Tag: Muttiah Muralidharan

  • ಓಟಿಟಿಯಲ್ಲಿ ಖ್ಯಾತ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್ ಜೀವನಗಾಥೆ

    ಓಟಿಟಿಯಲ್ಲಿ ಖ್ಯಾತ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್ ಜೀವನಗಾಥೆ

    ವೈವಿಧ್ಯಮಯ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವನ್ನು ಹೊಂದಿರುವ ಕಂಟೆಂಟ್‌ ಅನ್ನು ಜನರಿಗೆ ನೀಡುವಲ್ಲಿ JioCinema ಮುಂಚೂಣಿಯಲ್ಲಿದೆ. ಆ ಪ್ರಯತ್ನದ ಭಾಗವಾಗಿ ಇದೀಗ, ಮುತ್ತಯ್ಯ ಮುರಳೀಧರನ್‌ (Muttiah Muralidharan) ಅವರ ಜೀವನವನ್ನಾಧರಿಸಿದ, ಎಂ.ಎಸ್‌. ಶ್ರೀಪತಿ (MS Sripathy) ನಿರ್ದೇಶಿಸಿರುವ ‘800’ ಸಿನಿಮಾ JioCinemaದಲ್ಲಿ ಬಿಡುಗಡೆಗೊಳ್ಳುತ್ತಿದೆ. ಇದೇ ಡಿಸೆಂಬರ್ 2ರಂದು ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಸಿನಿಮಾ, ಶ್ರೀಲಂಕಾದ ಖ್ಯಾತ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ಅವರ ಬದುಕು ಮತ್ತು ಸಾಧನೆಗಳನ್ನು ಆಧರಿಸಿದ್ದು. ಟೆಸ್ಟ್‌ ಕ್ರಿಕೆಟ್‌ನಲ್ಲಿ 800 ವಿಕೆಟ್‌ಗಳನ್ನು ಪಡೆದುಕೊಂಡು ದಾಖಲೆ ನಿರ್ಮಿಸಿದ್ದ ಬೌಲರ್‍‌ ಬದುಕಿನ ತೆರೆ-ಮರೆಯ ಕಥೆಯನ್ನು ಹೇಳುವ ಈ ಸಿನಿಮಾ, ಕ್ರಿಕೆಟ್ ಪ್ರಿಯರಿಗಂತೂ ಮನರಂಜನೆಯ ಮೃಷ್ಟಾನ್ನವನ್ನೇ ಉಣಿಸುತ್ತದೆ.

    ವಿವೇಕ್‌ ರಂಗಾಚಾರಿ ನಿರ್ಮಾಣದ ಈ ಸಿನಿಮಾ ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ ಭಾಷೆಗಳ ಜೊತೆಗೆ ಕನ್ನಡದಲ್ಲಿಯೂ ವೀಕ್ಷಣೆಗೆ ಲಭ್ಯವಿರುವುದು ವಿಶೇಷ. ಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಕ್ರಿಕೆಟ್‌ ಬದುಕಿನ ಸಾಧನೆಗಳನ್ನು ಹೇಳುವ ‘800’ ಸಿನಿಮಾ, ಅವರ ಖಾಸಗೀ ಬದುಕಿನ ಸಂಕಷ್ಟಗಳನ್ನೂ ನೋಡುಗರ ಎದುರಿಗೆ ತೆರೆದಿಡುತ್ತದೆ. ಹಲವು ಸಂಕಷ್ಟಗಳು, ವಿವಾದಗಳನ್ನು ಹಾದು ಕ್ರಿಕೆಟ್‌ ಜಗತ್ತಿನ ಲೆಜೆಂಡ್ ಆದ ಸ್ಪೂರ್ತಿಕಥೆಯನ್ನು ಹೇಳುತ್ತದೆ.

    ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ, ಎಸ್ಟೆಟ್‌ ಕೆಲಸಗಾರರಾಗಿ ದಕ್ಷಿಣ ಭಾರತದಿಂದ ಶ್ರೀಲಂಕಾಗೆ ವಲಸೆ ಬರುವ ಮುತ್ತಯ್ಯ ಮುರಳೀಧರನ್ ಅವರ ತಾತನ ಕುಟುಂಬ ನಂತರ ಅಲ್ಲಿಯೇ ನೆಲೆಗೊಳ್ಳುತ್ತದೆ. ಬಾಲ್ಯದಿಂದಲೇ ಕ್ರಿಕೆಟ್ ವ್ಯಾಮೋಹ ಬೆಳೆಸಿಕೊಂಡಿದ್ದ ಮುತ್ತಯ್ಯ, ಬದುಕಿನುದ್ದಕ್ಕೂ ತಮ್ಮ ನೆಚ್ಚಿನ ಕ್ರೀಡೆಗೆ ಮತ್ತು ತಮ್ಮ ತಾಯ್ನೆಲಕ್ಕೆ ತೋರಿದ ಬದ್ಧತೆ ಅನನ್ಯವಾದದ್ದು. ವೈಯಕ್ತಿಕ ಬದುಕಿನ ಸಂಕಷ್ಟ-ಸವಾಲುಗಳ ನಡುವೆಯೂ ಕ್ರಿಕೆಟ್‌ ಜಗತ್ತಿನಲ್ಲಿ ಅವರು ನಿರ್ಮಿಸಿದ ದಾಖಲೆಗಳು, ಕ್ರೀಡಾಪ್ರೇಮಿಗಳಿಗಷ್ಟೇ ಅಲ್ಲ,ಸಾಧನೆಯ ಹಾದಿ ಹಿಡಿಯುವ ಹಂಬಲ ಇರುವ ಎಲ್ಲರಿಗೂ ಸ್ಫೂರ್ತಿಯನ್ನು ನೀಡುವಂಥದ್ದು. ‘800’ ಸಿನಿಮಾದಲ್ಲಿ, ತಮಿಳಿನ ಯುವನಟ ಮಧುರ್ ಮಿತ್ತಲ್, ಮುತ್ತಯ್ಯ ಮುರಳೀಧರನ್ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಮಹಿಮಾ ನಂಬಿಯತಾರ್, ನಾಸರ್, ಆರುಲ್‌ದಾಸ್‌ ಮುಖ್ಯಭೂಮಿಕೆಯಲ್ಲಿದ್ದಾರೆ.

    ಮುತ್ತಯ್ಯ ಮುರಳೀಧರನ್ ಪಾತ್ರಕ್ಕೆ ಜೀವತುಂಬುವ ಅವಕಾಶ ಸಿಕ್ಕಿರುವುದು ಮಧುರ್ ಮಿತ್ತಲ್ ಅವರಿಗೆ ಸಾಕಷ್ಟು ಖುಷಿಕೊಟ್ಟಿದೆ. ತಮ್ಮ ಸಿನಿಮಾ JioCinemaದಲ್ಲಿ ಪ್ರೀಮಿಯರ್ ಆಗುತ್ತಿರುವ ಕುರಿತೂ ಅವರು ಅಷ್ಟೇ ಎಕ್ಸೈಟ್ ಆಗಿದ್ದಾರೆ. ‘ನಾನು ಚಿಕ್ಕಂದಿನಿಂದಲೂ ಕ್ರಿಕೆಟ್‌ ಅಭಿಮಾನಿಯಾಗಿದ್ದವನು. ಮುರಳೀಧರನ್ ಅವರ ಅಮೋಘ ಆಟವನ್ನು ನೋಡುತ್ತಲೇ ಬೆಳೆದವನು. ಈಗ ಅವರದ್ದೇ ಪಾತ್ರಕ್ಕೆ ತೆರೆಯ ಮೇಲೆ ಜೀವ ತುಂಬುವ ಅವಕಾಶ ಸಿಕ್ಕಿರುವುದು ನಿಜಕ್ಕೂ ನನಗೆ ಸಂದ ಬಹುದೊಡ್ಡ ಸಮ್ಮಾನ. ಈ ಪಾತ್ರಕ್ಕೆ ಗಟ್ಟಿತನವಿದೆ. ಇದೊಂದು ಸತತ ಪರಿಶ್ರಮ ಮತ್ತು ಬದ್ಧತೆಯ ಬದುಕನ್ನು ಬದುಕಿದ ವ್ಯಕ್ತಿಯ ಪಾತ್ರ. ಒಬ್ಬ ಕ್ರಿಕೆಟರ್ ಆಗಿ ಮುರಳೀಧರನ್ ಕೋಟ್ಯಂತರ ಜನರನ್ನು ಪ್ರಭಾವಿಸಿದ್ದಾರೆ. ಇಂಥ ಸಾಧಕನ ಬದುಕನ್ನು ಜನರಿಗೆ  ಪರಿಚಯಿಸುವುದೂ ಅಷ್ಟೇ ಮುಖ್ಯ. ಈ ಕೆಲಸವನ್ನು ‘800’ ತುಂಬ ಪರಿಣಾಮಕಾರಿಯಾಗಿ ಮಾಡಿದೆ. ಈಗ ಈ ಸಿನಿಮಾ ಜಿಯೋ ಸಿನಿಮಾದಲ್ಲಿ ಬಿಡುಗಡೆಯಾಗುತ್ತಿರುವುದು ನಿಜಕ್ಕೂ ನನಗೆ ತುಂಬ ಖುಷಿಯ ಸಂಗತಿ’ ಎನ್ನುತ್ತಾರೆ ನಟ ಮಧುರ್ ಮಿತ್ತಲ್.

     

    JioCinema ಒಟಿಟಿ (OTT) ವೇದಿಕೆಯ ಮೂಲಕ ತಮ್ಮ ಜೀವನವನ್ನಾಧರಿಸಿದ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿರುವುದು ಮುತ್ತಯ್ಯ ಮುರಳೀಧರನ್ ಅವರನ್ನೂ ರೋಮಾಂಚಿತಗೊಳಿಸಿದೆ. ‘ನನ್ನ ಬದುಕಿನ ಕಥೆ, ಸ್ಫೂರ್ತಿದಾಯಕ ಸಿನಿಮಾ ಆಗುತ್ತಿರುವುದು ನಿಜಕ್ಕೂ ನನ್ನಲ್ಲಿ ವಿನೀತಭಾವ ಹುಟ್ಟಿಸಿದೆ. ಇದಕ್ಕೆ ಕಾರಣರಾದವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಸಿನಿಮಾಗೆ ತುಂಬ ಒಳ್ಳೆಯ ಪ್ರತಿಸ್ಪಂದನ ಸಿಗುತ್ತದೆ ಎಂಬ ನಂಬಿಕೆ ನನಗಿದೆ. ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ದಾರಿಯಲ್ಲಿರುವ ಅಸಂಖ್ಯ ಯವ ಪ್ರತಿಭಾವಂತರಿಗೆ ಈ ಸಿನಿಮಾ ಸ್ಫೂರ್ತಿ ನೀಡಲಿ ಎಂದು ನಾನು ಹಾರೈಸುತ್ತೇನೆ. ನನ್ನ ಪಾಲಿಗೆ ಕ್ರಿಕೆಟ್‌ ಎನ್ನುವುದು ಬದುಕಿನ ಕ್ರಮವೇ ಆಗಿತ್ತು. ದೇಶಕ್ಕಾಗಿ ಆಡುವ ಅವಕಾಶ ಸಿಕ್ಕಿದ್ದು ನನಗೆ ಸಂದ ದೊಡ್ಡ ಗೌರವ’’ ಎಂದು ಮುರಳೀಧರನ್‌ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಕ್ರಿಕೆಟ್ ಲೋಕದಲ್ಲಿ ದಂತಕಥೆಯಾದ ಮುತ್ತಯ್ಯ ಮುರಳೀಧರನ್ ಬದುಕಿನ ಕಥೆ, ‘800’ ಸಿನಿಮಾವನ್ನು ಡಿಸೆಂಬರ್ 2ರಿಂದ ಎಕ್ಸ್‌ಕ್ಲ್ಯೂಸಿವ್ ಆಗಿ ವೀಕ್ಷಿಸಬಹುದಾಗಿದೆ.

  • ಮರಳೀಧರನ್ ಬಯೋಪಿಕ್‍ನಿಂದ ವಿಜಯ್ ಸೇತುಪತಿ ಹೊರಕ್ಕೆ – ಮಗಳಿಗೆ ಅತ್ಯಾಚಾರ ಬೆದರಿಕೆ

    ಮರಳೀಧರನ್ ಬಯೋಪಿಕ್‍ನಿಂದ ವಿಜಯ್ ಸೇತುಪತಿ ಹೊರಕ್ಕೆ – ಮಗಳಿಗೆ ಅತ್ಯಾಚಾರ ಬೆದರಿಕೆ

    ಚೆನ್ನೈ: ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರ್ ಅವರ ಬಯೋಪಿಕ್‍ನಿಂದ ಹೊರಬಂದ ನಟ ವಿಜಯ್ ಸೇತುಪತಿಯವರ ಮಗಳಿಗೆ ವ್ಯಕ್ತಿಯೋರ್ವ ಅತ್ಯಾಚಾರ ಬೆದರಿಕೆ ಹಾಕಿದ್ದಾನೆ.

    ಶ್ರೀಲಂಕಾದ ಸ್ಪಿನ್ ಮಾತ್ರಿಕ ಮಾಜಿ ಆಟಗಾರ ಮುತ್ತಯ್ಯ ಮುರುಳೀಧರನ್ ಅವರ ಬಯೋಪಿಕ್ ಮಾಡಲು ತಮಿಳಿನ ನಟ ವಿಜಯ್ ಸೇತುಪತಿ ಸಿದ್ಧವಾಗಿದ್ದರು. ಚಿತ್ರ ಮೋಷನ್ ಪೋಸ್ಟರ್ ಕೂಡ ಬಿಡುಗಡೆಯಾಗಿತ್ತು. ಆದರೆ ಈ ಸಿನಿಮಾಗೆ ತಮಿಳುನಾಡಿನ ಜನ ವಿರೋಧ ಮಾಡಿದ್ದರು. ಈ ಕಾರಣದಿಂದ ವಿಜಯ್ ಸೇತುಪತಿ ಸಿನಿಮಾದಿಂದ ಹೊರಬಂದಿದ್ದರು.

    ಈಗ ಸಿನಿಮಾದಿಂದ ಹೊರಬಂದ ವಿಜಯ್ ಸೇತುಪತಿಯವರ ಅಪ್ರಾಪ್ತ ಮಗಳಿಗೆ ಟ್ವಿಟ್ಟರಿನಲ್ಲಿ ಖಾತೆಯೊಂದಿರುವ ವಿಜಯ್ ಎಂಬ ಹೆಸರಿನ ವ್ಯಕ್ತಿಯೋರ್ವ ಅತ್ಯಾಚಾರ ಬೆದರಿಕೆ ಹಾಕಿದ್ದಾನೆ. ಇದರಿಂದ ಕೋಪಗೊಂಡ ನೆಟ್ಟಗರು ಸಾಮಾಜಿಕ ಜಾಲತಾಣದಲ್ಲಿ ಆತನನ್ನು ಪತ್ತೆಹಚ್ಚಿ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ತಮಿಳುನಾಡಿನ ಸಂಸದ ಸಿಂಥಿಲ್ ಕುಮಾರ್ ಕೂಡ ಟ್ವೀಟ್ ಮಾಡಿದ್ದು, ಹೀಗೆ ಟ್ವೀಟ್ ಮಾಡುವವರು ಮನುಷ್ಯರೇ ಅಲ್ಲ ಅವರನ್ನು ತಕ್ಷಣ ಬಂಧಿಸಿ ಎಂದು ಆಗ್ರಹಿಸಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ನಟ ವಿಜಯ್ ಸೇತುಪತಿ, ಸ್ಪಿನ್ ದಂತಕಥೆ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್‍ನಲ್ಲಿ ನಟಿಸುವುದು ಖಚಿತವಾಗಿತ್ತು. ಇದರ ಬೆನ್ನಲ್ಲೇ ಚಿತ್ರತಂಡ ಕೂಡ ಸಿನಿಮಾ ಮೋಷನ್ ಪೋಸ್ಟರ್ ಕೂಡ ಬಿಡುಗಡೆ ಮಾಡಿತ್ತು. ಆದರೆ ಸೋಮವಾರ ಸಿನಿಮಾದಿಂದ ನಟ ವಿಜಯ್ ಸೇತುಪತಿ ಹೊರ ನಡೆದಿದ್ದು, ಮುರಳೀಧರನ್ ಅವರ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದರು.

    ಮುರಳೀಧರನ್ ಬಯೋಪಿಕ್‍ನಲ್ಲಿ ವಿಜಯ್ ಸೇತುಪತಿ ನಟಿಸುತ್ತಿರುವುದು ಖಚಿತವಾಗುತ್ತಿದಂತೆ ತಮಿಳುನಾಡಿನಲ್ಲಿ ಹೊಸ ವಿವಾದ ಸೃಷ್ಟಿಯಾಗಿತ್ತು. 2009ರಲ್ಲಿ ಮುರಳೀಧರನ್ ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖರ್ ವೈರಲ್ ಆಗಿತ್ತು. ಅಲ್ಲದೇ ಸಿನಿಮಾ ವಿರುದ್ಧ ಟ್ವಿಟ್ಟರಿನಲ್ಲಿ ಟ್ರೆಂಟ್ ಕೂಡ ಮಾಡಲಾಗಿತ್ತು. ವಿವಾದ ಬೆನ್ನಲ್ಲೇ ಮುತ್ತಯ್ಯ ಮುರಳೀಧರನ್ ಅವರ ಮನವಿಯ ಮೇರೆಗೆ ವಿಜಯ್ ಸೇತುಪತಿ ಸಿನಿಮಾದಿಂದ ಹೊರನಡೆದಿದ್ದಾರೆ. ತನ್ನ ಕಾರಣದಿಂದ ನಟ ವಿಜಯ್ ಸೇತುಪತಿ ಭವಿಷ್ಯದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಬಾರದು ಎಂದು ಮುರಳೀಧರನ್ ಹೇಳಿದ್ದರು.

    ಈ ಕುರಿತಂತೆ ಮುರಳೀಧರನ್ ತಮಿಳು ಭಾಷೆಯಲ್ಲೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಬಯೋಪಿಕ್ `800′ ಕುರಿತಂತೆ ವಿವಾದಗಳು ಬಂದಿರುವುದರಿಂದ ನಾನು ಈ ಹೇಳಿಕೆ ನೀಡುತ್ತಿದ್ದೇನೆ. ತಪ್ಪು ಕಲ್ಪನೆಯಿಂದ ಹಲವರು ನಟ ವಿಜಯ್ ಸೇತುಪತಿ ಅವರನ್ನು ಚಿತ್ರದಿಂದ ದೂರ ಉಳಿಯುವಂತೆ ಒತ್ತಾಯಿಸಿದ್ದರು. ಅವರಿಗೆ ತೊಂದರೆಯಾಗಲು ನಾನು ಬಯಸುವುದಿಲ್ಲ. ಆದ್ದರಿಂದ ನಾನೇ ಅವರನ್ನು ಯೋಜನೆಯಿಂದ ಹೊರಗುಳಿಯುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದರು.

    https://www.instagram.com/p/CGhU3FLJiSf/?utm_source=ig_embed

    ಮುರಳೀಧರ್ ಹೇಳಿದ್ದು ಏನು?
    2009ರ ಮೇನಲ್ಲಿ ಶ್ರೀಲಂಕಾದ ಸೇನೆ ಈಶಾನ್ಯ ಶ್ರೀಲಂಕಾದಲ್ಲಿ ವಾಸವಿದ್ದ ಅನೇಕ ಮಂದಿ ತಮಿಳಿಗರನ್ನು ಹೊಡೆದು ಹಾಕಿತ್ತು. ಅಂದು ಮುತ್ತಯ್ಯ ಮುರಳೀಧರನ್, ಇಂದು ನನಗೆ ಅತ್ಯಂತ ಸಂತೋಷದ ದಿನ ಎಂದು ಹೇಳಿದ್ದರು. ಈಗ ಈ ಕಾರಣಕ್ಕೆ ತಮಿಳುನಾಡಿನ ಕೆಲ ಚಿತ್ರ ಪ್ರೇಮಿಗಳು ಮತ್ತು ರಾಜಕಾರಣಿಗಳು ಸಾವಿರಾರು ತಮಿಳಿಗರು ಸತ್ತ ದಿನವನ್ನು ಸಂತೋಷದ ದಿನ ಎಂದಿದ್ದ ಮುತ್ತಯ್ಯ ಮುರಳೀಧರನ್ ಬಯೋಪಿಕ್‍ನಲ್ಲಿ ತಮಿಳಿನ ನಟ ಅಭಿನಯಿಸುವುದು ಬೇಡ ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಸ್ಪಷ್ಟ ನೀಡಿದ್ದ ಮುರಳೀಧರನ್, ಅಂದು ನಾನು ಹೇಳಿದ ಹೇಳಿಕೆಯನ್ನು ತಿರುಚಲಾಗಿದೆ. ಅಂದು ನಾನು ಅಮಾಯಕರು ಸತ್ತಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿರಲಿಲ್ಲ. ಸುಮಾರು ವರ್ಷದಿಂದ ನಡೆದುಕೊಂಡು ಬರುತ್ತಿದ್ದ ಯುದ್ಧ, ಘರ್ಷಣೆ ಇಲ್ಲಿಗೆ ಕೊನೆಯಾಗಿದೆ. ಅದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದೆ. ನಾನು ಎಂದು ಅಮಾಯಕರ ಕೊಲ್ಲುವುದನ್ನು ಬೆಂಬಲಿಸಿಲ್ಲ ಎಂದು ಮುತ್ತಯ್ಯ ಮುರಳೀಧರನ್ ಸ್ಪಷ್ಟಪಡಿಸಿದ್ದರು.