Tag: Namma Elections

  • ವಿಧಾನಸಭೆಗೆ ಭಾರೀ ಸಂಖ್ಯೆಯಲ್ಲಿ ಮಾರ್ಷಲ್‍ ಗಳ ನಿಯೋಜನೆ!

    ವಿಧಾನಸಭೆಗೆ ಭಾರೀ ಸಂಖ್ಯೆಯಲ್ಲಿ ಮಾರ್ಷಲ್‍ ಗಳ ನಿಯೋಜನೆ!

    ಬೆಂಗಳೂರು: ಇಂದು ಬಿಜೆಪಿ ಸರ್ಕಾರದ ಬಹುಮತ ಸಾಭೀತು ಹಿನ್ನೆಲೆಯಲ್ಲಿ ವಿಧಾನ ಸಭೆಗೆ ಹೆಚ್ಚಿನ ಮಾರ್ಷಲ್ ಗಳನ್ನು ಆಯೋಜನೆ ಮಾಡಲಾಗಿದೆ.

    ಮುಖ್ಯಮಂತ್ರಿ ಯಡಿಯೂರಪ್ಪ ಇಂದು ತಮ್ಮ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಈಗಾಗಲೇ ಎಲ್ಲಾ ಶಾಸಕರು ವಿಧಾನ ಸಭೆ ಆಗಮಿಸುತ್ತಿದ್ದಾರೆ. ಹೀಗಾಗಿ ಗದ್ದಲ ಮತ್ತು ಗಲಾಟೆ ನಡೆಯುವ ಹಿನ್ನೆಲೆಯಲ್ಲಿ ಭಾರೀ ಭದ್ರತೆಯನ್ನು ಆಯೋಜಿಸಲಾಗಿದೆ. ಇದನ್ನೂ ಓದಿ: ಮಾಜಿ ಪ್ರಧಾನಿಯವರ ಮನೆಯ ಸುತ್ತಮುತ್ತ ಬಿಗಿ ಭದ್ರತೆ!

    ಸಾಮಾನ್ಯವಾಗಿ 120 ಮಾರ್ಷಲ್ ಗಳು ಮಾತ್ರ ವಿಧಾನಸಭೆಗೆ ನಿಯೋಜಿಸಲಾಗುತ್ತದೆ. ಆದರೆ ಇಂದು ಮಾರ್ಷಲ್ ಗಳ ಸಂಖ್ಯೆ ಹೆಚ್ಚಳವಾಗಿದ್ದು, ಸುಮಾರು 200 ಮಾರ್ಷಲ್ ಗಳನ್ನು ಅಧಿಕವಾಗಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಮಂಗ್ಳೂರು, ಬೆಂಗ್ಳೂರಲ್ಲಿ 144 ಸೆಕ್ಷನ್ ಜಾರಿ

    ಇಂದು 30 ಮಹಿಳಾ ಮಾರ್ಷಲ್ ಸೇರಿದಂತೆ 200 ಮಂದಿ ಮಾರ್ಷಲ್ ನಿಯೋಜನೆ ಮಾಡಲಾಗಿದ್ದು, ಎಲ್ಲರೂ ವೈಟ್ ಅಂಡ್ ವೈಟ್ ನಲ್ಲಿ ಸಿದ್ಧವಾಗಿ ನಿಂತಿದ್ದಾರೆ. ಇವತ್ತಿನ ಕಲಾಪದಲ್ಲಿ ಮಾರ್ಷಲ್ ಗಳ ಪಾತ್ರ ಮಹತ್ವದ್ದಾಗಿದೆ.

  • ಬಹುಮತ ಸಾಬೀತಿಗೆ ಬಿಜೆಪಿಯಿಂದ ಕೊನೆ ಕ್ಷಣದ ಕಸರತ್ತು!

    ಬಹುಮತ ಸಾಬೀತಿಗೆ ಬಿಜೆಪಿಯಿಂದ ಕೊನೆ ಕ್ಷಣದ ಕಸರತ್ತು!

    ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಇಂದು ವಿಧಾನ ಸಭೆಯಲ್ಲಿ ವಿಶ್ವಾಸ ಮತಯಾಚನೆ ಮಾಡಲಿರುವ ಹಿನ್ನೆಲೆಯಲ್ಲಿ ಬಹುಮತ ಸಾಬೀತಿಗೆ ಬಿಜೆಪಿ ಕೊನೆ ಕ್ಷಣದ ಕಸರತ್ತು ಮಾಡುತ್ತಿದೆ.

    ಶಾಂಗ್ರಿಲಾ ಹೋಟೆಲ್‍ ನಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕ ಬಿಎಸ್‍ವೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿವಿ ಸದಾನಂದ ಗೌಡ, ಪ್ರಕಾಶ್ ಜಾವ್ಡೇಕರ್, ಜೆಪಿ ನಡ್ಡಾ, ಧಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಸಭೆಯ ಬಳಿಕ ಶಾಸಕರು ವಿಶ್ರಾಂತಿ ಪಡೆದು ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಬಿಜೆಪಿ ನಾಯಕರು ಬಹುಮತ ಸಾಬೀತುಪಡಿಸುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಯಾರು ಯಾವ ರೀತಿಯ ಕಾರ್ಯತಂತ್ರ ರೂಪಿಸಿದ್ದೇವೆ ಎನ್ನುವ ಬಗ್ಗೆ ಗುಟ್ಟು ಬಿಟ್ಟುಕೊಡದ ಹಿನ್ನೆಲೆಯಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

    ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ಯಡಿಯೂರಪ್ಪ ವಿಶ್ವಾಸಮತ ಯಾಚನೆ ಮಾಡಲಿದ್ದು, ಮೊದಲಿಗೆ ಚುನಾಯಿತ ಜನಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ. ಬಳಿಕ ಸಿಎಂ ಯಡಿಯೂರಪ್ಪ ಪ್ರಸ್ತಾವ ಮಂಡಿಸಿ ಸರ್ಕಾರವನ್ನು ಬೆಂಬಲಿಸುವಂತೆ ಮನವಿ ಮಾಡಲಿದ್ದಾರೆ.

  • ಬಿಎಸ್‍ವೈ ಸಿಎಂ ಸ್ಥಾನ ಉಳಿಸಲು ಅಭಿಮಾನಿಗಳಿಂದ ವಿಶೇಷ ಪೂಜೆ

    ಬಿಎಸ್‍ವೈ ಸಿಎಂ ಸ್ಥಾನ ಉಳಿಸಲು ಅಭಿಮಾನಿಗಳಿಂದ ವಿಶೇಷ ಪೂಜೆ

    ತುಮಕೂರು: ಮುಖ್ಯಮಂತ್ರಿ ಯಡಿಯೂರಪ್ಪ ಸಿಎಂ ಆಗಿ ಉಳಿಯುತ್ತಾರಾ, ಇಲ್ಲವಾ ಎನ್ನುವುದು ಇಂದು ನಿರ್ಧಾರವಾಗಲಿದೆ. ಆದರೆ ಯಡಿಯೂರಪ್ಪರ ಸಿಎಂ ಸ್ಥಾನ ಉಳಿಸಲು ಅಭಿಮಾನಿಗಳು ವಿಶೇಷ ಪೂಜೆ ಮಾಡುತ್ತಿದ್ದಾರೆ.

    ಯಡಿಯೂರಪ್ಪ ಅವರ ಮುಖ್ಯಮಂತ್ರಿ ಸ್ಥಾನ ಉಳಿಸಲು ಅಭಿಮಾನಿಗಳು ಪೂಜೆ – ಪುನಸ್ಕಾರವನ್ನು ಮಾಡುತ್ತಿದ್ದಾರೆ. ಕುಣಿಗಲ್ ತಾಲೂಕಿನ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಯಡಿಯೂರು ಸಿದ್ಧಲಿಂಗೇಶ್ವರ ಯಡಿಯೂರಪ್ಪನವರ ಮನೆ ದೇವರಾಗಿರುವ ಕಾರಣ ಅಭಿಮಾನಿಗಳು ವಿಶೇಷ ಪೂಜೆ ಮಾಡುತ್ತಿದ್ದಾರೆ.

    ಇಂದು ಬೆಳಗ್ಗೆ ಸುಮಾರು 6 ಗಂಟೆಯಿಂದ ರಾತ್ರಿ ವರೆಗೆ ನಿರಂತರ ಪೂಜೆ ಮಾಡಲು ಭಕ್ತರು ನಿರ್ಧಾರ ಮಾಡಿದ್ದಾರೆ. ಪೂಜೆ ವೇಳೆ ದೇವರಿಗೆ ವಿಶೇಷ ಅಭಿಷೇಕ ಉರುಳುಸೇವೆ, ಮಹಾರುದ್ರಯಾಗ, ಸಂಕಲ್ಪ ವ್ರತಗಳನ್ನು ಮಾಡಲಿದ್ದಾರೆ. ಅಷ್ಟೇ ಅಲ್ಲದೇ ಸವಿವಿಧ ಮಠಾಧೀಶರಿಂದ ಪೂಜೆ ನೆರವೇರಲಿದೆ.

  • ನಮ್ಮವರು 14 ಜನ ಅವರ ಜತೆ ಇದ್ರೆ, ನನ್ನ ಜೊತೆ 28 ಜನ ಬಿಜೆಪಿ ಶಾಸಕರಿದ್ದಾರೆ: ಎಚ್‍ಡಿಕೆಯಿಂದ ಹೊಸ ಬಾಂಬ್

    ನಮ್ಮವರು 14 ಜನ ಅವರ ಜತೆ ಇದ್ರೆ, ನನ್ನ ಜೊತೆ 28 ಜನ ಬಿಜೆಪಿ ಶಾಸಕರಿದ್ದಾರೆ: ಎಚ್‍ಡಿಕೆಯಿಂದ ಹೊಸ ಬಾಂಬ್

    ಬೆಂಗಳೂರು: ನಮ್ಮವರು 14 ಜನ ಅವರ ಜತೆ ಇದ್ದರೆ, ನನ್ನ ಜೊತೆ 28 ಜನ ಬಿಜೆಪಿ ಶಾಸಕರಿದ್ದಾರೆ. ಇದನ್ನು ಶೋಭಾ ಕರಂದ್ಲಾಜೆ ಅವರಿಗೆ ತಿಳಿಸಿಬಿಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

    ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‍ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆ ಯಡಿಯೂರಪ್ಪ ಬಹುಮತ ಸಾಬೀತು ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪ ಸೋಲುತ್ತಾರೆ. ನಾವು ಸರ್ಕಾರ ರಚನೆ ಮಾಡುತ್ತೇವೆ ಇದು ಪಕ್ಕಾ. ಆದರೆ ಯಾರೂ ಯಾರನ್ನು ಭೇಟಿ ಮಾಡದೇ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಇದೇ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಅವರು ನಮ್ಮ ಜೊತೆ ಜೆಡಿಎಸ್ ಶಾಸಕರು 14 ಮಂದಿ ಇದ್ದಾರೆ ಎಂದು ಹೇಳಿದ್ದರು. ಈ ಮಾತಿಗೆ ಕುಮಾರಸ್ವಾಮಿಯವರು ನಮ್ಮವರು 14 ಜನ ಅವರ ಜತೆ ಇದ್ರೆ, ನನ್ನ ಜೊತೆ 28 ಜನ ಬಿಜೆಪಿ ಶಾಸಕರಿದ್ದಾರೆ. ಇದನ್ನು ಶೋಭಾಗೆ ತಿಳಿಸಿಬಿಡಿ ಎಂದು ತಿರುಗೇಟು ನೀಡಿದ್ದಾರೆ.

  • ಬಿಎಸ್‍ವೈಗೆ ಮಾನ ಮರ್ಯಾದೆ ಇದ್ರೆ, ರಾಜಿನಾಮೆ ಕೊಟ್ಟು ಹೋಗ್ಬೇಕು: ರಾಮಲಿಂಗಾ ರೆಡ್ಡಿ

    ಬಿಎಸ್‍ವೈಗೆ ಮಾನ ಮರ್ಯಾದೆ ಇದ್ರೆ, ರಾಜಿನಾಮೆ ಕೊಟ್ಟು ಹೋಗ್ಬೇಕು: ರಾಮಲಿಂಗಾ ರೆಡ್ಡಿ

    ಬೆಂಗಳೂರು: ನೂತನ ಸಿಎಂ ಬಿ.ಎಸ್.ಯಡಿಯೂರಪ್ಪ ಅವ್ರಿಗೆ ಮಾನ ಮರ್ಯಾದೆ ಇದ್ರೆ ರಾಜಿನಾಮೆ ಕೊಟ್ಟು ಹೋಗಬೇಕು ಅಂತಾ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

    ರಾಜಭವನ ಚಲೋ ಪ್ರತಿಭಟನೆ ವೇಳೆಯಲ್ಲಿ ಭಾಗಿಯಾಗಿದ್ದ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮಾಜಿ ಸಚಿವರು, ಈಗಾಗಲೇ ಸುಪ್ರೀಂ ಕೋರ್ಟ್ ಶನಿವಾರ ಸಂಜೆ 4 ಗಂಟೆಯೊಳಗೆ ವಿಶ್ವಾಸಮತ ಸಾಬೀತು ಮಾಡುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ನಾವು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡುತ್ತೇವೆ. ನಮ್ಮ ಪಕ್ಷ ಹಾಗು ಜೆಡಿಎಸ್ ನಿಂದ ಟಿಕೆಟ್ ಪಡೆದು ಗೆಲುವು ಸಾಧಿಸಿರುವ ನಮ್ಮ ಶಾಸಕರು ಬಿಜೆಪಿಗೆ ಹೋಗಲ್ಲ ಅಂತಾ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ರು.

    ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಇಂದು ಕಾಂಗ್ರೆಸ್ ನಾಯಕರು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಮುಂದಾಗಿದೆ. ಬೆಂಗಳೂರಿನಲ್ಲಿ ಕಾಂಗ್ರೆಸ್‍ನ ರಾಜ್ಯ ಹಾಗು ಕೇಂದ್ರದ ನಾಯಕರು ರಾಜಭವನ ಚಲೋ ಚಳುವಳಿಗೆ ಚಾಲನೆ ಕೊಟ್ಟಿದ್ದಾರೆ. ಪ್ರತಿಭಟನೆಯಲ್ಲಿ ಕಾಂಗ್ರೆಸ್‍ನ ಕೇಂದ್ರ ನಾಯಕರಾದ ಗುಲಾಂನಬೀ ಆಜಾದ್, ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಎಲ್ಲ ನಾಯಕರು ಮುಂದಾಗಿದ್ದಾರೆ.

    ಸುಪ್ರೀಂ ಕೋರ್ಟ್ ನ ತ್ರಿಸದ್ಯ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ಶನಿವಾರ 4 ಗಂಟೆಯ ಒಳಗಡೆ ಬಹುಮತವನ್ನು ಸಾಬೀತುಪಡಿಸಬೇಕು. ಅಷ್ಟೇ ಅಲ್ಲದೇ ಅಂಗ್ಲೋ ಇಂಡಿಯನ್ ನೇಮಕ ಮಾಡುವಂತಿಲ್ಲ. ಇದರ ಜೊತೆಯಲ್ಲಿ ಬಹುಮತ ಸಾಬೀತುಪಡೆಸುವ ವರೆಗೂ ಯಾವುದೇ ಆಡಳಿತಾತ್ಮಕ ನಿರ್ಧಾರವನ್ನು ಬಿಎಸ್ ಯಡಿಯೂರಪ್ಪನವರನ್ನು ಪ್ರಕಟಿಸುವಂತಿಲ್ಲ ಎಂದು ಆದೇಶಿಸಿದೆ.

    ಸುಪ್ರೀಂ ಆದೇಶವನ್ನು ಬಿಜೆಪಿ ಸ್ವಾಗತಿಸಿದ್ದು, ನಮಗೆ ಸಂಖ್ಯಾಬಲವಿದ್ದು ಬಹುಮತವನ್ನು ಸಾಬೀತು ಪಡಿಸುತ್ತೇವೆ ಎಂದು ನೂತನ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

  • ಶಾಸಕ ಆನಂದ್ ಸಿಂಗ್‍ ರನ್ನ ಹುಡುಕಿ ಕೊಡಿ-ಕಾಂಗ್ರೆಸ್ ಕಾರ್ಯಕರ್ತರಿಂದ ದೂರು ದಾಖಲು!

    ಶಾಸಕ ಆನಂದ್ ಸಿಂಗ್‍ ರನ್ನ ಹುಡುಕಿ ಕೊಡಿ-ಕಾಂಗ್ರೆಸ್ ಕಾರ್ಯಕರ್ತರಿಂದ ದೂರು ದಾಖಲು!

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿದ್ದು, ದಿನೇ ದಿನೇ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಇತ್ತ ಬಳ್ಳಾರಿ ಜಿಲ್ಲೆಯ ವಿಜಯನಗರ ಶಾಸಕ ಆನಂದ್ ಸಿಂಗ್ ನಾಪತ್ತೆಯಾಗಿದ್ದು, ಈಗ ಅವರ ಪತ್ತೆಗಾಗಿ ಕಾಂಗ್ರೆಸ್ ಶಾಸಕರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

    ಆನಂದ್ ಸಿಂಗ್ ಬುಧವಾರ ಬಳ್ಳಾರಿಯಿಂದ ರೆಸಾರ್ಟ್ ರಾಜಕಾರಣಕ್ಕೆಂದು ಹೊರಟ್ಟಿದ್ದರು. ಆದರೆ ಇದೂವರೆಗೂ ಬೆಂಗಳೂರು ತಲುಪಿಲ್ಲ. ಕಾಂಗ್ರೆಸ್ ಮುಖಂಡರಿಗೆ ಖುದ್ದು ಕರೆ ಮಾಡಿ ಬೆಂಗಳೂರಿಗೆ ಬರುತ್ತೀದ್ದೀನಿ ಅಂತ ಹೇಳಿದ್ದರು. ಆದರೆ ಅವರು ಕಾಂಗ್ರೆಸ್ ಮುಖಂಡರ ಕೈಗೆ ಸಿಕ್ಕಿಲ್ಲ. ಹೀಗಾಗಿ ಆನಂದ್ ಸಿಂಗ್ ಹುಡುಕಿಕೊಡುವಂತೆ ಇಂದು ಹೊಸಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಜೊತೆಗೆ ಹೊಸಪೇಟೆ ಪೊಲೀಸ್ ಠಾಣೆಗೆ ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟು ಹುಡುಕಿಕೊಡಿ ಎಂದು ಮನವಿ ಸಲ್ಲಿಸಲಿದ್ದಾರೆ.

    ಅತ್ತ ರಾಯಚೂರಿನ ಮಸ್ಕಿಯಲ್ಲಿಯೂ ಶಾಸಕ ಪ್ರತಾಪ್ ಗೌಡರನ್ನು ಹುಡುಕಿಕೊಡಿ ಎಂದು ಅಭಿಯಾನ ನಡೆಯಲಿದೆ. ಪ್ರತಾಪ್ ಗೌಡ, ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಬಾರದಿದ್ದರೆ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಸ್ಥಳೀಯ ಕಾಂಗ್ರೆಸ್ಸಿಗರು ಎಚ್ಚರಿಸಿದ್ದಾರೆ.

    ಸದ್ಯಕ್ಕೆ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮತ್ತು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಇನ್ನೂ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಕ್ಕಿಲ್ಲ. ಇಬ್ಬರನ್ನು ಬಿಜೆಪಿ ಹೈಜಾಕ್ ಮಾಡಿರೋ ಶಂಕೆಯನ್ನು ಕಾಂಗ್ರೆಸ್ ಪಾಳಯ ವ್ಯಕ್ತಪಡಿಸುತ್ತಿದೆ.

    ಒಟ್ಟಿನಲ್ಲಿ ಬಳ್ಳಾರಿಯಿಂದ 3 ಶಾಸಕರು ಒಟ್ಟಾಗಿದ್ದು, ಆನಂದ್ ಸಿಂಗ್ ಅವರು ಸಚಿವ ಸ್ಥಾನದ ಬೇಡಿಕೆಯಿಟ್ಟಿದ್ದರು. ಅವರ ಬೇಡಿಕೆ ಈಡೇರಿಸುತ್ತೇವೆ ಅಂತ ಹೇಳಿದ್ರೂ ಕೂಡ ಖಚಿತ ಸ್ಪಷ್ಟತೆ ಇಲ್ಲದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಅವರು ದೂರ ಉಳಿದಿರಬಹುದೆಂಬ ಮಾತುಗಳು ಕಾಂಗ್ರೆಸ್ ವಲಯದಿಂದ ಕೇಳಿಬರುತ್ತಿದೆ.

  • ಸಿಎಂ ಬಿಎಸ್‍ವೈಗೆ ಅಗ್ನಿ ಪರೀಕ್ಷೆ-ಸುಪ್ರೀಂಕೋರ್ಟ್ ನಲ್ಲಿ ಇಂದು ಏನಾಗಬಹುದು?

    ಸಿಎಂ ಬಿಎಸ್‍ವೈಗೆ ಅಗ್ನಿ ಪರೀಕ್ಷೆ-ಸುಪ್ರೀಂಕೋರ್ಟ್ ನಲ್ಲಿ ಇಂದು ಏನಾಗಬಹುದು?

    ಬೆಂಗಳೂರು: ನಾಟಕೀಯ ತಿರುವುಗಳು, ಕಾನೂನು ಹೋರಾಟಗಳ ಆತಂಕದ ಮಧ್ಯೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವ್ರಿಗೆ ಬಹುಮತ ಸಾಬೀತುಪಡಿಸುವ ಮುನ್ನವೇ ಸುಪ್ರೀಂ ಪರೀಕ್ಷೆ ಎದುರಾಗಿದೆ.

    ಜೆಡಿಎಸ್ ಮತ್ತು ಕಾಂಗ್ರೆಸ್ ಸಲ್ಲಿಸಿರೋ ಅರ್ಜಿಯ ವಿಚಾರಣೆ ಇಂದು ಕೂಡ ಮುಂದುವರೆಯಲಿದೆ. ಸುಪ್ರೀಂಕೋರ್ಟ್ ನ ತ್ರಿಸದಸ್ಯಪೀಠ ಗುರುವಾರ ಸೂಚಿಸಿದ್ದ ಪ್ರಕಾರ, ರಾಜ್ಯಪಾಲರಿಗೆ ಸಲ್ಲಿಸಲಾದ ಶಾಸಕರ ಬೆಂಬಲ ಪತ್ರವನ್ನು ಬಿಎಸ್‍ವೈ ಇಂದು ಹಾಜರುಪಡಿಸಬೇಕಿದೆ. ಮಂಗಳವಾರ ಮತ್ತು ಬುಧವಾರ ಯಡಿಯೂರಪ್ಪ ಸರ್ಕಾರ ರಚೆನೆಗೆ ಅವಕಾಶ ಕೋರಿ ರಾಜ್ಯಪಾಲರಿಗೆ ಎರಡು ಪತ್ರಗಳನ್ನು ನೀಡಿದ್ದರು. ಬಿಎಸ್‍ವೈ ಸಲ್ಲಿಸುವ ಈ ಬೆಂಬಲ ಪತ್ರಗಳಲ್ಲಿ ಕಂಟೆಂಟ್ ಆಧಾರದ ಮೇಲೆ ಇವತ್ತು ವಿಚಾರಣೆ ನಡೆಯೋ ಸಾಧ್ಯತೆಗಳಿವೆ.

    ಕಾಂಗ್ರೆಸ್ ಪರ ಅಭಿಷೇಕ್ ಮನು ಸಿಂಘ್ವಿ, ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್, ಬಿಎಸ್‍ವೈ ಪರ ಮುಕುಲ್ ರೊಹ್ಟಗಿ ವಾದ ಮಂಡಿಸಲಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ರಾಜ್ಯಪಾಲರ ನಡೆ ಪ್ರಶ್ನಿಸಿದ ಜೇಠ್ಮಲಾನಿ ಕೂಡ ತಮ್ಮ ವಾದ ಮಂಡಿಸುವ ಸಾಧ್ಯತೆಗಳಿವೆ. ಈ ನಡುವೆ ಬಿಜೆಪಿಗೆ ಅನುಕೂಲ ಮಾಡಿಕೊಡಲು ರಾಜ್ಯಪಾಲರು ಆಂಗ್ಲೋ ಇಂಡಿಯನ್ ಶಾಸಕರಾಗಿ ವಿನಿಶಾ ನಿರೋರಾ ನಾಮನಿರ್ದೇಶನಕ್ಕೆ ರಾಜ್ಯಪಾಲರು ತರಾತುರಿಯಲ್ಲಿ ಅಂಕಿತ ಹಾಕಿದ್ದಾರೆ ಆರೋಪಿಸಿ ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ಮತ್ತೊಂದು ಅರ್ಜಿ ಸಲ್ಲಿಸಿದೆ. ಈ ಅರ್ಜಿಯೂ ಇಂದೇ ವಿಚಾರಣೆಗೆ ಬರುವ ಸಾಧ್ಯತೆ ಇದೆ.

    ಸುಪ್ರೀಂಕೋರ್ಟ್ ನಲ್ಲಿ ಇಂದು ಏನಾಗಬಹುದು..?
    * 104 ಶಾಸಕರನ್ನು ಹೊರತುಪಡಿಸಿ ನಿಮ್ಮ ಬೆಂಬಲಕ್ಕಿರುವ ಶಾಸಕರು ಯಾರು ಎಂದು ಪ್ರಶ್ನಿಸಬಹುದು.
    * 104 ಶಾಸಕರಷ್ಟೇ ನಿಮ್ಮ ಬಳಿ ಇದ್ದಾರೆ.. ಬಹುಮತ ಹೇಗೆ ಸಾಬೀತುಪಡಿಸುವಿರಿ ಎಂದು ಪ್ರಶ್ನೆ ಮಾಡಬಹುದು.
    * ಬಹುಮತ ಸಾಬೀತಿಗೆ ನೀಡಲಾದ ಕಾಲಾವಕಾಶವನ್ನು ಕಡಿಮೆ ಮಾಡಬಹುದು.
    * ವಿಶ್ವಾಸಮತ ಸಾಬೀತುಪಡಿಸುವಂತೆ ಸಿಎಂ ಬಿಎಸ್‍ವೈಗೆ ಸೂಚಿಸಬಹುದು.
    * ಶಾಸಕರ ಪ್ರಮಾಣ ಸ್ವೀಕಾರಕ್ಕೆ ಮುನ್ನ ಅನ್ವಯ ಆಗಲ್ಲವೇ.. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗಲ್ಲವೇ ಎಂಬ ಬಗ್ಗೆ ಚರ್ಚೆ ನಡೆಯಬಹುದು.

    ಗುರುವಾರ ವಿಚಾರಣೆ ವೇಳೆ ಅಟಾರ್ನಿ ಜನರಲ್ ಜನಪ್ರತಿನಿಧಿಗಳು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕವಷ್ಟೇ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆ ಎಂದು ಹೇಳಿದ್ದರು.

  • ರಾತ್ರಿಯಿಡೀ ಖಾಸಗಿ ಹೋಟೆಲ್‍ನಲ್ಲಿ ಬಿಎಸ್‍ವೈ ಮೀಟಿಂಗ್-ಬಹುಮತ ಹೇಗೆ ಸಾಬೀತು ಮಾಡ್ತಾರೆ?

    ರಾತ್ರಿಯಿಡೀ ಖಾಸಗಿ ಹೋಟೆಲ್‍ನಲ್ಲಿ ಬಿಎಸ್‍ವೈ ಮೀಟಿಂಗ್-ಬಹುಮತ ಹೇಗೆ ಸಾಬೀತು ಮಾಡ್ತಾರೆ?

    ಬೆಂಗಳೂರು: ಇಂದು ಸುಪ್ರೀಂಕೋರ್ಟ್ ಮುಂದೆ ನೂತನ ಸಿಎಂ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತುಪಡಿಸಬೇಕಿದೆ. ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಹೈಡ್ರಾಮಗಳ ಬಹುಮತ ಸಾಬೀತುಪಡಿಸಲು ಅಗತ್ಯವಿರುವ ಸಂಖ್ಯಾಬಲವನ್ನು ಹೊಂದಿಸೋ ಬಗ್ಗೆ ಹಾಗು ಮುಂದಿನ ರಣತಂತ್ರಗಳ ಬಗ್ಗೆ ರಾತ್ರಿಯಿಡೀ ಬಿಜೆಪಿ ನಾಯಕರು ಚರ್ಚೆ ನಡೆಸಿದ್ದಾರೆ.

    ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸಭೆಯಲ್ಲಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್, ಜೆಪಿ ನಡ್ಡಾ, ಧಮೇಂದ್ರ ಪ್ರಧಾನ್ ಮತ್ತು ಅನಂತ್ ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ರು.

    ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜ್ಯದ ಬಾರ್ಡರ್ ದಾಟಿದ್ದು ಬಿಎಸ್‍ವೈಗೆ ಫುಲ್ ಟೆನ್ಶನ್ ತರಿಸಿದೆ. ರಾತ್ರಿ ಮನೆಗೆ ಕೂಡ ಹೋಗದೇ ಮುಂದೇನು ಮಾಡಬೇಕು ಅನ್ನೋ ಬಗ್ಗೆ ತಲೆಕೆಡಿಸಿಕೊಂಡು ಕುಳಿತಿದ್ರು ಅಂತಾ ಎನ್ನಲಾಗಿದೆ. ಕೆಲವೇ ಕ್ಷಣಗಳ ಹಿಂದೆ ಬಿಎಸ್‍ವೈ ಮನೆಗೆ ಹಿಂದಿರುಗಿದ್ದಾರೆ. ಈ ನಡುವೆ ನೇರವಾಗಿ ಎಲ್ಲೂ ಕಾಣಿಸಿಕೊಳ್ಳದಿರಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

    ಬಹುಮತ ಹೇಗೆ ಸಾಬೀತು ಮಾಡಬಹುದು ಯಡಿಯೂರಪ್ಪ ಅನ್ನೋದನ್ನು ನೋಡೋದಾದ್ರೆ:
    * ಶಾಸಕರು ಪ್ರಮಾಣ ಸ್ವೀಕಾರ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಕೆಲವರನ್ನು ಸೆಳೆದು ರಾಜೀನಾಮೆ ಕೊಡಿಸಬಹುದು.
    * ಒಂದು ಪಕ್ಷದ ಒಟ್ಟು ಸಂಖ್ಯೆಯ 3ನೇ 2ರಷ್ಟು ಶಾಸಕರನ್ನು ಬಿಜೆಪಿಗೆ ಬರುವಂತೆ ಮಾಡುವುದು.
    * ಕಾನೂನಿನ ರಿಸ್ಕ್ ತೆಗೆದುಕೊಂಡು ಶಾಸಕರಿಂದ ಅಡ್ಡ ಮತದಾನ ಮಾಡಿಸಬಹುದು.
    * ಚುನಾಯಿತ ಸದಸ್ಯರನ್ನು ಪ್ರಮಾಣ ವಚನದಿಂದ ದೂರ ಉಳಿಸಿ ಸದನದ ಸಂಖ್ಯಾಬಲ ಕುಗ್ಗಿಸಬಹುದು.
    * ಬಹುಮತ ಸಾಬೀತಿನ ಬಳಿಕ ಆ ಪ್ರತಿನಿಧಿಗಳನ್ನ ಶಪಥ ಸ್ವೀಕರಿಸುವಂತೆ ಮಾಡಬಹುದು.
    * ಜೆಡಿಎಸ್ ಬೆಂಬಲ ಪಡೆಯಲು ಮತ್ತೊಂದು ಸುತ್ತು ಮಾತುಕತೆಗೆ ಮುಂದಾಗಬಹುದು.
    * ಕಾಂಗ್ರೆಸ್ ರೀತಿಯಲ್ಲಿ ಭೇಷರತ್ ಬೆಂಬಲವನ್ನು ಜೆಡಿಎಸ್‍ಗೆ ಬಿಜೆಪಿಯೂ ನೀಡಬಹುದು.

    ರಾಜ್ಯಪಾಲರಿಗೆ ಸರ್ಕಾರ ರಚನೆ ವಿಚಾರವಾಗಿ ಬಿಎಸ್ ಯಡಿಯೂರಪ್ಪ ಬರೆದಿರುವ ಪತ್ರದಲ್ಲಿ ಏನಿದೆ? ಬಹುಮತ ಸಾಬೀತಿಗೆ ಬೇಕಾದ ಬೆಂಬಲ ಯಾರು ನೀಡ್ತಾರೆ? ಎಂಬೆಲ್ಲ ಮಾಹಿತಿ ಆಧರಿಸಿ ವಿಚಾರಣೆ ನಡೆಯಲಿದೆ. ಇದರ ಜೊತೆಗೆ ಹಿರಿಯ ವಕೀಲ ರಾಮ್ ಜೇಠ್ಮಾಲಾನಿ ಕೂಡಾ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿದ್ದು, ಯಾವ ಆಯಾಮದಲ್ಲಿ ವಾದ ಮಂಡಸಿಲಿದ್ದಾರೆ ಎಂಬ ಕುತೂಹಲ ಮೂಡಿದೆ.

    ಈ ಎಲ್ಲ ಅರ್ಜಿಯ ಜೊತೆಗೆ ಆಂಗ್ಲೋ ಇಂಡಿಯನ್ ಶಾಸಕರನ್ನು ತರಾತುರಿಯಲ್ಲಿ ರಾಜ್ಯಪಾಲರು ನೇಮಕ ಮಾಡಿದ್ದಾರೆ ಅಂತಾ ಆರೋಪಿಸಿರುವ ಕಾಂಗ್ರೆಸ್ ಜೆಡಿಎಸ್ ಜಂಟಿಯಾಗಿ ಮತ್ತೊಂದು ಅರ್ಜಿಯೊಂದನ್ನ ಸುಪ್ರಿಂಕೊರ್ಟ್ ಗೆ ಸಲ್ಲಿಸಿದ್ದು, ಒಟ್ಟು ನಾಲ್ಕು ಅರ್ಜಿಗಳು ಏಕ ಕಾಲದಲ್ಲಿ ವಿಚಾರಣೆಗೆ ಬರಲಿದೆ. ಒಟ್ಟಿನಲ್ಲಿ ಇಂದು ಬಿಎಸ್‍ವೈ ಭವಿಷ್ಯ ನಿರ್ಧರವಾಗಿದೆ.

  • ಸುಪ್ರೀಂ ವಿಚಾರಣೆ ಬಗ್ಗೆ ಬಿಜೆಪಿಯಿಂದ ಮಂಥನ- ಇತ್ತ ಬಿಹಾರ, ಗೋವಾ ರಾಜಕೀಯದಲ್ಲಿ ಕಂಪನ

    ಸುಪ್ರೀಂ ವಿಚಾರಣೆ ಬಗ್ಗೆ ಬಿಜೆಪಿಯಿಂದ ಮಂಥನ- ಇತ್ತ ಬಿಹಾರ, ಗೋವಾ ರಾಜಕೀಯದಲ್ಲಿ ಕಂಪನ

    – ಇಂದು ಕಾಂಗ್ರೆಸ್‍ನಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ

    ಬೆಂಗಳೂರು: ಒಂದು ಕಡೆ ನೂತನ ಸಿಎಂ ಆಗಿ ಆಯ್ಕೆಗೊಂಡಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದು ಅತ್ಯಂತ ಪ್ರಮುಖವಾದ ದಿನವಾಗಿದೆ. ಈಗಾಗಲೇ ರಾಜ್ಯಪಾಲ ವಜೂಭಾಯಿ ವಾಲಾರ ನಡೆಯನ್ನು ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿವೆ. ಇಂದು ಕಾಂಗ್ರೆಸ್-ಜೆಡಿಎಸ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.

    ಸುಪ್ರೀಂ ವಿಚಾರಣೆಯ ಬಗ್ಗೆ ಬಿಜೆಪಿ ಅಂಗಳದಲ್ಲಿ ಭಾರೀ ಚರ್ಚೆಗಳು ಆರಂಭಗೊಂಡಿವೆ. ಇತ್ತ ಕರ್ನಾಟಕದ ರಾಜ್ಯಪಾಲರ ನಡೆಯನ್ನು ಗಾಳವಾಗಿ ಬಳಸಿಕೊಂಡು ಬಿಹಾರ, ಗೋವಾ, ಮೇಘಾಲಯ ಮತ್ತು ಮಣಿಪುರ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿದೆ.

    ಪ್ರಜಾಪ್ರಭುತ್ವ ಉಳಿಸಿ: ಕಾಂಗ್ರೆಸ್ ನಾಯಕರುಗಳು ಇಂದು ರಾಜಭವನ ಚಲೋ ನಡೆಸಲು ತೀರ್ಮಾನಿಸಿದ್ದಾರೆ. ರಾಜ್ಯಪಾಲ ವಜೂಬಾಯ್ ವಾಲ ಬಿಜೆಪಿ ಪರ ವರ್ತಿಸುತ್ತಿದ್ದಾರೆ ಎಂಬುದನ್ನ ಖಂಡಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. `ಪ್ರಜಾಪ್ರಭುತ್ವ ಉಳಿಸಿ’ ಹೆಸರಿನಡಿ ಇಂದು ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

    ರಾಷ್ಟ್ರ ಹಾಗೂ ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಯಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರು ರಾಜಭವನ ಚಲೋ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮಲ್ಲಿಕಾರ್ಜುನ್ ಖರ್ಗೆ, ಗುಲಾಂ ನಬಿ ಆಜಾದ್, ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕ ನಾಯಕರುಗಳು ಭಾಗವಹಿಸಲಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ರಾಜಭವನಕ್ಕೆ ತೆರಳಿ ರಾಜಭವನಕ್ಕೆ ಮುತ್ತಿಗೆ ಹಾಕಲಿದ್ದಾರೆ.

    ಗೋವಾ ವಿಧಾನಸಭಾ ಸಭೆ ಒಟ್ಟು 40 ಸ್ಥಾನಗಳನ್ನು ಹೊಂದಿದೆ. 2017 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 17, ಬಿಜೆಪಿ 13, ಎಂಎಜಿ 3, ಎಫ್‍ಪಿ 3, ಐಎನ್‍ಡಿ 3 ಹಾಗೂ ಇತರೇ ಒಂದು ಸ್ಥಾನ ಪಡೆದಿದ್ದರು. ಕಾಂಗ್ರೆಸ್ 17 ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರು, 13 ಕ್ಷೇತ್ರಗಳಲ್ಲಿ ಜಯ ಪಡೆದಿದು ಎರಡನೇ ಸ್ಥಾನ ಪಡೆದಿದ್ದ ಬಿಜೆಪಿ, ಗೋವಾ ಫಾರವರ್ಡ್ ಪಾರ್ಟಿ (ಜಿಎಫ್‍ಪಿ) ಮತ್ತು ಎಂಜಿಪಿ ಪಕ್ಷಗಳ ನೆರವಿನಿಂದ ಬಹುಮತ ಪಡೆದು ಸರ್ಕಾರ ರಚಿಸಿತ್ತು. ಇತರೇ 3 ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಪಕ್ಷೇತರರು ಸಹ ಬಿಜೆಪಿಗೆ ಬೆಂಬಲ ನೀಡಿದ್ದರು. ಗೋವಾ ವಿಧಾನಸಭಾ ಮ್ಯಾಜಿಕ್ ನಂಬರ್ 20 ಸ್ಥಾನಗಳನ್ನು ಗಡಿದಾಟಿ ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದೆ.

  • ಸಿಎಂ ಕಚೇರಿ ವಾಸ್ತು ಪ್ರಕಾರ ಬದಲು- ಪೂರ್ವಾಭಿಮುಖವಾಗಿ ಆಸೀನರಾದ ಬಿಎಸ್‍ವೈ

    ಸಿಎಂ ಕಚೇರಿ ವಾಸ್ತು ಪ್ರಕಾರ ಬದಲು- ಪೂರ್ವಾಭಿಮುಖವಾಗಿ ಆಸೀನರಾದ ಬಿಎಸ್‍ವೈ

    – ಸಿದ್ದರಾಮಯ್ಯ ಓಡಾಡುತ್ತಿದ್ದ ಪಶ್ಚಿಮ ದ್ವಾರವೂ ಬಂದ್

    ಬೆಂಗಳೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಿಎಂ ಆಗಿ ಆಯ್ಕೆಯಾದ ಬಳಿಕ ಬಿ.ಎಸ್.ಯಡಿಯೂರಪ್ಪ ವಿಧಾನಸೌಧದ ಮೆಟ್ಟಿಲಿಗೆ ನಮಸ್ಕರಿಸಿ ಒಳ ಪ್ರವೇಶಿಸಿದ್ರು.

    ಮುಖ್ಯಮಂತ್ರಿಗಳ ಕಚೇರಿಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ವಾಸ್ತು ಪ್ರಕಾರ ಕೊಠಡಿಯನ್ನು ಬದಲಾವಣೆ ಮಾಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಓಡಾಡುತ್ತಿದ್ದ ಪಶ್ಚಿಮ ದ್ವಾರವೂ ಬಂದ್ ಮಾಡಿಸಿದ್ದಾರೆ. ದ್ವಾರವನ್ನು ಮುಚ್ಚಿಸಿದ ಬಳಿಕ ಸಿಎಂ ಯಡಿಯೂರಪ್ಪ ಪೂರ್ವಾಭಿಮುಖವಾಗಿ ಆಸೀನರಾಗಿದ್ದಾರೆ.

    ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಇತ್ತ ವಿಧಾನಸೌಧದಲ್ಲಿ ಕೊಠಡಿಯನ್ನು ಸ್ವಚ್ಛಗೊಳಿಸಲಾಗಿತ್ತು. ವಿಧಾನಸೌಧದ ಮೂರನೇ ಕೊಠಡಿಯ ಮುಂಭಾಗದಲ್ಲಿ ಹಾಕಲಾಗಿದ್ದ ಸಿದ್ದರಾಮಯ್ಯ ನಾಮಫಲಕವನ್ನು ತೆಗೆದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಫಲಕವನ್ನ ವಿಧಾನಸೌಧದ ಸಿಬ್ಬಂದಿ ಹಾಕಿದ್ದಾರೆ.

    ಕೊಠಡಿಯಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ನಾಡಿನ ರೈತ ಸಮೂಹಕ್ಕೊಂದು ಭರವಸೆ ನೀಡಿದ್ದೆ. ಮುಖ್ಯಮಂತ್ರಿಯಾದ ತಕ್ಷಣ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 1 ಲಕ್ಷದವರೆಗಿನ ಸಾಲಮನ್ನಾ ಹಾಗೆಯೇ ಸಹಕಾರಿ ಸಂಘದ ರೈತರ ಸಾಲಮನ್ನಾ, ನೇಕಾರರ ಸಾಲಮನ್ನಾ ಮಾಡುವುದಾಗಿ ತಿಳಿಸಿದ್ದೆ. ಈ ವಿಷಯದ ಬಗ್ಗೆ ಈಗಾಗಲೇ ಸಂಬಂಧಪಟ್ಟವರಲ್ಲಿ ಕೂಡ ಪ್ರಸ್ತಾಪ ಮಾಡಿದ್ದೇನೆ. ಅವರು ಅಂಕಿ-ಅಂಶಗಳನ್ನು ನೋಡಿ ಸಂಜೆಯೊಳಗೆ ಅಥವಾ ನಾಳೆ ಬೆಳಗ್ಗೆ ಮಾಹಿತಿ ನೀಡಲಿದ್ದಾರೆ ಅಂತ ಹೇಳಿದ್ರು.

    ಜನರ ಬೆಂಬಲ ನನ್ನಪರ ಇದ್ದರೂ ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅನೈತಿಕವಾಗಿ ಚುನಾವಣಾ ಫಲಿತಾಂಶದ ನಂತರ ಒಪ್ಪಂದ ಮಾಡಿಕೊಂಡು ಅಧಿಕಾರ ಕಬಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ಜನರ ಬೆಂಬಲ ನನ್ನ ಹಾಗೂ ಪಕ್ಷದ ಪರ ಇದೆ. ಈ ವಿಚಾರದಲ್ಲಿ ನಾನು ನೂರಕ್ಕೆ ನೂರು ಯಶಸ್ಸನ್ನು ಕಾಣುತ್ತೇನೆಂಬ ವಿಶ್ವಾಸ ನನಗಿದೆ ಎಂದರು.