Tag: nithyananda

  • ಬಿಗಡಾಯಿಸಿತೇ ಬಿಡದಿ ನಿತ್ಯಾನಂದನ ಆರೋಗ್ಯ..?

    ಬಿಗಡಾಯಿಸಿತೇ ಬಿಡದಿ ನಿತ್ಯಾನಂದನ ಆರೋಗ್ಯ..?

    ನವದೆಹಲಿ: ಕೈಲಾಸ ದೇಶದ ಪೀಠಾಧಿಪತಿ ಬಿಡದಿ ನಿತ್ಯಾನಂದನ ಆರೋಗ್ಯ ತೀವ್ರವಾಗಿ ಬಿಗಡಾಯಿಸಿರುವ ಶಂಕೆ ಮೂಡಿದೆ. ತಾನು ಬದುಕಲು ಬಯಸುತ್ತಿಲ್ಲ ಎಂದು ನಿತ್ಯಾನಂದ ಫೇಸ್‍ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

    ತನಗೆ ಕ್ಯಾನ್ಸರ್ ಇಲ್ಲ, ದೇಹದ ಎಲ್ಲಾ ಅಂಗಾಂಗ ಸರಿಯಾಗಿ ಕೆಲಸ ಮಾಡ್ತಿವೆ ಎಂದು ವೈದ್ಯಕೀಯ ವರದಿಗಳು ಹೇಳುತ್ತಿವೆ. ಆದರೆ ತಮಗೆ ಅನ್ನ, ನೀರು ಸೇವಿಸಲು ಆಗುತ್ತಿಲ್ಲ. ಒಂದು ವೇಳೆ ಬಲವಂತವಾಗಿ ಆಹಾರ ಸೇವಿಸಿದರೂ ಅದು ಜೀರ್ಣವಾಗುತ್ತಿಲ್ಲ. ನಿತ್ಯ ಪೂಜೆ ಮಾತ್ರ ಮಾಡಲು ಆಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಹಾಲಿ ಓಬಿಸಿ ನೀತಿಯಡಿ ಬಿಬಿಎಂಪಿ ಚುನಾವಣೆ ನಡೆಸಿ – ಸುಪ್ರೀಂ ಮರು ಆದೇಶ

    ಕಳೆದ ಆರು ತಿಂಗಳಿಂದ ತಾನು ಇದೇ ಸ್ಥಿತಿಯಲ್ಲಿ ಇದ್ದೇನೆ. ತಾನು ಯಾವಾಗಲೂ ನಿರ್ವಿಕಲ್ಪ ಸಮಾಧಿ ಸ್ಥಿತಿ ಇರುತ್ತೇನೆ. ತನಗೆ ಸೂಕ್ತ ಚಿಕಿತ್ಸೆ ನೀಡಲು ಕೈಲಾಸದಲ್ಲಿ ಆಸ್ಪತ್ರೆಗಳು ಇಲ್ಲದ ಕಾರಣ, ತಮ್ಮ ಶಿಷ್ಯರಾದ ವೈದ್ಯರೇ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾರೆ.

     

  • ಗಣೇಶ ಹಬ್ಬಕ್ಕೆ ಕೈಲಾಸ ದೇಶದ ಕರೆನ್ಸಿ ಬಿಡುಗಡೆ ಮಾಡಿದ ನಿತ್ಯಾನಂದ

    ಗಣೇಶ ಹಬ್ಬಕ್ಕೆ ಕೈಲಾಸ ದೇಶದ ಕರೆನ್ಸಿ ಬಿಡುಗಡೆ ಮಾಡಿದ ನಿತ್ಯಾನಂದ

    – ಸನ್ಯಾಸಿಗಳ ತಂಡ ಸಂಶೋಧಿಸಿ ಕರೆನ್ಸಿ ತಯಾರಿಸಿದೆ ಎಂದ ನಿತ್ಯಾ

    ನವದೆಹಲಿ: ಕೊರೊನಾ ಅಟ್ಟಹಾಸದಿಂದಾಗಿ ಭಾರತದಲ್ಲಿ ಗಣೇಶ ಚತುರ್ಥಿಯನ್ನು ಸರಳವಾಗಿ ಆಚರಿಸುವ ನಿರ್ಧಾರ ಕೈಗೊಂಡಿದ್ದರೆ, ಅತ್ತ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಇದೇ ದಿನದಂದು ತನ್ನ ಕೈಲಾಸ ದೇಶದ ರಿಸರ್ವ್ ಬ್ಯಾಂಕ್ ಘೋಷಿಸಿದ್ದಾನೆ.

    ಕೊರೊನಾ ಹಿನ್ನೆಲೆ ಸಾರ್ವಜನಿಕ ಗಣೇಶೋತ್ಸವಗಳಿಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಎಲ್ಲರೂ ಮನೆಯಲ್ಲೇ ಸರಳವಾಗಿ ಹಬ್ಬ ಆಚರಿಸುತ್ತಿದ್ದಾರೆ. ಆದರೆ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಇಕ್ವಿಡಾರ್ ನ ಸಮುದ್ರದ ಮಧ್ಯದಲ್ಲಿರುವ ಪುಟ್ಟ ದ್ವೀಪದಲ್ಲಿ ಅತ್ಯಾಚಾರ ಆರೋಪಿ ನಿತ್ಯಾನಂದ ತನ್ನದೇ ಕೈಲಾಸ ದೇಶದ ರಿಸರ್ವ್ ಬ್ಯಾಂಕ್‍ನ್ನು ತನ್ನ ಸಹಚರರೊಂದಿಗೆ ಲಾಂಚ್ ಮಾಡಿದ್ದಾನೆ.

    ನಾನು ಹಿಂದೂ ಧರ್ಮದ ಸುಧಾರಕನಲ್ಲ, ನಾನು ಪುನರುಜ್ಜೀವನಗೊಳಿಸುವವನು ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ಕರೆನ್ಸಿ ಬಿಡುಗಡೆ ಮಾಡಿದ ಕುರಿತ ಫೋಟೋಗಳನ್ನು ಫೇಸ್ಬುಕ್‍ನಲ್ಲಿ ಹಂಚಿಕೊಂಡಿರುವ ನಿತ್ಯಾನಂದ, ಗಣೇಶ ಚತುರ್ಥಿಯ ಅಂಗವಾಗಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸದ ಕರೆನ್ಸಿಯನ್ನು ಗಣೇಶನ ಹಾಗೂ ಪರಮಶಿವ ಮತ್ತು ಗುರು ಹಿಂದೂ ಧರ್ಮದ ಪ್ರಮುಖ, ಜಗದ್ಗುರು ಮಹಾಸನ್ನಿಧಾನಂ, ದೇವರ ಪ್ರತೀಕವಾಗಿರುವ ಭಗವಾನ್ ನಿತ್ಯಾನಂದ ಪರಮ ಶಿವಂ ಪಾದಗಳಿಗೆ ಅರ್ಪಿಸಲಾಗುತ್ತಿದೆ ಎಂದು ಪೋಸ್ಟ್ ಮಾಡಿದ್ದಾನೆ.

    ಕೈಲಾಸ ಹಾಗೂ ಅದರ ಸನ್ಯಾಸಿಗಳ ತಂಡ 100ಕ್ಕೂ ಹೆಚ್ಚು ಪುಸ್ತಕ, 360 ಲೇಖನಗಳು ಹಾಗೂ ಸಂಶೋಧನಾ ಪ್ರಬಂಧಗಳನ್ನು ಒಳಗೊಂಡ ಹಿಂದೂ ಆರ್ಥಿಕ ನೀತಿಗಳ ಬಗ್ಗೆ ವ್ಯಾಪಕ ಸಂಶೋಧನೆ ಮತ್ತು ಅಧ್ಯಯನ ನಡೆಸಿ, ಕರೆನ್ಸಿ ತಯಾರಿಸಲಾಗಿದೆ ಎಂದು ಪೋಸ್ಟ್‍ನಲ್ಲಿ ಬರೆಯಲಾಗಿದೆ. ಅಲ್ಲದೆ ನಿತ್ಯಾನಂದ ದೈವಿಕ ಪಾವಿತ್ರ್ಯತೆ ಹಾಗೂ ನೇರ ಭಾಷಣಗಳ ಮೂಲಕ ಕರೆನ್ಸಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾನೆ.

    On the auspicious occasion of Ganesha Chaturti in KAILASA, the Reserve Bank of KAILASA offers at the feet of Ganapati,…

    Posted by KAILASA’s HDH Nithyananda Paramashivam on Friday, August 21, 2020

    ಈ ಕುರಿತು ಭಾಷಣ ಮಾಡಿರುವ ನಿತ್ಯಾನಂದ, ಈ ಆರ್ಥಿಕ ನೀತಿಯು ಆಂತರಿಕ ಕರೆನ್ಸಿ ವಿನಿಮಯ ಹಾಗೂ ಬಾಹ್ಯ ವಿಶ್ವ ಕರೆನ್ಸಿ ವಿನಿಮಯವನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸುತ್ತದೆ. ಅಲ್ಲದೆ ಕೈಲಾಸ ದೇಶವು ಮತ್ತೊಂದು ರಾಷ್ಟ್ರದೊಂದಿಗೆ ಎಂಒಯುಗೆ ಸಹಿ ಹಾಕಿದ್ದು, ನಮ್ಮ ರಿಸರ್ವ್ ಬ್ಯಾಂಕ್‍ಗೆ ಆತಿಥ್ಯವಹಿಸಲಿದೆ ಎಂದು ತಿಳಿಸಿದ್ದಾನೆ. ಆದರೆ ಯಾವ ದೇಶ ಎಂಬುದನ್ನು ನಿತ್ಯಾನಂದ ಹೇಳಿಲ್ಲ.

    ನಿತ್ಯಾನಂದ ತನ್ನ ದೇಶಕ್ಕೆ ಕೈಲಾಸ ಎಂದು ನಾಮಕರಣ ಮಾಡಿದ್ದು, ಇದಕ್ಕೆ ತನ್ನನ್ನೇ ಪ್ರಧಾನಿಯಾಗಿ ಘೋಷಿಸಿಕೊಂಡಿದ್ದಾನೆ. ಕಳೆದ ವರ್ಷ ನವೆಂಬರ್‍ನಲ್ಲಿ ಇಂತಹದ್ದೊಂದು ದೇಶ ಕಟ್ಟುತ್ತಿರುವ ಕುರಿತು ನಿತ್ಯಾನಂದ ಮಾಹಿತಿ ನೀಡಿದ್ದ. ನಿತ್ಯಾನಂದನ ವಿರುದ್ಧ 50 ಕ್ಕೂ ಹೆಚ್ಚು ನ್ಯಾಯಾಲಯಗಳಲ್ಲಿ ಪ್ರಕರಣಗಳಿದ್ದು, ವಿಚಾರಣೆಗೆ ಹಾಜರಾಗದೆ ಇಕ್ವಿಡಾರ್ ಗೆ ಪರಾರಿಯಾಗಿದ್ದಾನೆ.

    ಕೈಲಾಸ ಎಲ್ಲಿದೆ ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿದ್ದು, ಇಕ್ವಿಡಾರ್ ನ ಸಮುದ್ರದ ಮಧ್ಯದಲ್ಲಿರುವ ಪುಟ್ಟ ದ್ವೀಪವನ್ನು ನಿತ್ಯಾನಂದ ಖರೀದಿಸಿ ಅದಕ್ಕೆ ಕೈಲಾಸ ಎಂದು ನಾಮಕರಣ ಮಾಡಿದ್ದಾನೆ ಎನ್ನಲಾಗುತ್ತಿದೆ. ಆದರೆ ಇಕ್ವಿಡಾರ್ ಇದನ್ನು ಅಲ್ಲಗಳೆದಿದ್ದು, ಅಂತಹ ಯಾವುದೇ ವ್ಯಕ್ತಿಗೆ ದ್ವೀಪವನ್ನು ನೀಡಿಲ್ಲ ಎಂದು ಹೇಳಿದೆ.

  • ಪೊಲೀಸರೇ ಮಕ್ಕಳಿಗೆ ಆಶ್ಲೀಲ ವಿಡಿಯೋ ತೋರಿಸಿದ್ರು: ನಿತ್ಯಾನಂದನ ಶಿಷ್ಯ

    ಪೊಲೀಸರೇ ಮಕ್ಕಳಿಗೆ ಆಶ್ಲೀಲ ವಿಡಿಯೋ ತೋರಿಸಿದ್ರು: ನಿತ್ಯಾನಂದನ ಶಿಷ್ಯ

    – ತನಿಖಾಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲು

    ಅಹಮದಾಬಾದ್: ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನ ವಿರುದ್ಧ ಅಹಮದಾಬಾದ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಆಶ್ರಮದಲ್ಲಿನ ಮಕ್ಕಳನ್ನೂ ವಿಚಾರಣೆಗೊಳಪಡಿಸಿದ್ದರು. ಆದರೆ ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ನಿತ್ಯಾನಂದನ ಶಿಷ್ಯ, ತನಿಖಾಧಿಕಾರಿಗಳು ಆಶ್ರಮದ ಮಕ್ಕಳಿಗೆ ಅಶ್ಲೀಲ ವಿಡಿಯೋ ತೋರಿಸಿ, ಭಾವನಾತ್ಮಕವಾಗಿ ಬೆದರಿಸಿ ತಮಗೆ ಬೇಕಾದಂತೆ ಹೇಳಿಕೆ ಪಡೆದಿದ್ದಾರೆ ಎಂದು ಆರೋಪಿಸಿದ್ದಾನೆ.

    ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಮಾರ್ಚ್ 6ರಂದು ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯುಸಿ)ಯ ಸದಸ್ಯರೂ ಸೇರಿದಂತೆ 14 ಜನ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಅಹಮದಾಬಾದ್‍ನ ಹೊರವಲಯದಲ್ಲಿರುವ ಗುರುಕುಲ ಹಾಗೂ ಆಶ್ರಮದಲ್ಲಿ ನಿತ್ಯಾನಂದನ ಅನುಯಾಯಿಗಿದ್ದ ಗಿರೀಶ್ ತುರ್ಲಪತಿ ಸಲ್ಲಿಸಿದ್ದ ದೂರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಅಧಿಕಾರಿಗಳ ವಿರುದ್ಧ ಪೊಕ್ಸೊ ಕಾಯ್ದೆ, ಐಪಿಸಿ ಸೆಕ್ಷನ್ಸ್ ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆದೇಶಿಸಿದೆ. ಅದರಂತೆ ಅಹಮದಾಬಾದ್ ಜಿಲ್ಲೆಯ ವಿವೇಕಾನಂದ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಈ ಮೂಲಕ ಇನ್‍ಸ್ಪೆಕ್ಟರ್ ಆರ್.ಬಿ.ರಾಣಾ, ಡಿಎಸ್‍ಪಿ ಕೆ.ಟಿ.ಕರಿಮಾರಿಯಾ, ರಿಯಾಜ್ ಸರ್ವಾಯಿಯಾ, ಎಸ್.ಎಚ್.ಶಾರದಾ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ದಿಲೀಪ್ ಮೇರ್, ಸಿಡಬ್ಲ್ಯುಸಿ ಅಧ್ಯಕ್ಷರು ಹಾಗೂ ಸದಸ್ಯರ ಆರೋಪಿ ಸ್ಥಾನದಲ್ಲಿದ್ದಾರೆ.

    ವಿಚಾರಣೆ ನಡೆಸಿದ್ದಕ್ಕಾಗಿ ನಿತ್ಯಾನಂದನ ಶಿಷ್ಯ ತುರ್ಲಪತಿ ಪೊಲೀಸರು ಹಾಗೂ ಸಿಡಬ್ಲ್ಯುಸಿ ಸದಸ್ಯರ ವಿರುದ್ಧವೇ ಕೇಸ್ ಹಾಕಿದ್ದಾರೆ. ವಿವೇಕಾನಂದ ನಗರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಆರ್.ಬಿ.ರಾಣಾ ಹಾಗೂ ಸಿಡಬ್ಲ್ಯುಸಿ ಸದಸ್ಯರು ಸೇರಿದಂತೆ ಪೊಲೀಸ್ ಅಧಿಕಾರಿಗಳು ಆಶ್ರಮದ ಅಪ್ರಾಪ್ತರಿಗೆ ಅಸಭ್ಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೆ ತನಿಖಾಧಿಕಾರಿಗಳು ಮಕ್ಕಳಿಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಪೊಲೀಸ್ ಅಧಿಕಾರಿಗಳು ಹಾಗೂ ಸಿಡಬ್ಲ್ಯುಸಿ ಸದಸ್ಯರು ಮಕ್ಕಳಿಂದ ಅನುಕೂಲಕರ ಹೇಳಿಕೆ ಪಡೆಯಲು ಮಕ್ಕಳನ್ನು ಭಾವನಾತ್ಮಕವಾಗಿ ಬ್ಲ್ಯಾಕ್‍ಮೇಲ್ ಮಾಡಲು ಪ್ರಯತ್ನಿಸಿದರು. ಅಲ್ಲದೆ ಅವರಿಗೆ ಪೋರ್ನ್ ವಿಡಿಯೋ ಹಾಗೂ ಫೋಟೋಗಳನ್ನು ತೋರಿಸಿದ್ದಾರೆ. ಈ ಮೂಲಕ ಮಕ್ಕಳಿಗೆ ಮಾನಸಿಕ ಹಿಮಸೆ ನಿಡಿದ್ದಾರೆ ಎಂದು ತುರ್ಲಪತಿ ಆರೋಪಿಸಿದ್ದಾರೆ.

    ಕೋರ್ಟ್ ಆದೇಶದ ಮೇರೆಗೆ ಮಾರ್ಚ್ 6ರಂದು ಪೊಲೀಸ್ ಅಧಿಕಾರಿಗಳು ಸೇರಿ ಒಟ್ಟು 14 ಜನರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದೇವೆ. ಈವರೆಗೆ ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಮುಂದಿನ ತನಿಖೆಯನ್ನು ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಕಳೆದ ವರ್ಷ ನವೆಂಬರ್‍ನಲ್ಲಿ ಇದೇ ಪೊಲೀಸ್ ಠಾಣೆಯಲ್ಲಿ ಮೂವರು ಮಕ್ಕಳನ್ನು ಅಪಹರಿಸಿ ಬಂಧಿಸಿರುವ ಕುರಿತು ನಿತ್ಯಾನಂದನ ವಿರುದ್ಧ ಪ್ರಕರಣ ದಾಖಲಾಗಿತ್ತು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಹುಡುಗನನ್ನು ಅಪಹರಿಸಲಾಗಿದೆ ಎಂದು ದೂರು ದಾಖಲಾಗಿತ್ತು. ಅಲ್ಲದೆ ಇತ್ತೀಚೆಗೆ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಬಂಧನದಲ್ಲಿಟ್ಟುಕೊಂಡಿದ್ದ ನಿತ್ಯಾನಂದ ದೇಶದಿಂದ ಪರಾರಿಯಾಗಿದ್ದಾನೆ. ಹೀಗಾಗಿ ನಿತ್ಯಾನಂದನ ಕುರಿತು ಮಾಹಿತಿ ಕೋರಿ ಇಂಟರ್‍ಪೋಲ್ ಬ್ಲ್ಯೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ.

  • ನಿತ್ಯಾನಂದನ ಆಸ್ತಿ ವಿವರ ಸಲ್ಲಿಕೆಗೆ ಕೋರ್ಟ್ ಸೂಚನೆ

    ನಿತ್ಯಾನಂದನ ಆಸ್ತಿ ವಿವರ ಸಲ್ಲಿಕೆಗೆ ಕೋರ್ಟ್ ಸೂಚನೆ

    ರಾಮನಗರ: ನ್ಯಾಯಾಲಯದ ವಿಚಾರಣೆಗೆ ಪದೇ ಪದೇ ಗೈರಾಗುತ್ತಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಹಾಗೂ ಶೀಲಂ ರೆಡ್ಡಿ ಆಸ್ತಿ ಮುಟ್ಟುಗೋಲಿಗೆ ರಾಮನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುಂದಾಗಿದ್ದು, ಆಸ್ತಿ ವಿವರ ಸಲ್ಲಿಸುವಂತೆ ಸಿಓಡಿ ಅಧಿಕಾರಿಗಳಿಗೆ ನ್ಯಾಯಾಲಯ ಆದೇಶಿಸಿದೆ.

    ವಿವಾದಿತ ಸ್ವಾಮೀಜಿ ಬಿಡದಿಯ ನಿತ್ಯಾನಂದನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ನಿತ್ಯಾನಂದ ಹಾಗೂ ಆತನ ಹಿಂಬಾಲಕ ಗೋಪಾಲ ಶೀಲಂ ರೆಡ್ಡಿ ಅವರ ಇಡೀ ಆಸ್ತಿ ವಿವರಗಳನ್ನು ಸಲ್ಲಿಸುವಂತೆ ಸಿಒಡಿ ಅಧಿಕಾರಿಗಳಿಗೆ ರಾಮನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಆದೇಶಿಸಿದೆ.

    ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದನ ವಿರುದ್ಧ ಈಗಾಗಲೇ ಎಂಡ್ ಡೇಟೆಡ್ ವಾರೆಂಟ್ ಜಾರಿಯಾಗಿದೆ. ಅನೇಕ ಬಾರಿ ವಿಚಾರಣೆಗೆ ಸಹ ಗೈರಾಗಿದ ಹಿನ್ನೆಲೆಯಲ್ಲಿ ನಿತ್ಯಾನಂದ ಹಾಗೂ ಗೋಪಾಲ ಶೀಲಂ ರೆಡ್ಡಿಯ ಆಸ್ತಿ ಮುಟ್ಟುಗೊಲು ಹಾಕಿಕೊಳ್ಳಲು ನ್ಯಾಯಾಲಯ ಮುಂದಾಗಿದೆ. ಹೀಗಾಗಿ ಈ ಇಬ್ಬರು ಆರೋಪಿಗಳ ಆಸ್ತಿ ವಿವರ ಸಲ್ಲಿಸುವಂತೆ ತನಿಖಾಕಾರಿಗಳಿಗೆ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದಲಿಂಗಪ್ರಭು ಅವರು ಸೂಚಿಸಿದ್ದಾರೆ.

    ಪ್ರಕರಣದ 2ನೇ ಆರೋಪಿಯಾದ ಗೋಪಾಲ ಶೀಲಂ ರೆಡ್ಡಿ ವಿರುದ್ಧವೂ ಜಾಮೀನು ರಹಿತ ವಾರೆಂಟ್ ಜಾರಿಯಾಗಿರುವುದರಿಂದ ಈತನಿಗಾಗಿಯು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ನಿತ್ಯಾನಂದನ ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಲಾಗಿದೆ.

  • ನಿತ್ಯಾನಂದನ ಜಾಮೀನು ರದ್ದು, ಬಾಂಡ್ ಮುಟ್ಟುಗೋಲು – ಅರೆಸ್ಟ್ ವಾರೆಂಟ್ ಜಾರಿ

    ನಿತ್ಯಾನಂದನ ಜಾಮೀನು ರದ್ದು, ಬಾಂಡ್ ಮುಟ್ಟುಗೋಲು – ಅರೆಸ್ಟ್ ವಾರೆಂಟ್ ಜಾರಿ

    ರಾಮನಗರ: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ನಿರಂತರವಾಗಿ ನ್ಯಾಯಾಲಯದ ವಿಚಾರವಣೆಗೆ ಗೈರಾಗುತ್ತಿದ್ದ ಹಿನ್ನೆಲೆಯಲ್ಲಿ ರಾಮನಗರದ 3ನೇ ಜಿಲ್ಲಾ ಸತ್ರ ನ್ಯಾಯಾಲಯವು ಜಾಮೀನು ರದ್ದುಗೊಳಿಸಿ ಜಾಮೀನು ರಹಿತಿ ಬಂಧನದ ವಾರೆಂಟ್ ಜಾರಿಗೊಳಿಸಿದೆ.

    ರಾಮನಗರ ತಾಲೂಕಿನ ಬಿಡದಿಯ ಧ್ಯಾನಪೀಠದ ನಿತ್ಯಾನಂದ, ಅತ್ಯಾಚಾರ ಪ್ರಕರಣದ ಸುಳಿಯಲ್ಲಿ ಸಿಲುಕಿದ್ದನು. ಜಾಮೀನು ಪಡೆದು, ತಾನು ಆರು ವರ್ಷದ ಬಾಲಕನೆಂದು ಪುರುಷತ್ವ ಪರೀಕ್ಷೆಗೆ ಒಳಗಾಗಿದ್ದ. ನಂತರ ಪ್ರಕರಣದ ಹಿನ್ನೆಲೆಯಲ್ಲಿ ಜಾಮೀನು ಪಡೆದು ದೇಶದಾದ್ಯಂತ ಓಡಾಡ್ತಿದ್ದ ನಿತ್ಯಾನಂದ ಇದೀಗ ದೇಶ ಬಿಟ್ಟು ಪರಾರಿಯಾಗಿದ್ದಾನೆ. ನಿತ್ಯಾನಂದನಿಗಾಗಿ ಸಿಐಡಿ ಅಧಿಕಾರಿಗಳು ತೀವ್ರ ಶೋಧ ಕಾರ್ಯ ನಡೆಸ್ತಿದ್ದಾರೆ.

    ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸುಮಾರು 36 ಕ್ಕೂ ಹೆಚ್ಚು ನ್ಯಾಯಾಲಯದ ವಿಚಾರಣೆಗೆ ನಿತ್ಯಾನಂದ ಗೈರಾಗಿದ್ದ. ಈ ಹಿನ್ನೆಲೆಯಲ್ಲಿ ನಿತ್ಯಾನಂದ ವಿಚಾರಣೆಗೆ ಗೈರಾಗುತ್ತಿದ್ದು ಆತನಿಗೆ ನೀಡಿರುವ ಜಾಮೀನನ್ನ ರದ್ದುಗೊಳಿಸುವಂತೆ ಹೈಕೋರ್ಟ್‍ನಲ್ಲಿ ಮನವಿ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ನಿತ್ಯಾನಂದನಿಗೆ ನೀಡಿದ್ದ ಜಾಮೀನನ್ನ ರದ್ದುಗೊಳಿಸಿ ಆದೇಶಿಸಿದ್ರು. ಅಲ್ಲದೇ ಪ್ರಕರಣದ ವರ್ಗಾವಣೆ ಮನವಿಯನ್ನ ರದ್ದುಗೊಳಿಸಿ ರಾಮನಗರದ ಜಿಲ್ಲಾ ನ್ಯಾಯಾಲಯದಲ್ಲೇ ವಿಚಾರಣೆ ನಡೆಸುವಂತೆ ಆದೇಶಿಸಿದರು.

    ರಾಮನಗರದ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲದಲ್ಲಿ ನಡೆದ ವಿಚಾರಣೆಯಲ್ಲಿ ಇಂದು ಕೂಡಾ ನಿತ್ಯಾನಂದ ಗೈರಾಗಿದ್ದ. ರಾಮನಗರಕ್ಕೆ ಆಗಮಿಸಿದ್ದ ಸಿಐಡಿ ಅಧಿಕಾರಿಗಳು ಸರ್ಕಾರಿ ಪರ ವಕೀಲ ಎಂ.ಡಿ ರಘುರವರ ಬಳಿ ನಿತ್ಯಾನಂದನ ಜಾಮೀನು ರದ್ದುಗೊಳಿಸಿ, ಜಾಮೀನಿನ ಬಾಂಡ್ ಮುಟ್ಟುಗೊಲು ಹಾಗೂ ಜಾಮೀನು ರಹಿತ ವಾರೆಂಟ್‍ಗೆ ಮನವಿ ಮಾಡಿದ್ರು. ಮನವಿ ಹಿನ್ನೆಲೆಯಲ್ಲಿ ವಾದ ಮಂಡಿಸಿದ ಸರ್ಕಾರಿ ವಕೀಲರ ವಾದವನ್ನ ಪುರಸ್ಕರಿಸಿದ ನ್ಯಾಯಾಧೀಶ ಸಿದ್ದಲಿಂಗಪ್ರಭುರವರು ಜಾಮೀನು ರಹಿತ ವಾರೆಂಟ್‍ನ್ನು ಆದೇಶಿಸಿದ್ದಾರೆ.

    ನಿತ್ಯಾನಂದ ಜಾಮೀನು ಪಡೆಯುವ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಬಾಂಡ್‍ಗಳನ್ನು ಜಪ್ತಿಗೊಳಿಸಿ ಬಂಧಿಸುವಂತೆ ಆದೇಶಿಸಲಾಗಿದೆ. ಇತ್ತ ದೇಶ ಬಿಟ್ಟು ಪರಾರಿಯಾಗಿರುವ ನಿತ್ಯಾನಂದ ಅಜ್ಞಾತ ಸ್ಥಳದಲ್ಲಿದ್ದು ಸಿಐಡಿ ಅಧಿಕಾರಿಗಳು ನಿತ್ಯಾನಂದನಿಗಾಗಿ ಶೋಧ ಕಾರ್ಯವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ನಿತ್ಯಾನಂದನ ಬಂಧನಕ್ಕಾಗಿ ವಿಶೇಷ ತಂಡವನ್ನು ರಚನೆ ಮಾಡಿದ್ದು ಕಾರ್ಯಾಚರಣೆ ನಡೆಸ್ತಿದ್ದಾರೆ.

  • ಸೂರ್ಯನಿಗೆ ಟಾರ್ಚ್ ಬಿಟ್ಟ ನಂತ್ರ ಕೊರೊನಾಗೆ ಔಷಧಿ ಕಂಡು ಹಿಡಿದ ನಿತ್ಯಾನಂದ

    ಸೂರ್ಯನಿಗೆ ಟಾರ್ಚ್ ಬಿಟ್ಟ ನಂತ್ರ ಕೊರೊನಾಗೆ ಔಷಧಿ ಕಂಡು ಹಿಡಿದ ನಿತ್ಯಾನಂದ

    ಬೆಂಗಳೂರು: ವಿಶ್ವಾದ್ಯಂತ ಹರಡುತ್ತಿರುವ ಕೊರೊನಾ ವೈರಸ್‍ಗೆ ಸ್ವಯಂ ಘೋಷಿತ ದೈವಮಾನವ ನಿತ್ಯಾನಂದ ಔಷಧಿ ಕಂಡುಹಿಡಿದ್ದೇನೆ ಎಂದು ವಿಡಿಯೋವೊಂದನ್ನು ಹರಿಬಿಟ್ಟಿದ್ದಾನೆ.

    ಕೊರೊನಾವನ್ನು ನಾನು ಗುಣಪಡಿಸುತ್ತೇನೆ. ಸೋಂಕಿಗೆ ಮದ್ದು ಕಂಡು ಹಿಡಿದಿದ್ದೇನೆ. ಇಂದಿನಿಂದ ಕೊರೊನಾಗೆ ಚಿಕಿತ್ಸೆ ಕೊಡಲಿರುವೆ ಎಂದು ನಿತ್ಯಾನಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ನಾನು ಹೇಳುವ ಮಂತ್ರವನ್ನು 48 ಗಂಟೆಗಳ ಕಾಲ ಪಠಿಸಿದರೆ ಸಾಕು ಕೊರೊನಾ ವೈರಸ್ ದೇಹ ಬಿಟ್ಟು ಹೋಗುತ್ತೆ ಎಂದಿದ್ದಾನೆ. ಇದನ್ನೂ ಓದಿ:ಹೊಸ ದೇಶವನ್ನೇ ಕಟ್ಟಿದ ನಿತ್ಯಾನಂದ – ಕ್ಯಾಬಿನೆಟ್ ರಚನೆ, ಪ್ರಧಾನಿ ಆಯ್ಕೆ

    “ಓಂ ನಿತ್ಯಾನಂದ ಪರಮ ಶಿವೋಹಂ” ಎಂದು ನಿರಂತರ 48 ಗಂಟೆಗಳ ಕಾಲ ಮಂತ್ರ ಪಠಿಸಿದರೆ ಕೊರೊನಾ ದೇಹ ಬಿಟ್ಟು ಹೋಗುತ್ತೆ ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ. ಈ ಮಂತ್ರ ಪಠಿಸಿದರೆ 48 ಗಂಟೆ ಧನಾತ್ಮಕ, ಆಧ್ಯಾತ್ಮಿಕ ಶಕ್ತಿ ದೇಹದಿಂದ ಕೊರೊನಾ ಓಡಿಹೋಗುತ್ತೆ. ಶುಕ್ರವಾರದಿಂದ ಭಾನುವಾರದವರೆಗೂ ಕೈಲಾಸದಲ್ಲಿ ಸ್ಪೆಷಲ್ ಕ್ಲಾಸ್ ಇದೆ. ಕೊರೊನಾ ಪೀಡಿತರು ಇಲ್ಲಿ ಸೇರಿ ಎಂದು ವಿಡಿಯೋ ಮೂಲಕ ನಿತ್ಯಾನಂದ ಸಂದೇಶ ರವಾನಿಸಿದ್ದಾನೆ.

    ಸೂರ್ಯನಿಗೆ ಟಾರ್ಚ್ ಬಿಟ್ಟಿದ್ದ:
    ನಾನು ಧ್ವಜಾರೋಹಣ ಮುಗಿಸೋವರೆಗೂ ಕಾಣಿಸಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ಅದಕ್ಕೆ ಅವನು ಬಿಡದಿಯಲ್ಲಿ 40 ನಿಮಿಷ ತಡವಾಗಿ ಹುಟ್ಟಿದ್ದ ಎಂದು ನಿತ್ಯಾನಂದ ಸ್ವಾಮೀಜಿ ಈ ಹಿಂದೆ ಭರ್ಜರಿ ಬಿಲ್ಡಪ್ ಕೊಟ್ಟಿದ್ದ. ಬಿಡದಿ ಆಶ್ರಮದಲ್ಲಿ ವಿದೇಶಿ ಭಕ್ತಾದಿಗಳನ್ನು ಸುತ್ತಲು ಕೂರಿಸಿಕೊಂಡು ನಾನು ಆದೇಶ ನೀಡಿದ್ದಕ್ಕೆ ಸೂರ್ಯ ತಡವಾಗಿ ಉದಯಿಸಿದ. ಬಿಡದಿಯಲ್ಲಿ ಮಾತ್ರ 40 ನಿಮಿಷ ತಡವಾಗಿ ಕಾಣಿಸಿಕೊಂಡ ಎಂದು ನಿತ್ಯಾನಂದ ಹೇಳಿದ್ದ. ಇದನ್ನೂ ಓದಿ: ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ, ನಾನು ಪರಮಶಿವ- ನಿತ್ಯಾನಂದನ ವಿಡಿಯೋ ವೈರಲ್

    ನಿತ್ಯಾನಂದ ಹೇಳಿದ್ದೇನು?
    ದಿನ ಆರಂಭವಾಗುವುದು ಸೂರ್ಯೋದಯದ ಮೂಲಕ. ಇವತ್ತು ಎಷ್ಟು ಮಂದಿ ಸೂರ್ಯೋದಯವನ್ನು ನೋಡಿದ್ದೀರೋ ಗೊತ್ತಿಲ್ಲ. ಇವತ್ತು ನಾನು ಧ್ವಜರೋಹಣಕ್ಕೆ ತಡವಾಗಿ ಬಂದೆ. ಪ್ರತಿದಿನ ಮುಂಜಾನೆ 6:40ರಿಂದ 7 ರವರೆಗೆ ಧ್ವಜರೋಹಣ ನಡೆಯುತ್ತದೆ. ಆದರೆ ನಾನು ಇಂದು ಕೊಂಚ ತಡವಾಗಿ ಬಂದೆ. ನಾನು ಹೇಳೋವರೆಗೆ, ಧ್ವಜಾರೋಹಣ ಮುಗಿಸೋವರೆಗೆ ನೀನು ಕಾಣಿಸಿಕೊಳ್ಳಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ನಾನು ಹೇಳಿದ ತಕ್ಷಣ ಸೂರ್ಯ ಅವತ್ತು ಬಿಡದಿಯಲ್ಲಿ ನಲವತ್ತು ನಿಮಿಷ ತಡವಾಗಿ ಕಾಣಿಸಿಕೊಂಡ.

    ಬಿಡದಿಯಲ್ಲಿ ಮಾತ್ರ ಈ ಅಚ್ಚರಿ ನಡೆದಿದ್ದು, ಬೇಕಾದರೆ ಗೂಗಲ್ ನಲ್ಲಿ ಇಂದಿನ ಸೂರ್ಯೋದಯದ ಸಮಯ ಎಷ್ಟಿತ್ತು? ಬಿಡದಿಯಲ್ಲಿ ಸೂರ್ಯೋದಯವಾದ ಸಮಯ ನೋಡಿ ಆಗ ಗೊತ್ತಾಗುತ್ತೆ. ಇದೆಲ್ಲ ನನ್ನಿಂದ ಮಾತ್ರ ಸಾಧ್ಯ ಎಂದು ವಿವರಿಸಿದ್ದ. ನಿತ್ಯಾನಂದನ ಈ ಮಾತನ್ನು ಹೇಳುತ್ತಿದ್ದಂತೆ ಅಲ್ಲಿದ್ದ ವಿದೇಶಿ ಮಹಿಳಾ ಭಕ್ತೆಯರು ಚಪ್ಪಾಳೆ ತಟ್ಟಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ.

    https://www.facebook.com/theavatarclicks/videos/165762454725106/

  • ಫೆಬ್ರವರಿ 5ಕ್ಕೆ ನಿತ್ಯಾನಂದನ ಭವಿಷ್ಯ

    ಫೆಬ್ರವರಿ 5ಕ್ಕೆ ನಿತ್ಯಾನಂದನ ಭವಿಷ್ಯ

    ಬೆಂಗಳೂರು: ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಫೆಬ್ರವರಿ 5ಕ್ಕೆ ತನ್ನ ತೀರ್ಪನ್ನು ಕಾಯ್ದಿರಿಸಿದೆ.

    ನಿತ್ಯಾನಂದ ಆಧ್ಯಾತ್ಮದ ಹೆಸರಿನಲ್ಲಿ ಚಾತುರ್ಮಾಸ ಅಂತ ಊರು ಬಿಟ್ಟಿದ್ದಾನೆ. ಹೀಗೆ ಊರು ಬಿಟ್ಟವನಿಗೆ ಪೊಲೀಸರು ರಕ್ಷಣೆಯನ್ನು ನೀಡುವ ಹಾಗಿಲ್ಲ. ಹೀಗಿರುವಾಗ ಕಾನೂನಿನ ರಕ್ಷಣೆಯನ್ನು ಕೊಡಬಾರದು, ಕೂಡಲೇ ನಿತ್ಯಾನಂದನ ಜಾಮೀನು ವಜಾಗೊಳಿಸುವಂತೆ ಲೆನಿನ್ ಪರ ವಕೀಲರು ಇಂದು ಹೈ ಕೋರ್ಟಿನಲ್ಲಿ ವಾದ ಮಂಡಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ, ನಾನು ಪರಮಶಿವ- ನಿತ್ಯಾನಂದನ ವಿಡಿಯೋ ವೈರಲ್

    ನಿತ್ಯಾನಂದ ಇಲ್ಲದೇ ಇರುವ ಕಾರಣ ಆತನ ಪ್ರಕರಣಕ್ಕೇನು ತೊಂದರೆ ಆಗಿಲ್ಲ. ಕೆಳಹಂತದ ನ್ಯಾಯಾಲಯದಲ್ಲಿ ಅದರ ಪಾಡಿಗೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಪ್ರಕರಣದ ದೋಷಾರೋಪ ಪಟ್ಟಿಯೂ ತಯಾರಾಗಿದ್ದು, ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ನಿತ್ಯಾನಂದನ ಅವಶ್ಯಕತೆಯಿಲ್ಲ. ಪದೇ ಪದೇ ಕೋರ್ಟಿನಲ್ಲಿ ಆತ ಇರೋದು ಬೇಕಾಗಿಲ್ಲ ಎಂದು ನಿತ್ಯಾನಂದ ಪರ ವಕೀಲರು ವಾದ ಮಂಡಿಸಿದರು.

    ಆದರೆ ನಿತ್ಯಾನಂದನ ಪಾಸ್‍ಪೋರ್ಟ್ ಕಾಲಾವಧಿ ಮುಕ್ತಾಯ ಆಗಿದ್ದರೂ ಕೂಡ ಆತ ದೇಶ ಬಿಟ್ಟು ಹೋಗಿದ್ದಾನೆ. ಪೊಲೀಸರು ಆ ಮಾಹಿತಿಯನ್ನು ಅಧಿಕೃತವಾಗಿ ಎಲ್ಲಿಯೂ ಹೇಳುತ್ತಿಲ್ಲ. ಪಾಸ್‍ಪೋಟ್ ಇಲ್ಲದೇ ದೇಶ ಬಿಟ್ಟು ಹೋಗಿರೋದು ದೇಶದ್ರೋಹ. ಅತ್ಯಾಚಾರಿ ಓರ್ವ ದೇಶ ಬಿಟ್ಟಿರೋದೇ ಅಪರಾಧ. ಹೀಗಾಗಿ ನಿತ್ಯಾನಂದನ ಜಾಮೀನು ರದ್ದು ಮಾಡುವಂತೆ ವಕೀಲರು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಫೆಬ್ರವರಿ 5ಕ್ಕೆ ಈ ಸಂಬಂಧ ಆದೇಶ ಕಾಯ್ದಿರಿಸಿದೆ.

  • ನಿತ್ಯಾನಂದನಿಗೆ ಸಮನ್ಸ್ ನೀಡಿದ ಹೈಕೋರ್ಟ್

    ನಿತ್ಯಾನಂದನಿಗೆ ಸಮನ್ಸ್ ನೀಡಿದ ಹೈಕೋರ್ಟ್

    ಬೆಂಗಳೂರು: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಹೈಕೋರ್ಟ್ ಸಮನ್ಸ್ ನೀಡಿದೆ.

    ನಿತ್ಯಾನಂದ ಸ್ವಾಮಿ ಜಾಮೀನು ರದ್ದತಿ ಕೋರಿ ದೂರುದಾರ ಲೆನಿನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠ ಸಮನ್ಸ್ ಜಾರಿ ಮಾಡಿದೆ.

    ಅರ್ಜಿ ವಿಚಾರಣೆ ವೇಳೆ ನಿತ್ಯಾನಂದನಿಗೆ ಎಷ್ಟು ಬಾರಿ ಸಮನ್ಸ್ ನೀಡಲಾಗಿದೆ. ಎಷ್ಟು ಬಾರಿ ವಿಚಾರಣೆಗೆ ಹಾಜರಾಗಿದ್ದಾನೆ ಎಂಬ ಪ್ರಶ್ನೆ ಹಾಕಿತ್ತು. ಇದಕ್ಕೆ ಉತ್ತರಿಸಿದ ಲೆನಿನ್ ಪರ ವಕೀಲರು, ನಿತ್ಯಾನಂದನಿಗೆ 45 ಬಾರಿ ಸಮನ್ಸ್ ನೀಡಲಾಗಿದೆ 45 ಬಾರಿ ವಿಚಾರಣೆಗೆ ನಿತ್ಯಾನಂದ ಗೈರು ಹಾಜರಾಗಿದ್ದಾರೆ. ನಿತ್ಯಾನಂದ ಭಾರತದಿಂದ ಪರಾರಿಯಾಗಿ ಒಂದೂವರೆ ವರ್ಷ ಕಳೆದಿದೆ ಎಂದು ಮಾಹಿತಿ ನೀಡಿದರು.

    ನಿತ್ಯಾನಂದನಿಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್, ರಾಜ್ಯ ಸರ್ಕಾರ, ಸಿಐಡಿಗೆ ನೋಟಿಸ್ ಜಾರಿ ಮಾಡಿದೆ. ನಿತ್ಯಾನಂದನ ಪ್ರಕರಣ ಬಗ್ಗೆ ಉತ್ತರ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಿತ್ಯಾನಂದ ಕಳೆದ ಒಂದೂವರೆ ವರ್ಷದಿಂದ ನಾಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ದೂರುದಾರ ಲೆನಿನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು.

  • ನಿತ್ಯಾನಂದನಿಗೆ ಶಾಕ್ ಕೊಡಲು ಪೊಲೀಸರು ಪ್ಲಾನ್

    ನಿತ್ಯಾನಂದನಿಗೆ ಶಾಕ್ ಕೊಡಲು ಪೊಲೀಸರು ಪ್ಲಾನ್

    ಗಾಂಧಿನಗರ: ಸ್ವಯಂಘೋಷಿತ ದೇವ ಮಾನವ ನಿತ್ಯಾನಂದನಿಗೆ ಶಾಕ್ ಕೊಡಲು ಗುಜರಾತಿನ ಪೊಲೀಸರು ಪ್ಲಾನ್ ಮಾಡಿಕೊಂಡಿದ್ದಾರೆ. ನಿತ್ಯಾನಂದನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

    ಕಳೆದ ವರ್ಷ ನಿತ್ಯಾನಂದನ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿತ್ತು. ಈಗಾಗಲೇ ನಿತ್ಯಾನಂದನ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಇದೀಗ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ್ರೆ ನಿತ್ಯಾನಂದ ಸಂಕಷ್ಟಕ್ಕೆ ಸಿಲುಕೋದು ಖಚಿತ. ಸದ್ಯ ನಿತ್ಯಾನಂದ ವಿದೇಶದಲ್ಲಿದ್ದಾನೆ ಎಂದು ಹೇಳಲಾಗುತ್ತಿದೆ. ಈಗಾಗಲೇ ದ್ವೀಪವೊಂದನ್ನು ಖರೀದಿಸಿರುವ ನಿತ್ಯಾನಂದ ತನ್ನದೇ ಆದ ಸಾಮ್ರಾಜ್ಯ ಕಟ್ಟಿಕೊಂಡಿದ್ದಾನೆ ಎಂದು ವರದಿಗಳು ಬಿತ್ತರವಾಗಿತ್ತು. ಈ ಹಿನ್ನೆಲೆಯಲ್ಲಿ ಇಂಟರ್ ಪೋಲ್ ಬಳಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಗುಜರಾತ್ ಪೊಲೀಸರು ಮನವಿ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

    ಪ್ರಕರಣದ ಹಿನ್ನೆಲೆ:
    ಯುವತಿಯರಿಗೆ ಚಿತ್ರ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನಿಗಾಗಿ ಗುಜರಾತ್ ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಬೆಂಗಳೂರಿನ ದಂಪತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಿತ್ಯಾನಂದನಿಗಾಗಿ ಶೋಧ ಕಾರ್ಯ ಪ್ರಾರಂಭಿಸಿದ್ದು, ನಿತ್ಯಾನಂದನ ಆಶ್ರಮದ ಅಹಮದಾಬಾದ್ ಶಾಖೆಯಲ್ಲಿದ್ದ ಹೆಣ್ಣುಮಕ್ಕಳನ್ನು ಹಿಂಸಿಸುತ್ತಿದ್ದ ಎಂದು ದಂಪತಿ ದೂರು ನೀಡಿದ್ದಾರೆ.

    ಅಹ್ಮದಾಬಾದ್ ಜಿಲ್ಲೆಯ ಹಿರಾಪುರ ಗ್ರಾಮದಲ್ಲಿರುವ ಶಾಲೆಯೊಂದರ ಆವರಣದಲ್ಲಿ ನಿತ್ಯಾನಂದನ ಆಶ್ರಮವಿದೆ. ಅಲ್ಲದೆ ಬೆಂಗಳೂರಿನ ಬಿಡದಿಯಲ್ಲಿ ಧ್ಯಾನಪೀಠಂ ಎಂಬ ಹೆಸರಿನ ವಿಶಾಲವಾದ ಆಶ್ರಮವನ್ನು ಸಹ ನಡೆಸುತ್ತಿದ್ದಾರೆ. 5 ವರ್ಷಗಳ ಅವಧಿಯಲ್ಲಿ ಶಿಷ್ಯೆ ಮೇಲೆಯೇ ಅತ್ಯಾಚಾರ ಎಸಗಿರುವ ಎಂಬ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದ ಒಂದು ವರ್ಷದಿಂದಲೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿಲ್ಲ.

    ಸೆಪ್ಟೆಂಬರ್ 2018ರಲ್ಲಿ ನಿತ್ಯಾನಂದನ ಪಾಸ್‍ಪೋರ್ಟ್ ಅವಧಿ ಮುಗಿದ ಕಾರಣ ಆತ ಅಕ್ರಮವಾಗಿ ದೇಶವನ್ನು ತೊರೆದಿರಬಹುದು ಎಂದು ಗುಜರಾತ್ ಪೊಲೀಸರು ಶಂಕಿಸಿದ್ದಾರೆ. ಸ್ವಯಂ ಘೋಷಿತ ದೇವ ಮಾನವನ ವಿರುದ್ಧ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಪಾಸ್‍ಪೋರ್ಟ್ ನವೀಕರಿಸುವ ಕುರಿತ ಅರ್ಜಿಯನ್ನು ತಿರಸ್ಕರಿಸಲಾಗಿದೆ.

    ಬ್ಲೂ ಕಾರ್ನರ್ ನೋಟಿಸ್: ಮತ್ತೊಂದು ದೇಶದಲ್ಲಿರುವ ಅಪರಾಧಿ ಅಥವಾ ಆರೋಪಿಯ ಪತ್ತೆಗಾಗಿ ಮತ್ತು ಕುಟುಂಬದ, ವ್ಯವಹಾರ ವಿವರಣೆ ಪಡೆಯುದಕ್ಕಾಗಿ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗುತ್ತದೆ. ಈ ನೋಟಿಸ್ ಹೊರಡಿಸಿದಾಗ ಆರೋಪಿಗೆ ಆಶ್ರಯ ನೀಡಿದ ದೇಶ ಆತನನ್ನು ಬಂಧಿಸಲ್ಲ. ಆದರೆ ಆರೋಪಿ ಅಥವಾ ಅಪರಾಧಿಯ ಕುರಿತು ವಿವರಣೆ ನೀಡುತ್ತದೆ.

    ರೆಡ್ ಕಾರ್ನರ್ ನೋಟಿಸ್: ಅಪರಾಧಿ ಅಥವಾ ಆರೋಪಿ ಮತ್ತೊಂದು ದೇಶದಲ್ಲಿದ್ದಾಗ ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡುವುದು. ಅಂತಹ ವ್ಯಕ್ತಿಯನ್ನು ಪತ್ತೆ ಹಚ್ಚಿ ತಾತ್ಕಾಲಿಕವಾಗಿ ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ವಿನಂತಿಸಿಕೊಳ್ಳಲು ಈ ನೋಟಿಸ್ ಜಾರಿಯಾಗುತ್ತದೆ

  • ನಿತ್ಯಾನಂದನ ಬಂಧನಕ್ಕೆ ಕೇಂದ್ರ ಸರ್ಕಾರ ಅಸ್ತು

    ನಿತ್ಯಾನಂದನ ಬಂಧನಕ್ಕೆ ಕೇಂದ್ರ ಸರ್ಕಾರ ಅಸ್ತು

    ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿ, ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ಬಂಧನಕ್ಕೆ ಕೇಂದ್ರ ಸರ್ಕಾರ ಅಸ್ತು ಅಂದಿದೆ.

    ನಿತ್ಯಾನಂದನ ಬಂಧನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಕೇಂದ್ರ ಗೃಹ ಇಲಾಖೆಯು ರಾಜ್ಯ ಸರ್ಕಾರ ಅಗತ್ಯ ಪ್ರಕ್ರಿಯೆ ಆರಂಭಿಸುವಂತೆ ತುರ್ತು ಪತ್ರ ರವಾನೆ ಮಾಡಿದೆ. ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿರುವ ನಿತ್ಯಾನಂದನ ಬಂಧನಕ್ಕೆ ನೊಂದವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.

    ನಿತ್ಯಾನಂದನ ವಿರುದ್ಧ ದೂರು ನೀಡಿದ್ದ ಮಹಿಳೆಯಿಂದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯಲಾಗಿತ್ತು. ನೆರೆರಾಜ್ಯ ತಮಿಳುನಾಡಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಸಂಗೀತಾ ತಾಯಿಯಿಂದಲೂ ಪತ್ರ ರವಾನೆಯಾಗಿತ್ತು. ಅಷ್ಟೇ ಅಲ್ಲದೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸಂಗೀತಾ ತಾಯಿ ಜಾನ್ಸಿ ಅವರು ಪತ್ರ ಬರೆದಿದ್ದರು. ಕಳೆದ ತಿಂಗಳು ಈ ಎರಡೂ ಪತ್ರಗಳು ಕೇಂದ್ರ ಗೃಹ ಸಚಿವರ ಕೈಸೇರಿದ್ದವು.

    ಪತ್ರಗಳು ಕೈ ಸೇರಿದ ಬಳಿಕ ಪ್ರಕ್ರಿಯೆ ಪ್ರಾರಂಭಿಸಿದ ಕೇಂದ್ರ ಗೃಹ ಇಲಾಖೆ ನಿತ್ಯಾನಂದನ ಬಂಧನಕ್ಕೆ ಅಗತ್ಯ ಪ್ರಕ್ರಿಯೆ ಆರಂಭಿಸಲು ಸೂಚಿಸಿದೆ. ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಸರ್ಕಾರದಿಂದ ಪತ್ರ ಬರೆದಿದ್ದು, ತನಿಖಾ ಎಜೆನ್ಸಿ ಹಾಗೂ ಸರ್ಕಾರದಿಂದ ಅಗತ್ಯ ದಾಖಲೆ ಸಲ್ಲಿಸಲು ಪತ್ರದಲ್ಲಿ ಸೂಚಸಿದ್ದಾರೆ.

    ತಮಿಳುನಾಡಿನ ಸಂಗೀತಾ ಅನುಮಾಸ್ಪದ ಸಾವು ಪ್ರಕರಣದಲ್ಲೂ ನಿತ್ಯಾ ಆರೋಪಿಯಾಗಿದ್ದಾನೆ. ಈ ಪ್ರಕರಣವನ್ನ ಸಿಬಿಐ ವಹಿಸುವಂತೆ ಸಂಗೀತಾ ತಾಯಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈಗಾಗಲೇ ನಿತ್ಯಾ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ನಿತ್ಯಾನಂದನಿಗೆ ಶಾಕ್ ಕೊಡಲು ಕೇಂದ್ರ ಸರ್ಕಾರ ಕೂಡ ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಬ್ಲೂ ಕಾರ್ನರ್ ನೋಟಿಸ್ ಅಂದ್ರೆ ಏನು?
    ಮತ್ತೊಂದು ದೇಶದಲ್ಲಿರುವ ಅಪರಾಧಿ ಅಥವಾ ಆರೋಪಿಯ ಪತ್ತೆಗಾಗಿ ಮತ್ತು ಕುಟುಂಬದ, ವ್ಯವಹಾರ ವಿವಿರಣೆ ಪಡೆಯುದಕ್ಕಾಗಿ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗುತ್ತದೆ. ಈ ನೋಟಿಸ್ ಹೊರಡಿಸಿದಾಗ ಆರೋಪಿಗೆ ಆಶ್ರಯ ನೀಡಿದ ದೇಶ ಆತನನ್ನು ಬಂಧಿಸಲ್ಲ. ಆದರೆ ಆರೋಪಿ ಅಥವಾ ಅಪರಾಧಿಯ ಕುರಿತು ವಿವರಣೆ ನೀಡುತ್ತದೆ.