Tag: Orange Line Metro

  • ನಮ್ಮ ಮೆಟ್ರೋ ಆರೆಂಜ್ ಲೈನ್ ಆರಂಭಕ್ಕೂ ಮುನ್ನವೇ ಮುಕ್ತಾಯದ ಟಾರ್ಗೆಟ್ ಮುಂದಕ್ಕೆ!

    ನಮ್ಮ ಮೆಟ್ರೋ ಆರೆಂಜ್ ಲೈನ್ ಆರಂಭಕ್ಕೂ ಮುನ್ನವೇ ಮುಕ್ತಾಯದ ಟಾರ್ಗೆಟ್ ಮುಂದಕ್ಕೆ!

    – 2030ರಿಂದ 2031ಕ್ಕೆ ಆರೆಂಜ್ ಲೈನ್ ಪ್ರಾಜೆಕ್ಟ್ ವಿಸ್ತರಣೆ

    ಬೆಂಗಳೂರು: ಇತ್ತೀಚಿಗಷ್ಟೇ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದ ಬೆಂಗಳೂರಿನ ಆರೆಂಜ್ ಲೈನ್ ಮೆಟ್ರೋ (Orange Line Metro) ಸಂಬಂಧ ಕಹಿ ಸುದ್ದಿ ಹೊರ ಬಿದ್ದಿದೆ. ಈ ಮಾರ್ಗದ ಕಾಮಗಾರಿ ಆರಂಭಕ್ಕೂ ಮುನ್ನವೇ ಮುಕ್ತಾಯದ ಅವಧಿಯನ್ನು 2030ರಿಂದ 2031ಕ್ಕೆ ವಿಸ್ತರಣೆ ಮಾಡಲಾಗಿದೆ.

    ಇತ್ತೀಚೆಗಷ್ಟೇ ಪ್ರಧಾನಿ ಮೋದಿ (PM Modi), ಹಳದಿ ಲೈನ್ ಮೆಟ್ರೋ ಉದ್ಘಾಟನೆ ಮಾಡಿ ಅದೇ ದಿನ ಆರೆಂಜ್ ಲೈನ್‌ಗೆ ಶಂಕುಸ್ಥಾಪನೆ ಮಾಡಿದ್ದರು. ಆದರೆ ಇದೀಗ ಬಹುನಿರೀಕ್ಷಿತ ಮಾರ್ಗದ ಕಾಮಗಾರಿ ಮುಕ್ತಾಯದ ಸಮಯಾವಕಾಶ ಮತ್ತೊಂದು ವರ್ಷ ಮುಂದಕ್ಕೆ ಹೋಗಿದೆ. ಈ ಮೂಲಕ 2030ಕ್ಕೆ ಮುಕ್ತಾಯವಾಗಬೇಕಿದ್ದ ಮಾರ್ಗಕ್ಕೆ ಹೆಚ್ಚುವರಿ ಒಂದು ವರ್ಷ ಕಾಯಬೇಕಾಗಿದೆ. ಇದನ್ನೂ ಓದಿ: ಮೋದಿ ಸಂಚಾರಕ್ಕೆ ಜಿನ್‌ಪಿಂಗ್‌ ಮೆಚ್ಚಿನ ಕಾರು ನೀಡಿದ ಚೀನಾ!

     ಹೌದು, ಇದು ಬೆಂಗಳೂರಿನ (Bengaluru) ಬಹುನಿರೀಕ್ಷಿತ ಮಾರ್ಗಗಳಲ್ಲಿ ಒಂದಾದ ಕಿತ್ತಾಳೆ ಮಾರ್ಗದ ಬಗೆಗಿನ ಸುದ್ದಿ. ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರ ಮತ್ತು ಹೊಸಹಳ್ಳಿಯಿಂದ ಕಡಬಗೆರೆಯನ್ನು ಸಂಪರ್ಕಿಸುವ ಈ ಮಾರ್ಗದ ಕಾಮಗಾರಿಯ ಅವಧಿಯನ್ನು 2031ರ ಮೇ ತನಕ ವಿಸ್ತರಿಸಲಾಗಿದೆ. ಬಿಎಂಆರ್‌ಸಿಎಲ್ ಮೂಲಗಳ ಪ್ರಕಾರ, ಕಿತ್ತಳೆ ಮಾರ್ಗದ ಕಾಮಗಾರಿಗೆ ಐದೂವರೆ ವರ್ಷಗಳ ಕಾಲಾವಧಿ ತೆಗೆದುಕೊಳ್ಳಲಿದೆ. ಈ ವರ್ಷದ ನವೆಂಬರ್‌ನಲ್ಲಿ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳಲಿದ್ದು, ಡಿಸೆಂಬರ್-ಜನವರಿಯಲ್ಲಿ ಕಾಮಗಾರಿ ಆರಂಭವಾಗುವ ಗುರಿಯಿದೆ. ಆರಂಭದಲ್ಲಿ 2029 ಅಥವಾ 2030ರಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯಿತ್ತು. ಆದರೆ, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಎರಡೂ ಕಾರಿಡಾರ್‌ಗಳಲ್ಲಿ ಡಬಲ್ ಡೆಕ್ಕರ್ ಮಾರ್ಗ ನಿರ್ಮಾಣದ ನಿರ್ಧಾರದಿಂದ ಕಾಮಗಾರಿಯ ಅವಧಿ ಒಂದು ವರ್ಷ ಹೆಚ್ಚಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಆನ್‌ಲೈನ್ ಗೇಮಿಂಗ್ ನಿಷೇಧ ಕಾಯ್ದೆ ಬಗ್ಗೆ ನಿಮಗೆಷ್ಟು ಗೊತ್ತು?

    ಈ ವಿಳಂಬದಿಂದ ಯೋಜನೆಯ ವೆಚ್ಚವು 5% ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚಾಗುವ ಸಂಭವವಿದೆ. 44.65 ಕಿ.ಮೀ ಉದ್ದದ ಈ ಮಾರ್ಗವನ್ನ ಎರಡು ಫೇಸ್‌ಗಳಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಕಾರಣ ಡಬ್ಬಲ್ ಡೆಕ್ಕರ್ ನಿರ್ಮಾಣ ಮಾಡಬೇಕಿರೋ ಹಿನ್ನೆಲೆ ಹೆಚ್ಚುವರಿ ಸಮಯ ಬೇಕಾಗಲಿದೆ. ಇದೇ ಕಾರಣಕ್ಕೆ ಸದ್ಯ ಮಾರ್ಗದ ಪ್ರಾಜೆಕ್ಟ್ ಮುಕ್ತಾಯ 2031ರ ಸಮಯ ತೆಗೆದುಕೊಳ್ಳಲಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ 15,611 ಕೋಟಿ ರೂ. ಗಳಾಗಿದ್ದು, ವಿಳಂಬದಿಂದ ಈ ವೆಚ್ಚ 5% ರಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

    2021ರಲ್ಲಿ ರಾಜ್ಯ ಸರ್ಕಾರ ಈ ಯೋಜನೆಗೆ ಒಪ್ಪಿಗೆ ನೀಡಿ ಸಮಗ್ರ ಯೋಜನಾ ವರದಿ(ಡಿಪಿಆರ್)ಅನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು. ಕೇಂದ್ರ ಸರ್ಕಾರ ಕಳೆದ ವರ್ಷ ಅನುಮೋದನೆ ನೀಡಿತ್ತು. ಜಪಾನ್ ಇಂಟರ್‌ನ್ಯಾಷನಲ್ ಕೋ ಆಪರೇಷನ್ ಏಜೆನ್ಸಿಯಿಂದ 6,770 ಕೋಟಿ ರೂ. ಸಾಲದ ಒಪ್ಪಂದವು ನವೆಂಬರ್‌ನಲ್ಲಿ ಏರ್ಪಡಲಿದೆ. ಈ ಅನುದಾನವು ರೈಲ್ವೆ ಬೋಗಿಗಳ ವೆಚ್ಚ ಮತ್ತು ಇತರ ಕಾಮಗಾರಿಗಳಿಗೆ ಬಳಕೆಯಾಗಲಿದೆ.

     ಒಟ್ಟಾರೆ ಮಾರ್ಗದ ನಿರ್ಮಾಣ ಕಾರ್ಯ ಸಂಪೂರ್ಣ ಮುಕ್ತಾಯವಾಗಬೇಕಾದರೆ, ಸದ್ಯದ ಅಂದಾಜಿನ ಪ್ರಕಾರ 2031ರ ಮೇ ಎನ್ನಲಾಗ್ತಿದೆ. ಆದರೆ ಯಲ್ಲೋ ಮಾರ್ಗದಲ್ಲಾದಂತ ಸಮಸ್ಯೆಯಾದ್ರೆ, ಹೆಚ್ಚುವರಿ ಸಮಯ ಮೀರಿ, ಇನ್ನಷ್ಟು ಸಮಯ ತೆಗೆದುಕೊಂಡರು ಅಚ್ಚರಿ ಪಡಬೇಕಿಲ್ಲ.

  • ಪೀಣ್ಯ ಮೆಟ್ರೋ ನಿಲ್ದಾಣ ಸ್ಥಳಾಂತರಕ್ಕೆ BMRCL ಚಿಂತನೆ

    ಪೀಣ್ಯ ಮೆಟ್ರೋ ನಿಲ್ದಾಣ ಸ್ಥಳಾಂತರಕ್ಕೆ BMRCL ಚಿಂತನೆ

    ಬೆಂಗಳೂರು: ಪೀಣ್ಯದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ಆರೆಂಜ್ ಲೈನ್‌ನ ನಮ್ಮ ಮೆಟ್ರೋ (Namma Metro) ರೈಲು ನಿಲ್ದಾಣವನ್ನು ಹೊರ ವರ್ತುಲ ರಸ್ತೆ ಗೊರಗುಂಟೆಪಾಳ್ಯ ಸಿಗ್ನಲ್ ಬಳಿಗೆ ಸ್ಥಳಾಂತರಿಸುವ ಬಗ್ಗೆ ಬಿಎಂಆರ್‌ಸಿಎಲ್ (BMRCL) ಚಿಂತನೆ ನಡೆಸಿದೆ.

    ನಮ್ಮ ಮೆಟ್ರೋ ಯೋಜನೆಯ 3ನೇ ಹಂತದಲ್ಲಿ ನಿರ್ಮಾಣವಾಗಲಿರುವ ಜೆಪಿ ನಗರ, 4ನೇ ಹಂತದ ಕೆಂಪಾಪುರವರೆಗಿನ 32.15 ಕಿ.ಮೀ ಆರೆಂಜ್ ಲೈನ್ ಅನ್ನು 300 ಮೀ.ಗಳಷ್ಟು ಕಡಿಮೆ ಮಾಡುವ ಉದ್ದೇಶದಿಂದ ಈ ಚಿಂತನೆಗೆ ಮುಂದಾಗಿದೆ. ಹೊಸ ನಿಲ್ದಾಣವು ಪೀಣ್ಯ ಮತ್ತು ಗೊರಗುಂಟೆಪಾಳ್ಯದಲ್ಲಿ ಅಸ್ತಿತ್ವದಲ್ಲಿರುವ ಮೆಟ್ರೋ ನಿಲ್ದಾಣಗಳಿಗೆ ಎರಡು ಪ್ರತ್ಯೇಕ ಪಾದಚಾರಿ ಮೇಲ್ಸೇತುವೆಗಳ ಮೂಲಕ ಸಂಪರ್ಕ ಕಲ್ಪಿಸಲಿದೆ.ಇದನ್ನೂ ಓದಿ: Delhi Election 2025 Results | ಮಾಜಿ ಸಿಎಂ ಕೇಜ್ರಿವಾಲ್‌ಗೆ ಸೋಲು

    ಇತ್ತೀಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಮೆಟ್ರೋ ನಿರ್ಮಾಣ ಸ್ಥಳಗಳಿಗೆ ಗುರುವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬಿಎಂಆರ್‌ಸಿಎಲ್ ಅಧಿಕಾರಿಗಳು ಡಿಸಿಎಂ ಅವರ ಬಳಿ ಈ ಪ್ರಸ್ತಾವನೆಯನ್ನು ಮಂಡಿಸಿದ್ದಾರೆ.

    3 ಹಂತದ ವಿಸ್ತೃತ ಯೋಜನಾ ವರದಿಯನ್ನು ರಾಜ್ಯ ಸರ್ಕಾರ ಈಗಾಗಲೇ ಅನುಮೋದಿಸಿದೆ. 3ನೇ ಹಂತವು ಎರಡು ಕಾರಿಡಾರ್‌ಗಳನ್ನು ಒಳಗೊಂಡಿದೆ. ಅವುಗಳೆಂದರೆ, ಆರೆಂಜ್ ಲೈನ್ ಮತ್ತು 12.5 ಕಿ.ಮೀ ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಎರಡನೇ ಕಾರಿಡಾರ್‌ನ್ನು ಒಳಗೊಂಡಿದೆ.

    ಜೆಪಿ ನಗರ, ಮೈಸೂರು ರಸ್ತೆ, ಸುಮನಹಳ್ಳಿ ಮತ್ತು ಪೀಣ್ಯದಲ್ಲಿ ಇಂಟರ್‌ಚೇಂಜ್ ನಿಲ್ದಾಣಗಳನ್ನು ಯೋಜಿಸಲಾಗಿತ್ತು. ಆದರೆ ಪೀಣ್ಯ ಇಂಟರ್‌ಚೇಂಜ್‌ಗೆ ಸಂಬಂಧಿಸಿದಂತೆ ಮರುಪರಿಶೀಲನೆ ನಡೆಯುತ್ತಿದೆ. ಕಾರಣ ಪೀಣ್ಯದಲ್ಲಿ ಇಂಟರ್ ಚೇಂಜ್ ನಿರ್ಮಾಣಕ್ಕೆ ಅತಿ ಹೆಚ್ಚು ಎತ್ತರಿಸಬೇಕಾದ ಅಗತ್ಯವಿದೆ. ಹೀಗಾಗಿ ದೂರ ಕಡಿಮೆ ಮಾಡುವ ಉದ್ದೇಶದಿಂದ ಗೊರಗುಂಟೆಪಾಳ್ಯಕ್ಕೆ ಸ್ಥಳಾಂತರಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸುತ್ತಿದೆ.ಇದನ್ನೂ ಓದಿ: ಕೇಜ್ರಿವಾಲ್ ತಮ್ಮ ಕ್ರೇಜ್ ಕಳೆದುಕೊಂಡಿದ್ದಾರೆ: ಜಗದೀಶ್ ಶೆಟ್ಟರ್