Tag: MP Shobha Karandlaje

  • ಸಂಸದೆ ಶೋಭಾ ಕರಂದ್ಲಾಜೆಗೆ ಪ್ರತಿಭಟನೆಯ ಸ್ವಾಗತ

    ಸಂಸದೆ ಶೋಭಾ ಕರಂದ್ಲಾಜೆಗೆ ಪ್ರತಿಭಟನೆಯ ಸ್ವಾಗತ

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಜೆಡಿಎಸ್ ಕಾರ್ಯಕರ್ತರು ಹಾಗೂ ಸ್ಥಳಿಯರು ಪ್ರತಿಭಟನೆ ಸ್ವಾಗತ ಕೋರಿ ಕಪ್ಪು ಪಟ್ಟಿ ಪ್ರದರ್ಶಿಸಿದ್ದಾರೆ.

    ಕಳಸ ತಾಲೂಕು ಎಂದು ಅಧಿಸೂಚನೆ ಹೊರಡಿಸಿ ವರ್ಷಗಳೇ ಕಳೆದಿವೆ. ಆದರೆ, ಎರಡು ವರ್ಷವಾದರೂ ತಾಲೂಕು ಕ್ಷೇತ್ರದ ಯಾವುದೇ ಕೆಲಸ ಕಾರ್ಯಗಳು ಕಾರ್ಯರೂಪಕ್ಕೆ ಬಂದಿಲ್ಲ. ಈಗಿನ ಬಿಜೆಪಿ ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆ ಎಂದು ಸಂಸದರು, ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು. ಇಂದು ಸಂಸದೆ ಶೋಭಾ ಹಾಗೂ ಶಾಸಕ ಕುಮಾರಸ್ವಾಮಿ ವಿವಿಧ ಕಾಮಗಾರಿ ಉದ್ಘಾಟನೆಗೆಂದು ಕಳಸಕ್ಕೆ ಬಂದಿದ್ದರು. ಈ ವೇಳೆ ಮನವಿ ಕೊಡಲು ಜೆಡಿಎಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಗಮಿಸಿದ್ದರು. ಆದರೆ ಸಂಸದರು ಗಾಡಿ ನಿಲ್ಲಿಸದೆ ಹೋದರೆಂದು ಸಂಸದರ ವಿರುದ್ಧ ಆಕ್ರೋಶ ಹೊರಹಾಕಿದ್ದರು.

    2018ರ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದ ವೇಳೆ ಎಚ್.ಡಿ. ಕುಮಾರಸ್ವಾಮಿ ಅವರು ಬಜೆಟ್ ಅಧಿವೇಶನದ ವೇಳೆ ಕಳಸವನ್ನು ಹೊಸ ತಾಲೂಕು ಕೇಂದ್ರವಾಗಿ ಅಧಿಕೃತ ಘೋಷಣೆ ಮಾಡಿದ್ದರು. ಕಳಸವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿ ವರ್ಷಗಳು ಕಳೆದರೂ ಅದನ್ನು ಕಾರ್ಯಗತಗೊಳಿಸುವಲ್ಲಿ ಬಿಜೆಪಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿ, ಕಳಸ ಪಟ್ಟಣವನ್ನ ತಾಲೂಕು ಕ್ಷೇತ್ರವನ್ನಾಗಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮೂಡಿಗೆರೆ ತಾಲೂಕಿಗೆ ಕುದುರೆಮುಖ ತುಂಬಾ ದೂರದಲ್ಲಿದ್ದು, ಪ್ರತಿ ನಿತ್ಯ ಹಲವಾರು ಜನ ಕಚೇರಿ ಕೆಲಸಗಳಿಗಾಗಿ ಕಳಸದಿಂದ ಮೂಡಿಗೆರೆ ತಾಲ್ಲೂಕು ಕೇಂದ್ರಕ್ಕೆ ಬಂದು ಹೋಗಬೇಕಾಗುತ್ತದೆ. ಒಂದು ವೇಳೆ ಆ ದಿನ ಕೆಲಸ ಆಗದಿದ್ದರೆ ಮರುದಿನ ಅಲ್ಲಿಯೇ ಉಳಿದು ಮರು ದಿನ ತಮ್ಮ ಕೆಲಸವನ್ನು ಮಾಡಿಕೊಳ್ಳ ಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಎಲ್ಲರೂ ಹೊಟೇಲ್, ಲಾಡ್ಜ್ ನಲ್ಲಿ ಉಳಿಯಲು ಸಾಧ್ಯವಾಗುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ತಾಲೂಕು ಕಳಸವನ್ನು ತಾಲೂಕು ಕೇಂದ್ರವನ್ನಾಗಿಸಬೇಕೆಂದು ಆಗ್ರಹಿಸಿದರು. ಇದೇ ವೇಳೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕಪ್ಪುಪಟ್ಟಿ ಪ್ರದರ್ಶನ ಮಾಡುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

  • ಸಾಂಸ್ಥಿಕ ಕ್ವಾರಂಟೈನ್ ಬೇಡ, ಮಲೆನಾಡಲ್ಲಿ ಹೋಂಕ್ವಾರಂಟೈನ್ ಮಾಡಿ: ಶೋಭಾ ಕರಂದ್ಲಾಜೆ

    ಸಾಂಸ್ಥಿಕ ಕ್ವಾರಂಟೈನ್ ಬೇಡ, ಮಲೆನಾಡಲ್ಲಿ ಹೋಂಕ್ವಾರಂಟೈನ್ ಮಾಡಿ: ಶೋಭಾ ಕರಂದ್ಲಾಜೆ

    ಚಿಕ್ಕಮಗಳೂರು: ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಕ್ವಾರಂಟೈನ್‍ಗೆ ಒಳಪಡಿಸುವವರನ್ನು ಹೋಂ ಕ್ವಾರಂಟೈನಲ್ಲಿ ಇರಿಸುವಂತೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ಮುಂಬೈ ಸೇರಿದಂತೆ ಬೇರೆ ರಾಜ್ಯ ಹಾಗೂ ವಿದೇಶಗಳಿಂದ ಸಾಕಷ್ಟು ಜನ ಬರುತ್ತಿದ್ದಾರೆ. ಇಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಉಡುಪಿ-ಚಿಕ್ಕಮಗಳೂರು ಎರಡೂ ಜಿಲ್ಲೆಗಳು ಗ್ರೀನ್‍ಝೋನ್‍ನಲ್ಲಿದ್ದವು. ನಾವು ಯಾವಾಗ ಮುಂಬೈ ಮತ್ತು ದುಬೈನವರನ್ನು ಕರೆಸಿಕೊಂಡೆವೋ ಅಂದಿನಿಂದ ಕೊರೊನಾ ಪಾಸಿಟಿವ್ ಇರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಎರಡು ಜಿಲ್ಲೆಗಳಲ್ಲಿ ಬಹಳ ದೊಡ್ಡ ಸಮಸ್ಯೆ ಎಂದರೆ ಕ್ವಾರಂಟೈನ್‍ಗೆ ಒಳಪಡಿಸುವುದು.

    ಮೂಡಿಗೆರೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಜನರನ್ನು ಕ್ವಾರಂಟೈನ್‍ಗೆ ಮಾಡಬೇಕಾಗುತ್ತೆ. ವೈದ್ಯರಿಗೂ ಪಾಸಿಟಿವ್ ಬಂದ ಕಾರಣ ಅವರ ಸಂಪರ್ಕಕ್ಕೆ ಬಂದಿದ್ದ ಸುಮಾರು 800 ಜನರನ್ನು ನಾವು ಗುರುತಿಸಿದ್ದೀವಿ. ಇವರೆಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡೋದು ಕಷ್ಟದ ಕೆಲಸ. ಅಷ್ಟೊಂದು ವ್ಯವಸ್ಥೆಗಳು ಮೂಡಿಗೆರೆ ತಾಲೂಕಿನಲ್ಲಿ ಇಲ್ಲ. ಹೋಟೆಲ್, ಸಿಂಗಲ್ ರೂಂಗಳು ಕೂಡ ಇಲ್ಲ. ಹಾಗಾಗಿ, ಉಡುಪಿ, ಚಿಕ್ಕಮಗಳೂರು, ಕೊಡಗು, ಮಂಗಳೂರು ಹಾಗೂ ಶಿವಮೊಗ್ಗದ ಕೆಲ ಭಾಗದಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಿಂದ ಅವರಿಗೆ ವಿನಾಯಿತಿ ಕೊಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಮನವಿ ಮಾಡಿದ್ದಾರೆ.

    ಕೈಗೆ ಸೀಲ್ ಹಾಕಿ, ಮನೆಗೆ ಚೀಟಿ ಅಂಟಿಸಿ ಮನೆಯಲ್ಲೇ ಅವರಿಗೆ ಕ್ವಾರಂಟೈನ್ ಮಾಡಬೇಕು. ಸಾಂಸ್ಥಿಕ ಕ್ವಾರಂಟೈನ್ ಮನೆಗಿಂತ ಡೇಂಜರ್ ಆಗಿದೆ. ಒಂದೊಂದು ರೂಮಿನಲ್ಲಿ 10-20 ಜನ ಇರುತ್ತಾರೆ. ಆದ್ದರಿಂದ ಒಬ್ಬರಿಗೆ ಸೋಂಕು ಬಂದರೂ ಉಳಿದವರಿಗೆ ಬರುವ ಸಾಧ್ಯತೆ ಇದೆ. ಮಲೆನಾಡಿನ ಒಂಟಿ ಮನೆ ಹಾಗೂ ಮಲೆನಾಡು ಭಾಗದಲ್ಲಿ ಮನೆಗಳಲ್ಲೇ ಕ್ವಾರಂಟೈನ್ ಮಾಡಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ. ಇಲ್ಲಿ ಸಾಕಷ್ಟು ವ್ಯವಸ್ಥೆ ಇಲ್ಲ. ಆದ್ದರಿಂದ ವಿನಾಯಿತಿ ನೀಡಬೇಕೆಂದು ಸಂಸದರು ಮನವಿ ಮಾಡಿದ್ದಾರೆ.

    ಸಂಸದರ ಮನವಿಗೆ ಮುಖ್ಯ ಕಾರ್ಯದರ್ಶಿಗಳು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಸಿಎಂ ಬಳಿಯೂ ಮಾತನಾಡುವುದಾಗಿ ಸಂಸದರು ಹೇಳಿದ್ದಾರೆ. ಇದರಿಂದ ಹೆಚ್ಚಿನ ಜನಕ್ಕೆ ಸಹಾಯವಾಗುತ್ತದೆ. ಅವರು ಮನೆಯಲ್ಲೇ ಇರಬೇಕು. ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು. ಯಾರೂ ಮನೆಯಿಂದ ಆಚೆ ಬರಬಾರದೆಂದು ಜನಸಾಮಾನ್ಯರಿಗೂ ಮನವಿ ಮಾಡಿಕೊಂಡಿದ್ದಾರೆ.

  • ಸರಣಿ ಕೊಲೆಗಳು, ಗೋವುಗಳ ಕಳ್ಳಸಾಗಣಿಕೆಗೆ ಯು.ಟಿ.ಖಾದರ್ ಕಾರಣ: ಶೋಭಾ ಕರಂದ್ಲಾಜೆ

    ಸರಣಿ ಕೊಲೆಗಳು, ಗೋವುಗಳ ಕಳ್ಳಸಾಗಣಿಕೆಗೆ ಯು.ಟಿ.ಖಾದರ್ ಕಾರಣ: ಶೋಭಾ ಕರಂದ್ಲಾಜೆ

    – ಮೈತ್ರಿ ಸರ್ಕಾರವೇ ಮುಂದುವರಿಯಲಿ

    ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳು, ಗೋವುಗಳ ಕಳ್ಳಸಾಗಣಿಕೆಗೆ ಸಚಿವ ಯು.ಟಿ.ಖಾದರ್ ಅವರೇ ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

    ನಗರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕರಾವಳಿ ಜಿಲ್ಲೆಗಳಲ್ಲಿ ಏನೇ ಅಕ್ರಮ ನಡೆದರೂ ಸಚಿವ ಯು.ಟಿ.ಖಾದರ್ ದುಷ್ಕರ್ಮಿಗಳಿಗೆ ಬೆನ್ನೆಲುಬಾಗಿ ನಿಂತಿರುತ್ತಾರೆ. ಯು.ಟಿ.ಖಾದರ್ ಪಾತ್ರ ಇಲ್ಲದೇ ಅಕ್ರಮಗಳು ನಡೆಯಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಅಕ್ರಮಗಳನ್ನು ತಡೆಯುತ್ತಿಲ್ಲ ಎಂದು ಆರೋಪಿಸಿದರು.

    ಕರಾವಳಿಯ ಅವಳಿ ಜಿಲ್ಲೆಗಳಲ್ಲಿ ಗೋವುಗಳ ಕಳ್ಳಸಾಗಣಿಕೆ ನಿಯಂತ್ರಿಸುವಲ್ಲಿ ಸರ್ಕಾರ ಎಡವಿದೆ. ದೇವಸ್ಥಾನಗಳು, ವಿದೇಶ ಅಂತ ಸುತ್ತುವ ಬದಲು ಸಿಎಂ ಗೋವುಗಳನ್ನೇ ದೇವರೆಂದು ಭಾವಿಸಿ ರಕ್ಷಿಸಲಿ. ಈ ಕೂಡಲೇ ಸ್ಕ್ವಾಡ್ ರಚನೆ ಮಾಡಿ ಗೋವುಗಳ ಕಳ್ಳಸಾಗಣೆ ತಡೆಯಲಿ ಎಂದು ಆಗ್ರಹಿಸಿದರು.

    ರಾಜ್ಯ ಬಿಜೆಪಿ ನಾಯಕರು ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚನೆ ಮಾಡುವ ಸುಳಿವು ಕೊಡುತ್ತಿದ್ದರೆ ಸಂಸದೆ ಶೋಭಾ ಕರಂದ್ಲಾಜೆ ಮಾತ್ರ ತದ್ವಿರುದ್ಧ ಮಾತಾಡಿದ್ದಾರೆ. ಮೈತ್ರಿ ಸರ್ಕಾರ ಬೀಳಿಸುವ ಯಾವ ಪ್ರಯತ್ನವನ್ನೂ ಬಿಜೆಪಿ ಮಾಡುತ್ತಿಲ್ಲ. ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಬರುತ್ತೆ ಎನ್ನುವ ನಮ್ಮ ನಾಯಕರ ಮಾತುಗಳನ್ನು ನಾನು ಒಪ್ಪಲ್ಲ. ರಾಜ್ಯದಲ್ಲಿ ಮೈತ್ರಿಸರ್ಕಾರ ಅತಂತ್ರವಾಗಿರುವುದರಿಂದ ಅದೇ ಮುಂದುವರಿಯಬೇಕು. ಜನರೇ ತಕ್ಕಪಾಠ ಕಲಿಸುತ್ತಾರೆ. ಮೈತ್ರಿ ಸರ್ಕಾರವೇ ಮುಂದುವರಿಯಲಿ. ನಾವು ವಿರೋಧ ಪಕ್ಷದಲ್ಲೇ ಇದ್ದು ಕೆಲಸ ಮಾಡುತ್ತೇವೆ ಎಂದು ಅಚ್ಚರಿಯ ಹೇಳಿಕೆ ಕೊಟ್ಟರು.

    ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧವಾಗುತ್ತಿಲ್ಲ. ಆದರೆ ಚುನಾವಣೆ ಯಾವಾಗ ಬಂದರೂ ಎದುರಿಸಲು ಸಿದ್ಧ ಇರುತ್ತೇವೆ. ಸದ್ಯಕ್ಕೆ ಚುನಾವಣೆ ನಡೆಯಲ್ಲ. ಮೈತ್ರಿ ಸರ್ಕಾರವೇ ಮುಂದುವರಿಯಲಿ ಎಂದು ಹೇಳಿದರು.

    ಮೈತ್ರಿ ನಾಯಕರೆಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾಕ್ ವೋಟ್ ಕೊಟ್ಟಿರಿ ಅಂತ ರಾಜ್ಯದ ಮತದಾರರನ್ನು ಹೆದರಿಸುತ್ತಿದ್ದಾರೆ. ಜನ ತಾಂತ್ರಿಕ ವ್ಯವಸ್ಥೆಯಲ್ಲಿ ವೋಟು ಹಾಕುವುದು ಮತದಾರರ ಹಕ್ಕು. ನೀವು ಕೆಲಸ ಮಾಡದಿದ್ದರೂ ಜನ ಮತ ಹಾಕುತ್ತಾರಾ? ನಿಮ್ಮ ಹೊಣೆ ನಿಭಾಯಿಸಲಿಲ್ಲ ಅದಕ್ಕೆ ಜನ ಮತ ಹಾಕಲಿಲ್ಲ. ಮತದಾರರನ್ನು ಬೆದರಿಸುವ ಕೆಲಸ ಮಾಡಬೇಡಿ ಎಂದು ಮೈತ್ರಿ ನಾಯಕರ ವಿರುದ್ಧ ಗುಡುಗಿದರು.

    ಗ್ರಾಮವಾಸ್ತವ್ಯಕ್ಕೆ ಅಂತ ಹೋಗುವುದು ಅಲ್ಲಿ ನಾಟಕ ಆಡುವುದು, ಮತದಾರರನ್ನು ಬೆದರಿಸುವುದು. ಇಷ್ಟಕ್ಕೆ ಯಾಕಾದರೂ ಗ್ರಾಮ ವಾಸ್ತವ್ಯ ಮಾಡಬೇಕು ಎಂದು ಸಿಎಂಗೆ ಸಂಸದೆ ಶೋಭಾ ಪ್ರಶ್ನಿಸಿದರು.

  • ಸಚಿವ ಜಮೀರ್ ತಲೆಕೆಟ್ಟಿದೆ, ನಿಮ್ಹಾನ್ಸ್ ಆಸ್ಪತ್ರೆ ಸೇರಿಸಬೇಕು: ಕರಂದ್ಲಾಜೆ ಕಿಡಿ

    ಸಚಿವ ಜಮೀರ್ ತಲೆಕೆಟ್ಟಿದೆ, ನಿಮ್ಹಾನ್ಸ್ ಆಸ್ಪತ್ರೆ ಸೇರಿಸಬೇಕು: ಕರಂದ್ಲಾಜೆ ಕಿಡಿ

    – ಸಚಿವರ ಕಚ್ಚಾಟದಿಂದಲೇ ಸಿಎಂ ರೆಸಾರ್ಟಿಗೆ ಹೋಗಿದ್ದಾರೆ

    ಯಾದಗಿರಿ: ಸಚಿವ ಜಮೀರ್ ಅಹ್ಮದ್ ಅವರ ತಲೆಕೆಟ್ಟಿದೆ. ಹೀಗಾಗಿ ಅವರನ್ನು ನಿಮ್ಹಾನ್ಸ್ ಆಸ್ಪತ್ರೆ ಸೇರಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಚಿಂಚೋಳಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರೆ ತಲೆ ಕಡಿದುಕೊಳ್ಳುತ್ತೇನೆ ಅಂತ ಈ ಹಿಂದೆ ಸಚಿವ ಜಮೀರ್ ಅಹ್ಮದ್ ಹೇಳಿದ್ದರು. ಆದರೆ ಕುಮಾರಸ್ವಾಮಿ ಅವರ ಸರ್ಕಾರದಲ್ಲಿಯೇ ಸಚಿವರಾಗಿದ್ದಾರೆ. ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಮನೆ ಕಾಯುತ್ತೇನೆ ಎನ್ನುತ್ತಿದ್ದಾರೆ. ಅವರ ತಲೆ ಆಗಾಗ ಕೆಡುತ್ತಿರುತ್ತದೆ. ಸಚಿವರ ಮಾತಿಗೆ ಬೆಲೆ ಇಲ್ಲ. ಜಮೀರ್ ಅಹ್ಮದ್ ಅವರು ಒಮ್ಮೆ ತಲೆ ಬೋಳಿಸಿಕೊಳ್ಳುತ್ತೇನೆ ಎನ್ನುತ್ತಾರೆ. ಮತ್ತೊಮ್ಮೆ ತಲೆ ಕಡಿದು ಟೇಬಲ್ ಮೇಲೆ ಇಡುತ್ತೇನೆ ಅಂತ ಹೇಳಿದ್ದರು ಎಂದು ತಿರುಗೇಟು ನೀಡಿದರು.

    ಮೈತ್ರಿಯ ಆಂತರಿಕ ಜಗಳ, ಕಚ್ಚಾಟದಿಂದಲೇ ಸಿಎಂ ಕುಮಾರಸ್ವಾಮಿ ಅವರು ರೆಸಾರ್ಟಿಗೆ ಹೋಗಿದ್ದಾರೆ. ಅವರ ಪಾಪಕ್ಕೆ ಜನರು ಪರಿತಪಿಸುತ್ತಿದ್ದಾರೆ. ಈ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

    ಕಳೆದ ಒಂದು ವರ್ಷದಿಂದ ಯಾವ ಸಚಿವರು ಇತ್ತ ಕಡೆ ಬಂದಿಲ್ಲ. ರಾಜ್ಯದ ಮುಖ್ಯಮಂತ್ರಿ ಐತಿಹಾಸಿಕ ವಿಧಾನಸೌಧ ಬಿಟ್ಟು ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ಆಡಳಿತ ನಡೆಸುತ್ತಿದ್ದಾರೆ. ಈ ವೇದಿಕೆಯಲ್ಲಿ ಯಾರು, ಏನು ಮಾತನಾಡುತ್ತಾರೆಂದು ಸಿಎಂಗೆ ತಿಳಿಸಲು ಪೊಲೀಸ್ ಮತ್ತು ಗುಪ್ತಚರ ಇಲಾಖೆಯವರು ಇಲ್ಲಿಗೆ ಬಂದಿದ್ದಾರೆ. ರಾಜ್ಯ ಸರ್ಕಾರ ರೆಸಾರ್ಟಿನಲ್ಲಿ ಮಲಗಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಗುಡುಗಿದರು.

    ಹಿಂದುಳಿದ ವರ್ಗಗಳ ನಾಯಕ ನಾನೇ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಅವರು ತಮ್ಮ ಕುರುಬ ಸಮಾಜಕ್ಕೆ ಏನು ಮಾಡಿದ್ದಾರೆ? ಅನ್ನ ಭಾಗ್ಯ ಯೋಜನೆಗಾಗಿ ಕೇಂದ್ರ ಬಿಜೆಪಿ ಸರ್ಕಾರ ಸಹಾಯ ಮಾಡುತ್ತಿದೆ. ಇದನ್ನು ಯಾವ ಕಾಂಗ್ರೆಸ್ ನಾಯಕರೂ ಹೇಳುವುದಿಲ್ಲ. ಕಾಂಗ್ರೆಸ್ ಚೆಲಾಗಳು, ಪುಡಾರಿಗಳು ಅನ್ನಭಾಗ್ಯ ಅಕ್ಕಿಗಳನ್ನು ಪಕ್ಕದ ರಾಜ್ಯದ ಅಮ್ಮನ ಇಡ್ಲಿಗೆ ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

  • ಬಿಜೆಪಿ ಮುಖಂಡರೊಬ್ಬರಿಗೆ ಡಿಕೆಶಿಯಿಂದ 5.ಲಕ್ಷ ರೂ. ಆಮಿಷ: ಶೋಭಾ ಕರಂದಾಜ್ಲೆ

    ಬಿಜೆಪಿ ಮುಖಂಡರೊಬ್ಬರಿಗೆ ಡಿಕೆಶಿಯಿಂದ 5.ಲಕ್ಷ ರೂ. ಆಮಿಷ: ಶೋಭಾ ಕರಂದಾಜ್ಲೆ

    ಹುಬ್ಬಳ್ಳಿ: ಸಚಿವ ಡಿ.ಕೆ.ಶಿವಕುಮಾರ್ ಅವರು ನನ್ನ ಜೊತೆ ತಿರುಗಾಡುವ ಮುಖಂಡರೊಬ್ಬರಿಗೆ ಕಾಂಗ್ರೆಸ್ ಸೇರುವಂತೆ 5 ಲಕ್ಷ ರೂ. ಆಮಿಷ ಒಡ್ಡಿದ್ದಾರೆ ಎಂದು ಸಂಸದೆ ಶೋಭಾ ಕರಂದಾಜ್ಲೆ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

    ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಸಚಿವರು ನನಗೆ ಆಮಿಷ ಒಡ್ಡಿದ್ದಾರೆ ಎಂದು ನಮ್ಮ ಪಕ್ಷದ ಮುಖಂಡರು ನನ್ನ ಬಳಿ ಹೇಳಿಕೊಂಡಿದ್ದಾರೆ. ಆದರೆ ನಾವು ಖರೀದಿಗೆ ಇಲ್ಲ ಅಂತ ಸಚಿವರಿಗೆ ಕುಂದಗೋಳ ಕ್ಷೇತ್ರದ ಜನರು ತಿರುಗೇಟು ಕೊಟ್ಟಿದ್ದಾರೆ ಎಂದು ಹೇಳಿದರು.

    ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಸಚಿವರು ಶಿವಮೊಗ್ಗಕ್ಕೆ ಹೋಗಿದ್ದರು. ಭದ್ರಾವತಿಯಲ್ಲಿ ಹಣ ಹಂಚಲು ಮುಂದಾಗಿದ್ದರು. ಆದರೆ ಕಾರಿನ ಟೈಯರ್ ನಲ್ಲಿ 2 ಕೋಟಿ ರೂ. ಸಿಕ್ಕಿಬಿತ್ತು. ಈ ಹಿಂದೆ ನಂಜನಗೂಡು ಉಪ ಚುನಾವಣೆ ಪ್ರಚಾರಕ್ಕೆ ಹೋಗಿದ್ದರು. ಆಗಲೂ ಲಾರಿಯಲ್ಲಿ ಹಣ ಸಾಗಿಸುವ ಪ್ರಯತ್ನ ಮಾಡಿ, ಸಿಕ್ಕಿಬಿದ್ದಿದ್ದರು. ಈ ಮೂಲಕ ಅಕ್ರಮವಾಗಿ ಚುನಾವಣೆ ಗೆಲ್ಲಲು ಸಚಿವರು ಮುಂದಾಗುತ್ತಿದ್ದಾರೆ ಎಂದು ದೂರಿದರು.

    ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುತ್ತಾರೆ. ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತಾರೆ. ಅವರಿಗೆ ನಾವು ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು ಎಂದರು.

    ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಗೆಲುವಿನ ನೇತೃತ್ವದ ವಹಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರು ಈಗ ವಿರೋಧಪಕ್ಷದ ನಾಯಕ ಸ್ಥಾನದಲ್ಲಿ ಕುಳಿತಿದ್ದಾರೆ. ಕೇವಲ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾರೆ ಎಂದು ಗುಡುಗಿದರು.

  • ರಾಜ್ಯ ನಕಲಿ ಸರ್ಕಾರದಂತೆ ನಕಲಿ ಸಿಡಿ, ನಕಲಿ ಡೈರಿ ಬಿಡುಗಡೆ: ಶೋಭಾ ಕರಂದ್ಲಾಜೆ

    ರಾಜ್ಯ ನಕಲಿ ಸರ್ಕಾರದಂತೆ ನಕಲಿ ಸಿಡಿ, ನಕಲಿ ಡೈರಿ ಬಿಡುಗಡೆ: ಶೋಭಾ ಕರಂದ್ಲಾಜೆ

    – ಕರಾವಳಿ ಜನರ ತಿಳುವಳಿಕೆ ಬಗ್ಗೆ ಕುಮಾರಸ್ವಾಮಿ ಸರ್ಟಿಫಿಕೇಟ್ ಅಗತ್ಯವಿಲ್ಲ

    ಉಡುಪಿ: ಕರಾವಳಿ ಜನರ ತಿಳುವಳಿಕೆ ಬಗ್ಗೆ ಸಿಎಂ ಕುಮಾರಸ್ವಾಮಿ ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ. ಇಲ್ಲಿನ ಜನ ದೇಶಕ್ಕಾಗಿ ಕೆಲಸ ಮಾಡುವವರಿಗೆ ಮತ ಹಾಕುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಉಡುಪಿ- ಚಿಕ್ಕಮಗಳೂರು ಜನ ದೇಶ ಭಕ್ತರು. ದೇಶಕ್ಕಾಗಿ ಕೆಲಸ ಮಾಡುವವರಿಗೆ ವೋಟ್ ಹಾಕುತ್ತಾರೆ. ಕುಟುಂಬ ರಾಜಕಾರಣ ಮಾಡುವವರಿಗೆ ಇಲ್ಲಿನ ಜನ ಓಟು ಹಾಕಲ್ಲ. ವಂಶಪಾರಂಪರ್ಯ ರಾಜಕಾರಣ ಬೆಳೆಸುವವರಿಗೆ ದೇಶಭಕ್ತಿ ಭಾಷೆ ಅರ್ಥವಾಗುವುದಿಲ್ಲ. ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಸರ್ಟಿಫಿಕೇಟ್ ಬೇಕಾಗಿಲ್ಲ. ಮೋದಿ ಪ್ರಪಂಚ ಕಂಡ ಅದ್ಭುತ ನಾಯಕ. ಮೋದಿ ಆನೆಯ ರೀತಿಯಲ್ಲಿ ಚಲಿಸುವ ವ್ಯಕ್ತಿ. ಯಾರು ಏನೇ ಬಡ್ಕೊಂಡ್ರೂ ಮೋದಿ ಮೇಲೆ ಪರಿಣಾಮ ಬೀರಲ್ಲ ಎಂದರು.

    ಮೋದಿಯ ಐದು ವರ್ಷದ ಸಾಧನೆ ಜನ ನೋಡಿದ್ದಾರೆ. ಅಭಿವೃದ್ಧಿ, ದೇಶ ರಕ್ಷಣೆ ನೋಡಿ, ಹೊಸ ಯೋಜನೆಗಳನ್ನು ಕಂಡು ಕರಾವಳಿ ಮಲೆನಾಡಿನ ಜನ ಬಿಜೆಪಿಗೆ ಮತ ಹಾಕುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿಗೆ ಮತ ಹಾಕುವ ಕರಾವಳಿ ಜನರಿಗೆ ತಿಳುವಳಿಕೆ ಇಲ್ಲ ಎಂದಿದ್ದ ಸಿಎಂ ಕುಮಾರಸ್ವಾಮಿಗೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರು.

    ನಕಲಿ ಸರ್ಕಾರ:
    ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಸಿಡಿ ಬಿಡುಗಡೆ ಮಾಡಿರುವ ಬೆದರಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ಬಂದಾಗ ಕಾಂಗ್ರೆಸ್ ಅವರಿಗೆ ಸಿಡಿ ನೆನಪಾಗುತ್ತೆ. ಅಭಿವೃದ್ಧಿಯಲ್ಲಿ ಗೆಲ್ಲಲಾಗದವರು ಸಿಡಿ ರಾಜಕಾರಣ ಮಾಡುತ್ತಾರೆ. ಸಿಡಿ ಮತ್ತು ಡೈರಿ ಇವೆಲ್ಲಾ ಸುಳ್ಳು, ಎಲ್ಲವೂ ನಕಲಿ. ರಾಜ್ಯದಲ್ಲಿರುವ ನಕಲಿ ಸರ್ಕಾರದಂತೆ ನಕಲಿ ಸಿಡಿ, ನಕಲಿ ಡೈರಿ ಬಿಡುಗಡೆಯಾಗಬಹುದು ಅಷ್ಟೇ. ಚುನಾವಣೆ ಎದುರಿಸಲಾಗದೇ ಪುಕ್ಕಲು ರಾಜಕಾರಣಿಗಳು ತಾವೇ ಡೈರಿ, ಸಿಡಿ ಸೃಷ್ಟಿ ಮಾಡಿ ತೇಜೋವಧೆ ಮಾಡುತ್ತಾರೆ. ಅಭಿವೃದ್ಧಿ ತೋರಿಸಿ ಮತ ಕೇಳುವ ನೈತಿಕತೆ ಇವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು.

     

    ನಾಮಪತ್ರ ಸಲ್ಲಿಕೆ:
    ಇದಕ್ಕೂ ಮುನ್ನ ಉಡುಪಿ ಡಿಸಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ ಗೆ ಶೋಭಾ ಕರಂದ್ಲಾಜೆ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿರುವ ಕರಂದ್ಲಾಜೆ ಜ್ಯೋತಿಷ್ಯರ ಸಲಹೆ ಪಡೆದುಕೊಂಡಿದ್ದರು. ಉಡುಪಿ- ಚಿಕ್ಕಮಗಳೂರು ಜಿಲ್ಲೆಯ ಇಬ್ಬರು ಬಿಜೆಪಿ ಜಿಲ್ಲಾಧ್ಯಕ್ಷರು, ಬಿಜೆಪಿ ನಾಯಕಿ ಭಾರತಿ ಶೆಟ್ಟಿ ಜೊತೆ ತೆರಳಿ ಶೋಭಾ ಕರಂದ್ಲಾಜೆ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಶುಭ ಶುಕ್ರವಾರ ಅಂತ ಇಂದು ನಾಮಪತ್ರ ಸಲ್ಲಿಸಿದ್ದೇನೆ. ಶುಕ್ರವಾರ ಮಹಾಕಾಳಿ ದುರ್ಗೆಯ ದಿನ. ಒಳ್ಳೆ ಸಮಯ ನೋಡಿ ನಾಮಪತ್ರ ಸಲ್ಲಿಸಿದ್ದು, ಸಾರ್ವಜನಿಕವಾಗಿ 26ಕ್ಕೆ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಮಾರ್ಚ್ 26 ಕೂಡಾ ಮಂಗಳವಾರ. ಮಂಗಳವಾರ ಕೂಡ ದೇವಿಯ ಪವಿತ್ರ ದಿನ ಎಂದರು.

  • ಸ್ವಯಂಸೇವಕಿಯಾಗಿ ದೇವಸ್ಥಾನದಲ್ಲಿ ತರಕಾರಿ ಹೆಚ್ಚಿದ ಶೋಭಾ ಕರಂದ್ಲಾಜೆ

    ಸ್ವಯಂಸೇವಕಿಯಾಗಿ ದೇವಸ್ಥಾನದಲ್ಲಿ ತರಕಾರಿ ಹೆಚ್ಚಿದ ಶೋಭಾ ಕರಂದ್ಲಾಜೆ

    ಮಂಗಳೂರು: ನಗರದ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಅಂತಿಮ ದಿನದಂದು ಸಂಸದೆ ಶೋಭಾ ಕರಂದ್ಲಾಜೆ ಸ್ವಯಂಸೇವಕರಾಗಿ ಕಾಣಿಸಿಕೊಂಡಿದ್ದಾರೆ.

    ಲೋಕಸಭೆ ಚುನಾವಣೆಯ ಅವಸರದ ಮಧ್ಯೆ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಸದೆ ಶೋಭಾ ಅವರು ಅಲ್ಲಿನ ಪಾಕಶಾಲೆಗೆ ಭೇಟಿ ನೀಡಿ ಸ್ವಯಂಸೇವಕರ ಜೊತೆ ಬೆರೆತರು. ಬಳಿಕ ತರಕಾರಿ ಹೆಚ್ಚುತ್ತಿದ್ದ ಮಹಿಳೆಯರ ಜೊತೆಗೆ ತಾವೇ ತರಕಾರಿಗಳನ್ನು ಹೆಚ್ಚಿದರು. ಕೆಲಹೊತ್ತು ಮಹಿಳೆಯರ ಜೊತೆ ಹರಟಿದ ಶೋಭಾ ಮತ್ತವರ ತಂಡವು ಬಳಿಕ ದೇವರ ದರ್ಶನ ಮಾಡಿ, ಉಪಹಾರ ಸೇವಿಸಿ ನಿರ್ಗಮಿಸಿದರು.

    ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ನಡೆಯುತ್ತಿರುವ ಬ್ರಹ್ಮಕಲಶೋತ್ಸವಕ್ಕೆ ಇಂದು ಕೊನೆಯ ದಿನ. ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಅವರು ಪೊಳಲಿ ಕ್ಷೇತ್ರಕ್ಕೆ ಮೊನ್ನೆ ಭೇಟಿ ನೀಡಿದ್ದರು. ಆಗ ಸಂಸದೆ ಶೋಭಾ ಅವರು ಕೂಡ ಇದ್ದರು. ಆದರೆ ಶೋಭಾ ಕರಂದ್ಲಾಜೆ ಅವರು ಇಂದು ಮತ್ತೆ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ರಾಜರಾಜೇಶ್ವರಿಯ ದರ್ಶನ ಭಾಗ್ಯ ಪಡೆದರು.

    ಬ್ರಹ್ಮಕಲಶೋತ್ಸವದ ನಿಮಿತ್ತ ದಿನವೂ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಪಾಕಶಾಲೆಯಲ್ಲಿ ನಿರಂತರವಾಗಿ ಊಟ, ಉಪಹಾರ ಸಿದ್ಧಪಡಿಸುವ ಕಾರ್ಯ ಮಾಡಲಾಗುತ್ತಿದೆ. ಈ ವೇಳೆ ಸಂಸದೆ ಶೋಭಾ ಅವರು ಸ್ವಯಂಸೇವಕಿಯಾಗಿ ಕೆಲಸ ಮಾಡಿದ್ದು ಗಮನ ಸೆಳೆಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮೂರು ದಶಕಗಳಿಂದ ಸುಮಲತಾ ಮಂಡ್ಯದ ಮಗಳು – ರೇವಣ್ಣ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ

    ಮೂರು ದಶಕಗಳಿಂದ ಸುಮಲತಾ ಮಂಡ್ಯದ ಮಗಳು – ರೇವಣ್ಣ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ

    ಉಡುಪಿ: ಲೋಕೋಪಯೋಗಿ ಸಚಿವ ರೇವಣ್ಣ, ಸುಮಲತಾ ಅಂಬರೀಶ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಅಕ್ಷಮ್ಯ. ಅವರು ಕೂಡಲೇ ಅವರು ಕ್ಷಮೆ ಕೇಳಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಮಲತಾ ಮೂರು ದಶಕದಿಂದ ಮಂಡ್ಯದ ಮಗಳು. ಅವರಿಗೆ ಈಗ ಅಂಬರೀಶ್ ಅವರಂತೆ ಜನಸೇವೆ ಮಾಡುವ ಮನಸ್ಸಾಗಿದೆ. ಸಚಿವ ರೇವಣ್ಣ ಜವಾಬ್ದಾರಿಯುತ ರಾಜಕಾರಣಿಯಾಗಿ ಈ ರೀತಿ ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ. ಅಂಬರೀಶ್ ಸಾಯಲು ಸುಮಲತಾ ಕಾರಣವಲ್ಲ. ಈ ಹಿಂದೆ ಅಂಬರೀಶ್ ಅವರು ಕಾವೇರಿ ವಿಚಾರಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದರು. ಅಂತಹ ವ್ಯಕ್ತಿಯ ಪತ್ನಿ ಬಗ್ಗೆ ಕೀಳಾಗಿ ಮಾತನಾಡಿದ್ದು ಸರಿಯಲ್ಲ ಎಂದರು.

    ಗಂಡ ಸತ್ತವರು ರಾಜಕೀಯಕ್ಕೆ ಬರಲು ಇಷ್ಟೇ ದಿನ ಆಗಬೇಕಾಗಿಲ್ಲ. ಅವರು ರಾಜಕಾರಣಿಯಾಗಿ ಜನಸೇವೆ ಮಾಡುತ್ತಾ ತಮ್ಮ ದುಃಖ ಮರೆಯುವ ಪ್ರಯತ್ನದಲ್ಲಿದ್ದಾರೆ. ಸಮಾಜಸೇವೆಗೆ ಬರುವ ಹೆಣ್ಣು ಮಕ್ಕಳ ಬಗ್ಗೆ ಹೀಗೆಲ್ಲಾ ಮಾತನಾಡಿದ್ದು ಸರಿಯಲ್ಲ. ಅದ್ದರಿಂದ ರೇವಣ್ಣ ಅವರು ಕೂಡಲೇ ಕ್ಷಮೆ ಯಾಚಿಸಲಿ. ಗಂಡ ಕಳೆದುಕೊಂಡ ನೋವಲ್ಲಿರುವವರಿಗೆ ಮತ್ತೆ ನೋವು ಕೊಡಬೇಡಿ. ಅದು ಕೂಡ ಮಹಿಳಾ ದಿನಾಚರಣೆ ದಿನ ರೇವಣ್ಣ ಅವರು ಹೀಗೆ ಮಾತನಾಡಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸುಮಲತಾ ಸ್ಪರ್ಧೆ ಮಾಡುವ ಬಗ್ಗೆ ಪಕ್ಷದ ನಾಯಕರು ಸ್ಪಷ್ಟಪಡಿಸಿದ್ದು, ಅವರು ಪಕ್ಷೇತರವಾಗಿ ನಿಂತರೆ ಬಿಜೆಪಿ ಬೆಂಬಲ ನೀಡುತ್ತದೆ. ಆದರೆ ಈಗ ಸುಮಲತಾ ಅವರು ಕಾಂಗ್ರೆಸ್ ಮನೆಯ ರಾಜಕಾರಣಿ. ಅವರು ಬಿಜೆಪಿಗೆ ಬಂದರೆ ಸ್ವಾಗತ ಮಾಡುತ್ತೇವೆ ಎಂದರು.

    ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶದಲ್ಲಿ ಕಾಂಗ್ರೆಸ್ ಸೋಲುವ ಭೀತಿಯಲ್ಲಿದೆ. ಹೀಗಾಗಿ ಕೀಳು ರಾಜಕಾರಣಕ್ಕೆ ಕಾಂಗ್ರೆಸ್ ಇಳಿದಿದೆ. ದೇಶದ ಸೈನಿಕರಿಗೆ ಅವರನ್ನು ಅವಮಾನ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬರಲ್ಲ ಎಂದು ಗೊತ್ತಿದ್ದು ನಾಯಕರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ದೇಶದ ವಿರುದ್ಧವಾಗಿ ಮಾತನಾಡಿದವರಿಗೆ ಕಾಂಗ್ರೆಸ್ ಪಕ್ಷ ಇದುವರೆಗೂ ಶಿಕ್ಷೆ ಕೊಟ್ಟಿಲ್ಲ. ಇಷ್ಟೆಲ್ಲಾ ಮಾತನಾಡುವ ನೀವು ಪುಲ್ವಾಮಾ ಘಟನೆ ಬಗ್ಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ವಿರುದ್ಧ ಕಿಡಿಕಾರಿದರು.

    ಮುಸಲ್ಮಾನರು ಒಪ್ಪಿದ್ರೆ ಎಲ್ಲ ಸಮಸ್ಯೆ ಬಗೆ ಹರಿಯುತ್ತೆ: ಮುಸಲ್ಮಾನರು ರಾಮ ಮಂದಿರ ನಿರ್ಮಾಣಕ್ಕೆ ಒಪ್ಪಿಗೆ ನೀಡಲಿ. ಆಗ ಎಲ್ಲಾ ಸಮಸ್ಯೆ ಬಗೆ ಹರಿದು, ಹಿಂದುಗಳ ಕನಸು ನನಸಾಗುತ್ತದೆ. ರಾಮಮಂದಿರ ವಿವಾದ ಸುಪ್ರೀಂ ಆದೇಶದಂತೆ ಸಂಧಾನದಲ್ಲೇ ಬಗೆಹರಿಯಲಿ. ಅಯೋಧ್ಯೆಯ ರಾಮಮಂದಿರ ವಿಚಾರವನ್ನು ನಾವು ಚುನಾವಣೆಗೆ ಬಳಸಲ್ಲ. ಅಯೋಧ್ಯೆ ಭಕ್ತಿಯ ಶ್ರದ್ಧಾಕೇಂದ್ರ. ಈ ಬಗ್ಗೆ ನ್ಯಾಯಾಲಯ ನೀಡಿದ ಆದೇಶಕ್ಕೆ ತಲೆಬಾಗುತ್ತೇವೆ. ಎಂಟು ವಾರದ ಗಡುವಿನಲ್ಲಿ ಏನಾಗುತ್ತೋ ಗೊತ್ತಿಲ್ಲ. ಮಾತುಕತೆ ಪ್ರಯತ್ನದಿಂದ ಸಮಸ್ಯೆ ಬಗೆಹರಿದರೆ ಸಂತಸ ಎಂದರು.

    2014 ರಲ್ಲಿ ಮೋದಿ ಅವರು ಜನತೆಯ ಮುಂದಿಟ್ಟ ನಾಲ್ಕು ಭರವಸೆ ಈಡೇರಿದೆ. ಇನ್ನೆರಡು ದಿನಗಳಲ್ಲಿ ಚುನಾವಣೆ ಘೋಷಣೆ ಆಗಲಿದೆ. 2014 ರಲ್ಲಿ ನೀಡಿರುವ ಭರವಸೆಯಂತೆ ಭ್ರಷ್ಟಾಚಾರ ರಹಿತ, ಅಭಿವೃದ್ಧಿ, ಸ್ವಚ್ಛತೆ, ವಿದೇಶಾಂಗ ನೀತಿ, ಕೃಷಿ ಸಹಿತ ರಕ್ಷಣೆ ಒತ್ತು ಕೊಟ್ಟಿದ್ದೇವೆ. ದೇಶದ ಸೈನಿಕರು ಮೋದಿ ಸರ್ಕಾರದ ಆಡಳಿತ ಮೆಚ್ಚಿದ್ದಾರೆ. ಒನ್ ರಾಂಕ್ ಒನ್ ಪೆನ್ಶನ್ ನಂತರ ಸೈನಿಕರು ಖುಷಿಯಲ್ಲಿದ್ದಾರೆ ಎಂದರು.

    ರಾಜ್ಯ ಸರ್ಕಾರ ಕೇಂದ್ರದ ಅನುದಾನ ಬಿಡುಗಡೆಯೇ ಮಾಡಿಲ್ಲ. ಟೆಂಡರ್ ಕರೆಯದೆ ಕೋಟಿ ಕೋಟಿ ರೂ. ಹಣ ನೆನೆಗುದಿಗೆ ಬಿದ್ದಿದೆ. ರಾಜ್ಯದಲ್ಲಿ ಅತೀ ಹೆಚ್ಚು ಅನುದಾನ ಉಡುಪಿ-ಚಿಕ್ಕಮಗಳೂರಿಗೆ ಬಂದಿದೆ. ರಸ್ತೆ, ಪಾಸ್ ಪೋರ್ಟ್, ಸಖಿ ಸೆಂಟರ್ ಸ್ಥಾಪನೆಯಾಗಿದೆ ತಮ್ಮ ಐದು ವರ್ಷದ ರಿಪೋಟ್ ಕಾರ್ಡನ್ನು ತೆರೆದಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆ ಹೆಣ್ಣಿಗೆ ಬುದ್ಧಿ ಇಲ್ಲ: ಶೋಭಾ ಕರಂದ್ಲಾಜೆ ವಿರುದ್ಧ ಶಾಮನೂರು ಕಿಡಿ

    ಆ ಹೆಣ್ಣಿಗೆ ಬುದ್ಧಿ ಇಲ್ಲ: ಶೋಭಾ ಕರಂದ್ಲಾಜೆ ವಿರುದ್ಧ ಶಾಮನೂರು ಕಿಡಿ

    – ಕೇಂದ್ರ ವ್ಯಾಪ್ತಿಗೆ ಏನು ಬರುತ್ತೆಂದು ಶೋಭಾಗೆ ಗೊತ್ತಿಲ್ಲ: ಸಚಿವ ಖರ್ಗೆ

    ದಾವಣಗೆರೆ: ಆ ಹೆಣ್ಣಿಗೆ ಬುದ್ಧಿ ಇಲ್ಲ. ಹೆಣ್ಣು ಮಗಳನ್ನ ಮುಂದೆ ಇಟ್ಟುಕೊಂಡು ಗಂಡಸರು ಹಿಂದೆ ಸರಿಯುತ್ತಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಅವರು, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

    ನಗರದ ಛಲವಾದಿ ಮಹಾಸಭೆ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಬಳಿಕ ಮಾತನಾಡಿದ ಶಾಸಕರು, ಸುಳ್ಳು ಹೇಳುವುದು ಬಿಜೆಪಿಯವರಿಗೆ ಚೆನ್ನಾಗಿ ಗೊತ್ತಿದೆ. ಏರ್ ಶೋ ಅಗ್ನಿ ಅವಘಡಕ್ಕೂ ರಾಜ್ಯ ಸರ್ಕಾರ ವೈಫಲ್ಯ ಕಾರಣ ಎಂದು ಹೇಳುವುದಕ್ಕೂ ಏನು ಸಂಬಂಧ. ಆಕಸ್ಮಿಕವಾಗಿ ಬೆಂಕಿ ಹತ್ತಿದರೆ ಯಾರು ಏನು ಮಾಡಲು ಸಾಧ್ಯ? ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದಿ: ಏರ್ ಶೋ ಬೆಂಕಿ ಅವಘಡಕ್ಕೂ ಪುಲ್ವಾಮಾ ದಾಳಿಗೂ ಲಿಂಕ್ ಇದೆಯಾ – ಘಟನೆಯನ್ನು ರಾಜಕೀಯಗೊಳಿಸಿದ್ರಾ ಕರಂದ್ಲಾಜೆ?

    ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರ ಸರ್ಕಾರ ಗೆರೆ ಎಲ್ಲಿ ಎಳೆಯಬೇಕು? ರಾಜ್ಯ ಸರ್ಕಾರದ ಗೆರೆ ಎಲ್ಲಿ ಎಳೆಯಬೇಕು? ಕೇಂದ್ರದ ವ್ಯಾಪ್ತಿಗೆ ಏನು ಬರುತ್ತಿದೆ ಎನ್ನುವುದೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನು ಓದಿ: ಗಂಡಸು ಎಂಪಿಗಳಿಗೆ ಶೋಭಾ ಕರಂದ್ಲಾಜೆ ಚಾಲೆಂಜ್

    ಏರ್ ಶೋಗಳಲ್ಲಿ ರಕ್ಷಣಾ ಇಲಾಖೆ ಅವರು ನಮ್ಮನ್ನ (ರಾಜ್ಯ ಸರ್ಕಾರವನ್ನು) ಒಳಗಡೆ ಬಿಡುವುದಿಲ್ಲ. ಇದರಿಂದಾಗಿ ಸಂಸದೆ ಶೋಭಾ ಕರಂದ್ಲಾಜೆ ಇಲ್ಲಸಲ್ಲದ ಹೇಳಿಕೆ ಕೊಡುವುದು ಸರಿಯಲ್ಲ. ಏರ್ ಶೋ ಅಗ್ನಿ ಅವಘಡದಲ್ಲಿ ಕಾರುಗಳು ಸುಟ್ಟಿವೆ ಪರವಾಗಿಲ್ಲ. ಒಂದು ವೇಳೆ ಪ್ರಾಣಹಾನಿ ಸಂಭವಿಸಿದ್ದರೆ ಏನು ಮಾಡಬೇಕಿತ್ತು ಎಂದು ಆಕ್ರೋಶ ಹೊರ ಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೋಭಾ ಕರಂದ್ಲಾಜೆ ಹೇಳಿಕೆ ಸಮರ್ಥಿಸಿಕೊಂಡ ಬಿಎಸ್‍ವೈ – ಏರ್ ಶೋ ಅಗ್ನಿ ಅವಘಡದ ಉನ್ನತ ತನಿಖೆಗೆ ಆಗ್ರಹ

    ಶೋಭಾ ಕರಂದ್ಲಾಜೆ ಹೇಳಿಕೆ ಸಮರ್ಥಿಸಿಕೊಂಡ ಬಿಎಸ್‍ವೈ – ಏರ್ ಶೋ ಅಗ್ನಿ ಅವಘಡದ ಉನ್ನತ ತನಿಖೆಗೆ ಆಗ್ರಹ

    ಬೆಂಗಳೂರು: ಯಲಹಂಕ ಏರ್ ಶೋದಲ್ಲಿ ನಡೆದ ಅಗ್ನಿ ಅವಘಡಕ್ಕೆ ರಾಜ್ಯ ಸರ್ಕಾರವೇ ಕಾರಣವಾಗಿದ್ದು, ಸರ್ಕಾರ ತನ್ನ ಜವಾಬ್ದಾರಿ ನಿರ್ವಹಣೆಯನ್ನು ಮಾಡಲು ವಿಫಲವಾಗಿದೆ. ಒಬ್ಬ ಸಂಸದರಾಗಿ ಶೋಭಾ ಕರಂದ್ಲಾಜೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕಿದೆ ಎಂದು ಆಗ್ರಹಿಸಿದರು.

    ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್‍ವೈ ಅವರು, ಏರ್ ಶೋ ಒಂದು ಅಂತರಾಷ್ಟ್ರಿಯ ಕಾರ್ಯಕ್ರಮ. ಇಂತಹ ಕಾರ್ಯಕ್ರಮಕ್ಕೆ ಸೌಲಭ್ಯ ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ. ಕಾರ್ಯಕ್ರಮದಲ್ಲಿ ಸೂಕ್ತ ವ್ಯವಸ್ಥೆ ಮಾಡಲು ಸರ್ಕಾರ ನಿರ್ಲಕ್ಷ್ಯ ವಹಿಸಿದ ಕಾರಣ ಸಿಎಂ ಎಚ್‍ಡಿಕೆ ಹಾಗೂ ಗೃಹ ಸಚಿವರು ಜವಾಬ್ದಾರಿ ತೆಗೆದುಕೊಳ್ಳಬೇಕು. ಅಂತರಾಷ್ಟ್ರಿಯ ಕಾರ್ಯಕ್ರಮದಲ್ಲಿ ಇಂತಹ ದೊಡ್ಡ ಅವಘಡ ನಡೆದರೆ ದೇಶದ ಹೆಸರಿಗೆ ಕಳಂಕ ಆಗುತ್ತದೆ ಎಂದು ಕನಿಷ್ಠ ಮುನ್ನೆಚ್ಚರಿಕೆ ಆದರೂ ವಹಿಸಬೇಕಿತ್ತು ಎಂದರು.

    ಗೃಹ ಸಚಿವರಾದ ಎಂಬಿ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿ ಕಾರುಗಳು ಮಾತ್ರ ಸುಟ್ಟಿದೆ. ಸಾವು ನೋವು ಸಂಭವಿಸಿಲ್ಲ ಎಂದು ಹೇಳುವ ಮೂಲಕ ಬೇಜಾಬ್ದಾರಿ ಹೇಳಿಕೆ ನೀಡಿದ್ದಾರೆ. ಅದ್ದರಿಂದ ಅವರು ಕೂಡಲೇ ಜನರ ಕ್ಷಮೆ ಕೋರಬೇಕು ಎಂದರು. ಅಲ್ಲದೇ ಪಾರ್ಕಿಂಗ್ ಸ್ಥಳಕ್ಕೆ ಎನ್‍ಒಸಿ ಕೊಟ್ಟ ಬಗ್ಗೆ ಹಾಗೂ ಸೂಕ್ತ ಮುನ್ನೆಚ್ಚರಿಕಾ ತೆಗೆದುಕೊಳ್ಳದ ಕುರಿತು ತನಿಖೆ ಆಗಲಿ. ಘಟನೆ ವೇಳೆ ಕಾರಿನಲ್ಲಿದ ಪ್ರಮುಖ ದಾಖಲೆಗಳು ಸುಟ್ಟ ಭಸ್ಮವಾಗಿದೆ. ರಾಜ್ಯ ಪೊಲೀಸ್ ಇಲಾಖೆಯೂ ಕಾರ್ಯಕ್ರಮಕ್ಕೆ ಸೂಕ್ತ ವ್ಯವಸ್ಥೆ ನೀಡಲು ವಿಫಲವಾಗಿದೆ. ಸಿಎಂ ಎಚ್‍ಡಿಕೆ ಅವರು ಏರ್ ಶೋ ಬೆಂಗಳೂರಿನಲ್ಲಿ ಮಾಡಬೇಕೆಂದು ಎಂದು ಹೇಳಿದ್ದರು. ಆದರೆ ಇಂತಹ ಕಾರ್ಯಕ್ರಮದಲ್ಲೇ ಇಂತಹ ಅವಘಡ ನಡೆದರೆ ಹೇಗೆ ಎಂದು ಪ್ರಶ್ನಿಸಿದರು.

    ಹುಟ್ಟು ಹಬ್ಬದ ಆಚರಣೆ ಇಲ್ಲ:
    ಇದೇ ತಿಂಗಳು 27 ರಂದು ನನ್ನ ಹುಟ್ಟಹಬ್ಬ ಇದ್ದು, ಸಿದ್ದಗಂಗಾ ಶ್ರೀಗಳು ಹಾಗೂ ಪುಲ್ವಾಮಾ ದಾಳಿಯಲ್ಲಿ ಯೋಧರು ಹುತಾತ್ಮರಾಗಿರುವ ಹಿನ್ನೆಲೆಯಲ್ಲಿ ಹುಟ್ಟಹಬ್ಬ ಮಾಡಿಕೊಳ್ಳದಿರಲು ನಿರ್ಧಾರ ಮಾಡಿದ್ದೇನೆ. ಆ ದಿನ ಚಿತ್ರದುರ್ಗದಲ್ಲಿ ಪಕ್ಷದ ಕಾರ್ಯಕ್ರಮ ಇದ್ದು, ಅಲ್ಲಿ ತೆರಳಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ನನ್ನ ಪರವಾಗಿ ಯಾವುದೇ ಅಭಿಮಾನಿಗಳು ಕೂಡ ಸಂಭ್ರಮಾಚರಣೆ ಮಾಡದಿರಲು ಮನವಿ ಮಾಡುತ್ತೇನೆ ಎಂದು ಬಿಎಸ್‍ವೈ ಹೇಳಿದರು.

    https://www.youtube.com/watch?v=BUA3pczdc3w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv