Tag: Nagpur Violence

  • ಮಹಾರಾಷ್ಟ್ರದಲ್ಲಿ ಔರಂಗಜೇಬ್‌ ಸಮಾಧಿ ಧ್ವಂಸಕ್ಕೆ ಒತ್ತಾಯ; ಏನಿದು ವಿವಾದ – ಮುನ್ನೆಲೆಗೆ ಬಂದಿದ್ಯಾಕೆ?

    ಮಹಾರಾಷ್ಟ್ರದಲ್ಲಿ ಔರಂಗಜೇಬ್‌ ಸಮಾಧಿ ಧ್ವಂಸಕ್ಕೆ ಒತ್ತಾಯ; ಏನಿದು ವಿವಾದ – ಮುನ್ನೆಲೆಗೆ ಬಂದಿದ್ಯಾಕೆ?

    ಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿ (Aurangzeb Tomb) ಮತ್ತೊಮ್ಮೆ ರಾಜಕೀಯ ಮತ್ತು ಸೈದ್ಧಾಂತಿಕ ಘರ್ಷಣೆಯ ವಿಷಯವಾಗಿದೆ. ನಾಗ್ಪುರದಲ್ಲಿ (Nagpur Violence) ಕೆಲ ದಿನಗಳ ಹಿಂದೆ ಭುಗಿಲೆದ್ದಿದ್ದ ಹಿಂಸಾಚಾರ ಬೂದಿ ಮುಚ್ಚಿದ ಕೆಂಡದಂತಿದೆ. ಸೋಮವಾರ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಹಲವಾರು ಮನೆಗಳು, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ವೇಳೆ ಅನೇಕ ಜನರು ಮತ್ತು ಪೊಲೀಸರು ಗಾಯಗೊಂಡಿದ್ದಾರೆ. ನಾಗ್ಪುರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, 50 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಔರಂಗಜೇಬನ ಸಮಾಧಿಯನ್ನು ಕೆಡವಲು ಒತ್ತಾಯಿಸಿ ಹಿಂದೂ ರಾಷ್ಟ್ರೀಯವಾದಿ ಗುಂಪುಗಳಾದ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ‘ಕುರಾನ್’ ಸುಟ್ಟು ಹಾಕಲಾಗಿದೆ ಎಂಬ ವದಂತಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿತ್ತು.

    ಔರಂಗಜೇಬನ ಸಮಾಧಿ ಈಗ ಮುನ್ನೆಲೆಗೆ ಬಂದಿದ್ಯಾಕೆ? ಸಮಾಧಿ ತೆರವಿಗೆ ಒತ್ತಾಯ ಏಕೆ? ಹಿಂಸಾಚಾರದ ಹಿಂದಿನ ಕಾರಣಗಳೇನು?

    ನಾಗ್ಪುರ ಪ್ರತಿಭಟನೆಗೆ ಕಾರಣ ಏನು?
    ಬಾಲಿವುಡ್‌ನಲ್ಲಿ ಐತಿಹಾಸಿಕ ಸಿನಿಮಾ ‘ಛಾವಾ’ (Chhaava) ಫೆಬ್ರವರಿಯಲ್ಲಿ ರಿಲೀಸ್ ಆಯಿತು. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್ ಖನ್ನಾ ಅವರು ಕ್ರಮವಾಗಿ ಛತ್ರಪತಿ ಶಿವಾಜಿ, ಮಹಾರಾಣಿ ಯೆಸುಬಾಯಿ ಮತ್ತು ಮೊಘಲ್ ಚಕ್ರವರ್ತಿ ಔರಂಗಜೇಬ್ ಪಾತ್ರದಲ್ಲಿ ನಟಿಸಿದ್ದಾರೆ. ಛಾವಾ ಸಿನಿಮಾವು ‘ಔರಂಗಜೇಬ್’ ವಿರುದ್ಧ ಶಿವಾಜಿಯ ಹೋರಾಟ ಮತ್ತು ಮೊಘಲ್ ಚಕ್ರವರ್ತಿಯಿಂದ ಮರಣದಂಡನೆಗೆ ಗುರಿಯಾಗುವ ಇತಿಹಾಸದ ಸನ್ನಿವೇಶವನ್ನು ಪ್ರತಿಬಿಂಬಿಸಿದೆ. ಸಿನಿಮಾದಲ್ಲಿನ ಭಾವನಾತ್ಮಕ ನಿರೂಪಣೆಯು ಔರಂಗಜೇಬನ ಸಮಾಧಿ ತೆರವುಗೊಳಿಸಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಗೆ ಪ್ರೇರಣೆಯಾಗಿದೆ.

    ಸಿನಿಮಾದ ನಿರೂಪಣೆ ಮತ್ತು ಯಶಸ್ಸು ಮಹಾರಾಷ್ಟ್ರದಲ್ಲಿ ಪ್ರತಿಭಟನೆಯನ್ನು ಹುಟ್ಟುಹಾಕಿದೆ. ರಾಜ್ಯದ ಅತ್ಯಂತ ಪ್ರಸಿದ್ಧ ಐತಿಹಾಸಿಕ ವ್ಯಕ್ತಿಯೊಬ್ಬರನ್ನು ಗಲ್ಲಿಗೇರಿಸಿದ ಮೊಘಲ್ ಚಕ್ರವರ್ತಿಯ ಸಮಾಧಿಯನ್ನು ಸಂರಕ್ಷಿಸಬಾರದು ಎಂದು ಹಿಂದೂಪರ ಸಂಘಟನೆಗಳು ವಾದಿಸಿವೆ. ಕೊಲ್ಲಾಪುರದಲ್ಲಿ ಬಜರಂಗದಳ ಕಾರ್ಯಕರ್ತರು ಔರಂಗಜೇಬನ ಸಮಾಧಿಯ ಪ್ರತಿಕೃತಿಯನ್ನು ಸುತ್ತಿಗೆಯಿಂದ ಒಡೆದು ಸಾಂಕೇತಿಕವಾಗಿ ಪ್ರತಿಭಟಿಸಿದರು. ಸಮಾಧಿಯನ್ನು ತೆರವುಗೊಳಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಸ್ಥಳೀಯ ಅಧಿಕಾರಿಗಳಿಗೆ ಮನವಿ ಪತ್ರ ಕೂಡ ಸಲ್ಲಿಕೆ ಮಾಡಿದ್ದಾರೆ.

    ಹಿಂದೂಪರ ಸಂಘಟನೆಗಳು ಹೇಳೋದೇನು?
    ಔರಂಗಜೇಬ್ ಭಾರತೀಯ ಇತಿಹಾಸದಲ್ಲಿ ಅತ್ಯಂತ ದಬ್ಬಾಳಿಕೆಯ ಆಡಳಿತಗಾರರಲ್ಲಿ ಒಬ್ಬ. ದೇವಾಲಯಗಳ ನಾಶ, ಬಲವಂತದ ಮತಾಂತರಗಳು ಮತ್ತು ಮರಾಠ ಯೋಧರ ಮರಣದಂಡನೆಗೆ ಕಾರಣನಾಗಿದ್ದ ಎಂದು ಹಿಂದೂಪರ ಸಂಘಟನೆಗಳ ವಾದವಾಗಿದೆ. ಆತನ ಸಮಾಧಿಯನ್ನು ಸಂರಕ್ಷಿಸುವುದು ಮರಾಠ ಯೋಧರ ತ್ಯಾಗಕ್ಕೆ ಮಾಡಿದ ಅಪಮಾನ ಎಂದು ಹೇಳಿದ್ದಾರೆ. ‘ಔರಂಗಜೇಬನ ಸಾಂಕೇತಿಕ ಸಮಾಧಿಯನ್ನು ಸಹ ನಾವು ಸಹಿಸಲಾಗದಿದ್ದರೆ, ಮಹಾರಾಷ್ಟ್ರದಲ್ಲಿ ನಿಜವಾದ ಸಮಾಧಿ ಅಸ್ತಿತ್ವದಲ್ಲಿರಲು ನಾವು ಏಕೆ ಬಿಡಬೇಕು? ಸರ್ಕಾರ ಅದನ್ನು ತಕ್ಷಣವೇ ತೆಗೆದುಹಾಕಬೇಕು’ ಎಂದು ಒತ್ತಾಯಿಸಿದ್ದಾರೆ. ಔರಂಗಾಬಾದ್ (ಈಗ ಛತ್ರಪತಿ ಸಂಭಾಜಿನಗರ), ಪುಣೆ ಮತ್ತು ನಾಸಿಕ್‌ನಲ್ಲಿಯೂ ಸಹ ಇದೇ ರೀತಿಯ ಬೇಡಿಕೆಗಳನ್ನು ಎತ್ತಲಾಗಿದೆ.

    ಔರಂಗಜೇಬ್ ಬಗ್ಗೆ ಇತಿಹಾಸದಲ್ಲೇನಿದೆ?
    ಮೊಘಲ್ ಸಾಮ್ರಾಜ್ಯದ 6ನೇ ಚಕ್ರವರ್ತಿಯಾಗಿದ್ದ ಔರಂಗಜೇಬ್ 1659-1707ರ ವರೆಗೆ 49 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದ. ಸಾಮ್ರಾಜ್ಯ ವಿಸ್ತರಣಾವಾದಿಯಾಗಿದ್ದ. ಕಟ್ಟಾ ಮುಸ್ಲಿಮನಾಗಿದ್ದ ಔರಂಗಜೇಬ್ ಹಿಂದೂ ವಿರೋಧಿಯಾಗಿದ್ದ. ಅಕ್ಬರನ ಕಾಲದಲ್ಲಿದ್ದ ಜಾತ್ಯತೀತ ತತ್ವಗಳನ್ನು ಬದಿಗೆ ತಳ್ಳಿ ಆಡಳಿತ ನಡೆಸಿದ್ದ. ಈತನ ಆಡಳಿತದಲ್ಲಿ ಧರ್ಮ ಅಸಹಿಷ್ಣುತೆ ತಾಂಡವವಾಡುತ್ತಿತ್ತು. ಔರಂಗಜೇಬ್ ಉತ್ತಮ ಆಡಳಿತಗಾರನೂ ಆಗಿದ್ದ. ಇವನ ಕಾಲದಲ್ಲಿ ಮೊಘಲ್ ಸಾಮ್ರಾಜ್ಯ ತನ್ನ ಉಚ್ಛಾçಯ ಸ್ಥಿತಿ ತಲುಪಿತ್ತು. ಈತನ ನಿಧನಾನಂತರ ಮೊಘಲ್ ಸಂತತಿ ತನ್ನ ಅವನತಿಯನ್ನು ಕಂಡಿತು.

    ನನ್ನ ಸಮಾಧಿ ಇಲ್ಲೇ ಆಗಬೇಕು ಅಂತ ಹೇಳಿದ್ದ ಔರಂಗಜೇಬ್
    ಔರಂಗಜೇಬ್ ತನ್ನ ಪೂರ್ವಜರಿಗಿಂತ ಭಿನ್ನವಾಗಿ ಆಡಳಿತ ನಡೆಸಲು ಮುಂದಾದ. ಮರಾಠರ ವಿರುದ್ಧ ಹೋರಾಡುತ್ತಾ, ಬೆಳೆಯುತ್ತಿರುವ ಶಕ್ತಿಯನ್ನು ಹತ್ತಿಕ್ಕಲು ಪ್ರಯತ್ನಿಸಿ ವಿಫಲನಾದ. ಸುದೀರ್ಘ ಯುದ್ಧವು ಮೊಘಲ್ ಖಜಾನೆಯನ್ನು ಬರಿದುಮಾಡಿತು. ಸಾಮ್ರಾಜ್ಯವನ್ನು ದುರ್ಬಲಗೊಳಿಸಿತು. ಮರಣಕ್ಕೂ ಮೊದಲು ಔರಂಗಜೇಬನು ಖುಲ್ದಾಬಾದ್‌ನಲ್ಲಿ, ಸೂಫಿ ಸಂತ ಶೇಖ್ ಜೈನುದ್ದೀನ್‌ನ ದರ್ಗಾದ ಬಳಿ ಸಮಾಧಿ ಮಾಡಬೇಕೆಂದು ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದ್ದ. ತನ್ನ ಮಾರ್ಗದರ್ಶಿ ಶಕ್ತಿಗಳಾಗಿದ್ದ ಅಕ್ಬರ್ ಮತ್ತು ಹುಮಾಯೂನ್ ಅವರ ಭವ್ಯ ಸಮಾಧಿಗಳಿಗಿಂತ ನನ್ನ ಸಮಾಧಿ ಭಿನ್ನವಾಗಿರಬೇಕು ಎಂದು ಔರಂಗಜೇಬ್ ಸೂಚಿಸಿದ್ದ.

    ‘ಮಹಾ’ ಸಿಎಂ ಪ್ರತಿಕ್ರಿಯೆ ಏನು?
    ಮಹಾರಾಷ್ಟ್ರ ಯಾರನ್ನಾದರೂ ವೈಭವೀಕರಿಸಿದರೆ ಅದು ಛತ್ರಪತಿ ಶಿವಾಜಿ ಮಹಾರಾಜರೇ ಆಗರಬೇಕೇ ಹೊರತು, ಔರಂಗಜೇಬ್ ಅಲ್ಲ. ಹಿಂದೂಗಳನ್ನು ದಬ್ಬಾಳಿಕೆ ಮಾಡಿದ ಮತ್ತು ನಮ್ಮ ಪ್ರೀತಿಯ ಛತ್ರಪತಿ ಸಂಭಾಜಿ ಮಹಾರಾಜರನ್ನು ಗಲ್ಲಿಗೇರಿಸಿದ ಆಡಳಿತಗಾರನ ಸಮಾಧಿ ನಮಗೆ ಬೇಕಾಗಿಲ್ಲ. ಯಾರಾದರೂ ಔರಂಗಜೇಬ್ ಅನ್ನು ವೈಭವೀಕರಿಸಲು ಪ್ರಯತ್ನಿಸಿದರೆ, ಅಂತಹ ಪ್ರಯತ್ನಗಳನ್ನು ನಾವು ಹೊಸಕಿ ಹಾಕುತ್ತೇವೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಈ ವಿವಾದವು ಮಹಾರಾಷ್ಟ್ರದಲ್ಲಿ ರಾಜಕೀಯ ಸ್ವರೂಪಕ್ಕೆ ಕಾರಣವಾಗಿದೆ. ಔರಂಗಜೇಬ್ ಸಮಾಧಿಯನ್ನು ತೆಗೆದುಹಾಕುವ ಬೇಡಿಕೆಗೆ ಬಿಜೆಪಿ ಮತ್ತು ಶಿವಸೇನೆ (ಶಿಂಧೆ ಬಣ) ಬೆಂಬಲಿಸಿದರೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಇದನ್ನು ವಿರೋಧಿಸಿವೆ.

    ಕೋರ್ಟ್ ಮೆಟ್ಟಿಲೇರಿದ ಸಮಾಧಿ ವಿವಾದ
    ಛತ್ರಪತಿ ಸಂಭಾಜಿನಗರ ಜಿಲ್ಲೆಯ ಖುಲ್ದಾಬಾದ್‌ನಲ್ಲಿರುವ ಮೊಘಲ್ ದೊರೆ ಔರಂಗಜೇಬ್ ಸಮಾಧಿಯನ್ನು ಧ್ವಂಸಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿದೆ. ರಾಷ್ಟ್ರೀಯ ಸ್ಮಾರಕಗಳ ಪಟ್ಟಿಯಿಂದ ಈ ಸಮಾಧಿ ಹೆಸರನ್ನು ಕೈಬಿಡುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

    2022ರಲ್ಲೂ ನಡೆದಿತ್ತು ಧ್ವಂಸ ಯತ್ನ
    ಮಹಾರಾಷ್ಟ್ರ ಪೊಲೀಸರು ಔರಂಗಜೇಬ್ ಸಮಾಧಿಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಅಧಿಕಾರಿಗಳು ಬ್ಯಾರಿಕೇಡ್‌ಗಳನ್ನು ಹಾಕಿದ್ದು, ವಾಹನ ಸಂಚಾರವನ್ನು ನಿರ್ಬಂಧಿಸಿದ್ದಾರೆ. ವಿಧ್ವಂಸಕತೆ, ಹಿಂಸಾಚಾರವನ್ನು ತಡೆಯಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಸಮಾಧಿಗೆ ಅಪಾಯ ಎದುರಾಗಿರುವುದು ಇದೇ ಮೊದಲಲ್ಲ. 2022ರ ಮೇ ತಿಂಗಳಲ್ಲಿ ಬಲಪಂಥೀಯ ಗುಂಪು ಸಮಾಧಿಯನ್ನು ಧ್ವಂಸಗೊಳಿಸಲು ಯತ್ನಿಸಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇದನ್ನು ತಾತ್ಕಾಲಿಕವಾಗಿ ಮುಚ್ಚಿತ್ತು. ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದ ನಂತರ ಮತ್ತೆ ತೆರೆಯಲಾಯಿತು. ಕಳೆದ ಕೆಲವು ವರ್ಷಗಳಿಂದ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಹಲವು ಹಿಂಸಾಚಾರಗಳು ವರದಿಯಾಗಿವೆ. ಎರಡು ವರ್ಷಗಳ ಹಿಂದೆ, ಕೊಲ್ಲಾಪುರ ನಗರದ ಸಮೀಪವಿರುವ ಮುಸ್ಲಿಂ ಕುಟುಂಬದ ಮನೆಯನ್ನು ಸುಟ್ಟು ಹಾಕಲಾಗಿತ್ತು. ಕುಟುಂಬದ ಅಪ್ರಾಪ್ತ ಬಾಲಕ ಔರಂಗಜೇಬ್ ಅನ್ನು ವೈಭವೀಕರಿಸುವ ವೀಡಿಯೊವನ್ನು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಅಪ್ಲೋಡ್ ಮಾಡಿದ್ದ. ಆಗ ಕೆಲವು ಗ್ರಾಮಸ್ಥರು ಕುಟುಂಬವನ್ನು ಬಹಿಷ್ಕರಿಸಲು ಮುಂದಾಗಿದ್ದರು. ಆದರೆ, ಗ್ರಾಮದ ಹಿರಿಯರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

    ಔರಂಗಜೇಬನ ಸಮಾಧಿಯ ಮೇಲಿನ ರಾಜಕೀಯ ಚರ್ಚೆಯು ಇಲ್ಲಿಗೆ ಮುಗಿಯುವಂತೆ ಕಾಣುತ್ತಿಲ್ಲ. ಸದ್ಯಕ್ಕೆ, ಈ ವಿಷಯವು ಆಳವಾದ ಭಾವನಾತ್ಮಕ, ರಾಜಕೀಯ ಮತ್ತು ಮಹಾರಾಷ್ಟ್ರದ ಮರಾಠ ಪರಂಪರೆಯೊಂದಿಗೆ ಹೆಣೆದುಕೊಂಡಿದೆ. ‘ಛಾವಾ’ ಸಿನಿಮಾ ಮಹಾರಾಷ್ಟ್ರದಲ್ಲಿ ಹಿಂದೂ ರಾಷ್ಟ್ರೀಯವಾದಿ ಭಾವನೆಯನ್ನು ಪ್ರೇರೇಪಿಸಿದೆ. ಔರಂಗಜೇಬನ ಸಮಾಧಿ ವಿಚಾರವು ಮುಂದಿನ ದಿನಗಳಲ್ಲಿ ರಾಜಕೀಯ ಭಾಷಣದ ವಿಷಯವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

  • ನಾಗ್ಪುರ ಹಿಂಸಾಚಾರ – ಮಾಸ್ಟರ್‌ಮೈಂಡ್ ಫಹೀಮ್ ಖಾನ್ ಬಂಧನ

    ನಾಗ್ಪುರ ಹಿಂಸಾಚಾರ – ಮಾಸ್ಟರ್‌ಮೈಂಡ್ ಫಹೀಮ್ ಖಾನ್ ಬಂಧನ

    ನಾಗ್ಪುರ: ಮಾರ್ಚ್ 17 ರಂದು ಭುಗಿಲೆದ್ದ ಹಿಂಸಾಚಾರದ ಮಾಸ್ಟರ್‌ಮೈಂಡ್ ಎಂದು ಆರೋಪಿಸಲಾಗಿರುವ ಫಹೀಮ್ ಶಮೀಮ್ ಖಾನ್ (Fahim Shamim Khan) ಎಂಬಾತನನ್ನು ನಾಗಪುರ ಪೊಲೀಸರು (Nagpur Police) ಬಂಧಿಸಿದ್ದಾರೆ. ಮೈನಾರಿಟೀಸ್ ಡೆಮೋಕ್ರಟಿಕ್ ಪಾರ್ಟಿಯ (MDP) ನಗರ ಅಧ್ಯಕ್ಷನಾಗಿರುವ ಫಹೀಮ್, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

    ಪೊಲೀಸರು ಫಹೀಮ್ ಖಾನ್‌ನ ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಗಣೇಶ್‌ಪೇಠ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಫಹೀಮ್ ಖಾನ್‌ನ ಹೆಸರು ಸೇರ್ಪಡೆಯಾಗಿದ್ದು, ಹಿಂಸಾಚಾರ ಪ್ರಾರಂಭವಾಗುವ ಕೆಲವೇ ಕ್ಷಣಗಳ ಮೊದಲು ಆತ ಭಾವನಾತ್ಮಕ ಭಾಷಣವೊಂದನ್ನು ಮಾಡಿರುವ ವೀಡಿಯೋ ಸಾಕ್ಷ್ಯವೊಂದು ಪೊಲೀಸರ ಕೈಗೆ ಸಿಕ್ಕಿದೆ. ಈ ಭಾಷಣವೇ ಎರಡು ಸಮುದಾಯಗಳ ನಡುವಿನ ಘರ್ಷಣೆಗೆ ಕಾರಣವಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮದ ಆಧಾರದಲ್ಲಿ ಶೇ.4ರಷ್ಟು ಹೊಸ ಮೀಸಲಾತಿ ನೀಡುವುದು ಕಾನೂನುಬಾಹಿರ – ಬಿಜೆಪಿ ವಿರೋಧ

    38 ವರ್ಷದ ಫಹೀಮ್ ಖಾನ್, ಯಶೋಧರ ನಗರದ ಸಂಜಯ್ ಬಾಗ್ ಕಾಲೊನಿಯ ನಿವಾಸಿಯಾಗಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ನಾಗ್ಪುರ ಕ್ಷೇತ್ರದಿಂದ ಎಂಡಿಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಸ್ಪರ್ಧಿಸಿದ ಈತ 6.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದ. ಇದನ್ನೂ ಓದಿ: ಹಿಂದೂ ಯುವತಿ ಹತ್ಯೆ ಕೇಸ್‌ – ಸ್ವಾತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ

    ಬಂಧಿತ ಫಹೀಮ್ ಖಾನ್‌ನನ್ನು ಮಾರ್ಚ್ 21 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ನಗರದಲ್ಲಿ ಶಾಂತಿ ಸ್ಥಾಪಿಸಲು ಕರ್ಫ್ಯೂ ಜಾರಿಯಲ್ಲಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮುಂದುವರೆದಿದೆ. ಪೊಲೀಸರು ಘಟನೆಯ ತನಿಖೆಯನ್ನು ತೀವ್ರಗೊಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ವಿಡಿಯೋಗಳು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: IPL ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ ಬಾಲಿವುಡ್‌ ತಾರೆಯರು

    ಔರಂಗಜೇಬ್ ಅಪ್ರಸುತ್ತ ಎಂದ ಆರ್‌ಎಸ್‌ಎಸ್:
    ಹಿಂಸಾಚಾರದ ಬಗ್ಗೆ ಮಾತನಾಡಿದ ಸುನೀಲ್ ಅಂಬೇಕರ್, ಔರಂಗಜೇಬ್ ಇಂದಿನ ದಿನಗಳಲ್ಲಿ ಪ್ರಸ್ತುತವಲ್ಲ, ಯಾವುದೇ ರೀತಿಯ ಹಿಂಸಾಚಾರವು ಸಮಾಜದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ. ಈ ಹೇಳಿಕೆಯ ಮೂಲಕ ಆರ್‌ಎಸ್‌ಎಸ್ ಹಿಂಸಾಚಾರವನ್ನು ಖಂಡಿಸುವ ಜೊತೆಗೆ ಈ ವಿವಾದದಲ್ಲಿ ಶಾಂತಿಯ ಮಾರ್ಗವನ್ನು ಸೂಚಿಸಿದೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಬಿಲ್‌ಗೆ ಸಹಿ ಹಾಕಬೇಡಿ – ರಾಜ್ಯಪಾಲರ ಭೇಟಿ ಮಾಡಿ, ಮನವಿ ಸಲ್ಲಿಸಿದ ಬಿಜೆಪಿ

  • ನಾಗ್ಪುರ ಹಿಂಸಾಚಾರವು ಆಕಸ್ಮಿಕವಲ್ಲ, ಪೂರ್ವ ಯೋಜಿತ ದಾಳಿ – ʻಮಹಾʼ ಸಿಎಂ ದೇವೇಂದ್ರ ಫಡ್ನವೀಸ್

    ನಾಗ್ಪುರ ಹಿಂಸಾಚಾರವು ಆಕಸ್ಮಿಕವಲ್ಲ, ಪೂರ್ವ ಯೋಜಿತ ದಾಳಿ – ʻಮಹಾʼ ಸಿಎಂ ದೇವೇಂದ್ರ ಫಡ್ನವೀಸ್

    ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಹಿಂಸಾಚಾರ (Nagpur violence) ಘಟನೆಯು ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಈ ಘಟನೆಯ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಅವರಿಂದು ವಿಧಾನಸಭೆಯಲ್ಲಿ ಮಾತನಾಡಿದ್ದು, ಈ ಹಿಂಸಾಚಾರವು ಆಕಸ್ಮಿಕವಾಗಿ ನಡೆದಿಲ್ಲ. ಇದು ಪೂರ್ವ ಯೋಜಿತ ದಾಳಿ ಎಂದು ಆರೋಪಿಸಿದ್ದಾರೆ.

    ನಾಗ್ಪುರದ ಮಹಾಲ್ ಪ್ರದೇಶದಲ್ಲಿರುವ ಔರಂಗಜೇಬ್ ಸಮಾಧಿಯನ್ನು ತೆಗೆದುಹಾಕಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗ ದಳದ ಸದಸ್ಯರು ಚತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ನಂತರ ಈ ಹಿಂಸಾಚಾರ ಭುಗಿಲೆದ್ದಿತು. ಪ್ರತಿಭಟನೆಯ ಸಂದರ್ಭದಲ್ಲಿ ಮುಸ್ಲಿಂ ಧಾರ್ಮಿಕ ಗ್ರಂಥ ಕುರಾನ್‌ ಅನ್ನು ಸುಟ್ಟು ಹಾಕಲಾಗಿದೆ ಎಂಬ ವದಂತಿಗಳು ಹರಡಿದ್ದವು. ಇದು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಈ ಘಟನೆಯಲ್ಲಿ ಪೊಲೀಸರು ಮತ್ತು ಸಾರ್ವಜನಿಕ ಆಸ್ತಿಗೆ ದಾಳಿ ನಡೆದಿದ್ದು, 33 ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

    ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡುತ್ತಾ, ಈ ದಾಳಿಯು ಸಾಮಾಜಿಕ ಸಾಮರಸ್ಯವನ್ನು ಭಂಗಗೊಳಿಸುವ ಉದ್ದೇಶದಿಂದ ನಡೆದಿದೆ. ಪೊಲೀಸರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗಿದ್ದು, ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಲಾಗಿದೆ. ಆರೋಪಿಗಳು ಯಾರೇ ಆಗಿರಲಿ, ಯಾವ ಧರ್ಮಕ್ಕೆ ಸೇರಿದವರಾಗಿರಲಿ, ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅನುಮತಿ ಇಲ್ಲ. ಶಾಂತಿ ಕಾಪಾಡುವಂತೆ ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: Aurangzeb Tomb Row| ಧರ್ಮಗ್ರಂಥ ಸುಟ್ಟ ವದಂತಿಯಿಂದ ನಾಗ್ಪುರದಲ್ಲಿ ಹಿಂಸಾಚಾರ, ಕರ್ಫ್ಯೂ ಜಾರಿ

    ಈ ಘಟನೆಯ ಹಿನ್ನೆಲೆಯಲ್ಲಿ ನಾಗ್ಪುರ ಹಲವು ಪ್ರದೇಶಗಳಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 163ರ ಅಡಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕೊತ್ವಾಲಿ, ಗಣೇಶಪೇಠ, ತಹಸೀಲ್, ಲಕಡ್‌ಗಂಜ್, ಪಚಪಾವ್ಲಿ, ಶಾಂತಿನಗರ, ಸಕ್ಕರದಾರಾ, ನಂದನವನ್, ಇಮಾಮವಾಡಾ, ಯಶೋಧರನಗರ ಮತ್ತು ಕಪಿಲನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿಷೇಧಾಜ್ಞೆ ಅನ್ವಯಿಸುತ್ತದೆ. ಪೊಲೀಸ್ ಆಯುಕ್ತ ರವೀಂದ್ರ ಕುಮಾರ್ ಸಿಂಗಲ್ ಅವರು ಈ ಆದೇಶ ಹೊರಡಿಸಿದ್ದು, ಮುಂದಿನ ಸೂಚನೆ ಬರುವವರೆಗೆ ಈ ನಿರ್ಬಂಧ ಮುಂದುವರಿಯಲಿದೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಜಡ್ಜ್ ಆಗಿ ಬಾಗ್ಚಿ ಅಧಿಕಾರ ಸ್ವೀಕಾರ – 2031ರಲ್ಲಿ ಸಿಜೆಐ ಅಗಲಿದ್ದಾರೆ ಬಾಗ್ಚಿ

    ಹಿಂಸಾಚಾರದಲ್ಲಿ ಭಾಗಿಯಾದವರನ್ನು ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿ ಹರಡುವ ಖಾತೆಗಳ ಮೇಲೆಯೂ ನಿಗಾ ಇಡಲಾಗಿದೆ. ಮಹಾರಾಷ್ಟ್ರ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಪ್ಯಾರೆ ಖಾನ್ ಅವರು, ಈ ಹಿಂಸಾಚಾರದಲ್ಲಿ ಬಾಹ್ಯ ಜನರೇ ಭಾಗಿಯಾಗಿದ್ದಾರೆ. ನಾಗ್ಪುರದ ಸಾಮರಸ್ಯವನ್ನು ಭಂಗಗೊಳಿಸಲು ಇದೊಂದು ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.

    ಪ್ರತಿಪಕ್ಷಗಳು ಈ ಘಟನೆಯನ್ನು ರಾಜ್ಯ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯ ಎಂದು ಟೀಕಿಸಿವೆ. ಕಾಂಗ್ರೆಸ್ ನಾಯಕ ರೇಣುಕಾ ಚೌಧರಿ ಅವರು ರಾಜ್ಯಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಮುಖ್ಯಮಂತ್ರಿಗಳು ತಮ್ಮ ರಾಜಧರ್ಮವನ್ನು ಪಾಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸಂವಿಧಾನ ವಿರುದ್ಧವಾಗಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟು, ಮತಬ್ಯಾಂಕ್‌ ಗಟ್ಟಿಮಾಡಿಕೊಳ್ತಿದೆ: ಬೊಮ್ಮಾಯಿ

    ಇದೇ ವೇಳೆ, ಕೇಂದ್ರ ಸಚಿವ ಮತ್ತು ನಾಗ್ಪುರ ಸಂಸದ ನಿತಿನ್ ಗಡ್ಕರಿ ಅವರು ಶಾಂತಿ ಕಾಪಾಡುವಂತೆ ಮತ್ತು ವದಂತಿಗಳನ್ನು ನಂಬದಂತೆ ಜನರಿಗೆ ಮನವಿ ಮಾಡಿದ್ದಾರೆ.

  • Aurangzeb Tomb Row| ಧರ್ಮಗ್ರಂಥ ಸುಟ್ಟ ವದಂತಿಯಿಂದ ನಾಗ್ಪುರದಲ್ಲಿ ಹಿಂಸಾಚಾರ, ಕರ್ಫ್ಯೂ ಜಾರಿ

    Aurangzeb Tomb Row| ಧರ್ಮಗ್ರಂಥ ಸುಟ್ಟ ವದಂತಿಯಿಂದ ನಾಗ್ಪುರದಲ್ಲಿ ಹಿಂಸಾಚಾರ, ಕರ್ಫ್ಯೂ ಜಾರಿ

    ಮುಂಬೈ: ಔರಂಗಜೇಬನ ಸಮಾಧಿ (Aurangzeb Tomb) ತೆರವಿಗೆ ಆಗ್ರಹಿಸಿ ವಿವಿಧ ಹಿಂದೂ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ ಕುರಾನ್‌ ಸುಟ್ಟಿದ್ದಾರೆ ಎಂದು ವದಂತಿ ಹರಡಿದ್ದರಿಂದ ನಾಗ್ಪುರದಲ್ಲಿ ಸೋಮವಾರ ರಾತ್ರಿ (ಮಾ.17) ಹಿಂಸಾಚಾರ (Nagpur Violence) ನಡೆದಿದೆ.

    ಹಿಂಸಾಚಾರದ ವೇಳೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂಸಾಚಾರ ತಡೆಗೆ ಪೊಲೀಸರು ಆಶ್ರುವಾಯು ಸಿಡಿಸಿ, ಲಾಠಿಪ್ರಹಾರ ನಡೆಸಿದ್ದಾರೆ. ಈ ವೇಳೆ ಹಲವರು ಗಾಯಗೊಂಡಿದ್ದಾರೆ.

     

    ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರುವಾಯು ಪ್ರಯೋಗಿಸಿದ ನಂತರ ಹಿಂಸಾಚಾರ ನಿಂತಿದ್ದು ಸದ್ಯ ಪರಿಸ್ಥಿತಿ ಶಾಂತವಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 163 ರ ಅಡಿಯಲ್ಲಿ ನಾಗ್ಪುರ ನಗರದ ಹಲವು ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ.

    ಕೊತ್ವಾಲಿ, ಗಣೇಶಪೇಠ, ತಹಸಿಲ್, ಲಕಡ್ಗಂಜ್, ಪಚ್ಪಾವೋಲಿ, ಶಾಂತಿನಗರ, ಸಕ್ಕರ್ದಾರ, ನಂದನ್ವನ್, ಇಮಾಮ್ವಾಡ, ಯಶೋಧರನಗರ ಮತ್ತು ಕಪಿಲ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಯಾಗಿದೆ.

    ಹಿಂಸಾಚಾರ ನಡೆದ ಬೆನ್ನಲ್ಲೇ ಸಿಎಂ ದೇವೇಂದ್ರ ಫಡ್ನವೀಸ್ (Devendra Fadnavis) ಶಾಂತಿಗಾಗಿ ಮನವಿ ಮಾಡಿದ್ದಾರೆ. ನಾಗ್ಪುರವು ಶಾಂತಿಯುತ ನಗರವಾಗಿದ್ದು, ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ.

     

     

    ಪ್ರತಿಭಟನೆ ನಡೆಸಿದ್ದು ಯಾಕೆ?
    ಔರಂಗಜೇಬ್‌ ನೋವು ಮತ್ತು ಗುಲಾಮಗಿರಿಯ ಸಂಕೇತ. ಹೀಗಾಗಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬ್‌ ಸಮಾಧಿಯನ್ನು ತೆರವುಗೊಳಿಸಬೇಕು ಎಂದು ವಿಎಚ್‌ಪಿ (VHP) ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಸೋಮವಾರ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಸಿದ್ದವು.

    ನಾಗ್ಪುರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಂಘಟನೆಗಳು ಬಾಬ್ರಿ ಮಸೀದಿಯನ್ನು ಉರುಳಿಸಿದಂತೆ ಔರಂಗಜೇಬ್ ಸಮಾಧಿಯನ್ನು ಉರಳಿಸುತ್ತೇವೆ. ಸರ್ಕಾರ ಈ ವಿವಾದಾತ್ಮಕ ಔರಂಗಜೇಬ್ ಸಮಾಧಿ ತೆರವು ಮಾಡದಿದ್ದರೆ ನಾವೇ ತೆರವು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದವು.

    ಬಿಗಿ ತಪಾಸಣೆ:
    ಹಿಂದೂ ಸಂಘಟನೆಗಳಿಂದ ಸಮಾಧಿ ತೆರವಿಗೆ ಆಗ್ರಹ ಕೇಳಿಬಂದ ಬೆನ್ನಲ್ಲೇ ಸಮಾಧಿ ಸುತ್ತಮುತ್ತ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಸಮಾಧಿಗೆ ಭೇಟಿ ನೀಡುವವರ ನೋಂದಣಿ, ಗುರುತಿನ ಚೀಟಿ ಪರಿಶೀಲನೆ ಕಡ್ಡಾಯಗೊಳಿಸಿದೆ.