Tag: palimaru shree

  • ರಾಜಕೀಯ ನಾಯಕರಿಗಿಂತ ಚಂಬಲ್ ಡಕಾಯಿತರು ವಾಸಿ- ಪಲಿಮಾರು ಶ್ರೀ

    ರಾಜಕೀಯ ನಾಯಕರಿಗಿಂತ ಚಂಬಲ್ ಡಕಾಯಿತರು ವಾಸಿ- ಪಲಿಮಾರು ಶ್ರೀ

    ಉಡುಪಿ: ಅಯೋಧ್ಯೆ ರಾಮ ಮಂದಿರ ವಿವಾದಿತ ಕ್ಷೇತ್ರ ಎಂದಿರುವ ಮಾಜಿ ಸಿಎಂ ಸಿದ್ಧರಾಮಯ್ಯಗೆ ಉಡುಪಿಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ತಿರುಗೇಟು ನೀಡಿದ್ದಾರೆ. ರಾಜಕೀಯ ನಾಯಕರಿಗಿಂತ ಚಂಬಲ್ ಡಕಾಯಿತರು ವಾಸಿ ಎಂದು ಹೇಳಿದ್ದಾರೆ.

    ಶ್ರೀರಾಮಜನ್ಮಭೂಮಿ ಉತ್ಖನನ ಮಾಡಿ ಸುಪ್ರೀಂ ಕೋರ್ಟ್‌ಗೆ ವರದಿ ನೀಡಿದ ಕೆ.ಕೆ ಡಾ. ಮೊಹಮ್ಮದ್ ಅವರಿಗೆ ಡಾ. ಪಾದೂರು ಗುರುರಾಜ್ ಭಟ್ ನೆನಪಿನ ಪ್ರಶಸ್ತಿ ನೀಡಿ ಸನ್ಮಾನ ಮಾಡಿ ಅವರು ಮಾತನಾಡಿದರು.

    ನ್ಯಾಯಾಲಯದ ಆದೇಶವನ್ನು ಒಪ್ಪುತ್ತಿಲ್ಲ ಎಂದರೆ ನಾಚಿಕೆಗೇಡು. ರಾಮಮಂದಿರಕ್ಕೆ ಬೇಕಾದ ಎಲ್ಲಾ ಸಾಕ್ಷಿಗಳನ್ನು ಭೂಗರ್ಭದಿಂದ ಪಡೆಯಲಾಗಿದೆ. ಕೆ ಕೆ ಮಹಮ್ಮದ್ ಅವರ ನೇತೃತ್ವದಲ್ಲಿ ಉತ್ಖನನ ನಡೆದು ಸಾಕ್ಷಿಗಳು ಕಣ್ಣ ಮುಂದಿವೆ. ಕೆಲ ಜನನಾಯಕರು ಮಂದಿರಕ್ಕೆ ಹತ್ತು ರೂಪಾಯಿ ಕೊಡಬೇಕಿದ್ದರೆ, ಭೂಮಿ ವಿವಾದಗ್ರಸ್ತ ಎನ್ನುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ರಾಮಮಂದಿರ ಇದ್ದ ಬಗ್ಗೆ ಎಲ್ಲಾ ಪುರಾವೆಗಳನ್ನು ನ್ಯಾಯಾಲಯಕ್ಕೆ ನೀಡಲಾಗಿದೆ. ಐವರು ನ್ಯಾಯಾಧೀಶರು ಸೇರಿ ತೀರ್ಪು ನೀಡಿದ್ದಾರೆ. ಅದರಲ್ಲೂ ಓರ್ವ ಮುಸ್ಲಿಂ ಸಮಾಜದ ನ್ಯಾಯಾಧೀಶರೇ ಇದ್ದರು. ಆದರೂ ಓರ್ವ ವಕೀಲರಾಗಿರುವ ಜನನಾಯಕ ಈ ತೀರ್ಪನ್ನು ಒಪ್ಪುತ್ತಿಲ್ಲ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಚಂಬಲ್ ಕಣಿವೆಯ ಡಕಾಯತರಿಗಿಂತಲೂ ಇಂತಹಾ ಜನನಾಯಕರು ಅಪಾಯಕಾರಿ ಎಂದಿದ್ದಾರೆ.

  • 89ನೇ ವಸಂತಕ್ಕೆ ಕಾಲಿಟ್ಟ ಪೇಜಾವರ ಶ್ರೀಗಳು- ಹೂವಿನ ಸುರಿಮಳೆಗೈದ ಪಲಿಮಾರು ಸ್ವಾಮೀಜಿ

    89ನೇ ವಸಂತಕ್ಕೆ ಕಾಲಿಟ್ಟ ಪೇಜಾವರ ಶ್ರೀಗಳು- ಹೂವಿನ ಸುರಿಮಳೆಗೈದ ಪಲಿಮಾರು ಸ್ವಾಮೀಜಿ

    ಉಡುಪಿ: ಅಷ್ಟಮಠಗಳ ಹಿರಿಯ ಯತಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ 88 ವರ್ಷಗಳನ್ನು ಪೂರೈಸಿ 89ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಶ್ರೀಗಳಿಗೆ ಪುಷ್ಪಾಭಿಷೇಕ ಸಲ್ಲಿಸಲಾಯಿತು.

    ಪೇಜಾವರ ಶ್ರೀಗಳ 89ನೇ ವರ್ಷದ ಹುಟ್ಟುಹಬ್ಬದ ಶುಭದಿನದಂದು ಮಠದ ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದರು, ಶ್ರೀಗಳಿಗೆ ಪುಷ್ಪಾಭಿಷೇಕ ಮಾಡುವ ಮೂಲಕ ಗೌರವಿಸಿ ಶುಭಕೋರಿದ್ದಾರೆ. ಮಠದ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳನ್ನು ಕಮಲ ಪೀಠದಲ್ಲಿ ಕೂರಿಸಿ, ಶಾಲು-ಹಾರ ಹಾಕಿ ಪುಷ್ಪಾಭಿಷೇಕ ಮಾಡಲಾಯಿತು.

    ಪೇಜಾವರ ಶ್ರೀಗಳ ಮೇಲೆ ಹೂವಿನ ಸುರಿಮಳೆಗೈದು ನೂರು ಕಾಲ ಆರೋಗ್ಯದಿಂದ ಇರಿ ಎಂದು ಪಲಿಮಾರು ಸ್ವಾಮೀಜಿ ಹಾರೈಸಿದರು. ಹಾಗೆಯೇ ಹಿರಿಯ ಶ್ರೀಗಳ ಪಾಂಡಿತ್ಯ, ಅವರು ಸಮಾಜಮುಖಿ ಕಾರ್ಯದಿಂದಲೇ ಉಳಿದ ಪೀಠಾಧಿಪತಿಗಳಿಗೆ ಮಾರ್ಗದರ್ಶಕ ಎಂದು ಹಾಡಿ ಹೊಗಳಿದರು. ಈ ಶುಭವೇಳೆಯಲ್ಲಿ ವೇದಿಕೆಯಲ್ಲಿದ್ದ ವಿದ್ವಾಂಸರು, ಸ್ವಾಮೀಜಿ ಶಿಷ್ಯರು, ಹಿರಿಯರು ಹಿರಿಯ ಮಠಾಧೀಶರಿಗೆ ಹುಟ್ಟು ಹಬ್ಬಕ್ಕೆ ಶುಭಕೋರಿದರು.

    ಈ ಸಂದರ್ಭ ಮಾತನಾಡಿದ ಪೇಜಾವರ ಶ್ರೀಗಳು ನಾನು ಈ ಸನ್ಮಾನ, ಗೌರವ ಪ್ರೀತಿಗೆ ಅರ್ಹನೆ? ಇದೆಲ್ಲವನ್ನು ಮಾಡಿಸಿಕೊಳ್ಳುವ ಗುಣಗಳು ನನ್ನಲ್ಲಿವೆಯೇ ಎಂದು ಅಂತರಂಗದಲ್ಲಿ ಪ್ರಶ್ನೆ ಮಾಡುವ ಕಾಲ ಇದು. ನಿಮ್ಮ ಈ ಪ್ರೀತಿ, ಗೌರವ ನನ್ನ ಹೃದಯ ಕಮಲವನ್ನು ಅರಳಿಸಿದೆ. ಈ ಗೌರವವನ್ನು ಶ್ರೀಕೃಷ್ಣ ಮುಖ್ಯಪ್ರಾಣದ ಪಾದದ ಕೆಳಗೆ ಅರ್ಪಿಸುವುದಾಗಿ ಹೇಳಿ ಸಂತೋಷ ಹಂಚಿಕೊಂಡರು.

  • ಮಡೆಸ್ನಾನವೂ ಇಲ್ಲ – ಎಡೆಸ್ನಾನವೂ ಇಲ್ಲ ಪಲಿಮಾರುಶ್ರೀ ದಿಟ್ಟ ನಿರ್ಧಾರ

    ಮಡೆಸ್ನಾನವೂ ಇಲ್ಲ – ಎಡೆಸ್ನಾನವೂ ಇಲ್ಲ ಪಲಿಮಾರುಶ್ರೀ ದಿಟ್ಟ ನಿರ್ಧಾರ

    ಉಡುಪಿ: ಕೃಷ್ಣಮಠದ ಇತಿಹಾಸದಲ್ಲೇ ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿಗಳು ಕ್ರಾಂತಿಕಾರಿ ಮತ್ತು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ಈ ಬಾರಿಯಿಂದ ಷಷ್ಠಿಯಂದು ಮಠದ ಸುಬ್ರಹ್ಮಣ್ಯ ಗುಡಿಯ ಮುಂದೆ ಎಂಜಲೆಲೆಯ ಮಡೆಸ್ನಾನವೂ ಹಾಗೂ ದೇವರ ಪ್ರಸಾದ ಎಡೆಸ್ನಾನಕ್ಕೆರಡಕ್ಕೂ ವಿದಾಯ ಹೇಳಿದ್ದಾರೆ.

    ಪರ್ಯಾಯ ಪಲಿಮಾರು ಮಠಾಧೀಶರ ಮಹತ್ವದ ನಿರ್ಧಾರ ಇದಾಗಿದೆ. ಆಸಕ್ತ ಭಕ್ತರಿಂದ ಈ ಬಾರಿ ಕೇವಲ ಉರುಳುಸೇವೆ ಮಾತ್ರ ನಡೆದಿದೆ. ಉರುಳು ಸೇವೆ ಮಾಡಿದವರ ಸಂಖ್ಯೆಯೂ ಕಡಿಮೆಯಾಗಿತ್ತು. ಕಳೆದ ನಾಲ್ಕು ವರ್ಷದಿಂದ ಪೇಜಾವರ ಶ್ರೀಗಳ ಸಲಹೆಯಂತೆ ಮಠದಲ್ಲಿ ಎಡೆಸ್ನಾನ ನಡೆಯುತ್ತಿತ್ತು. ಆಗಲೇ ಭಕ್ತರ ಸಂಖ್ಯೆ ಕುಸಿದಿತ್ತು.

    ಈ ಕುರಿತು ಪ್ರತಿಕ್ರಿಯಿಸಿರುವ ಪರ್ಯಾಯ ಪಲಿಮಾರು ಸ್ವಾಮೀಜಿಗಳು, ಅನಗತ್ಯ ವಿವಾದ ಬೇಡವೆಂದು ಈ ನಿರ್ಧಾರಕ್ಕೆ ಬಂದಿದ್ದೇವೆ. ಭಕ್ತರು ದೇವರಿಗೆ ಪ್ರದಕ್ಷಿಣೆ ಬಂದು ಅರ್ಚನೆ ಪೂಜೆ ಸಲ್ಲಿಸಲಿ. ಎಡೆಸ್ನಾನದಿಂದಲೂ ಕೆಲವರಿಗೆ ಬೇಸರವಾಗಿದೆ. ತಿನ್ನುವ ಅನ್ನದ ಮೇಲೆ ಉರುಳು ಸೇವೆ ಕೆಲವರಿಗೆ ಇಷ್ಟವಿಲ್ಲ. ಕೃಷ್ಣಮಠದ ಭೋಜನ ಶಾಲೆಯಲ್ಲೇ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಪಲಿಮಾರು ಸ್ವಾಮಿಗಳ ನಿರ್ಧಾರವನ್ನು ಪೇಜಾವರ ಶ್ರೀಗಳು ಸ್ವಾಗತಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ಪಲಿಮಾರು ಸ್ವಾಮಿಗಳ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಜಾತಿಯ ಹೆಸರಲ್ಲಿ ವಿರೋಧ ಬಂದ್ರೆ ಸಂಘರ್ಷವಾಗುತ್ತದೆ. ದೇವಸ್ಥಾನದಲ್ಲಿ ಮಡೆಸ್ನಾನ – ಎಡೆಸ್ನಾನ ಅನಿವಾರ್ಯ ಅಲ್ಲ. ಹಿಂದೂ ಧರ್ಮಕ್ಕೆ ಇದರಿಂದ ಯಾವುದೇ ಹಾನಿಯಿಲ್ಲ. ದೇವಸ್ಥಾನದ ಉತ್ಸವ ಪೂಜೆ ಶಾಸ್ತ್ರಬದ್ಧವಾಗಿ ನಡೆದರೆ ಸಾಕು. ವಿವಾದ ಭಿನ್ನಾಭಿಪ್ರಾಯದ ಆಚರಣೆಗಳು ನಿಂತರೆ ಹಿಂದೂ ಧರ್ಮಕ್ಕೆ ನಷ್ಟವಿಲ್ಲ. ಇಂತಹ ಆಚರಣೆ ನಡೆಯಬೇಕಾಗಿಲ್ಲವೆಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇತಿಹಾಸಕಾರರು ಬ್ರಿಟಿಷ್ ಮನಸ್ಥಿತಿಯವರು- ಅನಂತ್ ಕುಮಾರ್ ಹೆಗ್ಡೆ

    ಇತಿಹಾಸಕಾರರು ಬ್ರಿಟಿಷ್ ಮನಸ್ಥಿತಿಯವರು- ಅನಂತ್ ಕುಮಾರ್ ಹೆಗ್ಡೆ

    ಉಡುಪಿ: ಭಾರತದ ಇತಿಹಾಸಕಾರರ ಮೇಲೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ವಾಗ್ದಾಳಿ ನಡೆಸಿದ್ದಾರೆ.

    ಉಡುಪಿಯ ಪಲಿಮಾರು ಪರ್ಯಾಯದ ಎರಡು ವರ್ಷದ ಜ್ಞಾನಯಜ್ಞ ಧಾರ್ಮಿಕ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜಮಹಾರಾಜರು ನಮ್ಮ ದೇಶ ಕಟ್ಟಿಲ್ಲ. ಬ್ರಿಟಿಷ್ ಮನಸ್ಥಿತಿಯ ಇತಿಹಾಸಕಾರರು ಸುಳ್ಳು ಬರೆದಿದ್ದಾರೆ. ನಾವೆಲ್ಲಾ ಸುಳ್ಳು ಓದುತ್ತಿದ್ದೇವೆ. ಭಾರತ ಕಾವಿ ಬಟ್ಟೆಯ ಇತಿಹಾಸ ಹೊಂದಿದೆ. ಈ ಸತ್ಯವನ್ನು ಯಾರು ಒಪ್ಪಿಕೊಳ್ಳಲ್ಲ ಎಂದರು. ಕಾವಿ ತೊಟ್ಟವರು ಹಾಕಿದ ಸನ್ಮಾರ್ಗದಲ್ಲಿ ನಾವು ಬೆಳೆಯಬೇಕು ಎಂದು ಕರೆ ನೀಡಿದರು.

    ಮಾತು ಮುಂದುವರೆಸಿದ ಹೆಗ್ಡೆ, ಧರ್ಮ ಏನೆಂದು ತಿಳಿದುಕೊಳ್ಳುವ ಯೋಗ್ಯತೆ ಕೆಲವರಿಗಿಲ್ಲ. ಕೆಲವರು ಪೂಜೆ ಮಾಡೋದನ್ನೇ ಧರ್ಮ ಅಂದ್ಕೊಂಡಿದ್ದಾರೆ. ಯೋಚಿಸುವ ಶಕ್ತಿಯಿಲ್ಲದ ಕೋಪ್ಡಿಗಳ ತಲೆಗೆ ಇದು ಅರ್ಥನೆ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಎಡ ಪಂಕ್ತೀಯರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

    ಅವತ್ತೂ ದುರ್ಯೋಧನ ಇದ್ದ, ಇವತ್ತೂ ದುರ್ಯೋ’ಧನ’ ಇದ್ದಾನೆ ಎಂದು ಕಾಳಧನವನ್ನು ದುರ್ಯೋಧನನಿಗೆ ಹೋಲಿಸಿದರು. ಅವತ್ತು ದುಶ್ಯಾಸನ ಇದ್ದ, ಇವತ್ತು ದುಷ್ಟ ಶಾಸನ ಇದೆ. ಕೃಷ್ಣಮಠವನ್ನೇ ಕುಲಗೆಡಿಸಲು ಕೆಲವರು ಬಂದಿದ್ದರು ಎಂದು ಉಡುಪಿ ಚಲೋ ವಿರುದ್ಧ ಗುಡುಗಿದರು. ನಾಸ್ತಿಕರನ್ನು ಧೃತರಾಷ್ಟ್ರನಿಗೆ ಹೋಲಿಸಿದ ಅನಂತಕುಮಾರ್ ಹೆಗಡೆ, ದೇಶದಲ್ಲಿ ಸಮಾನ ನಾಗರೀಕ ಸಂಹಿತೆ ಜಾರಿಗೆ ಬರಬೇಕು. ನೂತನ ಪರ್ಯಾಯ ಪೀಠ ಅಲಂಕರಿಸಿರುವ ಪಲಿಮಾರು ಸ್ವಾಮೀಜಿ ಈ ಬಗ್ಗೆ ಸಂಕಲ್ಪ ಮಾಡಿದ್ದಾರೆ ಎಂದರು.

    ಸ್ವಾಮೀಜಿ ಆದೇಶ ಇದ್ದಂತೆ. ಎಷ್ಟೇ ಅಡ್ಡಿ ಆತಂಕ ಅಡೆ ತಡೆ ಬಂದರೂ ನಾನು ಹೆದರುವುದಿಲ್ಲ. ಗುರುವಿನ ಸಂಕಲ್ಪ ತಲೆಮೇಲೆ ಹೊತ್ತು ಕೆಲಸ ಮಾಡುತ್ತೇನೆ ಎಂದರು.

  • ಉಡುಪಿಯಲ್ಲಿ ಪರ್ಯಾಯ ಸಂಭ್ರಮ- ಪಲಿಮಾರು ಶ್ರೀಗಳ 2ನೇ ಪರ್ಯಾಯ ಶುರು

    ಉಡುಪಿಯಲ್ಲಿ ಪರ್ಯಾಯ ಸಂಭ್ರಮ- ಪಲಿಮಾರು ಶ್ರೀಗಳ 2ನೇ ಪರ್ಯಾಯ ಶುರು

    ಉಡುಪಿ: ವಿದ್ಯಾಧೀಶ ತೀರ್ಥ ಸ್ವಾಮೀಜಿ ಕೃಷ್ಣ ಮಠದ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ 2ನೇ ಪರ್ಯಾಯ ಆರಂಭಿಸಿದ್ದಾರೆ.

    ಪಲಿಮಾರು ಪರ್ಯಾಯ ಉತ್ಸವದಲ್ಲಿ ಭಕ್ತಿ-ಭಾವ, ಅಭಿಮಾನ ಮನೆ ಮಾಡಿತು. ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಮಾಡಿದ ಶ್ರೀಗಳು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಾಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕೃಷ್ಣ ಮಠ ಪ್ರವೇಶಿಸಿದ ಅವರು ಅಕ್ಷಯ ಪಾತ್ರೆಯನ್ನು ಸ್ವೀಕರಿಸಿ ಸರ್ವಜ್ಞ ಪೀಠವನ್ನು ಏರಿದರು. ಈ ಮೂಲಕ ದ್ವಿತೀಯ ಪರ್ಯಾಯ ಆರಂಭವಾಯಿತು. ಅದ್ಧೂರಿ ಸಮಾರಂಭಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಅಲ್ಲದೇ ಸಂಪ್ರದಾಯದಂತೆ ಕಾಪುವಿನ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಜೋಡುಕಟ್ಟೆಗೆ ಬಂದ ಪಲಿಮಾರು ಮಠಾಧೀಶರಿಗೆ ಭವ್ಯ ಸ್ವಾಗತ ಕೋರಲಾಯಿತು.

    ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ವೈಭವದ ಮೆರವಣಿಗೆ ರಥಬೀದಿಯಲ್ಲಿ ಸಾಗಿತು. ಮೆರವಣಿಗೆಯಲ್ಲಿ ಅಷ್ಟಮಠಾಧೀಶರು ಭಾಗಿಯಾದ್ರು. ಎರಡು ವರ್ಷಗಳ ಪರ್ಯಾಯದ ಅವಧಿಯಲ್ಲಿ ನಿರಂತರವಾಗಿ ನಡೆಯುವ ಅಖಂಡ ಭಜನೋತ್ಸವಕ್ಕೆ ಅವರು ಚಾಲನೆ ನೀಡಿದರು. ಜೊತೆಗೆ ಎರಡು ವರ್ಷಗಳ ಕಾಲ ಕಡೆಗೋಲು ಕೃಷ್ಣನ ಪೂಜಾ ಕೈಂಕರ್ಯವನ್ನು ಸ್ವಾಮೀಜಿ ನಿಭಾಯಿಸಲಿದ್ದಾರೆ. ಒಟ್ಟಿನಲ್ಲಿ ಪರ್ಯಾಯವನ್ನು ಜನರು ಹಬ್ಬದಂತೆ ಆಚರಿಸಿದರು.

    ಈ ಬಾರಿಯ ಪರ್ಯಾಯ ಕಾರ್ಯಕ್ರಮ ಹಿಂದೆಂದಿಗಿಂತಲೂ ವೈಭವದಿಂದ ನಡೆಯಿತು. ವಿದ್ಯುತ್ ಅಲಂಕರದಿಂದ ಉಡುಪಿ ನಗರಿ ಕಂಗೊಳಿಸಿದ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿತು. ನಗರದ ಜೋಡುಕಟ್ಟೆಯಲ್ಲಿ 3.15 ರ ಸುಮಾರಿಗೆ ಅಷ್ಟಮಠಾಧೀಶರ ಸಂಗಮವಾಯಿತು. ಪಲಿಮಾರು ಸ್ವಾಮಿಗಳ ಎರಡನೇ ಪರ್ಯಾಯ ಮಹೋತ್ಸವ ಆರಂಭಕ್ಕೆ ಮುನ್ನ ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಕೆ ಮಾಡಲಾಯ್ತು. ಪಲಿಮಾರು, ಕೃಷ್ಣಾಪುರ, ಶಿರೂರು, ಕಾಣಿಯೂರು, ಸೋದೆ, ಅದಮಾರುಕಿರಿಯ ಸ್ವಾಮೀಜಿ ಪರ್ಯಾಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ರಾಷ್ಟ್ರದ ವಿವಿಧೆಡೆಯಿಂದ ಬಂದ ಸಾಂಸ್ಕೃತಿಕ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಜೋಡುಕಟ್ಟೆಯಲ್ಲಿ ಕುಳಿತು ಅಷ್ಟಮಠಾಧೀಶರು ಮೆರವಣಿಗೆ ವೀಕ್ಷಣೆ ಮಾಡಿದರು. ಜೋಡು ಕಟ್ಟೆಯಿಂದ ರಾಜ ಮಾರ್ಗದಲ್ಲಿ ಮೆರವಣಿಗೆ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದರು.

    ತಟ್ಟಿರಾಯ, ಬಿರುದಾವಳಿಗಳು, ಛತ್ರ, ಚಾಮರ, ಕೊಂಬು ಕಹಳೆ, ಚಂಡೆ, ನಾಸಿಕದ ಬ್ಯಾಂಡ್, ಭಜನಾ ತಂಡಗಳು, ಬೆಂಕಿಯ ಚೆಂಡು, ಕವಾಯತು, ವೀರಗಾಸೆ, ಕುಡುಬಿ ನೃತ್ಯ, ಪಟ್ಟದ ಕುಣಿತ ಸಹಿತ ಹತ್ತಾರು ಜನಪದ ತಂಡಗಳು, ಕೀಲುಕುದುರೆ, ಬೇತಾಳ ಡೊಳ್ಳುಕುಣಿತ, ಗೊಂಬೆ ಕುಣಿತ, ಕರಗ ಗೊಂಬೆ, ಹುಲಿ ವೇಷ ಕುಣಿತ ಎಲ್ಲರನ್ನು ಸೆಳೆಯಿತು. ಯಕ್ಷಗಾನ ತಂಡ, ಕೇರಳ ಚೆಂಡೆ, ಪೂಜಾ ಕುಣಿತ, ಮಹಿಷಾಸುರ ಟ್ಯಾಬ್ಲೋ, ದೇವಿ, ಮಧ್ವಾಚಾರ್ಯರು, ವಾದಿರಾಜ ಸ್ವಾಮೀಜಿ, ಉಡುಪಿ ಕೃಷ್ಣನ ಟ್ಯಾಬ್ಲೋ ಮೆರವಣಿಗೆಯಲ್ಲಿದ್ದವು.

    ಮೂವರು ಟ್ಯಾಬ್ಲೋ ಪಲ್ಲಕ್ಕಿಯಲ್ಲಿ- ಇಬ್ಬರು ಸಾಂಪ್ರದಾಯಿಕ ಪಲ್ಲಕ್ಕಿಯಲ್ಲಿ ಪರ್ಯಾಯ ಮಹೋತ್ಸವದ ಸ್ವಾಮೀಜಿಗಳ ಪಲ್ಲಕ್ಕಿ ಮೆರವಣಿಗೆ ಮೂರು ರೀತಿಯ ಸಂಪ್ರದಾಯಗಳಿಗೆ ಸಾಕ್ಷಿಯಾಯ್ತು. ಟ್ಯಾಬ್ಲೋ ಮೇಲೆ ಪಲ್ಲಕ್ಕಿಯೇರಿ ಮುಂದಿನ ಪರ್ಯಾಯ ಪೀಠಾಧಿಪತಿ ಪಲಿಮಾರುಶ್ರೀ ಬಂದರು. ಒಟ್ಟು ಮೂರು ವಿಧದ ಪಲ್ಲಕ್ಕಿಯಲ್ಲಿ ಸ್ವಾಮೀಜಿಗಳ ಮೆರವಣಿಗೆ ನಡೆಯಿತು.

    ಪಲ್ಲಕ್ಕಿಯನ್ನು ಟ್ಯಾಬ್ಲೋದಲ್ಲಿಟ್ಟು ಹೊರಟ ಪಲಿಮಾರು ಸ್ವಾಮೀಜಿಯನ್ನು ಕೃಷ್ಣಾಪುರಶ್ರೀ, ಕಾಣಿಯೂರು ಸ್ವಾಮೀಜಿ ಟ್ಯಾಬ್ಲೋ ಪಲ್ಲಕ್ಕಿಯ ಮೂಲಕವೇ ಹಿಂಬಾಲಿಸಿದರು. ಆದ್ರೆ ಶೀರೂರು ಸ್ವಾಮೀಜಿ ವಿಭಿನ್ನತೆ ಪ್ರದರ್ಶನ ಮಾಡಿದ್ರು. ಮೆರವಣಿಗೆಯಲ್ಲಿ ಪಲ್ಲಕ್ಕಿಯಲ್ಲಿ ಗಣಪತಿ ಮೂರ್ತಿಯಿಟ್ಟ ಶೀರೂರುಶ್ರೀ, ತಾನು ಟ್ಯಾಬ್ಲೋದಲ್ಲಿ ಸಾಗಿದರು. ಶೀರೂರು ಸ್ವಾಮೀಜಿ ಪೇಟ ತೊಟ್ಟು ಪುಟ್ಟ ಟ್ಯಾಬ್ಲೋದಲ್ಲಿ ಕುಳಿತು ಭಕ್ತರ ಗಮನ ಸೆಳೆದರು.

    ಸೋದೆ ಸ್ವಾಮೀಜಿ ಮತ್ತು ಅದಮಾರು ಸ್ವಾಮೀಜಿ ಮಾನವ ಹೊರುವ ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿದರು. ಸೋದೆ ವಿಶ್ವವಲ್ಲಭ ಸ್ವಾಮೀಜಿ ಮತ್ತು ಅದಮಾರು ಕಿರಿಯಶ್ರೀ ಈಶಪ್ರಿಯರು ಸಾಂಪ್ರದಾಯಿಕತೆ ಕಾಪಾಡಿಕೊಂಡರು. ಪಲ್ಲಕ್ಕಿಯನ್ನು ಮಾನವರು ಹೊತ್ತು ಸಾಗಿದರು. ಸಾಂಪ್ರದಾಯಿಕ ಪಲ್ಲಕ್ಕಿಯಲ್ಲಿ ಸ್ವಾಮೀಜಿಗಳನ್ನು ಹೊರುವ ಪದ್ಧತಿ ನಡೆದುಕೊಂಡು ಬರುತ್ತಿದೆ. ಪಲ್ಲಕ್ಕಿಯಲ್ಲಿ ಇಬ್ಬರು ಸ್ವಾಮೀಜಿ ಸಾಗಿ ಸಂಪ್ರದಾಯ ಮುಂದುವರೆಸಿದರು.

    ಟ್ಯಾಬ್ಲೋ ಪಲ್ಲಕ್ಕಿಯ ಸಲಹೆ ಎರಡು ವರ್ಷದ ಹಿಂದೆ ಪೇಜಾವರಶ್ರೀ ನೀಡಿದ್ದರು. ಟ್ಯಾಬ್ಲೋ ಮೇಲೆ ಪಲ್ಲಕ್ಕಿಯಿಟ್ಟು ಮಾನವರು ಹೊರುವ ಸಂಪ್ರದಾಯ ನಿಲ್ಲಿಸೋಣ ಅಂತ ಹೇಳಿ ಕಳೆದ ಪರ್ಯಾಯದಲ್ಲಿ ಬದಲಾವಣೆ ತಂದಿದ್ದರು. ಪೇಜಾವರ ಸಲಹೆಯನ್ನು ನಾಲ್ವರು ಸ್ವಾಮೀಜಿ ಒಪ್ಪಿದ್ದರು, ಇಬ್ಬರು ಒಪ್ಪಿಲ್ಲ. ಒಬ್ಬರು ಎರಡೂ ಬೇಡವೆಂದು ಪಲ್ಲಕ್ಕಿಯಲ್ಲಿ ದೇವರನ್ನು ಇಟ್ಟು, ತಾನು ಟ್ಯಾಬ್ಲೋದಲ್ಲಿ ಬಂದಿದ್ದಾರೆ.

  • ಗೋಮಾಂಸ ಸೇವನೆ ಮೂಲಕ ಕ್ರೌರ್ಯ ಮೆರೆದಿದ್ದಾರೆ: ಪಲಿಮಾರು ಶ್ರೀ ಕಿಡಿ

    ಗೋಮಾಂಸ ಸೇವನೆ ಮೂಲಕ ಕ್ರೌರ್ಯ ಮೆರೆದಿದ್ದಾರೆ: ಪಲಿಮಾರು ಶ್ರೀ ಕಿಡಿ

    – ಉಡುಪಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದು ತಪ್ಪಲ್ಲ

    ರಾಯಚೂರು: ಮೈಸೂರಿನಲ್ಲಿ ಸಾಹಿತಿ ಭಗವಾನ್ ಮತ್ತಿತರರು ಗೋಮಾಂಸ ಸೇವಿಸಿರುವುದು ಮುಸ್ಲಿಂ ಸಮಾಜದ ಮೇಲಿನ ಪ್ರೀತಿಯಿಂದಲ್ಲ ಹಿಂದೂಗಳ ಮೇಲಿನ ದ್ವೇಷದಿಂದ ಅಂತಾ ಪಲಿಮಾರು ಮಠದ ಪೀಠಾಧಿಪತಿ ವಿದ್ಯಾಧೀಶ ತೀರ್ಥ ಶ್ರೀಗಳು ಕಿಡಿಕಾರಿದ್ದಾರೆ.

    ಇದನ್ನೂಓದಿ: ಅನುಮತಿಯಿಲ್ಲದೇ ಸರ್ಕಾರಿ ಸಭಾಂಗಣದಲ್ಲಿ ಗೋಮಾಂಸ ಸೇವನೆ- ನೊಟೀಸ್ ಜಾರಿಗೆ ಡಿಸಿ ನಿರ್ಧಾರ

     

    ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಇದು ರಾಜಕೀಯ ಅಷ್ಟೇ. ಗೋಮಾಂಸ ಆದ್ರೇನೂ ಮನುಷ್ಯ ಮಾಂಸವಾದ್ರೇನೂ ಎರಡೂ ಕ್ರೌರ್ಯ ಎಂದಿದ್ದಾರೆ.

    ಇದನ್ನೂಓದಿ: ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್

    ಪೇಜಾವರ ಶ್ರೀಗಳು ಇಫ್ತಾರ್ ಕೂಟ ಆಯೋಜಿಸಿದ್ದನ್ನ ಸಮರ್ಥಿಸಿಕೊಂಡ ಶ್ರೀಗಳು, ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಕೂಟ ಆಯೋಜಿಸಿದ್ದಾರೆ ತಪ್ಪೇನಿಲ್ಲಾ ಅಂತಾ ತಿಳಿಸಿದ್ರು. ಈ ಕಾರಣಕ್ಕೆ ಪ್ರಮೋದ್ ಮುತಾಲಿಕ್ ಪೇಜಾವರ ಶ್ರೀಗಳ ವಿರುದ್ಧ ಹೋರಾಟ ನಡೆಸುವುದು ಸರಿಯಲ್ಲ ಎಂದರು. ಮುಂದೆ ತಮ್ಮ ಪರ್ಯಾಯ ಕಾರ್ಯಕ್ರಮದಲ್ಲಿ ಎಲ್ಲಾ ಜಾತಿ ಜನಾಂಗದವರು ಪಾಲ್ಗೊಳ್ಳಲಿದ್ದಾರೆ ಅಂತಾ ಹೇಳಿದ್ದಾರೆ.

    ಇದನ್ನೂ ಓದಿ: ಕೃಷ್ಣಮಠದಲ್ಲಿ ಇಫ್ತಾರ್ ಕೂಟದಿಂದ ಹಿಂದೂ ಸಮಾಜಕ್ಕೆ ಅವಮಾನವಾಗಿದೆ: ಮುತಾಲಿಕ್

    ಇದನ್ನೂ ಓದಿ: ಗೋಹತ್ಯೆ ಪರ ಇರೋರಿಗೆ ಡೈಲಾಗ್ ನಲ್ಲೇ ಟಾಂಗ್ ಕೊಟ್ಟ ನಟ ಜಗ್ಗೇಶ್