Tag: muslim man

  • ಹಿಂದೂ ದೇವಾಲಯಕ್ಕೆ ಮುಸ್ಲಿಂ ವ್ಯಕ್ತಿ ಉಸ್ತುವಾರಿ – ದೇವಿ ಕನಸಲ್ಲಿ ಬಂದು ಮೊಹಮ್ಮದ್‌ ಅಲಿಗೆ ಹೇಳಿದ್ದೇನು?

    ಹಿಂದೂ ದೇವಾಲಯಕ್ಕೆ ಮುಸ್ಲಿಂ ವ್ಯಕ್ತಿ ಉಸ್ತುವಾರಿ – ದೇವಿ ಕನಸಲ್ಲಿ ಬಂದು ಮೊಹಮ್ಮದ್‌ ಅಲಿಗೆ ಹೇಳಿದ್ದೇನು?

    ಲಕ್ನೋ: ಇತ್ತೀಚೆಗೆ ಕೋಮು ಉದ್ವಿಗ್ನತೆ ಮತ್ತು ತೋಳಗಳ ದಾಳಿಯಿಂದ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಬಹರಿಚ್‌ ಜಿಲ್ಲೆಯಿಂದ ಕೋಮು ಸಾಮರಸ್ಯದ ಹೃದಯಸ್ಪರ್ಶಿ ಕಥೆಯೊಂದು ಹೊರಹೊಮ್ಮಿದೆ.

    ಧರ್ಮನಿಷ್ಠ ಮುಸ್ಲಿಂ ಆಗಿರುವ ಮೊಹಮ್ಮದ್ ಅಲಿ, ಹಿಂದೂ ದೇವಾಲಯವನ್ನು ನಿರ್ವಹಿಸುವ ಟ್ರಸ್ಟ್‌ನ ಉಸ್ತುವಾರಿ ಮತ್ತು ಅಧ್ಯಕ್ಷರಾಗಿ 18 ವರ್ಷಗಳ ಸುದೀರ್ಘ ಸೇವೆಯ ಮೂಲಕ ಏಕತೆಯ ಸಂಕೇತವಾಗಿದ್ದಾರೆ.

    ಬಹರಿಚ್‌ ಜಿಲ್ಲಾ ಕೇಂದ್ರದಿಂದ 27 ಕಿಲೋಮೀಟರ್ ದೂರದಲ್ಲಿರುವ ಜೈತಾಪುರ ಬಜಾರ್‌ನಲ್ಲಿ, ಅಲಿ ವೃದ್ಧ್ ಮಾತೇಶ್ವರಿ ಮಾತಾ ಘುರ್ದೇವಿ ದೇವಾಲಯದ ಮೇಲ್ವಿಚಾರಣೆಯನ್ನು ಮೊಹಮ್ಮದ್‌ ಅಲಿ ಮಾಡುತ್ತಿದ್ದಾರೆ. ಈ ಸ್ಥಳದಲ್ಲಿ ಮುಸ್ಲಿಮರೂ ಪೂಜೆ ಸಲ್ಲಿಸುತ್ತಾರೆ.

    ರೋಜಾ ಮತ್ತು ನಮಾಜ್‌ನಂತಹ ಇಸ್ಲಾಮಿಕ್ ಸಂಪ್ರದಾಯಗಳನ್ನು ಪಾಲಿಸುತ್ತಾ 58 ವರ್ಷದ ಅಲಿ, ಘುರ್ದೇವಿ ದೇವತೆ ಮತ್ತು ಹನುಮಂತನ ಆರಾಧನೆಗೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾರೆ.

    ‘ನಾನು ಏಳು ವರ್ಷದವನಿದ್ದಾಗ, ನನಗೆ ಲ್ಯುಕೋಡರ್ಮಾ ಬಂದಿತ್ತು. ನನ್ನ ಕಣ್ಣುಗಳು ಬಿಳಿಯಾಗಿದ್ದವು. ನನಗೆ ಕೊಡಿಸಿದ್ದ ಯಾವ ಚಿಕಿತ್ಸೆಯೂ ಫಲಕಾರಿಯಾಗಲಿಲ್ಲ. ಆಗ ನನ್ನ ತಾಯಿ ನನ್ನನ್ನು ಘುರ್ದೇವಿ ದೇವಸ್ಥಾನಕ್ಕೆ ಕರೆದೊಯ್ದರು. ಅದಾದ ನಂತರ ನನ್ನ ಕಾಯಿಲೆ ವಾಸವಾಯಿತು. 2007 ರಲ್ಲಿ ದೇವಿಯು ನನ್ನ ಕನಸಿನಲ್ಲಿ ಬಂದು ದೇವಾಲಯವನ್ನು ನೋಡಿಕೊಳ್ಳುವಂತೆ ಹೇಳಿದರು. ಅಲ್ಲಿಂದ ನನ್ನ ಸೇವೆ ಪ್ರಾರಂಭಿಸಿದೆ’ ಎಂದು ಮೊಹಮ್ಮದ್‌ ಅಲಿ ತಿಳಿಸಿದ್ದಾರೆ.

    ಅಲಿ ಅವರ ನಾಯಕತ್ವದಲ್ಲಿ ದೇವಾಲಯವು ಅಭಿವೃದ್ಧಿ ಹೊಂದಿದೆ. ಸುಗ್ಗಿಯ ಋತುಗಳಲ್ಲಿ ಧಾನ್ಯ ಸಂಗ್ರಹಣೆ ಹಾಗೂ ನಿಧಿ ಸಂಗ್ರಹಣೆಯಂತಹ ಕಾರ್ಯಗಳಿಂದ ದೇವಾಲಯಕ್ಕೆ ಗಮನಾರ್ಹ ಸಂಪನ್ಮೂಲ ಹರಿದುಬಂದಿದೆ. ಈ ವರ್ಷವಷ್ಟೇ ದೇವಾಲಯದ ಅಭಿವೃದ್ಧಿಗಾಗಿ 2.7 ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದೆ.

    ಸಾರ್ವಜನಿಕ ಕೊಡುಗೆಗಳು ಮತ್ತು ಸರ್ಕಾರದ ಬೆಂಬಲವು ದೇವಾಲಯದ ನವೀಕರಣಕ್ಕೆ ಸಹಾಯ ಮಾಡಿದೆ. ದೇವಾಲಯ ನಿರ್ಮಾಣ ಮತ್ತು ನಿರ್ವಹಣೆಗಾಗಿ 30ರಿಂದ 40 ಲಕ್ಷಕ್ಕೂ ಹೆಚ್ಚು ಹಣ ಬಳಕೆಯಾಗಿದೆ.

  • ಪ್ರೀತಿಸಿದ ಹುಡುಗಿಗಾಗಿ ಹಿಂದೂ ಧರ್ಮಕ್ಕೆ ಮುಸ್ಲಿಂ ವ್ಯಕ್ತಿ ಮತಾಂತರ – ದೇವಾಲಯದಲ್ಲಿ ವಿವಾಹ

    ಪ್ರೀತಿಸಿದ ಹುಡುಗಿಗಾಗಿ ಹಿಂದೂ ಧರ್ಮಕ್ಕೆ ಮುಸ್ಲಿಂ ವ್ಯಕ್ತಿ ಮತಾಂತರ – ದೇವಾಲಯದಲ್ಲಿ ವಿವಾಹ

    ಲಕ್ನೋ: ಕಳೆದ 10 ವರ್ಷಗಳಿಂದ ಪ್ರೀತಿಸಿದ ಗೆಳತಿಯನ್ನು ಮದುವೆಯಾಗಲು 34 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ಸದ್ದಾಂ ತನ್ನ ಹೆಸರನ್ನು ಶಿವಶಂಕರ್ ಎಂದು ಬದಲಾಯಿಸಿಕೊಂಡಿದ್ದಾನೆ.

    ಮೂರು ದಿನಗಳ ಹಿಂದೆ ಯುವತಿ, ಸದ್ದಾಂ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿ, ಮದುವೆಯ ನೆಪದಲ್ಲಿ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆಂದು ದೂರಿದ್ದರು. ಆದರೆ, ಈಗ ಇಬ್ಬರೂ ಸ್ವಇಚ್ಛೆಯಿಂದ ಮದುವೆಯಾಗಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ದೇವೇಂದ್ರ ಸಿಂಗ್ ತಿಳಿಸಿದ್ದಾರೆ.

    ನಗರ ಬಜಾರ್ ನಿವಾಸಿ ಸದ್ದಾಂ ಹುಸೇನ್, ಅದೇ ಗ್ರಾಮದ ಯುವತಿ (30 ವರ್ಷ) ಜೊತೆ ಸುಮಾರು 10 ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದ. ಇಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದವರಾಗಿದ್ದರಿಂದ ಮದುವೆ ಸಾಧ್ಯವಾಗಿರಲಿಲ್ಲ. ಯುವತಿ ಸದ್ದಾಂ ಮೇಲೆ ಹಲವು ಬಾರಿ ಒತ್ತಡ ಹೇರಿದ್ದಳು. ಆದರೆ ಸದ್ದಾಂ ಕುಟುಂಬ ಅವಳನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ.

    ಇದರಿಂದ ತೊಂದರೆಗೀಡಾದ ಯುವತಿ ಮೂರು ದಿನಗಳ ಹಿಂದೆ ಬಸ್ತಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿ, ಯುವಕ ಸದ್ದಾಂ ಮೇಲೆ ಅತ್ಯಾಚಾರ, ಗರ್ಭಪಾತಕ್ಕೆ ಒತ್ತಾಯಿಸುವುದು ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಳು.

    ಎಸ್‌ಪಿ ಆದೇಶದ ಮೇರೆಗೆ ಪೊಲೀಸರು ಸದ್ದಾಂ ಮತ್ತು ಆತನ ಕುಟುಂಬದವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ, ಸದ್ದಾಂ ಮತ್ತು ಯುವತಿ ನಗರದ ಮಾರುಕಟ್ಟೆಯಲ್ಲಿರುವ ದೇವಸ್ಥಾನದಲ್ಲಿ ಹಿಂದೂ ಪದ್ಧತಿಗಳ ಪ್ರಕಾರ ವಿವಾಹವಾಗಿದ್ದಾರೆ. ಸದ್ದಾಂ ತನ್ನ ಹೆಸರನ್ನು ಶಿವಶಂಕರ್ ಸೋನಿ ಎಂದು ಬದಲಾಯಿಸಿಕೊಂಡಿದ್ದಾನೆ.

  • ಮುಸ್ಲಿಂ ವ್ಯಕ್ತಿಯ ಮೊಬೈಲ್ ಅಂಗಡಿಯಲ್ಲಿ ಲಕ್ಷ್ಮಿ ಪೂಜೆ

    ಮುಸ್ಲಿಂ ವ್ಯಕ್ತಿಯ ಮೊಬೈಲ್ ಅಂಗಡಿಯಲ್ಲಿ ಲಕ್ಷ್ಮಿ ಪೂಜೆ

    ಶಿವಮೊಗ್ಗ: ನಾಡಿನೆಲ್ಲೆಡೆ ಲಕ್ಷ್ಮಿ‌ ಪೂಜೆ (Laxmi Pooja) ಹಾಗೂ ದೀಪಾವಳಿ (Deepavali) ಸಂಭ್ರಮ ಮನೆ ಮಾಡಿದೆ. ಸೌಹಾರ್ದತೆ ಕಾರಣಕ್ಕೆ ಹಿಂದೂಗಳ ಹಬ್ಬವನ್ನು ಮುಸ್ಲಿಮರೂ ಹಾಗೂ ಮುಸ್ಲಿಮರ ಹಬ್ಬವನ್ನು ಹಿಂದೂಗಳು ಆಚರಿಸುವುದನ್ನು ಅಲ್ಲಲ್ಲಿ ನೋಡಿದ್ದೇವೆ. ಅದೇ ಮಾದರಿಯ ಸುದ್ದಿಯೊಂದು ಶಿವಮೊಗ್ಗದಲ್ಲಿ ವರದಿಯಾಗಿದೆ.

    ಹಿಂದೂಗಳು ಸಂಭ್ರಮದಿಂದ ಆಚರಿಸುವ ಹಬ್ಬ ದೀಪಾವಳಿ. ಈ ಹಬ್ಬದಲ್ಲಿ ಲಕ್ಷ್ಮಿ ಪೂಜೆ ಸಹ ಇರುತ್ತದೆ. ಮುಸ್ಲಿಂ ಯುವಕನೋರ್ವ ತನ್ನ ಮೊಬೈಲ್ ಅಂಗಡಿಯಲ್ಲಿ ಲಕ್ಷ್ಮಿ ಪೂಜೆ ಮಾಡಿರುವ ಪ್ರಸಂಗ ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ನಡೆದಿದೆ. ಇದನ್ನೂ ಓದಿ: ದೀಪಾವಳಿ ವಿಶೇಷ – ಬಲಿಪಾಡ್ಯಮಿಯನ್ನು ಯಾಕೆ ಆಚರಿಸಲಾಗುತ್ತದೆ? ಏನಿದು ಪುರಾಣ ಕಥೆ?

    ಮುಸ್ಲಿಂ ಯುವಕ ಹಾಗೂ ಆತನ ಸ್ನೇಹಿತರು ಹಿಂದೂ ಸಂಪ್ರದಾಯದಂತೆ ಲಕ್ಷ್ಮಿ ಪೂಜೆ ನೆರವೇರಿಸಿದ್ದಾರೆ. ತನ್ವೀರ್ ಎಂಬ ಯುವಕ ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿರುವ ತನ್ನ ಮೊಬೈಲ್ ಅಂಗಡಿಯಲ್ಲಿ ಪ್ರತಿವರ್ಷ ಹಿಂದೂ ಸಂಪ್ರದಾಯದಂತೆ ಕಳಸ ಇರಿಸಿ, ಹಣ್ಣು-ಕಾಯಿ ನೈವೇದ್ಯ ಅರ್ಪಿಸುವ ಮೂಲಕ ಪುರೋಹಿತರಿಂದ ಪೂಜೆ ನೆರವೇರಿಸಿದ್ದಾರೆ.

    ತನ್ವೀರ್‌ ಹಿಂದಿನಿಂದಲೂ ದೀಪಾವಳಿಯಂದು ತಮ್ಮ ಅಂಗಡಿಯಲ್ಲಿ ಲಕ್ಷ್ಮಿ ಪೂಜೆ ನೆರವೇರಿಸುತ್ತಾ ಬಂದಿದ್ದಾರಂತೆ. ಅಲ್ಲದೇ ಮುಸ್ಲಿಂ ಧರ್ಮ ಗುರುಗಳಿಂದ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಹಲವಾರು ವರ್ಷಗಳಿಂದ ಭಾವೈಕ್ಯತೆ ಸಾರುತ್ತಿದ್ದಾರೆ. ಇದನ್ನೂ ಓದಿ: Deepavali: 52 ರಾಜರನ್ನು ಬಂಧನದಿಂದ ಬಿಡಿಸಿ ಕರೆತಂದ ಧೀರ; ಸಿಖ್ಖರ ದೀಪಾವಳಿ ಹಿಂದಿದೆ ರೋಚಕ ಕಥೆ!

  • ಸಾಧು ವೇಷ ಧರಿಸಿ ದೇವಸ್ಥಾನದಲ್ಲಿ ಬೀಡುಬಿಟ್ಟಿದ್ದ ಮುಸ್ಲಿಂ ವ್ಯಕ್ತಿ ಅರೆಸ್ಟ್‌

    ಸಾಧು ವೇಷ ಧರಿಸಿ ದೇವಸ್ಥಾನದಲ್ಲಿ ಬೀಡುಬಿಟ್ಟಿದ್ದ ಮುಸ್ಲಿಂ ವ್ಯಕ್ತಿ ಅರೆಸ್ಟ್‌

    ಚಂಡೀಗಢ: ಸಾಧು (Sadhu) ವೇಷ ಧರಿಸಿ ದೇವಸ್ಥಾನದಲ್ಲಿ ಹಲವು ತಿಂಗಳಿಂದ ನೆಲೆಸಿದ್ದ ಮುಸ್ಲಿಂ ವ್ಯಕ್ತಿಯನ್ನು ಮೀರತ್‌ ಪೊಲೀಸರು (Meerut Police) ಬಂಧಿಸಿದ್ದಾರೆ.

    ಬಂಧಿತನನ್ನು ಹರಿಯಾಣದ ಪಾಣಿಪತ್‌ನ ಗಾದ್ರಿ ಗ್ರಾಮದ ನಿವಾಸಿ ಗುಲ್ಲು ಎಂದು ಗುರುತಿಸಲಾಗಿದೆ. ಆತನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಮತ್ತೂರು ಗ್ರಾಮದ ಶಿವ ದೇವಸ್ಥಾನದ ಬಳಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಈತ ಸಾಧು ಎಂದು ಹೇಳಿಕೊಂಡು ವಾಸವಾಗಿದ್ದ. ಇದನ್ನೂ ಓದಿ: ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಸ್ – ಬ್ರಿಜ್ ಭೂಷಣ್‌ಗೆ ಬಿಗ್ ರಿಲೀಫ್

    ಈ ವ್ಯಕ್ತಿ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತು. ಪೊಲೀಸರು ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ತಲುಪಿದ್ದಾರೆ. ದೇವಸ್ಥಾನದ ಆವರಣದ ಬಳಿ ಸಾಧು ವೇಷ ಧರಿಸಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯು ಪೊಲೀಸ್ ವಶದಲ್ಲಿದ್ದು, ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.

    ಗುಲ್ಲು ಎಂಬಾತ 2023 ರ ಜನವರಿಯಿಂದ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಧುವಿನಂತೆ ನಟಿಸುತ್ತಿದ್ದ. ಆತನ ಹಿನ್ನೆಲೆಯ ಬಗ್ಗೆ ಸ್ಥಳೀಯರಿಗೆ ತಿಳಿದಿರಲಿಲ್ಲ. ಈತನ ಕೃತ್ಯದ ಹಿಂದಿನ ಉದ್ದೇಶ ಮತ್ತು ಆತ ಏಕೆ ಮಾರುವೇಷದಲ್ಲಿ ಬದುಕಲು ನಿರ್ಧರಿಸಿದ ಎಂಬುದರ ಕುರಿತು ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಈತ ಅಪರಾಧ ಕೃತ್ಯಗಳ ಹಿನ್ನೆಲೆ ಹೊಂದಿದ್ದಾನೆಯೇ ಎಂಬ ವಿಚಾರವನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಈತನಿಗೆ ಮದುವೆಯಾಗಿರುವುದು ಗೊತ್ತಾಗಿದೆ. ಆದರೆ ಪತ್ನಿ ಜೊತೆಗೆ ವಾಸವಾಗಿಲ್ಲ ಎಂದು ದೌರಾಲಾ ಪೊಲೀಸ್ ಠಾಣೆಯ ಎಸ್‌ಐ ಅಭಿಷೇಕ್ ಪಟೇಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಿಮಾನ ತುರ್ತು ಭೂಸ್ಪರ್ಶದ ಬಳಿಕ ಸೋನಿಯಾ ಗಾಂಧಿ ಆರೋಗ್ಯ ವಿಚಾರಿಸಿದ ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂದೂ ಮಹಿಳೆ, ಮುಸ್ಲಿಂ ವ್ಯಕ್ತಿ ರೈಲಿನಲ್ಲಿ ಪ್ರಯಾಣ – ಲವ್ ಜಿಹಾದ್ ಅಂತ ಠಾಣೆಗೆ ಎಳೆದೊಯ್ದ ಭಜರಂಗದಳ ಸದಸ್ಯರು

    ಹಿಂದೂ ಮಹಿಳೆ, ಮುಸ್ಲಿಂ ವ್ಯಕ್ತಿ ರೈಲಿನಲ್ಲಿ ಪ್ರಯಾಣ – ಲವ್ ಜಿಹಾದ್ ಅಂತ ಠಾಣೆಗೆ ಎಳೆದೊಯ್ದ ಭಜರಂಗದಳ ಸದಸ್ಯರು

    ಭೋಪಾಲ್: ರೈಲಿನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದ ಎಂಬ ಕಾರಣಕ್ಕೆ ಮುಸ್ಲಿಂ ವ್ಯಕ್ತಿ ಹಾಗೂ ಹಿಂದೂ ವಿವಾಹಿತೆಯನ್ನು ಬಲವಂತವಾಗಿ ಕೆಳಗಿಳಿಸಿ ಬಜರಂಗದಳದ ಸದಸ್ಯರು ಉಜ್ಜಯಿನಿ ರೈಲ್ವೆ ಪೊಲೀಸ್ ಠಾಣೆಗೆ ಎಳೆದೊಯ್ದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಮುಸ್ಲಿಂ ವ್ಯಕ್ತಿ ಮತ್ತು ಹಿಂದೂ ಮಹಿಳೆ ರೈಲಿನಲ್ಲಿ ಜೊತೆಯಾಗಿ ಪ್ರಯಾಣಿಸಿದ್ದಾರೆ. ಇದು ಲವ್ ಜಿಹಾದ್ ಎಂದು ಭಜರಂಗದಳದ ಸದಸ್ಯರು ಆರೋಪಿಸಿದ್ದಾರೆ. ನಂತರ ಮುಸ್ಲಿಂ ವ್ಯಕ್ತಿಯನ್ನು ರೈಲಿನಿಂದ ಕೆಳಗಿಳಿಸಿ ಹಲ್ಲೆ ನಡೆಸಿ ಪೊಲೀಸ್ ಠಾಣೆಗೆ ಬಲವಂತವಾಗಿ ಎಳೆದುಕೊಂಡು ಹೋಗಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಸ್ನಾನದ ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್‍ಮೇಲ್ ಮಾಡುತ್ತಾ ಅತ್ತಿಗೆಯನ್ನೇ ರೇಪ್ ಮಾಡ್ದ!

    train

    ಇಂದೋರ್‌ನ ಈ ಇಬ್ಬರು ಪ್ರಯಾಣಿಕರು ಮತ್ತು ಕುಟುಂಬದ ಸ್ನೇಹಿತರನ್ನು ಸರ್ಕಾರಿ ರೈಲ್ವೆ ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಇವರಿಬ್ಬರ ಪೋಷಕರು ಬರುವವರೆಗೂ ಪೊಲೀಸ್ ಠಾಣೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದರು. ನಂತರ ಅವರ ಹೇಳಿಕೆಗಳನ್ನು ದಾಖಲಿಸಿ ಬಿಡುಗಡೆ ಮಾಡಿ ಕಳುಹಿಸಿದರು.

    https://twitter.com/AshrafFem/status/1483308207116533760

    ಈ ಘಟನೆ ಜ.14ರಂದು ನಡೆದಿದೆ. ಮುಸ್ಲಿಂ ವ್ಯಕ್ತಿ ಆಸಿಫ್ ಶೇಖ್ ಎಂದು ಗುರುತಿಸಲಾಗಿದ್ದು, ಈತ ಎಲೆಕ್ಟ್ರಾನಿಕ್ ಅಂಗಡಿಯೊಂದರ ಮಾಲೀಕ. ಮಹಿಳೆ ಖಾಸಗಿ ಶಾಲೆಯೊಂದರ ಶಿಕ್ಷಕಿಯಾಗಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಬಾಂಗ್ಲಾ ನಟಿ ಶವವಾಗಿ ಗೋಣಿಚೀಲದಲ್ಲಿ ಪತ್ತೆ

    ನಾವು ಭಜರಂಗದಳದವರು ಎಂದು ಪರಿಚಯಿಸಿಕೊಂಡಿರುವ ಮೂವರು ಸದಸ್ಯರು ಮುಸ್ಲಿಂ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ. ಆತನನ್ನು ರೈಲ್ವೆ ಪೊಲೀಸ್ ಠಾಣೆಗೆ ಎಳೆದೊಯ್ಯುತ್ತಿದ್ದಾಗ, ಮಹಿಳೆಯೂ ಅವರ ಹಿಂದೆ ಸಾಗುತ್ತಿರುವ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    POLICE JEEP

    ಮತ್ತೊಂದು ವೀಡಿಯೋದಲ್ಲಿ, ನಿಮ್ಮ ತಪ್ಪು ತಿಳಿವಳಿಕೆಯಿಂದ ನನ್ನ ಜೀವನವೇ ಹಾಳಾಯಿತು. ನಾನು ವಯಸ್ಕಳು, ಶಾಲೆಯಲ್ಲಿ ಶಿಕ್ಷಕಿಯಾಗಿ ಮಕ್ಕಳಿಗೆ ಬೋಧನೆ ಮಾಡುತ್ತಿದ್ದೇನೆ’ ಎಂದು ಭಜರಂಗದಳದ ಸದಸ್ಯನೊಬ್ಬನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಳದ ಸದಸ್ಯನೊಬ್ಬ ಪಿಂಟು ಕೌಶಲ್ ಎಂದು ಗುರುತಿಸಲಾಗಿದ್ದು, ನಿನ್ನೊಂದಿಗೆ ನಾನು ಮಾತನಾಡುವುದಿಲ್ಲ ಎಂದು ಮಹಿಳೆಗೆ ಪ್ರತಿಕ್ರಿಯಿಸುತ್ತಿರುವುದು ಕಂಡುಬಂದಿದೆ.

    ಘಟನೆ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ನಿವೇದಿತಾ ಗುಪ್ತ ಮಾತನಾಡಿ, ಶೇಖ್ ಮತ್ತು ಮಹಿಳೆ ತಮ್ಮ ಕುಟುಂಬದವರಿಂದ ಪರಸ್ಪರ ಪರಿಚಿತರು ಮತ್ತು ಸ್ನೇಹಿತರು. ಇದು ಲವ್ ಜಿಹಾದ್ ಎಂದು ಆರೋಪಿಸಿ ಭಜರಂಗದಳದವರು ಇಬ್ಬರನ್ನೂ ಠಾಣೆಗೆ ಕರೆತಂದಿದ್ದರು. ನಾವು ಅವರ ಹೇಳಿಕೆಗಳನ್ನು ದಾಖಲಿಸಿದ್ದೇವೆ. ಇಬ್ಬರೂ ವಯಸ್ಕರು, ಯಾವುದೇ ಅಪರಾಧವಿಲ್ಲದ ಕಾರಣ ಬಿಟ್ಟು ಕಳುಹಿಸಿದ್ದೇವೆ. ಭಜರಂಗದಳದವರ ವಿರುದ್ಧವೂ ಯಾವುದೇ ದೂರು ಕೇಳಿಬರದ ಕಾರಣ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ನಿಧನ

    ಭಜರಂಗದಳದ ವಿದ್ಯಾರ್ಥಿಗಳ ವಿಭಾಗ ವಿಎಚ್‌ಪಿಯ ಮಾಳವ ಪ್ರಾಂತದ ಪ್ರಚಾರ ಪ್ರಮುಖ್ ಕುಂದನ್ ಚಂದ್ರಾವತ್ ಪ್ರತಿಕ್ರಿಯಿಸಿ, ಹಿಂದೂ ಮಹಿಳೆಯನ್ನು ಮುಸ್ಲಿಂ ವ್ಯಕ್ತಿಯೊಬ್ಬ ದಾರಿ ತಪ್ಪಿಸಿ ತನ್ನೊಂದಿಗೆ ಕರೆದೊಯ್ಯುತ್ತಿದ್ದಾನೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿತ್ತು. ಹಿಂದೂ ಸಹೋದರಿಯರ ರಕ್ಷಣೆಗಾಗಿ ನಮ್ಮ ಕಾರ್ಯಕರ್ತರು ಮಧ್ಯಪ್ರವೇಶಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು. ಈ ಪ್ರಕ್ರಿಯೆಯಲ್ಲಿ ವ್ಯಕ್ತಿ ಮತ್ತು ನಮ್ಮ ಸದಸ್ಯರೊಂದಿಗೆ ಸಣ್ಣ ಜಗಳವಾಗಿದೆ ಅಷ್ಟೇ. ಯಾವುದೇ ಹಲ್ಲೆ ಘಟನೆ ನಡೆದಿಲ್ಲ. ನಂತರ ಅವರನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

  • ಆಂಜನೇಯನ ದೇಗುಲ ನವೀಕರಣಕ್ಕೆ 1 ಕೋಟಿ ಮೌಲ್ಯದ ಭೂಮಿ ನೀಡಿದ ಮುಸ್ಲಿಂ ವ್ಯಕ್ತಿ!

    ಆಂಜನೇಯನ ದೇಗುಲ ನವೀಕರಣಕ್ಕೆ 1 ಕೋಟಿ ಮೌಲ್ಯದ ಭೂಮಿ ನೀಡಿದ ಮುಸ್ಲಿಂ ವ್ಯಕ್ತಿ!

    – ಸೋಶಿಯಲ್ ಮೀಡಿಯಾದಲ್ಲಿ ಬ್ಯಾನರ್ ವೈರಲ್

    ಬೆಂಗಳೂರು: ಆಂಜನೇಯನ ದೇಗುಲದ ಜೀರ್ಣೋದ್ದಾರಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬರು ಸುಮಾರು 1 ಕೋಟಿ ಬೆಲೆಬಾಳುವ ತನ್ನ ಭೂಮಿಯನ್ನು ದಾನ ಮಾಡಿದ್ದಾರೆ. ಸದ್ಯ ಇದರ ಬ್ಯಾನರ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಹೌದು. ನಗರದ ಕಾಡುಗೋಡಿ ಬೆಳತೂರು ಕಾಲನಿ ನಿವಾಸಿಯಾಗಿರುವ ಎಚ್.ಎಂ.ಜಿ ಬಾಷಾ ಅವರು ಈ ಮಹಾನ್ ಕಾರ್ಯ ಮಾಡಿದವರು. ಲಾರಿ ಉದ್ಯಮಿಯಾಗಿರುವ ಬಾಷಾ ಬೆಂಗಳೂರಿನಿಂದ 35 ಕಿ.ಮೀ ದೂರದಲ್ಲಿರುವ ಹೊಸಕೋಟೆ ತಾಲೂಕಿನ ವಾಲಗೇರಪುರದಲ್ಲಿರುವ ತಮ್ಮ 3 ಎಕರೆ ಭೂಮಿಯಲ್ಲಿ 1.5 ಗುಂಟೆ ಜಾಗವನ್ನು ಉಚಿತವಾಗಿಯೇ ಆಂಜನೇಯನ ದೇಗುಲಕ್ಕೆ ದಾನ ಮಾಡಿ ಸುದ್ದಿಯಾಗಿದ್ದಾರೆ.

    ಈ ಸಂಬಂಧ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಬಾಷಾ, ಅಲ್ಲಿ ಒಂದು ಸಣ್ಣ ಹನುಮಾನ್ ದೇವಾಲಯವಿತ್ತು. ಹೀಗಾಗಿ ದೊಡ್ಡ ದೇಗುಲವನ್ನು ನಿರ್ಮಿಸಲು ಬಯಸಿದರೆ ನಾನು ಅವರಿಗೆ ಭೂಮಿಯನ್ನು ನೀಡಬಹುದು ಎಂದು ಕೆಲವರಲ್ಲಿ ಹೇಳಿದೆ. ಇತ್ತೀಚೆಗೆ ಟ್ರಸ್ಟ್ ಅವರು 1 ಗುಂಟೆ ಭೂಮಿಯನ್ನು ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲು ನನ್ನ ಬಳಿಗೆ ಬಂದರು. ಆಗ ನಾನು ಭೂಮಿ ನೀಡಲು ಸಿದ್ಧವಾಗಿರುವುದಾಗಿ ತಿಳಿಸಿದೆ. ಅಲ್ಲದೆ 1.5 ಗುಂಟೆ ಭೂಮಿಯ ಮಾಲಕತ್ವವನ್ನು ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಸೇವಾ ಟ್ರಸ್ಟ್ ಗೆ ವರ್ಗಾವಣೆ ಮಾಡಿರುವುದಾಗಿ ತಿಳಿಸಿದರು.

    ಪೂಜಾ ಕಾರ್ಯಕ್ರಮಗಳು ಇದ್ದಂತಹ ಸಮಯದಲ್ಲಿ ದೇಗುಲದ ಆವರಣದಲ್ಲಿ ಜಾಗವಿಲ್ಲದೆ ಭಕ್ತರು ಪರದಾಡುತ್ತಿರುವುದನ್ನು ಬಾಷಾ ಗಮನಿಸಿದ್ದಾರೆ. ಈ ವಿಚಾರ ಅವರಿಗೆ ಭೂಮಿ ನೀಡಲು ಪ್ರೇರೇಪಿಸಿರುವುದಾಗಿ ಬಾಷಾ ಹೇಳಿದ್ದಾರೆ. ಸದ್ಯ ಸುಮಾರು 80 ಲಕ್ಷದಿಂದ 1 ಕೋಟಿವರೆಗೂ ಬೆಲೆಬಾಳುವ ಜಾಗವನ್ನು ಬಾಷಾ ಹಿಂದೂಗಳಿಗೆ ಹಸ್ತಾಂತರಿಸಿದ್ದಾರೆ.

    ಬಾಷಾ ಅವರ ಈ ದಿಟ್ಟ ನಿರ್ಧಾರದಿಂದ ವಾಲಗೇರಪುರದ ಜನರಿಗೆ ಮೊದಲು ಶಾಕ್ ಜೊತೆ ಸಪ್ರೈಸ್ ಕೂಡ ಉಂಟುಮಾಡಿದೆ. ಈತ ಏನು ಮಾಡುತ್ತಿದ್ದಾನೆ ಎಂದು ಗ್ರಾಮದ ಜನ ಅನುಮಾನಪಟ್ಟರು. ಆದರೆ ಇಲ್ಲಿ ನಿರ್ಮಾಣವಾಗುವ ಹನುಮಾನ್ ದೇವಾಲಯವನ್ನು ನೋಡಲು ನಾನು ಕೂಡ ಇಷ್ಟಪಡುತ್ತೇನೆ ಎಂದು ಹೇಳಿರುವುದಾಗಿ ಬಾಷಾ ತಿಳಿಸಿದ್ದಾರೆ.

    ಗ್ರಾಮದ ಜನರು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ವ್ಯತ್ಯಾಸವನ್ನು ನೋಡುವವರಲ್ಲ ಎಂದು ನಾನು ಭಾವಿಸುತ್ತೇನೆ. ನಾವೆಲ್ಲ ಒಂದೇ ಎಂಬುದನ್ನು ಅವರು ಪರಿಗಣಿಸುತ್ತಾರೆ. ಕೆಲ ರಾಜಕೀಯ ಮುಖಂಡರು ತಮ್ಮ ಸ್ವಂತ ಲಾಭಕ್ಕಾಗಿ ಮಾತನಾಡುವಾಗ ಜನರ ಧರ್ಮವನ್ನು ಎತ್ತಿ ತೋರಿಸುತ್ತಾರೆ. ಪ್ರಸ್ತುತ ಪೀಳಿಗೆ ಕೋಮುವಾದಿ ಮಾರ್ಗಗಳಲ್ಲಿ ಹೆಚ್ಚು ಯೋಚಿಸುತ್ತಿದೆ. ‘ಲವ್ ಜಿಹಾದ್’, ‘ಗೋಹತ್ಯಾ’ ಮುಂತಾದ ವಿಷಯಗಳ ಬಗ್ಗೆ ನಾವು ದಿನನಿತ್ಯ ಕೇಳುತ್ತೇವೆ. ದೇಶವು ಈ ರೀತಿಯಾದರೆ ಪ್ರಗತಿ ಹೊಂದುತ್ತದೆಯೇ? ನಾವು ಒಗ್ಗಟ್ಟಾಗಬೇಕು ಮತ್ತು ನಮ್ಮ ದೇಶದ ಬಗ್ಗೆ ನಮಗೆ ಪ್ರೀತಿ ಇರಬೇಕು ಎಂದು ಅವರು ವಿವರಿಸಿದ್ದಾರೆ.

    ನನ್ನ ಈ ನಿರ್ಧಾರಕ್ಕೆ ಕುಟುಂಬ ಕೂಡ ಸಂಪೂರ್ಣ ಒಪ್ಪಿಗೆ ನೀಡಿದೆ. ಟ್ರಸ್ಟ್ ಸದ್ಯ ಸುಮಾರು 1 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಿದೆ ಎಂದರು. ಈ ಜಮೀನು ಓಲ್ಡ್ ಮದ್ರಾಸ್ ರಸ್ತೆಯ ಪಕ್ಕದಲ್ಲಿಯೇ ಹಾದುಹೋಗುವ ಹೆದ್ದಾರಿಯ ಸಮೀಪದಲ್ಲಿದೆ. ಬಾಷಾ ಅವರ ದೇಣಿಗೆಯನ್ನು ಶ್ಲಾಘಿಸುವ ಪೋಸ್ಟರ್ ಅನ್ನು ಸ್ಥಾಪಿಸಲಾಗಿದೆ. ಸದ್ಯ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಅಲ್ಲದೆ ಬಾಷಾ ಈ ದೃಢ ನಿರ್ಧಾರಕ್ಕೆ ಜನ ಬೇಷ್ ಎನ್ನುತ್ತಿದ್ದಾರೆ.

  • ಬಸವತತ್ವಕ್ಕೆ ಮಾರು ಹೋದ ಮುಸ್ಲಿಂ ವ್ಯಕ್ತಿ- ಲಿಂಗದೀಕ್ಷೆ ಪಡೆದ ದಿವಾನಿ ಶರೀಫ್

    ಬಸವತತ್ವಕ್ಕೆ ಮಾರು ಹೋದ ಮುಸ್ಲಿಂ ವ್ಯಕ್ತಿ- ಲಿಂಗದೀಕ್ಷೆ ಪಡೆದ ದಿವಾನಿ ಶರೀಫ್

    ಗದಗ: ಜಾತಿ-ಧರ್ಮಗಳ ಮಧ್ಯೆ ಕಂದಕಗಳು ಸೃಷ್ಟಿಸುವ ಇಂದಿನ ದಿನಮಾನಗಳಲ್ಲಿ ಇಸ್ಲಾಂ ಧರ್ಮದ ವ್ಯಕ್ತಿಗೆ ಹಿಂದೂ ಧರ್ಮ, ಅದರಲ್ಲೂ ಬಸವ ತತ್ವಕ್ಕೆ ಅನುಗುಣವಾಗಿ ಲಿಂಗೆ ದೀಕ್ಷೆ ನೀಡುವ ಮೂಲಕ ಕೋಮು-ಸೌಹಾರ್ದತೆಗೆ ಹೊಸ ಸಂದೇಶ ಸಾರಲು ಖಜೂರಿ ಮಠದ ಸ್ವಾಮಿಜಿಗಳು ಹೊರಟಿದ್ದಾರೆ.

    ರೋಣ ತಾಲೂಕಿನ ಅಸೂಟಿ ಗ್ರಾಮದ ಮುಸ್ಲಿಂ ವ್ಯಕ್ತಿ ದಿವಾನಿ ಶರೀಫ್‍ಗೆ ಖಜೂರಿ ಮಠದ ಶ್ರೀಮುರುಘರಾಜೇಂದ್ರ ಕೊರಣ್ಣೇಶ್ವರ ಶೀವಯೋಗಿಗಳು ಲಿಂಗ ದೀಕ್ಷೆ ನೀಡಿದ್ದಾರೆ. ಶರೀಫ್ ಅವರನ್ನು ಅಸೂಟಿ ಗ್ರಾಮದ ಮುರುಘರಾಜೇಂದ್ರ ಕೊರುಣ್ಣೇಶ್ವರ ಶಾಂತಿಧಾಮಕ್ಕೆ ಉತ್ತರಾಧಿಕಾರಿನ್ನಾಗಿ ನೇಮಿಸಿದ್ದಾರೆ. ಕೊರಣೇಶ್ವರಮಠ ಬಸವ ಪರಂಪರೆಯ ಮಠವಾದ್ದರಿಂದ ಇಲ್ಲಿ ಯಾವುದೆ ಜಾತಿ-ಧರ್ಮ, ಬೇಧ-ಭಾವವಿಲ್ಲ. ವಚನವನ್ನ ಪಚನ ಮಾಡಿಕೊಂಡವರಿಗೆ ಇಲ್ಲಿ ಮುಕ್ತ ಅವಕಾಶವಿದೆ. ಯಾವುದೇ ಸಮಾಜದವರು ಈ ಆಶ್ರಮಕ್ಕೆ ಬರಬಹುದು ಎಂದು ಮುರುಘರಾಜೇಂದ್ರ ಶಿವಯೋಗಿಗಳು ಮುಕ್ತ ಆಹ್ವಾನ ನೀಡಿದ್ದಾರೆ.

    ‘ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ’ ಎನ್ನುವ ಕನಕದಾಸರ ಮಾತಿನಂತೆ, ಇಸ್ಲಾಂ ಧರ್ಮದ ವ್ಯಕ್ತಿಯೊಬ್ಬರು ನಡೆದುಕೊಂಡಿದ್ದಾರೆ. ಹುಟ್ಟಿದ್ದು ಮುಸ್ಲಿಂ ಸಮುದಾಯವಾದ್ರೂ, ಬಸವ ತತ್ವಕ್ಕೆ ಮಾರುಹೋಗಿ ಲಿಂಗ ದೀಕ್ಷೆ ಪಡೆದುಕೊಂಡಿದ್ದು, ಎಲ್ಲರೂ ಹುಬ್ಬೆರಿಸುವಂತೆ ಮಾಡಿದ್ದಾರೆ. ಖಜೂರಿ ಮಠದ ಶ್ರೀಮುರುಘರಾಜೇಂದ್ರ ಕೋರಣೇಶ್ವರ ಸ್ವಾಮೀಜಿಗಳ ಲಿಂಗ ದೀಕ್ಷೆಯನ್ನು ನೀಡಿ ಶಿಷ್ಯನನ್ನಾಗಿ ಸ್ವೀಕಾರ ಮಾಡಿದ್ದಾರೆ. ದಿವಾನಿ ಶರೀಫ್ ಅವರು ಮುಂದೆ ಬಸವತತ್ವದ ಆಧಾರ ಮೇಲೆ ಮುಂದಿನ ಜೀವನ ನಡೆಸಲಿದ್ದಾರೆ. ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಲು, ನಾವೆಲ್ಲಾ ಒಂದೆ ಎಂಬ ಸಂದೇಶ ಸಾರಲು ಮುಸ್ಲಿಂ ವ್ಯಕ್ತಿಗೆ ಲಿಂಗ ದೀಕ್ಷೆ ನೀಡಿ ಈ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿದ್ದೇವೆ. ಜೊತೆಗೆ ದಿವಾನಿ ಶರೀಫ್ ಅವರ ತಂದೆ ಹಾಗೂ ಕುಟುಂಬ ಸಹ ಶಿವಯೋಗಿ ಶ್ರೀಗಳ ಭಕ್ತರಾಗಿದ್ದು, ಕುಟುಂಬದವರು ಹಾಗೂ ಸ್ಥಳೀಯರ ಒಪ್ಪಿಗೆಯ ಮೇರೆಗೆ ಈ ಆಶ್ರಮಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿದ್ದೇವೆ. ಹಿಂದೂ-ಮುಸ್ಲಿಂ-ಕ್ರೈಸ್ತ-ಬೌದ್ಧ ನಾವೆಲ್ಲಾ ಒಂದು ಎಂಬ ಸಂದೇಶ ಸಾರಲು ಈ ಲಿಂಗ ದೀಕ್ಷೆ ನೀಡಿದ್ದೇವೆ ಎಂದು ಮುರುಘರಾಜೇಂದ್ರ ಶಿವಯೋಗಿಗಳು ಹೇಳುತ್ತಾರೆ.

    32 ವರ್ಷದ ದಿವಾನಿ ಶರೀಫ್ ಸಾಬ್ ಈಗ ಲಿಂಗ ದೀಕ್ಷೆ ಪಡೆದು ಶರೀಫ್ ಸ್ವಾಮಿಯಾಗಿದ್ದಾರೆ. ಮಂದಿರ ಮಸೀದಿಗಾಗಿ ನಿತ್ಯ ಕಲಹ ನಡೆಯುತ್ತಿದೆ. ಆದರೆ ಇಸ್ಲಾಂ ಧರ್ಮದ ವ್ಯಕ್ತಿ ಸಮಾಜಕ್ಕೆ ಕೋಮು-ಸೌಹಾರ್ದತೆ ಸಾರಲು ಲಿಂಗ ದೀಕ್ಷೆ ತೆಗೆದುಕೊಂಡು ಬಸವ ತತ್ವದಡಿ ಅಸೂಟಿ ಕೊರಣೇಶ್ವರ ಮಠಕ್ಕೆ ಉತ್ತರಾಧಿಕಾರಿಯಾಗಿದ್ದಾರೆ. ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎನ್ನುವ ಹಂಬಲದಿಂದ ಬಸವತತ್ವಕ್ಕೆ ಮಾರು ಹೋಗಿದ್ದಾರೆ.

    ಅಸೂಟಿ ಗ್ರಾಮದ ಹೊರವಲಯದಲ್ಲಿ 2 ಎಕರೆ ಜಮೀನಿನಲ್ಲಿ ಕೋರಣೇಶ್ವರ ಮಠವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೇ ಮಠಕ್ಕೆ ದಿವಾನಿ ಶರೀಫ್ ಪೀಠಾಧಿಪತಿ ಆಗಲಿದ್ದಾರೆ. ಶರೀಫ್ ಅವರಿಗೆ ಈಗಾಲೇ ಮದುವೆಯಾಗಿದ್ದು, ಹೆಂಡತಿ ಹಾಗೂ 4 ಮಂದಿ ಮಕ್ಕಳು ಇದ್ದಾರೆ. ತಂದೆ ರಹೀಮಸಾಬ್ ಹಾಗೂ ತಾಯಿ ಪಾತೀಮ್ ಕೋರಣೇಶ್ವರ ಮಠದ ಭಕ್ತರಾಗಿದ್ದರು. ಹಾಗಾಗಿ ಸಂಸಾರ ತ್ಯಜಿಸಿ, ತಮ್ಮ ಜಮೀನಿನಲ್ಲಿ ಮಠವನ್ನು ಕಟ್ಟಿಸಿ ಬಸವತತ್ವವನ್ನು ಪರಿಪಾಲನೆ ಮಾಡಬೇಕು ಎಂದು ಲಿಂಗ ದೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ಎಲ್ಲಾ ಧರ್ಮದ ಆಚರಣೆಗಳನ್ನು ಎಲ್ಲಾ ಜನಾಂಗದವರು ಬೆರೆತು ಆಚರಿಸಿದ್ರೆ ಸಮಾಜದಲ್ಲಿ ಕೂಡಿ ಬಾಳುವ ವಾತಾವರಣ ನಿರ್ಮಾಣ ಸಾಧ್ಯ ಎಂದು ದಿವಾನಿ ಶರೀಫ್ ಸ್ವಾಮಿ ಹೇಳಿದ್ದಾರೆ.

    ಹಿಂದೂ-ಮುಸ್ಲಿಂ ಭಾವೈಕ್ಯತೆಯಿಂದ ಬಾಳಬೇಕು, ದೇವನೊಬ್ಬ ನಾಮ ಹಲವು ಎನ್ನುವ ಮಾತಿನಂತೆ ನಾವೆಲ್ಲರೂ ಒಂದಾಗಿ ಬಾಳಬೇಕು ಎನ್ನುವ ನಿಟ್ಟಿನಲ್ಲಿ ಶಾಂತಿ ತೊಟ್ಟಿದ ಮಂತ್ರವನ್ನು ಜಪಿಸುತ್ತಾ, ಜಗತ್ತು ಉದ್ಧಾರ ಮಾಡಲು ಈ ಸ್ವಾಮೀಜಿ ಹೊರಟ್ಟಿದ್ದಾರೆ. ಒಟ್ಟಿನಲ್ಲಿ ಲಿಂಗ ಹಾಗೂ ರುದ್ರಾಕ್ಷಿ ಮಾಲೆ ಧರಿಸಿ ವೃತಾಚರಣೆ ಮಾಡುತ್ತಿರೋ ಕೊರಣೇಶ್ವರ ಮಠದ ಉತ್ತರಾಧಿಕಾರಿ ಶರೀಫ್ ಸ್ವಾಮಿ ಕಾರ್ಯ ಸಮಾಜಕ್ಕೊಂದು ಸೌಹಾರ್ದತೆಯ ನೀತಿಪಾಠ ಹೇಳಿದಂತಿದೆ.

  • ರಕ್ತದಲ್ಲಿ ಬರೆದು ಸುಪ್ರೀಂ ತೀರ್ಪು ಸ್ವಾಗತಿಸಿದ ಮುಸ್ಲಿಂ ವ್ಯಕ್ತಿ

    ರಕ್ತದಲ್ಲಿ ಬರೆದು ಸುಪ್ರೀಂ ತೀರ್ಪು ಸ್ವಾಗತಿಸಿದ ಮುಸ್ಲಿಂ ವ್ಯಕ್ತಿ

    ಲಕ್ನೋ: ಸುಪ್ರೀಂಕೋರ್ಟ್ ತೀರ್ಪನ್ನು ರಾಮಪುರದ ನಿವಾಸಿ ಫರ್ಹತ್ ಖಾನ್ ರಕ್ತದಲ್ಲಿ ಬರೆದು ಸ್ವಾಗತಿಸಿದ್ದಾರೆ.

    ಅಖಿಲ ಭಾರತೀಯ ಮುಸ್ಲಿಂ ಮಹಾಸಂಘದ ಅಧ್ಯಕ್ಷರಾಗಿರುವ ಫರ್ಹತ್ ಖಾನ್ ಸ್ವಾಗತ ಕೋರಿರುವ ಶೈಲಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಫರ್ಹತ್ ತಮ್ಮ ರಕ್ತದಿಂದ ‘ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಸರ್ವೋಚ್ಚ, ಆದ್ರೆ ದೋಷಾತೀತ: ಓವೈಸಿ

    ಹಿಂದೂಸ್ಥಾನಕ್ಕೆ ತೀರ್ಪನ್ನು ಅರ್ಥೈಸುವ ಕೆಲಸವನ್ನು ಮಾಡುತ್ತೇನೆ. ಇಲ್ಲಿ ಪ್ರೀತಿ, ಬಾಂಧವ್ಯ ಮತ್ತು ಸಹೋದರತೆಗೆ ಗೆಲುವು ಸಿಕ್ಕಿದೆ. ನ್ಯಾಯಾಧೀಶರು ಎಲ್ಲ ಆಂಶಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯೋಚಿತವಾದ ತೀರ್ಪನ್ನು ಪ್ರಕಟಿಸಿದ್ದಾರೆ. ಹಾಗಾಗಿ ಅಯೋಧ್ಯೆ ತೀರ್ಪನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಹಿಂದೂಸ್ಥಾನದ ಪ್ರತಿಯೊಂದು ಕಣದಲ್ಲಿ ರಾಮ್ ಮತ್ತು ರಹೀಂ ಇದ್ದಾರೆ ಎಂದು ಫರ್ಹರ್ ಹೇಳುತ್ತಾರೆ. ಇದನ್ನೂ ಓದಿ: ಶಿಯಾ ಮತ್ತು ನಿರ್ಮೋಹಿ ಅಖಾಡ ಸಲ್ಲಿಸಿದ್ದ ಅರ್ಜಿ ವಜಾ – ಸುಪ್ರೀಂ ಆದೇಶದಲ್ಲಿ ಏನಿದೆ?

    ನಾವು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಆದ್ರೆ ಈ ತೀರ್ಪು ನಮಗೆ ಸಮಾಧಾನ ತಂದಿಲ್ಲ. 5 ಮಂದಿ ನ್ಯಾಯಾಧೀಶರು ನೀಡಿದ ಸಂವಿಧಾನ ಪೀಠದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಚಿಂತಿಸಲಾಗುತ್ತದೆ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ. ಇದನ್ನೂ ಓದಿ: ಸುಪ್ರೀಂ ತೀರ್ಪನ್ನು ಯಾರೂ ಗೆಲುವು, ಸೋಲು ಎಂದು ಭಾವಿಸಬಾರದು – ಮೋಹನ್ ಭಾಗವತ್

  • ಮುಸ್ಲಿಂ ಯುವಕನ ಜೊತೆಯಲ್ಲಿದ್ದ ಹಿಂದೂ ಯುವತಿಗೆ ಥಳಿಸಿದ ಯುಪಿ ಮಹಿಳಾ ಪೊಲೀಸ್!

    ಮುಸ್ಲಿಂ ಯುವಕನ ಜೊತೆಯಲ್ಲಿದ್ದ ಹಿಂದೂ ಯುವತಿಗೆ ಥಳಿಸಿದ ಯುಪಿ ಮಹಿಳಾ ಪೊಲೀಸ್!

    ಲಕ್ನೋ: ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ಇದ್ದಳು ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಮಹಿಳಾ ಪೊಲೀಸ್ ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

    ಈ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. ಮಹಿಳಾ ಪೊಲೀಸ್ ಯುವತಿಗೆ ಥಳಿಸುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಇದೀಗ ಮಹಿಳಾ ಪೊಲೀಸನ್ನ ಕೆಲಸದಿಂದ ವಜಾ ಮಾಡಲಾಗಿದೆ.

    ವಿಡಿಯೋದಲ್ಲೇನಿದೆ?:
    ಯುವತಿಯನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ. ಯುವತಿ ಮಹಿಳಾ ಪೊಲೀಸ್ ಪಕ್ಕದಲ್ಲೇ ಕುಳಿತಿದ್ದಾಳೆ. ಈ ವೇಳೆ ಪೊಲೀಸ್ ಕಾನ್ಸ್ ಸ್ಟೇಬಲ್, ಯುವತಿಗೆ ಅಸಭ್ಯ ಶಬ್ಧಗಳಿಂದ ಬೈದು, ದೈಹಿಕ ಹಿಂಸೆ ನೀಡಿದ್ದಾಳೆ. ಅಲ್ಲದೇ ನೀನ್ಯಾಕೆ ಮುಸ್ಲಿಂ ಯುವಕನನ್ನು ಫ್ರೆಂಡ್ ಮಾಡಿಕೊಂಡಿದ್ದೀಯಾ ಅಂತ ಪ್ರಶ್ನಿಸಿದ್ದಾಳೆ. ಈ ಎಲ್ಲಾ ಘಟನೆಗಳನ್ನು ವಾಹನದಲ್ಲಿ ಅವರಿಬ್ಬರ ಎದುರು ಕುಳಿತಿದ್ದ ಪೊಲೀಸ್ ವಿಡಿಯೋ ಮಾಡಿದ್ದು, ಆ ಬಳಿಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಅಲ್ಲದೇ ವಿಡಿಯೋ ಕುರಿತು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಭಾರೀ ಆಕ್ರೋಶವ್ಯಕ್ತವಾಗಿತ್ತು. ಯುವತಿಯ ಮೇಲೆ ಕೈ ಮಾಡಿದ್ದ ಮಹಿಳಾ ಪೊಲೀಸ್ ಕಾನ್ಸ್ ಸ್ಟೇಬಲ್ ವಿರುದ್ಧ ಟ್ವಿಟ್ಟಿಗರು ಕಿಡಿಕಾರಿದ್ದರು.

    `ಈವರೆಗೆ ಕೋಮುವಾದದ ಬೀಜ ಬಿತ್ತುತ್ತವೆ ಅಂತ ರಾಜಕೀಯ ಪಕ್ಷಗಳ ವಿರುದ್ಧ ಮಾತನಾಡುತ್ತಿದ್ದೆವು. ಆದ್ರೆ ಇದೀಗ ಪಕ್ಷಗಳಿಗಿಂತ ಪೊಲೀಸರೇ ಕೋಮವಾದದ ಬೀಜ ಬಿತ್ತುತ್ತಿದ್ದಾರೆ. ಹೀಗಾಗಿ ಯುವತಿ ಮೇಲೆ ಕೈ ಮಾಡಿದ್ದ ಮಹಿಳಾ ಪೊಲೀಸ್ ಕಾನ್ಸ್ ಸ್ಟೇಬಲ್ ವಿರುದ್ಧ ಕ್ರಮಕೈಗೊಳ್ಳಬೇಕು. ಹಾಗೆಯೇ ಈ ಪ್ರಕರಣಕ್ಕೆ ಮುಖ್ಯಮಂತ್ರಿ ಯೋಗಿ ಆದಿನಾಥ್ ಅವರು ಮಧ್ಯಪ್ರವೇಶಿಸಬೇಕು’ ಅಂತ ಟ್ವಿಟ್ಟಗನೊಬ್ಬ ಬೇಡಿಕೆ ಇಟ್ಟಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv