Tag: owner

  • ಚಿಕನ್ ಬೆಲೆ ಕುಸಿತ – 9,500 ಕೋಳಿಗಳ ಜೀವಂತ ಸಮಾಧಿ

    ಚಿಕನ್ ಬೆಲೆ ಕುಸಿತ – 9,500 ಕೋಳಿಗಳ ಜೀವಂತ ಸಮಾಧಿ

    ಕೋಲಾರ: ಕೋಳಿಗಳಿಂದ ಕೊರೊನಾ ಹರಡುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಮಾಲೀಕನೊಬ್ಬ ಸಾವಿರಾರು ಕೋಳಿಗಳನ್ನು ಜೀವಂತ ಸಮಾಧಿ ಮಾಡಿರುವಂತಹ ಘಟನೆ ಕೋಲಾರದಲ್ಲಿ ಜರುಗಿದೆ.

    ರಾಜ್ಯ ಸೇರಿದಂತೆ ದೇಶ-ವಿದೇಶಗಳಲ್ಲೂ ಇದೀಗ ಕೊರೊನಾದ್ದೇ ಸುದ್ದಿ. ಹೀಗಿರುವಾಗ ಕೋಳಿಗಳಿಂದ ಕೊರೊನಾ ಹರಡುತ್ತದೆ ಎಂಬ ವಂದತಿಗೆ ಕಂಪನಿಯವರೇ ಕೋಳಿಗಳ ಮಾರಣ ಹೋಮ ನಡೆಸಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಸರಿ ಸುಮಾರು 9,500 ಕೋಳಿಗಳ ಮಾರಣಹೋಮ ನಡೆದಿದೆ.

    ಮಾಗೊಂದಿ ಗ್ರಾಮದ ಹೇಮಂತ್ ರೆಡ್ಡಿ ಎಂಬವರಿಗೆ ಈ ಕೋಳಿ ಫಾರಂ ಸೇರಿದೆ. ಇಂದು ಬೆಳ್ಳಂಬೆಳಗ್ಗೆ ಹೇಮಂತ್ ರೆಡ್ಡಿ ಗ್ರಾಮದ ಹೊರಹೊಲಯದಲ್ಲಿ ಗುಂಡಿಯೊಂದನ್ನು ತೆಗೆಸಿ ಸಾವಿರಾರು ಕೋಳಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ.

    ವದಂತಿ ಹಬ್ಬಿಸಿದವರ ವಿರುದ್ಧ ಸಂಭಂದಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾಲೀಕನ ಒತ್ತಾಯವಾಗಿದೆ. ಕೊರೊನಾ ಭೀತಿಯಿಂದಾಗಿ ಕುಕ್ಕುಟೋದ್ಯಮಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ ಎನ್ನಲಾಗಿದೆ.

  • ಭಾರತ್ ಬಂದ್- ಟೀ ಅಂಗಡಿ ಮಾಲೀಕನ ಮೇಲೆ ಹಲ್ಲೆಗೆ ಯತ್ನ

    ಭಾರತ್ ಬಂದ್- ಟೀ ಅಂಗಡಿ ಮಾಲೀಕನ ಮೇಲೆ ಹಲ್ಲೆಗೆ ಯತ್ನ

    ಚಿಕ್ಕಬಳ್ಳಾಪುರ: ಭಾರತ್ ಬಂದ್‍ಗೆ ಕರೆ ನೀಡಿದರೂ ಟೀ ಅಂಗಡಿ ಓಪನ್ ಮಾಡಿದ್ದೀಯಾ ಎಂದು ಮಾಲೀಕನ ಮೇಲೆ ಪ್ರತಿಭಟನಾಕಾರರು ಹಲ್ಲೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಸಂಪಂಗಿ ವೃತ್ತದಲ್ಲಿನ ಎಸ್‍ಎಲ್‍ಎನ್ ಕಾಂಡಿಮೆಂಟ್ಸ್ ಶಾಪ್ ಎಂದಿನಂತೆ ಆರಂಭವಾಗಿತ್ತು. ಈ ವೇಳೆ ಅಲ್ಲಿಗೆ ಬಂದ ಸಿಪಿಐಎಂ ಮುಖಂಡ ಲಕ್ಷ್ಮೀನಾರಾಯಣ ಎಂಬಾತ ಇಂದು ಬಂದ್ ಇದೆ. ನೀನು ಯಾಕೆ ಟೀ ಅಂಗಡಿ ಓಪನ್ ಮಾಡಿದ್ದೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

    ಅಂಗಡಿ ಮಾಲೀಕ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಟೀ ಅಂಗಡಿಯಲ್ಲಿದ್ದ ಹಾಲನ್ನೇ ಕಸಿದುಕೊಂಡು ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಯೂ ನಡೆದಿದೆ. ಈ ವೇಳೆ ಅಲ್ಲಿಯೇ ಇದ್ದ ಗ್ರಾಹಕರು ಹಾಲಿನ ಕೆಟಲ್ ವಾಪಾಸ್ ಕೊಡಿಸಿದ್ದು, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

    ಬೆಳ್ಳಂಬೆಳಗ್ಗೆ ಆರಂಭವಾಗಿದ್ದ ಟೀ ಅಂಗಡಿಯನ್ನು ಬಂದ್ ಮಾಡುವಂತೆ ಅಂಗಡಿ ಮಾಲೀಕನ ಮೇಲೆ ಸಿಪಿಎಂ ಮುಖಂಡ ಒತ್ತಡ ಹೇರಿ ಬಲವಂತವಾಗಿ ಬಂದ್ ಮಾಡಿಸಿದ್ದಾರೆ.

  • ಮನೆಯಲ್ಲೇ ಸಿಕ್ಕಿ ಹಾಕಿಕೊಂಡಿದ್ದಕ್ಕೇ ಆತ್ಮಹತ್ಯೆಗೆ ಯತ್ನಿಸಿದ ಕಳ್ಳ- ಆಸ್ಪತ್ರೆಗೆ ದಾಖಲಿಸಿದ ಮಾಲೀಕ

    ಮನೆಯಲ್ಲೇ ಸಿಕ್ಕಿ ಹಾಕಿಕೊಂಡಿದ್ದಕ್ಕೇ ಆತ್ಮಹತ್ಯೆಗೆ ಯತ್ನಿಸಿದ ಕಳ್ಳ- ಆಸ್ಪತ್ರೆಗೆ ದಾಖಲಿಸಿದ ಮಾಲೀಕ

    – ಆಟೋಮೆಟಿಕ್ ಡೋರ್‍ನಿಂದ ಕಳ್ಳ ಕಂಗಾಲು
    – ಹೊರಗೆ ಬರಲಾಗದೆ ಆತ್ಮಹತ್ಯೆಗೆ ಯತ್ನ

    ಬೆಂಗಳೂರು: ಕಳ್ಳತನ ಮಾಡಲು ಹೋದ ಮನೆಯಲ್ಲೇ ಕಳ್ಳನೊಬ್ಬ ಆತ್ಮಹತ್ಯೆ ಯತ್ನಿಸಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಕಳ್ಳನನ್ನು ಮನೆ ಮಾಲೀಕರೇ ಆಸ್ಪತ್ರೆಗೆ ಸೇರಿಸಿದ ಅಪರೂಪದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ನಗರದ ವಿಭೂತಿಪುರದಲ್ಲಿ ಘಟನೆ ನಡೆದಿದ್ದು, ಹೊಸ ವರ್ಷ ದಿನ ಮನೆ ಮಂದಿಯೆಲ್ಲ ದೇವಸ್ಥಾನಕ್ಕೆ ಹೋಗಿದ್ದಾರೆ. ಇದನ್ನು ಕಂಡ ಕಳ್ಳ ಸ್ವಸ್ತಿಕ್ ಮನೆಗೆ ನುಗ್ಗಿದ್ದಾನೆ. ಕಳ್ಳ ಮನೆಯೊಳಗೆ ಎಂಟ್ರಿಯಾಗಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಬಾಗಿಲು ತಾನಾಗಿಯೇ ಲಾಕ್ ಆಗಿದೆ. ಇದು ಕಳ್ಳ ಸ್ವಸ್ತಿಕ್ ಅರಿವಿಗೆ ಬಂದಿಲ್ಲ. ಮನೆಯೆಲ್ಲ ಜಾಲಾಡಿದ ನಂತರ ಮರಳಿ ಹೊರಗೆ ಹೊರಟಿದ್ದಾನೆ. ಆಗ ಡೋರ್ ಲಾಕ್ ಆಗಿರುವುದು ತಿಳಿದಿದೆ.

    ಆಟೋಮೆಟಿಕ್ ಡೋರ್ ಆಗಿದ್ದರಿಂದ ಕಳ್ಳ ಎಷ್ಟೇ ಪ್ರಯತ್ನಿಸಿದರೂ ತೆರೆಯಲು ಸಾಧ್ಯವಾಗಿಲ್ಲ. ಸಿಕ್ಕಿಹಾಕಿಕೊಂಡೆ ಎನ್ನುವ ಕಾರಣಕ್ಕೆ ಮನೆಯಲ್ಲಿದ್ದ ಗ್ಯಾಸ್ ಪೈಪ್ ತಗೆದು ಮನೆಗೆ ಬೆಂಕಿ ಹಾಕಿದ್ದಾನೆ. ಅಲ್ಲದೆ ಮನೆಯಲ್ಲಿದ್ದ ಫ್ಯಾನಿಗೆ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾನೆ. ಅಷ್ಟರಲ್ಲೇ ಮನೆ ಮಾಲೀಕರು ದೇವಸ್ಥಾನದಿಂದ ಬಂದಿದ್ದಾರೆ. ಇದನ್ನು ಕಂಡ ಮಾಲೀಕರು ಸ್ಥಳೀಯರ ಸಹಾಯ ಪಡೆದು ಬೆಂಕಿ ನಂದಿಸಿ ಒಳಗಡೆ ಹೋಗಿ ನೋಡಿದ್ದಾರೆ.

    ಮನೆ ಪೂರ್ತಿ ಚೆಲ್ಲಾಪಿಲ್ಲಿಯಾಗಿರುವುದನ್ನು ಕಂಡು ಆತಂಕಗೊಂಡಿದ್ದಾರೆ. ಆಗ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಕಳ್ಳ ಸ್ವಸ್ತಿಕ್‍ನನ್ನು ಕಂಡಿದ್ದಾರೆ. ಕೂಡಲೇ ಕಳ್ಳನನ್ನು ಮಾಲೀಕರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಘಟನೆ ಕುರಿತು ಮಾಲೀಕ ಮೋಹನ್ ಅವರು ಹೆಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಕಳ್ಳ ಸ್ವಸ್ತಿಕ್ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಕಳ್ಳ ಸ್ವಸ್ತಿಕ್ ಸುಧಾರಿಸಿಕೊಂಡ ಬಳಿಕ ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

  • ಗಲಾಟೆ ಪ್ರಶ್ನಿಸಿದ್ದಕ್ಕೆ ಲಾಡ್ಜ್ ಮಾಲೀಕನಿಗೆ ಗೂಸಾ ನೀಡಿದ ಪುಂಡರು

    ಗಲಾಟೆ ಪ್ರಶ್ನಿಸಿದ್ದಕ್ಕೆ ಲಾಡ್ಜ್ ಮಾಲೀಕನಿಗೆ ಗೂಸಾ ನೀಡಿದ ಪುಂಡರು

    ಬೆಂಗಳೂರು: ಲಾಡ್ಜ್ ನಲ್ಲಿ ಕಂಠಪೂರ್ತಿ ಕುಡಿದು ಗಲಾಟೆ ಮಾಡುತ್ತಿದ್ದ ಹುಡುಗರನ್ನ ಪ್ರಶ್ನೆ ಮಾಡಿದ್ದ ಮಾಲೀಕನಿಗೆ, ಕುಡಿದ ಅಮಲಿನಲ್ಲಿದ್ದ ಪುಂಡರ ಗ್ಯಾಂಗ್ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ದೊಡ್ಡ ಬಾಣಸವಾಡಿಯಲ್ಲಿ ನಡೆದಿದೆ.

    ಸಂತೋಷ್, ಹರೀಶ್, ಪ್ರಕಾಶ್, ರಂಜಿತ್ ಕುಮಾರ್ ಮತ್ತು ಸಂಜಯ್ ದೊಡ್ಡ ಬಾಣಸವಾಡಿಯಲ್ಲಿರುವ ಒಲಿವ್ ರೆಸಿಡೆನ್ಸಿ ಬಾರ್ ನಲ್ಲಿ ಒಂದು ರೂಂ ಬಾಡಿಗೆ ಪಡೆದಿರುತ್ತಾರೆ. ಡಿಸೆಂಬರ್ 31 ರ ರಾತ್ರಿಪೂರ್ತಿ ಎಣ್ಣೆ ಹೊಡೆದು ಹೊಸ ವರ್ಷ ಸಂಭ್ರಮಾಚರಣೆ ಮಾಡಿದ್ದಾರೆ. ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಗಲಾಟೆ ಮಾಡಿಕೊಂಡು ಲಾಡ್ಜ್ ನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.

    ಯುವಕರ ಪುಂಡಾಟ ನೋಡಿದ ಲಾಡ್ಜ್ ಮಾಲೀಕ ರೂಂ ಮೊದಲು ಖಾಲಿ ಮಾಡುವಂತೆ ತಿಳಿಸಿದ್ದಾನೆ. ಮೊದಲೇ ರಾತ್ರಿ ಎಲ್ಲಾ ಮದ್ಯದ ನಶೆಯಲ್ಲಿದ್ದ ಪುಂಡರು ಮಾಲೀಕ ಆರ್ಷದ್ ಮೇಲೆ ಹಲ್ಲೆ ಮಾಡಿದ್ದಾರೆ. ಮಾಲೀಕ ಆರ್ಷದ್ ತಿರುಗಿ ಬೀಳಲು ಮುಂದಾಗುತ್ತಿದ್ದಂತೆ ಕೈಯಲ್ಲಿದ್ದ ಚಾಕುವಿನಿಂದ ತಲೆಗೆ ಹೊಡೆದಿದ್ದಾರೆ. ಘಟನೆಯಲ್ಲಿ ಆರ್ಷದ್ ಗೆ ತೀವ್ರ ವಾಗಿ ಗಾಯವಾಗುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.

    ಆರೋಪಿಗಳು ಲಾಡ್ಜ್ ನಲ್ಲಿ ರೂಂ ಪಡೆಯುವ ಮುನ್ನ ಕೊಟ್ಟಿರುವ ಆಧಾರ್ ಪ್ರತಿ ಹಾಗೂ ಹಲ್ಲೆ ಮಾಡಿದ ಸಿಸಿಟಿವಿ ದೃಶ್ಯದ ಮೇಲೆ ಆರ್ಷದ್ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಾಣಸವಾಡಿ ಪೊಲೀಸರು ಘಟನೆ ನಡೆದ 24 ಗಂಟೆಯ ಒಳಗಡೆ ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಒಟ್ಟು ಆರು ಮಂದಿಯನ್ನು ಬಂಧಿಸಿರುವ ಬಾಣಸವಾಡಿ ಪೊಲೀಸರು ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.

  • ದಾಳಿ ಮಾಡಿದ ಮನೆಯಲ್ಲೇ ಎಣ್ಣೆ ಹಾಕಿದ ಸಿಸಿಬಿ ಪೊಲೀಸರು- ಅಟಿಕಾ ಗೋಲ್ಡ್ ಮಾಲೀಕ ಆರೋಪ

    ದಾಳಿ ಮಾಡಿದ ಮನೆಯಲ್ಲೇ ಎಣ್ಣೆ ಹಾಕಿದ ಸಿಸಿಬಿ ಪೊಲೀಸರು- ಅಟಿಕಾ ಗೋಲ್ಡ್ ಮಾಲೀಕ ಆರೋಪ

    ಬೆಂಗಳೂರು: ದಾಳಿ ಮಾಡುವುದಕ್ಕೆ ಹೋದ ಬೆಂಗಳೂರು ಸಿಸಿಬಿ ಪೊಲೀಸರು ಅದೇ ಮನೆಯಲ್ಲೇ ರಾತ್ರಿ ಎಣ್ಣೆ ಪಾರ್ಟಿ ಮಾಡಿರುವ ಆರೋಪ ಕೇಳಿಬಂದಿದೆ.

    ಅಟಿಕಾ ಗೋಲ್ಡ್ ಕಂಪೆನಿ ಮಾಲೀಕ ಬಾಬು ಅವರ ಬಾಣಸವಾಡಿ ಬಳಿಯ ಕಲ್ಯಾಣ ನಗರದ ಮನೆ ಮೇಲೆ ಕಳೆದ 30ರಂದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಮಾಲೀಕ ಬಾಬು ಮನೆಯಲ್ಲಿ ಇರಲಿಲ್ಲ. ಹಾಗಾಗಿ ಪೊಲೀಸರು ಬಾಬುಗಾಗಿ ಕಾಯುತ್ತಿದ್ದರು. ಅಲ್ಲದೆ ರಾತ್ರಿ ಆದರೂ ಪರವಾಗಿಲ್ಲ ಕಾಯೋಣ ಎಂದು ಕಾದು ಕುಳಿತ್ತಿದ್ದರು. ಆದರೆ ಬಾಬು ಮನೆಗೆ ಬಂದಿಲ್ಲ.

    ತಡರಾತ್ರಿ ಹಿರಿಯ ಅಧಿಕಾರಿಗಳು ಮನೆಗೆ ಹೋದ ನಂತರ ಅಲ್ಲಿಯೇ ಉಳಿದಿದ್ದ ಐವರು ಸಿಸಿಬಿ ಅಧಿಕಾರಿಗಳು ಅದೇ ಮನೆಯಲ್ಲೇ ಎಣ್ಣೆ ಪಾರ್ಟಿ ಮಾಡಿದ್ದಾರೆ. ಪೊಲೀಸರು ಪಾರ್ಟಿ ಮಾಡುವ ದೃಶ್ಯವನ್ನು ಮನೆಯವರು ಸೆರೆಹಿಡಿದಿದ್ದಾರೆ. ಪೊಲೀಸರ ಎಣ್ಣೆ ಪಾರ್ಟಿಯ ವಿಡಿಯೋವನ್ನು ಮಾಲೀಕ ಬಾಬು ಬಿಡುಗಡೆ ಮಾಡುವ ಮೂಲಕ ಪೊಲೀಸರ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಹಿರಿಯ ಅಧಿಕಾರಿ, ಇದು ನಮ್ಮ ಪೊಲೀಸರು ಎನ್ನುವುದರ ಬಗ್ಗೆ ಅನುಮಾನವಿದೆ. ವಿಡಿಯೋ ಪರಿಶೀಲನೆ ನಡೆಸಿದ ನಂತರ ತಪ್ಪು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

  • ಹಿರಿಯ ಅಧಿಕಾರಿಗಳನ್ನು ನಾನ್ ನೋಡ್ಕೋತಿನಿ- ಕಂತೆ ಕಂತೆ ಹಣ ಪಡೆದ ಪೊಲೀಸ್ ಪೇದೆ

    ಹಿರಿಯ ಅಧಿಕಾರಿಗಳನ್ನು ನಾನ್ ನೋಡ್ಕೋತಿನಿ- ಕಂತೆ ಕಂತೆ ಹಣ ಪಡೆದ ಪೊಲೀಸ್ ಪೇದೆ

    ಬೆಂಗಳೂರು: ಸಿಸಿಬಿ ಪೊಲೀಸ್ ಪೇದೆಯೊಬ್ಬರು ಸ್ಪಾ ಮಾಲೀಕರೊಬ್ಬರಿಂದ ಕಂತೆ ಕಂತೆ ಹಣ ಪಡೆದಿರುವ ವಿಡಿಯೋ ಬಹಿರಂಗವಾಗಿದೆ.

    ರಾಜಾಜಿನಗರದ ಸ್ಪಾ ಬಳಿ ಹೋದ ಇಬ್ಬರು ಪೇದೆಗಳು, ಮಾಲೀಕನಿಗೆ “ನೀವೇನು ಭಯಪಡಬೇಡಿ ಹಿರಿಯ ಅಧಿಕಾರಿಗಳನ್ನು ನಾವು ನೋಡಿಕೊಳ್ಳುತ್ತೇವೆ. ಸಿಸಿಬಿ ಹಿರಿಯ ಅಧಿಕಾರಿಗಳು ರೇಡ್ ಮಾಡುವಾಗ ನಮಗೆ ಮೊದಲೇ ಇಂತಹ ದಿನ ನಿಮ್ಮ ಏರಿಯಾದಲ್ಲಿ ರೇಡ್‍ಗೆ ಬರುತ್ತೇವೆ, ಹುಷಾರಾಗಿ ಎಂದು ನಮಗೆ ವಾಟ್ಸಾಪ್ ಕಾಲ್ ಮಾಡಿ ಹೇಳುತ್ತಾರೆ. ನಾವು ಆಗ ಎಲ್ಲಾ ಅಕ್ರಮ ಚಟುವಟಿಕೆಗಳ ನಡೆಯುವ ಜಾಗದ ಮಾಲೀಕರಿಗೆ ಅಲರ್ಟ್ ಮಾಡಿಬಿಡ್ತೀವಿ. ಸೀನಿಯರ್ ಆಫೀಸರ್ ಗಳ ಬಗ್ಗೆ ನೀವೇನು ಭಯಪಡಬೇಡಿ” ಎಂದು ಹೇಳಿದ್ದಾರೆ.

    ಸದ್ಯ ಇಬ್ಬರು ಪೇದೆ ಸ್ಪಾ ಮಾಲೀಕರ ಬಳಿ ಹಣ ಪಡೆದಿರುವ ವಿಡಿಯೋ ಈಗ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಡಿಸಿಪಿ ಕುಲ್ ದಿಲ್ ಕುಮಾರ್ ಜೈನ್ ಮಾತನಾಡಿ, ವಿಡಿಯೋ ವಿಚಾರ ನಮ್ಮ ಗಮನಕ್ಕೆ ಬಂದಿದೆ. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ತೀವಿ ಎಂದು ತಿಳಿಸಿದರು,

  • ಕೊನೆಗೂ ಮಾಲೀಕನ ಮನೆ ಸೇರಿದ 8 ಕೋಟಿ ಮೌಲ್ಯದ ಶ್ವಾನ

    ಕೊನೆಗೂ ಮಾಲೀಕನ ಮನೆ ಸೇರಿದ 8 ಕೋಟಿ ಮೌಲ್ಯದ ಶ್ವಾನ

    ಬೆಂಗಳೂರು: ಡಿಸೆಂಬರ್ 12 ರಂದು ಕಳವು ಆಗಿದ್ದ 8 ಕೋಟಿ ಮೌಲ್ಯದ ಶ್ವಾನ ಕೊನೆಗೂ ಮಾಲೀಕ ಮನೆ ಸೇರಿದೆ.

    ಚೀನಾ ದೇಶದ ಅಲಕ್ಕನ್ ಮಾಲಾಮೂಟ್ ತಳಿಯ ಶ್ವಾನ ಡಿಸೆಂಬರ್ 12 ರಂದು ಶ್ರೀನಗರದ ಮನೆಯಲ್ಲಿ ಕಟ್ಟಿ ಹಾಕಿದ್ದಾಗ ಯಾರೋ ಕದ್ದುಕೊಂಡು ಹೋಗಿದ್ದಾರೆ. ಕಳ್ಳನನ್ನು ಹುಡುಕಿ ನಾಯಿಯನ್ನು ವಾಪಸ್ ತಂದು ಕೊಟ್ಟರೆ ಒಂದು ಲಕ್ಷ ಬಹುಮಾನ ನೀಡುವುದಾಗಿ ನಾಯಿ ಮಾಲೀಕ ಸತೀಶ್ ಹೇಳಿದ್ದರು. ಇದರ ಜೊತೆಗೆ ಹನುಮಂತ ನಗರ  ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರು.

    ಈಗ ಈ ದುಬಾರಿ ಶ್ವಾನ ಮರಳಿ ಮಾಲೀಕರಿಗೆ ಸಿಕ್ಕಿದ್ದು, ನಾಯಿ ಕದ್ದವರೇ ಭಾನುವಾರ ಸಂಜೆ ಮನೆಯ ಬಳಿ ಬಿಟ್ಟು ಹೋಗಿದ್ದಾರೆ ಎಂದು ಮಾಲೀಕ ಸತೀಶ್ ಅವರು ಹೇಳಿದ್ದಾರೆ. ಯಾರೋ ಪರಿಚಯಸ್ಥರೇ ನಾಯಿಯನ್ನು ಕದ್ದುಕೊಂಡು ಹೋಗಿ ಅದು ದೊಡ್ಡಮಟ್ಟದಲ್ಲಿ ಸುದ್ದಿಯಾಗಿ ವಾಪಸ್ ತಂದು ಬಿಟ್ಟು ಹೋಗಿದ್ದಾರೆ ಎಂದು ಸತೀಶ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಪರಿಚಿತನಾಗಿದ್ದ ಆಟೋಚಾಲಕನೇ ಕದ್ದೊಯ್ದು ವಾಪಸ್ ಬಿಟ್ಟು ಹೋಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

    ಈ ನಾಯಿ ಅಲಕ್ಸನ್ ಮ್ಯಾಲಮ್ಯೂಟ್ ಎಂಬ ಜಾತಿಗೆ ಸೇರಿದ್ದಾಗಿದೆ. ಕೆಂಪು ಮತ್ತು ಬಿಳಿ ಬಣ್ಣವನ್ನು ಶ್ವಾನ ಹೊಂದಿದೆ. ಇದರ ವಯಸ್ಸು 3 ವರ್ಷವಾಗಿದ್ದು, ಹಸ್ಕಿ ನಾಯಿಯನ್ನು ಹೋಲುತ್ತದೆ. 8 ಕೋಟಿ ರೂಪಾಯಿ ಬೆಲೆ ಬಾಳುತ್ತಿದ್ದು, ಈ ನಾಯಿಯನ್ನ ಹುಡುಕಿ ಕೊಟ್ಟವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಸತೀಶ್ ಘೋಷಿಸಿದ್ದರು.

  • ‘ಪತ್ನಿಯನ್ನು ಲವ್ ಮಾಡು’ ಎಂದ ಮಾಲೀಕ – ‘ನನ್ನನ್ನು ಕೈ ಬಿಡಬೇಡ’ ಎಂದ ಯಜಮಾನಿ- ಯುವಕ ಆತ್ಮಹತ್ಯೆ

    ‘ಪತ್ನಿಯನ್ನು ಲವ್ ಮಾಡು’ ಎಂದ ಮಾಲೀಕ – ‘ನನ್ನನ್ನು ಕೈ ಬಿಡಬೇಡ’ ಎಂದ ಯಜಮಾನಿ- ಯುವಕ ಆತ್ಮಹತ್ಯೆ

    – ಪತ್ನಿಯನ್ನು ಲವ್ ಮಾಡದೇ ಇದ್ರೆ ಸಂಬಳ ಹಾಕಲ್ಲ ಎಂದಿದ್ದ
    – ಸಂಬಂಧವನ್ನು ಮುಂದುವರಿಸುವಂತೆ ಮಾಲೀಕನ ಪತ್ನಿ ದುಂಬಾಲು
    – ಸಂಬಂಧ ಬೆಳೆಸು ಎಂದು ಹೇಳಿ ನಂತರ ಕಡಿತಗೊಳಿಸುವಂತೆ ಒತ್ತಡ

    ಗಾಂಧಿನಗರ: ಮಾಲೀಕನ ಆಶಯದಂತೆ ಯುವಕ ಆತನ ಪತ್ನಿಯನ್ನು ಪ್ರೀತಿಸಿ, ಸಂಬಂಧ ಬೆಳೆಸಿದ್ದಾನೆ. ನಂತರ ಮಾಲೀಕ ಸಂಬಂಧ ಕೊನೆಗೊಳಿಸುವಂತೆ ಹೇಳಿದ್ದಾನೆ. ಆದರೆ ಮಾಲೀಕನ ಪತ್ನಿ ಸಂಬಂಧ ಮುಂದುವರಿಸುವಂತೆ 19ರ ಯುವಕನಿಗೆ ದುಂಬಾಲು ಬಿದ್ದಿದ್ದಾಳೆ. ಈ ಒತ್ತಡ ತಾಳಲಾರದೆ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಗುಜರಾತಿನಲ್ಲಿ ನಡೆದಿದೆ.

    ಈ ಘಟನೆ ಅಹ್ಮದಾಬಾದಿನಲ್ಲಿ ನಡೆದಿದ್ದು, ಆತ್ಮಹತ್ಯೆ ನಡೆದು 5 ತಿಂಗಳ ನಂತರ ಪೊಲೀಸ್ ತನಿಖೆಯಲ್ಲಿ ಸಂತ್ಯಾಂಶ ಬೆಳಕಿಗೆ ಬಂದಿದೆ.

    ಸಂತ್ರಸ್ತನ ಮೊಬೈಲ್‍ನಲ್ಲಿನ ಮೆಸೇಜ್‍ಗಳಿಂದ ಪ್ರಕರಣ ಮರುಜೀವ ಪಡೆದಿದೆ. ಉದ್ಯೋಗದಾತ ಹಾಗೂ ಆತನ ಪತ್ನಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದು ಹಾಗೂ ಎಸ್‍ಸಿ, ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತನನ್ನು ನಿಖಿಲ್ ಪರ್ಮಾರ್ ಎಂದು ಗುರುತಿಸಲಾಗಿದೆ.

    ನನ್ನ ಪತ್ನಿಯನ್ನು ನೀನು ಪ್ರೀತಿಸಬೇಕು ಎಂದು ನಿಖಿಲ್ ಬಳಿ ಮಾಲೀಕ ಕೇಳಿಕೊಂಡಿದ್ದಾನೆ. ಪ್ರಾರಂಭದಲ್ಲಿ ನಿಖಿಲ್ ಒಪ್ಪಿಗೆ ನೀಡಿರಲಿಲ್ಲ. ನಂತರ ನೀನು ನನ್ನ ಹೆಂಡತಿಯನ್ನು ಪ್ರೀತಿಸುವ ಕುರಿತು ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಮಾಲೀಕ ಯುವಕನಿಗೆ ಮೇಲಿಂದ ಮೇಲೆ ಮಾನಸಿಕ ಹಿಂಸೆ ನೀಡಿದ್ದಾನೆ. ಅಲ್ಲದೆ ಪ್ರೀತಿಸುವ ವರೆಗೆ ಸಂಬಳವನ್ನು ನೀಡುವುದಿಲ್ಲ ಎಂದು ಆತನ ಸಂಬಳವನ್ನು ತಡೆ ಹಿಡಿದು, ನನ್ನ ಪತ್ನಿಯನ್ನು ಪ್ರೀತಿಸಲೇಬೇಕು ಎಂದು ದುಂಬಾಲು ಬಿದ್ದಿದ್ದ. ಇದರಿಂದ ಬೇಸತ್ತ ನಿಖಿಲ್ ಮಾಲೀಕ ಪತ್ನಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾನೆ.

    ಮಾಲೀಕ ವಿವಾಹ ಸಮಾರಂಭದ ವೇಳೆ ಬಳಸುವ ಅಲಂಕಾರ ಸಾಮಗ್ರಿಗಳನ್ನು ರಾಜ್ಯಾದ್ಯಂತ ಸರಬರಾಜು ಮಾಡುವ ಬುಸಿನೆಸ್ ಮಾಡುತ್ತಿದ್ದಾನೆ. ನಿಖಲ್ ಕೆಲಸಕ್ಕೆ ಸೇರಿ 10 ತಿಂಗಳ ನಂತರ ಈ ಕುರಿತು ತನ್ನ ತಂದೆ ಅಶೋಕ್ ಪರ್ಮಾರ್‍ಗೆ ವಿವರಿಸಿದ್ದು, ನಾನು ಇಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮಾಲೀಕ ಹಾಗೂ ಆತನ ಪತ್ನಿ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾನೆ.

    ಆಗ ಅಶೋಕ್ ಕೆಲಸ ಬಿಡುವಂತೆ ತನ್ನ ಮಗನಿಗೆ ಹೇಳಿದ್ದಾರೆ. ಆದರೆ ಜುಲೈ 14, 2019ರಂದು ನಿಖಿಲ್ ಮಾಲೀಕ ಕರೆ ಮಾಡಿ ಸಂಬಳವನ್ನು ಪಡೆಯುವಂತೆ ತಿಳಿಸಿದ್ದಾರೆ. ಮರುದಿನ ನಿಖಿಲ್ ಸಂಬಳ ತೆಗೆದುಕೊಳ್ಳಲು ತೆರಳಿದ್ದಾನೆ. ಆಗ ನಿಖಿಲ್ ತಂದೆಗೆ ಮಾಲೀಕ ಕರೆ ಮಾಡಿ ಮಗನನ್ನು ರಾಜಸ್ಥಾನ ಪ್ರವಾಸಕ್ಕೆ ಕರೆದೊಯ್ಯುವುದಾಗಿ ತಿಳಿಸಿದ್ದಾರೆ. ಆಶ್ಚರ್ಯವೆಂಬಂತೆ ಮಾಲೀಕ ಜುಲೈ 20ರಂದು ನಿಖಿಲ್ ತಂದೆಗೆ ಕರೆ ಮಾಡಿ ಗೋಡೋನ್ ಪ್ರದೇಶದಲ್ಲಿ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾನೆ.

    ಘಟನೆ ನಡೆದು ಮೂರು ತಿಂಗಳ ನಂತರ ಕುಟುಂಬಸ್ಥರು ನಿಖಲ್ ಮೊಬೈಲನ್ನು ಪರಿಶೀಲಿಸಿದ್ದಾರೆ. ಈ ವೇಳೆ ಮಾಲೀಕ ಹಾಗೂ ನಿಖಿಲ್ ನಡುವೆ ನಡೆದ ಮೆಸೇಜ್ ಸಂಭಾಷಣೆಗಳನ್ನು ನೋಡಿದ್ದಾರೆ. ನನ್ನನ್ನು ಗುಲಾಮನಂತೆ ಪರಿಗಣಿಸಬೇಡಿ, ನನ್ನ ಮೇಲೆ ಕರುಣೆ ತೋರಿಸಿ ಎಂದು ನಿಖಿಲ್ ಮಾಲೀಕನಿಗೆ ಮೆಸೇಜ್‍ನಲ್ಲಿ ಕೇಳಿಕೊಂಡಿದ್ದಾನೆ. ನಿಮ್ಮ ಇಷ್ಟದಂತೆ ನಾನು ನಿಮ್ಮ ಹೆಂಡತಿಯನ್ನು ಪ್ರೀತಿಸಿದ್ದೇನೆ. ಇದೀಗ ಇದ್ದಕ್ಕಿದ್ದಂತೆ ಪ್ರೀತಿಸುವುದನ್ನು ನಿಲ್ಲಿಸು ಎಂದು ಹೇಳುತ್ತಿದ್ದೀರಿ ಎಂದು ನಿಖಿಲ್ ಮಾಲೀಕನಿಗೆ ಸಂದೇಶ ಕಳುಹಿಸಿದ್ದ.

    45 ವರ್ಷದ ನಿಖಿಲ್ ಮಾಲೀಕ ತನ್ನ 25 ವರ್ಷದ ಪತ್ನಿಯನ್ನು ಪ್ರೀತಿಸಿ, ಅವಳೊಂದಿಗೆ ಸಂಬಂಧ ಬೆಳೆಸುವಂತೆ ತಿಳಿಸಿದ್ದ ಎಂದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ. ಅಲ್ಲದೆ ಮಾಲೀಕನ ಪತ್ನಿ ಸಹ ನಿಖಿಲ್‍ನೊಂದಿಗೆ ಸಂಬಂಧವನ್ನು ಬಿಟ್ಟುಕೊಟ್ಟಿಲ್ಲ. ಇದನ್ನು ಎಂದಿಗೂ ಕೊನೆಗೊಳಿಸಬೇಡ ಎಂದು ಒತ್ತಾಯಿಸಿದ್ದಾಳೆ. ಹೀಗಾಗಿ ಮಾಲೀಕ ಹಾಗೂ ಆತನ ಪತ್ನಿ ಇಬ್ಬರ ಒತ್ತಡವನ್ನು ತಾಳಲಾರದೆ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ವಿಚಾರ ತನಿಖೆ ವೇಳೇ ದೃಢಪಟ್ಟಿದೆ.

  • ಒಡೆಯ ಸಿನ್ಮಾ ನೋಡಿ ಬೈಕ್ ನಿಮ್ಮದಾಗಿಸಿಕೊಳ್ಳಿ

    ಒಡೆಯ ಸಿನ್ಮಾ ನೋಡಿ ಬೈಕ್ ನಿಮ್ಮದಾಗಿಸಿಕೊಳ್ಳಿ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯ’ ಸಿನಿಮಾ ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಭಾರೀ ಸದ್ದು ಮಾಡುತ್ತಿದೆ. ಈ ಸಿನಿಮಾ ಇದೇ ಡಿಸೆಂಬರ್ 12 ರಂದು ಬಿಡುಗಡೆಯಾಗುತ್ತಿದೆ. ಇದೀಗ ಒಡೆಯ ಚಿತ್ರತಂಡದಿಂದ ಪ್ರೇಕ್ಷಕರಿಗೆ ಭರ್ಜರಿ ಆಫರ್‍ವೊಂದನ್ನು ನೀಡಿದೆ.

    ಹೌದು..’ಒಡೆಯ’ ಚಿತ್ರತಂಡ ಸಿನಿಮಾ ನೋಡಿ ಸ್ಟೈಲಿಶ್ ಬೈಕ್ ಗೆಲ್ಲಿ ಎಂಬ ಆಫರ್ ನೀಡಿದೆ. ಅಂದರೆ ಪ್ರಮುಖ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ‘ಒಡೆಯ’ ಸಿನಿಮಾ ವೀಕ್ಷಿಸಬೇಕು. ನಂತರ ಪ್ರೇಕ್ಷಕರು ತೆಗೆದುಕೊಂಡಿರುವ ಟಿಕೆಟ್ ಅನ್ನು ಭರ್ತಿ ಮಾಡಿ ಚಿತ್ರಮಂದಿರಗಳಲ್ಲಿ ಇಟ್ಟಿರುವ ಲಕ್ಕಿ ಡಿಪ್ ಬಾಕ್ಸ್ ಒಳಗೆ ಹಾಕಬೇಕು. ಲಕ್ಕಿ ಡ್ರಾ ಮೂಲಕ ಗೆದ್ದವರಿಗೆ ಸ್ಟ್ರೈಲಿಶ್ ಬೈಕ್ ಸಿಗುತ್ತದೆ.

    ಕೆಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರಲ್ಲಿ ಈ ಆಫರ್ ನೀಡಲಾಗಿದೆ. ಸಿನಿಮಾ ನೋಡಿ ಬೈಕ್ ಗೆಲ್ಲಿ ಸ್ಪರ್ಧೆಗೆ ನಿರ್ಮಾಪಕ ಸಂದೇಶ್ ನಾಗರಾಜ್ ಚಾಲನೆ ನೀಡಿದ್ದಾರೆ. ಜೊತೆಗೆ ಬೈಕ್ ಯಾವುದು ಎಂದು ನಿರ್ಮಾಪಕರೇ ಅನಾವರಣ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಟ್ರೇಲರ್ ಮೂಲಕ ಆರ್ಭಟಿಸಿದ ಒಡೆಯ ಗಜೇಂದ್ರ!

    ಕೆಂಪು ಬಣ್ಣದ ಬೈಕ್ ನೋಡಲು ತುಂಬಾ ಸ್ಟೈಲಿಶ್ ಆಗಿದ್ದು, ಎಲೆಕ್ಟ್ರಿಕ್ ವಾಹನವಾಗಿದ. BENLG ಮಾಡೆಲ್ ಆಗಿರುವ ಈ ಬೈಕ್ ಬೆಲೆ ಸುಮಾರು 90 ಸಾವಿರದವರೆಗೂ ಇದೆ. ಒಂದೇ ಒಂದು ಬೈಕ್ ಮಾತ್ರ ಬಹುಮಾನವಾಗಿ ಇರಿಸಲಾಗಿದೆ. ಇದನ್ನೂ ಓದಿ: ಅನ್ನ ಹಾಕೋ ರೈತನಿಗೆ ಮೋಸ ಆದ್ರೆ ನಾನ್ ಸುಮ್ನೆ ಇರಲ್ಲ: ದರ್ಶನ್

  • ಟೈಡಾಲ್ ಮಾತ್ರೆ ಸೇವಿಸಿ ಯುವಕರ ಸಾವು ಪ್ರಕರಣ- ಮೆಡಿಕಲ್ ಮಾಲೀಕ ಅರೆಸ್ಟ್

    ಟೈಡಾಲ್ ಮಾತ್ರೆ ಸೇವಿಸಿ ಯುವಕರ ಸಾವು ಪ್ರಕರಣ- ಮೆಡಿಕಲ್ ಮಾಲೀಕ ಅರೆಸ್ಟ್

    ಬೆಂಗಳೂರು: ಟೈಡಾಲ್ ಮಾತ್ರೆ ಸೇವಿಸಿ ಇಬ್ಬರು ಯುವಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರೆ ಮಾರಾಟ ಮಾಡಿದ್ದ ಮೆಡಿಕಲ್ ಅಂಗಡಿ ಮಾಲೀಕನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.

    ರಾಜಾಜಿನಗರದ ಮೋದಿ ಆಸ್ಪತ್ರೆ ಸಿಗ್ನಲ್ ಬಳಿಯ ‘ಮನ್‍ದೀಪ್ ಫಾರ್ಮ್ ಮೆಡಿಕಲ್ ಶಾಪ್’ ಮಾಲೀಕ ಮನೀಶ್ ಕುಮಾರ್ ನನ್ನ ಬಂಧಿಸಲಾಗಿದೆ. 17ರಂದು ಮೃತ ಯುವಕ ಗೋಪಿಗೆ ಅನಧಿಕೃತವಾಗಿ ಮೆಡಿಕಲ್‍ನಿಂದ ಮನೀಶ್ ಕುಮಾರ್ ಟೈಡಾಲ್ ಮಾತ್ರೆ ಮಾರಾಟ ಮಾಡಿದ್ದನು. ಅದೇ ಮಾತ್ರೆಗಳನ್ನು ತಂದು ಗೋಪಿ, ಅಭಿಷೇಕ್, ಸುಹಾಸ್ ಮಾತ್ರೆಯನ್ನು ಪುಡಿ ಮಾಡಿ ಡಿಸ್ಟಿಲ್ ನೀರಿನಲ್ಲಿ ಬೆರಿಸಿ ಸಿರಿಂಜ್ ಮೂಲಕ ದೇಹಕ್ಕೆ ಇಂಜಕ್ಟ್ ಮಾಡಿಕೊಂಡಿದ್ದರು. ಪರಿಣಾಮ ಗೋಪಿ, ಅಭಿಷೇಕ್ ಮೃತಪಟ್ಟಿದ್ದು, ಸುಹಾಸ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ:ಬರ್ತ್ ಡೇ ಪಾರ್ಟಿಯಲ್ಲಿ ಯುವಕರ ಸಾವು- ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ

    ನವೆಂಬರ್ 19ರ ರಾತ್ರಿ ಮಲ್ಲೇಶ್ವರಂ ಕೋದಂಡರಾಮಪುರದಲ್ಲಿ ಈ ಘಟನೆ ನಡೆದಿತ್ತು. ಗೆಳೆಯನ ಹುಟ್ಟುಹಬ್ಬದ ಪಾರ್ಟಿಗೆ ಗೋಪಿ, ಅಭಿಪೇಕ್ ಜೊತೆಗೆ ಇನ್ನೂ 6 ಮಂದಿ ಯುವಕರು ಹೋಗಿದ್ದರು. ತಡರಾತ್ರಿವರೆಗೂ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದ ಯುವಕರು ನಶೆಗಾಗಿ ಟೈಡಲ್ ಮಾತ್ರೆಯನ್ನು ತೆಗೆದುಕೊಂಡಿದ್ದರು.ಇದನ್ನೂ ಓದಿ:ಗೆಳೆಯನ ಬರ್ತ್ ಡೇ ಪಾರ್ಟಿ ಮಾಡಿದ್ದ ಇಬ್ಬರು ಬಲಿ, 6 ಮಂದಿ ಸ್ಥಿತಿ ಗಂಭೀರ 

    ರಾತ್ರಿ ಪಾರ್ಟಿ ಮಾಡಿದ ಬಳಿಕ ಯುವಕರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಾತ್ರ ಸೇವನೆಯಿಂದ ಗೋಪಿ ಹಾಗೂ ಅಭಿಷೇಕ್ ಮೃತಪಟ್ಟಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಯುವಕರು ಟೈಡಾಲ್ ಮಾತ್ರೆ ಸೇವಿಸಿ ಸಾವನ್ನಪ್ಪಿದ್ದಾರೆ ಎಂಬುದು ಬಯಲಾಗಿತ್ತು. ಈ ಸಂಬಂಧ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಯುಡಿಆರ್ ಕೇಸ್ ದಾಖಲಾಗಿತ್ತು. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದರು.