ್ಕೆ ಹೋಗುತ್ತಾರೆಂಬ ಚರ್ಚೆ ನಡೆಯುತ್ತಿದೆ. ಅಣ್ಣಾಮಲೈ ರಾಜಕೀಯ ಪ್ರವೇಶಕ್ಕೆ ನನ್ನ ವಿರೋಧ ಇಲ್ಲ. ಆದರೆ ಅವರು ಇನ್ನೂ ಹತ್ತು ವರ್ಷ ಪೊಲೀಸ್ ಸೇವೆ ಮಾಡಲಿ. ಇಷ್ಟು ಬೇಗ ರಾಜಕೀಯ ಪ್ರವೇಶ ಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.

    ರಾಜಕೀಯದಲ್ಲಿ ಸೋಲು ಗೆಲುವಿಗೆ ಸಿದ್ಧವಾಗಿರಬೇಕು. ಪೊಲೀಸ್ ಅಧಿಕಾರಿಯಾಗಿ ಅಣ್ಣಾಮಲೈ ಸೋಲು ಕಾಣದ ವ್ಯಕ್ತಿಯಾಗಿದ್ದಾರೆ. ರಾಜಕೀಯದಲ್ಲಿ ಎಲ್ಲರ ಪ್ರೀತಿ ಗಳಿಸಲು ಸಾಧ್ಯವಿಲ್ಲ. 10 ವರ್ಷ ತಡವಾಗಿ ರಾಜಕೀಯಕ್ಕೆ ಸೇರಿ. ರಾಜಕೀಯಕ್ಕೆ ವಯಸ್ಸಿನ ಮಿತಿ ಇಲ್ಲ. ಆದರೆ ರಾಜಕೀಯ ಸೇರ್ಪಡೆಗೆ ನಿರ್ಧರಿಸಿದ್ದರೆ ಅದಕ್ಕೂ ಪ್ರಾರ್ಥಿಸುತ್ತೇನೆ ಎಂದರು. ಇದನ್ನೂ ಓದಿ: ನಾನು ನನ್ನ ಖಾಕಿಯಲ್ಲಿ ಪ್ರತಿ ಕ್ಷಣವನ್ನು ಜೀವಿಸಿದ್ದೇನೆ: ಅಭಿಮಾನಿಗಳಿಗೆ ಅಣ್ಣಾಮಲೈ ಭಾವನಾತ್ಮಕ ಪತ್ರ

    ಅಣ್ಣಾಮಲೈಗೆ ಎಲ್ಲಿ ಹೋದರೂ ಒಳ್ಳೆದಾಗಲಿ. ರಾಜಕೀಯ ಕ್ಷೇತ್ರ ಶುದ್ಧಿ ಮಾಡಲು ಅವರು ಸಮರ್ಥರಾಗಿದ್ದಾರೆ. ಪೊಲೀಸ್ ಇಲಾಖೆ ಬಿಡಬಾರದು ಎನ್ನುವುದು ನಮ್ಮ ಚಿಕ್ಕ ಆಸೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ರಾಜೀನಾಮೆ:
    ಅಣ್ಣಾಮಲೈ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ತಮ್ಮ ಡಿಜಿ ಹಾಗೂ ಐಜಿಪಿ ಹುದ್ದೆಗೆ ರಾಜೀನಾಮೆ ನೀಡುತ್ತಿರುವ ಪತ್ರವನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಕೈಗಿತ್ತ ಅಣ್ಣಾಮಲೈ, ಹೆತ್ತವರು ಹಾಗೂ ವೈಯಕ್ತಿಕ ಜೀವನದ ಕಾರಣ ನೀಡಿದ್ದಾರೆ. ಆದರೆ ರಾಜಕೀಯ ಪ್ರವೇಶ ಬಗ್ಗೆ ನಾನು ಈಗಾಗಲೇ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಒಟ್ಟಿನಲ್ಲಿ ಸ್ವಲ್ಪ ದಿನ ಕುಟುಂಬದ ಜೊತೆ ಬೆರೆಯಬೇಕು. ಬೆಳೆಯುತ್ತಿರುವ ಮಗನಿಗೆ ಒಳ್ಳೆಯ ಅಪ್ಪನಾಗಿರಬೇಕು ಎಂದು ಹೇಳಿದ್ದಾರೆ.