Tag: Padarayanapura Incident

  • ಗೂಂಡಾ ಕಾಯ್ದೆ ಹಾಕಿ ಜಮೀರ್ ಅಹ್ಮದ್ ಬಂಧಿಸಿ: ಪ್ರತಾಪ್ ಸಿಂಹ

    ಗೂಂಡಾ ಕಾಯ್ದೆ ಹಾಕಿ ಜಮೀರ್ ಅಹ್ಮದ್ ಬಂಧಿಸಿ: ಪ್ರತಾಪ್ ಸಿಂಹ

    ಮೈಸೂರು: ಪೊಲೀಸರ ಮೇಲೆ ಹಲ್ಲೆ ಮಾಡಿದವರು ಅನಕ್ಷರಸ್ಥರು ಎಂದು ಕಿಡಿಗೇಡಿಗಳನ್ನು ಸಮರ್ಥಿಸಿಕೊಂಡಿದ್ದ ಶಾಸಕ ಜಮೀರ್ ಅಹಮದ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಹರಿಹಾಯ್ದಿದ್ದು, ಗೂಂಡಾ ಕಾಯ್ದೆ ಹಾಕಿ ಜಮೀರ್ ಅಹಮದ್ ಅವರನ್ನು ಬಂಧಿಸಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪಾದರಾಯನಪುರದಲ್ಲಿ ನಡೆದ ಇಡೀ ಘಟನೆಗೆ ಜಮೀರ್ ಅಹಮದ್ ನೇರ ಕಾರಣ. ಹೀಗಾಗಿ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಥವಾ ಗೂಂಡಾ ಕಾಯ್ದೆ ಹಾಕಿ ಬಂಧಿಸಬೇಕು. ಶಾಸಕ ಜಮೀರ್ ಅಹಮದ್ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರ ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿತ್ತು. ಹೀಗಾಗಿ ರಾಷ್ಟ್ರೀಯ ಭದ್ರತಾ ಕಾಯ್ದೆ ಅಥವಾ ಗೂಂಡಾ ಕಾಯ್ದೆಯಡಿ ಜಮೀರ್ ಅಹ್ಮದ್ ಅವರನ್ನು ಬಂಧಿಸಬೇಕು. ಈ ರೀತಿ ವರ್ತಿಸುವ ಎಲ್ಲ ಜನಪ್ರತಿನಿಧಿಗಳಿಗೂ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.

    ಶಾಸಕರ, ಸಂಸದರ ಅಪ್ಪಣೆ ಪಡೆದು ಹೋಗಲು ಜನ ಆ ಜಾಗವನ್ನು ಅವರಿಗೆ ಬರೆದುಕೊಟ್ಟಿದ್ದಾರಾ, ಆ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಾರಷ್ಟೆ, ಯಾರಿಗೂ ಬರೆದುಕೊಟ್ಟಿಲ್ಲ. ಆದರೆ ಇದೀಗ ಶಾಸಕರು, ಸಂಸದರು ಇದು ನನ್ನ ಕ್ಷೇತ್ರ, ನನ್ನ ಕ್ಷೇತ್ರದಲ್ಲಿ ಏನೇ ನಡೆಯಬೇಕಿದ್ದರೂ ನನ್ನನ್ನು ಕೇಳಿಯೇ ಮಾಡಬೇಕು ಎನ್ನುವ ಮನಸ್ಥಿತಿ ಹೊಂದಿದ್ದಾರೆ. ಇದರಿಂದ ಅವರು ಹೊರಗೆ ಬರಬೇಕು ಎಂದರು.

    ಹಲ್ಲೆ ಮಾಡಿದವರು ಅನಕ್ಷರಸ್ಥರು ಎಂದು ಜಮೀರ್ ಹೇಳುತ್ತಾರೆ. ಸಿಎಎ, ಎನ್‍ಆರ್‍ಸಿ ಕಾಯ್ದೆ ಬಗ್ಗೆ ಮಾತಾಡುವ ಈ ಜನರನ್ನು ಅನಕ್ಷರಸ್ಥರು ಎನ್ನಲು ಆಗುತ್ತಾ ಎಂದು ಪ್ರಶ್ನಿಸಿದರು. ಅಲ್ಲದೆ ಹಲ್ಲೆ ಮಾಡಿದವರ ಮೇಲೆ ಸಾಫ್ಟ್ ಕಾರ್ನಾರ್ ತೋರುವ ಎಡಪಂಥೀಯರನ್ನು ತಬ್ಲೀಘಿಗಳಿರುವ ಏರಿಯಾಕ್ಕೆ ಕಳಿಸಿ, ಹೋಮ್ ಕ್ವಾರಂಟೈನ್ ಆದವರ ಜೊತೆ ಇರುವುದಕ್ಕೆ ಬಿಡಿ. ಎಡಪಂಥೀಯರ ನಿಯತ್ತು ಈ ದೇಶಕ್ಕೆ ಅಲ್ಲ. ಪಕ್ಕದ ದೇಶಕ್ಕೆ ಅನ್ನೋದು ಗೊತ್ತಿದೆ ಎಂದರು.

    ಮುಖ್ಯಮಂತ್ರಿಗಳು ಯಾರೂ ಮುಸ್ಲಿಂ ಸಮುದಾಯದ ವಿರುದ್ಧ ಹೇಳಿಕೆ ನೀಡಬೇಡಿ, ಮುಸ್ಲಿಂ ಸಮುದಾಯದ ನಾಯಕರ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ್ದರು. ಮುಖ್ಯಮಂತ್ರಿಗಳು ಸದುದ್ದೇಶದಿಂದ ಈ ಮಾತು ಹೇಳಿದ್ದಾರೆ. ಆದರೆ ಜಮೀರ್ ಸೇರಿದಂತೆ ಇತರರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

  • ಪಾದರಾಯನಪುರ ಪ್ರಕರಣ, ಯು.ಪಿ ಮಾದರಿ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿ: ನಳಿನ್

    ಪಾದರಾಯನಪುರ ಪ್ರಕರಣ, ಯು.ಪಿ ಮಾದರಿ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿ: ನಳಿನ್

    – ರಾಷ್ಟ್ರದ್ರೋಹದ ಕೇಸ್ ಹಾಕಿ ಜೈಲಿಗಟ್ಟಿ

    ಮಂಗಳೂರು: ಪಾದರಾಯನಪುರದಲ್ಲಿ ಕಾನೂನು ಭಂಜಕರಿಂದ ಆದ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಮಾದರಿಯಲ್ಲಿ ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈರಸ್‍ಗೆ ಜಾತಿ, ಮತ ಇಲ್ಲ. ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲಿ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಆದರೆ ಪಾದರಾಯನಪುರದಲ್ಲಿ ಕಾನೂನು ಭಂಜಕರಿಂದ ಈ ಘಟನೆ ನಡೆದಿದ್ದು, ಇದೊಂದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ. ಈ ಕುರಿತು ಗೃಹಸಚಿವರ ಜೊತೆಗೆ ಮಾತನಾಡಿದ್ದೇನೆ. ಪಾದರಾಯನಪುರದಲ್ಲಿ ಇನ್ನು ಅಂತಹ ಘಟನೆ ನಡೆಯಬಾರದು. ಕೃತ್ಯ ಎಸಗಿದವರ ವಿರುದ್ಧ ರಾಷ್ಟ್ರದ್ರೋಹದ ಕೇಸ್ ಹಾಕಿ ಜೈಲಿಗಟ್ಟಿ ಎಂದು ಒತ್ತಾಯಿಸಿದ್ದಾರೆ.

    ಉತ್ತರ ಪ್ರದೇಶದ ಮಾದರಿಯಲ್ಲಿ ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಿ. ಸರ್ಕಾರಿ ಅಧಿಕಾರಿಗಳ ವಿರುದ್ಧ ಹೋಗಿದ್ದು ಖಂಡನೀಯ. ಘಟನೆ ಹಿಂದೆ ಯಾರೇ ಇರಲಿ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದೊಂದು ರಾಷ್ಟ್ರ ವಿರೋಧಿ ಕೃತ್ಯ ಎಂದು ಕಿಡಿಕಾರಿದ್ದಾರೆ.

    ಪಾದರಾಯನಪುರ ಪ್ರಕರಣಕ್ಕೆ ಸಂಬಂಧಿಸಿದಂತೆ 56 ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಗುಂಪು ಗುಂಪಾಗಿ ಕರ್ತವ್ಯ ನಿರತ ಪೊಲೀಸರ ಮೇಲೆ ಪಾದರಾಯನಪುರದ ಪುಂಡರು ಹಲ್ಲೆ ನಡೆಸಿದ್ದರು. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮತ್ತು ಚೆಕ್‍ಪೋಸ್ಟ್ ಧ್ವಂಸಗೊಳಿಸಿದ್ದರು. ಸ್ಥಳದಲ್ಲಿ ಕೆಲ ಪೊಲೀಸರು ಇದಿದ್ದರಿಂದ ಪುಂಡರ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆಗೆ ಮುಂದಾಗಿದ್ದರು.

    ಕೊರೊನಾ ಸೋಂಕಿತರು ಹೆಚ್ಚು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾದರಾಯನಪುರವನ್ನು ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲಾಗಿತ್ತು. ಪಾದರಾಯನಪುರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿ, ಪ್ರಮುಖ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

    ಭಾನುವಾರ ಕೊರೊನಾ ಶಂಕಿತ 58 ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ಪುಂಡರ ಜೀವ ರಕ್ಷಣೆಗೆ ಬಂದವರ ಮೇಲೆಯೇ ದಾಳಿ ನಡೆಸಿದ್ದಾರೆ. ಘಟನೆ ವಿಕೋಪ ತಿರುಗುತ್ತಿದ್ದಂತೆ ಪಾದರಾಯನಪುರಕ್ಕೆ ಪೊಲೀಸರ ನಿಯೋಗವೇ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಕರ್ತವ್ಯನಿರತ ಸಿಬ್ಬಂದಿ ಮೇಲೆ ದಾಳಿಗೆ ಯತ್ನಿಸಿದ ಸುಮಾರು 56 ಜನರನ್ನು ರಾತ್ರಿಯೇ ಪೊಲೀಸರು ಬಂಧಿಸಿ ಆಡುಗೋಡಿ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಿದ್ದಾರೆ. ಅಲ್ಲದೆ ಇಂದು ಬೆಳಗ್ಗೆ ಸಹ ಕೆಲವರನ್ನು ಬಂಧಿಸಿದ್ದಾರೆ.

    ಮುಂಜಾಗ್ರತಾ ಕ್ರಮವಾಗಿ 10 ಕೆಎಸ್‍ಆರ್ ಪಿ ತುಕಡಿ ಮತ್ತು 220 ಪೊಲೀಸರನ್ನು ಪಾದರಾಯನಪುರದಲ್ಲಿ ನಿಯೋಜನೆ ಮಾಡಲಾಗಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸೌಮೇಂದು ಮುಖರ್ಜಿ ಮುಕ್ಕಾಂ ಹೂಡಿದ್ದಾರೆ.