Tag: Newlywed Couple

  • ಬೆಳಗ್ಗೆ ಮದುವೆ, ಮಧ್ಯಾಹ್ನ ಹೊಡೆದಾಡಿಕೊಂಡು ನವಜೋಡಿ ಸಾವು ಕೇಸ್‌ಗೆ ಟ್ವಿಸ್ಟ್‌ – ವಧು ಕೊಂದು ವರನೂ ಆತ್ಮಹತ್ಯೆ

    ಬೆಳಗ್ಗೆ ಮದುವೆ, ಮಧ್ಯಾಹ್ನ ಹೊಡೆದಾಡಿಕೊಂಡು ನವಜೋಡಿ ಸಾವು ಕೇಸ್‌ಗೆ ಟ್ವಿಸ್ಟ್‌ – ವಧು ಕೊಂದು ವರನೂ ಆತ್ಮಹತ್ಯೆ

    – ಕೊಲೆಗೆ ಕಾರಣ, ಉದ್ದೇಶಕ್ಕಾಗಿ ಕೆಜಿಎಫ್‌ ಪೊಲೀಸರಿಂದ ತನಿಖೆ ಚುರುಕು

    ಕೋಲಾರ: ಬೆಳಗ್ಗೆ ಮದುವೆಯಾಗಿ ಮಧ್ಯಾಹ್ನ ಮಚ್ಚಿನಿಂದ ಹೊಡೆದಾಡಿಕೊಂಡು ನವಜೋಡಿ ಸಾವಿಗೀಡಾದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ವರನ ಕ್ರೌರ್ಯದಿಂದಾಗಿ ಮದುವೆಯಾದ ದಿನವೇ ಜೋಡಿ ಭೀಕರವಾಗಿ ಸಾವಿಗೀಡಾಗಿದ್ದಾರೆ.

    ಮದುವೆ ಸಂಭ್ರಮ ಮೇಳೈಸಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ, ಕಣ್ಣೀರು. ವರನ ಸಮಾಧಿಗೆ ಮೂರನೇ ದಿನದ ಹಾಲು ತುಪ್ಪ ಹಾಕಿ ಸಂಬಂಧಿಕರು ಕಣ್ಣೀರು ಸುರಿಸುತ್ತಿದ್ದಾರೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕು ಚಂಬಾರಸನಹಳ್ಳಿ ಗ್ರಾಮದಲ್ಲಿ ನಡೆದಿದ್ದ ನವ ವಧು-ವರನ ನಿಗೂಢ ಸಾವಿನ ತನಿಖೆ ಚುರುಕುಗೊಂಡಿದೆ. ಇದನ್ನೂ ಓದಿ: ಬೆಳಗ್ಗೆ ಮದುವೆ, ಮಧ್ಯಾಹ್ನ ಮಚ್ಚಿನಿಂದ ಹೊಡೆದಾಟ – ನಿನ್ನೆ ವಧು, ಇಂದು ವರ ಸಾವು!

    ನಿನ್ನೆ ವಧು ಲಿಖಿತಾಶ್ರೀ ಅವರ ಮೂರನೇ ದಿನದ ಹಾಲು ತುಪ್ಪ ಶಾಸ್ತ್ರ ಮುಗಿಸಿದ್ದರೆ, ಇಂದು ವರ ನವೀನ್ ಮೃತಪಟ್ಟು ಮೂರನೇ ದಿನವಾದ ಹಿನ್ನೆಲೆ ಸಮಾಧಿ ಬಳಿ ತೆರಳಿ ಹಾಲು ತುಪ್ಪ ಶಾಸ್ತ್ರ ಮುಗಿಸಿ ಬಂದಿದ್ದಾರೆ. ವರ ನವೀನ್ ಇಷ್ಟಪಟ್ಟು ಪ್ರೀತಿಸಿ ಲಿಖಿತಾಶ್ರೀಯನ್ನು ಮದುವೆ ಮಾಡಿಕೊಂಡಿದ್ದ. ಆದರೆ ಆ ಖುಷಿ ಉಳಿದಿದ್ದು ಕೆಲವೇ ಗಂಟೆಗಳು ಮಾತ್ರ. ಎಲ್ಲರಿಗೂ ಘಟನೆ ಬಗ್ಗೆ ಆತಂಕ ಇದೆ. ಜೊತೆಗೆ ಆಘಾತವೂ ಇದೆ. ಆಂಧ್ರದ ಸಂತೂರು ಗ್ರಾಮದ ನಿವಾಸಿಗಳಾದ ಮುನಿಯಪ್ಪ ಅವರ ಪುತ್ರ ನವೀನ್ ಕುಮಾರ್, ರಾಜ್‌ಪೇಟ್ ರಸ್ತೆಯಲ್ಲಿ ರೆಡಿಮೇಡ್ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ.

    ತನ್ನ ಅಕ್ಕ ಪವಿತ್ರಾ ಮನೆ ಚಂಬಾರಸನಹಳ್ಳಿಯಲ್ಲಿ ಬಂದು ಕೆಲ ತಿಂಗಳುಗಳಿಂದ ನೆಲೆಸಿದ್ದ. ಕಳೆದ ಆರು ತಿಂಗಳ ಹಿಂದೆ ನವೀನ್ ತಾಯಿ ಆರೋಗ್ಯ ಸರಿ ಇಲ್ಲ ಎನ್ನುವ ಕಾರಣಕ್ಕೆ ನವೀನ್‌ಗೂ ಬೈನೇಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬವರ ಪುತ್ರಿ ಲಿಖಿತಾಶ್ರೀ ನಡುವೆ ಮದುವೆ ಮಾತುಕತೆ ನಡೆದಿತ್ತು. ಈ ನಡುವೆ ಆಷಾಢ ಬಂದ ಹಿನ್ನೆಲೆ ಮದುವೆ ಮಾತು ನಿಂತಿತ್ತು. ಆದರೆ ಇದ್ದಕ್ಕಿದಂತೆ ನವೀನ್ ಆ.6 ರಂದು ಅದೇ ಲಿಖಿತಾಶ್ರೀ ಜೊತೆಗೆ ನಾಳೆಯೇ ನನ್ನ ಮದುವೆ ಮಾಡಿಸಿ, ಇಲ್ಲವಾದರೆ ತಾನು ಸತ್ತೋಗ್ತಿನಿ ಎಂದು ಕುಟುಂಬಸ್ಥರಿಗೆ ಹೆದರಿಸಿದ್ದ. ಈ ವೇಳೆ ಹುಡುಗಿಯ ಒಪ್ಪಿಗೆಯೂ ಇದ್ದ ಕಾರಣ ಮನೆ ಬಳಿಯೇ ಪುರೋಹಿತರು, ಪೋಟೋಗ್ರಾಫರ್ ಇಲ್ಲದೆ ಸರಳವಾಗಿ ಮದುವೆ ಮಾಡಿದ್ದರು.

    ನವೀನ್ ಬಗ್ಗೆ ಆತನ ತಂದೆ ಮಾತನಾಡಿದ್ದು, ನವೀನ್ ಮಾನಸಿಕ ಸ್ಥಿತಿ ಸರಿ ಇರಲಿಲ್ಲ. ಅವನಿಗೆ ತಿಂದ ಊಟ ವಾಂತಿಯಾಗುತ್ತಿತ್ತು. ಕೆಲವೊಮ್ಮೆ ಹೇಳದೆ ಕೇಳದೆ ಎಲ್ಲೆಂದರಲ್ಲಿ ಹೋಗುತ್ತಿದ್ದ. ಆ ಕಾರಣಕ್ಕೆ ನಾವು ವಾತಾವರಣ ಬದಲಾಗಲಿ ಎಂದು ಚಂಬಾರಸನಹಳ್ಳಿಗೆ ಕಳಿಸಿದ್ದೆವು. ಮದುವೆ ಮಾಡಿದ್ರೆ ಸರಿ ಹೋಗುತ್ತಾನೆಂದು ತಿಳಿದು ಮದುವೆ ಮಾಡಿದ್ದೆವು ಎನ್ನುತ್ತಿದ್ದಾರೆ. ಇದನ್ನೂ ಓದಿ: ಬೆಳಗ್ಗೆ ಮದುವೆ, ಮಧ್ಯಾಹ್ನ ಮಚ್ಚಿನಿಂದ ಮಾರಾಮಾರಿ.. ವಧು ಸಾವು, ವರ ಗಂಭೀರ!

    ಮದುವೆ ನಂತರ ಚೆನ್ನಾಗಿಯೇ ಇದ್ದ ನವೀನ್ ಸಂಜೆ ವೇಳೆಗೆ ಇದ್ದಕ್ಕಿದಂತೆ ತನ್ನ ಪತ್ನಿ ಲಿಖಿತಾಶ್ರೀಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನೂ ಘಟನೆ ಸಂಬಂಧ ಕೆಜಿಎಫ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನೆಯಲ್ಲಿ ನವೀನ್ ಮೇಲೆ ಕೊಲೆ ಪ್ರಕರಣ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದು, ಘಟನೆಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸದ್ಯ ನವೀನ್ ಹಾಗೂ ಲಿಖಿತಾಶ್ರೀ ಇಬ್ಬರ ಮೊಬೈಲ್ ಸೀಜ್ ಮಾಡಿ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಜೊತೆಗೆ ಅವರ ಕಾಲ್ ಡೀಟೇಲ್ಸ್ ಪರಿಶೀಲಿಸುತ್ತಿದ್ದಾರೆ.

    ಕಳೆದೊಂದು ತಿಂಗಳಿಂದ ಇವರಿಬ್ಬರ ಜೊತೆಗೆ ಮಾತನಾಡಿದ್ದ ಸಂಬಂಧಿಕರು ಹಾಗೂ ಸ್ನೇಹಿತರು, ಆಪ್ತರನ್ನು ಕೂಡಾ ಕರೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅದೆಲ್ಲದರ ಜೊತೆಗೆ ನವೀನ್ ಮಾನಸಿಕ ಸ್ಥಿತಿ ಸರಿ ಇಲ್ಲಾ ಅನ್ನೋ ಕೆಲವು ಮಾಹಿತಿ ಇರುವ ಹಿನ್ನೆಲೆಯಲ್ಲಿ ಆ ಬಗ್ಗೆಯೂ ಕುಟುಂಬಸ್ಥರು ಹಾಗೂ ಆಪ್ತರನ್ನು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಅವನ ಮಾನಸಿಕ ಸ್ಥಿತಿಗೆ ಸಂಬಂಧಪಟ್ಟಂತೆ ಚಿಕಿತ್ಸೆ ಕೊಡಿಸಿರುವ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಇಬ್ಬರಿಗೂ ಕೂಡಾ ಬೇರೆ ಯಾರ ಜೊತೆಗೆ ಪ್ರೀತಿ-ಪ್ರೇಮ ಅಥವಾ ಸಂಬಂಧ ಇತ್ತಾ ಅನ್ನೋದರ ಕುರಿತು ಬೇರೆ ಬೇರೆ ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಮದ್ವೆಯಲ್ಲಿ 7ರ ಬದಲು 9 ಸಪ್ತಪದಿ ತುಳಿದ ನವಜೋಡಿ- ಕಾರಣವೇನು ಗೊತ್ತಾ?

    ಮದ್ವೆಯಲ್ಲಿ 7ರ ಬದಲು 9 ಸಪ್ತಪದಿ ತುಳಿದ ನವಜೋಡಿ- ಕಾರಣವೇನು ಗೊತ್ತಾ?

    ಚಂಡಿಗಡ: ಹರ್ಯಾಣದ ನವಜೋಡಿಯೊಂದು ತಮ್ಮ ಮದುವೆಯಲ್ಲಿ 7 ಸಪ್ತಪದಿ ಬದಲು 9 ಸಪ್ತಪಡಿ ತುಳಿದು ಒಬ್ಬರಿಗೊಬ್ಬರು ಹೊಸ ಭರವಸೆಯನ್ನು ಮಾಡಿಕೊಂಡರು.

    ಸಂದೀಪ್ ಹಾಗೂ ದೀಪಿಕಾ ಇಬ್ಬರು ಸಿವಾನಿ ಮಂಡಿಯಲ್ಲಿ ಮದುವೆಯಾಗಿದ್ದಾರೆ. ಉಪಮಂಡಲ್ ಗ್ರಾಮದ ಸಂದೀಪ್ ಚೌವ್ಹಾನ್ ಸಮಾಜಿಕ ಕಾರ್ಯಕರ್ತರಾಗಿದ್ದು, ತಮ್ಮ ಮದುವೆಯಲ್ಲಿ ಒಂಭತ್ತು ಸಪ್ತಪದಿ ತುಳಿದು ಎಲ್ಲರಿಗೂ ಮಾದರಿಯಾಗಿದ್ದಾರೆ.

    ಸಂದೀಪ್ ಪರಿಸರವನ್ನು ರಕ್ಷಿಸಲು ಗಿಡಗಳನ್ನು ಬೆಳೆಸುತ್ತೇವೆಂದು ತನ್ನ ಜೀವನ ಸಂಗಾತಿ ದೀಪಿಕಾ ಅವರ ಜೊತೆ 8ನೇ ಸಪ್ತಪದಿ ತುಳಿದರು. ಬಳಿಕ ‘ಭೇಟಿ ಬಜಾವ್, ಭೇಟಿ ಪಡಾವ್’ ಸಂಕಲ್ಪ ಮಾಡಿ ಒಂಭತ್ತನೇ ಸಪ್ತಪದಿ ತುಳಿದಿದ್ದಾರೆ. ಪುರೋಹಿತರು ಅಗ್ನಿಯನ್ನು ಸಾಕ್ಷಿಯನ್ನಾಗಿ ಮಾಡಿ ನವಜೋಡಿಯನ್ನು ಏಳರ ಬದಲು ಒಂಭತ್ತು ಸಪ್ತಪದಿ ತುಳಿಯಲು ಅವಕಾಶ ಕೊಟ್ಟರು. ಸಂದೀಪ್ ಹಾಗೂ ದೀಪಿಕಾ ಅವರ ಈ ವಿಶೇಷ ಮದುವೆ ಈಗ ಆ ಕ್ಷೇತ್ರದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.

    ಸಂದೀಪ್ ಹಾಗೂ ದೀಪಿಕಾ ಮದುವೆಯಾಗಿ ಮನೆಗೆ ಹೋದಾಗ ತಮ್ಮ ಗ್ರಾಮದಲ್ಲಿ ಗಿಡವೊಂದನ್ನು ನೆಟ್ಟಿದ್ದಾರೆ. ನಾವು ಮಾತ್ರ ಗಿಡ ನೆಡದೇ, ಎಲ್ಲರಿಗೂ ಗಿಡ ನೆಡೆಸಲು ಜಾಗೃತಿ ಮೂಡಿಸುತ್ತೇವೆ ಎಂದು ಸಂಕಲ್ಪ ಮಾಡಿದರು. ಅಲ್ಲದೇ ಭೇಟಿ ಪಡಾವ್, ಭೇಟಿ ಬಚಾವ್ ಅಭಿಯಾನದ ಬಗ್ಗೆ ಕೂಡ ಜಾಗೃತಿ ಮೂಡಿಸುವುದಾಗಿ ಸಂಕಲ್ಪ ಮಾಡಿದರು. ಎರಡು ಗ್ರಾಮದಲ್ಲೂ ಗಿಡವನ್ನು ನೆಟ್ಟು ಅದನ್ನು ನೋಡಿಕೊಳ್ಳುತ್ತೇವೆ ಹಾಗೂ ಹೆಣ್ಣುಮಕ್ಕಳ ಬಗ್ಗೆ ಸಾಕಾರಾತ್ಮಕ ಮನೋಭಾವವನ್ನು ಇರಿಸುವುದಾಗಿ ಭರವಸೆ ನೀಡಿದ್ದರು.

    ಸಂದೀಪ್ ಚೌಹ್ವಾನ್ ಅವರ ಮದುವೆ ಯಾವಾಗ ದೀಪಿಕಾ ಅವರ ಜೊತೆ ನಿಶ್ಚಾಯವಾಯಿತ್ತೋ ಆಗ ಅವರು ಮದುವೆ ಮಂಟಪದಲ್ಲಿ ಏಳರ ಬದಲು ಒಂಭತ್ತು ಸಪ್ತಪದಿ ತುಳಿಯಲು ನಿರ್ಧರಿಸಿದ್ದರು. ಸಂದೀಪ್ ಅವರ ಈ ನಿರ್ಧಾರಕ್ಕೆ ದೀಪಿಕಾ ಅವರು ಕೂಡ ಒಪ್ಪಿಗೆ ಸೂಚಿಸಿದ್ದರು. ಮದುವೆಯಲ್ಲಿ ಎಲ್ಲ ಶಾಸ್ತ್ರಗಳು ನಡೆಯುವಾಗ ಸಂದೀಪ್ ಅವರು ಇಚ್ಛಿಸಿದ್ದಂತೆ ಒಂಭತ್ತು ಸಪ್ತಪದಿ ತುಳಿದರು. ಒಂಭತ್ತು ಸಪ್ತಪದಿ ತುಳಿದು ಖುಷಿಯಾಗುತ್ತಿದೆ ಹಾಗೂ ನಮಗೆ ಮೊದಲು ಹೆಣ್ಣು ಮಗಳು ಆಗಲಿ ಎಂದು ಇಷ್ಟಪಡುತ್ತೇವೆ ಎಂದು ನವಜೋಡಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv