Tag: New Rule

  • ಹೊಸ ವಾಹನ ಖರೀದಿಸಬೇಕೆಂದರೆ ವಾಹನ ನಿಲುಗಡೆ ದೃಢೀಕರಣ ಪತ್ರ ಕಡ್ಡಾಯ

    ಹೊಸ ವಾಹನ ಖರೀದಿಸಬೇಕೆಂದರೆ ವಾಹನ ನಿಲುಗಡೆ ದೃಢೀಕರಣ ಪತ್ರ ಕಡ್ಡಾಯ

    ಬೆಂಗಳೂರು: ನಗರದಲ್ಲಿ ಹೊಸದಾಗಿ ವಾಹನ ಖರೀದಿಸಬೇಕು ಅಂದ್ರೆ ನಿಮ್ಮ ಮನೆ ಮುಂದೆ ವಾಹನ ನಿಲುಗಡೆಗೆ ಜಾಗ ಇರಲೇಬೇಕು. ವಾಹನ ನಿಲುಗಡೆಗೆ ಜಾಗ ಇರುವ ಬಗ್ಗೆ ದೃಢೀಕರಣ ಪತ್ರ ನೀಡಬೇಕು. ಹೀಗಂತ ಬೆಂಗಳೂರು ಮೆಟ್ರೋ ರೈಲು ನಿಗಮ, ನಗರ ಭೂಸಾರಿಗೆ ನಿರ್ದೇಶನಾಲಯ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮ ಸಂಯುಕ್ತವಾಗಿ ಸಿದ್ಧಪಡಿಸಿದ ಸಮಗ್ರ ಸಂಚಾರ ಯೋಜನೆಯ ಕರಡಿನಲ್ಲಿ ಶಿಫಾರಸು ಮಾಡಲಾಗಿದೆ.

    ಈಗಾಗಲೇ ವಾಹನ ಇರುವವರಿಗೆ ಜಾಗದ ಲಭ್ಯತೆಗೆ ಸಂಬಂಧಿಸಿದಂತೆ ದೃಢೀಕರಿಸಲು ಎರಡು ವರ್ಷಗಳ ಕಾಲಾವಕಾಶ ನೀಡಬೇಕು. ನಿಗದಿತ ಅವಧಿಯಲ್ಲಿ ಸಲ್ಲಿಸದಿದ್ದರೆ ದಂಡ ಪ್ರಯೋಗ ಮಾಡಬೇಕು ಎಂದು ಶಿಫಾರಸ್ಸಿನಲ್ಲಿ ಚರ್ಚೆಯಾಗಿದೆ. ಹೊಸ ವಾಹನಗಳ ನೊಂದಣಿಗೂ ಮುನ್ನ ಆ ವಾಹನ ನಿಲುಗಡೆಗೆ ಜಾಗದ ಲಭ್ಯತೆ ಬಗ್ಗೆ ಮಾಲೀಕರು ದೃಢೀಕರಿಸಬೇಕು. ಪ್ರಸ್ತುತ ಇರುವ ವಾಹನಗಳಿಗೆ ಈ ದೃಢೀಕರಣಕ್ಕೆ ಎರಡು ವರ್ಷ ಕಾಲಾವಕಾಶ ನೀಡಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದ್ದು, ಇದಕ್ಕೆ ಕೆಲ ವಾಹನದ ಮಾಲೀಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಕಲ್ಯಾಣ ಮಂಟಪಗಳು, ದೊಡ್ಡ ರೆಸ್ಟೋರೆಂಟ್ ಗಳು, ಹೊಟೇಲ್, ಚಿತ್ರ ಮಂದಿರಗಳು ಸೇರಿದಂತೆ ಲೋಡ್ ಪಾರ್ಕಿಂಗ್ ಸೌಲಭ್ಯ ಹೊಂದಿರುವ ಬಗ್ಗೆಯೂ ದೃಢೀಕರಿಸಿಕೊಳ್ಳಬೇಕು ಎಂದು ಸಾರಿಗೆ ತಜ್ಞರು ಶಿಫಾರಸು ಮಾಡಿದ್ದಾರೆ. ಮೋಟಾರು ವಾಹನ ಕಾಯ್ದೆ ಮತ್ತು ಮಹಾನಗರ ಪಾಲಿಕೆ ಬೈಲಾ ಮೂಲಕ ಈ ನಿಯಮವನ್ನ ರೂಪಿಸಬೇಕು. ಕಟ್ಟಡ ನಿರ್ಮಿಸುವಾಗಲೂ ಈ ಬಗ್ಗೆ ಮಾಹಿತಿ ಇರಬೇಕು ಎಂದು ಚರ್ಚೆ ಮಾಡಲಾಗಿದೆ. ಇನ್ನೂ ಈ ಪ್ರಸ್ತಾವನೆ ಪಾಲಿಕೆಯ ಅಂಗಳಕ್ಕೆ ಬಂದಿಲ್ಲ. ಸದ್ಯದಲ್ಲಿಯೇ ಚರ್ಚೆಯ ಮುನ್ನಲೆಗೆ ಬಂದರೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವ ಸಾಧ್ಯತೆಗಳಿವೆ.

  • ಇಂಡೋ-ವಿಂಡೀಸ್ ಸರಣಿಗೆ ನೋಬಾಲ್ ಗಮನಿಸಲಿದ್ದಾರೆ ಥರ್ಡ್ ಅಂಪೈರ್

    ಇಂಡೋ-ವಿಂಡೀಸ್ ಸರಣಿಗೆ ನೋಬಾಲ್ ಗಮನಿಸಲಿದ್ದಾರೆ ಥರ್ಡ್ ಅಂಪೈರ್

    ನವದೆಹಲಿ: ನಾಳೆಯಿಂದ ಆರಂಭವಾಗಲಿರುವ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟಿ-20 ಮತ್ತು ಏಕದಿನ ಸರಣಿಗೆ ಮೂರನೇ ಅಂಪೈರ್ ನೋಬಾಲ್ ಗುರುತಿಸಲಿದ್ದಾರೆ.

    ಈ ಹಿಂದಿನಿಂದಲೂ ಕ್ರಿಕೆಟ್ ಪಂದ್ಯಗಳಲ್ಲಿ ನೋಬಾಲ್ ವಿಚಾರದಲ್ಲಿ ಗೊಂದಲಗಳು ಆಗುತ್ತಿವೆ. ಈ ಗೊಂದಲಗಳಿಗೆ ತೆರೆಎಳೆಯಲು ಐಸಿಸಿ ಪ್ರಯತ್ನ ಮಾಡುತ್ತಿದ್ದು, ಇನ್ನು ಮುಂದೆ ನೋಬಾಲ್ ಮಾಡಿದರೆ ಅದನ್ನು ಮೈದಾನದಲ್ಲಿರುವ ಆಂಪೈರ್ ಹೇಳುವುದಿಲ್ಲ. ಬದಲಾಗಿ ಅ ಪಂದ್ಯದಲ್ಲಿ ಮೂರನೇ ಆಂಪೈರ್ ಆಗಿ ಕಾರ್ಯನಿರ್ವಹಿಸುವವರು ನೋಬಾಲ್ ಎಂದು ತೀರ್ಮಾನ ಮಾಡಬೇಕು ಎಂದು ಐಸಿಸಿ ಹೇಳಿದೆ.

    ನಾಳೆಯಿಂದ ಹೈದರಾಬಾದ್‍ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮೊದಲ ಟಿ-20 ಪಂದ್ಯವನ್ನು ಆಡಲಿದ್ದು, ನಂತರ ಡಿಸೆಂಬರ್ 15 ರಿಂದ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಪಂದ್ಯಗಳಲ್ಲಿ ಈ ಹೊಸ ನಿಯಮವನ್ನು ಪ್ರಯೋಗ ಮಾಡಿ ನೋಡಲು ಐಸಿಸಿ ತೀರ್ಮಾನ ಮಾಡಿದ್ದು ಈ ಪಂದ್ಯಗಳಲ್ಲಿ ಫ್ರಂಟ್‍ಫುಟ್ ನೋಬಾಲ್ ಮಾಡಿದರೆ ಅದನ್ನು ಆನ್‍ಫೀಲ್ಡ್ ಆಂಪೈರ್ ಬದಲಿಗೆ ಮೂರನೇ ಆಂಪೈರ್ ನೀಡಲಿದ್ದಾರೆ.

    ಪಂದ್ಯಗಳಲ್ಲಿ ಬೌಲರ್ ನೋಬಾಲ್ ಎಸೆದರೆ ಅದನ್ನು ಮೂರನೇ ಆಂಪೈರ್ ನೋಡಿ ನಂತರ ಅವರ ಸಹಾಯದಿಂದ ಆನ್‍ಫೀಲ್ಡ್ ಆಂಪೈರ್ ನೋಬಾಲ್ ಎಂದು ಘೋಷಣೆ ಮಾಡಬೇಕು. ಮೂರನೇ ಆಂಪೈರ್ ನೋಬಾಲ್ ಎಂದು ಹೇಳದೆ ಇದ್ದರೆ ಆನ್‍ಫೀಲ್ಡ್ ಆಂಪೈರ್ ಅ ಎಸೆತವನ್ನು ನೋಬಾಲ್ ಎಂದು ಹೇಳುವಂತಿಲ್ಲ ಎಂದು ಇಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಒಂದು ವೇಳೆ ಮೂರನೇ ಆಂಪೈರ್ ಕಡೆಯಿಂದ ನೋಬಾಲ್ ನಿರ್ಧಾರ ತಡವಾಗಿ ಬಂದರೆ ಈ ಬಾಲ್ ಅಲ್ಲಿ ಬ್ಯಾಟ್ಸ್ ಮ್ಯಾನ್ ಔಟ್ ಆಗಿದ್ದರೆ ಆ ತೀರ್ಮಾವನ್ನು ಮೈದಾನದ ಆಂಪೈರ್ ವಾಪಸ್ ಪಡೆದು ಅದನ್ನು ನೋಬಾಲ್ ಎಂದು ಘೋಷಣೆ ಮಾಡಬಹುದು. ಇದನ್ನು ಬಿಟ್ಟರೆ ಉಳಿದ ಎಲ್ಲಾ ನಿಯಮಗಳ ಜವಾಬ್ದಾರಿಯನ್ನು ಆನ್‍ಫೀಲ್ಡ್ ಆಂಪೈರ್ ಎಂದಿನಂತೆ ನಿರ್ವಹಿಸುತ್ತಾರೆ ಎಂದು ಐಸಿಸಿ ತಿಳಿಸಿದೆ.

    ಈ ನಿಯಮವನ್ನು 2016 ರಲ್ಲಿ ನಡೆದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಏಕದಿನ ಸರಣಿಯಲ್ಲಿ ಪ್ರಯೋಗ ಮಾಡಲಾಗಿತ್ತು. ಆದರೆ ಯಾವುದೇ ನಿರ್ಧಾರವನ್ನು ಕೈಗೊಂಡಿರಲಿಲ್ಲ. ಈಗ ಕ್ರಿಕೆಟ್ ಸಮಿತಿಯೊಂದು ಈ ನಿಯಮವನ್ನು ಬಳಸುವುದು ಸೂಕ್ತ ಎಂದು ಶಿಫಾರಸು ಮಾಡಿದ ಕಾರಣ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಫ್ರಂಟ್‍ಫುಟ್ ನೋಬಾಲ್ ತೀರ್ಮಾನವನ್ನು ಮೂರನೇ ಆಂಪೈರ್ ತೆಗೆದುಕೊಳ್ಳಬೇಕು ಎಂದು ಐಸಿಸಿ ಹೊಸ ನಿಯಮ ಮಾಡಿತ್ತು. ಈ ನಿಯಮವನ್ನು ಇಂಡೋ-ವಿಂಡೀಸ್ ಸರಣಿಯಲ್ಲಿ ಮತ್ತೆ ಪ್ರಯೋಗ ಮಾಡಲು ಐಸಿಸಿ ತೀರ್ಮಾನಿಸಿದೆ.

    ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಅಂಪೈರ್ ಅಲ್ಲದೇ ನೋಬಾಲ್ ಗಮನಿಸಲೆಂದೇ ಅಂಪೈರ್ ಇರಲಿದ್ದಾರೆ. ಈ ಸಂಬಂಧ ಐಪಿಎಲ್ ಸಭೆಯಲ್ಲಿ ಚರ್ಚೆ ನಡೆದಿದ್ದು, ಈ ಕಲ್ಪನೆ ನಿಮಗೆ ಸ್ವಲ್ಪ ವಿಚಿತ್ರ ಎನಿಸಬಹುದು. ಈ ವಿಚಾರದ ಬಗ್ಗೆ ಮೊದಲ ಐಪಿಎಲ್ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ನೋಬಾಲ್ ಗಮನಿಸಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತೇವೆ. ಈ ಅಂಪೈರ್ ಮೂರು ಅಥವಾ ನಾಲ್ಕನೇಯ ಅಂಪೈರ್ ಅಲ್ಲ ಎಂದು ಅಧಿಕಾರಿ ಈ ಹಿಂದೆ ತಿಳಿಸಿದ್ದರು.

    ಕಳೆದ ವರ್ಷದ ಐಪಿಎಲ್‍ನಲ್ಲಿ ಮಾರ್ಚ್ 28 ರಂದು ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 8 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಬೆಂಗಳೂರು ತಂಡಕ್ಕೆ ಕೊನೆಯ ಓವರಿನಲ್ಲಿ 17 ರನ್ ಬೇಕಿತ್ತು. ಕ್ರೀಸಿನಲ್ಲಿ ಎಬಿಡಿ ವಿಲಿಯರ್ಸ್ 68 (39 ಎಸೆತ) ರನ್ ಗಳಿಸಿದ್ದರೆ ಶಿವಂ ದುಬೆ 1 ರನ್ ಗಳಿಸಿದ್ದರು. ಮಾಲಿಂಗ ಎಸೆದ ಕೊನೆಯ ಓವರಿನ ಮೊದಲ ಎಸೆತವನ್ನು ದುಬೆ ಸಿಕ್ಸರ್‍ಗೆ ಅಟ್ಟಿದ್ದರು. ಒಟ್ಟು ಐದು ಎಸೆತಗಳಲ್ಲಿ 10 ರನ್ ಬಂದಿತ್ತು. ಕೊನೆಯ ಎಸೆತದಲ್ಲಿ ಜಯಗಳಿಸಲು 7 ರನ್ ಬೇಕಿತ್ತು. ಮಾಲಿಂಗ ಎಸೆದ ಕೊನೆಯ ಎಸೆತದಲ್ಲಿ ದುಬೆ ಬಲವಾಗಿ ಹೊಡೆದರೂ ಬಾಲ್ ಬ್ಯಾಟಿಗೆ ತಾಗದ ಕಾರಣ ಯಾವುದೇ ರನ್ ಬಂದಿರಲಿಲ್ಲ. ಆದರೆ ಟಿವಿ ರಿಪ್ಲೇಯಲ್ಲಿ ಮಾಲಿಂಗ ನೋಬಾಲ್ ಎಸೆದಿದ್ದು ಸ್ಪಷ್ಟವಾಗಿತ್ತು. ಹೀಗಾಗಿ ಮುಂದಿನ ಎಸೆತ ಫ್ರೀ ಹಿಟ್ ಆಗಬೇಕಿತ್ತು. ಆದರೆ ಅಂಪೈರ್ ರವಿ ನೋಬಾಲ್ ನೀಡದ ಪರಿಣಾಮ ಮುಂಬೈ ತಂಡ 6 ರನ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.

    ಈ ಪಂದ್ಯದ ಬಳಿಕ ಕೊಹ್ಲಿ ಮಾತನಾಡಿ, ನಾವು ಐಪಿಎಲ್ ಪಂದ್ಯ ಆಡುತ್ತಿದ್ದೇವೆ ಹೊರತು ಕ್ಲಬ್ ಕ್ರಿಕೆಟ್ ಆಡುತ್ತಿಲ್ಲ. ಅಂಪೈರ್ ಗಳು ಕಣ್ಣನ್ನು ತೆರೆದು ಗಮನಿಸುತ್ತಿರಬೇಕು. ಅಂಪೈರ್ ನೋಬಾಲ್ ನೀಡುತ್ತಿದ್ದರೆ ಪಂದ್ಯದ ಫಲಿತಾಂಶವೇ ಬದಲಾಗುವ ಸಾಧ್ಯತೆ ಇತ್ತು. ನೋಬಾಲ್ ಮತ್ತು ಫ್ರೀ ಹಿಟ್ ನೀಡಿದ್ದರೆ ನಾವು ಗೆಲ್ಲುವ ಸಾಧ್ಯತೆ ಇತ್ತು. ಅಂಪೈರ್ ನಿರ್ಲಕ್ಷ್ಯದಿಂದ ಎಲ್ಲ ಹಾಳಾಯಿತು. ಅಂಪೈರ್ ಗಳು ಮೈದಾನದಲ್ಲಿ ಜಾಗೃತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಆಕ್ರೋಶ ಹೊರಹಾಕಿದ್ದರು.

    ಮೈದಾನ ಪ್ರವೇಶಿಸಿದ್ದ ಧೋನಿ:
    ರಾಜಸ್ಥಾನ ಮತ್ತು ಚೆನ್ನೈ ತಂಡದ ವೇಳೆಯೂ ಅಂಪೈರ್ ನೋಬಾಲ್ ನೀಡಿರಲಿಲ್ಲ. ಈ ವೇಳೆ ನಾಯಕ ಧೋನಿ ಮೈದಾನ ಪ್ರವೇಶಿಸಿ ಅಂಪೈರ್ ಜೊತೆ ಜಗಳವಾಡಿದ್ದರು. ಅಂಪೈರ್ ಎಡವಟ್ಟುಗಳಿಂದ ಪದೇ ಪದೇ ಮುಜುಗರಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಮಾದ ಆಗದಂತೆ ತಡೆಯಲು ನೋಬಾಲ್ ಗಮನಿಸಲೆಂದೇ ಪ್ರತ್ಯೇಕ ಅಂಪೈರ್ ನಿಯೋಜಿಸಲು ಐಪಿಎಲ್ ಆಡಳಿತ ಮಂಡಳಿ ಮುಂದಾಗಿದೆ.

  • ಸವಾರರೇ ಎಚ್ಚರ.. ವಾಹನ ದಾಖಲೆ ಇಟ್ಕೊಂಡು ಸಂಚರಿಸಿ -ಸೆ. 1ರಿಂದ ರೂಲ್ಸ್ ಬ್ರೇಕ್ ಮಾಡಿದ್ರೆ ದುಬಾರಿ ದಂಡ

    ಸವಾರರೇ ಎಚ್ಚರ.. ವಾಹನ ದಾಖಲೆ ಇಟ್ಕೊಂಡು ಸಂಚರಿಸಿ -ಸೆ. 1ರಿಂದ ರೂಲ್ಸ್ ಬ್ರೇಕ್ ಮಾಡಿದ್ರೆ ದುಬಾರಿ ದಂಡ

    ಬೆಂಗಳೂರು: ವಾಹನ ಸವಾರರು ಇನ್ಮುಂದೆ ಸಂಚಾರ ನಿಯಮವನ್ನು ಬ್ರೇಕ್ ಮಾಡಿದರೆ ಭಾರೀ ದಂಡ ಬೀಳುತ್ತದೆ. ಯಾಕಂದರೆ ಸೆಪ್ಟೆಂಬರ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ.

    2019ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಆಯ್ದ 63 ನಿಯಮಗಳು ಸೆಪ್ಟೆಂಬರ್ 1ರಿಂದ ಜಾರಿಯಾಗಲಿದೆ. ಹೊಸ ಕಾನೂನಿನ ಪ್ರಕಾರ, ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ, ಶಿಕ್ಷೆ ವಿಧಿಸಲು ಅವಕಾಶ ಇದೆ. ಇದರಲ್ಲಿ ಮುಖ್ಯವಾಗಿ ದಂಡದ ಜೊತೆಗೆ ಪರವಾನಗಿ, ನೋಂದಣಿ, ರಾಷ್ಟ್ರೀಯ ಸಾರಿಗೆ ನೀತಿಗೆ ಸಂಬಂಧಿಸಿದ ನಿಯಮಗಳು ಮಾತ್ರ ಇರುತ್ತದೆ.

    ಆದ್ದರಿಂದ ವಾಹನ ದಾಖಲೆ ಇಲ್ಲದಿದ್ದರೆ ಸರಿ ಮಾಡಿಸಿ. ಡಿಎಲ್ ಮತ್ತು ಇನ್ಶೂರೆನ್ಸ್ ಇಲ್ಲ ಅಂದರೆ ಮಾಡಿಸಿಕೊಳ್ಳಿ. ಸೆಪ್ಟೆಂಬರ್ 1ರಿಂದ ರೂಲ್ಸ್ ಬ್ರೇಕ್ ಮಾಡಿದರೆ ದುಬಾರಿ ದಂಡ ಬೀಳುತ್ತದೆ.

    ರಸ್ತೆ ಅಪಘಾತವನ್ನು ಕಡಿಮೆ ಮಾಡುವ ಉದ್ದೇಶದಿಂದ ಸಂಚಾರ ನಿಯಮ ಉಲ್ಲಂಘನೆಗಳಿಗೆ ಭಾರೀ ದಂಡ ವಿಧಿಸುವಂತಹ ಮೋಟಾರು ವಾಹನ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಸಮ್ಮತಿ ಸಿಕ್ಕಿತ್ತು. 2017ರಲ್ಲೇ ಪರಿಚಯವಾಗಿದ್ದ ಈ ಮಸೂದೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ಮತ್ತೆ ಮಂಡಿಸಿದ್ದರು. ಈ ಮಸೂದೆ ಪರ 108 ಹಾಗೂ ವಿರುದ್ಧ 13 ಮತಗಳು ಬಂದಿತ್ತು.

    2017ರಲ್ಲೇ ಪರಿಚಯಿಸಲಾಗಿದ್ದ ಈ ಮಸೂದೆ ಲೋಕಸಭೆಯಲ್ಲಿ ಜುಲೈ 23ರಂದೇ ಅಂಗೀಕಾರವಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಳ್ಳದ ಕಾರಣ 16ನೇ ಲೋಕಸಭೆಯಲ್ಲಿ ಈ ಮಸೂದೆ ಮೂಲೆ ಸೇರಿತ್ತು.

    ಮೋಟಾರು ವಾಹನ ಅಪಘಾತಕ್ಕೆ ಸಂಬಂಧಿತ ಕೇಸ್‍ಗಳಲ್ಲಿ ಮೃತರಾದವರಿಗೆ 5 ಲಕ್ಷ ಹಾಗೂ ತೀವ್ರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂಪಾಯಿ ಪರಿಹಾರ ಸೇರಿದಂತೆ ಟ್ರಾಫಿಕ್ ಸಂಬಂಧಿತ ಅಪರಾಧಗಳಲ್ಲಿ ಹೆಚ್ಚಿನ ದಂಡ ಜೊತೆಗೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಇದರ ಜೊತೆಗೆ ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳಿಗೆ ಸೀಟ್ ಬೆಲ್ಟ್ ಕಡ್ಡಾಯ ಮಾಡಿದೆ.

  • ಬಂಕ್ ಪಕ್ಕದಲ್ಲಿ ಮನೆ ಇದ್ರೂ ಹೆಲ್ಮೆಟ್ ಹಾಕಿಕೊಂಡು ಬರಬೇಕೇ – ಸವಾರರ ವಿರೋಧ

    ಬಂಕ್ ಪಕ್ಕದಲ್ಲಿ ಮನೆ ಇದ್ರೂ ಹೆಲ್ಮೆಟ್ ಹಾಕಿಕೊಂಡು ಬರಬೇಕೇ – ಸವಾರರ ವಿರೋಧ

    ಬೆಂಗಳೂರು: ಅಪಘಾತದಲ್ಲಿ ಸಾವನ್ನಪ್ಪುವ ಸವಾರರ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು “ನೋ ಹೆಲ್ಮೆಟ್ ನೋ ಪೆಟ್ರೋಲ್” ಎಂಬ ಬೆಂಗಳೂರು ಸಂಚಾರಿ ಪೊಲೀಸರ ಹೊಸ ನಿಯಮಕ್ಕೆ ದ್ವಿಚಕ್ರ ವಾಹನ ಸವಾರರು ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ನಿಯಮ ಒಳ್ಳೆಯದು. ಆದರೆ ಮೊದಲು ಪೊಲೀಸರು ಅವರು ಕೆಲಸವನ್ನು ಅವರು ಸರಿಯಾಗಿ ಮಾಡಲಿ. ಬಂಕ್ ಪಕ್ಕದಲ್ಲಿ ಮನೆ ಇದ್ದರೂ ಹೆಲ್ಮೆಟ್ ಹಾಕಿಕೊಂಡು ಬರಬೇಕೇ ಎಂದು ಪ್ರಶ್ನಿಸುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

    ಹೊಸ ನಿಯಮ ನಾಳೆಯಿಂದ ಜಾರಿಯಾಗುವ ಸಾಧ್ಯತೆ ಇದೆ. ಆದರೆ ಈ ವಿಚಾರವಾಗಿ ಪೆಟ್ರೋಲ್ ಬಂಕ್ ಮಾಲೀಕರ ಜೊತೆ ಸಂಚಾರಿ ಪೊಲೀಸರು ಇನ್ನೂ ಚರ್ಚಿಸಿಲ್ಲ ಎನ್ನಲಾಗಿದೆ. ಅದ್ದರಿಂದ ಪೆಟ್ರೋಲ್ ಬಂಕ್ ಮಾಲೀಕರು ಈ ಹೊಸ ನಿಯಮಕ್ಕೆ ಕ್ಯಾರೆ ಎನ್ನುತ್ತಿಲ್ಲ. ಮಾಲೀಕರು ಸೂಚನೆ ನೀಡದೇ ಇರುವ ಕಾರಣ ನಗರದ ಬಹುತೇಕ ಪೆಟ್ರೋಲ್ ಬಂಕ್ ಗಳಲ್ಲಿ ಹೆಲ್ಮೆಟ್ ಇಲ್ಲದಿದ್ದರೂ ಪೆಟ್ರೋಲ್ ಹಾಕುವ ಸಾಧ್ಯತೆ ಹೆಚ್ಚಿದೆ.

    ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಪಿ.ಹರಿಶೇಖರನ್ ಹೊಸ ನಿಯಮ ಜಾರಿ ಸಂಬಂಧ ಸಹಕಾರ ಕೋರಿ ಇಂಧನ ಕಂಪನಿಗಳ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದರು. ಆದರೆ ಅವರ ಕಡೆಯಿಂದ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಎನ್ನಲಾಗಿದೆ. ಕಳೆದ ವರ್ಷ ಬೈಕ್ ಅಪಘಾತಗಳಲ್ಲಿ ಸುಮಾರು 150 ಮಂದಿ ದುರ್ಮರಣಕ್ಕೀಡಾಗಿದ್ದರು. ದಂಡ ವಿಧಿಸುತ್ತಿದರೂ ಹೆಲ್ಮೆಟ್ ಬಳಸದೇ ವಾಹನ ಚಲಾಯಿಸುವವರ ಸಂಖ್ಯೆ ಕಡಿಮೆಯಾಗದಿದ್ದರಿಂದ, ಈ ನೂತನ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.

    ಈಗಾಗಲೇ ಕೇರಳ, ಆಂಧ್ರ ಸೇರಿದಂತೆ ದೇಶದ ವಿವಿಧೆಡೆ ಈ ನಿಯಮ ಜಾರಿಯಾಗಿದೆ. ಇದರ ಪ್ರಕಾರ ನಿಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಬೇಕು ಎಂದರೆ ಹೆಲ್ಮೆಟ್ ಇರಲೇಬೇಕು. ಒಂದು ವೇಳೆ ನಿಮ್ಮ ಬಳಿ ಹೆಲ್ಮೆಟ್ ಇಲ್ಲ ಎಂದರೆ ಬಂಕ್‍ನವರು ನಿಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕುವುದಿಲ್ಲ.