Tag: Nattikumar

  • ರಾಮ್ ಗೋಪಾಲ್ ವರ್ಮಾ ಒಬ್ಬ ಮಹಾನ್ ಮೋಸಗಾರ : ನಟ್ಟಿಕುಮಾರ್

    ರಾಮ್ ಗೋಪಾಲ್ ವರ್ಮಾ ಒಬ್ಬ ಮಹಾನ್ ಮೋಸಗಾರ : ನಟ್ಟಿಕುಮಾರ್

    ಅಂದುಕೊಂಡಂತೆ ಆಗಿದ್ದರೆ ಈ ವಾರ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಡೇಂಜರಸ್’ ಚಿತ್ರ ಬಿಡುಗಡೆ ಆಗಬೇಕಿತ್ತು. ಹಿಂದಿ ಮತ್ತು ತೆಲುಗುನಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾಗಾಗಿ ವರ್ಮಾ ಸಾಕಷ್ಟು ಪ್ರಚಾರ ಮಾಡಿದರು. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಿನಿಮಾದ ನಾಯಕಿಯರನ್ನು ಕರೆದುಕೊಂಡು ಸುದ್ದಿಗೋಷ್ಠಿ ಕೂಡ ಏರ್ಪಡಿಸಿದ್ದರು. ಆದರೆ, ಸಿನಿಮಾ ರಿಲೀಸ್ ಆಗಲಿಲ್ಲ. ಅದಕ್ಕೆ ವರ್ಮಾ ಕೊಟ್ಟ ಕಾರಣ, ‘ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಮಾಡಲು ವಿತರಕರು ಒಪ್ಪುತ್ತಿಲ್ಲ’ ಎನ್ನುವುದಾಗಿತ್ತು. ಈ ನಡೆಯ ವಿರುದ್ಧ ತಾವು ಹೋರಾಟ ಮಾಡುವುದಾಗಿ ಹೇಳಿದ್ದರು.

    ಆದರೀಗ ಡೇಂಜರಸ್‌ ಸಿನಿಮಾ ರಿಲೀಸ್ ಆಗದೇ ಇರುವುದಕ್ಕೆ ಬೇರೆಯದ್ದೇ ಕಾರಣವನ್ನು ಕೊಡುತ್ತಾರೆ ವಿತರಕ ನಟ್ಟಿ ಕುಮಾರ್. ಈ ಕುರಿತು ಅವರು ಇಂದು ಸುದ್ದಿಗೋಷ್ಠಿ ಮಾಡಿದ್ದು, ರಾಮ್ ಗೋಪಾಲ್ ವರ್ಮಾ ಬಗ್ಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಒಬ್ಬ ಮೋಸಗಾರ. ನನ್ನ ಹತ್ತಿರವೇ ಐದು ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ. ಆ ಸಾಲವನ್ನು ಈವರೆಗೂ ಕೊಟ್ಟಿಲ್ಲ. ಹಾಗಾಗಿ ಕಾನೂನು ಮೊರೆ ಹೋಗಿ ಚಿತ್ರ ಪ್ರದರ್ಶನ ಆಗದಂತೆ ತಡೆಯಾಜ್ಞೆ ತಂದಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ, ಕೇವಲ ಹಿಂದಿಯಲ್ಲಿ ಮಾತ್ರ ಈ ಸಿನಿಮಾ ಸೆನ್ಸಾರ್ ಆಗಿದೆ. ಉಳಿದಂತೆ ಅವರಿಗೆ ಯಾವ ಭಾಷೆಯಲ್ಲೂ ಸಿಬಿಎಫ್‍ಸಿ ಸರ್ಟಿಫಿಕೇಟ್ ಸಿಕ್ಕಿಲ್ಲ. ಪ್ರಮಾಣಪತ್ರವಿಲ್ಲದೇ ಹೇಗೆ ಬಿಡುಗಡೆ ಮಾಡಲು ಸಾಧ್ಯ ಎಂದೂ ಅವರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್

    ರಾಮ್ ಗೋಪಾಲ್ ವರ್ಮಾ ಸಿನಿಮಾಗಳಿಗೆ ತಡೆಯಾಜ್ಞೆ ತರುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದಿನ ಅವರ ಎರಡು ಚಿತ್ರಗಳಿಗೆ ತಂದಿದ್ದೆ. ಮುಂದೆಯೂ ತರುತ್ತೇನೆ. ನನಗೆ ಕೊಡಬೇಕಾದ ಹಣ ಸಂದಾಯ ಆಗುವವರೆಗೂ ನಾನು ಈ ಕೆಲಸ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ ನಟ್ಟಿಕುಮಾರ್. ಬಾಲಿವುಡ್ ನಲ್ಲೂ ಸುಮಾರು 12 ಕೋಟಿಗೂ ಹೆಚ್ಚು ರಾಮ್ ಗೋಪಾಲ್ ವರ್ಮಾ ಸಾಲ ಮಾಡಿದ್ದಾರಂತೆ. ಅದನ್ನು ತೀರಿಸೋಕೆ ಆಗದೇ ಆ ಸಿನಿಮಾ ರಂಗವನ್ನೇ ಬಿಟ್ಟು ಬಂದರಂತೆ. ಆಗ ವರ್ಮಾ ಸಹಾಯಕ್ಕೆ ಬಂದವರು ಇದೇ ನೆಟ್ಟಿಕುಮಾರ್. ನನಗೂ ಮೋಸ ಮಾಡಿ ಗೋವಾಗೆ ಹೋದರು. ಅಲ್ಲಿಯೂ ಮೋಸ ಮಾಡಿ ವಾಪಸ್ಸು ಇಲ್ಲಿಗೆ ಬಂದಿದ್ದಾರೆ. ಅವರಿಂದ ಸಾಕಷ್ಟು ಜನರು ಮೋಸ ಹೋಗಿದ್ದಾರೆ ಎಂದು ನಟ್ಟಿಕುಮಾರ್ ಆರೋಪಿಸಿದ್ದಾರೆ. ಇದನ್ನೂ ಓದಿ : EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್

    ನಟ್ಟಿಕುಮಾರ್ ಆರೋಪಕ್ಕೆ ತಿರುಗೇಟು ನೀಡಿರುವ ರಾಮ್ ಗೋಪಾಲ್ ವರ್ಮಾ, ಅದೆಲ್ಲವೂ ಸುಳ್ಳು ಎಂದು ನಿರಾಕರಿಸಿ ವೀಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ನಟ್ಟಿಕುಮಾರ್ ಬರೀ ಸುಳ್ಳನ್ನೇ ಹೇಳುತ್ತಾರೆ. ಅವರು ಪ್ರಚಾರ ಪ್ರಿಯರು. ನಾನು ಅವರ ವಿರುದ್ಧ ಕಾನೂನುಕ್ರಮಕ್ಕೆ ಹೋರಾಡುತ್ತೇನೆ ಎಂದು ಅವರು ವೀಡಿಯೋದಲ್ಲಿ ಹೇಳಿದ್ದಾರೆ.