Tag: MP Suresh Angadi

  • ಬೆಳಗಾವಿ ಯುವಕನದ್ದು ಆತ್ಮಹತ್ಯೆಯಲ್ಲ ಕೊಲೆ: ಸುರೇಶ್ ಅಂಗಡಿ

    ಬೆಳಗಾವಿ ಯುವಕನದ್ದು ಆತ್ಮಹತ್ಯೆಯಲ್ಲ ಕೊಲೆ: ಸುರೇಶ್ ಅಂಗಡಿ

    ಬೆಳಗಾವಿ: ಜಿಲ್ಲೆಯಲ್ಲಿ ಹೀರೇಬಾಗೇವಾಡಿಯ ಯುವಕ ಆತ್ಮಹತ್ಯೆ ಮಾಡಿಕೊಂಡಿಲ್ಲ. ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಸಂಸದ ಸುರೇಶ್ ಅಂಗಡಿ ಆರೋಪಿಸಿದ್ದಾರೆ.

    ಪ್ರಕರಣದ ಕುರಿತು ಟ್ವೀಟ್ ಮಾಡಿರುವ ಸಂಸದರು, ಶಿವಕುಮಾರ್ ಉಪ್ಪಾರ ಗೋವುಗಳನ್ನು ತುಂಬಾ ಪ್ರೀತಿಸುತ್ತಿದ್ದ ಹಾಗೂ ಗೋವು ಕಳ್ಳ ಸಾಗಾಣಿಕೆಯನ್ನು ನಿಲ್ಲಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಕೊಲೆ ಮಾಡಿ, ನೇಣು ಹಾಕಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಶೀಘ್ರವೇ ತನಿಖೆ ನಡೆಸಲು ಸಿಎಂ ಕುಮಾರಸ್ವಾಮಿ ಅವರು ಪೊಲಿಸರಿಗೆ ಆದೇಶ ನೀಡಬೇಕು. ಪೊಲೀಸರು 24 ಗಂಟೆಗಳ ಒಳಗಾಗಿ ಆರೋಪಿಗಳನ್ನು ಬಂಧಿಸಬೇಕು ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.

    ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ಶಿವಕುಮಾರ್ ಉಪ್ಪಾರ(19) ಅನುಮಾನಸ್ಪದವಾಗಿ ಸಾವನ್ನಪ್ಪಿದ ಯುವಕ. ಹಿರೇಬಾಗೇವಾಡಿ ಗ್ರಾಮದ ಎಪಿಎಂಸಿ ಶೌಚಾಲಯದಲ್ಲಿ ಯುವಕ ಮೃತ ದೇಹವು ಪತ್ತೆಯಾಗಿತ್ತು. ಮಗನ ಶವವನ್ನು ನೋಡಿದ ಕುಟುಂಬಸ್ಥರು, ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

  • ರಾಣಿ ಚನ್ನಮ್ಮ ವಿವಿ, ದೆಹಲಿ ಜೆಎನ್‍ಯು ವಿವಿಯಂತೆ ಆಗಬಾರದು: ಸಂಸದ ಸುರೇಶ್ ಅಂಗಡಿ

    ರಾಣಿ ಚನ್ನಮ್ಮ ವಿವಿ, ದೆಹಲಿ ಜೆಎನ್‍ಯು ವಿವಿಯಂತೆ ಆಗಬಾರದು: ಸಂಸದ ಸುರೇಶ್ ಅಂಗಡಿ

    ಬೆಳಗಾವಿ: ಮಾಜಿ ಸಚಿವ ಜಾರಕಿಹೊಳಿ ಅವರ ಬೆಂಬಲಿಗರು ಎನ್ನಲಾದ ಕೆಲ ಕಾಂಗ್ರೆಸ್ ಕಾರ್ಯಕರ್ತರು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ದಾಂಧಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸುರೇಶ್ ಅಂಗಡಿ ಕಿಡಿಕಾರಿದ್ದಾರೆ. ಅಲ್ಲದೇ ರಾಣಿ ಚನ್ನಮ್ಮ ವಿವಿ ಮತ್ತೊಂದು ದೆಹಲಿಯ ಜೆಎನ್‍ಯು ವಿವಿ ಆಗಬಾರದು ಎಂದು ಹೇಳಿದ್ದಾರೆ.

    ನಗರದಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸಂಸದರು, ಚೆನ್ನಮ್ಮ ವಿಶ್ವ ವಿದ್ಯಾಲಯದ ದಾಂಧಲೆ ಪ್ರಕರಣ ಬೆಳಗಾವಿಗೆ ಕಪ್ಪು ಚುಕ್ಕೆ ಆಗಲಿದೆ. ಕಳೆದ 30 ವರ್ಷಗಳ ಹೋರಾಟದಿಂದ ವಿವಿ ಸ್ಥಾಪನೆ ಆಗಿದೆ. ವಿವಿಯಲ್ಲಿ ಪಕ್ಷ ರಾಜಕೀಯ ಬೇಡ. ರಾಣಿ ಚನ್ನಮ್ಮ ವಿವಿ ದೆಹಲಿ ಜೆಎನ್‍ಯು ವಿವಿಯಂತೆ ಆಗಬಾರದು. ದೇಶ ದ್ರೋಹಿಗಳನ್ನು ರಾಣಿ ಚನ್ನಮ್ಮ ವಿವಿಯಲ್ಲಿ ಬಿಟ್ಟಿರಬಹುದು. ಆದರೆ ನಾವು ಅದನ್ನು ಸಹಿಸುವುದಿಲ್ಲ. ವಿಶ್ವ ವಿದ್ಯಾಲಯ ಕುಲಪತಿ ಕೂಡಲೇ ಕಠಿಣ ಕ್ರಮಕೈಗೊಳ್ಳಬೇಕು ಆಗ್ರಹಿಸಿದರು.

    ಇದೇ ವೇಳೆ ವಿವಿಯ ಮುಂಭಾಗದಲ್ಲಿ ಅಂಡರ್ ಪಾಸ್ ಉದ್ಘಾಟನೆ ವಿಚಾರ ಪ್ರಸ್ತಾಪಿಸಿದ ಅವರು, ಉದ್ಘಾಟನೆ ವೇಳೆಯಲ್ಲಿ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ, ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಫೋನ್ ಮಾಡಿ ಆಗಮಿಸುವಂತೆ ಮನವಿ ಮಾಡಲು ಮುಂದಾಗಿದ್ದೆ. ಆದರೆ ಅವರಿಬ್ಬರು ನನ್ನ ಫೋನ್ ಕರೆ ಸ್ವೀಕರಿಸಲಿಲ್ಲ. ಈ ವೇಳೆ ನಾನೇ ಸ್ವತಃ ಹೋಗಿ ಉದ್ಘಾಟನೆ ಪೂಜೆ ನೆರವೇರಿಸಿದೆ. ಈ ಕಾರ್ಯಕ್ರಮಕ್ಕೆ ವಿವಿಯ ಕುಲಪತಿಗಳಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

    ಒಂದೊಮ್ಮೆ ಮಾಜಿ ಸಚಿವರಾದ ಸತೀಶ ಜಾರಕಿಹೊಳಿ ತಮ್ಮ ಬೆಂಬಲಿಗರು ಈ ರೀತಿ ನಡೆಸಿದ್ದಾರೆ ಕ್ರಮಕೈಗೊಳ್ಳಬೇಕು. ಸ್ವತಃ ಸತೀಶ್ ಅವರನ್ನೇ ಈ ಮೂಲಕ ಕೇಳಿಕೊಳ್ಳುತ್ತೇನೆ. ನಿಮ್ಮ ಬೆಂಬಲಿಗರಾದರೆ ಕ್ರಮಕೈಗೊಳ್ಳಿ. ಇಲ್ಲವೇ ಪೊಲೀಸರು ಕ್ರಮ ತೆಗೆದುಕೊಳ್ಳಲು ಅವಕಾಶ ನೀಡಿ ಎಂದು ಮನವಿ ಮಾಡುವುದಾಗಿ ತಿಳಿಸಿದರು. ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳ ವೈಫಲ್ಯವನ್ನು ಟೀಕಿಸಿದ ಸಂಸದರು ರಾಜಕೀಯ ಒತ್ತಡದಿಂದ ಅಧಿಕಾರಿಗಳು ಭಯ ಪಡುತ್ತಿದ್ದಾರೆ. ಆದರೆ ಕಠಿಣ ಕ್ರಮ ಕೈಗೊಳ್ಳದೆ ಇದ್ದರೆ ಅಧಿಕಾರಿಗಳು ಜಾಗ ಖಾಲಿ ಮಾಡಬೇಕು ಎಂದು ಆಗ್ರಹಿಸಿದರು.

    ಏನಿದು ಘಟನೆ? ರಾಣಿಚನ್ನಮ್ಮ ವಿಶ್ವವಿದ್ಯಾಲಯಲ್ಲಿ ಸೋಮವಾರ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕುಲಪತಿ ಶಿವಾನಂದ ಹೊಸಮನಿ ಅವರನ್ನು ಮುತ್ತಿಗೆ ಹಾಕಿ ನೂಕಾಡಿದ್ದರು. ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಇರುವುದು ಕಾರ್ಯಕರ್ತರ ಕೋಪಕ್ಕೆ ಕಾರಣವಾಗಿತ್ತು ಎನ್ನಲಾಗಿತ್ತು. ಈ ವೇಳೆ ಬೆಳಗಾವಿ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದು ಸುಣಗಾರ್ ಹಾಗೂ ಕೆಲವು ಬೆಂಬಲಿಗರು ಕುಲಪತಿ ಅವರನ್ನು ಸುತ್ತುವರಿಯಲು ಯತ್ನಿಸಿದ್ದರು. ಘಟನೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಕುಲಪತಿ ಶಿವಾನಂದ ಹೊಸಮನಿ ಹಿಂದೇಟು ಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv