Tag: Nadahalli

  • ಮೈತ್ರಿ ಸರ್ಕಾರ ಸತ್ತೋಗಿದೆ, ವೈದ್ಯರು ಘೋಷಿಸಿದ್ದಾರೆ, ಡೆಡ್‍ಬಾಡಿ ವಾಸನೆ ಬರ್ತಿದೆ- ನಡಹಳ್ಳಿ

    ಮೈತ್ರಿ ಸರ್ಕಾರ ಸತ್ತೋಗಿದೆ, ವೈದ್ಯರು ಘೋಷಿಸಿದ್ದಾರೆ, ಡೆಡ್‍ಬಾಡಿ ವಾಸನೆ ಬರ್ತಿದೆ- ನಡಹಳ್ಳಿ

    ಬೆಂಗಳೂರು: ಈ ಸರ್ಕಾರ ಸತ್ತು ಹೋಗಿ ಬಹಳ ದಿನಗಳಾಗಿದೆ. ಇದನ್ನು ವೆಂಟಿಲೇಟರ್ ಮೇಲೆ ಇಟ್ಟಿದ್ದಾರೆ. ಜೀವ ಹೋಗಿದೆ ಎಂದು ವೈದ್ಯರು ಕೂಡ ಘೋಷಿಸಿ ಆಗಿದೆ ಎಂದು ಬಿಜೆಪಿ ಶಾಸಕ ನಡಹಳ್ಳಿ ಅವರು ದೋಸ್ತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾನ್ಯ ಸಿಎಂ ಅವರು ಬಹುಮತವನ್ನು ಕಳೆದುಕೊಂಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಗೊಂದಲ ಏರ್ಪಟ್ಟಿದೆ ಎಂದು ಅವರೇ ಹೇಳಿದ್ದಾರೆ. ಆದರೆ ಅವರು ತಕ್ಷಣ ರಾಜೀನಾಮೆ ನೀಡಬೇಕಿತ್ತು ಅಥವಾ ವಿಶ್ವಾಸ ಮತಯಾಚನೆ ಕೇಳಬೇಕು ಎಂದಿದ್ದರೆ ಶುಕ್ರವಾರವೇ ಕೇಳಬೇಕಿತ್ತು. ಆದರೆ ನಾನು ಬುಧವಾರ, ಗುರುವಾರ ಕೇಳುತ್ತೇನೆ ಎಂಬುದನ್ನು ಬಿಟ್ಟು ಸೋಮವಾರವೇ ವಿಶ್ವಾಸ ಮತಯಾಚನೆ ಕೇಳಲಿ ನಾವೆಲ್ಲ ತಯಾರಾಗಿದ್ದೇವೆ ಎಂದರು.

    ಈ ಸರ್ಕಾರ ಸತ್ತು ಹೋಗಿ ಬಹಳ ದಿನವಾಗಿದೆ. ಇದನ್ನು ವೆಂಟಿಲೇಟರ್ ಮೇಲೆ ಇಟ್ಟಿದ್ದಾರೆ. ಜೀವ ಹೋಗಿದೆ ಎಂದು ವೈದ್ಯರು ಘೋಷಿಸಿ ಆಗಿದೆ. ಇನ್ನೇನಿದ್ದರೂ ಸಂಬಂಧಿಕರು ಬರುತ್ತಾರೆ ಇರಿ, ಸ್ವಲ್ಪ ಇರಿ ಎಂದು ಸ್ಪೀಕರ್ ಮೂಲಕ ಡೆಡ್ ಬಾಡಿಯನ್ನು ಇಟ್ಟುಕೊಂಡಿದ್ದಾರೆ. ಸ್ಪೀಕರ್ ಕೂಡ ಈ ಸರ್ಕಾರ ಸತ್ತೋಗಿದೆ ಎಂದಿದ್ದಾರೆ. ಆದರೆ ವೆಂಟಿಲೇಟರ್ ತೆಗೆಯಬೇಡಿ ಎಂದು ಸ್ಪೀಕರ್ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಸರ್ಕಾರದ ಬಗ್ಗೆ ನಡಹಳ್ಳಿ ವ್ಯಂಗ್ಯವಾಡಿದ್ದಾರೆ.

    ನಮ್ಮ ಸಂಬಂಧಿಕರು ಮುಂಬೈನಲ್ಲಿದ್ದಾರೆ ಬರುತ್ತಾರೆ ಎಂದು ಈ ಸರ್ಕಾರವನ್ನು ಇರಿಸಿಕೊಂಡಿದ್ದಾರೆ. ಆದರೆ ಈ ಸರ್ಕಾರದ ಸತ್ತಿರುವ ಡೆಡ್‍ಬಾಡಿಯ ವಾಸನೆ ಇಡೀ ರಾಜ್ಯದ 6.5 ಕೋಟಿಯ ಮನೆಯವರ ಬಾಗಿಲಿಗೆ ಹೋಗಿ ಮೂಗಿಗೆ ಹೊಡೆಯುತ್ತಿದೆ. ಈಗಾಗಲೇ ಸರ್ಕಾರ ಸತ್ತು ಆರು ದಿನವಾಗಿದೆ. ದಯವಿಟ್ಟು ಈ ಸತ್ತು ಹೋಗಿರುವ ಡೆಡ್‍ಬಾಡಿಯ ವಾಸನೆ ಎಲ್ಲ ಕಡೆ ಹರಡಲು ಬಿಡಬೇಡಿ. ವೆಂಟಿಲೇಟರ್ ಅನ್ನು ಸೋಮವಾರ ಬೆಳಗ್ಗೆ 10 ಗಂಟೆಗೆ ತೆಗೆಯಿರಿ ಎಂದು ಸ್ಪೀಕರ್ ಬಳಿ ನಡಹಳ್ಳಿ ಮನವಿ ಮಾಡಿಕೊಂಡಿದ್ದಾರೆ.

  • ನಡಹಳ್ಳಿ ಸೋಲಿಸುವುದೇ ನನ್ನ ಗುರಿ-ಬಿಜೆಪಿ ಟಿಕೆಟ್ ವಂಚಿತೆ ಮಂಗಳಾದೇವಿ

    ನಡಹಳ್ಳಿ ಸೋಲಿಸುವುದೇ ನನ್ನ ಗುರಿ-ಬಿಜೆಪಿ ಟಿಕೆಟ್ ವಂಚಿತೆ ಮಂಗಳಾದೇವಿ

    ವಿಜಯಪುರ: ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ವಲಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಂಗಳಾದೇವಿಯವರು ಪಕ್ಷದ ನಾಯಕರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಅವರು ತಮಗೇ ಕೊಟ್ಟ ಮಾತನ್ನು ತಪ್ಪಿದ್ದಾರೆ. ಜಿಲ್ಲೆಗೆ ಒಬ್ಬ ಮಹಿಳಾ ಅಭ್ಯರ್ಥಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ತಿಳಿಸಿದ್ದರು. ಅವರ ಆಶ್ವಾಸನೆ ಮೇರೆಗೆ 2004 ರಿಂದಲೂ ಸತತವಾಗಿ ದುಡಿದು ಪಕ್ಷವನ್ನು ಬಲಪಡಿಸಿದ್ದೇವೆ ಎಂದರು.

    ಕೇವಲ ಚುನಾವಣೆಯಲ್ಲಿ ಗೆಲುವಿನ ಒಂದೇ ಕಾರಣಕ್ಕಾಗಿ ಬೇರೆ ಕ್ಷೇತ್ರದ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ. ಪಕ್ಷದ ಸಿದ್ಧಾಂತಗಳೇ ಗೊತ್ತಿಲ್ಲದ ಅಭ್ಯರ್ಥಿಗೆ ಟಿಕೆಟ್ ನೀಡಿ ವಂಚನೆ ಮಾಡಿದ್ದಾರೆ. ಪಕ್ಷಕ್ಕಾಗಿ ಸರ್ಕಾರಿ ನೌಕರಿ ಹಾಗೂ ತನ್ನ ಮಗನ ಜೀವನವನ್ನು ಬಲಿ ಕೊಟ್ಟು ಪಕ್ಷದ ಬೆಳವಣಿಗೆ ಮಾಡಿದವರಿಗೆ ಮೋಸ ಮಾಡಿದ್ದಾರೆ. ಸದ್ಯ ತಮ್ಮ ರಾಜಕೀಯ ಜೀವನ ಮುಕ್ತಾಯಗೊಳಿಸಲು ಚಿಂತನೆ ನಡೆಸಿದ ನಡಹಳ್ಳಿ ಸೋಲಿಸುವುದು ನನ್ನ ಗುರಿಯಾಗಿದೆ. ಕ್ಷೇತ್ರದಲ್ಲಿ ನಡಹಳ್ಳಿ ಠೇವಣಿ ಕಳೆದುಕೊಳ್ಳಲಿದ್ದಾರೆ. ತಮ್ಮ ರಾಜಕೀಯ ವೃತ್ತಿ ಜೀವನದ ಮುಂದಿನ ನಡೆಯನ್ನು ತಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸಿ ಇನ್ನೆರಡು ದಿನದಲ್ಲಿ ಸ್ಪಷ್ಟಪಡಿಸುತ್ತೇನೆ ಎಂದು ತಿಳಿಸಿದರು.