Tag: muthoot finance

  • 77 ಕೆ.ಜಿ ಚಿನ್ನ ಹೊಡೆಯಲು ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್!

    77 ಕೆ.ಜಿ ಚಿನ್ನ ಹೊಡೆಯಲು ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್!

    ಬೆಂಗಳೂರು: ಪುಲಿಕೇಶಿ ನಗರದ ಮುತ್ತೂಟ್ ಫೈನಾನ್ಸ್ ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಆರೋಪಿಗಳು ನೇಪಾಳಕ್ಕೆ ಎಸ್ಕೇಪ್ ಆಗಿರುವ ಸಾಧ್ಯತೆ ಇದೆ.

    ಸುಮಾರು 9 ಜನರ ಗ್ಯಾಂಗ್ ಟಾಯ್ಲೆಟ್ ನ ಗೋಡೆ ಕೊರೆದು 77 ಕೆ.ಜಿ ಚಿನ್ನ ಕಳವು ಮಾಡಿತ್ತು. ಎಲ್ಲರೂ ನೇಪಾಳ ಮೂಲದವರು ಎನ್ನಲಾಗಿದೆ. ಮುತ್ತೂಟ್ ನಲ್ಲಿರುವ ಚಿನ್ನ ಹೊಡೆದ್ರೆ ಲೈಫ್ ಸೆಟ್ಲ್ ಆಗಬಹುದು ಅಂತ ಜೊತೆಯಲ್ಲಿದ್ದವರಿಗೆ ಗಾರ್ಡ್ ಹುರಿದುಂಬಿಸಿದ್ದನು. ಹೀಗಾಗಿ ತಿಂಗಳ ಹಿಂದೆಯೇ ನಕಲಿ ದಾಖಲೆ ನೀಡಿ, ಬೇರೆ ಬೇರೆಯವರ ಹೆಸರಲ್ಲಿ ಸಿಮ್ ಖರೀದಿ ಮಾಡಲಾಗಿತ್ತು.

    ಕದ್ದ ಮಾಲಿನ ಸಮೇತ ರೈಲಿನ ಜನರಲ್ ಕಂಪಾರ್ಟ್ ಮೆಂಟ್ ನಲ್ಲಿ ಕಳ್ಳರು ರಾಜಾರೋಷವಾಗಿ ದೆಹಲಿ ಸೇರಿದ್ದಾರೆ. ಅಲ್ಲಿಂದ ನೇಪಾಳಕ್ಕೆ ಹೋಗಿದ್ದಾರೆ. ದಾರಿ ಮಧ್ಯೆ ಸಿಕ್ಕ ನದಿಗಳಲ್ಲಿ ಬಳಕೆ ಮಾಡಿದ್ದ ಮೊಬೈಲ್ ಮತ್ತು ಸಿಮ್ ಗಳನ್ನ ಎಸೆಯಲಾಗಿದ್ದು, ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.

    ಈ ಘಟನೆ ಡಿಸೆಂಬರ್ 24ರಂದು ನಡೆದಿದ್ದರೂ ಚಿನ್ನ ಲೆಕ್ಕ ಹಾಕುವ ನೆಪದಲ್ಲಿ ಮುತ್ತೂಟ್ ಸಿಬ್ಬಂದಿ ಎರಡು ದಿನ ತಡವಾಗಿ ಕಂಪ್ಲೆಂಟ್ ಕೊಟ್ಟಿದ್ದಾರೆ. ಈ ಮಧ್ಯೆ ಮುತ್ತೂಟ್ ಫೈನಾನ್ಸ್ ಸಿಬ್ಬಂದಿ ಯಾರೋ ಬಂದು ಕೇಳಿದರು ಅಂತ ಸೆಕ್ಯುರಿಟಿ ಗಾರ್ಡ್ ಆಗಿ ನೇಮಿಸಿಕೊಂಡಿದೆ. ಆರೋಪಿಗಳು ಸಿಗೋದು ಲೇಟ್ ಆದಂತೆಲ್ಲ ಅಡ ಇಟ್ಟವರ ಆತಂಕ ಇನ್ನೂ ಹೆಚ್ಚಾಗುತ್ತಿದೆ.

  • ಶೌಚಾಲಯದ ಗೋಡೆ ಕೊರೆದು 77ಕೆ.ಜಿ. ಚಿನ್ನಾಭರಣ ಕಳ್ಳತನ

    ಶೌಚಾಲಯದ ಗೋಡೆ ಕೊರೆದು 77ಕೆ.ಜಿ. ಚಿನ್ನಾಭರಣ ಕಳ್ಳತನ

    ಬೆಂಗಳೂರು: ಟಾಯ್ಲೆಟ್ ಗೋಡೆ ಕೊರೆದು 77ಕೆಜಿ ಚಿನ್ನಾಭರಣ ಕಳವು ಮಾಡಿರುವ ಭಯಾನಕ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ನಗರದ ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗರಾಜುಪುರ ಮೇಲ್ಸೆತುವೆ ಬಳಿಯ ಮುತ್ತೂಟ್ ಫೈನಾನ್ಸ್ ನಲ್ಲಿ ಕಳ್ಳತನವಾಗಿದ್ದು, ಕಳೆದ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಭಾನುವಾರ ರಜೆ ಇದ್ದ ಕಾರಣ ಸೋಮವಾರ ಭಾರೀ ಪ್ರಮಾಣದ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ.

    ಮುತ್ತೂಟ್ ಫೈನಾನ್ಸ್ ನಲ್ಲಿನ ಶೌಚಾಲಯದ ಗೋಡೆ ಕೊರೆದು ಒಳ ನುಗ್ಗಿ ಗ್ಯಾಸ್ ಕಟ್ಟರ್ ಮೂಲಕ ಮತ್ತೊಂದು ಗೋಡೆ ಕೊರೆದಿದ್ದಾರೆ. ನಂತರ ಫೈನಾನ್ಸ್ ಕಚೇರಿಯಲ್ಲಿನ ಚಿನ್ನಾಭರಣವನ್ನು ಕಳವು ಮಾಡಿದ್ದಾರೆ.

    ನೇಪಾಳಿ ಮೂಲದ ಗ್ಯಾಂಗ್ ಈ ಚಿನ್ನಾಭರಣ ಕಳವು ಮಾಡಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಮುತ್ತೂಟ್ ಫೈನಾನ್ಸ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ನೇಪಾಳಿ ವ್ಯಕ್ತಿ ಕೂಡ ಕಾಣೆಯಾಗಿದ್ದು, ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಪ್ರಕರಣ ಬೇಧಿಸಲು ಸದ್ಯ ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ.

  • ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣದ ಜೊತೆಗೆ ಸಾಕ್ಷಿಯನ್ನೂ ಕದ್ದ ಕಳ್ಳರು!

    ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣದ ಜೊತೆಗೆ ಸಾಕ್ಷಿಯನ್ನೂ ಕದ್ದ ಕಳ್ಳರು!

    – ಕಳ್ಳತನಕ್ಕೂ ಮುನ್ನ ಭರ್ಜರಿ ಪೂಜೆ ಮಾಡಿದ ಖದೀಮರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊನ್ನೆಯಷ್ಟೇ ಪೊಲೀಸ್ ಅಧಿಕಾರಿಯೊಬ್ಬರ ಮೊಬೈಲ್ ಕದ್ದು ಇಬ್ಬರು ಕಳ್ಳರು ಪರಾರಿಯಾಗಿದ್ದರು. ಈ ಬೆನ್ನಲ್ಲೇ ಕೆಲವು ಕಳ್ಳರು ತಮ್ಮ ಬುದ್ಧಿ ಉಪಯೋಗಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಜೊತೆಗೆ ಸಾಕ್ಷಿಯಾಗಿದ್ದ ಸಿಸಿಟಿವಿ ಡಿವಿಆರ್ ಅನ್ನು ಕೂಡ ಕದ್ದು ಪರಾರಿಯಾಗಿದ್ದಾರೆ.

    ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನ ನಗರದಲ್ಲಿರುವ ಮುತ್ತೂಟ್ ಫೈನಾನ್ಸ್ ಶಾಖೆಯನ್ನು ಕಳ್ಳರು ದೋಚಿದ್ದಾರೆ. ಶಾಖೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಪರಾರಿಯಾಗಿದ್ದು, ಪ್ರಕರಣವು ಇಂದು ಬೆಳಕಿಗೆ ಬಂದಿದೆ. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಘಟನೆಯ ವಿವರ:
    ಮುತ್ತೂಟ್ ಫೈನಾನ್ಸ್ ಶಾಖೆಯ ಅಧಿಕಾರಿಗಳು ಡಿಸೆಂಬರ್ 24 ರಂದು ಬಾಗಿಲು ಹಾಕಿ ಮನೆಗೆ ತೆರಳಿದ್ದರು. ಬಾಗಿಲು ಹಾಕಿದ್ದ ಹಿನ್ನೆಲೆಯಲ್ಲಿ ಕಳ್ಳರು ನಕಲಿ ಕೀ ಬಳಸಿ ಫೈನಾನ್ಸ್ ಶಾಖೆಯ ಬಾಗಿಲು ತೆರೆದಿದ್ದಾರೆ. ಅದರಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದ ಕಳ್ಳರು, ಸಿಸಿಟಿವಿ ಕ್ಯಾಮೆರಾದಲ್ಲಿ ತಮ್ಮ ಕೃತ್ಯ ಸೆರೆಯಾಗಿದೆ ಎಂದು ಖಚಿತಪಡಿಸಿಕೊಂಡಿದ್ದಾರೆ. ತಕ್ಷಣವೇ ಸಿಸಿಟಿವಿ ಡಿವಿಆರ್ ಎತ್ತಿಕೊಂಡ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ.

    ಈ ಕುರಿತು ಶಾಖೆಯ ಅಧಿಕಾರಿಗಳು ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದು, ಮುತ್ತೂಟ್ ಫೈನಾನ್ಸ್ ಶಾಖೆಗೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಖದೀಮರು ಕಳ್ಳತನಕ್ಕೂ ಮುನ್ನ ನಿಂಬೆ ಹಣ್ಣು, ಮೊಟ್ಟೆ ಒಡೆದು ಭರ್ಜರಿಯಾಗಿ ಪೂಜೆ ಪುನಸ್ಕಾರ ಮಾಡಿ ಲೂಟಿ ಮಾಡಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.

    ಎಷ್ಟು ಪ್ರಮಾಣದ ಚಿನ್ನಾಭರಣ ಕಳ್ಳತನವಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸಿ ಮಾಹಿತಿ ನೀಡಲಿದ್ದಾರೆ ಎಂದು ಫೈನಾನ್ಸ್ ಶಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಶಾಖೆಯಲ್ಲಿ ಹಣ, ಚಿನ್ನ ಇಟ್ಟಿದ್ದ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಲಿಯ ಕಾಟಕ್ಕೆ ಬೆಳ್ಳಂಬೆಳಗ್ಗೆ ಕಂಗಲಾದ ಜನ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ರು!

    ಇಲಿಯ ಕಾಟಕ್ಕೆ ಬೆಳ್ಳಂಬೆಳಗ್ಗೆ ಕಂಗಲಾದ ಜನ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ರು!

    ಬೆಂಗಳೂರು: ಬೆಳ್ಳಂಬೆಳಗ್ಗೆ ಇಲಿ ಕಾಟಕ್ಕೆ ಕಂಗಲಾದ ಜನ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದ ಘಟನೆ ಕೆಂಗೇರಿಯಲ್ಲಿ ನಡೆದಿದೆ.

    ಆಗಿದ್ದು ಇಷ್ಟೇ ಕೆಂಗೇರಿಯ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿನ ಭದ್ರತಾ ಕಪಾಟಿನ ಸೈರನ್ ವಯರನ್ನು ಇಲಿ ಇಂದು ಬೆಳಗ್ಗೆ ತುಂಡರಿಸಿತ್ತು. ವಯರ್ ತುಂಡಾಗಿದ್ದೆ ತಡ ಜೋರಾಗಿ ಸೈರನ್ ಮೊಳಗಲು ಆರಂಭವಾಯಿತು.

    ಸೈರನ್ ಶಬ್ಧ ಕೇಳಿ ಗಾಬರಿಯಾದ ಸುತ್ತಮುತ್ತಲಿನ ಜನರು ಪೊಲೀಸರಿಗೆ ಮಾಹಿತಿ ನೀಡಿದರು. ಕೆಂಗೇರಿ ಪೊಲೀಸರು ಕಚೇರಿಯ ಭದ್ರತಾ ಕೊಠಡಿ ಪರಿಶೀಲನೆ ನಡೆಸಿದಾಗ ಇಲಿ ಕಡಿತದ ಪರಿಣಾಮ ಸೈರನ್ ಸದ್ದು ಮಾಡಿದ್ದ ವಿಷಯ ಬಯಲಿಗೆ ಬಂತು.

    4 ತಿಂಗಳ ಹಿಂದೆ ಇದೇ ರೀತಿ ಸೈರನ್ ಸದ್ದು ಮಾಡಿತ್ತು. ಈಗ ಮತ್ತೊಮ್ಮೆ ಇದೇ ರೀತಿ ಆಗಿರುವ ವಿಚಾರ ತಿಳಿಯುತ್ತಿದ್ದಂತೆ ಮುತ್ತೂಟ್ ಫೈನಾನ್ಸ್ ಸಿಬ್ಬಂದಿಗೆ ಜನರು ಛೀಮಾರಿ ಹಾಕಿದರು.ಕೊನೆಗೆ ಪೊಲೀಸ್ ಠಾಣೆಯಲ್ಲಿ ಮುತ್ತೂಟ್ ಫೈನಾನ್ಸ್ ಸಿಬ್ಬಂದಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.