ಬಳ್ಳಾರಿ: ಮುಡಾ ಹಗರಣದ (MUDA Scam) ಆರೋಪ ಹಾಗೂ ಬಿಜೆಪಿ- ಜೆಡಿಎಸ್ ಪಾದಯಾತ್ರೆಯಿಂದ (BJP-JDS Padayatra) ಸಿಎಂ ಸಿದ್ದರಾಮಯ್ಯ ವಿಚಲಿತರಾದ್ರಾ? ಹೀಗೊಂದು ಪ್ರಶ್ನೆ ಈಗ ಎದ್ದಿದೆ.
ಮಂಗಳವಾರ ಕೊಪ್ಪಳ (Koppala) ಹಾಗೂ ವಿಜಯನಗರದಲ್ಲಿ (Vijayanagara) ಸಿದ್ದರಾಮಯ್ಯ ಪ್ರವಾಸ ನಿಗದಿಯಾಗಿತ್ತು. ಭರ್ಜರಿ ಮಳೆಯಿಂದ ಭರ್ತಿಯಾದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ (Tungabhadra Dam) ಸಿಎಂ ಬಾಗಿನ ಅರ್ಪಿಸಬೇಕಿತ್ತು.
ಈ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಚೇರಿ ದೃಢಪಡಿಸಿತ್ತು. ಆದರೆ ಮುಖ್ಯಮಂತ್ರಿಗಳು ಬರುವುದಕ್ಕೆ ಒಂದು ದಿನಕ್ಕೆ ಮೊದಲೇ ಕಾರ್ಯಕ್ರಮ ಮುಂದೂಡಿಕೆಯಾಗಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ಎನ್ಐಎಯಿಂದ ಸ್ಪಾಟ್ ಮಹಜರು
ತಾತ್ಕಾಲಿಕವಾಗಿ ಸಿಎಂ ಕಾರ್ಯಕ್ರಮ ಮುಂದೂಡಿಕೆಯಾದ ಬಗ್ಗೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
– ಬಾಮೈದನ ಹೆಸರಿಗೆ ಆಸ್ತಿ ಮಾಡೋಕೆ ಅಂಬೇಡ್ಕರ್ ಸಂವಿಧಾನದಲ್ಲಿ ಬರೆಯಲಾಗಿದ್ಯಾ? – ಸಿಎಂ ವಿರುದ್ಧ ಮುಡಾ ದಾಖಲೆ ಕೊಟ್ಟಿದ್ದು ಡಿಕೆಶಿ
ಬೆಂಗಳೂರು: 10 ವರ್ಷ ನಾವೇ ಸರ್ಕಾರದಲ್ಲಿ ಇರುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳುತ್ತಾರೆ. ಆದರೆ ಈ ಸರ್ಕಾರ 10 ತಿಂಗಳು ಮುಂದುವರೆಯಲಿ ನೋಡೋಣ. ನಿಮ್ಮ ಪಾಪದ ಕೊಡ ತುಂಬಿದೆ. ನಮ್ಮ ಪಾದಯಾತ್ರೆ ಮೈಸೂರು ತಲಪುವವರೆಗೆ ಈ ಸರ್ಕಾರದ ವಿಕೆಟ್ಗಳು ಬೀಳಬೇಕು. ಅದು ನಾಯಕನಿಂದಲೇ ಶುರುವಾಗಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೆಂಗೇರಿ ಬಳಿ ಕೆಂಪಮ್ಮ ದೇವಸ್ಥಾನದಲ್ಲಿ ಬಿಜೆಪಿ- ಜೆಡಿಎಸ್ (BJP-JDS) ಪಾದಯಾತ್ರೆಗೆ ಚಾಲನೆ ನೀಡಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನೀವು ಮುಡಾದ ಬಗ್ಗೆ ಮಾತನಾಡುತ್ತೀರಾ? ಅದರ ಬಗ್ಗೆ ಮಾತಾಡುವುದಕ್ಕೆ ನಿಮಗೆ ಯಾವ ನೈತಿಕತೆ ಇದೆ. 14 ಸೈಟ್ ಯಾಕೆ? ಎಷ್ಟು ಬೇಕಾದರೂ ಕಾನೂನು ಪ್ರಕಾರ ಪಡೆದುಕೊಳ್ಳಲಿ. ಇವರು ಕಾನೂನು ಮೀರಿ ಸೈಟ್ ಪಡೆದಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯನವರೇ (Siddaramaiah) ಅದು ಯಾರ ಆಸ್ತಿ. ಮುಡಾ (MUDA) ಸರ್ಕಾರದ ಆಸ್ತಿ. ಬಡಾವಣೆ ಆಗಿರುವ ಆಸ್ತಿಯನ್ನು ನಿಮ್ಮ ಬಾಮೈದನ ಹೆಸರಿಗೆ ಮಾಡಲು ಅವಕಾಶ ಇದೆಯಾ? ಇದನ್ನ ಅಂಬೇಡ್ಕರ್ ಸಂವಿಧಾನದಲ್ಲಿ ಬರೆಯಲಾಗಿದ್ಯಾ? ಸರ್ಕಾರದ ಜಮೀನನ್ನ ನಿಮ್ಮ ಬಾಮೈದನ ಹೆಸರಿಗೆ ಹೇಗೆ ದಾಖಲಾತಿ ಮಾಡಿಕೊಟ್ಟರು. ಸಿದ್ದರಾಮಯ್ಯ ನನಗೆ ಇದ್ಯಾವುದು ಗೊತ್ತಿಲ್ಲ ಎನ್ನುತ್ತಾರೆ. 64 ಕೋಟಿ ಕೊಡಿ ಎನ್ನುತ್ತಿರಾ. ಅಲ್ಲಿ ನಡೆದ ಘಟನೆ ನಿಮ್ಮ ಗಮನಕ್ಕೆ ಬಾರದೇ ಆಗಿದೆಯಾ? ನಿಮ್ಮ ಪ್ರಭಾವ ಬೀರದೇ ಇಲ್ಲ ಎನ್ನುವುದಕ್ಕೆ ಸಾಧ್ಯವಿದೆಯಾ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಿ ಹರಿಹಾಯ್ದರು.
ಒಂದು ಮಾಧ್ಯಮದಲ್ಲಿ ಪ್ರಾಯೋಜಿತ ಸಂದರ್ಶನ ನೋಡಿದೆ. ಪ್ರಾಯೋಜಿತ ಸಂದರ್ಶನ ನೀಡಿದ್ದು ಇಡೀ ದೇಶದ ಇತಿಹಾಸದಲ್ಲಿಯೇ ಮೊದಲು. ನನ್ನದು ತೆರೆದ ಪುಸ್ತಕ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕೆಂಪಣ್ಣ ಆಯೋಗದ ವರದಿ ತೆರಿಯಿರಿ. ಈಗ ದೇಸಾಯಿ ಹೆಸರಿನಲ್ಲಿ ಮುಡಾ ಕೇಸ್ ಮುಚ್ಚಿ ಹಾಕಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದರು.
ಪರಮೇಶ್ವರ್ ಕುಮಾರಸ್ವಾಮಿ ಬಣ್ಣ ಬಯಲಾಗಿದೆ ಎನ್ನುವ ಮಾತಿಗೆ, ಪರಮೇಶ್ವರ್ ಅವರೇ ನನ್ನ ಬಣ್ಣ ಯಾವತ್ತು ಬದಲಾವಣೆಯಾಗುವುದಿಲ್ಲ. ನನ್ನದು ಒರಿಜಿನಲ್ ಕಲರ್. 2006-2007 ರಲ್ಲಿ ನಾನು ಯಡಿಯೂರಪ್ಪಗೆ ಅಧಿಕಾರ ಕೊಟ್ಟಿದ್ದರೆ ಇವತ್ತು ಕಾಂಗ್ರೆಸ್ ಇರುತ್ತಿರಲಿಲ್ಲ. ನಾನು ಅವತ್ತು ಯಡಿಯೂರಪ್ಪಗೆ ಅಧಿಕಾರ ಕೊಡಬೇಕು ಎಂದಿದ್ದೆ. ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಒಂದು ವೇಳೆ ಅವತ್ತು ಬಿಜೆಪಿ ಮತ್ತು ನಾವು ಒಟ್ಟಾಗಿ ಇದ್ದರೆ ಇವತ್ತು ಕಾಂಗ್ರೆಸ್ ಇರುತ್ತಿರಲಿಲ್ಲ. ಪರಮೇಶ್ವರ್ ಅವರೇ 2018 ರಲ್ಲಿ ನನ್ನನ್ನು ಸಿಎಂ ಮಾಡಿ ಎಂದು ನಿಮ್ಮ ಮನೆಗೆ ಬಂದಿದ್ದಿನಾ? ನಮ್ಮ ಮನೆ ಬಾಗಿಲಿಗೆ ಬಂದವರು ನೀವು. ಮಲ್ಲಿಕಾರ್ಜುನ ಖರ್ಗೆಯವರನ್ನು ಸಿಎಂ ಮಾಡಿ ಎಂದು ಹೇಳಿದರೂ ಒತ್ತಡ ಮಾಡಿ ನನ್ನನ್ನು ಸಿಎಂ ಮಾಡಿದ್ದೀರಿ. ನೀವು ನನ್ನನ್ನ ಹೇಗೆ ನಡೆಸಿಕೊಂಡಿದ್ದೀರಿ ಗೊತ್ತಿಲ್ಲವಾ ಎಂದು ಜರಿದರು. ಇದನ್ನೂ ಓದಿ: ಮುಡಾ ಹಗರಣದಲ್ಲಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು: ಬಿಎಸ್ವೈ
ದೇವೇಗೌಡರನ್ನ ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಇಲ್ಲ. ಕಮ್ಯುನಿಸ್ಟ್ ಪಕ್ಷದ ಜೊತೆ ಸೇರಿ 13-14 ಪಕ್ಷ ಬೆಂಬಲ ಕೊಟ್ಟಿದ್ದರಿಂದ ಅವರು ಪ್ರಧಾನಿಯಾಗಿದ್ದರು. ಅವತ್ತು ದೇವೇಗೌಡರನ್ನು ಪ್ರಧಾನಿ ಕುರ್ಚಿಯಿಂದ ಕೆಳಗಿಳಿಸಿದ್ದು ಕಾಂಗ್ರೆಸ್. ಅವರು ದೇವೇಗೌಡರನ್ನು ಪ್ರಧಾನಿ ಕುರ್ಚಿಯಿಂದ ಅದ್ಯಾಕೆ ಕೆಳಗಿಳಿಸಿದರು ಎಂದು ಪ್ರಶ್ನಿಸಿದರು.
ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರೇ ಸಿದ್ದರಾಮಯ್ಯ ವಿರುದ್ದ ದಾಖಲಾತಿ ಕೊಟ್ಟಿದ್ದಾರೆ. ಅವರು ಯಾರ್ ಯಾರ ಕೈಯಲ್ಲಿ ದಾಖಲಾತಿ ಕೊಟ್ಟಿದ್ದಾರೆ ಎಂದು ನಮಗೆ ಗೊತ್ತಿದೆ. ಈಗ ನಾನು ಸಿದ್ದರಾಮಯ್ಯ ಪರ ಎಂದು ನಾಟಕ ಮಾಡುತ್ತಿದ್ದಾರೆ. ನೀವು 100 ಅಲ್ಲ ಇನ್ನು 200 ಪ್ರಶ್ನೆ ಕೇಳಿದರೂ ಉತ್ತರ ಕೊಡುತ್ತೇನೆ. ನಮ್ಮ ಕಾರ್ಯಕರ್ತರು ಉತ್ಸಾಹದಲ್ಲಿದ್ದು, ಈ ಸರ್ಕಾರ ತೆಗೆಯಬೇಕೆಂದು ನಿರ್ಧಾರ ಮಾಡಿದ್ದಾರೆ ಎಂದು ಡಿಕೆಶಿಗೆ ತಿರುಗೇಟು ನೀಡಿದರು.
ನೀವು ಗ್ಯಾರಂಟಿ ಹೆಸರಿನಲ್ಲಿ ಏನೇನು ಮಾಡುತ್ತಿದ್ದೀರಿ? ರೈತರಿಗೆ ಪ್ರೋತ್ಸಾಹ ಧನ ನೀಡಿಲ್ಲ. ಬಿಜೆಪಿ-ಜೆಡಿಎಸ್ ನಡುವೆ ಬಿರುಕು ತರಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಹಗರಣಗಳನ್ನ ಬಿಚ್ಚಿಡಲು ನಾವಿಬ್ಬರು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತೀರುಗೇಟು ನೀಡಿದರು.
24 ಗಂಟೆಯಲ್ಲಿ ಮೇಕೆದಾಟು ತರುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು ಎಂದು ಡಿಕೆಶಿ ಹೇಳುತ್ತಾರೆ. ಯಾರೋ ಹುಚ್ಚರು ಅವರಿಗೆ ಹೇಳಿರಬೇಕು. ನಾನು 24 ಗಂಟೆಯಲ್ಲಿ ಮೇಕೆದಾಟು ತರುತ್ತೇನೆ ಎಂದು ಹೇಳಿಲ್ಲ. ಹೇಳಿರುವುದನ್ನು ತೋರಿಸಿದರೆ ತಲೆ ಬಾಗುತ್ತೇನೆ. ತಾಕತ್ತು ಇದ್ದರೆ ನಿಮ್ಮ ಸ್ನೇಹಿತರಾದ ಡಿಎಂಕೆ ಸ್ಟಾಲಿನ್ ಜೊತೆ ಮಾತನಾಡಿ. ಇವರು ತಮಿಳುನಾಡಿಗೆ ಹೆಚ್ಚು ನೀರು ಬಿಟ್ಟಿದ್ದಾರೆ. ಈ ಬಾರಿ ಮೋದಿ ಅವರನ್ನು ಕಾನೂನು ಬದ್ದವಾಗಿ ಮನವೊಲಿಕೆ ಮಾಡುತ್ತೇವೆ ಎಂದು ತಿಳಿಸಿದರು.
ಪಾದಯಾತ್ರೆಯ ಬಗ್ಗೆ ಯಾರ ಒತ್ತಡವೂ ಇಲ್ಲ. ನಾನು ಯಾವ ಸಮಯದಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಅದನ್ನ ಕೈಗೊಂಡಿದ್ದೇನೆ. ಮುಕ್ತವಾಗಿ ಚರ್ಚೆ ಮಾಡಿಯೇ ಪಾದಯಾತ್ರೆ ಮಾಡುತ್ತಿದ್ದೇವೆ. ಪಾದಯಾತ್ರೆ ಮುಂದೆ ಹಾಕಿದರೆ ಕಾಂಗ್ರೆಸ್ನವರು ಎಲ್ಲಿ ದಾಖಲೆ ತಿರುಚುತ್ತಾರೆ ಎಂದು ಪಾದಯಾತ್ರೆ ಮುಂದುವರೆಸಿದ್ದೇವೆ. ಮೈಸೂರು ತಲಪುವವರೆಗೆ ಈ ಸರ್ಕಾರದ ವಿಕೆಟ್ಗಳು ಬೀಳಬೇಕು. ಅದು ಕ್ಯಾಪ್ಟನ್ ನಿಂದಲೇ ಶುರುವಾಗಬೇಕು. ಒಂದೇ ತಾಯಿ ಮಕ್ಕಳ ರೀತಿ ಒಟ್ಟಾಗಿ ಎರಡು ಪಕ್ಷಗಳು ಕೆಲಸ ಮಾಡಬೇಕು. ಈ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ, ವರ್ಗಾವಣೆ ದಂಧೆಯನ್ನ ಮಾಡುತ್ತಿದೆ. ಈ ಸರ್ಕಾರದ ವಿರುದ್ಧ ಎರಡು ಪಕ್ಷದ ಕಾರ್ಯಕರ್ತರು ಭಾಗಿಯಾಗಿ ಪಾದಯಾತ್ರೆ ಮಾಡುತ್ತಿದ್ದೇವೆ. ಮಂಡ್ಯ ಮಾತ್ರವಲ್ಲ ಇಡೀ ಮೈಸೂರಿನವರಗೆ ಪಾದಯಾತ್ರೆ ನಡೆಯುತ್ತದೆ ಎಂದು ಹೇಳಿದರು.
ಬೆಂಗಳೂರು: ಮುಡಾ ಹಗರಣದ (MUDA Scam) ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸುತ್ತೇವೆ. ಪ್ರತಿಯೊಂದು ಕಡೆ 8 ರಿಂದ 10 ಸಾವಿರ ಜನ ಸೇರುತ್ತಾರೆಂಬ ವಿಶ್ವಾಸ ಇದೆ. ಸಿದ್ದರಾಮಯ್ಯ ಅವರಿಗೆ ಇದು ಕೊನೆ ಅವಕಾಶ. ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರಾಜೀನಾಮೆ ಅವರಾಗಿಯೇ ಕೊಟ್ಟರೆ ಅವರಿಗೆ ಅದು ಶೋಭೆ ತರುತ್ತದೆ, ಪಕ್ಷಕ್ಕೆ ಗೌರವ ಸಿಗುತ್ತದೆ. ಇಲ್ಲದಿದ್ದರೆ ಅನಿವಾರ್ಯವಾಗಿ ರಾಜ್ಯಪಾಲರೇ ಕ್ರಮ ತೆಗೆದುಕೊಳ್ಳಬಹುದು. ಇದಕ್ಕೆ ಅವಕಾಶ ಕೊಡದೇ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಾನು ಸಲಹೆ ಕೊಡುತ್ತೇನೆ ಎಂದರು. ಇದನ್ನೂ ಓದಿ: ಶಾಸಕರು ಹಣ ಕೇಳಿದ್ದಕ್ಕೆ ಒತ್ತಡದಿಂದ ಪಿಎಸ್ಐ ಸಾವು: ಇದು ಲೂಟಿ ಸರ್ಕಾರ ಎಂದ ಅಶೋಕ್
ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜಗತ್ತಿಗೆ ವಾಸ್ತವ ಸ್ಥಿತಿ ತಿಳಿದಿದೆ. ಹೀಗಾಗಿ ಅವರು ಯಾವುದೇ ಆರೋಪಗಳಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ. ರಾಜ್ಯಪಾಲ ಕಚೇರಿ ದುರ್ಬಳಕೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ವಾಸ್ತವಿಕ ಸತ್ಯ ಸಂಗತಿ ದೇಶದ ಜನರಿಗೆ ಗೊತ್ತಿದೆ. ಈ ರೀತಿಯ ಆರೋಪ ಮಾಡುವುದರಿಂದ ಅವರು ಆರೋಪದಿಂದ ಮುಕ್ತ ಆಗಲು ಆಗುವುದಿಲ್ಲ. ಈ ರೀತಿಯ ಮಾತುಗಳಿಂದ ಅವರು ಬಚಾವ್ ಆಗಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ವಯನಾಡು ಭೂಕುಸಿತ; ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಬೆಟ್ಟದಲ್ಲಿ ಕಾವಲಾಗಿ ನಿಂತ ಗಜರಾಜ
ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಸರ್ಕಾರ ಮತ್ತು ರಾಜಭವನದ ನಡುವೆ ಸಂಘರ್ಷ ನಡೆಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಮುಡಾ ಹಗರಣ (MUDA Scam) ಸಂಬಂಧ ಸಿಎಂ ಸಿದ್ದರಾಮಯ್ಯನವರಿಗೆ (CM Siddaramaiah) ನೋಟಿಸ್ ನೀಡಿದ ರಾಜ್ಯಪಾಲರ (Governor) ನಡೆ ಖಂಡಿಸಿ ರಾಜ್ಯ ಮಂತ್ರಿ ಪರಿಷತ್ ಗುರುವಾರ ಸುದೀರ್ಘ ನಿರ್ಣಯ ಅಂಗೀಕರಿಸಿದೆ. ಮಂತ್ರಿ ಪರಿಷತ್ ನಿರ್ಣಯದ ಬೆನ್ನಲ್ಲೇ ರಾಜ್ಯಪಾಲರ ಮುಂದಿನ ನಡೆ ಏನು ಎಂಬ ಕುತೂಹಲ ಹೆಚ್ಚಾಗಿದೆ.
ದೆಹಲಿ ಪ್ರವಾಸದಲ್ಲಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಆಗಸ್ಟ್ 4ಕ್ಕೆ ಬೆಂಗಳೂರಿಗೆ ಮರಳಲಿದ್ದಾರೆ. ಆಗಸ್ಟ್ 5ರಂದು ಸರ್ಕಾರದ ಮಂತ್ರಿ ಪರಿಷತ್ ನಿರ್ಣಯ, ಸಿಎಂ ಸಿದ್ದರಾಮಯ್ಯ ವಿವರಣೆಯನ್ನು ಪರಿಶೀಲನೆ ನಡೆಸಲಿದ್ದಾರೆ. ಪರಿಷತ್ ನಿರ್ಣಯ ಒಪ್ಪುವುದು, ತಿರಸ್ಕರಿಸುವುದು ರಾಜ್ಯಪಾಲರ ವಿವೇಚನೆ ಬಿಡಲಾಗಿದೆ.
ಭ್ರಷ್ಟಾಚಾರ (Corruption) ಆರೋಪ ಸಂಬಂಧ ಸಿಎಂಗೆ ಜುಲೈ 26ಕ್ಕೆ ರಾಜ್ಯಪಾಲರು ನೋಟಿಸ್ ನೀಡಿದ್ದು, ನಿಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಏಕೆ ಅನುಮತಿ ನೀಡಬಾರದು? ಏಳು ದಿನಗಳಲ್ಲಿ ಉತ್ತರಿಸಿ ಎಂದು ಕೇಳಿದ್ದರು. ಗುರುವಾರ ಉತ್ತರ ನೀಡಲು ಕೊನೆಯ ದಿನ ಕೂಡ ಆಗಿತ್ತು.
ರಾಜ್ಯಪಾಲರ ಮುಂದಿರುವ ಆಯ್ಕೆಗಳೇನು?
7 ದಿನಗಳ ಒಳಗಡೆ ಉತ್ತರ ನೀಡದಿದ್ದರೆ ಮತ್ತೊಮ್ಮೆ ನೋಟಿಸ್ ಕೊಡಬಹುದು. 3-4 ದಿನಗಳ ಕಾಲಾವಕಾಶ ನೀಡಿ ಮತ್ತೊಮ್ಮೆ ನೋಟಿಸ್ ನೀಡಬಹುದು. ದೂರುದಾರನನ್ನು ಕರೆದು ಮತ್ತೊಮ್ಮೆ ಹೇಳಿಕೆ ದಾಖಲಿಸಿಕೊಳ್ಳಬಹುದು. ಎರಡನೇ ನೋಟಿಸ್ಗೂ ಉತ್ತರ ನೀಡದೇ ಇದ್ದರೆ ಮುಂದಿನ ನಿರ್ಧಾರ ಕೈಗೊಳ್ಳಬಹುದು.
ಮಂತ್ರಿ ಪರಿಷತ್ ವಿಸ್ತೃತವಾದ 4 ಪುಟಗಳ ಉತ್ತರವನ್ನು ತಯಾರಿಸಿದ್ದು, ಅದನ್ನು ರಾಜಭವನಕ್ಕೆ ಕಳಿಸಿಕೊಟ್ಟಿದೆ. ಅಲ್ಲದೇ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಮಾಡಿರುವ ಆರೋಪಗಳಿಗೆ ದಾಖಲೆ ಸಮೇತ ಉತ್ತರ ಕೊಡಲು ತೀರ್ಮಾನಿಸಿದೆ. ಕಾನೂನಾತ್ಮಕ ಹೋರಾಟಕ್ಕೂ ನಿರ್ಧರಿಸಿದೆ.
ಸಿಎಂ ಅನುಪಸ್ಥಿತಿಯಲ್ಲಿ ಡಿಸಿಎಂ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಜ್ಯಪಾಲರ ನೋಟಿಸ್ನಲ್ಲಿ ಬಳಸಿದ ಪದ, ಒಕ್ಕಣಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ರಾಜ್ಯಪಾಲರ ಸ್ಥಾನ ರಾಜಕೀಯವಾಗಿ ದುರುಪಯೋಗ ಆಗುತ್ತಿದೆ. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿದ್ದಾರೆ. ಕೂಡಲೇ ರಾಜ್ಯಪಾಲರು ನೋಟಿಸ್ ಹಿಂಪಡೆಯಬೇಕು ಎಂದು ಮಂತ್ರಿ ಪರಿಷತ್ ಒತ್ತಾಯಿಸಿದೆ. ಇದನ್ನೂ ಓದಿ: ವಯನಾಡು ಭೂಕುಸಿತ ದುರಂತ; ಒಂದೇ ಚಿತೆಯಲ್ಲಿ ಅಜ್ಜಿ-ಮೊಮ್ಮಗನ ಅಂತ್ಯಕ್ರಿಯೆ
ಮಂತ್ರಿ ಪರಿಷತ್ ನಿರ್ಧಾರ ಏನು?
ರಾಜ್ಯಪಾಲರ ನೋಟಿಸ್ ಕಾನೂನು ಮತ್ತು ಸಂವಿಧಾನ ಬಾಹಿರವಾಗಿದ್ದು ನೋಟಿಸ್ ಕೇವಲ ರಾಜಕೀಯ ಉದ್ದೇಶದಿಂದ ಕೂಡಿದೆ. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ವರ್ತಿಸುತ್ತಿದ್ದು ರಾಜ್ಯಪಾಲರನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ.
ಬೆಂಗಳೂರು: ಸಿಎಂ ಸಿದ್ದರಾಮಯ್ಯರನ್ನು (CM Siddaramaiah) ರಕ್ಷಣೆ ಮಾಡಲು ಇಂದಿನ ಕ್ಯಾಬಿನೆಟ್ನಲ್ಲಿ (Cabinet) ರಾಜ್ಯಪಾಲರ ವಿರುದ್ದ ನಿರ್ಣಯ ಅಂಗೀಕಾರ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಅಶೋಕ್ (R Ashok) ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು,ಕ್ಯಾಬಿನೆಟ್ ಮಂತ್ರಿಗಳು ಸಿದ್ದರಾಮಯ್ಯ ರಕ್ಷಣೆ ನಿಂತಿದ್ದಾರೆ. ದೂರು ಕೊಟ್ಟಾಗ ಅದಕ್ಕೆ ವಿವರಣೆ ಕೇಳುವುದು ರಾಜ್ಯಪಾಲರ ಕರ್ತವ್ಯ. ರಾಜ್ಯಪಾಲರು ಹೀಗೆ ಕೇಳಬೇಕು ಅಂದರೆ ಆಗುತ್ತಾ? ರಾಜ್ಯಪಾಲರು ನೋಟಿಸ್ ಕೊಡುವಾಗ ಕಾನೂನು ನೋಡಿ ಕೊಟ್ಟಿರುತ್ತಾರೆ. ಅದನ್ನ ಪ್ರಶ್ನೆ ಮಾಡಿದ್ರೆ ಕಾನೂನುಗಿಂತ ನೀವು ದೊಡ್ಡವರಾ? ಕ್ಯಾಬಿನೆಟ್ ಕರೆದು ರಾಜ್ಯಪಾಲರ ಮೇಲೆ ಒತ್ತಡ ಹಾಕುವುದು ಸರಿಯಲ್ಲ ಅಂತ ಕಿಡಿಕಾರಿದರು. ಇದನ್ನೂ ಓದಿ: ಮುಡಾ ಹಗರಣ; ಸಿಎಂ ಪರವಾಗಿ ಸಂಪುಟ ನಿರ್ಣಯ
ಸಂವಿಧಾನದ ಪ್ರಕಾರ ರಾಜ್ಯಕ್ಕೆ ಸುಪ್ರೀಂ ರಾಜ್ಯಪಾಲರು. ಅವರಿಗೆ ಕಾನೂನು ಹೇಳಿಕೊಡಲು ಹೋಗ್ತೀರಾ? ಇದರಿಂದ ನೀವು ತಪ್ಪು ಮಾಡಿದ್ದೀರಾ ಅಂತ ಅಗುತ್ತದೆ. ಏನು ತಪ್ಪು ಮಾಡಿಲ್ಲ ಅಂದರೆ ಯಾಕೆ ಅಧಿವೇಶನದಲ್ಲಿ ಚರ್ಚೆ ಮಾಡಲಿಲ್ಲ. ಸಿಎಂ ಅವರು ದಾಖಲೆ ಸಮೇತ ಅಲ್ಲೇ ಎಲ್ಲವನ್ನು ಹೇಳಬಹುದಿತ್ತು. ಆದರೆ ಸಿದ್ದರಾಮಯ್ಯ ಅಂದು ಹೇಡಿ ತರಹ ಓಡಿ ಹೋಗಿದ್ದಾರೆ. ಇವರು ತಪ್ಪು ಮಾಡಿಲ್ಲ ಅಂದರೆ ಸರ್ಕಾರ ಅಸ್ಥಿರ ಆಗುತ್ತೆ ಅಂತ ಯಾಕೆ ಭಯ ಬೀಳ್ತಾರೆ ಅಂತ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ, ಜನಾರ್ದನ ರೆಡ್ಡಿ ಅವರ ಮೇಲು ದೂರು ದಾಖಲಾಗಿತ್ತು. ಅಂದು ಅವರು ಹೋರಾಟ ಮಾಡಿದ್ದರು. ಯಡಿಯೂರಪ್ಪ ವಿರುದ್ದ ಅಂದು ಅನುಮತಿ ಕೊಟ್ಟಿದ್ದು ಯಾರು? ಅವತ್ತು ಕೇಂದ್ರದಲ್ಲಿ ಯಾವ ಸರ್ಕಾರ ಇತ್ತು. ಅವತ್ತು ರಾಜ್ಯಪಾಲರು ಯಾರು? ನಾವು ಅವತ್ತು ಕ್ಯಾಬಿನೆಟ್ನಲ್ಲಿ ಹೀಗೆ ಏನಾದ್ರು ನಿರ್ಣಯ ಮಾಡಿದ್ದೀವಾ? ಇಷ್ಟೆಲ್ಲ ಇವರು ಮಾಡುತ್ತಿರುವುದು ನೋಡಿದರೆ ಇವರು ತಪ್ಪು ಮಾಡಿರುವುದು ನಿಜ ಅಂತ ಅನ್ನಿಸುತ್ತಿದೆ ಎಂದು ಆರೋಪಿಸಿದರು. ಯಡಿಯೂರಪ್ಪ ಮೇಲೂ ಅಂದು ಯಾರೋ ಒಬ್ಬರು ಖಾಸಗಿ ದೂರು ನೀಡಿದ್ದರು. ಯಡಿಯೂರಪ್ಪ ಅಂದು ಕಾನೂನು ಹೋರಾಟ ಮಾಡಿದ್ದರು. ಈಗ ನೀವು ತಪ್ಪಿಲ್ಲ ಅಂದರೆ ಕಾನೂನು ಹೋರಾಟ ಮಾಡಿ ಅಂತ ಸಿಎಂ ಸಿದ್ದರಾಮಯ್ಯಗೆ ಸವಾಲ್ ಹಾಕಿದರು.
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಸೈಟ್ ಹಂಚಿಕೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಪ್ರಾಸಿಕ್ಯೂಶನ್ಗೆ ಅನುಮತಿ ನೀಡುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ.
ಈ ವಿಚಾರ ಚರ್ಚೆ ಆಗುತ್ತಿರುವ ಬೆನ್ನಲ್ಲೇ ರಾಜಭವನದ ವಿರುದ್ಧ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಸಚಿವರು ಮುಗಿಬಿದ್ದಿದ್ದಾರೆ. ಬಿಜೆಪಿಗರು (BJP) ಪ್ರತಿದಾಳಿಗೆ ನಿಂತಿದ್ದಾರೆ. ಮುಡಾ ಅಕ್ರಮ ವಿಚಾರದಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರು ಪ್ರಾಸಿಕ್ಯೂಶನ್ಗೆ ಅನುಮತಿ ಕೋರಿ ಪತ್ರ ಬರೆದಿದ್ದರು. ಇದನ್ನೇ ಆಧರಿಸಿ ವಿವರಣೆ ಕೋರಿ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ.
ಪ್ರಾಸಿಕ್ಯೂಷನ್ ಅನುಮತಿ ನೀಡಿದ್ರೆ ಮುಂದೇನು?
ದೂರುದಾರ ಟಿ ಜೆ ಅಬ್ರಾಹಂ (TJ Abraham) ನೇರವಾಗಿ ಪಿಸಿಆರ್ ದಾಖಲು ಮಾಡಬಹುದು. ಖಾಸಗಿ ದೂರು ದಾಖಲು ಮಾಡಿ ಕೋರ್ಟ್ ಎಫ್ಐಆರ್ ದಾಖಲಿಸುವಂತೆ ಲೋಕಾಯುಕ್ತಕ್ಕೆ (Lokayukta) ನಿರ್ದೇಶನ ನೀಡಬೇಕು. ಇದನ್ನೂ ಓದಿ: ಕರ್ನಾಟಕದಲ್ಲಿ ವಿರೋಧ ಪಕ್ಷಗಳ ಸ್ಟಾರ್ ಚೆನ್ನಾಗಿಲ್ಲ: ಡಿವಿಎಸ್
ಕೋರ್ಟ್ ನಿರ್ದೇಶನ ಮೇರೆಗೆ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲು ಮಾಡಬೇಕಾಗುತ್ತದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ತನಿಖೆ ಮಾಡಬೇಕು. ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ಲೋಕಾಯುಕ್ತ ಮಾಡಬಹುದು.
3 ತಿಂಗಳು ಕಾಲಾವಕಾಶ:
ಮುಖ್ಯಮಂತ್ರಿಗಳ ವಿರುದ್ಧ ಒಬ್ಬರು ದೂರು ನೀಡಿದರೆ ಆ ದೂರನ್ನು ಇತ್ಯರ್ಥ ಮಾಡಲು ರಾಜ್ಯಪಾಲರಿಗೆ 3 ತಿಂಗಳು ಕಾಲಾವಕಾಶ ಇರಲಿದೆ. ಈಗಾಗಲೇ ದೂರು ಸ್ವೀಕರಿಸಿದ ರಾಜ್ಯಪಾಲರು ಮುಖ್ಯಮಂತ್ರಿ ಅವರಿಗೆ ನೋಟಿಸ್ ನೀಡಿದ್ದಾರೆ. ನೋಟಿಸ್ ಸ್ವೀಕರಿಸಿರುವ ಸಿಎಂ ಸಿದ್ದರಾಮಯ್ಯ 15 ದಿನದ ಒಳಗೆ ಉತ್ತರ ಅಥವಾ ಸಮಜಾಯಿಷಿ ನೀಡಬೇಕು. 15 ದಿನ ಕಳೆದರೂ ಸಮಜಾಯಿಷಿ ನೀಡದೇ ಇದ್ದರೆ ರಾಜ್ಯಪಾಲರು ಮುಂದಿನ ಕ್ರಮ ತೆಗೆದುಕೊಳ್ಳಬಹುದು. ರಾಜ್ಯಪಾಲರು ಜುಲೈ 27 ರಂದು ಸಿಎಂಗೆ ನೋಟಿಸ್ ನೀಡಿದ್ದಾರೆ. ಇಂದಿಗೆ (ಆಗಸ್ಟ್ 01) ಒಟ್ಟು 6 ದಿನ ಕಳೆದಿದ್ದು ಇನ್ನು 9 ದಿನ ಮಾತ್ರ ಸಿಎಂಗೆ ಅವಕಾಶ ಇದೆ.
ಬೆಂಗಳೂರು: ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಆಗಿ ಅಧಿಕಾರದಲ್ಲಿದ್ದಾರೆ. ಈಗ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಮುಖ್ಯಮಂತ್ರಿ ಕುರ್ಚಿ ಖಾಲಿ ಇದ್ದರೇ ತಾನೆ ಚರ್ಚೆ ಮಾಡಬೇಕಿರೋದು ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ (Zameer Ahmed Khan) ಅವರು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.
ಬೆಂಗಳೂರಿನಲ್ಲಿಂದು (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ಕಾರಣಕ್ಕೆ ಸರ್ಕಾರ ಬೀಳುತ್ತೆ? ಮುಡಾ (MUDA) ವಿಚಾರದಲ್ಲಿ ಸಿಎಂ ಪಾತ್ರ ಏನಿದೆ? ತಪ್ಪೇನಿದೆ? ಬದಲಿ ಸೈಟ್ ಕೊಟ್ಟಿರೋದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಈಗಲೂ ಸಿದ್ದರಾಮಯ್ಯಗೆ ಕಪ್ಪು ಚುಕ್ಕಿ ಇಲ್ಲ. ಏನಿದೆ ಕಪ್ಪು ಚುಕ್ಕೆ? ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡ್ತಾರೆ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಪಾದಯಾತ್ರೆ ತಡೆದ್ರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತೆ – ಸರ್ಕಾರಕ್ಕೆ ವಿಜಯೇಂದ್ರ ಖಡಕ್ ವಾರ್ನಿಂಗ್
ಬಿಜೆಪಿಯವರ ಬಳಿ ಯಾವುದೇ ವಿಚಾರ ಇಲ್ಲ. ಅದಕ್ಕೆ ಇದನ್ನೇ ದೊಡ್ಡ ಸುದ್ದಿ ಮಾಡ್ತಿದ್ದಾರೆ. ಕುಮಾರಸ್ವಾಮಿಯವರು ಅವರ ಬ್ಯಾಕಪ್ಗೆ ನಿಂತಿದ್ದಾರೆ. ಕುಮಾರಸ್ವಾಮಿಗೆ ಸಿದ್ದರಾಮಯ್ಯ ಸಿಎಂ ಆಗಿರುವುದನ್ನ ಸಹಿಸೋದಕ್ಕೆ ಆಗ್ತಿಲ್ಲ. ಅದಕ್ಕಾಗಿ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪರಿಸರ ಸ್ನೇಹಿ ಇನ್ವಿಟೇಷನ್ ಮೂಲಕ ಮಾದರಿಯಾದ ನಟಿ ಸೋನಲ್, ತರುಣ್ ಸುಧೀರ್
ಮುಡಾ ಹಗರಣ ವಿಚಾರದಲ್ಲಿ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಕ್ಲಾರಿಫಿಕೇಶನ್ ನೀಡಿದ್ದಾರೆ. ಇದರಲ್ಲಿ ಮುಖ್ಯಮಂತ್ರಿ ಪಾತ್ರ ಏನಿದೆ? ಯಾವುದೋ ದೇವರಾಜ್ ಕಡೆಯಿಂದ ಬಾಮೈದ ಕೊಂಡುಕೊಂಡಿದ್ದಾರೆ. ಬಾಮೈದ ಅವರ ಅಕ್ಕನಿಗೆ ಗಿಫ್ಟ್ ಮಾಡಿದ್ದಾರೆ. ಅವರದೇ ಸೈಟಿನಲ್ಲಿ ಮುಡಾ ಲೇಔಟ್ ಮಾಡಿದೆ. ಸಿದ್ದರಾಮಯ್ಯನವರು ಸೈಟ್ ಹಂಚಿಕೆ ಮಾಡಿದ್ದಾರಾ? ಮುಖ್ಯಮಂತ್ರಿ ಇರುವಾಗ ಬದಲಿ ಸೈಟು ಕೊಟ್ಟಿದ್ರಾ? ಬಿಜೆಪಿ ಸರ್ಕಾರ ಇರುವಾಗ ಕೊಟ್ಟಿದ್ದು ಸೈಟು. ಸಿದ್ದರಾಮಯ್ಯ ಸಿಎಂ ಆಗಿರುವಷ್ಟು ದಿನ ಬಿಜೆಪಿಗೆ, ಕುಮಾರಸ್ವಾಮಿಗೆ ಸಿಎಂ ಆಗುವ ಅವಕಾಶ ಸಿಗಲ್ಲ ಅಂತಾ ಗೊತ್ತಾಗಿದೆ. ಜೀವನದಲ್ಲೇ ಮುಂದೆ ಬರೋಕೆ ಆಗಲ್ಲ ಅನ್ನೋ ಕಾರಣಕ್ಕೆ ಮಾತಾಡ್ತಿದ್ದಾರೆ ಎಂದು ಕುಟುಕಿದ್ದಾರೆ.
ಇನ್ನೂ ಕಾಂಗ್ರೆಸ್ನವರೂ ಈ ಪ್ರಕರಣದಲ್ಲಿ ಕೈಜೋಡಿಸಿದ್ದಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಜಮೀರ್, ಈ ಪ್ರಕರಣದಲ್ಲಿ ಕಾಂಗ್ರೆಸ್ನವರು ಯಾಕೆ ಕೈ ಜೋಡಿಸುತ್ತಾರೆ? ನಮ್ಮದು ಹೈಕಮಾಂಡ್ ಪಕ್ಷ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಅದೇ ಫೈನಲ್. ನಾವು ಯಾರು, ಏನೂ ಮಾಡಕ್ಕಾಗಲ್ಲ. ಕೇಂದ್ರ ಸರ್ಕಾರದವರು ನಮಗೆ ಏನು ದುಡ್ಡು ಕೊಡಬೇಕೊ ಕೊಟ್ಟುಬಿಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಭಿಮನ್ಯುವಿಗೆ ಮಾಡಿದಂತೆ ಇಡೀ ಭಾರತಕ್ಕೆ ಚಕ್ರವ್ಯೂಹ ರಚಿಸಿದ್ದಾರೆ, ದೇಶವನ್ನ ಧ್ವಂಸಗೊಳಿಸುತ್ತಾರೆ – ರಾಗಾ ಆತಂಕ
ಬೆಂಗಳೂರು: ಮುಡಾ ಮತ್ತು ವಾಲ್ಮೀಕಿ ನಿಗಮ (MUDA And Valmiki Scam) ಅಕ್ರಮಗಳ ವಿರುದ್ಧ ದೋಸ್ತಿಗಳ ಪಾದಯಾತ್ರೆಗೆ ಅಖಾಡ ಸಜ್ಜಾಗಿದೆ. ಪಾದಯಾತ್ರೆಯ ರೂಟ್ಮ್ಯಾಪ್ ಮತ್ತು ಸಿದ್ಧತೆ ಕುರಿತು ಸೋಮವಾರ ಬಿಜೆಪಿ ನಾಯಕರು (BJP Leader) ಪೂರ್ವಭಾವಿ ಸಭೆ ನಡೆಸಿದರು.
ಸಭೆ ಬಳಿಕ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra), ಆಗಸ್ಟ್ 3ರ ಶನಿವಾರ ಬೆಳಗ್ಗೆ 8.30ಕ್ಕೆ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಹೆಚ್ಡಿಕೆ, ಪ್ರಹ್ಲಾದ್ ಜೋಶಿಯವರಿಂದ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಈವೇಳೆ ಬಿಜೆಪಿ ಜೆಡಿಎಸ್ನ ಎಲ್ಲ ಹಿರಿಯರು ಉಪಸ್ಥಿತರಿರಲಿದ್ದಾರೆ. ಕೆಂಗೇರಿ ಬಳಿಯ ಕೆಂಪಮ್ಮ ದೇಗುಲ, ಗಣಪತಿ ದೇಗುಲದಲ್ಲಿ ಪೂಜೆ ಮಾಡಿ ಪಾದಯಾತ್ರೆ ಆರಂಭಿಸುತ್ತೇವೆ. ಆಗಸ್ಟ್ 10ರ ಶನಿವಾರ ಪಾದಯಾತ್ರೆಯ ಸಮಾರೋಪ ಇದ್ದು, ನಮ್ಮ ವರಿಷ್ಠರು ಪಾಲ್ಗೊಳ್ತಾರೆ ಅಂತ ತಿಳಿಸಿದರು. ಇದನ್ನೂ ಓದಿ: ದೇವೇಗೌಡರ ಕುಟುಂಬಕ್ಕೆ ಎಷ್ಟು ಸೈಟು ಬರೆಸಿಕೊಂಡಿದ್ದಾರೆ ಪಟ್ಟಿ ಕೊಡ್ಲಾ? – ಸಿದ್ದರಾಮಯ್ಯ
ಇನ್ನೂ ಒಟ್ಟು ಏಳು ದಿನಗಳ ಕಾಲ ಪಾದಯಾತ್ರೆ (Mysuru Chalo Padayatra) ನಡೆಯಲಿದ್ದು, ನಿತ್ಯ 20 ನಡಿಗೆ ಇರಲಿದೆ. ಬೆಳಗ್ಗೆ 10 ಕಿಮೀ, ಊಟದ ನಂತರ 10 ಕಿಮೀ ಪಾದಯಾತ್ರೆ. 224 ವಿಧಾನಸಭೆ ಕ್ಷೇತ್ರಗಳಿಂದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ನಿತ್ಯ 8-10 ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಪಾದಯಾತ್ರೆಗೆ ಪಕ್ಷದಿಂದ ಪ್ರಮುಖರ ತಂಡ ರಚಿಸಲಾಗಿದೆ. ಪ್ರತೀ ಜಿಲ್ಲೆಯಿಂದ ಕನಿಷ್ಠ 200 ಜನ ಬರ್ತಾರೆ, ಏಳು ದಿನವೂ ಅವರು ಇರ್ತಾರೆ. ವಸತಿ ವ್ಯವಸ್ಥೆ, ಊಟೋಪಹಾರಕ್ಕೆ ತಂಡಗಳನ್ನು ರಚಿಸಲಾಗಿದೆ. ಈ ಪಾದಯಾತ್ರೆ ಯಶಸ್ವಿಗೊಳಿಸಲು ಬಿಜೆಪಿ ಜೆಡಿಎಸ್ ಮುಖಂಡರ ಸಮನ್ವಯ ತಂಡವನ್ನೂ ರಚಿಸ್ತೇವೆ ಅಂತ ಇದೇ ವೇಳೆ ವಿಜಯೇಂದ್ರ ತಿಳಿಸಿದರು.
ಇನ್ನೂ ಪಾದಯಾತ್ರೆಗೆ ಸರ್ಕಾರ ಅಧಿಕೃತ ಅನುಮತಿ ಕೊಡದ ಬಗ್ಗೆ ಪ್ರತಿಕ್ರಿಯೆ ಕೊಟ್ಟ ವಿಜಯೇಂದ್ರ, ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಸಹ ಪಾದಯಾತ್ರೆ ಮಾಡಿತ್ತು. ನಮ್ಮ ಹೋರಾಟ ಹತ್ತಿಕ್ಕುವ ಶಕ್ತಿ, ಈ ಸರ್ಕಾರಕ್ಕೆ ಇಲ್ಲ. ಸರ್ಕಾರದ ವಿರುದ್ಧ ಜನ ಆಕ್ರೋಶ ಕಾರ್ತಿದ್ದಾರೆ. ನಮ್ಮ ಹೋರಾಟ ಹತ್ತಿಕ್ಕಿದರೆ ಪರಿಸ್ಥಿತಿ ಎಲ್ಲಿಗೆ ಹೋಗುತ್ತೋ ಗೊತ್ತಿಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಮಧ್ಯಸ್ಥಿಕೆ ವಹಿಸಲಿ, ಮೇಕೆದಾಟು ಅಣೆಕಟ್ಟು ಕಟ್ಟಲು ಸಿದ್ಧ – ಸಿದ್ದರಾಮಯ್ಯ
ಕಾಟಾಚಾರಕ್ಕೆ ಹೋರಾಡ್ತಿಲ್ಲ:
ಇದೇ ವೇಳೆ ವಿಜಯೇಂದ್ರ ನಾಯಕತ್ವ ಒಪ್ಪಿಲ್ಲ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ. ನಾನು ನಾಯಕ ಅಲ್ಲ, ಪಕ್ಷದ ಕಾರ್ಯಕರ್ತ, ನಾನೊಬ್ಬನೇ ನಾಯಕ ಅಂತ ಅನ್ಕೊಂಡಿಲ್ಲ. ಹೈಕಮಾಂಡ್ ಏನು ಹೇಳುತ್ತೋ ಆ ಕೆಲಸ ಶ್ರದ್ಧೆಯಿಂದ ಮಾಡಿಕೊಂಡು ಹೋಗ್ತಿದ್ದೇನೆ ಎಂದಿದ್ದಾರೆ. ಇನ್ನೂ ಬಸನಗೌಡ ಪಾಟೀಲ್ ಯತ್ನಾಳ್ರಿಂದ ಪ್ರತ್ಯೇಕ ಪಾದಯಾತ್ರೆ ಬಗ್ಗೆ ಮಾತಾಡಿ, ಒಂದು ವೇಳೆ ಒಂದಿಬ್ಬರು ಪ್ರತ್ಯೇಕ ಪಾದಯಾತ್ರೆ ಮಾಡಿದ್ರೆ. ಅದು ನಮ್ಮ ಪಕ್ಷಕ್ಕೆ ಶಕ್ತಿ ಕೊಡುತ್ತದೆ ಎಂದಿದ್ದಾರೆ.
ಮೈಸೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ (HD Devegowda) ಎಷ್ಟು ಸೈಟು ಹೋಗಿದೆ ಗೊತ್ತಿದ್ಯಾ? ಪುಟ್ಟಯ್ಯ ಸಿಐಟಿಬಿ ಅಧ್ಯಕ್ಷರಾಗಿದ್ದಾಗ ದೇವೇಗೌಡರ ಕುಟುಂಬಕ್ಕೆ ಎಷ್ಟು ಸೈಟು ಬರೆಸಿಕೊಂಡಿದ್ದಾರೆ ಪಟ್ಟಿ ಕೊಡ್ಲಾ? ಕುಮಾರಸ್ವಾಮಿ ಅವರೂ ಸಹ 40 ವರ್ಷಗಳ ಹಿಂದೆ ಮುಡಾ ಸೈಟ್ ಪಡೆದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಆರೋಪಿಸಿದರು.
ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ (MUDA Scam) ವಿಚಾರಕ್ಕೆ ಪ್ರತಿಕ್ರಿಯಿಸಿದರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಎಷ್ಟು ಸೈಟು ಹೋಗಿದೆ ಗೊತ್ತಿದ್ಯಾ? ಎಂದು ಪ್ರಶ್ನಿಸಿದ ಸಿಎಂ, ಪುಟ್ಟಯ್ಯ ಸಿಐಟಿಬಿ ಅಧ್ಯಕ್ಷರಾಗಿದ್ದಾಗ ದೇವೇಗೌಡರ ಕುಟುಂಬಕ್ಕೆ (HD Devegowda’s Family) ಎಷ್ಟು ಸೈಟು ಬರೆಸಿಕೊಂಡಿದ್ದಾರೇ ಪಟ್ಟಿ ಕೊಡ್ಲಾ? ಕುಮಾರಸ್ವಾಮಿ (HD Kumaraswamy) 40 ವರ್ಷದ ಹಿಂದೆ ಮುಡಾ ಸೈಟು ಪಡೆದಿದ್ದಾರೆ. ಅದರ ಸ್ವಾಧೀನ ಪತ್ರವೂ ಪಡೆದುಕೊಂಡಿದ್ದಾರೆ. ಈಗ ಇಲ್ಲ ಎಂದು ಸುಳ್ಳು ಹೇಳಿದರೇ ಹೇಗೆ? ನಾನು ಸ್ವಾಧೀನ ಪತ್ರ ಪಡೆದಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿರುವುದು ಸುಳ್ಳು. ಇವರೆಲ್ಲಾ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: Delhi Coaching Centre Flooded: ಐಎಎಸ್ ಆಕಾಂಕ್ಷಿಗಳ ಸಾವು ಪ್ರಕರಣ – ಲೋಕಸಭೆಯಲ್ಲಿ ಚರ್ಚೆ
ಬಿಜೆಪಿ ಬ್ಲ್ಯಾಕ್ ಮೇಲ್ ತಂತ್ರ ಮಾಡುತ್ತಿದೆ, ಇಲ್ಲದ ಹಗರಣವನ್ನ ಸೃಷ್ಟಿ ಮಾಡುತ್ತಿದೆ. ಅವರಿಗೆ ಯಾವು ಐಡಿಯಾಲಾಜಿ ಇಲ್ಲ, ಯಾವತ್ತೂ ನ್ಯಾಯಪರವಾಗಿಲ್ಲ. ಮುಡಾ ಹಗರಣವನ್ನ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇನೆ. ಇದಕ್ಕಿಂತ ಇನ್ನೇನು ಬೇಕು ಹೇಳಿ? ನ್ಯಾಯಾಂಗ ತನಿಖೆಯನ್ನ ಕೇಂದ್ರ ಸಚಿವರು ಅನುಮಾನದಿಂದ ನೋಡಿದರೇ ಅದರಲ್ಲಿ ಅರ್ಥ ಇದ್ಯಾ? ಇವರ ಅವಧಿಯಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ ಗೊತ್ತಾ? ಒಂದು ಪ್ರಕರಣವನ್ನಾದರೂ ನ್ಯಾಯಾಂಗ ತನಿಖೆ ಮಾಡಿಸಿದ್ದಾರಾ? ಕೋವಿಡ್ ಸಮಯದಲ್ಲಿ 4,000 ಕೋಟಿ ನುಂಗಿದರು. ಅದನ್ನ ತನಿಖೆ ಮಾಡಿದ್ರಾ? ನಾನು ಬಂದ ಮೇಲೆ ಏಳೆಂಟು ಹಗರಣ ಸಿಬಿಐಗೆ ಕೊಟ್ಟಿದ್ದೇನೆ. ಇವರ ಅವಧಿಯಲ್ಲಿ ಒಂದಾದ್ರು ಸಿಬಿಐಗೆ ಕೊಟ್ಟಿದ್ದಾರಾ ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: Valmiki Corporation Scam | ಹೈದರಾಬಾದ್ನಲ್ಲೇ ಬೀಡುಬಿಟ್ಟ ಎಸ್ಐಟಿ – ಒಟ್ಟು 16 ಕೆಜಿ ಚಿನ್ನ ಜಪ್ತಿ
ಕೇಂದ್ರೀಯ ತನಿಖಾ ದಳವನ್ನ ಚೋರ್ ಬಚಾವ್ ಸಂಸ್ಥೆ ಎನ್ನುತ್ತಿದ್ದ ಬಿಜೆಪಿ ಈಗ ಸಿಬಿಐ, ಸಿಬಿಐ ಎಂದು ಬಾಯಿ ಬಡಿಯುತ್ತಿದೆ. ಮುಡಾ ಹಗರಣ ಅರೊಪದ ವಿಚಾರದಲ್ಲಿ ನನಗೆ ಯಾವ ಬೇಸರವೂ ಆಗಿಲ್ಲ. ತಪ್ಪೇ ಮಾಡಿಲ್ಲ ಅಂದ್ಮೇಲೆ ಬೇಸರ ಏಕೆ ಆಗುತ್ತದೆ? 40 ವರ್ಷದ ರಾಜಕಾರಣದಲ್ಲಿ ನನ್ನ ಮೇಲೆ ಇಂತಹ ಆರೋಪ ಪ್ರಕರಣ ಬಹಳ ನಡೆದವು. ಇದನ್ನ ರಾಜಕೀಯವಾಗಿಯೇ ಎದುರಿಸುತ್ತೇನೆ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಕೇಂದ್ರದಿಂದ ಅನ್ಯಾಯ, ದೇಶ ವಿಭಜನೆ ಕೂಗು ಮತ್ತೊಮ್ಮೆ ಏಳಬಹುದು: ಡಿಕೆ ಸುರೇಶ್
ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ನೈತಿಕತೆ ಇದ್ದರೆ, ಮಾನ ಮರ್ಯಾದೆ ಇದ್ದರೆ ಸಿಎಂ ಸೇರಿ ಎಲ್ಲರೂ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Numaraswamy) ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ (BJP-JDS) ಪಾದಯಾತ್ರೆಯನ್ನು ಪಾಪ ತೊಳೆದುಕೊಳ್ಳಲು ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. ಈ ವೇಳೆ ಸರ್ಕಾರ ಬಂದು ಒಂದೂವರೆ ವರ್ಷ ಆಗಿದೆ. ಸಾಮಾನ್ಯವಾಗಿ ಪಾದಯಾತ್ರೆ ಮಾಡೋದು ಸರ್ಕಾರ ಬಂದು 4 ವರ್ಷ ಕಳೆದ ಮೇಲೆ. ಆ ಸಮಯದಲ್ಲಿ ಲೋಪದೋಷಗಳಾಗಿದ್ದರೆ, ಸಾರ್ವಜನಿಕರ ಪರವಾಗಿ ಹೋರಾಟ ಮಾಡೋದು ಸಹಜ. ರಾಜ್ಯದ ಹಿತಾಸಕ್ತಿಯಿಂದ ಸರ್ಕಾರದ ಅಕ್ರಮ ಖಂಡಿಸಿ ವಿಪಕ್ಷಗಳು ಪಾದಯಾತ್ರೆ, ಪ್ರತಿಭಟನೆ ಮಾಡ್ತೀವಿ. ಆದರೆ ಈ ಸರ್ಕಾರ ಒಂದೂವರೆ ವರ್ಷಗಳಿಂದ ಹಗರಣಗಳಲ್ಲೇ ಮುಳುಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಅನಿವಾರ್ಯವಾಗಿ ಕಾಂಗ್ರೆಸ್ ಸರ್ಕಾರ ನಮ್ಮನ್ನು ಪಾದಯಾತ್ರೆ ಮಾಡಲು ದೂಡಿದೆ. ಎಸ್ಟಿ ಸಮುದಾಯದ ಹಣದ ವಾಲ್ಮೀಕಿ ಹಗರಣ (Valmiki Corp Scam) ಬೆಳಕಿಗೆ ಬಂದಿದೆ. 187 ಕೋಟಿ ರೂ. ಹಣ ರಾಜ್ಯದ ಎಸ್ಟಿ ಸಮುದಾಯದ ಅಭಿವೃದ್ಧಿಗೆ ಇಟ್ಟ ಹಣವನ್ನು ರಾಜ್ಯಗಳ ಚುನಾವಣೆಗೆ ಬಳಕೆ ಮಾಡಿದ್ದಾರೆ. ಅಧಿವೇಶನದಲ್ಲಿ ಸಿಎಂ ಅವರೇ ಇದನ್ನು ಒಪ್ಪಿಕೊಂಡಿದ್ದಾರೆ. 187 ಕೋಟಿ ರೂ. ಅಲ್ಲ, 89 ಕೋಟಿ ರೂ. ಎಂದು. ಮತ್ತೊಂದು ಕಡೆ ಮುಡಾ ಅಕ್ರಮ. ಬಡವರಿಗೆ ಕೊಡಬೇಕಾದ ನಿವೇಶನಗಳಲ್ಲಿ ಸಾವಿರಾರು ಕೋಟಿ ರೂ. ಅಕ್ರಮ ಮಾಡಿದ್ದಾರೆ. ಸ್ವತಃ ರಾಜ್ಯದ ಮುಖ್ಯಮಂತ್ರಿಗಳು, ಅವರ ಕುಟುಂಬ ಈ ಹಗರಣದಲ್ಲಿ ಭಾಗಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ರೈತರಿಗೆ ಹಾಲಿನ ಪೊತ್ಸಾಹಧನವನ್ನು ಈ ಸರ್ಕಾರ 9 ತಿಂಗಳಿಂದ ಕೊಟ್ಟಿಲ್ಲ. 1200 ಕೋಟಿ ರೂ. ಹಣ ಬಾಕಿ ಉಳಿಸಿಕೊಂಡಿದೆ. 2013-18 ರಲ್ಲಿ ಇದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇತ್ತು. ಅಂದು ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವತ್ತು ಕೂಡಾ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲ ಮೂಲ ಕಾರಣ ಬೆಲೆ ಏರಿಕೆ. ಡೆಂಗ್ಯೂನಂತಹ ಸಣ್ಣ ಕಾಯಿಲೆಯನ್ನು ನಿಯಂತ್ರಣ ಮಾಡಲು ಈ ಸರ್ಕಾರಕ್ಕೆ ಆಗ್ತಾ ಇಲ್ಲ. ಅವರ ತಪ್ಪು ಮುಚ್ಚಿಕೊಳ್ಳಲು ಸದನದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಈ ಸರ್ಕಾರಕ್ಕೆ ನೈತಿಕತೆ ಇಲ್ಲ ಎಂದು ಅವರು ಕುಟುಕಿದ್ದಾರೆ.
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾವು ಆಗ್ರಹಿಸುತ್ತೇವೆ. ನಾವು ರಾಜೀನಾಮೆ ಕೊಡಿ ಅಂತ ಹೇಳಿದ ತಕ್ಷಣ ಅವರು ರಾಜೀನಾಮೆ ಕೊಡಲ್ಲ. ಇದು ನ್ಯಾಯಾಂಗ ತನಿಖೆಯಲ್ಲಿ. ನಾವು ಹೋರಾಟ ಮುಂದುವರೆಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.