Tag: Name

  • ಎಫ್‍ಬಿ ಪ್ರೊಫೈಲ್ ಚೇಂಜ್ ಮಾಡಿದ ಮೇಘನಾ ರಾಜ್

    ಎಫ್‍ಬಿ ಪ್ರೊಫೈಲ್ ಚೇಂಜ್ ಮಾಡಿದ ಮೇಘನಾ ರಾಜ್

    – ಚಿರು ನೆನಪಲ್ಲಿ ಹೆಸರು ಬದಲಾವಣೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅಗಲಿಕೆಯ ನೆನಪಿನಲ್ಲಿಯೇ ಪತ್ನಿ ನಟಿ ಮೇಘನಾ ರಾಜ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು. ಇದೀಗ ಮೇಘನಾ ಫೇಸ್‍ಬುಕ್ ಪೇಜಿನಲ್ಲಿ ಪ್ರೊಫೈಲ್ ಫೋಟೋ ಕೂಡ ಚೇಂಜ್ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ಪ್ರೀತಿಯೇ ನನಗೆ ಆಸರೆ, ರಕ್ಷಾಕವಚ – ಅಭಿಮಾನಿಗಳ ಬಗ್ಗೆ ಮೇಘನಾ ಮಾತು

    ನಟಿ ಮೇಘನಾ ಫೇಸ್‍ಬುಕ್ ಪೇಜಿನಲ್ಲಿ ಇಷ್ಟು ದಿನ ಅವರ ಫೋಟೋ ಮಾತ್ರ ಇತ್ತು. ಆದರೆ ಈಗ ಪತಿಯ ನೆನಪಿನಲ್ಲಿ ಪ್ರೊಫೈಲ್ ಫೋಟೋ ಬದಲಾಯಿಸಿದ್ದಾರೆ. ನೂತನವಾಗಿ ಅಪ್‍ಡೇಟ್ ಮಾಡಿರುವ ಫೋಟೋದಲ್ಲಿ ಚಿರು ಮತ್ತು ಮೇಘನಾ ಕಾರಿನಲ್ಲಿ ಕುಳಿತಿದ್ದು, ಇಬ್ಬರು ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸೆಲ್ಫಿ ಸಿಕ್ಕಿಸಿಕೊಂಡಿದ್ದಾರೆ. ಇಬ್ಬರು ಜೊತೆಯಾಗಿ ಕ್ಯೂಟ್ ಆಗಿ ನಗುತ್ತಿರುವುದನ್ನು ಕಾಣಬಹುದಾಗಿದೆ.

     

    ಮೇಘನಾ ಪ್ರೊಫೈಲ್ ಫೋಟೋ ಚೇಂಜ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಸಾಂತ್ವನ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೆ ಮೇಘನಾ ಚಿರು ನೆನಪಿನಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

    ಇನ್‍ಸ್ಟಾಗ್ರಾಂ ಖಾತೆಯಲ್ಲಿ ಇಷ್ಟು ದಿನ ಮೇಘನಾ ರಾಜ್ ಎಂದು ಮಾತ್ರ ಇತ್ತು. ಆದರೆ ಈಗ ಚಿರು ನೆನಪಿನಲ್ಲಿ ತಮ್ಮ ಹೆಸರನ್ನು ಎಡಿಟ್ ಮಾಡಿದ್ದು, ಅದರಲ್ಲಿ ಸರ್ಜಾ ಕುಟುಂಬದ ಸರ್ ನೇಮ್ ಸೇರಿಸಿಕೊಂಡಿದ್ದಾರೆ. ಹೀಗಾಗಿ ಈಗ ‘ಮೇಘನಾ ರಾಜ್ ಸರ್ಜಾ’ ಎಂದು ಬದಲಾಯಿಸಿಕೊಂಡಿದ್ದಾರೆ. ಈ ಮೂಲಕ ಮೇಘನಾ ತಮ್ಮ ಪತಿ ಚಿರಂಜೀವಿ ಸರ್ಜಾ ಹೆಸರನ್ನು ತಮ್ಮ ಹೆಸರಿನ ಜೊತೆಗೆ ಶಾಶ್ವತವಾಗಿ ನೆನಪಿಸುವಂತೆ ಮಾಡಿಕೊಂಡಿದ್ದಾರೆ.

    ಚಿರು ಸಾವಿನ ನಂತರ ಮೇಘನಾ ರಾಜ್ ತಮ್ಮ ಭಾವನೆಗಳನ್ನು ಇನ್‍ಸ್ಟಾಗ್ರಾಂ ಮೂಲಕ ಹೇಳಿಕೊಂಡಿದ್ದರು. ಮೊದಲಿಗೆ ತನ್ನ ಪತಿಯ ಬಗ್ಗೆ ಸುದೀರ್ಘವಾಗಿ ಬರೆದು ಪೋಸ್ಟ್ ಮಾಡಿದ್ದರು. ಮತ್ತೊಂದು ಪೋಸ್ಟ್ ಮಾಡಿ, ಕಷ್ಟದ ದಿನಗಳಲ್ಲಿ ತಮ್ಮ ಜೊತೆಗಿದ್ದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದರು.

  • ರಶ್ಮಿಕಾ ಬದಲು ನನಗೆ ಯಾವ ಹೆಸ್ರು ಸೂಟ್ ಆಗುತ್ತೆ – ಅಭಿಮಾನಿಗಳಿಗೆ ಮಂದಣ್ಣ ಪ್ರಶ್ನೆ

    ರಶ್ಮಿಕಾ ಬದಲು ನನಗೆ ಯಾವ ಹೆಸ್ರು ಸೂಟ್ ಆಗುತ್ತೆ – ಅಭಿಮಾನಿಗಳಿಗೆ ಮಂದಣ್ಣ ಪ್ರಶ್ನೆ

    ಬೆಂಗಳೂರು: ಸ್ಯಾಂಡಲ್‍ವುಡ್, ಟಾಲಿವುಡ್‍ನಲ್ಲಿ ಸಾಕಷ್ಟು ಹೆಸರು ಗಳಿಸಿ, ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿರುತ್ತಾರೆ. ಕ್ವಾರಂಟೈನ್ ಸಮಯದಲ್ಲಿ ಅಭಿಮಾನಿಗಳ ಜೊತೆ ಹೆಚ್ಚು ಹೊತ್ತು ಇಂಟರಾಕ್ಟ್ ಮಾಡುತ್ತಿದ್ದಾರೆ. ಸದ್ಯ ರಶ್ಮಿಕಾ ಮಾಡಿರುವ ಟ್ವೀಟ್ ಸಖತ್ ವೈರಲ್ ಆಗಿದೆ. ರಶ್ಮಿಕಾ ಬಿಟ್ಟು ನನಗೆ ಯಾವ ಹೆಸರು ಸೂಟ್ ಆಗುತ್ತೆ ಹೇಳಿ ಎಂದು ಅಭಿಮಾನಿಗಳಿಗೆ ಲಿಲ್ಲಿ ಪ್ರಶ್ನೆ ಮಾಡಿದ್ದಾರೆ.

    ಇತ್ತೀಚೆಗೆ ರಶ್ಮಿಕಾ ಅವರನ್ನ ಮನೆಯಲ್ಲಿ ಪ್ರೀತಿಯಿಂದ ಮೋನಿ ಎಂದು ಕರೆಯುತ್ತಾರೆ ಎಂಬ ಸುದ್ದಿ ಸಖತ್ ಸದ್ದು ಮಾಡಿತ್ತು. ಈಗ ಟ್ವೀಟ್ ಮಾಡಿರುವ ರಶ್ಮಿಕಾ, ನನ್ನ ಹೆಸರನ್ನ ಬದಲಾಯಿಸಿ, ಬೇರೆ ಹೆಸರನ್ನು ಇಟ್ಟುಕೊಳ್ಳುವುದಾದರೆ ಯಾವ ಹೆಸರಿಟ್ಟುಕೊಳ್ಳಲಿ? ಯಾವ ಹೆಸರು ಸೂಟ್ ಆಗುತ್ತೆ ಹೇಳಿ ಎಂದು ಅಭಿಮಾನಿಗಳಿಗೆ ಪ್ರಶ್ನೆ ಹಾಕಿದ್ದಾರೆ. ರಶ್ಮಿಕಾ ಪ್ರಶ್ನೆಗೆ ಅಭಿಮಾನಿಗಳು ಒಂದರ ಮೇಲೊಂದು ರೀ-ಟ್ವೀಟ್ ಮಾಡುತ್ತಾ ಅನೇಕ ಹೆಸರುಗಳನ್ನು ಹೇಳಿದ್ದಾರೆ.

    ಕೆಲವರು ನಿಮಗೆ ಸಾನ್ವಿ ಹೆಸರು ಸೂಟ್ ಆಗುತ್ತೆ ಅಂದ್ರೆ, ಇನ್ನು ಕೆಲವರು ಲಿಲ್ಲಿ, ತಳಪತಿ ಮಂದಣ್ಣ, ಗೀತಾ, ರೋಸ್ ಹೆಸರು ಸೂಪರ್ ಆಗಿರುತ್ತೆ ಎಂದು ರೀ-ಟ್ವೀಟ್ ಮಾಡಿದ್ದಾರೆ. ಆದರೆ ರಶ್ಮಿಕಾ ಅವರ ಕಟ್ಟಾ ಅಭಿಮಾನಿಗಳು ಮಾತ್ರ ಯಾವುದೂ ಬೇಡ, ಈಗ ಇರುವ ರಶ್ಮಿಕಾ ಹೆಸರೇ ಕ್ಯೂಟ್ ಆಗಿದೆ ಎಂದು ಸಲಹೆ ನೀಡಿದ್ದಾರೆ.

    https://twitter.com/RashmikaHearts/status/1263123588338483201

    ಈ ಹಿಂದೆ ರಶ್ಮಿಕಾ ಅಭಿಮಾನಿಗಳಿಗಾಗಿ ಟ್ವೀಟ್ ಮಾಡಿ, ಇಡೀ ದಿನ ನಿಮಗಾಗಿ ಮೀಸಲಿಟ್ಟಿದ್ದೇನೆ. ನೀವು ಹೇಳಿದ ಬಣ್ಣದ ಡ್ರೆಸ್ ಹಾಕುತ್ತೇನೆ. ನೀವು ಹೇಳಿದ ತಿಂಡಿ ಇನ್ನುತ್ತೇನೆ. ನೀವು ಹೇಳಿದಂತೆಯೇ ನಡೆದುಕೊಳ್ತೇನೆ ಅಂತ ಪೋಸ್ಟ್ ಮಾಡಿದ್ದರು. ಆ ಟ್ವೀಟ್ ಕೂಡ ಸಖತ್ ವೈರಲ್ ಆಗಿತ್ತು, ಸಾವಿರಾರು ಅಭಿಮಾನಿಗಳು ರೀ-ಟ್ವೀಟ್ ಮಾಡಿ ಕೋರಿಕೆ ಹೇಳಿ ಖುಷಿಪಟ್ಟಿದ್ದರು. ಅಲ್ಲದೆ ಅಭಿಮಾನಿಗಳು ಹೇಳಿದಂತೆ ನಡೆದುಕೊಂಡು ಕೊಡಗಿನ ಕುವರಿ ಫ್ಯಾನ್ಸ್ ಮನ ಗೆದ್ದಿದ್ದರು.

    ಕನ್ನಡದ ಸೂಪರ್ ಹಿಟ್ ಸಿನಿಮಾ ‘ಕಿರಿಕ್ ಪಾರ್ಟಿ’ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟ ರಶ್ಮಿಕಾ ಇದೀಗ ದಕ್ಷಿಣ ಭಾರತದಲ್ಲೇ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದು, ಟಾಲಿವುಡ್‍ನಲ್ಲಿ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅಲ್ಲದೆ ಈಗಲೂ ಬಹುತೇಕ ಸ್ಟಾರ್ ನಟರ ಮೊದಲ ಆಯ್ಕೆಯೇ ರಶ್ಮಿಕಾ ಮಂದಣ್ಣ ಆಗಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಅರ್ಜುನ್ ಅಭಿನಯದ ಬಹುಭಾಷಾ ಚಿತ್ರ ‘ಪುಷ್ಪ’ಕ್ಕೆ ಆಯ್ಕೆಯಾಗಿದ್ದಾರೆ. ಇತ್ತ ಕನ್ನಡದ ‘ಪೊಗರು’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ನಂತರ ತಮಿಳು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  • ಹಳ್ಳಿಗೆ ಇರ್ಫಾನ್ ಖಾನ್ ಹೆಸರಿಟ್ಟು ಗೌರವ ಸಲ್ಲಿಸಿದ ಗ್ರಾಮಸ್ಥರು

    ಹಳ್ಳಿಗೆ ಇರ್ಫಾನ್ ಖಾನ್ ಹೆಸರಿಟ್ಟು ಗೌರವ ಸಲ್ಲಿಸಿದ ಗ್ರಾಮಸ್ಥರು

    ಮುಂಬೈ: ಬಾಲಿವುಡ್‍ನ ಅದ್ಭುತ ನಟ ಇರ್ಫಾನ್ ಖಾನ್ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಸಿನಿಮಾಗಳು, ಜನರಿಂದ ಅವರು ಗಳಿಸಿದ ಪ್ರೀತಿ ಸದಾ ಜೀವಂತ. ಇದಕ್ಕೆ ಉದಾಹರಣೆ ಎಂಬಂತೆ ಮಹಾರಾಷ್ಟ್ರದಲ್ಲಿ ಗ್ರಾಮವೊಂದಕ್ಕೆ `ಹೀರೋ ಚಿ ವಾಡಿ` ಎಂದು ಹೆಸರಿಟ್ಟು ಇರ್ಫಾನ್ ಖಾನ್ ಅವರಿಗೆ ಗೌರವ ಸಲ್ಲಿಸಿ ಪ್ರೀತಿ ಮೆರೆಯಲಾಗಿದೆ.

    ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್ಪುರಿ ಸಮೀಪದಲ್ಲಿ ಪ್ರತಿಯಚಾ ವಾಡಾ ಗ್ರಾಮಸ್ಥರು ಇರ್ಫಾನ್ ಖಾನ್ ಅವರು ಮಾಡಿರುವ ಸಹಾಯಕ್ಕೆ ಗೌರವ ಸಲ್ಲಿಸಿದ್ದಾರೆ. ಇರ್ಫಾನ್ ಖಾನ್ ಬದುಕಿದ್ದಾಗ ಸಾಕಷ್ಟು ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ನೆರವಾಗಿದ್ದರು. ಹಲವು ಹಳ್ಳಿಗಳಿಗೆ, ಬಡ ಜನರಿಗೆ ಸಹಾಯ ಹಸ್ತಚಾಚಿದ್ದರು. ಮರಾಠಿಯಲ್ಲಿ ‘ಹೀರೋ ಚಿ ವಾಡಿ’ ಎಂದರೆ ಹೀರೋನ ನೆರೆಹೊರೆಯವರು ಎಂದರ್ಥ. ಹೀಗಾಗಿ ಅವರು ಮಾಡಿರುವ ಸಹಾಯಕ್ಕೆ ಪ್ರತಿಯಚಾ ವಾಡಾ ಗ್ರಾಮಕ್ಕೆ `ಹೀರೋ ಚಿ ವಾಡಿ` ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: 600 ರೂ. ಇಲ್ಲದ್ದಕ್ಕೆ ಕ್ರಿಕೆಟ್ ಕನಸು ಕೈಚೆಲ್ಲಿಕೊಂಡಿದ್ದ ಇರ್ಫಾನ್ ಖಾನ್

    ಇಗತ್ಪುರು ತಾಲೂಕಿನ ತ್ರಿಲಂಗವಾಡಿ ಕೋಟೆಯ ಸಮೀಪ ಇರ್ಫಾನ್ ಫಾರ್ಮ್ ಅವರ ಫಾರ್ಮ್ ಹೌಸ್ ಕೂಡ ಇದೆ. ಆದರೆ ಈ ಪ್ರದೇಶದಲ್ಲಿ ಹಾಗೂ ಸುತ್ತಮುತ್ತಲ ಹಳ್ಳಿಗಳ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿರುವುದನ್ನು ಅರಿತ ಇರ್ಫಾನ್ ಅವರು ಅಲ್ಲಿನ ನೆರೆ ಹೊರೆಯ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದರು. ಪ್ರತಿಯಚಾ ವಾಡ ಗ್ರಾಮದಲ್ಲಿ ತುರ್ತು ಸಂದರ್ಭದಲ್ಲಿ ಬಳಸಲೆಂದು ಅಂಬುಲೆನ್ಸ್, ಮಕ್ಕಳಿಗೆ ಕಂಪ್ಯೂಟರ್, ಪುಸ್ತಕ, ರೇನ್ ಕೋಟ್ ಮತ್ತು ಸ್ವೆಟರ್ ಗಳನ್ನು ನೀಡಿದ್ದರು. ಇರ್ಫಾನ್ ಅವರು ಮಾಡಿರುವ ಸಹಾಯವನ್ನು ಸ್ಮರಿಸಲು, ಅವರ ಮೇಲಿಟ್ಟಿರುವ ಪ್ರೀತಿಯಿಂದ ಗ್ರಾಮಸ್ಥರು ತಮ್ಮ ಹಳ್ಳಿಯ ಹೆಸರನ್ನು ‘ಹೀರೋ ಚಿ ವಾಡಿ` ಎಂದು ಬದಲಾಯಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಸರಿ ಇದ್ದಿದ್ದರೆ ಕನ್ನಡದಲ್ಲೂ ನಟಿಸಲಿದ್ದರು ಇರ್ಫಾನ್

    ಬಹಳ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಅವರು ಏಪ್ರಿಲ್ 29ರಂದು ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬಾಲಿವುಡ್‍ನಲ್ಲಿ ಹೀರೋ ಮತ್ತು ಪೋಷಕ ನಟ ಯಾವುದೇ ರೀತಿಯ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಇರ್ಫಾನ್ ಅವರು, ಹಾಲಿವುಡ್‍ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. 1988ರಲ್ಲಿ ತೆರೆಕಂಡ ಸಲಾಮ್ ಬಾಂಬೆ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಇರ್ಫಾನ್ ನಂತರ ನೂರಾರು ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದರು. ಜೊತೆಗೆ ಇವರಿಗೆ 2011ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು.

  • ಶ್ರುತಿಯಿಂದ ಹರಿಪ್ರಿಯಾ – ಹೆಸರು ಬದಲಾಯಿಸಿದ ಕಥೆ ಬಿಚ್ಚಿಟ್ಟ ನಟಿ

    ಶ್ರುತಿಯಿಂದ ಹರಿಪ್ರಿಯಾ – ಹೆಸರು ಬದಲಾಯಿಸಿದ ಕಥೆ ಬಿಚ್ಚಿಟ್ಟ ನಟಿ

    – 12 ವರ್ಷಗಳ ಹಿಂದೆ ಹರಿಪ್ರಿಯಾ ಇರಲಿಲ್ಲ

    ಬೆಂಗಳೂರು: ಸಾಮಾನ್ಯವಾಗಿ ಅನೇಕ ನಟ-ನಟಿಯರು ಸಿನಿಮಾರಂಗಕ್ಕೆ ಬಂದ ಮೇಲೆ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಅದೇ ರೀತಿ ಸ್ಯಾಂಡಲ್‍ವುಡ್ ನಟಿ ಹರಿಪ್ರಿಯಾ ಕೂಡ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿದ್ದಾರೆ.

    ನಟಿ ಹರಿಪ್ರಿಯಾ ಅವರ ಮೊದಲ ಹೆಸರು ಶ್ರುತಿ. ಮೊದಲ ಸಿನಿಮಾದ ನಂತರ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ನಟಿ ಹರಿಪ್ರಿಯಾ ಮೊದಲಿಗೆ ತುಳಿವಿನ ‘ಬಡಿ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಮಾಡುವಾಗ ಅವರ ಹೆಸರು ಶ್ರುತಿ ಎಂತಲೇ ಇತ್ತು. ಬಳಿಕ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ನಟಿ ಹರಿಪ್ರಿಯಾ ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ.

    “ನಾನು ತುಳುವಿನ ‘ಬಡಿ’ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವಾಗಲೇ ಕನ್ನಡ ಸಿನಿಮಾದಲ್ಲಿ ಅಭಿನಯಿಸಲು ಆಫರ್ ಬಂದಿತ್ತು. ಈ ವೇಳೆ ‘ಬಡಿ’ ಸಿನಿಮಾದ ಸಹನಿರ್ದೇಶಕ ಸುಧಾಕರ್ ಬನ್ನಾಜೆ, ನನಗೆ ಹೆಸರು ಬದಲಿಸಿಕೊಳ್ಳಲು ಸಲಹೆ ಕೊಟ್ಟಿದ್ದರು. ಈಗಾಗಲೇ ಕನ್ನಡ ಇಂಡಸ್ಟ್ರೀಯಲ್ಲಿ ಶ್ರುತಿ ಹೆಸರಿನ ನಾಯಕಿ ಖ್ಯಾತಿ ಪಡೆದುಕೊಂಡಿದ್ದಾರೆ. ಹೀಗಾಗಿ ಹೆಸರು ಬದಲಾಯಿಸುವಂತೆ ಹೇಳಿದರು. ಆಸ್ಟ್ರೋಲಜಿ ಬಗ್ಗೆಯೂ ತಿಳಿದಿದ್ದ ಅವರು ನನ್ನ ತಾಯಿ ಬಳಿ ‘ಹ’ ಅಕ್ಷರದಿಂದ ಆರಂಭವಾಗುವ ಹೆಸರಿಡಲು ತಿಳಿಸಿದ್ದರು. ಅಮ್ಮ ಕೂಡ ‘ಹ’ ಅಕ್ಷರದಿಂದ ಆರಂಭವಾಗುವ ಹೆಸರಿನ ಪಟ್ಟಿಯನ್ನೇ ತಯಾರಿಸಿದ್ದರು” ಎಂದು ಹೇಳಿದ್ದಾರೆ.

    ಬಹಳಷ್ಟು ಜನರಿಗೆ ತಮ್ಮ ಹೆಸರನ್ನು ಆಯ್ಕೆ ಮಾಡಿಕೊಳ್ಳಲಾಗುವುದಿಲ್ಲ, ಯಾಕೆಂದರೆ ಮಗುವಿದ್ದಾಗಲೇ ಹೆಸರಿಡಲಾಗುತ್ತದೆ. ಆದರೆ ನಾನು ಕೊನೆಯದಾಗಿ ‘ಹರಿಪ್ರಿಯಾ’ ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡೆ. ಲಕ್ಷ್ಮೀ ಎಂದರೆ ದೇವರು ಹರಿಗೆ ತುಂಬ ಇಷ್ಟ ಎಂಬ ಕಾರಣಕ್ಕೆ ಇವರು ‘ಹರಿಪ್ರಿಯಾ’ ಎಂಬ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದೆ. 12 ವರ್ಷಗಳ ಹಿಂದೆ ಈ ಹರಿಪ್ರಿಯಾ ಇರಲಿಲ್ಲ. ಶ್ರುತಿ ಎನ್ನುವವಳು ಇದ್ದಳು, ಮುಂದೆಯೂ ಇರುತ್ತಾಳೆ. ಈಗ ಹರಿಪ್ರಿಯಾ ಎಂಬ ಹೆಸರನ್ನು ಸಾಕಷ್ಟು ಜನರು ಗುರುತಿಸಿದ್ದಾರೆ. ಅಲ್ಲದೇ ಹರಿಪ್ರಿಯಾ ಎಂದು ಕರೆಯೋದನ್ನು ಕೇಳಿದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

    ಹರಿಪ್ರಿಯಾ ಹೆಸರಿನ ಬಗ್ಗೆಯೂ ಒಂದು ಕೊರಗು ಸಹ ಇದೆ ಎಂದು ಹೇಳಿಕೊಂಡಿದ್ದಾರೆ. ನನ್ನ ತಂದೆ ಹರಿಪ್ರಿಯಾ ಎಂಬ ಹೆಸರಿನಿಂದ ನನ್ನನ್ನು ಒಮ್ಮೆಯೂ ಕರೆದಿಲ್ಲ. ಅವರಿಗೆ ಮಗಳಿಗೆ ಈ ಹೆಸರಿದೆ ಎಂಬುದು ಸಹ ಗೊತ್ತಿಲ್ಲ. ಈಗಲು ಒಮ್ಮೆಯಾದರೂ ಅಪ್ಪ ನನ್ನನ್ನು ಹರಿಪ್ರಿಯಾ ಎಂದು ಕರೆದಿದ್ದರೆ ಎಂದು ಅನೇಕ ಬಾರಿ ಕಲ್ಪಿಸಿಕೊಳ್ಳುತ್ತೇನೆ ಎಂದು ನೋವಿನಿಂದ ಬರೆದುಕೊಂಡಿದ್ದಾರೆ. ತಂದೆ ಚಂದ್ರಸೇನಾ ಹರಿಪ್ರಿಯಾ ಅವರು ಚಿಕ್ಕವಯಸ್ಸಿನಲ್ಲಿದ್ದಾಲೇ ಮೃತಪಟ್ಟಿದ್ದಾರೆ.

    “ಹರಿಪ್ರಿಯಾ ಎಂದು ಹೆಸರು ಬದಲಾಯಿಸಿಕೊಂಡ ನಂತರ ಸಿನಿಮಾಗಳಲ್ಲಿ ನನ್ನ ಪಾತ್ರವನ್ನು ಪರಿಚಯಿಸುವಾಗ ಹರಿಪ್ರಿಯಾ ಎಂದೇ ಇರುತ್ತದೆ. ಇಲ್ಲಿಯವರೆಗೂ ನನ್ನ ತಾಯಿ, ಸಹೋದರ, ಸಂಬಂಧಿಕರು ನನ್ನನ್ನು ಶ್ರುತಿ ಎಂದೇ ಕರೆಯುತ್ತಾರೆ. ಒಂದು ವೇಳೆ ಹರಿಪ್ರಿಯಾ ಎಂದು ಕರೆದರೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನನಗೆ ಈ ಎರಡೂ ಹೆಸರುಗಳು ತುಂಬಾ ಇಷ್ಟ. ವೈಯಕ್ತಿಕ ಬದುಕಿನಲ್ಲಿ ನಾನು ಶ್ರುತಿಯಾದರೆ, ವೃತ್ತಿ ಜೀವನದಲ್ಲಿ ಹರಿಪ್ರಿಯಾ” ಎಂದು ಹೆಸರು ಬದಲಾಯಿಸಿಕೊಂಡ ಕಥೆ ಬಿಚ್ಚಿಟ್ಟಿದ್ದಾರೆ.

    https://www.instagram.com/p/B_4rPfIhxca/

  • ತನ್ನ ಮಗುವಿಗೆ ವೈದ್ಯರ ಹೆಸರಿಟ್ಟ ಯುಕೆ ಪ್ರಧಾನ ಮಂತ್ರಿ

    ತನ್ನ ಮಗುವಿಗೆ ವೈದ್ಯರ ಹೆಸರಿಟ್ಟ ಯುಕೆ ಪ್ರಧಾನ ಮಂತ್ರಿ

    ಲಂಡನ್: ಕಳೆದ ಬುಧವಾರ ಜನಿಸಿದ ತನ್ನ ಗಂಡು ಮಗುವಿಗೆ ಯುಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ವೈದ್ಯರ ಹೆಸರನ್ನು ಇಟ್ಟಿದ್ದಾರೆ.

    ಇತ್ತೀಚೆಗೆ ಬೋರಿಸ್ ಜಾನ್ಸನ್ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಈ ವೇಳೆ ಅವರಿಗೆ ಚಿಕತ್ಸೆ ನೀಡಿದ ಇಬ್ಬರು ವೈದ್ಯರ ಹೆಸರನ್ನು ತನ್ನ ಮಗುವಿಗೆ ಇಟ್ಟಿದ್ದಾರೆ. ಈ ಮೂಲಕ ತನ್ನ ಜೀವ ಉಳಿಸಿದ ಮತ್ತು ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಗೌರವ ಸಲ್ಲಿಸಿದ್ದಾರೆ.

    ಬುಧವಾರ ಬೋರಿಸ್ ಜಾನ್ಸನ್ ಮತ್ತು ಕ್ಯಾರಿ ಸೈಮಂಡ್ಸ್ ದಂಪತಿಗೆ ಗಂಡು ಮಗು ಜನಿಸಿದೆ. ಈ ವಿಚಾರವಾಗಿ ಶನಿವಾರ ತಮ್ಮ ಇನ್‍ಸ್ಟಗ್ರಾಮ್‍ನಲ್ಲಿ ಮಗು ಜೊತೆಗಿನ ಫೋಟೋವನ್ನು ಹಂಚಿಕೊಂಡಿರುವ ಕ್ಯಾರಿ ಸೈಮಂಡ್ಸ್, ನನ್ನ ಮಗುವಿಗೆ ವಿಲ್ಫ್ರೆಡ್ ಲಾರಿ ನಿಕೋಲಸ್ ಜಾನ್ಸನ್ ಎಂದು ಹೆಸರಡಿಲಾಗಿದೆ. ವಿಲ್ಫ್ರೆಡ್ ಬೋರಿಸ್ ಅವರ ತಾತನ ಹೆಸರು, ಲಾರಿ ನನ್ನ ತಾತನ ಹೆಸರು, ನಿಕೋಲಸ್ ಎಂಬುದು ಕೊರೊನಾದಿಂದ ಬೋರಿಸ್ ಅನ್ನು ಗುಣಪಡಿಸಿದ ವೈದ್ಯರ ಹೆಸರು ಎಂದು ತಿಳಿಸಿದ್ದಾರೆ.

    ಕೊರೊನಾ ಸೋಂಕಿಗೆ ತುತ್ತಾಗಿದ್ದ ಬೋರಿಸ್ ಜಾನ್ಸನ್ ಅವರಿಗೆ ವೈದ್ಯರಾದ ನಿಕೋಲಸ್ ಪ್ರೈಸ್ ಮತ್ತು ನಿಕೋಲಸ್ ಹಾರ್ಟ್ ಚಿಕಿತ್ಸೆ ನೀಡಿದ್ದರು. ಇವರಿಗೆ ಗೌರವ ಸೂಚಿಸಲು ಅವರ ಮಗನ ಹೆಸರಿನಲ್ಲಿ ನಿಕೋಲಸ್ ಎಂದು ಬಳಸಲಾಗಿದೆ. ಜೊತೆಗೆ ಕ್ಯಾರಿ ಸೈಮಂಡ್ಸ್ ತನ್ನ ಗಂಡನ ಪ್ರಾಣವನ್ನು ಉಳಿಸಿದ ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಮಗು ಹುಟ್ಟುವುದಕ್ಕಿಂತ ಒಂದು ವಾರದ ಹಿಂದೆಯಷ್ಟೇ ಬೋರಿಸ್ ಗುಣಮುಖರಾಗಿ ಆಸ್ಪತ್ರೆಗೆಯಿಂದ ಡಿಸ್ಚಾರ್ಜ್ ಆಗಿದ್ದರು.

    ಈ ವಿಚಾರವಾಗಿ ಮಾತನಾಡಿರುವ ವೈದ್ಯರು, ಚಿಕಿತ್ಸೆ ನೀಡಿದಕ್ಕೆ, ನಮ್ಮ ಪ್ರಧಾನಿಗಳು ನಮಗೆ ಈ ರೀತಿಯ ಗೌರವ ಸಲ್ಲಿಸಿದ್ದಕ್ಕೆ ಹೆಮ್ಮೆ ಇದೆ. ಅವರ ಕುಟುಂಬದ ಮುಂದಿನ ಜೀವನ ಚೆನ್ನಾಗಿರಲಿ. ನಾವು ಈ ಗೌರವವನ್ನು ನಮ್ಮ ಆಸ್ಪತ್ರೆ ಸಿಬ್ಬಂದಿಗೆ ಅರ್ಪಣೆ ಮಾಡುತ್ತೇವೆ. ಜೊತೆಗೆ ಪ್ರಧಾನಿ ಬೋರಿಸ್ ಅವರು ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡಲಿ ಎಂದು ತಿಳಿಸಿದ್ದಾರೆ.

    ಮಾರ್ಚ್ 27ರಂದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಮೊದಲಿಗೆ ಸ್ವಲ್ಪ ಪ್ರಮಾಣದಲ್ಲಿ ಕೊರೊನಾ ವೈರಸ್ ನ ಗುಣಲಕ್ಷಣಗಳು ಕಂಡು ಬಂದಿದ್ದವು. ಇದಾದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ, ಈ ವೇಳೆ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿತ್ತು. ಇದರಿಂದ ಭಯಪಡುವ ಅಗತ್ಯವಿಲ್ಲ. ನಾನು ಮನೆಯಲ್ಲೇ ಕುಳಿತು ತಂತ್ರಜ್ಞಾನ ಬಳಸಿ ಸರ್ಕಾರ ನಡೆಸುತ್ತೇನೆ. ನಾವು ಕೊರೊನಾ ವಿರುದ್ಧ ಹೊರಾಡೋಣ ಎಂದು ಬೋರಿಸ್ ಜಾನ್ಸನ್ ಟ್ವೀಟ್ ಮಾಡಿದ್ದರು.

  • ಅಂದು ಅಡಿಡಾಸ್ ಎಂದು ಕೈಯಾರೇ ಬರೆಯುತ್ತಿದ್ದೆ, ಇಂದು ಅಡಿಡಾಸ್ ಶೂನಲ್ಲೇ ನನ್ನ ಹೆಸರು ಪ್ರಿಂಟ್ – ಹಿಮಾದಾಸ್

    ಅಂದು ಅಡಿಡಾಸ್ ಎಂದು ಕೈಯಾರೇ ಬರೆಯುತ್ತಿದ್ದೆ, ಇಂದು ಅಡಿಡಾಸ್ ಶೂನಲ್ಲೇ ನನ್ನ ಹೆಸರು ಪ್ರಿಂಟ್ – ಹಿಮಾದಾಸ್

    – ಅಡಿಡಾಸ್ ಕಂಪನಿಯ ಶೂಗಳ ಮೇಲೆ ಹಿಮಾದಾಸ್ ಹೆಸರು
    – ಬಾಲ್ಯದ ಕಷ್ಟದ ದಿನಗಳನ್ನು ನೆನಪಿಸಿದ ಹಿಮಾದಾಸ್

    ನವದೆಹಲಿ: ಕ್ರೀಡಾಪಟುಗಳಿಗಾಗೇ ವಿಶೇಷ ಬಗೆಯ ಶೂ ತಯಾರಿಸುವ ಅಡಿಡಾಸ್ ಕಂಪನಿ ಭಾರತದ ಓಟಗಾರ್ತಿ ಹಿಮಾದಾಸ್ ಅವರ ಹೆಸರನ್ನು ತಮ್ಮ ಕಂಪನಿಯ ಬ್ರ್ಯಾಂಡೆಡ್ ಕಸ್ಟಮ್-ನಿರ್ಮಿತ ಶೂ ಮೇಲೆ ಪ್ರಿಂಟ್ ಮಾಡಲು ತೀರ್ಮಾನ ಮಾಡಿದೆ.

    ತಮ್ಮ ಕಂಪನಿಯ ಬ್ರ್ಯಾಂಡೆಡ್ ಕಸ್ಟಮ್ ಶೂ ಮೇಲೆ ಹಿಮಾದಾಸ್ ಹೆಸರನ್ನು ಪ್ರಿಂಟ್ ಮಾಡುವುದಾಗಿ ಅಡಿಡಾಸ್ ಭಾನುವಾರ ಹೇಳಿಕೊಂಡಿದೆ. ಇದಾದ ನಂತರ ತಮ್ಮ ಹಿಂದಿನ ದಿನಗಳನ್ನು ನೆನೆದುಕೊಂಡಿರುವ ಹಿಮಾದಾಸ್, ಒಂದು ಕಾಲದಲ್ಲಿ ನಾನು ಉಪಯೋಗಿಸುತ್ತಿದ್ದ ಮಮೂಲಿ ರನ್ನಿಂಗ್ ಶೂಗಳ ಮೇಲೆ ನಾನೇ ಅಡೀಡಸ್ ಎಂದು ಬರೆಯುತ್ತಿದೆ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಹಿಮಾದಾಸ್ ಮೊದಲು ನಾನು ಶಾಲಾ ದಿನಗಳಲ್ಲಿ ಓಡಲು ಆರಂಭಿಸಿದಾಗ ಬರಿಗಾಲಿನಲ್ಲಿ ಓಡುತ್ತಿದ್ದೆ. ಆದರೆ ಮೊದಲು ನಾನು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಹೋದಾಗ ನಮ್ಮ ತಂದೆ ಸ್ಪೈಕ್ ಶೂಗಳನ್ನು ತಂದುಕೊಟ್ಟರು. ಅದೂ ಯಾವುದೇ ಕಂಪನಿ ಆಥವಾ ಬ್ರ್ಯಾಂಡೆಡ್ ಶೂ ಆಗಿರಲಿಲ್ಲ. ಆದರೆ ಅದರ ಮೇಲೆ ನಾನು ನನ್ನ ಕೈಯಾರೆ ಅಡಿಡಾಸ್ ಎಂದು ಬರೆದುಕೊಂಡಿದ್ದೆ ಎಂದು ತನ್ನ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

    ಹಿಮಾದಾಸ್ ಅವರು ಭಾರತದ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರು ಜೊತೆ ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದಿದ್ದು, ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಧಿ ಎಂಬುದು ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆ ಎಂಬುದು ನಮಗೆ ಯಾರಿಗೂ ಗೊತ್ತಿಲ್ಲ. ಒಂದು ಕಾಲದಲ್ಲಿ ನನ್ನ ಶೂಗಳ ಮೇಲೆ ನಾನೇ ಅಡಿಡಾಸ್ ಎಂದು ಬರೆದುಕೊಳ್ಳುತ್ತಿದ್ದೆ. ಇಂದು ಅದೇ ಕಂಪನಿ ನನ್ನ ಹೆಸರನ್ನು ಅವರ ಬ್ರ್ಯಾಂಡೆಡ್ ಶೂ ಮೇಲೆ ಪ್ರಿಂಟ್ ಮಾಡುತ್ತಿದೆ ಎಂದು ಹಿಮಾದಾಸ್ ಹೇಳಿದ್ದಾರೆ.

    ಒಂದು ಕಾಲದಲ್ಲಿ ಶೂ ಇಲ್ಲದೇ ಬರಿಗಾಲಿನಲ್ಲಿ ಓಡುತ್ತಿದ್ದ ಹಿಮಾದಾಸ್ ಫಿನ್ಲೆಂಡ್‍ನಲ್ಲಿ ನಡೆದ 2018 ರ ವಿಶ್ವ ಅಂಡರ್ -20 ಚಾಂಪಿಯನ್‍ಶಿಪ್‍ನಲ್ಲಿ 400 ಮೀಟರ್ ಸ್ಪರ್ಧೆ ಯಲ್ಲಿ ಚಿನ್ನ ಗೆದ್ದರು. ನಂತರ ಅವರನ್ನು ಜರ್ಮನಿಯ ಉನ್ನತ ಬ್ರ್ಯಾಂಡ್ ಕಂಪನಿ ಅಡಿಡಾಸ್ ತನ್ನ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿತ್ತು. ಈಗ ತಮ್ಮ ಕಂಪನಿಯ ಕಸ್ಟಮ್-ನಿರ್ಮಿತ ಶೂಗಳ ಮೇಲೆ ಆಕೆಯ ಹೆಸರನ್ನು ಪ್ರಿಂಟ್ ಮಾಡಲು ಮುಂದಾಗಿದೆ.

    ಇದೇ ವೇಳೆ ಇಂಡೋನೇಷ್ಯಾದಲ್ಲಿ ನಡೆದ 2018ರ ಏಷ್ಯನ್ ಕ್ರೀಡಾಕೂಟದ ನಂತರ ಜನರು ಹಿಂದೆಂದಿಗಿಂತಲೂ ಹೆಚ್ಚು ಅಥ್ಲೆಟಿಕ್ಸ್ ಅನ್ನು ಅನುಸರಿಸಲು ಪ್ರಾರಂಭಿಸಿದ್ದಾರೆ ಎಂದು ಹಿಮಾದಾಸ್ ಹೇಳಿದ್ದಾರೆ. ಹಿಮಾದಾಸ್ ಅವರು ಏಷ್ಯನ್ ಕ್ರೀಡಾಕೂಟದಲ್ಲಿ 400 ಮೀಟರ್ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಮಹಿಳೆಯರ 400 ಮೀಟರ್ ಮತ್ತು ಮಿಶ್ರ 400 ಮೀಟರ್ ರಿಲೇ ರೇಸ್‍ಗಳಲ್ಲಿ ತಲಾ ಒಂದು ಚಿನ್ನದ ಪದಕವನ್ನು ಗೆದ್ದಿದ್ದರು.

    ನಾನು ಮುಂದೆ ನಡೆಯುವ ಟೋಕಿಯೋ ಒಲಿಂಪಿಕ್ಸ್ ಕಡೆ ಗಮನ ಹರಿಸಿದ್ದು ಅಭ್ಯಾಸ ನಡೆಸುತ್ತಿದ್ದೇನೆ. ಕೊರೊನಾ ಬಂದಿರುವುದಿರಂದ ನನಗೆ ಇದಕ್ಕೆ ಹೆಚ್ಚಿನ ಸಮಯ ಸಿಕ್ಕಿದೆ. ಸ್ಪರ್ಧೆಯಲ್ಲಿ ನಾವು ಓಡುವಾಗ ಅಭಿಮಾನಿಗಳು ನಮ್ಮ ಹೆಸರನ್ನು ಜೋರಾಗಿ ಕೂಗಿದರೆ ನಮಗೆ ಓಡಲು ಹೆಚ್ಚಿನ ಶಕ್ತಿ ಸಿಗುತ್ತದೆ ಎಂದು ಹಿಮಾ ತಿಳಿಸಿದ್ದಾರೆ. ಜೊತೆಗೆ ಕ್ರಿಕೆಟ್ ದಂತಕಥೆ ಸಚಿನ್ ಅವರು ನನ್ನ ರೋಲ್ ಮಾಡೆಲ್ ಆಗಿದ್ದು, ಅವರನ್ನು ಭೇಟಿಯಾದ ಕ್ಷಣ ನನ್ನ ಜೀವನದ ಅತ್ಯುತ್ತಮ ಕ್ಷಣವಾಗಿದೆ ಎಂದು ದಾಸ್ ಹೇಳಿದ್ದಾರೆ.

  • ಲಾಕ್‍ಡೌನ್‍ನಲ್ಲಿ ಹುಟ್ಟಿದ ಮಗುವಿಗೆ ‘ಸ್ಯಾನಿಟೈಸರ್’ ಎಂದು ಹೆಸರಿಟ್ಟ ಹೆತ್ತವರು

    ಲಾಕ್‍ಡೌನ್‍ನಲ್ಲಿ ಹುಟ್ಟಿದ ಮಗುವಿಗೆ ‘ಸ್ಯಾನಿಟೈಸರ್’ ಎಂದು ಹೆಸರಿಟ್ಟ ಹೆತ್ತವರು

    ಲಕ್ನೋ: ಎಲ್ಲೆಡೆ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಈ ಲಾಕ್‍ಡೌನ್ ಅವಧಿಯಲ್ಲಿ ಜನಿಸಿದ ಮಗುವಿಗೆ ಪೋಷಕರು ‘ಸ್ಯಾನಿಟೈಸರ್’ ಎಂದು ನಾಮಕರಣ ಮಾಡಿದ್ದಾರೆ.

    ಉತ್ತರ ಪ್ರದೇಶದ ಸಹರನ್ಪುರ ಜಿಲ್ಲೆಯ ವಿಜಯ್ ವಿಹಾರದ ನಿವಾಸಿಯಾಗಿರುವ ಓಂ ವೀರ್ ಸಿಂಗ್ ತಮ್ಮ ಮಗುವಿಗೆ ಸ್ಯಾನಿಟೈಸರ್ ಎಂದು ಹೆಸರಿಟ್ಟಿದ್ದಾರೆ. ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯ ಸ್ಯಾನಿಟೈಸರ್ ಗೆ ಇದೆ. ಈ ಸೋಂಕು ಹರಡುತ್ತಿರುವುದನ್ನು ತಡೆಗಟ್ಟಲು ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಈ ಅವಧಿಯಲ್ಲಿ ನನ್ನ ಮಗ ಹುಟ್ಟಿದ್ದಾನೆ. ಹೀಗಾಗಿ ಮಗನಿಗೆ ಸ್ಯಾನಿಟೈಸರ್ ಎಂದು ಹೆಸರಿಟ್ಟಿದ್ದೇನೆ ಎಂದು ಓಂ ವೀರ್ ಸಿಂಗ್ ಹೇಳಿದ್ದಾರೆ.

    ಭಾನುವಾರ ಈ ಮಗು ಜನಿಸಿದ್ದು, ಪೋಷಕರು ಮಗುವಿಗೆ ಸ್ಯಾನಿಟೈಸರ್ ಎಂದು ಹೆಸರಿಡುತ್ತೇವೆ ಎಂದು ಹೇಳಿದ್ದಾಗ ಆಸ್ಪತ್ರೆಯಲ್ಲಿದ್ದ ಎಲ್ಲಾ ವೈದ್ಯಕೀಯ ಸಿಬ್ಬಂದಿ ನಕ್ಕಿದ್ದರು. ಈ ಹಿಂದೆ ಗೋರಖ್ ಪುರದಲ್ಲಿಯೂ ಹೀಗೆ ವಿಚಿತ್ರ ನಾಮಕರಣ ಮಾಡಿದ ಘಟನೆ ನಡೆದಿತ್ತು. ಜನತಾ ಕರ್ಫ್ಯೂ ದಿನ ಜನಿಸಿದ ಹೆಣ್ಣು ಮಗುವಿಗೆ ಪೋಷಕರು ‘ಕೊರೊನಾ’ ಎಂದೇ ನಾಮಕರಣ ಮಾಡಿದ್ದರು.

    ಆ ಬಳಿಕ ಲಾಕ್‍ಡೌನ್ ಅವಧಿಯಲ್ಲಿ ಮಗು ಜನಿಸಿದ್ದಕ್ಕೆ ಮಗುವಿಗೆ ‘ಲಾಕ್‍ಡೌನ್’ ಎಂದು ಪೋಷಕರು ನಾಮಕರಣ ಮಾಡಿದ್ದರು. ಆ ಬಳಿಕ ರಾಮ್‍ಪುರದಲ್ಲಿ ಜನಿಸಿದ್ದ ಮಗುವೊಂದಕ್ಕೆ ‘ಕೋವಿಡ್’ ಎಂದೇ ಹೆತ್ತವರು ಹೆಸರಿಟ್ಟಿದ್ದ ಸುದ್ದಿ ಹೆಚ್ಚು ಸದ್ದು ಮಾಡಿತ್ತು.

  • ಕೊರೊನಾ ಭೀತಿ ನಡುವೆ ಜನಿಸಿದ ಮಗುವಿಗೆ ‘ಲಾಕ್‍ಡೌನ್’ ಎಂದು ಹೆಸರಿಟ್ಟ ದಂಪತಿ

    ಕೊರೊನಾ ಭೀತಿ ನಡುವೆ ಜನಿಸಿದ ಮಗುವಿಗೆ ‘ಲಾಕ್‍ಡೌನ್’ ಎಂದು ಹೆಸರಿಟ್ಟ ದಂಪತಿ

    – ರಾಷ್ಟ್ರೀಯ ಹಿತಾಸಕ್ತಿ ಸಂಕೇತವಾಗಿ ಹೆಸರು
    – ಕೇಂದ್ರ ಸರ್ಕಾರ, ಪ್ರಧಾನಿ ನಿರ್ಧಾರಕ್ಕೆ ಶ್ಲಾಘನೆ

    ಲಕ್ನೋ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿದೆ. ಆದರೆ ಉತ್ತರ ಪ್ರದೇಶದ ದಂಪತಿ ಲಾಕ್‍ಡೌನ್‍ನಲ್ಲಿ ಮಗು ಜನಿಸಿದ್ದಕ್ಕೆ ಮಗನಿಗೆ ‘ಲಾಕ್‍ಡೌನ್’ ಅಂತಲೇ ಹೆಸರಿಟ್ಟಿದ್ದಾರೆ.

    ಇತ್ತೀಚೆಗೆ ಹೆಣ್ಣು ಮಗುವೊಂದಕ್ಕೆ ‘ಕೊರೊನಾ’ ಎಂದು ನಾಮಕರಣ ಮಾಡಿದ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು. ಇದೇ ಬೆನ್ನಲ್ಲೇ ಈಗ ಗಂಡು ಮಗುವಿಗೆ ‘ಲಾಕ್‍ಡೌನ್’ ಎಂದು ನಾಮಕರಣ ಮಾಡಿ ಉತ್ತರ ಪ್ರದೇಶ ದಂಪತಿ ಸುದ್ದಿಯಾಗಿದ್ದಾರೆ.

    ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಖುಖುಂಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಖುಖುಂಡು ಗ್ರಾಮದ ನಿವಾಸಿ ಪವನ್ ಅವರು ತಮ್ಮ ಮಗನಿಗೆ ಸೋಮವಾರದಂದು ‘ಲಾಕ್‍ಡೌನ್’ ಎಂದು ನಾಮಕರಣ ಮಾಡಿದ್ದಾರೆ.

    ನನ್ನ ಮಗ ಲಾಕ್‍ಡೌನ್ ಸಮಯದಲ್ಲಿ ಜನಿಸಿದ್ದಾನೆ. ಇಡೀ ವಿಶ್ವವನ್ನೇ ಕೊರೊನಾ ವೈರಸ್ ಕಾಡುತ್ತಿದೆ. ಭಾರತದಲ್ಲೂ ಅಟ್ಟಹಾಸ ಮೆರೆಯುತ್ತಿರುವ ಮಾಹಾಮಾರಿ ಕೊರೊನಾ ಹರಡದಂತೆ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದಾರೆ. ಇದು ಒಳ್ಳೆಯ ನಿರ್ಧಾರ, ಸಾರ್ವಜನಿಕರ ಜೀವ ಉಳಿಸಲು ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು, ಕ್ರಮಗಳು ನಿಜಕ್ಕೂ ಶ್ಲಾಘನೀಯ. ರಾಷ್ಟ್ರೀಯ ಹಿತಾಸಕ್ತಿಯಿಂದ ಲಾಕ್‍ಡೌನ್ ಮಾಡಲಾಗಿದೆ. ಹೀಗಾಗಿ ಈ ಸಮಯದಲ್ಲಿ ಜನಿಸಿದ ನನ್ನ ಮಗನಿಗೆ ‘ಲಾಕ್‍ಡೌನ್’ ಎಂದೇ ಹೆಸರಿಟ್ಟಿದ್ದೇವೆ ಎಂದು ಪವನ್ ಅವರು ತಿಳಿಸಿದ್ದಾರೆ.

    ನನ್ನ ಮಗನ ಹೆಸರು ಕೇಳಿದ ತಕ್ಷಣ ಸ್ವಹಿತಾಸಕ್ತಿಗಿಂತ ರಾಷ್ಟ್ರೀಯ ಹಿತಾಸಕ್ತಿ ಮುಖ್ಯ ಎನ್ನುವುದು ಎಲ್ಲರಿಗೂ ತಿಳಿಯಬೇಕು. ನಾವಂತೂ ಲಾಕ್‍ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇವೆ. ಹೀಗಾಗಿ ಸದ್ಯ ಯಾವುದೇ ಧಾರ್ಮಿಕ ಕಾರ್ಯಕ್ರಮ, ಸಮಾರಂಭಗಳನ್ನು ಮಾಡುತ್ತಿಲ್ಲ. ದಯವಿಟ್ಟು ಈಗ ಯಾರೂ ಮಗುವನ್ನು ನೋಡಲು ಮನೆಗೆ ಬರಬೇಡಿ ಎಂದು ಸಂಬಂಧಿಕರಿಗೆ ಪವನ್ ಅವರು ಮನವಿ ಮಾಡಿಕೊಂಡಿದ್ದಾರೆ.

    ಈ ಹಿಂದೆ ಗೋರಖ್‍ಪುರದಲ್ಲಿ ಮಾರ್ಚ್ 22ರಂದು ಜನತಾ ಕರ್ಫ್ಯೂ ದಿನದಂದು ಹೆಣ್ಣು ಮಗು ಜನಿಸಿದ್ದು, ಆ ಮಗುವಿಗೆ ‘ಕೊರೊನಾ’ ಎಂದು ಹೆಸರಿಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಗುವಿನ ಕುಟುಂಬ, ಕೊರೊನಾ ವೈರಸ್ ಅಪಾಯಕಾರಿ, ಜೀವವನ್ನು ತೆಗೆಯುತ್ತದೆ ಎಂದು ತಿಳಿದಿದೆ. ಆದರೆ ಅದು ಜಗತ್ತನ್ನು ಒಂದು ಮಾಡುವ ಒಳ್ಳೆಯ ಕೆಲಸವನ್ನೂ ಮಾಡಿದೆ. ಹೀಗಾಗಿ ಜನರ ಒಗ್ಗಟ್ಟಿನ ಸಂಕೇತವಾಗಿ ಮಗುವಿಗೆ ‘ಕೊರೊನಾ’ ಎಂದು ಹೆಸರಿಟ್ಟಿದ್ದೇವೆ ಎಂದು ತಿಳಿಸಿತ್ತು.

  • ಹೆಸರು ಬದಲಿಸಿಕೊಂಡ್ರು ಡಾಲಿ ಧನಂಜಯ್

    ಹೆಸರು ಬದಲಿಸಿಕೊಂಡ್ರು ಡಾಲಿ ಧನಂಜಯ್

    ಬೆಂಗಳೂರು: ಟಗರು ಚಿತ್ರದಲ್ಲಿ ಡಾಲಿ ಆಗಿ ಮಿಚಿಂದ ಸ್ಯಾಂಡಲ್‍ವುಡ್ ನಟ ಧನಂಜಯ್ ಅವರು ಈಗ ಡಾಲಿ ಧನಂಜಯ್ ಅಂತನೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಆದ್ರೆ ಈಗ ಧನಂಜಯ್ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

    ಹೌದು. ನಿರ್ದೇಶಕ ಸೂರಿ ಆ್ಯಕ್ಷನ್ ಕಟ್ ಹೇಳಿರುವ ‘ಪಾಪ್ ಕಾನ್ ಮಂಕಿ ಟೈಗರ್’ ಸಿನಿಮಾದಲ್ಲಿ ಸದ್ಯ ಧನಂಜಯ್ ಬ್ಯುಸಿಯಾಗಿದ್ದಾರೆ. ಫೆ. 21ರಂದು ‘ಪಾಪ್ ಕಾನ್ ಮಂಕಿ ಟೈಗರ್’ ತೆರೆಕಾಣಲಿದೆ. ಈ ಚಿತ್ರದಲ್ಲಿ ‘ಮಂಕಿ ಸೀನ’ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಳ್ಳಲಿದ್ದು, ಚಿತ್ರಕ್ಕೆ ಪ್ರಮೋಷನ್‍ಗಾಗಿ ಸಾಮಾಜಿಕ ತಾಣದಲ್ಲಿ ತಮ್ಮ ಯೂಸರ್ ನೇಮ್ ಅನ್ನು ಧನಂಜಯ್ ಬದಲಿಸಿಕೊಂಡಿದ್ದಾರೆ. ಹೀಗಾಗಿ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹೆಸರನ್ನು ‘ಮಂಕಿ ಸೀನ’ ಎಂದು ಧನಂಜಯ್ ಚೇಂಜ್ ಮಾಡಿಕೊಂಡಿದ್ದಾರೆ.

    ಟಗರು ಸಿನಿಮಾದಿಂದ ಧನಂಜಯ್ ಡಾಲಿ ಆಗಿ ಫೇಮಸ್ ಆದರು. ಟಗರು ಸಿನಿಮಾ ಧನಂಜಯ್ ಅವರ ದಿಕ್ಕೇ ಬದಲಾಯಿಸಿತು. ಟಗರು ಸಿನಿಮಾದಲ್ಲಿ ಧನಂಜಯ್ ಅವರ ಖಡಕ್ ಡೈಲಾಗ್, ನಟನೆ ಅಭಿಮಾನಿಗಳ ಮನ ಗೆದ್ದಿತ್ತು. ಅದರಲ್ಲೂ ‘ಅಂಕಲ್‍ನ ಹೊಡಿತೀನಿ ಸುಬ್ಬಿ’ ಅನ್ನೋ ಡಾಲಿ ಡೈಲಾಗ್ ಅಂತೂ ಸಿಕ್ಕಾಪಟ್ಟೆ ಫೇಮಸ್. ಟಗರು ಸಿನಿಮಾ ತೆರೆಕಂಡ ಬಳಿಕ ಎಲ್ಲೇ ಹೋದರು ಜನರು ಧನಂಜಯ್ ಅವರನ್ನು ಡಾಲಿ ಎಂದೇ ಗುರುತಿಸುತ್ತಿದ್ದರು. ಹೀಗಾಗಿ ಅವರಿಗೆ ಡಾಲಿ ಧನಂಜಯ್ ಎಂದು ಹೆಸರು ಬಂತು.

    ಡಾಲಿ ಪಾತ್ರದ ಹಾಗೆ ಈ ಮಂಕಿ ಸೀನನ ಪಾತ್ರವು ಫೇಮಸ್ ಆಗುತ್ತಾ? ಡಾಲಿ ಹೋಗಿ ಮಂಕಿ ಸೀನ ಆಗುತ್ತಾರಾ ಧನಂಜಯ್ ಎನ್ನುವುದು ಸದ್ಯದ ಕುತೂಹಲವಾಗಿದೆ. ಸೂರಿ ನಿರ್ದೇಶನದಲ್ಲಿ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಡಿಬಂದಿದ್ದು, ಈ ಚಿತ್ರದಲ್ಲಿ ಧನಂಜಯ್‍ಗೆ ನಾಯಕಿಯಾಗಿ ನಟಿ ನಿವೇದಿತಾ, ಅಮೃತಾ ಮತ್ತು ಸಪ್ತಮಿ ಸಾಥ್ ಕೊಟ್ಟಿದ್ದಾರೆ.

    ಈಗಾಗಲೇ ಸಿನಿಮಾದ ಫಸ್ಟ್ ಲುಕ್, ಟೀಸರ್ ಅಭಿಮಾನಿಗಳ ಗಮನ ಸೆಳೆದಿದ್ದು, ಫೆ. 21 ಶಿವರಾತ್ರಿಯಂದು ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಬಿಡುಗಡೆಗೊಳ್ಳುತ್ತಿದೆ. ಅಲ್ಲದೇ ಈ ಚಿತ್ರದ ಮಹದೇವ ಹಾಡು ಎಲ್ಲೆಡೆ ಕ್ರೇಜ್ ಹೆಚ್ಚಿಸಿದ್ದು, ಈ ಹಾಡಿಗೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದು, ಸಂಜಿತ್ ಹೆಗ್ಡೆ ಧ್ವನಿಯನ್ನು ಮೂಡಿಬಂದಿರುವ ಹಾಡಿಗೆ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ.

  • ಶಿಲ್ಪಾ ಶೆಟ್ಟಿಗೆ ಹೊಸ ಹೆಸರಿಟ್ಟ ಪತಿ ಕುಂದ್ರಾ

    ಶಿಲ್ಪಾ ಶೆಟ್ಟಿಗೆ ಹೊಸ ಹೆಸರಿಟ್ಟ ಪತಿ ಕುಂದ್ರಾ

    ಮುಂಬೈ: ಬಾಲಿವುಡ್ ಚೆಲುವೆ, ಕುಡ್ಲದ ಶಿಲ್ಪಾ ಶೆಟ್ಟಿಗೆ ಪತಿ ರಾಜ್ ಕುಂದ್ರಾ ಅವರು ‘ಬಿಬಿಸಿ’ ಎಂದು ಹೆಸರನ್ನು ಇಟ್ಟಿದ್ದಾರೆ.

    ಈ ವಿಚಾರ ಸ್ವತಃ ಶಿಲ್ಪಾ ಶೆಟ್ಟಿ ಅವರೇ ಒಪ್ಪಿಕೊಂಡಿದ್ದು, ಹೌದು ನನ್ನ ಪತಿ ರಾಜ್ ಕುಂದ್ರಾ ನನನ್ನು ಬಿಬಿಸಿ ಎಂದು ಕರೆಯುತ್ತಾರೆ. ಬಿಬಿಸಿ ಎಂದರೆ ಬೇರೆ ಅರ್ಥ ಏನೂ ಇಲ್ಲ ಬಿಬಿಸಿ ಎಂದರೆ ಕಂಪ್ಯೂಟರ್ ಬರುವುದಕ್ಕೆ ಮುಂಚೆ ಹುಟ್ಟಿರುವವರು (ಬಾರ್ನ್ ಬಿಫೋರ್ ಕಂಪ್ಯೂಟರ್) ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

    ಇತ್ತೀಚೆಗೆ ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ದಿ ಕಪಿಲ್ ಶರ್ಮಾ ಶೋನಲ್ಲಿ ಈ ವಿಚಾರವನ್ನು ಶಿಲ್ಪಾ ಹಂಚಿಕೊಂಡಿದ್ದಾರೆ. ನನ್ನ ಪತಿ ನನ್ನನ್ನು ಬಿಬಿಸಿ ಎಂಬ ಹೆಸರಿನಿಂದ ಕರೆಯುತ್ತಾರೆ. ಯಾಕೆಂದರೆ ನಾನು ತಂತ್ರಜ್ಞಾನವನ್ನು ಬಳಕೆ ಮಡುವುದರಲ್ಲಿ ಸ್ವಲ್ಪ ಹಿಂದೆ ಇದ್ದೇನೆ. ಆದರಿಂದ ನನ್ನನ್ನು ರಾಜ್ ಕುಂದ್ರಾ ಬಾರ್ನ್ ಬಿಫೋರ್ ಕಂಪ್ಯೂಟರ್ ಎಂದು ಕರೆಯುತ್ತಾರೆ ಎಂದು ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ.

    ಈ ವೇಳೆ ಈ ಶೋನಲ್ಲಿ ಇದ್ದ ನಟಿ ಅರ್ಚನಾ ಪುರಾನ್ ಸಿಂಗ್ ಅವರು, ನಿಮಗೆ ತಂತ್ರಜ್ಞಾನವನ್ನು ಬಳಸಲು ಬರಲ್ಲ ಎಂದು ಹೇಳುತ್ತೀರಿ. ಆದರೆ ಯಾವಗಲೂ ಇನ್‍ಸ್ಟಾಗ್ರಾಮ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಎಂದು ಶಿಲ್ಪಾ ಅವರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಶಿಲ್ಪಾ ಸಾಮಾಜಿಕ ಜಾಲತಾಣವನ್ನು ಉಪಯೋಗಿಸಲು ಬೇಸಿಕ್ ಮಾಹಿತಿ ಇದ್ದರೆ ಸಾಕು ಅದಕ್ಕೆ ಹೆಚ್ಚು ಶ್ರಮ ಹಾಕಬೇಕಿಲ್ಲ ಎಂದಿದ್ದಾರೆ.

    ಆದರೆ ಸಾಮಾಜಿಕ ಜಾಲತಾಣವನ್ನು ಉಪಯೋಗಿಸುವಷ್ಟು ಸುಲಭದಲ್ಲಿ ಇಂಟರ್ ನೆಟ್‍ನಲ್ಲಿ ಬೇರೆ ಕೆಲಸ ಮಾಡಲು ನನಗೆ ಬರುವುದಿಲ್ಲ. ಉದಾಹರಣೆಗೆ ನನ್ನ ಮಕ್ಕಳ ಹೋಮ್‍ವರ್ಕ್ ಅನ್ನು ಶಾಲೆಯವರು ನಮಗೆ ಮೇಲ್ ಮಾಡುತ್ತಾರೆ. ನನಗೆ ಅದನ್ನು ತೆಗೆದು ಓದಿ ಅದನ್ನು ಪ್ರಿಂಟ್‍ಔಟ್ ತೆಗೆಯುವ ಕೆಲಸ ಸಖತ್ ಬೇಸರ ತರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಪೆನ್, ಬುಕ್‍ಗಳನ್ನು ಯಾರೂ ಬಳುಸುತ್ತಿಲ್ಲ. ಬದಲಿಗೆ ಮೇಲ್, ಪಿಡಿಎಫ್ ಎಂಬ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಿಲ್ಪಾ ಹೇಳಿದ್ದಾರೆ.

    ಆಗ ಮಾತನಾಡಿದ ಅರ್ಚನಾ ಪುರಾನ್ ಸಿಂಗ್ ನನ್ನ ಮಗಳು ಬೆಳೆಯುತ್ತಿದ್ದಾಳೆ. ನಾನು ಕೂಡ ಈ ರೀತಿಯ ಸಂದರ್ಭಕ್ಕೆ ಸಿದ್ಧವಾಗಬೇಕು ಎಂದು ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ಕಪಿಲ್, ನನಗೆ ಮಕ್ಕಳ ಹೋಮ್‍ವರ್ಕ್ ಅನ್ನು ಪೋಷಕರ ಮೇಲ್‍ಗೆ ಕಳುಹಿಸುತ್ತಾರೆ ಎಂದರೆ ನನಗೆ ನಂಬಲಾಗುತ್ತಿಲ್ಲ. ಹಾಗಾದರೆ ಮೇಲ್ ಐಡಿ ಇಲ್ಲದ ಪೋಷಕರ ಕಥೆ ಏನು ಎಂದು ಹಾಸ್ಯ ಮಾಡಿದ್ದಾರೆ.

    ಸ್ವಲ್ಪ ಸಮಯದಿಂದ ಚಿತ್ರಲೋಕದಿಂದ ದೂರ ಇದ್ದ ಶಿಲ್ಪಾ ಶೆಟ್ಟಿ ಬೆಳ್ಳಿ ತೆರೆ ಮೇಲೆ ಬರಲು ಸಿದ್ಧವಾಗಿದ್ದಾರೆ. ಅವರ ನಟನೆಯ ಹಂಗಾಮಾ-2 ಮತ್ತು ನಿಕಮ್ಮಾ ಸಿನಿಮಾಗಳು ಬಿಡುಗಡೆಗೆ ಸಿದ್ಧಗೊಳ್ಳುತ್ತಿವೆ.