Tag: nationalised bank

  • 2009ರ ನಂತರದ ಬೆಳೆ ಸಾಲ ಮಾತ್ರ ಮನ್ನಾ- ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

    2009ರ ನಂತರದ ಬೆಳೆ ಸಾಲ ಮಾತ್ರ ಮನ್ನಾ- ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

    ಬೆಂಗಳೂರು: 2009ಕ್ಕಿಂತ ಹಿಂದಿನ ವರ್ಷಗಳಲ್ಲಿ ರೈತರು ಬ್ಯಾಂಕಿನಲ್ಲಿ ಪಡೆದ ಬೆಳೆ ಸಾಲಮನ್ನಾ ಮಾಡುವುದು ಕಷ್ಟ. ಹೀಗಾಗಿ ಅಂತಹ ಸಾಲಕ್ಕೆ ಸರ್ಕಾರ ಯಾವುದೇ ಜವಾಬ್ದಾರಿಯಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸಿಎಂ, ಮಂಡ್ಯ ಜಿಲ್ಲೆಯ ರೈತ ಜವರೇಗೌಡ ಅವರು 2007ರಲ್ಲಿಯೇ ಬೆಳೆ ಸಾಲ ಪಡೆದಿದ್ದಾರೆ. ಇದರಿಂದಾಗಿ ಬ್ಯಾಂಕ್ ನ್ಯಾಯಾಲಯದ ಮೆಟ್ಟಿಲೇರಿದ್ದು, ಮ್ಯಾಜಿಸ್ಟ್ರೇಟ್ ಕೋರ್ಟ್ ಅವರಿಗೆ ನೋಟಿಸ್ ನೀಡಿದೆ. ಈ ಹಿಂದೆಯೂ ಅವರಿಗೆ ಕೋರ್ಟ್ ನಿಂದ ನೋಟಿಸ್ ಬಂದಿದ್ದರೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಯಾವ ಸಾಲಮನ್ನಾ?
    2009ರಿಂದ ಇಚೇಗಿನ ಬೆಳೆಸಾಲ ಮಾತ್ರ ಮನ್ನಾ ಆಗುತ್ತದೆ. ಹೊರತಾಗಿ ಟ್ರ್ಯಾಕ್ಟರ್, ದನದ ಕೊಟ್ಟಿಗೆ ನಿರ್ಮಾಣ ಸೇರಿದಂತೆ ಕೃಷಿ ಸಂಬಂಧಿ ಸಾಲಗಳು ಮನ್ನಾ ಆಗುವುದಿಲ್ಲ. ಇದರ ಅನ್ವಯ ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ 2 ಲಕ್ಷ ಸುಸ್ತಿ ಬೆಳೆ ಸಾಲಮನ್ನಾ ಹಾಗೂ ಚಾಲ್ತಿ ಸಾಲವಿರುವ ರೈತರ ಖಾತೆಗೆ 25 ಸಾವಿರ ರೂ. ಜಮೆ ಮಾಡಲಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.

    ರೈತರ ಜಾಗೃತಿಗೆ ಕ್ರಮ:
    ಸಾಲಮನ್ನಾ ಕುರಿತು ರೈತರಲ್ಲಿ ಅನೇಕ ಗೊಂದಲಗಳಿವೆ. ಈ ಕುರಿತು ನಾನೊಬ್ಬನೇ ಮಾತನಾಡುತ್ತೇನೆ. ಏಕೆಂದರೆ ನಾನಷ್ಟೇ ಜವಾಬ್ದಾರಿ ಹೊತ್ತಿರುವೆ. ಎಲ್ಲ ಸರ್ಕಾರದ ಹಣೆ ಬರವೇ ಇಷ್ಟು ಅಂತಾ ಬೇಸರದಿಂದ ಮಾತು ಆರಂಭಿಸಿದ ಸಿಎಂ, ರೈತರಲ್ಲಿ ಜಾಗೃತಿ ಮೂಡಿಸಲು ಎರಡು ತಂಡಗಳನ್ನು ರಚಿಸಲಾಗಿದೆ. ಜೊತೆಗೆ ನಾಡ ಕಚೇರಿಯಲ್ಲಿ ಅರ್ಜಿಗಳನ್ನು ಪ್ರಾರಂಭಿಸಲಾಗುತ್ತದೆ. ಈ ಮೂಲಕ ರೈತರು ಯಾವ ರೀತಿಯ ಸಾಲ? ಯಾವ ವರ್ಷ? ಎಷ್ಟು ಹಣ ಪಡೆದಿದ್ದಾರೆ? ಎಂದು ಮಾಹಿತಿ ಪಡೆಯಲಾಗುತ್ತದೆ. ಬಳಿಕ ಅವರು ನೀಡಿದ ವಿವರಣೆ ನಮ್ಮ ಸರ್ಕಾರದ ಸಾಲಮನ್ನಾಕ್ಕೆ ಅನ್ವಯವಾಗುತ್ತದೆ ಇಲ್ಲವೋ ಅಂತಾ ನೋಡಿ, ಜಾಗೃತಿ ಮೂಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಸಾಲಮನ್ನಾ ನಿರ್ಧಾರದಿಂದ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲಪಡೆದ ಒಟ್ಟು 22 ಲಕ್ಷ ರೈತರಿಗೆ ಅನುಕೂಲವಾಗುತ್ತದೆ. ಸಾಲಮನ್ನಾ ಫಲಾನುಭವಿ ರೈತರಿಗೆ ನಾನು ಪತ್ರ ಬರೆಯುವ ನಿರ್ಧಾರಕ್ಕೆ ಮುಂದಾಗಿದ್ದೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರಮಹಾಲಕ್ಷ್ಮಿ ಹಬ್ಬಕ್ಕೆ ಸಮ್ಮಿಶ್ರ ಸರ್ಕಾರದಿಂದ ರೈತರಿಗೆ ಸಾಲಮನ್ನಾ ಗಿಫ್ಟ್!

    ವರಮಹಾಲಕ್ಷ್ಮಿ ಹಬ್ಬಕ್ಕೆ ಸಮ್ಮಿಶ್ರ ಸರ್ಕಾರದಿಂದ ರೈತರಿಗೆ ಸಾಲಮನ್ನಾ ಗಿಫ್ಟ್!

    ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ದಿನದಂದು ಸಮ್ಮಿಶ್ರ ಸರ್ಕಾರವು ರೈತರಿಗೆ ಸಿಹಿ ಸುದ್ದಿ ನೀಡಿದ್ದು, ರಾಷ್ಟ್ರೀಕೃತ ಬ್ಯಾಂಕುಗಳ ರೈತರ 2 ಲಕ್ಷ ರೂ. ಸಾಲಮನ್ನಾಕ್ಕೆ ಕ್ಯಾಬಿನೆಟ್ ಸಮ್ಮತಿಸಿದೆ.

    ಶುಕ್ರವಾರ ಕ್ಯಾಬಿನೆಟ್ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಬಜೆಟ್‍ನಲ್ಲಿ ಘೋಷಿಸಿದಂತೆ ರಾಷ್ಟ್ರೀಕೃತ ಬ್ಯಾಂಕುಗಳ 2 ಲಕ್ಷ ರೂ.ವರೆಗಿನ ರೈತರ ಸಾಲ ಹಾಗೂ ಈಗಾಗಲೇ ಸಾಲ ಪಾವತಿ ಮಾಡಿರುವ ರೈತರಿಗೆ 25 ಸಾವಿರ ರೂ. ನೀಡಲು ಸರ್ಕಾರ ನಿರ್ಧರಿಸಿದೆ. ಈ ಸಾಲಮನ್ನಾದ ಸಂಪೂರ್ಣ ಜವಾಬ್ದಾರಿ ನಿರ್ವಾಹಣೆಗೆ ಇಬ್ಬರು ಐಎಎಸ್ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

    ಸಾಲಮನ್ನಾದಿಂದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರ್ಕಾರವು ಒಟ್ಟು 30,163 ಕೋಟಿ ರೂ. ಪಾವತಿಸಬೇಕಾಗಿದೆ. ಆದರೆ ಒಂದೇ ಬಾರಿ ಸಾಲ ಮನ್ನಾಕ್ಕೆ ಬ್ಯಾಂಕುಗಳು ಒಪ್ಪುತ್ತಿಲ್ಲ. ಹೀಗಾಗಿ ಬಡ್ಡಿ ಸೇರಿಸಿ ಆಗುವ ಒಟ್ಟು ಮೊತ್ತವನ್ನು 4 ಕಂತುಗಳಲ್ಲಿ ಕಟ್ಟಲು ನಿರ್ಧರಿಸಲಾಗಿದೆ. ಇದರಿಂದಾಗಿ 2018-19ರಲ್ಲಿ 6,500 ಕೋಟಿ ರೂ., 2019-20ರಲ್ಲಿ 6,656 ಕೋಟಿ ರೂ., 2020-21ರಲ್ಲಿ 7,876 ಕೋಟಿ ರೂ. ಹಾಗೂ 2021-22ರಂದು 7,131 ಕೋಟಿ ರೂ, ಪಾವತಿಸಬೇಕಾಗುತ್ತದೆ ಎಂದು ವಿವರಿಸಿದರು.

    ಈ ನಿರ್ಧಾರದಿಂದ ರಾಷ್ಟ್ರೀಕೃತ ಬ್ಯಾಂಕುಗಳ 16,94,000 ಸುಸ್ತಿ ಹಾಗೂ 6,27,000 ಚಾಲ್ತಿ ಸೇರಿ ಒಟ್ಟು 22 ಲಕ್ಷ ರೈತರಿಗೆ ಸಹಾಯವಾಗಲಿದೆ. ಬ್ಯಾಂಕುಗಳಿಗೆ ಹಣ ಪಾವತಿಸಲು ನಾಲ್ಕು ಕಂತುಗಳವರೆಗೆ ಸರ್ಕಾರ ಕಾಯುವುದಿಲ್ಲ. ಅದಕ್ಕೂ ಮುನ್ನವೇ ಪಾವತಿಸುವ ಸಾಮರ್ಥ್ಯವು ಸರ್ಕಾರಕ್ಕೆ ಇದೆ ಎಂದರು.

    ಋಣಮುಕ್ತ ಕಾಯ್ದೆ ಜಾರಿ
    ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರು 1976ರಲ್ಲಿ ಋಣಮುಕ್ತ ಅಧಿನಿಯಮವನ್ನು ಜಾರಿಗೆ ತಂದಿದ್ದರು. ಈಗ ನಮ್ಮ ಸರ್ಕಾರವು ಈ ಕಾಯ್ದೆಯನ್ನು ಜಾರಿಗೆ ತರಲು ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಿದೆ. ಋಣಮುಕ್ತ ಕಾಯ್ದೆ ಜಾರಿ ಅನ್ವಯ ಖಾಸಗಿ ಲೇವಾದೇವಿದಾರರಿಂದ ಪಡೆದಿರುವ 1.25 ಲಕ್ಷದ ಒಳಗಿನ ಸಾಲವೂ ಮನ್ನಾ ಆಗಲಿದೆ. ಹೀಗಾಗಿ ಸುಗ್ರೀವಾಜ್ಞೆ ಹೊರಡಿಸಿ ರಾಷ್ಟ್ರಪತಿಗಳ ಸಹಿಗೆ ಕಳುಹಿಸಲು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಸಿಎಂ ವಿವರಿಸಿದರು. ಬಲವಂತವಾಗಿ ಸಾಲ ವಸೂಲಿ ಮಾಡಲು ಮುಂದಾದರೆ, ಅವರಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದರು.

    ಮುಖ್ಯಮಂತ್ರಿ ಪರಿಹಾರ ನಿಧಿಗೆ ಸೇರಿದ ಹಣ ಎಷ್ಟು?

    ಇದುವರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 25,16,89,808 (25.16 ಕೋಟಿ ರೂ.) ಡಿಡಿ ರೂಪದಲ್ಲಿ ಬಂದಿದೆ. ಇನ್ನು ಸರ್ಕಾರಿ ನೌಕರರ ವೇತನದಲ್ಲಿ ಒಂದು ದಿನ ಮೊತ್ತವನ್ನು ನೆರೆ ಸಂತ್ರಸ್ತರಿಗೆ ನೀಡಲು ನಿರ್ಧರಿದ್ದಾರೆ. ಇದರಿಂದ 102 ಕೋಟಿ ರೂ. ಪರಿಹಾರ ನಿಧಿಗೆ ಸೇರಿದೆ ಎಂದು ತಿಳಿಸಿದ ಕುಮಾರಸ್ವಾಮಿ, ಮಹಾಮಳೆಗೆ ಕೊಡಗಿನಲ್ಲಿ 3 ಸಾವಿರ ಕೋಟಿ ರೂ. ನಷ್ಟವಾಗಿದ್ದು, ತುರ್ತಾಗಿ 2 ಸಾವಿರ ಕೋಟಿ ರೂ. ನೆರವು ನೀಡುವಂತೆ ಪತ್ರದ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv