Tag: Nationalized Bank

  • ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಮುಚ್ಚುವುದೇ ಒಳ್ಳೆಯದು- ಕೇಂದ್ರದ ವಿರುದ್ಧ ರೇವಣ್ಣ ಕಿಡಿ

    ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಮುಚ್ಚುವುದೇ ಒಳ್ಳೆಯದು- ಕೇಂದ್ರದ ವಿರುದ್ಧ ರೇವಣ್ಣ ಕಿಡಿ

    ಹಾಸನ: ರಾಷ್ಟ್ರೀಕೃತ ಬ್ಯಾಂಕ್‍ಗಳು ರೈತರಿಗೆ ಹಣ ಕೊಡುತ್ತಿಲ್ಲ, ಹೀಗಾಗಿ ಅವುಗಳನ್ನು ಮುಚ್ಚುವುದು ಒಳ್ಳೆಯದು ಎಂದು ಮಾಜಿ ಸಚಿವ ಎಚ್‍ಡಿ ರೇವಣ್ಣ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ರೈತರಿಗೆ ಗೋಳು ಕೊಡುವ ಬ್ಯಾಂಕ್ ಎಂದರೆ ಅದು ರಾಷ್ಟ್ರೀಕೃತ ಬ್ಯಾಂಕ್‍ಗಳು. ಈ ರಾಷ್ಟ್ರೀಕೃತ ಬ್ಯಾಂಕ್‍ಗಳು ಬಡ ರೈತರಿಗೆ ಸಾಲ ಕೊಡುತ್ತಿಲ್ಲ. ರೈತರು ಒಂದು ಲಕ್ಷ ರೂ. ಸಾಲ ತೆಗೆದುಕೊಂಡರೇ ಒಂದು ವರ್ಷಕ್ಕೆ 5 ಲಕ್ಷ ರೂ. ಹಣ ಕಟ್ಟಿ ಎಂದು ಹೇಳುತ್ತಾರೆ. ಈ ಬ್ಯಾಂಕ್ ಗಳು ಉಳ್ಳವರಿಗೆ ಮಾತ್ರ ಉಪಯೋಗವಿದೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರು ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಮುಚ್ಚಲಿ ಎಂದು ಒತ್ತಾಯ ಮಾಡಿದರು.

    ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ರೈತರ ಮನೆ ಹಾಳಾಗುತ್ತಿದೆ. ಮೋದಿಯವರೇ ನೀವೇ ಹೇಳಿ ಈ ಬ್ಯಾಂಕ್‍ಗಳು ಯಾಕೆ ಇದೆ ಎಂದು. ಈ ಬ್ಯಾಂಕ್‍ಗಳಿಂದ ಉಳ್ಳವರೆಗೆ ಸಾಲ ಕೊಡುತ್ತೇವೆ ಎಂದು ಒಂದು ಆದೇಶ ಹೊರಡಿಸಿ ಎಂದು ಕೇಂದ್ರ ಸರ್ಕಾರದ ವಿರುದ್ಧ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

    ಕೊರೊನಾದಿಂದ 4,200 ಟನ್ ಹಾಲಿನ ಪೌಡರ್ ಮಾರಾಟವಾಗದೇ ಡೈರಿಯಲ್ಲೇ ಉಳಿದಿದೆ. ಕೊರೊನಾ ಸಮಯದಲ್ಲಿ ವಿವಿಧ ಬೆಳೆಗಳಲ್ಲಿ ನಷ್ಟ ಅನುಭವಿಸಿದ್ದು ಹಾಗೂ ಕೆ.ಎಂ.ಎಫ್. ಮೂಲಕವೇ ಜೋಳ ಖರೀದಿ ಮಾಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ರೈತರ ನೆರವಿಗೆ ಸರ್ಕಾರ ಬರಬೇಕು. ಲಾಕ್‍ಡೌನ್ ಮಾಡಿದ ಹಿನ್ನೆಲೆಯಲ್ಲಿ ಹಣ್ಣು, ಹೂವು, ತರಕಾರಿ ಬೆಳೆಗಳು ಸೇರಿ ಅಂದಾಜು 104 ಕೋಟಿ ರೂ.ಗಳ ನಷ್ಟವಾಗಿದೆ. ಜೊತೆಗೆ ಮಳೆ ಹಾನಿಗೂ ಇದುವರೆಗೂ ಯಾವ ಪರಿಹಾರವನ್ನು ಸರ್ಕಾರ ನೀಡಿಲ್ಲ. ತೋಟಗಾರಿಕ ಬೆಳೆಗಳಲ್ಲಿ ಸಮೀಕ್ಷೆ ಪ್ರಕಾರ ಆಗಸ್ಟ್ ತಿಂಗಳ ಒಳಗೆ 19,23,37,000 ರೂ ನಷ್ಟವಾಗಿದೆ. ಕಾಫಿ ಬೆಳೆಯಲ್ಲಿ 18,10,57,000 ರೂ. ನಷ್ಟ ಸಂಭವಿಸಿದೆ ಎಂದು ವಿವರಿಸಿದರು.

    ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು, ಮಳೆ ಹಾನಿ ಸೇರಿದಂತೆ ಇತರೆ ಪ್ರಕೃತಿ ವಿಕೋಪದ ಕಾರಣ ಕಾಫಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಪರಿಹಾರ ಒದಗಿಸಲಿ. ಜಿಲ್ಲೆಯ ಹೂವಿನ ಬೆಳೆಗಾರರಿಗೆ ಇದುವರೆಗೆ 7 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ. ಅಲ್ಲದೆ ಬ್ಯಾಂಕ್ ಖಾತೆಯೂ ಸರಿ ಇಲ್ಲ ಎಂಬ ಕಾರಣಕ್ಕೆ ಹಲವರಿಗೆ ಪರಿಹಾರ ತಲುಪಿಲ್ಲ ಎಂದರು.

    ಜಿಲ್ಲೆಯಲ್ಲಿ ಈ ಬಾರಿ ಸುಮಾರು 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯುವ ನಿರೀಕ್ಷೆ ಇತ್ತು. ಆದರೆ 95 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದಾರೆ. 6 ಲಕ್ಷ ಮೆಟ್ರಿಕ್ ಟನ್ ಮೆಕ್ಕೆ ಜೋಳದ ಇಳುವರಿ ಬರುವ ನಿರೀಕ್ಷೆ ಇದ್ದು, ಇವರಿಗೆ ಬೆಂಬಲ ಬೆಲೆ ನೀಡಬೇಕು. ಒಟ್ಟು 6 ಲಕ್ಷ ಟನ್ ಜೋಳವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.

    ಜೋಳ ಖರೀದಿಯಲ್ಲಿ ರೈತರನ್ನು ದಲ್ಲಾಳಿಗಳು ಶೋಷಣೆ ಮಾಡುತ್ತಿದ್ದು, ಜೋಳಕ್ಕೆ 1,700 ರೂ. ಇದ್ದರೇ ದಲ್ಲಾಳಿಗಳು 1,200 ರೂ.ಗೆ ಖರೀದಿ ಮಾಡಿ 1,700 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಕೆ.ಎಂ.ಎಫ್‍ಗೆ ರೈತರು ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲು ಮುಖ್ಯಮಂತ್ರಿಗಳು ಗಮನ ಕೊಡಬೇಕು ಎಂದು ಸಲಹೆ ನೀಡಿದರು.

  • ಮತ್ತೆ ಹಂಗಿನ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ

    ಮತ್ತೆ ಹಂಗಿನ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ

    -ನೀಡಿದ ಭರವಸೆ ಈಡೇರಿಸಲು ಆಗಲಿಲ್ಲಾ ಅಂತಾ ಕಣ್ಣೀರು ಹಾಕಿದ್ದೇನೆ

    ಬೆಂಗಳೂರು: ಯಾವುದೋ ಹಂಗಿನಲ್ಲಿ ನಾನು ಕೆಲಸ ಮಾಡ್ತಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಹಂಗಿನ ಬಗ್ಗೆ ಮಾತನಾಡಿದ್ದಾರೆ.

    ರೈತರ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ರೈತರ ಸಾಲವನ್ನು 24 ಗಂಟೆಯಲ್ಲಿ ಮನ್ನಾ ಮಾಡಲು ಪ್ರಯತ್ನಿಸುತ್ತಿರುವೆ. ನೀಡಿದ ಭರವಸೆಯನ್ನು ಈಡೇರಿಸಲು ಆಗಲಿಲ್ಲಾ ಅಂತಾ ಕೆಲವೊಮ್ಮೆ ಕಣ್ಣೀರು ಹಾಕಿದ್ದೇನೆ. ಸಾಲಮನ್ನಾ ಮಾಡುವುದು ನಿಶ್ಚಿತ. ಹಾಗಂತ ಸರ್ಕಾರದ ಆಸ್ತಿಯನ್ನು ಮಾರಿ ಸಾಲಮನ್ನಾ ಮಾಡುವುದಿಲ್ಲ ಎಂದು ಹೇಳಿದರು.

    ಸಾಲಮನ್ನಾ ನಿಮಿತ್ತ ಐಎಎಸ್ ಅಧಿಕಾರಿ ನೇಮಕ ಮಾಡಿದ್ದು, ಅವರೊಂದಿಗೆ ನಾನು ಕೆಲಸ ಮಾಡುತ್ತಿರುವೆ. ರಾಷ್ಟ್ರೀಯ ಬ್ಯಾಂಕ್‍ಗಳ ಜೊತೆ 10 ಬಾರಿ ಸಭೆ ಮಾಡಲಾಗಿದೆ. ಪರಿಣಾಮ ಬ್ಯಾಂಕ್‍ನವರು ಬಾಂಡ್ ವಿಚಾರವಾಗಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಅಂತ ತಿಳಿಸಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ನಿರ್ಧಾರ ಹೇಳಿಲ್ಲ ಎಂದು ರಾಷ್ಟ್ರೀಕೃತ ಬ್ಯಾಂಕ್‍ಗಳ ವಿರುದ್ಧ ಸಿಎಂ ಗರಂ ಆದರು.

    ನಾನು ಯಾವುದೇ ಪತ್ರ, ಪುಸ್ತಕ ನೋಡಿ ಸಾಲಮನ್ನಾ ವಿಚಾರ ಹೇಳುವ ಅಗತ್ಯವಿಲ್ಲ. ಏಕೆಂದರೆ ಎಲ್ಲ ವಿಚಾರವೂ ನನ್ನ ತಲೆಯಲ್ಲಿ ಉಳಿದುಬಿಟ್ಟಿದೆ. ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ 21 ಲಕ್ಷ ರೈತರು ಸಾಲ ಪಡೆದಿದ್ದಾರೆ. ಅವರಲ್ಲಿ 2.80 ಲಕ್ಷ ರೈತರು ವಸೂಲಾಗದ ಸಾಲದ ಪ್ರಮಾಣ (ಎನ್‍ಪಿಎ) ಅಕೌಂಟ್ ಗಳಿವೆ. ಇಂತಹ ಖಾತೆಗಳಿಗೆ ಒಂದು ಬಾರಿ ಹಣ ಪಾವತಿಸಿದರೆ ನಮಗೆ ರಿಲ್ಯಾಕ್ಸ್ ಕೊಡುತ್ತೀರಾ ಅಂತ ಕೇಳಿದ್ದೇನೆ. 17 ಲಕ್ಷ ರೈತರ ಸಾಲದಲ್ಲಿ 50 ಸಾವಿರ ಮೊತ್ತದ ಸಾಲಕ್ಕೆ 6,500 ಕೋಟಿ ರೂ. ಹಣ ಮೀಸಲಿಟ್ಟಿದ್ದೇವೆ. ಉಳಿದಂತೆ ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿರುವ 2 ಲಕ್ಷ ರೂ.ವರೆಗಿನ ರೈತರ ಸಾಲವನ್ನು ಮನ್ನಾ ಮಾಡುತ್ತೇವೆ ಎಂದರು.

    ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ:
    ಸಾಲಮನ್ನಾ ಯೋಜನೆ ದೊಡ್ಡ ಕೆಲಸವಾಗಿದೆ. ಯಾವುದೇ ಮಧ್ಯವರ್ತಿಗಳು ಭ್ರಷ್ಟಾಚಾರ ಎಸಗದಂತೆ ಎಚ್ಚರಿಕೆಯಿಂದ ಹಂತ ಹಂತವಾಗಿ ಯೋಜನೆ ಜಾರಿಗೆ ತರಲಾಗುತ್ತಿದೆ. ಒಂದು ವೇಳೆ ಇದರಲ್ಲಿ ಭ್ರಷ್ಟಾಚಾರ ನಡೆದರೆ ನಾನು ಕೋರ್ಟ್ ಮುಂದೆ ಹಾಜರಾಗಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ರೈತರಿಗೆ ಅನ್ಯಾಯ ಆಗಬಾರದು. ಸಾಲಮನ್ನಾ ಹಣ ರೈತರಿಗೆ ಹೋಗಬೇಕು ಅಂತ ಕೆಲಸ ಮಾಡುತ್ತಿದ್ದೇವೆ. ವೈಜ್ಞಾನಿಕವಾಗಿ ಕೆಲಸ ನಡೆದಿದ್ದು, ಅಧಿಕಾರಿಗಳಿಗೆ ಯಾವುದೇ ಹಂತದಲ್ಲಿಯೂ ಹಣ ಹೊಡೆಯಲು ಅವಕಾಶ ನೀಡಲ್ಲ ಎಂದರು.

    ಹಿಂದಿನ ಸರ್ಕಾರವು 15 ವರ್ಷಕ್ಕೆ ಆಗುವಷ್ಟು ಕೆಲಸಕ್ಕೆ ಆದೇಶ ಮಾಡಿದೆ. ಅದರ ಹಣ ಹೊಂದಿಸುವುದೇ ನಮಗೆ ಕಷ್ಟವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದ ಸಹಕಾರ ಸಂಘಗಳ ಸಾಲಮನ್ನಾ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.

    ನಾನು ನಿಮ್ಮ ಪರ, ಹೋರಾಟ ಬೇಡ:
    ಕಬ್ಬು ಬೆಳೆಗಾರರ ಸಮಸ್ಯೆ ವಿಚಾರವಾಗಿ ಮಾತನಾಡಿದ ಸಿಎಂ, ರೈತರ ಜೊತೆ ಸುದೀರ್ಘವಾಗಿ ಸಭೆ ಮಾಡಿದ್ದೇನೆ. ನಾನು ಸಿಎಂ ಆಗುವ ಮುನ್ನ ಸಕ್ಕರೆ ಕಾರ್ಖಾನೆ ಮಾಲೀಕರು 2,000 ಕೋಟಿ ರೂ. ಎಫ್‍ಆರ್ ಪಿ ದರ ನೀಡರಲಿಲ್ಲ. ನಾನು ಅಧಿಕಾರಕ್ಕೆ ಬಂದ ಮೇಲೆ ಮಾಲೀಕರ ಸಭೆ ನಡೆಸಿ ಹಣ ಕೊಡಿಸಲು ಕ್ರಮ ತೆಗೆದುಕೊಂಡಿದ್ದೇನೆ. ಇದರಿಂದಾಗಿ ಈಗ 35 ಕೋಟಿ ರೂ. ಮಾತ್ರ ಬಾಕಿ ಇದೆ ಎಂದು ತಿಳಿಸಿದರು.

    ರೈತರು ಕಬ್ಬು ನೀಡುವಾಗ ಸಕ್ಕರೆ ಮಾಲೀಕರ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ. ಸಕ್ಕರೆ ಬೆಲೆ ಕಡಿಮೆ ಆಗಿದ್ದಕ್ಕೆ ಕಡಿಮೆ ಹಣ ಕೊಡುತ್ತೇವೆ ಅಂತ ಮಾಲೀಕರು ಪಟ್ಟು ಹಿಡಿದರು. ಬಳಿಕ ಖರೀದಿ ಮಾಡಿರುವ ಹಣವನ್ನೇ ನೀಡಬೇಕು ಎಂದು ಕೋರ್ಟ್ ಆದೇಶ ನೀಡಿತು. ಅದನ್ನು ಮಾಲೀಕರು ಉಲ್ಲಂಘನೆ ಮಾಡಿದ್ದರೆ ನನಗೆ ಮಾಹಿತಿ ನೀಡಿ, ನಾನು ಕ್ರಮ ಕೈಗೊಳ್ಳುತ್ತೇನೆ ಎಂದು ರೈತರಿಗೆ ಅಭಯ ನೀಡಿರುವೆ ಎಂದರು.

    ನಾನು ಇನ್ನೊಂದು ಸಭೆ ಮಾಡುತ್ತೇನೆ. ನಾನು ನೀವು ರಾಜ್ಯ ಬಿಟ್ಟು ಹೋಗಲ್ಲ. ರೈತರು ಸುಮ್ಮನೆ ಹೋರಾಟ ಮಾಡುವುದು ಬೇಡ. ಯಾವುದೇ ಸಮಸ್ಯೆ ಇದ್ದರೂ ನಾನು ಇರುವವರೆಗೂ ನಿಮ್ಮ ಪರವಾಗಿ ಕೆಲಸ ಮಾಡುತ್ತೇನೆ. ಪ್ರತಿಭಟನೆ ಮಾಡಬೇಡಿ ಎಂದು ಸಿಎಂ ರೈತರಿಗೆ ಮನವಿ ಮಾಡಿಕೊಂಡರು.

    ಉತ್ತರ ಕರ್ನಾಟಕ ಬಹುತೇಕ ರಾಜಕಾರಣಿಗಳೇ ಸಕ್ಕರೆ ಕಾರ್ಖಾನೆಯ ಮಾಲೀಕರಾಗಿದ್ದಾರೆ. ಇದೇ ದೊಡ್ಡ ಸಮಸ್ಯೆ ಆಗಿರುವುದು. ರೈತರ ಅಮಾಯಕತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾವು ಪ್ರಶ್ನೆ ಮಾಡಿದರೆ, ಏಕೆ ತಲೆ ಕೆಡಿಸಿಕೊಳ್ಳುತ್ತಿರಾ ನಮಗೆ ಪ್ರಶ್ನೆ ಮಾಡುತ್ತಾರೆ. ಎಫ್‍ಆರ್‍ಪಿ ದರ ಕೊಡಬೇಕು ಅಂತ ಮಾಲೀಕರಿಗೆ ಸೂಚನೆ ನೀಡಿದ್ದೇವೆ. ತೂಕದಲ್ಲಿ ಮೋಸ ವಿಚಾರದಲ್ಲಿ ಸರ್ಕಾರ ಕ್ರಮವಹಿಸಲಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾರ್ಯಕರ್ತರನ್ನು ಹುರಿದುಂಬಿಸಲು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ: ಡಿಕೆಶಿ

    ಕಾರ್ಯಕರ್ತರನ್ನು ಹುರಿದುಂಬಿಸಲು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ: ಡಿಕೆಶಿ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕರ್ತರನ್ನು ಹುರಿದುಂಬಿಸುವ ದೃಷ್ಟಿಯಿಂದ ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆಂಬ ಹೇಳಿಕೆ ನೀಡಿದ್ದಾರೆಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಸದಾಶಿವನಗರದ ನಿವಾಸ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವು 5 ವರ್ಷಗಳ ಕಾಲ ಸುಭದ್ರವಾಗಿರುತ್ತದೆ. ಯಾರ ಕಾಲನ್ನು ಎಳೆಯುವ ಅವಶ್ಯಕತೆ ನಮಗಿಲ್ಲ. ಸಿದ್ದರಾಮಯ್ಯನವರು ಮೇಧಾವಿ ನಾಯಕರಾಗಿದ್ದಾರೆ. ಅವರು ಸರ್ಕಾರ ಬೀಳಿಸುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಅವರು ಕಾರ್ಯಕರ್ತರನ್ನು ಹುರಿದುಂಬಿಸುವ ದೃಷ್ಟಿಯಿಂದ ಆ ರೀತಿ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.

    ಅಲ್ಲದೇ ರಾಜಕಾರಣಿಗಳಿಗೆ ಆಸೆ, ಕನಸುಗಳು ಇರಬೇಕಾಗುತ್ತದೆ ಅದು ಸಹಜ, ಆದರೆ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದಾರೆ. ನಾವು ಸಹ ಸಿದ್ದರಾಮಯ್ಯನವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ನೋಡಬೇಕೆಂದು ಅಂದುಕೊಂಡೇ ಚುನಾವಣೆಯಲ್ಲಿ ಕೆಲಸ ಮಾಡಿದ್ದೇವು. ಆದರೆ ಜನರ ತೀರ್ಪಿಗೆ ತಲೆಬಾಗಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ನಾನು ಮತ್ತೆ ಮುಖ್ಯಮಂತ್ರಿ ಆಗ್ತೀನಿ-ಸಿದ್ದರಾಮಯ್ಯ

    ಲೇವಾದೇವಿ ಬಗ್ಗೆ ಸುಗ್ರೀವಾಜ್ಞೆ ಕುರಿತು ಪ್ರತಿಕ್ರಿಯಿಸಿ, ಖಾಸಗಿ ಲೇವಾದೇವಿ ವ್ಯವಹಾರಗಳಲ್ಲಿ ನಾವು ಬಹಳ ಜನ ರೈತರನ್ನು ರಕ್ಷಣೆ ಮಾಡಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಮೈತ್ರಿ ಸರ್ಕಾರ ಈ ನಿರ್ಧಾರಕ್ಕೆ ಕೈ ಹಾಕಿದೆ. ಲೇವಾದೇವಿ ಸುಗ್ರೀವಾಜ್ಞೆ ಕುರಿತು ಚರ್ಚೆಯ ಬಳಿಕವೇ ನಿರ್ಧಾರ ಕೈಗೊಂಡಿದ್ದೇವೆ. ಇದಕ್ಕೆ ಸರ್ಕಾರ ಹಾಗೂ ಸಚಿವರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಂಪೂರ್ಣ ತೀರ್ಮಾನದ ನಂತರ ಕೇಂದ್ರ ಸರ್ಕಾರಕ್ಕೆ ಸದನದ ನಿರ್ಧಾರವನ್ನು ಕಳುಹಿಸಿಕೊಟ್ಟಿದ್ದೇವೆ ಎಂದರು.  ಇದನ್ನೂ ಓದಿ: ರೈತರ ಖಾಸಗಿ ಸಾಲವೂ ಮನ್ನಾ- ಯಾರದ್ದು ಆಗುತ್ತೆ? ಯಾರದ್ದು ಆಗಲ್ಲ?

    ರಾಷ್ಟ್ರೀಕೃತ ಬ್ಯಾಂಕುಗಳು ದೊಡ್ಡ ದೊಡ್ಡ ಉದ್ಯಮಿಗಳು ಹಾಗೂ ವ್ಯಾಪಾರಿಗಳ ಸಾಲವನ್ನು ಒಂದೇ ದಿನದಲ್ಲಿ ಮನ್ನಾ ಮಾಡುತ್ತಾರೆ. ಆದರೆ ರೈತರ ಸಾಲವನ್ನು ಮನ್ನಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಸಾಲವನ್ನು ಕೂಡಲೇ ಏಕಮುಖದಲ್ಲಿ ಮನ್ನಾ ಮಾಡಿ, ಆ ಹಣವನ್ನು ನಾಲ್ಕು ವರ್ಷಗಳಲ್ಲಿ ನಮ್ಮ ಸರ್ಕಾರ ತೀರಿಸುತ್ತದೆ ಎಂದು ಹೇಳಿದರು.

    ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ, ಅವರು ಪ್ರವಾಸ ಕೈಗೊಳ್ಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ. ಈಗಾಗಲೇ ಅವರುಗಳು ನೆರೆ ಪೀಡಿತ ಭಾಗಗಳಲ್ಲಿ ಪರೀಕ್ಷಿಸಿ ಏನೆಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿತ್ತೋ ಅದನ್ನೇಲ್ಲಾ ಮಾಡಿದ್ದಾರೆ. ಅವರು ಹೋಗುತ್ತಿರುವುದು ಅಕ್ಕ ಸಮ್ಮೇಳನಕ್ಕೆ, ನನಗೂ ಸಹ ಆಹ್ವಾನ ಬಂದಿತ್ತು, ಆದರೆ ಕಾರಣಾಂತರಗಳಿಂದ ತೆರಳಲು ಸಾಧ್ಯವಾಗಿಲ್ಲ. ಈ ಮೊದಲು ಎಷ್ಟೋ ಸಿಎಂಗಳು ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಂಡಿಲ್ಲವೇ ಎಂದು ಪ್ರಶ್ನಿಸಿದರು.

    ಈ ವೇಳೆ ಕೊಡಗು ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‍ರವರನ್ನು ಕೊಂಡಾಡಿದ ಅವರು, ಸಚಿವರು ತುಂಬಾ ಅದ್ಭುತ ರೀತಿಯಲ್ಲಿ ಪರಿಸ್ಥಿತಿಯನ್ನು ನಿರ್ವಹಣೆ ಮಾಡಿದ್ದಾರೆ, ಅಲ್ಲೇ ಉಳಿದು ಗಟ್ಟಿಯಾಗಿ ನಿಂತು ಕೆಲಸ ಕಾರ್ಯಗಳನ್ನು ನೋಡಿಕೊಂಡಿದ್ದಾರೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈತ್ರಿ ಸರ್ಕಾರದ ಸಂಪುಟ ಸಭೆ- ವರಮಹಾಲಕ್ಷ್ಮಿ ಹಬ್ಬಕ್ಕೆ ಸರ್ಕಾರ ಕೊಡುತ್ತಾ ಸಿಹಿ ಸುದ್ದಿ?

    ಮೈತ್ರಿ ಸರ್ಕಾರದ ಸಂಪುಟ ಸಭೆ- ವರಮಹಾಲಕ್ಷ್ಮಿ ಹಬ್ಬಕ್ಕೆ ಸರ್ಕಾರ ಕೊಡುತ್ತಾ ಸಿಹಿ ಸುದ್ದಿ?

    ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಂಪುಟ ಸಭೆ ಇಂದು ನಡೆಯಲಿದ್ದು, ಸಭೆಯಲ್ಲಿ ಹಲವು ಪ್ರಮುಖ ವಿಷಯಗಳು ಚರ್ಚೆ ಬರುವ ಸಾಧ್ಯತೆಗಳಿವೆ. ಅಲ್ಲದೇ ರಾಜ್ಯದ ರೈತರಿಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡಲಿದೆ ಎನ್ನಲಾಗಿದೆ.

    ಈಗಾಗಲೇ ಸಹಕಾರ ಬ್ಯಾಂಕ್‍ಗಳಲ್ಲಿನ ರೈತರ ಸಾಲಮನ್ನಾ ಮಾಡಿರುವ ಸರ್ಕಾರ, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಸಾಲವನ್ನೂ ಮನ್ನಾ ಮಾಡುವುದಾಗಿ ಘೋಷಿಸಿತ್ತು. ಇಂದು ಸಂಜೆ 4 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲಮನ್ನಾಕ್ಕೆ ಸಮ್ಮತಿ ಸಿಗಲಿದೆ ಎನ್ನಲಾಗಿದೆ. ಇದರ ಜೊತೆಗೆ, ಕೊಡಗಿನ ನೆರೆ ಸಂತ್ರಸ್ತರಿಗೆ ಪರಿಹಾರ, ಪುನರ್ ನಿರ್ಮಾಣದ ಅನುದಾನದ ಬಗ್ಗೆಯೂ ಘೋಷಣೆಯಾಗುವ ಸಾಧ್ಯತೆ ಇದೆ.

    ಇತ್ತ ಕೇರಳ ರಾಜ್ಯ ಸರ್ಕಾರ ಪ್ರವಾಹದಲ್ಲಿ ಸಿಲುಕಿರುವ ಅಲ್ಲಿನ ಸಂತ್ರಸ್ತರ ಸಹಾಯಕ್ಕೆ ಬಂದಿದ್ದು, ಸಿಎಂ ಪಿಣರಾಯಿ ವಿಜಯನ್ ಪ್ರವಾಹ ಸಂತ್ರಸ್ತರಿಗೆ 1 ಲಕ್ಷ ರೂ. ವರೆಗೂ ಬಡ್ಡಿ ರಹಿತ ಸಾಲ ಘೋಷಣೆ ಮಾಡಿದ್ದಾರೆ. ಕುಟುಂಬದ ಒಬ್ಬರಿಗೆ 1 ಲಕ್ಷ ರೂ. ಇದು ಅನ್ವಯವಾಗಲಿದ್ದು, ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಅನುಕೂಲವಾಗಲಿದೆ. ಇದರೊಂದಿಗೆ ಸದ್ಯ ರಾಜ್ಯ ಸರ್ಕಾರದ ಮೇಲೂ ನಿರೀಕ್ಷೆ ಹೆಚ್ಚಾಗಿದ್ದು, ಕೊಡಗಿನ ಪ್ರವಾಹ ಸಂತ್ರಸ್ತರಿಗೂ ಬಡ್ಡಿ ರಹಿತ ಘೋಷಣೆ ಮಾಡಿ ಸರ್ಕಾರ ನೆರವು ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv