Tag: Mysuru Lok Sabha 2024

  • ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಸೋತ ಒಡೆಯರ್!

    ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಸೋತ ಒಡೆಯರ್!

    – ಹ್ಯಾಟ್ರಿಕ್ ಕನಸಿಗೆ ಮುಳ್ಳಾಯಿತು ಪಕ್ಷಾಂತರ!

    ಮೈಸೂರು: ಲೋಕಸಭೆಗೆ 10ನೇ ಸಾರ್ವತ್ರಿಕ ಚುನಾವಣೆಯು 1991 ರಲ್ಲಿ ನಡೆಯಿತು. ಮೈಸೂರು ಸಾಮಾನ್ಯ ಕ್ಷೇತ್ರದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಮೊದಲ ಬಾರಿಗೆ ಸೋತರು.

    ಮೈಸೂರಿನಲ್ಲಿ (Mysuru Lok Sabha) 10,86,432 ಮತದಾರರ ಪೈಕಿ ಶೇ.54.10 ರಷ್ಟು ಮಂದಿ ಅಂದರೆ 5,87,747 ಮಂದಿ ಮತ ಚಲಾಯಿಸಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 1984 ಹಾಗೂ 1989 ರಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಸುಲಭವಾಗಿ ಜಯ ಗಳಿಸಿದ್ದರು. 1984 ರಲ್ಲಿ ಕೇಂದ್ರದಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆದರೆ ಒಡೆಯರ್ ಪ್ರಥಮ ಬಾರಿ ಗೆದ್ದಿದ್ದರಿಂದ ಮಂತ್ರಿ ಸ್ಥಾನ ಸಿಗಲಿಲ್ಲ. 1989 ರಲ್ಲಿ ಒಡೆಯರ್ ಎರಡನೇ ಬಾರಿ ಗೆದ್ದಾಗ ಕೇಂದ್ರದಲ್ಲಿ ವಿ.ಪಿ. ಸಿಂಗ್ ನೇತೃತ್ವದ ಜನತಾರಂಗ ಸರ್ಕಾರ ಅಧಿಕಾರಕ್ಕೆ ಬಂದಿತು. ಹೀಗಾಗಿ ಮಂತ್ರಿ ಆಗಲಿಲ್ಲ. ಇದನ್ನೂ ಓದಿ: ಎರಡನೇ ಬಾರಿಗೆ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಒಡೆಯರ್!

    1991ರ ವೇಳೆಗೆ ಅಯೋಧ್ಯೆ ರಾಮಮಂದಿರ (Ayodhya Ram Mandir) ವಿವಾದ ಜೋರಾಗಿತ್ತು. ಆಗ ಕೆಲವು ಹಿತೈಷಿಗಳು ಒಡೆಯ‌ರ್ ಅವರನ್ನು ಕೇಂದ್ರದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನೀವು ಮಂತ್ರಿಯಾಗಬಹುದು, ಬಿಜೆಪಿ ಸೇರಿ ಎಂದು ಪುಸಲಾಯಿಸಿದರು. ಇದನ್ನು ನಂಬಿದ ಒಡೆಯರ್ ಬಿಜೆಪಿ ಸೇರಿ ಅಭ್ಯರ್ಥಿಯಾದರು.

    ಇದರಿಂದ ಕಾಂಗ್ರೆಸ್‌ನಲ್ಲಿ (Congress) ಅಭ್ಯರ್ಥಿಯ ಕೊರತೆ ಕಾಡಿತು. ಕೊನೆಗೆ ಒಡೆಯರ್ ವಿರುದ್ದ ಹುಣಸೂರಿನ ಅಂದಿನ ಶಾಸಕಿಯಾಗಿದ್ದ ಮಾಜಿ ಸಚಿವೆ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು (D. Devaraj Urs) ಪುತ್ರಿ ಚಂದ್ರಪ್ರಭ ಅರಸು (Chandra Prabha Urs) ಅವರನ್ನು ಕಾಡಿಬೇಡಿ ಒಪ್ಪಿಸಲಾಯಿತು. ಅವರು ಒಲ್ಲದ ಮನಸ್ಸಿನಿಂದ ಕಣಕ್ಕಿಳಿದಿದ್ದರು. ಇದನ್ನೂ ಓದಿ: Mysuru Lok Sabha 2024: ಮೈಸೂರಿನ ರಾಜವಂಶಸ್ಥರ ಮೊದಲ ಚುನಾವಣಾ ನೆನಪು

    ಒಡೆಯರ್ ಪರ ಅಂದಿನ ಬಿಜೆಪಿಯ ಘಟಾನುಘಟಿ ನಾಯಕ ಎಲ್.ಕೆ.ಆಡ್ವಾಣಿ ಅವರು ಪುರಭವನ ಮೈದಾನದಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಈಗಾಗಲೇ ಒಡೆಯರ್ ಗೆದ್ದಾಗಿದೆ ಎಂದು ಹೇಳಿದ್ದರು. ಆದರೆ ಫಲಿತಾಂಶ ಬಂದಾಗ ಚಂದ್ರಪ್ರಭ ಗೆದ್ದು, ಒಡೆಯರ್ ಸೋತರು. ಚಂದ್ರಪ್ರಭ ಅವರಿಗೆ 2,25,887 ಮತಗಳು ಬಂದರೆ ಒಡೆಯರ್‌ಗೆ 2,08,999 ಮತಗಳು ದೊರೆತಿದ್ದವು. ಸತತ ಎರಡನೇ ಬಾರಿಗೆ ಜನತಾಪಕ್ಷದಿಂದ ಕಣಕ್ಕಿಳಿದಿದ್ದ ಡಿ. ಮಾದೇಗೌಡರಿಗೆ 1,17,471 ಮತಗಳು ಬಂದಿದ್ದವು.

  • Mysuru Lok Sabha 2024: ಮೈಸೂರಿನ ರಾಜವಂಶಸ್ಥರ ಮೊದಲ ಚುನಾವಣಾ ನೆನಪು

    Mysuru Lok Sabha 2024: ಮೈಸೂರಿನ ರಾಜವಂಶಸ್ಥರ ಮೊದಲ ಚುನಾವಣಾ ನೆನಪು

    – ಕೆ.ಪಿ.ನಾಗರಾಜ್
    ಮೈಸೂರು: ಲೋಕಸಭೆಗೆ (Mysuru Lok Sabha 2024) ಎಂಟನೇ ಸಾರ್ವತ್ರಿಕ ಚುನಾವಣೆಯು 1984 ರಲ್ಲಿ ನಡೆಯಿತು. ಆಗ ಮೈಸೂರು ಸಾಮಾನ್ಯ ಕ್ಷೇತ್ರದಲ್ಲಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಅವರು ಮೊದಲ ಬಾರಿ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ಗೆದ್ದರು.

    ಮೈಸೂರಿನಲ್ಲಿ 7,51,631 ಮತದಾರರ ಪೈಕಿ ಶೇ.61.74 ಅಂದರೆ 4,64,072 ಮಂದಿ ಮತ ಚಲಾಯಿಸಿದ್ದರು. ಸ್ವೀಕೃತ ಮತಗಳು- 4,52,885. ಅದರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 2,47,754 ಮತಗಳನ್ನು ಪಡೆದು ಸಂಸತ್ ಪ್ರವೇಶಿಸಿದರು. ಇದನ್ನೂ ಓದಿ: Mysuru Lok Sabha 2024: ಸಿಎಂಗೆ ಪ್ರತಿಷ್ಠೆ; ಬಿಜೆಪಿಗೆ ಹ್ಯಾಟ್ರಿಕ್ ನಿರೀಕ್ಷೆ – ಮೈಸೂರು-ಕೊಡಗು ಕ್ಷೇತ್ರ ಯಾರ ಕೈಗೆ?

    ಜನತಾಪಕ್ಷದ ಬೆಂಬಲದಿಂದ ಕಣಕ್ಕಿಳಿದಿದ್ದ ಅಂದಿನ ಹನೂರು ಶಾಸಕ ಕೆ.ಪಿ. ಶಾಂತಮೂರ್ತಿ 1,83,144 ಮತಗಳು, ಜನತಾಪಕ್ಷದ ಪಿ. ವಿಶ್ವನಾಥ್- 5,696 ಮತಗಳನ್ನು ಪಡೆದಿದ್ದರು.

    ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮಣಿಸಲು ಜನತಾಪಕ್ಷವು ನಗರದ ಪ್ರಪ್ರಥಮ ಮೇಯರ್ ಎಂಬ ಹೆಗ್ಗಳಿಕೆ ಹೊಂದಿದ್ದ ಪಿ. ವಿಶ್ವನಾಥ್ ಅವರಿಗೆ ಟಿಕೆಟ್ ನೀಡಿತ್ತು. ಅವರು ಶ್ರೀರಂಗಪಟ್ಟಣದಿಂದ ಒಂದು ಬಾರಿ, ಮೈಸೂರು ತಾಲೂಕಿನಿಂದ (ಈಗಿನ ಚಾಮುಂಡೇಶ್ವರಿ) ನಾಲ್ಕು ಬಾರಿ ಹಾಗೂ ಚಾಮರಾಜ ಕ್ಷೇತ್ರದಿಂದ ಒಂದು ಬಾರಿ-ಒಟ್ಟು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿ, ಹಲವಾರು ಖಾತೆಗಳ ಸಚಿವರಾಗಿದ್ದ ಕೆ. ಪುಟ್ಟಸ್ವಾಮಿ ಅವರ ಪುತ್ರ. ನಂತರ ಅವರ ಬದಲು ಅಂದು ಹನೂರು ಶಾಸಕರಾಗಿದ್ದ ಕೆ.ಪಿ. ಶಾಂತಮೂರ್ತಿ ಅವರನ್ನು ಕಣಕ್ಕಿಳಿಸಲಾಗಿತ್ತು.

    ಆದರೆ ಆ ವೇಳೆಗೆ ‘ಬಿ’ ಫಾರಂ ವಿಶ್ವನಾಥ್ ಅವರ ಹೆಸರಿನಲ್ಲಿ ಸಲ್ಲಿಕೆಯಾಗಿದ್ದರಿಂದ ಅವರನ್ನು ಕಣದಿಂದ ನಿವೃತ್ತಗೊಳಿಸಿ, ಕೆ.ಪಿ. ಶಾಂತಮೂರ್ತಿ ಅವರನ್ನು ಜನತಾಪಕ್ಷದ ಬೆಂಬಲಿತ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಹೀಗಾಗಿ ಅವರಿಗೆ ಎರಡೆಲೆ ಚಿಹ್ನೆ ದೊರೆತಿತ್ತು. ಈ ಚುನಾವಣೆಯಲ್ಲಿ ‘ಅರಮನೆ’ ಹಾಗೂ ‘ಗುಡಿಸಲು’ ನಡುವೆ ಹೋರಾಟ ಎಂದೇ ಪ್ರಚಾರ ಮಾಡಲಾಗಿತ್ತು. ಇದನ್ನೂ ಓದಿ: ನೀವು ಅರಮನೆಗೆ ಬರಬೇಕಿಲ್ಲ, ನಾನೇ ಹೊರಗೆ ಬರ್ತೀನಿ, ಸಾಮಾನ್ಯನಂತೆ ಕೆಲಸ ಮಾಡ್ತೀನಿ: ಯದುವೀರ್

    ಆದರೆ ಇಂದಿರಾ ಗಾಂಧಿ (Indira Gandhi) ಅವರ ಹತ್ಯೆಯ ನಂತರ ನಡೆದ ಈ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 24 ರಲ್ಲಿ ಕಾಂಗ್ರೆಸ್ ಗೆದ್ದಿತು. ಬೆಂಗಳೂರು ದಕ್ಷಿಣ- ವಿ.ಎಸ್. ಕೃಷ್ಣಯ್ಯರ್, ಮಂಡ್ಯ- ಕೆ.ವಿ. ಶಂಕರಗೌಡ, ಕೋಲಾರ- ಡಾ.ವಿ. ವೆಂಕಟೇಶ್ ಹಾಗೂ ಬಿಜಾಪುರ- ಎಸ್.ಎಂ. ಗುರೆಡ್ಡಿ- ಈ ನಾಲ್ಕು ಕಡೆ ಮಾತ್ರ ಜನತಾಪಕ್ಷ ಗೆದ್ದಿತು.