Tag: Padmaavat

  • ಆಸ್ಕರ್ ರೇಸ್‍ಗೆ ಎಂಟ್ರಿ ಕೊಟ್ಟ ಗಲ್ಲಿಬಾಯ್!

    ಆಸ್ಕರ್ ರೇಸ್‍ಗೆ ಎಂಟ್ರಿ ಕೊಟ್ಟ ಗಲ್ಲಿಬಾಯ್!

    ಬೆಂಗಳೂರು: ಪದ್ಮಾವತ್ ಖ್ಯಾತಿಯ ನಟ ರಣ್‌ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಚಿತ್ರ ಗಲ್ಲಿ ಬಾಯ್. ಇದೇ ಫೆಬ್ರವರಿ ಹದಿನಾಲಕ್ಕರಂದು ಭಾರತದಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ತಳಮಟ್ಟದಿಂದ ಮೇಲೆದ್ದು ಬಂದು ರಾಪ್ ಸಿಂಗಿಂಗ್‍ನಲ್ಲಿ ಸ್ಟಾರ್ ಆದ ಹುಡುಗನೊಬ್ಬನ ಮನಮಿಡಿಯುವ ಕಥೆಯೊಂದಿಗೆ ದೊಡ್ಡ ಮಟ್ಟದಲ್ಲಿಯೇ ಸಂಚಲನ ಸೃಷ್ಟಿಸಿತ್ತು. ಧಾರಾವಿಯ ಸ್ಲಂ ಪ್ರದೇಶದಿಂದ ಹುಟ್ಟಿಕೊಂಡಿದ್ದ ಈ ಕಥೆಯ ಆಳ, ವಿಸ್ತಾರ ಕಂಡು ಕೇವಲ ಭಾರತೀಯ ಸಿನಿಮಾ ಪ್ರೇಮಿಗಳು ಮಾತ್ರವಲ್ಲದೇ ವಿಶ್ವಾದ್ಯಂತ ಸಿನಿಮಾಸಕ್ತರು ಬೆರಗಾಗಿದ್ದರು. ಇಂಥಾ ಅಪರೂಪದ ಕಥೆಯ ಚಿತ್ರಕ್ಕೀಗ ಸರಿಯಾದ ಸಮ್ಮಾನ ಸಿಗುವ ಕ್ಷಣಗಳು ಹತ್ತಿರಾಗಿವೆ. ಈ ಚಿತ್ರ 2020ರ ಸಾಲಿನ ಆಸ್ಕರ್ ಪ್ರಶಸ್ತಿ ರೇಸಿಗೆ ಎಂಟ್ರಿ ಕೊಟ್ಟಿದೆ.

    ಈಗಾಗಲೇ ಭಾರತದಿಂದ ಆಸ್ಕರ್ ಪ್ರಶಸ್ತಿಗಾಗಿ ಕಳುಹಿಸಲಾಗೋ ಚಿತ್ರಗಳ ಪಟ್ಟಿ ಅಂತಿಮ ಹಂತ ತಲುಪಿಕೊಂಡಿದೆ. ಭಾರತದ ಬೇರೆ ಬೇರೆ ಭಾಷೆಗಳ ಹಲವಾರು ಚಿತ್ರಗಳು ಈ ಲಿಸ್ಟಿಗೆ ಸೇರಿಕೊಳ್ಳುವ ಸ್ಪರ್ಧೆಯಲ್ಲಿದ್ದವು. ಅದರಲ್ಲಿಯೂ ಹಿಂದಿಯಲ್ಲಿ ಮಾತ್ರ ಈ ಸಾಲಿನಲ್ಲಿ ಹೆಚ್ಚು ಚಿತ್ರಗಳಿದ್ದವು. ಅದರಲ್ಲಿ ಕಡೆಗೂ ಗಲ್ಲಿ ಬಾಯ್, ಉರಿ, ಬದ್ಲಾ, ಆರ್ಟಿಕಲ್ 15 ಮುಂತಾದ ಚಿತ್ರಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಈ ಎಲ್ಲ ಚಿತ್ರಗಳೂ ಕೂಡಾ ವಿಭಿನ್ನ ಕಥಾನಕದ ಮೂಲಕ ವಿಶ್ವಾದ್ಯಂತ ಗಮನ ಸೆಳೆದಂಥವುಗಳೇ. ಆದರೆ ಗಲ್ಲಿಬಾಯ್ ಚಿತ್ರದ ಕಥೆ, ಅದರ ಪ್ರಧಾನ ಪಾತ್ರಕ್ಕಾಗಿ ರಣ್‍ವೀರ್ ಸಿಂಗ್ ತಯಾರಾಗಿದ್ದ ರೀತಿ ಮಾತ್ರ ಸಲೀಸಾಗಿ ಯಾರೂ ಬೀಟ್ ಮಾಡಲು ಸಾಧ್ಯವಾಗದಿರುವಂಥಾದ್ದು.

    ಧಾರಾವಿಯ ಸ್ಲಂ ಪ್ರದೇಶವೊಂದರಿಂದ ಹೆತ್ತವರ ಆಸೆ ಆಕಾಂಕ್ಷೆಗಳನ್ನೆಲ್ಲ ಮೀರಿಕೊಂಡು ರಾಪ್ ಲೋಕದ ಕನಸು ಕಟ್ಟಿಕೊಂಡು ಹೊರಡೋ ಹುಡುಗನೊಬ್ಬನ ಕಥೆ ಗಲ್ಲಿ ಬಾಯ್ ಚಿತ್ರದ್ದು. ಇಲ್ಲಿ ರಣ್‍ವೀರ್ ಸಿಂಗ್ ಗಲ್ಲಿ ಬಾಯ್ ಆಗಿ ನಟಿಸಿದರೆ, ಆಲಿಯಾ ಭಟ್ ವೈದ್ಯಕೀಯ ವಿದ್ಯಾರ್ಥಿನಿಯಾಗಿ ಎಲ್ಲರನ್ನೂ ಕಾಡುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಜೋಯಲ್ ಅಖ್ತರ್ ಅದೆಷ್ಟೋ ವರ್ಷಗಳ ಹಿಂದೆ ಈ ಕಥಾ ಎಳೆಯನ್ನು ಎದೆಗಿಳಿಸಿಕೊಂಡು, ಧಾರಾವಿ ಸ್ಲಂ ಪ್ರದೇಶದ ಪ್ರತಿಭಾವಂತರ ಯಶೋಗಾಥೆಗಳನ್ನು ಕಾಡಿಸಿಕೊಂಡು ಈ ಕಥೆ ಹೊಸೆದಿದ್ದಾರೆ. ಅದನ್ನು ಸಮರ್ಥವಾಗಿಯೇ ನಿರ್ದೇಶನ ಮಾಡಿದ್ದಾರೆ. ರಿತೇಶ್ ನಿಧ್ವಾನಿ ಮತ್ತು ಫರ್ಹಾ ಅಖ್ತರ್ ಗಲ್ಲಿ ಬಾಯ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಈ ಚಿತ್ರದಲ್ಲಿ ರಣ್‍ವೀರ್ ಸಿಂಗ್ ಗಲ್ಲಿ ಬಾಯ್ ಅವತಾರದಲ್ಲಿ ನಟಿಸಿರೋ ಬಗೆ, ಅದಕ್ಕಾಗಿ ಅವರು ಮಾಡಿಕೊಂಡಿರೋ ದೈಹಿಕ ರೂಪಾಂತರಗಳನ್ನು ಕಂಡು ಭಾರತೀಯ ಚಿತ್ರಪ್ರೇಮಿಗಳೆಲ್ಲ ನಿಬ್ಬೆರಗಾಗಿದ್ದರು. ಅದಾಗ ತಾನೇ ಪದ್ಮಾವತ್ ಚಿತ್ರಕ್ಕೆ ಕಟ್ಟುಮಸ್ತಾಗಿ ದೇಹವನ್ನು ಹುರಿಗೊಳಿಸಿಕೊಂಡಿದ್ದ ರಣ್‌ವೀರ್, ಅದಾಗಿ ತಿಂಗಳು ಕಳೆಯೋದರೊಳಗೆ ಪೀಚು ಪೀಚಾದ ಹುಡುಗನಂತಾಗಿ ದೇಹ ದಂಡಿಸಿಕೊಂಡಿದ್ದರು. ಇದೊಂದು ಸ್ಯಾಂಪಲ್ ಅಷ್ಟೇ. ಈ ಚಿತ್ರದ ಹಿಂದೆ ಇಂಥಾ ಅಗಾಧ ಪರಿಶ್ರಮಗಳಿವೆ. ಇದು ಮೂಡಿ ಬಂದಿರೋ ರೀತಿಯೇ ಆಸ್ಕರ್ ಗರಿ ಮತ್ತೆ ಭಾರತಕ್ಕೆ ದಕ್ಕುವ ಭರವಸೆಯನ್ನು ಗಟ್ಟಿಗೊಳಿಸಿದೆ.

  • ಪದ್ಮಾವತ್ ವಿರುದ್ಧದ ಪ್ರತಿಭಟನೆಯನ್ನು ಹಿಂಪಡೆದ ಕರ್ಣಿ ಸೇನಾ

    ಪದ್ಮಾವತ್ ವಿರುದ್ಧದ ಪ್ರತಿಭಟನೆಯನ್ನು ಹಿಂಪಡೆದ ಕರ್ಣಿ ಸೇನಾ

    ಮುಂಬೈ: ಪದ್ಮಾವತ್ ಸಿನಿಮಾದ ವಿರುದ್ಧದ ನಮ್ಮ ಪ್ರತಿಭಟನೆಯನ್ನು ಹಿಂಪಡೆಯಲಾಗುತ್ತಿದೆ ಎಂದು ಶ್ರೀ ರಜಪೂತ ಕರ್ಣಿ ಸೇನಾ ತನ್ನ ನಿರ್ಧಾರವನ್ನು ಶುಕ್ರವಾರ ತಿಳಿಸಿದೆ.

    ಮುಂಬೈನ ಶ್ರೀ ರಾಷ್ಟ್ರೀಯ ರಜಪೂತ ಕರ್ಣಿ ಸೇನಾದ ನಾಯಕ ಯೋಗೇಂದ್ರ ಸಿಂಗ್ ಖಟರ್ ಈ ಬಗ್ಗ ನಿರ್ಣಯ ತೆಗೆದುಕೊಂಡಿದ್ದಾರೆ. ಯೋಗೇಂದ್ರ ಸಿಂಗ್ ತಮ್ಮ ನಿರ್ಧಾರವನ್ನು ಶ್ರೀ ರಾಷ್ಟ್ರೀಯ ರಜಪೂತ ಕರ್ಣಿ ಸೇನಾದ ಅಧ್ಯಕ್ಷ ಸುಖ್ ದೇವ್ ಸಿಂಗ್ ಗೋಮಾಡಿ ಅವರಿಗೆ ರವಾನಿಸಿದ್ದಾರೆ. ಶುಕ್ರವಾರದಂದು ಮುಂಬೈನಲ್ಲಿ ಕರ್ಣಿ ಸೇನಾದ ಕೆಲವು ಸದಸ್ಯರು ಪದ್ಮಾವತ್ ಸಿನಿಮಾ ವೀಕ್ಷಣೆ ಮಾಡಿದ್ದು, ಚಿತ್ರದ ವಿವಾದಗಳಿಂದ ಮುಕ್ತವಾಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬ ರಜಪೂತ ವ್ಯಕ್ತಿ ಹೆಮ್ಮೆ ಪಡುತ್ತಾರೆ ಎಂದು ಹೇಳಿದ್ದಾರೆ.

    ಚಿತ್ರ ಯಾವುದೇ ಆಕ್ಷೇಪಾರ್ಹ ದೃಶ್ಯಗಳನ್ನು ಹೊಂದಿಲ್ಲ. ದೆಹಲಿ ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿ ಮತ್ತು ರಾಣಿ ಪದ್ಮಿನಿ ದೃಶ್ಯಗಳು ಎಲ್ಲಿಯೂ ರಜಪೂತ ಸಮುದಾಯದ ಜನರ ಭಾವನೆಗಳಿಗೆ ನೋವುಂಟು ಮಾಡುವುದಿಲ್ಲ. ಪ್ರತಿಭಟನೆಯನ್ನು ಹಿಂಪಡೆದುಕೊಳ್ಳುವ ಪತ್ರವನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ಪತ್ರ ರಾಜಸ್ಥಾನ, ಮಧ್ಯ ಪ್ರದೇಶ, ಗುಜರಾತ್, ಹರಿಯಾಣ ಮತ್ತು ದೇಶದ ಚಿತ್ರಮಂದಿರಗಳ ಮಾಲೀಕರಿಗೆ ಸಿನಿಮಾ ರಿಲೀಸ್ ಮಾಡಲು ಒಪ್ಪಿಗೆ ನೀಡಿದಂತಾಗುತ್ತದೆ ಎಂದು ಯೋಗೇಂದ್ರ ಸಿಂಗ್ ತಿಳಿಸಿದ್ದಾರೆ.

    ಕರ್ಣಿ ಸೇನಾ ಈ ಹಿಂದೆ ಸುಪ್ರೀಂ ಕೋರ್ಟ್ ಗೆ ಸಿನಿಮಾವನ್ನು ಬ್ಯಾನ್ ಮಾಡುವಂತೆ ಅರ್ಜಿ ಸಲ್ಲಿಸಿತ್ತು. ಆದ್ರೆ ಸುಪ್ರೀಂ ಕೋರ್ಟ್ ಕರ್ಣಿ ಸೇನಾದ ಅರ್ಜಿಯನ್ನ ರದ್ದುಗೊಳಿಸಿ, ಪದ್ಮಾವತ್ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಕರ್ಣಿ ಸೇನಾ ಮಾತ್ರ ಚಿತ್ರ ಪ್ರದರ್ಶನಗೊಳ್ಳುವ ಥಿಯೇಟರ್ ಗೆ ಬೆಂಕಿ ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದರು. ಕರ್ಣಿ ಸೇನಾದ ಬೆದರಿಕೆ ಹೆದರಿದ ಕೆಲವು ಚಿತ್ರಮಂದಿರಗಳ ಮಾಲೀಕರು ‘ಪದ್ಮಾವತ್’ ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದರು. ಕರ್ಣಿ ಸೇನಾ ಪ್ರತಿಭಟನೆಯನ್ನು ಹಿಂದೆ ಪಡೆದಿರುವದರಿಂದ ಚಿತ್ರಮಂದಿರಗಳ ಮಾಲೀಕರು ನಿರ್ಭಯವಾಗಿ `ಪದ್ಮಾವತ್’ ಸಿನಿಮಾ ರಿಲೀಸ್ ಮಾಡಬಹುದಾಗಿದೆ.

    ಪದ್ಮಾವತ್ ಸಿನಿಮಾ ಜನವರಿ 25ರಂದು ಬಿಡುಗೊಡೆ ಆಗಿದ್ದು, ಈಗಾಗಲೇ 200 ಕೋಟಿ ಅಧಿಕ ಹಣವನ್ನು ತನ್ನ ಗಲ್ಲಾಪೆಟ್ಟಿಗೆಯಲ್ಲಿ ತುಂಬಿಸಿಕೊಂಡಿದೆ. ದೇಶದ ಕೆಲವು ರಾಜ್ಯಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಭದ್ರತೆ ನೀಡಲಾಗಿತ್ತು. 2017 ಡಿಸೆಂಬರ್ 01 ರಂದು ಪದ್ಮಾವತ್ ಸಿನಿಮಾ ಬಿಡುಗೊಡೆ ಆಗಲಿದೆ ಎಂದು ಈ ಹಿಂದೆ ಚಿತ್ರತಂಡ ಹೇಳಿಕೊಂಡಿತ್ತು. ಚಿತ್ರ ಸೆಟ್ಟೇರಿದಾಗಿನಿಂದಲೂ ತನ್ನ ವಿರೋಧ ಮಾಡುತ್ತಿದ್ದ ಕರ್ಣಿ ಸೇನಾ ದೇಶಾದ್ಯಂತ ಪ್ರತಿಭಟನೆಯನ್ನು ತೀವ್ರಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸೆನ್ಸಾರ್ ಬೋರ್ಡ್ ಚಿತ್ರವನ್ನು ಕೂಲಂಕುಷವಾಗಿ ಪರಿಶೀಲಿಸಿ ಸಿನಿಮಾದ ಟೈಟಲ್ ಸೇರಿದಂತೆ ಕೆಲವು ಬದಲಾವಣೆ ಮಾಡುವಂತೆ ಚಿತ್ರತಂಡಕ್ಕೆ ಸೂಚಿಸಿತ್ತು. ಸೆನ್ಸಾರ್ ಮಂಡಳಿಯ ನಿರ್ದೇಶನದಂತೆ ಚಿತ್ರತಂಡ ಸಿನಿಮಾದಲ್ಲಿ ಮಾರ್ಪಡು ಮಾಡಿಕೊಂಡು ಬಿಡುಗೊಡೆ ಮಾಡಿದೆ.