Tag: n shashi kumar

  • ಪೊಲೀಸ್ ಕಮಿಷನರ್ ಮುಂದೆಯೇ ಯುವತಿಯಿಂದ ಕಾಮುಕನಿಗೆ ಪಂಚ್!

    ಪೊಲೀಸ್ ಕಮಿಷನರ್ ಮುಂದೆಯೇ ಯುವತಿಯಿಂದ ಕಾಮುಕನಿಗೆ ಪಂಚ್!

    – ದಿಟ್ಟತನ ತೋರಿದ ಯುವತಿಗೆ ಶಶಿಕುಮಾರ್ ಸನ್ಮಾನ
    – ಬಸ್ಸಿನಲ್ಲಿ ಕಿರುಕುಳ ನೀಡಿದ್ದ ಹುಸೈನ್

    ಮಂಗಳೂರು: ಬಸ್ಸಿನಲ್ಲಿ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಯುವತಿ ಕಾಮುಕನಿಗೆ ಪೊಲೀಸ್ ಕಮಿಷನರ್ ಮುಂದೆಯೇ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಜನವರಿ 14 ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ಬಸ್ಸಿನಲ್ಲಿ ಯುವತಿಗೆ ಕಾಮುಕ ದೈಹಿಕ ಕಿರುಕುಳ ನೀಡಿದ್ದ. ಈ ಸಂಬಂಧ ಆರೋಪಿ ಕಾಸರಗೋಡು ನಿವಾಸಿ ಹುಸೇನ್ (41)ನನ್ನು ನಿನ್ನೆ ಪೊಲೀಸರು ಬಂಧಿಸಿದ್ದರು. ಇಂದು ಮಂಗಳೂರು ಕಮೀಷನರ್ ಎನ್ ಶಶಿಕುಮಾರ್ ಅವರು ಆರೋಪಿ ಹಾಗೂ ಸಂತ್ರಸ್ತೆಯ ಜೊತೆ ಸುದ್ದಿಗೋಷ್ಠಿ ನಡೆಸಿದ್ದರು. ಪ್ರೆಸ್ ಮೀಟ್ ಬಳಿಕ ಯುವತಿ, ಕಮಿಷನರ್ ಮುಂದೆಯೇ ಕಾಮುಕನಿಗೆ ಕಪಾಳ ಮೋಕ್ಷ ಮಾಡಿದ್ದಾಳೆ.

    ಕಾಮುಕನ ನೀಚ ಕೃತ್ಯವನ್ನು ಯುವತಿ ಇನ್ ಸ್ಟಾ ಮೂಲಕ ಬಯಲು ಮಾಡಿದ್ದಳು. ಈ ಹಿನ್ನೆಲೆಯಲ್ಲಿ ದಿಟ್ಟತನ ಮೆರೆದ ಯುವತಿಯನ್ನು ಮಂಗಳೂರು ಕಮಿಷನರ್ ಕಚೇರಿಯಲ್ಲಿ ಶಶಿಕುಮಾರ್ ಸನ್ಮಾನಿಸಿದರು.

    ಏನಿದು ಪ್ರಕರಣ..?:
    ಜನವರಿ 14 ರಂದು ಯುವತಿ ದೇರಳಕಟ್ಟೆಯಿಂದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಯುವತಿ ಕುಳಿತಿದ್ದ ಸೀಟ್ ನಲ್ಲಿ ಕಾಮುಕ ಬಂದು ಕುಳಿತಿದ್ದಾನೆ. ಬಳಿಕ ಆತ ಯುವತಿಗೆ ದೈಹಿಕ ಕಿರುಕುಳ ನೀಡಿದ್ದಾನೆ. ತನಗಾಗುತ್ತಿರುವ ಕಿರುಕುಳದಿಂದ ಬೇಸತ್ತ ಯುವತಿ ವಿರೋಧ ವ್ಯಕ್ತಪಡಿಸಿದ್ದಾಳೆ. ಆಗ ಕಾಮುಕ ಬಸ್ಸಿನಿಂದ ಇಳಿದು ಹೋಗಿದ್ದಾನೆ. ಅಲ್ಲದೆ ಮತ್ತೊಂದು ಬಸ್ಸಿನಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪಕ್ಕದಲ್ಲಿ ಕುಳಿತು ಮತ್ತೆ ಕಿರುಕುಳ ನೀಡಿದ್ದಾನೆ.

    ಈ ವೇಳೆ ಯುವತಿ, ಕಾಮುಕನ ಫೋಟೋ ತೆಗೆದು ವೈರಲ್ ಮಾಡೋದಾಗಿ ಎಚ್ಚರಿಸಿದ್ದಳು. ಯುವತಿ ಫೋಟೋ ತೆಗೆಯುತ್ತಿದ್ದಂತೆಯೇ ಕಾಮುಕ ಕೂಡ ಫೋಟೋಗೆ ಪೋಸ್ ಕೊಟ್ಟಿದ್ದ. ಈ ಮೂಲಕ ಮತ್ತೆ ಅನುಚಿತ ವರ್ತನೆ ತೋರಿದ್ದ. ಜನರ ಎದುರೇ ಕಾಮುಕ ಹುಸೈನ್ ಕಿರುಕುಳ ನೀಡಿದರೂ ಬಸ್ಸಿನಲ್ಲಿದ್ದ ಪ್ರಯಾಣಿಕರು ಮಾತ್ರ ಸುಮ್ಮನಿದ್ದರು. ಯುವತಿ ಕಾಪಾಡುವಂತೆ ಅಂಗಲಾಚಿದರೂ ಬಸ್ ಡ್ರೈವರ್, ನಿರ್ವಾಹಕ ಸುಮ್ಮನಿದ್ದರು. ಈ ಹಿನ್ನೆಲೆಯಲ್ಲಿ ಬಸ್ ಡ್ರೈವರ್ ಮತ್ತು ನಿರ್ವಾಹಕನಿಗೆ ಪೊಲೀಸರು ಸಮನ್ಸ್ ನೀಡಿ ವಿಚಾರಣೆಗೆ ಒಳಪಡಿಸಿದರು.

    ಇತ್ತ ಕಾಮುಕನಿಗೆ ಬುದ್ಧಿ ಕಲಿಸುವ ಸಲುವಾಗಿ ಯುವತಿ, ಕಾಮುಕನ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ವಿವರ ಸಹಿತ ಹಾಕಿದ್ದಳು. ಯುವತಿಯ ಪೋಸ್ಟ್ ಆಧಾರದಲ್ಲಿ ಪೊಲೀಸರು ನಿನ್ನೆ ಕಾಮುಕ ಹುಸೈನನ್ನು ಬಂಧಿಸಿದ್ದಾರೆ. ಅಲ್ಲದೆ ಯುವತಿಯ ದಿಟ್ಟ ಕ್ರಮಕ್ಕೆ ಮಂಗಳೂರು ಕಮಿಷನರ್ ಮೆಚ್ಚುಗೆ ವ್ಯಕ್ತಪಡಿಸಿದರು.

  • ಕಾನೂನು ಪಾಲಕರ ರಕ್ಷಣೆ, ಸಮಾಜ ವಿರೋಧಿಗಳಿಗೆ ಎಚ್ಚರಿಕೆ: ಎನ್. ಶಶಿಕುಮಾರ್

    ಕಾನೂನು ಪಾಲಕರ ರಕ್ಷಣೆ, ಸಮಾಜ ವಿರೋಧಿಗಳಿಗೆ ಎಚ್ಚರಿಕೆ: ಎನ್. ಶಶಿಕುಮಾರ್

    ಮಂಗಳೂರು: ಸರ್ಕಾರ ಹಾಗೂ ಇಲಾಖೆಯ ಆಶಯದಂತೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಒತ್ತು ನೀಡುವ ಉದ್ದೇಶದಿಂದ ಕಾನೂನು ಪಾಲಕರಿಗೆ ರಕ್ಷಣೆ ನೀಡುವ ಜೊತೆಗೆ ಸಮಾಜ ವಿರೋಧಿಗಳು, ಕಾನೂನು ಮೀರಿ ವರ್ತಿಸುವವರಿಗೆ ಹಾಗೂ ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡುವರಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.

    ನಗರದ ಪ್ರೆಸ್‍ಕ್ಲಬ್‍ನಲ್ಲಿ ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ಮೀಡಿಯಾ ಹೆಲ್ತ್ ಕ್ಲಿನಿಕ್‍ಗೆ ಮರು ಚಾಲನೆ ನೀಡಿ ಬಳಿಕ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ಅಧಿಕಾರ ಸ್ವೀಕರಿಸಿದ ಎರಡು ದಿನಗಳಿಂದಲೇ ನಗರದ ಬೀಚ್, ಮೈದಾನಗಳಲ್ಲಿ ರಾತ್ರಿ ಹೊತ್ತು ಮದ್ಯಪಾನ, ಲೌಡ್ ಸ್ಪೀಕರ್ ಹಾಡು, ಗಾಂಜಾ ಸೇವನೆ ಕುರಿತಂತೆ ಕಾರ್ಯಾಚರಣೆ ನಡೆಸಿ ಹಲವರನ್ನು ವಶಕ್ಕೆ ಪಡೆದು ಜಾಗೃತಿ ಮೂಡಿಸುವ ಕೆಲಸ ಇಲಾಖೆಯಿಂದ ಮಾಡಲಾಗಿದೆ. ಇದಕ್ಕೆ ಬಹಳಷ್ಟು ಪ್ರಶಂಸೆ ವ್ಯಕ್ತವಾಗಿರುವ ಜೊತೆಗೆ ಕೆಲವರಿಂದ ಆಕ್ಷೇಪವೂ ವ್ಯಕ್ತವಾಗಿದೆ.

    ಡ್ರಗ್ಸ್ ಸೇವನೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಹಿಂದಿನ ಪ್ರಕರಣಗಳ ಆರೋಪಿಗಳ ಪರೇಡ್ ನಡೆಸಿದ ಸಂದರ್ಭವೂ ಕೆಲವೊಂದು ಆಕ್ಷೇಪಣೆ ವ್ಯಕ್ತವಾಗಿದೆ. ಕಾರ್ಯಾಚರಣೆಯ ಮೇಲೆ ಯಾರಿಗೂ ಅವಮಾನ ಮಾಡುವ ಕೆಲಸವಾಗಲಿ, ಹೊಡೆಯುವ ಕೆಲಸವಾಗಿ ಇಲಾಖೆಯಿಂದ ಆಗಿಲ್ಲ. ಮಾತ್ರವಲ್ಲದೆ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಈ ಕಾರ್ಯಾಚರಣೆಗಳು ಸಮಾಜದಲ್ಲಿ ಬದಲಾವಣೆಗೆ ಕಾರಣವಾಗಲಿದೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಿದೆ ಎಂದು ಅವರು ಹೇಳಿದರು.

    ಬೀಚ್ ಟೂರಿಸಂ ಮಂಗಳೂರಿನ ಪ್ರಮುಖ ಆಕರ್ಷಣೆ. ಆದರೆ ರಾತ್ರಿ ಹೊತ್ತಿನಲ್ಲಿ ಬೀಚ್‍ನಿಂದ ಸುಮಾರು ಒಂದರಿಂದ ಒಂದೂವರೆ ಕಿ.ಮೀ. ದೂರದ ಕತ್ತಲು ಪ್ರದೇಶದಲ್ಲಿ ಮದ್ಯಪಾನ ಮಾಡುವುದು ಅಥವಾ ಹೆಣ್ಣು ಮಕ್ಕಳೊಂದಿಗೆ ಇರುವುದು ಸುರಕ್ಷತೆಯ ದೃಷ್ಟಿಯಿಂದಲೂ ಅಪಾಯಕಾರಿ. ರೈಲು ನಿಲ್ದಾಣಗಳಲ್ಲಿ ನಿರಾಶ್ರಿತರು ಇರುವುದು ಸಹಜ. ಆದರೆ ರೈಲು ಹಳಿಗಳಲ್ಲಿ ರಾತ್ರಿ ಹೊತ್ತು ತಿರುಗಾಡುವುದು, ಮಾದಕ ದ್ರವ್ಯಗಳನ್ನು ಬಳಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

    ನಗರದಲ್ಲಿ ಮಾದಕ ದ್ರವ್ಯಗಳ ಸಮಸ್ಯೆ ಹೆಚ್ಚಿದೆ. ಇದರಿಂದ ಯುವ ಸಮೂಹ ದಿಕ್ಕುತಪ್ಪುವ ಸಾಧ್ಯತೆ ಇರುವುದರಿಂದ ಅದನ್ನು ಬೇರು ಸಹಿತ ಕಿತ್ತು ಹಾಕುವ ಪ್ರಯತ್ನ ಮಾಡಲಾಗುವುದು. ಮಂಗಳೂರಿನಲ್ಲಿ ಪ್ರತಿನಿತ್ಯ ಅಲ್ಲಲ್ಲಿ ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಜನ ರಾತ್ರಿ ಹೊತ್ತಿನಲ್ಲೂ ತಿರುಗಾಡುತ್ತಿರುತ್ತಾರೆ. ಅವರ ಸುರಕ್ಷತೆಯ ದೃಷ್ಟಿಯಿಂದ ಈ ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಇಲಾಖೆಯಿಂದ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.