Tag: nirbhaya case

  • ಕೊರೊನಾದಿಂದಾಗಿ ಜೆರಾಕ್ಸ್ ಆಗಿಲ್ಲ – ಮಧ್ಯರಾತ್ರಿ ಹೈಡ್ರಾಮಾ, ನಿರ್ಭಯಾ ರೇಪಿಸ್ಟ್‌ಗಳ ಅರ್ಜಿ ವಜಾ

    ಕೊರೊನಾದಿಂದಾಗಿ ಜೆರಾಕ್ಸ್ ಆಗಿಲ್ಲ – ಮಧ್ಯರಾತ್ರಿ ಹೈಡ್ರಾಮಾ, ನಿರ್ಭಯಾ ರೇಪಿಸ್ಟ್‌ಗಳ ಅರ್ಜಿ ವಜಾ

    ನವದೆಹಲಿ: ಕೊನೆಯ ಕ್ಷಣದಲ್ಲಿ ಮಧ್ಯರಾತ್ರಿಯ ವೇಳೆ ನಿರ್ಭಯಾ ರೇಪಿಸ್ಟ್‌ಗಳು ಹೈಡ್ರಾಮಾ ಮಾಡಿದ್ದರೂ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

    ಪಟಿಯಾಲ ಕೋರ್ಟಿನಲ್ಲಿ ನಮ್ಮ ಅರ್ಜಿ ವಜಾಗೊಂಡಿದೆ. ಹೀಗಾಗಿ ತುರ್ತಾಗಿ ನಮ್ಮ ಅರ್ಜಿಯನ್ನು ವಿಚಾರಣೆ ನಡೆಸಿ ಶುಕ್ರವಾರ ಬೆಳಗ್ಗೆ ನಿಗದಿಯಾಗಿರುವ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಮನವಿ ಮಾಡಿದರು. ಆದರೆ ಈ ಮನವಿಯನ್ನು ಪುರಸ್ಕರಿಸದ ನ್ಯಾ. ಮನಮೋಹನ್ ಅವರು ಅರ್ಜಿಯನ್ನು ವಜಾಗೊಳಿಸಿದರು. ಇದನ್ನೂ ಓದಿ: ನಿರ್ಭಯಾ ದೋಷಿಗಳಿಗೆ ನಾಳೆಯೇ ಗಲ್ಲು- ಕಾನೂನು ತಜ್ಞರು ಏನು ಹೇಳುತ್ತಾರೆ?

    ದೆಹಲಿ ಸರ್ಕಾರದ ಪರ ವಕೀಲ ರಾಹುಲ್ ಮೆಹ್ರಾ ವಾದಿಸಿದರೆ ಅಪರಾಧಿಗಳ ಪರ ಎ.ಪಿ ಸಿಂಗ್ ವಾದ ಮಂಡಿಸಿದರು.

    ವಿಚಾರಣೆ ಹೀಗಿತ್ತು:
    ಪಟಿಯಾಲ ಕೋರ್ಟ್ ನಮ್ಮ ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ರಾತ್ರಿ ನಮ್ಮ ಕಕ್ಷಿದಾರರ ಅರ್ಜಿಯನ್ನು ವಿಚಾರಣೆ ನಡೆಸಬೇಕೆಂದು ಎಪಿ ಸಿಂಗ್ ವಾದ ಮಂಡಿಸಿದರು.

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಹುಲ್ ಮೆಹ್ರಾ ಎಲ್ಲ ಕಾನೂನು ಹೋರಾಟಗಳು ಅಂತ್ಯಗೊಂಡಿದೆ. ಹೈಕೋರ್ಟ್ ಮುಂದೆ ಗಲ್ಲು ಶಿಕ್ಷೆಗೆ ತಡೆ ಕೇಳುವಂತಿಲ್ಲ. ಸುಪ್ರೀಂಕೋರ್ಟ್ ಜನವರಿಯಲ್ಲೇ ಆದೇಶವನ್ನು ಎತ್ತಿ ಹಿಡಿದಿದೆ. ಡೆತ್ ವಾರೆಂಟ್ ತಡೆ ಕೋರಿ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಬಹುದು ಎಂದು ದೆಹಲಿ ಸರ್ಕಾರದ ಪರ ವಕೀಲ ರಾಹುಲ್ ಮೆಹ್ರಾ ವಾದಿಸಿದರು.

    ಈ ವೇಳೆ ಎಪಿ ಸಿಂಗ್ ಕೋರ್ಟ್ ಮುಂದೆ ದೋಷಿಗಳಿಗೆ ವಿವಿಧ ಅರ್ಜಿಗಳ ಬಾಕಿ ಉಳಿದಿರುವ ಬಗ್ಗೆ ಮಾಹಿತಿ ನೀಡಿದರು. ಅಷ್ಟೇ ಅಲ್ಲದೇ ಅಕ್ಷಯ್ ಕುಮಾರ್ ಪತ್ನಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಉಲ್ಲೇಖಿಸಿದರು. ಇದಕ್ಕೆ ರಾಹುಲ್ ಮೆಹ್ರಾ, ಈ ಪ್ರಕರಣಕ್ಕೂ ವಿಚ್ಛೇದನಕ್ಕೂ ಸಂಬಂಧ ಇಲ್ಲ ಎಂದು ಹೇಳಿದರು. ಈ ಆಕ್ಷೇಪಕ್ಕೆ ನ್ಯಾ.ಮನಮೋಹನ್ ಅವರು ಒಪ್ಪಿಗೆ ಸೂಚಿಸಿದರು.

    ನಂತರ ದೋಷಿಗಳಿಗೆ ಯಾವುದೇ ಕ್ರಿಮಿನಲ್ ಪ್ರಕರಣದ ಹಿನ್ನೆಲೆ ಇಲ್ಲ. ಸಾಕ್ಷಿ ವಿರುದ್ಧ ನಡೆಸಿದ ಕುಟುಕು ಕಾರ್ಯಚರಣೆಯನ್ನು ಪ್ರಸಾರ ಮಾಡಲು ಅವಕಾಶ ಸಿಕ್ಕಿಲ್ಲ. ಪ್ರಕರಣ ಮೇಲೆ ಪರಿಣಾಮ ಬೀರುವ ಕಾರಣ ನೀಡಿ ಪ್ರಸಾರ ಮಾಡಿಲ್ಲ. ಈ ಪ್ರಕರಣ ಹೈಕೋರ್ಟಿನಲ್ಲಿ ಬಾಕಿ ಉಳಿದಿದೆ ಎಂದು ಎ.ಪಿ ಸಿಂಗ್ ವಾದ ಮಾಡಿದರು.

    ಅಷ್ಟೇ ಅಲ್ಲದೇ ನನ್ನ ಹತ್ತಿರ ಎಲ್ಲ ದಾಖಲೆಗಳಿದೆ. ಅದನ್ನು ಈಗ ನ್ಯಾಯಾಲಯಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ. ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜೆರಾಕ್ಸ್ ಅಂಗಡಿ ತೆರೆಯದ ಕಾರಣ ದಾಖಲೆ ತರಲು ಸಾಧ್ಯವಾಗಿಲ್ಲ. ಮೂರು ದಿನ ಅವಕಾಶ ನೀಡಿ ಎಂದು ಮತ್ತೊಂದು ಬಲವಾದ ಕಾರಣ ನೀಡಿದರು. ಈ ಕಾರಣಕ್ಕೆ ಸಿಟ್ಟಾದ ನ್ಯಾಯಾಧೀಶರು ಇದೊಂದು ಅಡಿಪಾಯ ಇಲ್ಲದ ಅರ್ಜಿ ಎಂದು ಹೇಳಿ ಚಾಟಿ ಬೀಸಿದರು.

    ಸಮಯ ರಾತ್ರಿ 11 ಆಗುತ್ತಿದೆ. ಬೆಳಗ್ಗೆ 5:30ಕ್ಕೆ ಶಿಕ್ಷೆ ಇದೆ. ಗಲ್ಲು ಶಿಕ್ಷೆಗೆ ತಡೆ ನೀಡಲು ಯಾವುದಾದರೂ ಒಂದು ಮುಖ್ಯ ಅಂಶವನ್ನು ತಿಳಿಸಿ ಎಂದು ನ್ಯಾಯಾಧೀಶರು ವಕೀಲರಿಗೆ ಸೂಚಿಸಿದರು. ಇದಕ್ಕೆ ಎಪಿ ಸಿಂಗ್ ಒಮ್ಮೆ ಅಪರಾಧಿಗಳ ಕುಟುಂಬನ್ನು ಗಮನಿಸಿ, ಅಷ್ಟೇ ಅಲ್ಲದೇ ಹಿಂದೆ ಇವರು ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲ. ಉದ್ದೇಶಪೂರ್ವಕವಾಗಿ ತಪ್ಪು ಮಾಡಿಲ್ಲ ಎಂದು ಹೇಳಿ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಮನವಿ ಮಾಡಿದರು. ಆದರೆ ಈ ಮನವಿಯನ್ನು ತಿರಸ್ಕರಿಸಿದ ನ್ಯಾ. ಮನಮೋಹನ್ ಅರ್ಜಿಯನ್ನು ವಜಾಗೊಳಿಸಿದರು.

     

  • ನಿರ್ಭಯಾ ದೋಷಿಗಳಿಗೆ ನಾಳೆಯೇ ಗಲ್ಲು- ಕಾನೂನು ತಜ್ಞರು ಏನು ಹೇಳುತ್ತಾರೆ?

    ನಿರ್ಭಯಾ ದೋಷಿಗಳಿಗೆ ನಾಳೆಯೇ ಗಲ್ಲು- ಕಾನೂನು ತಜ್ಞರು ಏನು ಹೇಳುತ್ತಾರೆ?

    ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳು ಕೃತ್ಯ ಎಸಗಿ 2012ರ ಡಿಸೆಂಬರ್ 16ರಿಂದ ಇಂದಿನವರೆಗೆ ಅಂದ್ರೆ 7 ವರ್ಷ 3 ತಿಂಗಳು, 3 ದಿನಗಳು ಕಳೆದಿವೆ. ಮುಖೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಅಕ್ಷಯ್ ಠಾಕೂರ್ ಈವರೆಗೂ ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳುತ್ತಲೇ ಬಂದಿದ್ದಾರೆ. ಆದರೆ ನಾಳೆ ಬೆಳಗ್ಗೆ ನಾಲ್ವರನ್ನೂ ಗಲ್ಲಿಗೆ ಏರಿಸುವುದು ಖಚಿತವಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ನಾಲ್ಕನೇ ಬಾರಿ ಸಾವಿನ ಬಾಗಿಲಲ್ಲಿ ನಿಂತಿರುವ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳು ನೇಣಿಗೆ ಕೊರೊಳುಡ್ಡುವ ಕಡೆಯ ಕ್ಷಣದವರೆಗೂ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಮಾರ್ಚ್ 20ರ ಬೆಳಗ್ಗೆ 5:30ಕ್ಕೆ ನಿಗದಿಯಾಗಿರುವ ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ದೆಹಲಿಯ ಪಟಿಯಾಲ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಇಂದು ಈ ಅರ್ಜಿ ವಿಚಾರಣೆಗೆ ನಡೆಯಲಿದೆ. ನಿನ್ನೆ ಅರ್ಜಿ ಸಲ್ಲಿಸಿರುವ ನಾಲ್ವರು ದೋಷಿಗಳು ಶಿಕ್ಷೆಗೆ ತಡೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಪ್ರಕರಣದ ನಾಲ್ವರು ದೋಷಿಗಳ ಕಾನೂನು ಹೋರಾಟ ಬಾಕಿ ಉಳಿದಿದ್ದು, ಅದಕ್ಕೆ ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

    ಕ್ಷಮಾದಾನ ಅರ್ಜಿ ವಜಾ ಮಾಡಿರುವುದನ್ನು ಪುನರ್ ಪರಿಶೀಲನೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿ ಇನ್ನು ಬಾಕಿ ಇದ್ದು, ಈ ಅರ್ಜಿ ಇತ್ಯರ್ಥವಾಗಬೇಕಿದೆ. ಘಟನೆ ನಡೆದ ವೇಳೆ ಬಾಲಾಪರಾಧಿಯಾಗಿದ್ದೆ. ಹೀಗಾಗಿ ಶಿಕ್ಷೆ ಕಡಿತಗೊಳಿಸಬೇಕೆಂದು ಕೋರಿ ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಕ್ಯುರೆಟಿವ್ ಅರ್ಜಿ ಬಾಕಿ ಇದೆ. ಅಲ್ಲದೆ ತಿಹಾರ್ ಜೈಲು ಸಿಬ್ಬಂದಿ ಥಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಬೇಕಿದ್ದು, ಈ ವೇಳೆ ಗಲ್ಲು ಶಿಕ್ಷೆಗೆ ಒಳಪಡಿಸುವುದು ಸರಿಯಲ್ಲ ಎಂದು ದೋಷಿ ಪವನ್ ಗುಪ್ತಾ ಅರ್ಜಿಯಲ್ಲಿ ಮನವಿ ಮಾಡಿದ್ದಾನೆ.

    ಪ್ರಕರಣದ ಮತ್ತೊರ್ವ ಆರೋಪಿ ಅಕ್ಷಯ್ ಕುಮಾರ್ ಪತ್ನಿ ವಿಚ್ಛೇದನ ನೀಡುವಂತೆ ಬಿಹಾರದಲ್ಲಿ ಕೊರ್ಟ್ ಮೊರೆ ಹೋಗಿದ್ದು, ಅದರ ವಿಚಾರಣೆ ಸಹ ನಡೆಬೇಕಿದೆ. ವಿನಯ್ ಶರ್ಮಾ ತನ್ನ ಕ್ಷಮದಾನ ಅರ್ಜಿ ವಜಾ ಮಾಡಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಕುರಿತು ವಿಚಾರಣೆ ನಡೆಬೇಕಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.

    ಇಷ್ಟು ಮಾತ್ರವಲ್ಲದೆ ಮೂವರು ದೋಷಿಗಳು ಅಂತರರಾಷ್ಟ್ರೀಯ ಕೋರ್ಟ್ ಮೊರೆ ಹೋಗಿದ್ದು, ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ. ಈ ಎಲ್ಲ ಪ್ರಕರಣಗಳು ವಿಚಾರಣೆ ನಡೆಯಬೇಕಿದ್ದು, ಇದಕ್ಕೂ ಮುನ್ನ ಅಪರಾಧಿಗಳನ್ನು ಶಿಕ್ಷಿಸುವುದು ಸರಿಯಲ್ಲ ಎಂದು ವಕೀಲ ಎ.ಪಿ.ಸಿಂಗ್ ಪಟಿಯಾಲ ಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿದ್ದಾರೆ.

    ಇಂದು ಈ ಅರ್ಜಿ ನ್ಯಾ.ಧರ್ಮೇಂದ್ರ ರಾಣಾ ಪೀಠದ ಮುಂದೆ ವಿಚಾರಣೆಗೆ ಬರಲಿದ್ದು, ಈಗಾಗಲೇ ನಾಲ್ಕು ಬಾರಿ ಜೀವದಾನ ಸಿಕ್ಕಿರುವ ನಾಲ್ವರು ದೋಷಿಗಳಿಗೆ ಸಾವಿನ ಕಡೆಯ ದಿನ ಐದನೇ ಬಾರಿ ಜೀವದಾನ ಸಿಕ್ಕುತ್ತಾ, ಅಥವಾ ಗಲ್ಲು ನಿಶ್ಚಿತವೇ ಎಂಬುದನ್ನು ಕಾದು ನೋಡಬೇಕಿದೆ.

    ವಿಚ್ಛೇದನ ಅರ್ಜಿ:
    ಗಲ್ಲಿಗೇರಿಸುವ ಎರಡು ದಿನಗಳ ಮೊದಲು ತಪ್ಪಿತಸ್ಥ ಅಕ್ಷಯ್ ಪತ್ನಿ ಪುನಿತಾ ವಿಚ್ಛೇದನ ಕೋರಿ ಬಿಹಾರದ ಔರಂಗಾಬಾದ್ ಜಿಲ್ಲೆಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಳು. ನಾನು ವಿಧವೆಯಾಗಿ ಬದುಕಲು ಬಯಸುವುದಿಲ್ಲ. ಆದ್ದರಿಂದ ನೇಣು ಹಾಕುವ ಮೊದಲು ನಾವು ಕಾನೂನುಬದ್ಧವಾಗಿ ವಿಚ್ಛೇದನ ಪಡೆಯುತ್ತೇನೆ ಎಂದು ಅರ್ಜಿಯಲ್ಲಿ ತಿಳಿಸಿದ್ದಳು.

    ಈ ಅರ್ಜಿಯಿಂದಾಗಿ ಅಪರಾಧಿಗಳ ಗಲ್ಲಿಗೇರಿಸುವುದನ್ನು ಮುಂದೂಡಬಹುದೇ ಎಂಬ ಪ್ರಶ್ನೆ ಎದ್ದಿತ್ತು. ಆದರೆ ವಿಚ್ಛೇದನವು ಸಿವಿಲ್ ಪ್ರಕರಣಗಳಲ್ಲಿ ಬರುತ್ತದೆ. ಹೀಗಾಗಿ ಆ ಅರ್ಜಿ ಕ್ರಿಮಿನಲ್ ಪ್ರಕರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಕಾರಣಕ್ಕಾಗಿ ಮಾರ್ಚ್ 20ರಂದು ಬೆಳಗ್ಗೆ 5:30ಕ್ಕೆ ಅಪರಾಧಿಗಳನ್ನು ಗಲ್ಲಿಗೇರಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.

    ದೋಷಿಗಳಿಗೆ ಎಲ್ಲಾ ಮಾರ್ಗ ಬಂದ್:
    ಡೆತ್ ವಾರಂಟ್ ಮತ್ತು ಮರಣದಂಡನೆ ದಿನಾಂಕದ ನಡುವೆ 14 ದಿನಗಳ ವ್ಯತ್ಯಾಸ ಇರಬೇಕು ಎಂದು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು ಹೇಳುತ್ತವೆ. ಮಾರ್ಚ್ 5ರಂದು ಅಪರಾಧಿಗಳ ಡೆತ್ ವಾರಂಟ್ ಹೊರಡಿಸಲಾಗಿದೆ. ಅಷ್ಟೇ ಅಲ್ಲದೆ ಅಪರಾಧಿಗಳಿಗೆ ಎಲ್ಲಾ ಕಾನೂನು ಮಾರ್ಗಗಳು ಸಹ ಮುಗಿದಿವೆ. ಮರಣದಂಡನೆಗೆ ಗುರಿಯಾದ ಅಪರಾಧಿಗೆ ಎಲ್ಲಾ ಕಾನೂನು ಮಾರ್ಗಗಳನ್ನು ಬಳಸುವ ಹಕ್ಕಿದೆ. ಈ ನಿಟ್ಟಿನಲ್ಲಿ ನಾಲ್ವರು ಸಹ ತಮ್ಮ ಎಲ್ಲಾ ಕಾನೂನು ಹಕ್ಕುಗಳನ್ನು ಸಹ ಬಳಸಿದ್ದಾರೆ. ನಾಲ್ವರ ಪರಿಶೀಲನಾ ಅರ್ಜಿಗಳು ಮತ್ತು ಕ್ಷಮಾದಾನ ಅರ್ಜಿಗಳನ್ನು ಸಹ ವಜಾಗೊಂಡಿವೆ.

    ಅಪರಾಧಿಗಳು ಗಲ್ಲಿಗೇರಿಸುವುದನ್ನು ತಪ್ಪಿಸಲು ಇಂದು ಕೂಡ ಅರ್ಜಿಯನ್ನು ಹಾಕಿದರೂ ಅವರನ್ನು ಗಲ್ಲಿಗೇರಿಸುವುದನ್ನು ತಪ್ಪಿಸುವುದು ತುಂಬಾ ಕಡಿಮೆ. ಏಕೆಂದರೆ ಭಯೋತ್ಪಾದಕ ಯಾಕೂಬ್ ಮೆಮನ್ ನೇಣು ಹಾಕುವ ಒಂದು ದಿನ ಮೊದಲು ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿಯನ್ನು ತಿರಸ್ಕರಿಸಿದ ನಂತರ ಅವರ ವಕೀಲರು ರಾತ್ರಿ ಸುಪ್ರೀಂ ಕೋರ್ಟಿಗೆ ತಲುಪಿದರು. ಆದರೆ ಇದರ ಹೊರತಾಗಿಯೂ ಅವನ ನೇಣು ನಿಲ್ಲಲಿಲ್ಲ.

  • ‘ಕಕ್ಷಿದಾರ ಘಟನಾ ಸ್ಥಳದಲ್ಲೇ ಇರಲಿಲ್ಲ’- ನಿರ್ಭಯಾ ದೋಷಿ ಪರ ವಕೀಲರಿಂದ ಮೇಲ್ಮನವಿ

    ‘ಕಕ್ಷಿದಾರ ಘಟನಾ ಸ್ಥಳದಲ್ಲೇ ಇರಲಿಲ್ಲ’- ನಿರ್ಭಯಾ ದೋಷಿ ಪರ ವಕೀಲರಿಂದ ಮೇಲ್ಮನವಿ

    ನವದೆಹಲಿ: ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳನ್ನು ಮಾರ್ಚ್ 20ರಂದು ಗಲ್ಲಿಗೇರಿಸಲು ಸಿದ್ಧತೆ ನಡೆದಿದೆ. ಆದರೆ ಇದನ್ನು ತಪ್ಪಿಸಲು ಎಲ್ಲಾ ಅಪರಾಧಿಗಳು ವಿಭಿನ್ನ ಕಾನೂನು ಹಕ್ಕುಗಳನ್ನು ಬಳಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಪರಾಧಿ ಮುಖೇಶ್ ಸಿಂಗ್ ಪರ ವಕೀಲ ಎಂ.ಎಲ್.ಶರ್ಮಾ ಅವರು ದೆಹಲಿ ಕೋರ್ಟಿಗೆ ಮಂಗಳವಾರ ಮೇಲ್ಮನವಿ ಸಲ್ಲಿಸಿದ್ದಾರೆ.

    ‘ಘಟನಾ ಸ್ಥಳದಲ್ಲಿ ಮುಖೇಶ್ ಇರಲಿಲ್ಲ. ಮುಖೇಶ್‍ಗೆ ಜೈಲಿನಲ್ಲಿ ಚಿತ್ರಹಿಂಸೆ ಕೊಟ್ಟು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಎಂ.ಎಲ್.ಶರ್ಮಾ ಮೇಲ್ಮನವಿಯಲ್ಲಿ ಆರೋಪಿಸಿದ್ದಾರೆ.

    ಈ ತಿಂಗಳ ಆರಂಭದಲ್ಲಿ ದೆಹಲಿ ನ್ಯಾಯಾಲಯವು ಮಾರ್ಚ್ 20ರಂದು ಮುಂಜಾನೆ 5:30 ಕ್ಕೆ ಮುಖೇಶ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಸಿಂಗ್ (31) ಎಂಬ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ವಾರಂಟ್ ಹೊರಡಿಸಿತ್ತು. ಅಷ್ಟೇ ಅಲ್ಲದೆ ಇದಕ್ಕೂ ಮುನ್ನ ಮೂರು ಬಾರಿ ಗಲ್ಲಿಗೇರಿಸುವುದನ್ನು ಮುಂದೂಡಲಾಗಿದೆ.

    ದೋಷಿ ಮುಖೇಶ್‍ನನ್ನು ಡಿಸೆಂಬರ್ 17ರಂದು ರಾಜಸ್ಥಾನದಲ್ಲಿ ಬಂಧಿಸಲಾಗಿತ್ತು ಎಂದು ವಕೀಲ ಶರ್ಮಾ ಮಂಗಳವಾರ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಹೇಳಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಅವನು ಇರಲಿಲ್ಲ. ಆದರೆ ತಿಹಾರ್ ಜೈಲಿನಲ್ಲಿ ಪೊಲೀಸರು ಮುಖೇಶ್‍ಗೆ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ಮೇಲ್ಮನವಿಯಲ್ಲಿ ಆರೋಪಿಸಲಾಗಿದೆ.

    ತಿಹಾರ್ ಜೈಲು ಆಡಳಿತ ಅಧಿಕಾರಿಗಳು ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧತೆ ನಡೆಸಿದ್ದಾರೆ. ಉತ್ತರ ಪ್ರದೇಶದ ಮೀರತ್ ನಿವಾಸಿ ಪವನ್ ಜಲ್ಲಾಡ್ ಅವರನ್ನು ಗಲ್ಲಿಗೇರಿಸುವ ಮೂರು ದಿನಗಳ ಮೊದಲು ಅಂದ್ರೆ ಮಾರ್ಚ್ 17ರಂದು ತಿಹಾರ್ ಜೈಲಿಗೆ ಬಂದು ವರದಿ ಸಲ್ಲಿಸುವಂತೆ ಜೈಲು ಅಧಿಕಾರಿಗಳು ಕೋರಿದ್ದಾರೆ. ಪವನ್ ಆಗಮನದ ನಂತರ ಅಧಿಕಾರಿಗಳು ಅಪರಾಧಿಗಳನ್ನು ನೇಣು ಹಾಕಲು ನಡೆಸಿದ ಸಿದ್ಧತೆಯನ್ನು ಪರೀಕ್ಷಿಸುತ್ತಾರೆ.

    ಏನಿದು ಪ್ರಕರಣ?:
    ದೆಹಲಿಯಲ್ಲಿ 2012ರ ಡಿಸೆಂಬರ್ 16ರ ರಾತ್ರಿ ಬಸ್‍ನಲ್ಲಿ ಚಲಿಸುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ 6 ಜನರು ಅತ್ಯಾಚಾರ ಎಸಗಿದ್ದರು. ತೀವ್ರ ಗಾಯಗೊಂಡಿದ್ದ ನಿರ್ಭಯಾ ಸಿಂಗಾಪುರದಲ್ಲಿ ಡಿಸೆಂಬರ್ 26ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. 2013ರ ಸೆಪ್ಟೆಂಬರ್ ಅಂದ್ರೆ ಘಟನೆ ನಡೆದ 9 ತಿಂಗಳ ನಂತರ ನ್ಯಾಯಾಲಯವು 5 ಅಪರಾಧಿಗಳಾದ ರಾಮ್ ಸಿಂಗ್, ಪವನ್, ಅಕ್ಷಯ್, ವಿನಯ್ ಮತ್ತು ಮುಖೇಶ್‍ಗೆ ಮರಣದಂಡನೆ ವಿಧಿಸಿತ್ತು. 2014ರ ಮಾರ್ಚ್ ನಲ್ಲಿ ಹೈಕೋರ್ಟ್ ಮತ್ತು 2017ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಮರಣದಂಡನೆಯನ್ನು ಎತ್ತಿಹಿಡಿದಿದ್ದವು. ವಿಚಾರಣೆಯ ವೇಳೆ ಮುಖ್ಯ ಅಪರಾಧಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದ. ಓರ್ವ ಅಪ್ರಾಪ್ತ ವಯಸ್ಕನಾಗಿದ್ದರಿಂದ ಆತನಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

  • ನೇಣು ಕುಣಿಕೆಯಿಂದ ಮತ್ತೆ ಪಾರಾದ ಕೀಚಕರು- ನಿರ್ಭಯಾ ಅತ್ಯಾಚಾರಿಗಳಿಗೆ ಸದ್ಯಕ್ಕಿಲ್ಲ ಗಲ್ಲು

    ನೇಣು ಕುಣಿಕೆಯಿಂದ ಮತ್ತೆ ಪಾರಾದ ಕೀಚಕರು- ನಿರ್ಭಯಾ ಅತ್ಯಾಚಾರಿಗಳಿಗೆ ಸದ್ಯಕ್ಕಿಲ್ಲ ಗಲ್ಲು

    ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿಗಳು ಮತ್ತೆ ನೇಣು ಕುಣಿಕೆಯಿಂದ ಪಾರಾಗಿದ್ದಾರೆ. ಮುಂದಿನ ಆದೇಶದವರೆಗೂ ಗಲ್ಲು ಶಿಕ್ಷೆ ವಿಧಿಸದಂತೆ ದೆಹಲಿಯ ಪಟಿಯಾಲ ಕೋರ್ಟ್ ಆದೇಶ ನೀಡಿದೆ.

    ಸುಪ್ರೀಂಕೋರ್ಟಿನಲ್ಲಿ ಗಲ್ಲು ಶಿಕ್ಷೆಯನ್ನು ಮರಣದಂಡನೆ ಇಳಿಸುವಂತೆ ಪವನ್ ಗುಪ್ತಾ ಸಲ್ಲಿಸಿದ್ದ ಅರ್ಜಿ ವಜಾ ಆಗುತ್ತಿದ್ದಂತೆ, ತಿರಸ್ಕೃತಗೊಂಡಿರುವ ಕ್ಷಮಾದಾನ ಅರ್ಜಿಯನ್ನು ಮರು ಪರಿಶೀಲನೆ ನಡೆಸುವಂತೆ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದರು. ರಾಷ್ಟ್ರಪತಿಗಳಿಗೆ ಹೊಸ ಅರ್ಜಿಯನ್ನು ಸಲ್ಲಿಸಿದ್ದ ಹಿನ್ನೆಲೆ ನಾಳೆ ಬೆಳಗ್ಗೆ ನಿಗದಿಯಾಗಿದ್ದ ಗಲ್ಲು ಶಿಕ್ಷಗೆ ತಡೆ ನೀಡುವಂತೆ ಪವನ್ ಗುಪ್ತಾ ಪರ ವಕೀಲ ಎ.ಪಿ ಸಿಂಗ್ ಮನವಿ ಮಾಡಿದರು. ಇದರ ಜೊತೆಗೆ ಮತ್ತೋರ್ವ ದೋಷಿ ಅಕ್ಷಯ್ ಠಾಕೂರ್ ನ ತಿರಸ್ಕೃತಗೊಂಡ ಕ್ಷಮಾದಾನ ಅರ್ಜಿಯ ಮರು ಪರಿಶೀಲನಾ ಅರ್ಜಿ ಬಾಕಿ ಇದೆ ಎಂದು ಕೋರ್ಟ್ ಗಮನಕ್ಕೆ ತಂದರು.

    ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಧರ್ಮೇಂದರ್ ರಾಣಾ ಅರ್ಜಿದಾರರ ಪರ ವಕೀಲ ಎ.ಪಿ ಸಿಂಗ್ ವಿರುದ್ಧ ಹರಿಹಾಯ್ದರು. ಒಂದು ವಾರದಲ್ಲಿ ಕಾನೂನು ಹೋರಾಟವನ್ನು ಮುಗಿಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಇದ್ಯಾಗೂ ನೀವೂ ಕಾನೂನು ಹೋರಾಟಗಳನ್ನು ಅಂತ್ಯಗೊಳಿಸಿಲ್ಲ ನೀವೂ ಬೆಂಕಿಯ ಜೊತೆ ಆಟವಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಎರಡು ಗಂಟೆಗೆ ವಿಚಾರಣೆ ನಡೆಸಿದ್ದ ಪಟಿಯಾಲ ಕೋರ್ಟ್ ದಿಢೀರ್ ಬೆಳವಣಿಗೆಯಿಂದ ಗಲ್ಲು ಶಿಕ್ಷೆಗೆ ತಡೆ ನೀಡಲಾಗಿದ್ದು, ಮುಂದಿನ ಆದೇಶವರೆಗೂ ಗಲ್ಲು ಶಿಕ್ಷೆ ವಿಧಿಸದಂತೆ ತಿಹಾರ್ ಜೈಲು ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ. ಇದರಿಂದಾಗಿ ಸತತವಾಗಿ ಮೂರನೇ ಬಾರಿ ಗಲ್ಲು ಶಿಕ್ಷೆಯಿಂದ ನಾಲ್ವರು ದೋಷಿಗಳು ಪಾರಾಗಿದ್ದಾರೆ.

    ಪಟಿಯಾಲ ಕೋರ್ಟ್ ತೀರ್ಪು ಬಳಿಕ ಮಾತನಾಡಿದ ದೋಷಿಗಳ ಪರ ವಕೀಲ ಎ.ಪಿ ಸಿಂಗ್, ನಾಳಿನ ಗಲ್ಲು ಶಿಕ್ಷೆಗೆ ವಿಶೇಷ ಕೋರ್ಟ್ ತಡೆ ನೀಡಿದೆ. ಮುಂದಿನ ಆದೇಶದವರೆಗೂ ತಡೆ ನೀಡಿದೆ. ನಾಲ್ವರು ದೋಷಿಗಳಿಗೂ ನಾಳೆ ಶಿಕ್ಷೆ ಆಗುವುದಿಲ್ಲ ಎಂದರು.

    ಕೋರ್ಟ್ ಆದೇಶ ಬಗ್ಗೆ ನಾನೇನು ಹೇಳಲಿ, ಪದೇ ಪದೇ ಗಲ್ಲು ಶಿಕ್ಷೆ ಮುಂದೂಡಿಕೆಯಾಗಿದೆ ಭಾರತದಲ್ಲಿ ಅಪರಾಧಿಗಳಿಗೆ ಬೆಂಬಲ ಸಿಗುತ್ತಿದೆ. ಇಡೀ ಸಮಾಜ ಈ ಬೆಳವಣಿಗೆ ನೋಡುತ್ತಿದೆ. ಗಲ್ಲು ಶಿಕ್ಷೆ ಯಾವಾಗ ಎಂದು ನೀವೇ ಕೋರ್ಟ್ ಮತ್ತು ಸರ್ಕಾರವನ್ನು ಕೇಳಿ ಎಂದು ಸಂತ್ರಸ್ತೆ ತಾಯಿ ಆಶಾದೇವಿ ಆಕ್ರೋಶ ವ್ಯಕ್ತಪಡಿಸಿದರು.

  • ನಿರ್ಭಯಾ ಕೇಸ್ – ಪವನ್ ಸಲ್ಲಿಸಿದ್ದ ಅರ್ಜಿ ವಜಾ, ಆದ್ರೂ ಒಂದು ಅವಕಾಶವಿದೆ

    ನಿರ್ಭಯಾ ಕೇಸ್ – ಪವನ್ ಸಲ್ಲಿಸಿದ್ದ ಅರ್ಜಿ ವಜಾ, ಆದ್ರೂ ಒಂದು ಅವಕಾಶವಿದೆ

    ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಪವನ್ ಗುಪ್ತಾ ಶಿಕ್ಷೆಯನ್ನು ಕಡಿತಗೊಳಿಸುವಂತೆ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

    ಪವನ್ ಗುಪ್ತಾ ಕಳೆದ ಶುಕ್ರವಾರ ಸುಪ್ರೀಂ ಕೋರ್ಟಿನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದ. ಈಗ ಈತನ ಅರ್ಜಿ ವಜಾಗೊಂಡಿದ್ದು ಕಾನೂನು ಹೋರಾಟದ ಎಲ್ಲ ಬಾಗಿಲುಗಳು ಬಂದ್ ಆಗಿದೆ.

    ಕಾನೂನು ಹೋರಾಟದ ಬಾಗಿಲುಗಳು ಮುಚ್ಚಿದ್ದರೂ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಪವನ್‍ಗೆ ಅವಕಾಶವಿದೆ. ಉಳಿದ ನಾಲ್ವರು ದೋಷಿಗಳ ಈ ಎಲ್ಲಾ ಅರ್ಜಿಗಳು ಈಗಾಗಲೇ ತಿರಸ್ಕೃತಗೊಂಡಿದೆ.

    ಮಾರ್ಚ್ 3ರಂದು ಗುಪ್ತಾ ಸೇರಿದಂತೆ ನಾಲ್ವರು ದೋಷಿಗಳಿಗೆ ಗಲ್ಲು ಶಿಕ್ಷೆ ಜಾರಿ ಮಾಡುವಂತೆ ದೆಹಲಿಯ ಪಾಟಿಯಾಲ ಹೌಸ್ ಕೋರ್ಟ್ ವಾರೆಂಟ್ ನೀಡಿತ್ತು. ಈ ಆದೇಶ ಪ್ರಕಟಗೊಂಡ ಬಳಿಕ ವಿನಯ್ ಶರ್ಮಾ, ಜೈಲಿನ ಗೋಡೆಗೆ ತಲೆಯನ್ನು ಚಚ್ಚಿಕೊಂಡು ಗಾಯಮಾಡಿಕೊಂಡಿದ್ದ. ಈ ನಡುವೆ ದೋಷಿ ವಿನಯ್ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ ಎಂದು ಆತನ ಪರ ವಕೀಲ ಎ.ಪಿ.ಸಿಂಗ್ ಹೇಳಿದ್ದರು.

    ನ್ಯಾಯಾಲಯದ ಹಾದಿ ತಪ್ಪಿಸಲು ದೋಷಿಗಳು ವಿವಿಧ ನಾಟಕ ಮಾಡುತ್ತಿದ್ದಾರೆ. ಗಲ್ಲು ಶಿಕ್ಷೆ ವಿಳಂಬ ಮಾಡಲು ಅರ್ಜಿಗಳ ಮೇಲೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಎಂದು ಸಂತ್ರಸ್ತೆಯ ತಾಯಿ ಆಶಾದೇವಿ ಬೇಸರ ವ್ಯಕ್ತಪಡಿಸಿದ್ದರು.

  • ನಿರ್ಭಯಾ ಪ್ರಕರಣ- ಅಪರಾಧಿಗಳಿಗೆ ಗಲ್ಲು ಶಿಕ್ಷೆ ಮತ್ತಷ್ಟು ದಿನ ಮುಂದೂಡಿಕೆ ಸಾಧ್ಯತೆ

    ನಿರ್ಭಯಾ ಪ್ರಕರಣ- ಅಪರಾಧಿಗಳಿಗೆ ಗಲ್ಲು ಶಿಕ್ಷೆ ಮತ್ತಷ್ಟು ದಿನ ಮುಂದೂಡಿಕೆ ಸಾಧ್ಯತೆ

    – ದೋಷಿ ಅಕ್ಷಯ್ ಕ್ಷಮಾಧಾನ ಅರ್ಜಿ ಸಲ್ಲಿಕೆ

    ನವದೆಹಲಿ: ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ದೋಷಿಗಳು ಗಲ್ಲು ಶಿಕ್ಷಯನ್ನು ಮುಂದೂಡಲು ಪದೇ ಪದೇ ಯತ್ನಿಸುತ್ತಿದ್ದಾರೆ. ಅಪರಾಧಿಗಳ ಪೈಕಿ ಓರ್ವನಾದ ಅಕ್ಷಯ್ ಕುಮಾರ್ ಠಾಕೂರ್ (31) ರಾಷ್ಟ್ರಪತಿಗಳಿಗೆ ಕ್ಷಮಾದಾನ ಮನವಿ ಸಲ್ಲಿಸಿದ್ದಾನೆ.

    ಅಪರಾಧಿಗಳು ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ರಾಷ್ಟ್ರಪತಿಗಳಿಗೆ ಕ್ಷಮಾದಾನ ಮನವಿ ಸಲ್ಲಿಸುತ್ತಿದ್ದಾರೆ. ಇದರಿಂದಾಗಿ ದೋಷಿಗಳಿಗೆ ಗಲ್ಲು ಶಿಕ್ಷೆಯು ಮತ್ತಷ್ಟು ದಿನ ಮುಂದೂಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದನ್ನೂ ಓದಿ: ನಿರ್ಭಯಾ ಪ್ರಕರಣ: ಕೇಂದ್ರದ ಅರ್ಜಿ ವಿಚಾರಣೆ ವೇಳೆ ಪ್ರಜ್ಞೆ ತಪ್ಪಿದ ನ್ಯಾಯಾಧೀಶೆ

    ಪ್ರಕರಣದ ಅಪರಾಧಿಗಳ ಪೈಕಿ ಒಬ್ಬನಾಗಿರುವ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲಿ ಫೆಬ್ರವರಿ 16ರಂದು ಹೈ ಡ್ರಾಮಾ ನಡೆಸಿದ್ದ. ಗೋಡೆಗೆ ತಲೆ ಚಚ್ಚಿಕೊಳ್ಳುವ ಮೂಲಕ ನಾಟಕವಾಡಿದ್ದ. ತಕ್ಷಣವೇ ಜೈಲು ಅಧಿಕಾರಿಗಳು ಆತನನ್ನು ತಡೆದಿದ್ದರು.

    ಇತ್ತೀಚೆಗಷ್ಟೇ ವಿನಯ್ ಪರ ವಕೀಲರು ಕೋರ್ಟಿಗೆ ಹೇಳಿಕೆ ನೀಡಿದ್ದು, ವಿನಯ್ ಜೈಲಿನಲ್ಲಿಯೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ. ಅಲ್ಲದೆ ಸೆಲ್‍ನಲ್ಲಿ ವಿನಯ್ ಮೇಲೆ ಹಲ್ಲೆ ನಡೆಸಲಾಗಿದ್ದು, ತಲೆಗೆ ಪೆಟ್ಟು ಬಿದ್ದಿದೆ. ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ. ಆದ್ದರಿಂದ ಮರಣದಂಡನೆ ವಿಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಹೇಳಿಕೆ ನಂತರ ಜೈಲು ಅಧಿಕಾರಿಗೆ ಈ ಕುರಿತು ಕೋರ್ಟ್ ಸಹ ಸೂಚನೆ ನೀಡಿದ್ದು, ಕಾನೂನಿನ ಪ್ರಕಾರ ವಿನಯ್ ಕುರಿತು ಕಾಳಜಿ ವಹಿಸುವಂತೆ ಆದೇಶಿಸಿದೆ.

    ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಮಾರ್ಚ್ 3ರಂದು ಗಲ್ಲಿಗೇರಿಸುವಂತೆ ದೆಹಲಿ ನ್ಯಾಯಾಲಯ ಫೆಬ್ರವರಿ 17 ಆದೇಶಿಸಿದೆ. ಅಲ್ಲದೆ ಹೊಸ ಮರಣದಂಡನೆ ಜಾರಿಗೊಳಿಸಿದ ನಂತರ ಗಲ್ಲು ಶಿಕ್ಷೆ ಮುಂದೂಡುವುದು ಸಂತ್ರಸ್ತರ ಹಕ್ಕುಗಳಿಗೆ ಚ್ಯುತಿ ತಂದಂತೆ ಎಂದು ದೆಹಲಿ ನ್ಯಾಯಾಲಯ ವ್ಯಾಖ್ಯಾನಿಸಿದೆ.

    ಮುಖೇಶ್ ಕುಮಾರ್ ಸಿಂಗ್(32), ಪವನ್ ಗುಪ್ತಾ(25), ವಿನಯ್ ಕುಮಾರ್ ಶರ್ಮಾ(26), ಅಕ್ಷಯ್ ಕುಮಾರ್(31) ಈ ನಾಲ್ವರು ಅಪರಾಧಿಗಳನ್ನು ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ಗಲ್ಲಿಗೇರಿಸುವಂತೆ ಕೋರ್ಟ್ ಆದೇಶಿಸಿದೆ. ಇದು ಕೋರ್ಟ್ ನೀಡುತ್ತಿರುವ ಮೂರನೇ ಆದೇಶವಾಗಿದ್ದು, ಈ ಬಾರಿಯಾದರೂ ಗಲ್ಲಿಗೇರಿಸಲಾಗುತ್ತದೆಯೇ ಎಂಬುದು ಸಂತ್ರಸ್ತರ ಪ್ರಶ್ನೆಯಾಗಿದೆ.

    ಜನವರಿ 7ರಂದು ಕೋರ್ಟ್ ಈ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಅಡಿಷನಲ್ ಸೆಶನ್ ಜಡ್ಜ್ ಧರ್ಮೇಂದ್ರ ರಾಣಾ ಅವರು ಆದೇಶ ಹೊರಡಿಸಿದ್ದರು. ನಂತರ ಜನವರಿ 17 ಹಾಗೂ 31ರಂದು ನಡೆದ ವಿಚಾರಣೆ ವೇಳೆ ಶಿಕ್ಷೆಯನ್ನು ಮುಂದೂಡಲಾಗಿದೆ. ಅದರಂತೆ ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ಗಲ್ಲಿಗೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

  • ಜೈಲಲ್ಲಿ ನಿರ್ಭಯಾ ಹಂತಕನ ಹೈಡ್ರಾಮ- ಗೋಡೆಗೆ ತಲೆ ಚಚ್ಚಿಕೊಂಡ ವಿನಯ್ ಶರ್ಮಾ

    ಜೈಲಲ್ಲಿ ನಿರ್ಭಯಾ ಹಂತಕನ ಹೈಡ್ರಾಮ- ಗೋಡೆಗೆ ತಲೆ ಚಚ್ಚಿಕೊಂಡ ವಿನಯ್ ಶರ್ಮಾ

    ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳ ಪೈಕಿ ಒಬ್ಬನಾಗಿರುವ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲಿ ಹೈ ಡ್ರಾಮಾ ನಡೆಸಿದ್ದು, ಗೋಡೆಗೆ ತಲೆ ಚಚ್ಚಿಕೊಳ್ಳುವ ಮೂಲಕ ನಾಟಕವಾಡಿದ್ದಾನೆ.

    ಈ ಕುರಿತು ಜೈಲಿನ ಮೂಲಗಳು ಮಾಹಿತಿ ನೀಡಿದ್ದು, ಫೆಬ್ರವರಿ 16ರಂದು ಈ ಘಟನೆ ನಡೆದಿದೆ. ತಕ್ಷಣವೇ ಜೈಲು ಅಧಿಕಾರಿಗಳು ತಡೆದಿದ್ದಾರೆ. ಗೋಡೆಗೆ ಬಲವಾಗಿ ತಲೆ ಚಚ್ಚಿಕೊಂಡಿದ್ದರಿಂದ ವಿನಯ್ ಶರ್ಮಾಗೆ ಗಾಯವಾಗಿದೆ. ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ. ನಿರ್ಭಯಾ ಅತ್ಯಾಚಾರಿಗಳ ಪೈಕಿ ಒಬ್ಬನಾಗಿರುವ ವಿನಯ್ ಶರ್ಮಾ ಗೋಡೆಗೆ ತಲೆ ಚೆಚ್ಚಿಕೊಂಡಿರುವುದು ಸತ್ಯ, ತಲೆಗೆ ಗಾಯವಾಗಿದೆ ಎಂದು ಜೈಲು ಅಧಿಕಾರಿಗಳು ಕೂಡ ಮಾಹಿತಿ ನೀಡಿದ್ದಾರೆ.

    ಇತ್ತೀಚೆಗಷ್ಟೇ ವಿನಯ್ ಪರ ವಕೀಲರು ಕೋರ್ಟಿಗೆ ಹೇಳಿಕೆ ನೀಡಿದ್ದು, ವಿನಯ್ ಜೈಲಿನಲ್ಲಿಯೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ. ಅಲ್ಲದೆ ಸೆಲ್‍ನಲ್ಲಿ ವಿನಯ್ ಮೇಲೆ ಹಲ್ಲೆ ನಡೆಸಲಾಗಿದ್ದು, ತಲೆಗೆ ಪೆಟ್ಟು ಬಿದ್ದಿದೆ. ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ. ಆದ್ದರಿಂದ ಮರಣದಂಡನೆ ವಿಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಹೇಳಿಕೆ ನಂತರ ಜೈಲು ಅಧಿಕಾರಿಗೆ ಈ ಕುರಿತು ಕೋರ್ಟ್ ಸಹ ಸೂಚನೆ ನೀಡಿದ್ದು, ಕಾನೂನಿನ ಪ್ರಕಾರ ವಿನಯ್ ಕುರಿತು ಕಾಳಜಿ ವಹಿಸುವಂತೆ ಆದೇಶಿಸಿದೆ.

    ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಮಾರ್ಚ್ 3ರಂದು ಗಲ್ಲಿಗೇರಿಸುವಂತೆ ದೆಹಲಿ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಅಲ್ಲದೆ ಹೊಸ ಮರಣದಂಡನೆ ಜಾರಿಗೊಳಿಸಿದ ನಂತರ ಗಲ್ಲು ಶಿಕ್ಷೆ ಮುಂದೂಡುವುದು ಸಂತ್ರಸ್ತರ ಹಕ್ಕುಗಳಿಗೆ ಚ್ಯುತಿ ತಂದಂತೆ ಎಂದು ದೆಹಲಿ ನ್ಯಾಯಾಲಯ ವ್ಯಾಖ್ಯಾನಿಸಿದೆ.

    ಮುಖೇಶ್ ಕುಮಾರ್ ಸಿಂಗ್(32), ಪವನ್ ಗುಪ್ತಾ(25), ವಿನಯ್ ಕುಮಾರ್ ಶರ್ಮಾ(26), ಅಕ್ಷಯ್ ಕುಮಾರ್(31) ಈ ನಾಲ್ವರು ಅಪರಾಧಿಗಳನ್ನು ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ಗಲ್ಲಿಗೇರಿಸುವಂತೆ ಕೋರ್ಟ್ ಆದೇಶಿಸಿದೆ. ಇದು ಕೋರ್ಟ್ ನೀಡುತ್ತಿರುವ ಮೂರನೇ ಆದೇಶವಾಗಿದ್ದು, ಈ ಬಾರಿಯಾದರೂ ಗಲ್ಲಿಗೇರಿಸಲಾಗುತ್ತದೆಯೇ ಎಂಬುದು ಸಂತ್ರಸ್ತರ ಪ್ರಶ್ನೆಯಾಗಿದೆ.

    ಜನವರಿ 7ರಂದು ಕೋರ್ಟ್ ಈ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಅಡಿಷನಲ್ ಸೆಶನ್ ಜಡ್ಜ್ ಧರ್ಮೇಂದ್ರ ರಾಣಾ ಅವರು ಆದೇಶ ಹೊರಡಿಸಿದ್ದರು. ನಂತರ ಜನವರಿ 17 ಹಾಗೂ 31ರಂದು ನಡೆದ ವಿಚಾರಣೆ ವೇಳೆ ಶಿಕ್ಷೆಯನ್ನು ಮುಂದೂಡಲಾಗಿದೆ. ಅದರಂತೆ ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ಗಲ್ಲಿಗೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

  • ನಿರ್ಭಯಾ ಹಂತಕರಿಗೆ ಮಾರ್ಚ್ 3ಕ್ಕೆ ಗಲ್ಲು ಆಗುತ್ತಾ?

    ನಿರ್ಭಯಾ ಹಂತಕರಿಗೆ ಮಾರ್ಚ್ 3ಕ್ಕೆ ಗಲ್ಲು ಆಗುತ್ತಾ?

    – ದೋಷಿಗಳ ಪರ ವಕೀಲರು ಹೇಳಿದ್ದೇನು?
    – ಕಾನೂನಿನ ಅವಕಾಶಗಳಿವೆಯಾ?

    ನವದೆಹಲಿ: 2012ರ ನಿರ್ಭಯಾ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣದ ದೋಷಿಗಳಿಗೆ ಸೋಮವಾರ ಮೂರನೇ ಬಾರಿ ಡೆತ್ ವಾರೆಂಟ್ ಜಾರಿ ಮಾಡಲಾಗಿದೆ. ದೋಷಿಗಳು ಕಾನೂನಿನಲ್ಲಿರುವ ಸಣ್ಣ ಸಣ್ಣ ಅವಕಾಶಗಳನ್ನು ಬಳಸಿಕೊಂಡು ಸಾವಿನ ದವಡೆಯಿಂದ ಬಜಾವ್ ಆಗುತ್ತಿದ್ದಾರೆ. ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ದೋಷಿಗಳಿಗೆ ಮಾರ್ಚ್ 3ರ ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕೆಂದು ಆದೇಶ ನೀಡಿದೆ. ಆದೇಶದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದೋಷಿಗಳ ಪರ ವಕೀಲ, ನಮ್ಮ ಮುಂದೆ ಇನ್ನು ಕಾನೂನಿನ ಅವಕಾಶಗಳಿವೆ ಎಂಬ ಹೇಳಿಕೆ ಹಲವು ಅನುಮಾನಗಳಿಗೆ ಕಾರಣ ಆಗಿದೆ.

    ದೋಷಿಗಳಾದ ಮುಖೇಶ್, ವಿನಯ್ ಮತ್ತು ಅಕ್ಷಯ್ ಮೂವರಿಗೆ ಗಲ್ಲು ಶಿಕ್ಷೆಯಿಂದ ಪಾರಾಗಲು ಯಾವುದೇ ಅವಕಾಶಗಳಿಲ್ಲ. ಮೂವರ ಕ್ಷಮಾದಾನ ಅರ್ಜಿಯಿಂದ ಹಿಡಿದು ಪರಿಶೀಲನೆವರೆಗಿನ ಎಲ್ಲ ಕಾನೂನು ಪ್ರಕ್ರಿಯೆ ಅಂತ್ಯಗೊಂಡಿವೆ. ಕೇವಲ ಪವನ್ ಮುಂದೆ ಕೆಲ ಕಾನೂನಿನ ಅವಕಾಶಗಳಿವೆ. ಕ್ಷಮಾದಾನ ಅರ್ಜಿಯ ಪರಿಶೀಲನೆಯನ್ನು ಈಗಾಗಲೇ ವಜಾಗೊಳಿಸಲಾಗಿದೆ. ಆದ್ರೆ ಕ್ಯೂರೆಟಿವ್ ಅರ್ಜಿ ಸಲ್ಲಿಸಬಹುದು. ಇದುವರೆಗೂ ಪವನ್ ಕ್ಯೂರೆಟಿವ್ ಅರ್ಜಿ ಸಲ್ಲಿಸಿಲ್ಲ.

    ಮತ್ತೊಮ್ಮೆ ಕ್ಷಮದಾನ ಅರ್ಜಿ ಸಲ್ಲಿಸಬಹುದಾ?
    ನಾಲ್ವರು ದೋಷಿಗಳ ಕ್ಷಮಾದಾನದ ಅರ್ಜಿ ತಿರಸ್ಕøತಗೊಂಡಿದೆ. ಗಲ್ಲು ಶಿಕ್ಷೆ ಪದೇ ಪದೇ ಮುಂದೂಡುತ್ತ ಬರುತ್ತಿದೆ. ಅಪರಾಧಿಗಳು ಸಹ ಕಾನೂನುಗಳ ಅವಕಾಶಗಳನ್ನು ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದೀಗ ದೋಷಿಗಳ ಪರ ವಕೀಲರು ಮತ್ತೊಮ್ಮೆ ಕ್ಷಮಾದಾನ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಾರಿ ದೋಷಿಗಳ ಪೋಷಕರ ಮೂಲಕ ಕ್ಷಮಾದಾನ ಅರ್ಜಿ ಸಲ್ಲಿಸಲು ನ್ಯಾಯಾಲಯ ಒಪ್ಪಿಗೆ ಸೂಚಿಸಿದ್ರೆ, ಇನ್ನು ಹೆಚ್ಚಿನ ದಾಖಲಾತಿಗಳನ್ನು ಹೊಂದಿಸಿ ಕ್ಷಮೆ ಕೇಳಬಹುದು. ಇಲ್ಲಿ ಅಪರಾಧಿಗಳ ಪೋಷಕರಿಗೆ ವಯಸ್ಸಾಗಿದೆ ಎಂಬ ಅಂಶಗಳನ್ನು ಉಲ್ಲೇಖಿಸುವ ಸಾಧ್ಯತೆಗಳಿವೆ.

    ನಿರ್ಭಯಾ ಪರ ವಕೀಲೆ ಹೇಳಿದ್ದೇನು?
    ಯಾವುದೇ ಕಾರಣಕ್ಕೂ ಗಲ್ಲು ಶಿಕ್ಷೆಗೆ ತಡೆ ನೀಡಲು ಸಾಧ್ಯವಿಲ್ಲ. ನ್ಯಾಯಾಲಯ ಮುಂದಿನ ಏಳು ದಿನಗಳಲ್ಲಿ ದೋಷಿಗಳು ಕಾನೂನು ಹೋರಾಟ ನಡೆಸಬಹುದು ಎಂದು ಕೋರ್ಟ್ ಹೇಳಿದೆ. ಮಾರ್ಚ್ 3ರಂದು ನಾಲ್ವರಿಗೂ ಗಲ್ಲು ಆಗಲಿದೆ ಎಂದು ನಿರ್ಭಯಾ ಪರ ವಕೀಲೆ ಸೀಮಾ ಕುಶವಾಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕಾನೂನು ಅವಕಾಶಗಳು:
    ನಮ್ಮ ಮುಂದೆ ಕಾನೂನು ಅವಕಾಶಗಳಿವೆ. ಘಟನೆ ನಡೆದಾಗ ಪವನ್, ಅಪ್ರಾಪ್ತನಾಗಿದ್ದ ಸಂಬಂಧಿಸಿದ್ದಕ್ಕೆ ಕ್ಯೂರೆಟಿವ್ ಅರ್ಜಿ ಬಾಕಿ ಇದೆ. ಪವನ್ ಎಸ್‍ಎಲ್‍ಪಿ ಮೇಲಿನ ಕ್ಯೂರೆಟಿವ್ ಅರ್ಜಿ ನಿರ್ಧಾರವಾಗಿಲ್ಲ. ಒಂದು ವೇಳೆ ಇಲ್ಲಿ ಪರಿಹಾರ ಸಿಗದಿದ್ದರೆ ಕ್ಷಮದಾನದ ಅರ್ಜಿ ಸಲ್ಲಿಸುತ್ತೇವೆ. ಇನ್ನು ನಮ್ಮ ಮುಂದೆ ಕಾನೂನು ಅವಕಾಶಗಳಿದ್ದು, ಎಲ್ಲವನ್ನು ಬಳಸಿಕೊಳ್ಳಲಿದ್ದೇವೆ ಎಂದು ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್ ಹೇಳುತ್ತಾರೆ.

    ಫೆಬ್ರವರಿ 5ರಂದು ದೆಹಲಿ ಹೈಕೋರ್ಟ್ ನಿರ್ಭಯಾ ಪ್ರಕರಣದ ನಾಲ್ವರು ದೋಷಿಗಳಿಗೆ ಫೆಬ್ರವರಿ 11ರೊಳಗೆ ನಿಮ್ಮ ಕಾನೂನು ಹೋರಾಟವನ್ನು ಪೂರ್ಣಗೊಳಿಸಬೇಕೆಂದು ಸಮಯವಕಾಶ ನೀಡಿತ್ತು. ಆದ್ರೆ ದೋಷಿ ಪವನ್ ಕೆಳ ನ್ಯಾಯಾಲಯದಲ್ಲಿ ನನ್ನ ಪರವಾಗಿ ಯಾವ ವಕೀಲರು ಇಲ್ಲ. ಹಾಗಾಗಿ ಕ್ಯೂರೆಟಿವ್ ಪಿಟಿಶನ್ ದಾಖಲಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದನು. ಹಾಗಾಗಿ ಕೆಳ ನ್ಯಾಯಾಲಯ ದೋಷಿ ಪವನ್ ಗಾಗಿ ವಕೀಲರೊಬ್ಬರನ್ನು ನೇಮಿಸಿತ್ತು.

  • ನಿರ್ಭಯಾ ಹಂತಕರಿಗೆ ಮಾರ್ಚ್ 3ರಂದು ಗಲ್ಲು

    ನಿರ್ಭಯಾ ಹಂತಕರಿಗೆ ಮಾರ್ಚ್ 3ರಂದು ಗಲ್ಲು

    ನವದೆಹಲಿ: ನಿರ್ಭಯಾ ಪ್ರಕರಣದ ದೋಷಿಗಳಿಗೆ ಮಾರ್ಚ್ 3ರಂದು ಡೆತ್ ವಾರೆಂಟ್ ಜಾರಿ ಮಾಡಲಾಗಿದೆ. ದೆಹಲಿ ಪಟಿಯಾಲಾ ಕೋರ್ಟ್ ಮಾರ್ಚ್ 3ರಂದು ಬೆಳಗ್ಗೆ 6 ಗಂಟೆಗೆ ಡೆತ್ ವಾರೆಂಟ್ ನೀಡಿ ಆದೇಶಿಸಿದೆ.

    ಮೂರನೇ ಬಾರಿಗೆ ಪಟಿಯಾಲಾ ಕೋರ್ಟ್ ಡೆತ್ ವಾರೆಂಟ್ ಜಾರಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ದೋಷಿಗಳ ಪರ ವಕೀಲ ಎ.ಪಿ.ಸಿಂಗ್, ನಮ್ಮ ಮುಂದೆ ಕಾನೂನಿನ ಅವಕಾಶಗಳಿವೆ. ರಾಜಕೀಯ ನಾಯಕರ ಒತ್ತಡದಿಂದಾಗಿ ಗಲ್ಲು ಶಿಕ್ಷೆಯ ದಿನಾಂಕ ಪ್ರಕಟಿಸಲಾಗಿದೆ ಎಂದಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಭಯಾ ತಾಯಿ ಆಶಾದೇವಿ, ಮಾರ್ಚ್ 3ರಂದು ದೋಷಿಗಳಿಗೆ ಗಲ್ಲು ಆಗಲಿದೆ ಎಂಬ ನಂಬಿಕೆ ನನಗಿದೆ. ವಿಳಂಬವಾಗಿದ್ದು ನಿಜ, ಆದ್ರೆ ನ್ಯಾಯ ಸಿಕ್ಕಿದೆ ಎಂದಿದ್ದಾರೆ. ಮಗಳಿಗಾಗಿ ಇಷ್ಟು ದಿನ ಹೋರಾಟ ನಡೆಸಿದ್ದೇನೆ. ಪುತ್ರಿಯ ನ್ಯಾಯ ಕೊಡಿಸುವುದು ನನ್ನ ಗುರಿ ಎಂದು ಹೇಳಿದರು.

    2012ರ ಡಿ. 16ರಂದು ದೆಹಲಿಯಲ್ಲಿ 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರಗೈದು, ಕೊಲೆ ಮಾಡಿ ದುರುಳರು ವಿಕೃತಿ ಮೆರೆದಿದ್ದರು. ಈ ಪ್ರಕರಣ ಸಂಬಂಧ ರಾಮ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ, ಅಕ್ಷಯ್ ಠಾಕೂರ್, ಮುಕೇಶ್ ಸಿಂಗ್ ಬಂಧಿಸಲಾಗಿತ್ತು. ಆದರೆ 2013ರ ಮಾರ್ಚ್ ನಲ್ಲಿ ತಿಹಾರ್ ಜೈಲಿನಲ್ಲಿಯೇ ರಾಮ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದನು. 2012ರಲ್ಲಿ ನಡೆದಿದ್ದ ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅತ್ಯಾಚಾರಿಗಳ ವಿರುದ್ಧ ಸಾರ್ವಜನಿಕರು ಹೋರಾಟ, ಪ್ರತಿಭಟನೆಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ, ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತನ್ನಿ ಎಂಬ ಕೂಗು ಕೇಳಿಬಂದಿತ್ತು.

  • ನಿರ್ಭಯಾ ಪ್ರಕರಣ: ಕೇಂದ್ರದ ಅರ್ಜಿ ವಿಚಾರಣೆ ವೇಳೆ ಪ್ರಜ್ಞೆ ತಪ್ಪಿದ ನ್ಯಾಯಾಧೀಶೆ

    ನಿರ್ಭಯಾ ಪ್ರಕರಣ: ಕೇಂದ್ರದ ಅರ್ಜಿ ವಿಚಾರಣೆ ವೇಳೆ ಪ್ರಜ್ಞೆ ತಪ್ಪಿದ ನ್ಯಾಯಾಧೀಶೆ

    ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ ನ್ಯಾಯಾಧೀಶೆ ಆರ್.ಭಾನುಮತಿ ಅವರು ಪ್ರಜ್ಞೆ ತಪ್ಪಿದರು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ರಾಷ್ಟ್ರಪತಿಗಳ ಕ್ಷಮಾದಾನ ತೀರ್ಪನ್ನು ಪ್ರಶ್ನಿಸಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಿರ್ಭಯಾ ಅತ್ಯಾಚಾರಿ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು. ಬಳಿಕ ಕೇಂದ್ರ ಸರ್ಕಾರದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಆರ್.ಭಾನುಮತಿ ಅವರು ಪ್ರಜೆ ತಪ್ಪಿದರು. ಡಯಾಸ್ ಮೇಲೆ ಕುಳಿತಿದ್ದ ಇತರ ನ್ಯಾಯಾಧೀಶರು ಮತ್ತು ಸಿಬ್ಬಂದಿ ತಕ್ಷಣವೇ ಭಾನುಮತಿ ಅವರನ್ನು ಅವರ ಕೋಣೆಗೆ ಕರೆದೊಯ್ದರು. ಇದರಿಂದಾಗಿ ನ್ಯಾಯಪೀಠವು ವಿಚಾರಣೆಯನ್ನು ಮುಂದೂಡಿದ್ದು, ನಂತರ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದೆ.

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ನ್ಯಾಯಾಧೀಶೆ ಆರ್.ಭಾನುಮತಿ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕೆಲ ದಿನಗಳಿಂದ ಅವರ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಿದರು. ಚಿಕಿತ್ಸೆಯ ಬಳಿಕ ನ್ಯಾ. ಭಾನುಮತಿ ಅವರು ಸುಧಾರಿಸಿಕೊಂಡರು ಎಂದು ವರದಿಯಾಗಿದೆ.

    ಈ ಹಿಂದೆ ಫೆಬ್ರವರಿ 1ರಂದು ಬೆಳಗ್ಗೆ 6 ಗಂಟೆಗೆ ನಿರ್ಭಯಾ ಅಪರಾಧಿಗಳಿಗೆ ಗಲ್ಲಿಗೆ ಏರಿಸಲು ಕೋರ್ಟ್ ಆದೇಶ ನೀಡಿತ್ತು. ಆದರೆ ಅಪರಾಧಿಗಳು ಗಲ್ಲುಶಿಕ್ಷೆ ಜಾರಿ ಮುಂದೂಡಲು ನಾನಾ ಪ್ರಯತ್ನವನ್ನು ಮುಂದುವರಿಸಿದ್ದರು. ಬುಧವಾರ ಅಪರಾಧಿ ವಿನಯ್ ಶರ್ಮಾ ರಾಷ್ಟ್ರಪತಿ ಅವರಿಗೆ ಎರಡನೇ ಬಾರಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದನು. ಆದರೆ ರಾಷ್ಟ್ರಪತಿಗಳ ತೀರ್ಮಾನ ಪ್ರಕಟವಾಗದ ಹಿನ್ನೆಲೆಯಲ್ಲಿ ಪಟಿಯಾಲ ಕೋರ್ಟ್ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು.

    ಇನ್ನೊಂದೆಡೆ ಮತ್ತೋರ್ವ ದೋಷಿ ಪವನ್, ನಾನು ಅಪ್ರಾಪ್ತನಾಗಿದ್ದಾಗ ಈ ಘಟನೆ ನಡೆದಿತ್ತು. ಹೀಗಾಗಿ ನನ್ನನ್ನು ಮರಣದಂಡನೆಗೆ ಒಳಪಡಿಸಬಾರದು ಎಂದು ಸುಪ್ರಿಂ ಕೋರ್ಟಿಗೆ ಮತ್ತೊಮ್ಮೆ ಮನವಿ ಮಾಡಿದ್ದ. ಈ ಹಿಂದೆಯೇ ನ್ಯಾಯಾಧೀಶರಾದ ಆರ್.ಭಾನುಮತಿ, ಅಶೋಕ್ ಭೂಷಣ್ ಮತ್ತು ಎ.ಎಸ್.ಬೋಪಣ್ಣ ಅವರ ನೇತೃತ್ವದ ತ್ರಿಸದಸ್ಯ ಪೀಠವು ಪವನ್ ಅರ್ಜಿಯನ್ನು ತಿರಸ್ಕೃತ ಮಾಡಿತ್ತು. ಹೀಗಾಗಿ ಸುಪ್ರೀಂಕೋರ್ಟಿನ ಸಂವಿಧಾನಿಕ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದನು.

    ರಾಷ್ಟ್ರಪತಿಗಳ ಕ್ಷಮಾದಾನದ ತೀರ್ಪಿನ ವಿರುದ್ಧ ಮುಖೇಶ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದನು. ಜನವರಿಯಲ್ಲಿ ಸುಪ್ರೀಂಕೋರ್ಟ್ ಮುಖೇಶ್ ಅರ್ಜಿಯನ್ನು ವಜಾಗೊಳಿಸಿತ್ತು. ಮುಖೇಶ್ ನಂತೆಯೇ ಉಳಿದ ಅಪರಾಧಿಗಳು ಅರ್ಜಿ ಸಲ್ಲಿಸುವ ಮೂಲಕ ಗಲ್ಲು ಏರುವುದಕ್ಕೆ ವಿಳಂಬ ಮಾಡುವ ತಂತ್ರ ಮಾಡುತ್ತಿದ್ದಾರೆ. ಆದರೆ ಅಪರಾಧಿಗಳು ಏನೇ ಮಾಡಿದರೂ ಗಲ್ಲು ಶಿಕ್ಷೆಯನ್ನು ಮಾತ್ರ ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು.