Tag: Negative

  • ಹಾಸನದಲ್ಲಿ ಯಾರಿಗೂ ಕೊರೊನಾ ಸೋಂಕು ಇಲ್ಲ

    ಹಾಸನದಲ್ಲಿ ಯಾರಿಗೂ ಕೊರೊನಾ ಸೋಂಕು ಇಲ್ಲ

    ಹಾಸನ: ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಶಂಕೆ ಮೇರೆಗೆ ದಾಖಲಾಗಿದ್ದ ಎಲ್ಲ ಆರು ಮಂದಿಯ ಪರೀಕ್ಷಾ ವರದಿ ಬಂದಿದ್ದು, ಯಾರಿಗೂ ಸೋಂಕು ಇಲ್ಲ ಎಂದು ದೃಢಪಟ್ಟಿದೆ.

    ಎಲ್ಲರ ವೈದ್ಯಕೀಯ ವರದಿಯಲ್ಲಿ ನೆಗೆಟಿವ್ ಎಂಬ ವರದಿ ಬಂದಿದೆ. ಅಲ್ಲದೆ ಚಿಕ್ಕಮಗಳೂರಿನಿಂದ ಕಳಿಸಲಾಗಿದ್ದ ಮಾದರಿಯಲ್ಲಿಯೂ ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಕೃಷ್ಣಮೂರ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಮಾಹಿತಿ ನೀಡಿದ್ದಾರೆ.

    ಕೊರೊನಾ ವೈರಸ್ ಸೋಂಕು ಚಿಕಿತ್ಸೆಗೆ ಮಂಜಾಗ್ರತೆ ಹಾಗೂ ಪೂರ್ವ ಸಿದ್ಧತೆಗಾಗಿ ಹಾಸನದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊರೊನಾ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿ ಆರ್.ಗಿರೀಶ್ ಅವರ ಸೂಚನೆ ಮೇರೆಗೆ ಡಾ. ಕೃಷ್ಣಮೂರ್ತಿ ಹಾಗೂ ಡಾ. ಸತೀಶ್ ಅವರು ಹಾಸನ ನಗರದ ಖಾಸಗಿ ಆಸ್ಪತ್ರೆಗಳಿಗೆ ಹಠಾತ್ ಭೇಟಿ ನೀಡಿ ಕೊರೊನಾ ಪ್ರತ್ಯೇಕ ಚಿಕಿತ್ಸಾ ಘಟಕಗಳನ್ನು ತೆರೆಯಲಾಗಿದೆಯೇ? ಯಾವ ರೀತಿ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪರೀಕ್ಷೆ ಮಾಡಿದರು.

    ಆಸ್ಪತ್ರೆ ಮುಖ್ಯಸ್ಥರು ಮತ್ತು ವೈದ್ಯರೊಂದಿಗೆ ಮಾತನಾಡಿದ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಡಿ.ಹೆಚ್.ಓ, ಆಸ್ಪತ್ರೆಯ ಎಲ್ಲಾ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿಗೆ ಅರಿವು ಮೂಡಿಸಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು. ಶಂಕಿತರನ್ನು ಹೇಗೆ ತಪಾಸಣೆ ನಡೆಸಿ ಮಾದರಿಗಳನ್ನು ಸಂಗ್ರಹಿಸಬೇಕು ಎಂದು ವಿವರಿಸಿದರು. ಎಲ್ಲಾ ಆಸ್ಪತ್ರೆಗಳಲ್ಲಿ ತಮ್ಮ ಸಿಬ್ಬಂದಿಗಳಿಗೆ ಅಣಕು ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.

  • ಮಂಗ್ಳೂರು ಆಸ್ಪತ್ರೆಯಿಂದ ಪರಾರಿಯಾಗಿ ಹೈಡ್ರಾಮ ಸೃಷ್ಟಿಸಿದ್ದವನಿಗೆ ಇಲ್ಲ ಕೊರೊನಾ

    ಮಂಗ್ಳೂರು ಆಸ್ಪತ್ರೆಯಿಂದ ಪರಾರಿಯಾಗಿ ಹೈಡ್ರಾಮ ಸೃಷ್ಟಿಸಿದ್ದವನಿಗೆ ಇಲ್ಲ ಕೊರೊನಾ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆ ವೆನ್‍ಲಾಕ್‍ನಿಂದ ಪರಾರಿಯಾಗಿ ಹೈಡ್ರಾಮ ಮಾಡಿದ್ದ ಕರೊನಾ ಶಂಕಿತನ ವರದಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ಕೈಸೇರಿದೆ. ರಿಪೋರ್ಟ್‍ನಲ್ಲಿ ಕರೊನಾ ನೆಗೆಟಿವ್ ಅಂಶ ಕಂಡುಬಂದಿದ್ದು ಜಿಲ್ಲಾಡಳಿತ ಮತ್ತು ಶಂಕಿತನ ಮನೆಯವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಕಳೆದ ಮಾರ್ಚ್ 8ರಂದು ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ವ್ಯಕ್ತಿಯಲ್ಲಿ ಕರೊನಾದ ಲಕ್ಷಣ ಕಂಡುಬಂದಿತ್ತು. ವೆನ್‍ಲಾಕ್ ಆಸ್ಪತ್ರೆಯ ಐಶೋಲೇಷನ್ ವಾರ್ಡ್ ಗೆ ಚಿಕಿತ್ಸೆಗೆಂದು ಸೇರಿಸಿದ್ದ ಬಳಿಕ ಆತ ಪರಾರಿಯಾಗಿದ್ದ. ಆ ಬಳಿಕ ಆರೋಗ್ಯಾಧಿಕಾರಿಗಳು ಆತನನ್ನು ಆತನ ಪತ್ನಿಯ ಮನೆಯಲ್ಲಿ ಪತ್ತೆ ಹಚ್ಚಿ ಆತನ ಗಂಟಲಿನ ದ್ರವದ ಮಾದರಿ ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು.

    ಇದೀಗ ಆತ ಸೇರಿದಂತೆ ಒಟ್ಟು 7 ಜನರ ವರದಿ ಬಂದಿದ್ದು ಎಲ್ಲರ ವರದಿಯಲ್ಲಿಯೂ ನೆಗೆಟಿವ್ ಅಂಶ ಕಂಡು ಬಂದಿದೆ. ಆದರೆ 14 ದಿನ ಜಾಗರೂಕತೆಯಿಂದ ಇರಲು ಸೂಚಿಸಿದ್ದೇವೆ. ಇಲ್ಲಿಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಕೇಸ್ ಪತ್ತೆಯಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಮಾಹಿತಿ ನೀಡಿದ್ದಾರೆ.

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂದು ಅಂಬುಲೆನ್ಸ್ ರೆಡಿ ಇದೆ. ಓರ್ವ ಡಾಕ್ಟರ್, ಇಬ್ಬರು ಅಸಿಸ್ಟೆಂಟ್ ಗಳು ಕರ್ತವ್ಯದಲ್ಲಿದ್ದಾರೆ. ವಿದೇಶದಿಂದ ಬರುವ ವಿಮಾನಗಳ ಬಗ್ಗೆ ನಿಗಾ ಇಡಲಾಗುತ್ತಿದೆ. ವಿಮಾನ ನಿಲ್ದಾಣ, ಪಣಂಬೂರು ಎನ್‍ಎಂಪಿಟಿ ಬಂದರಿನಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.