Tag: Modi In Karnataka

  • ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸಾಲು ಸಾಲು ಪ್ರಶ್ನೆ

    ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸಾಲು ಸಾಲು ಪ್ರಶ್ನೆ

    -ಉತ್ತರ ಕೊಡಿ ಮೋದಿ ಎಂದು ಕೇಳಿದ ಮಾಜಿ ಸಿಎಂ

    ಬೆಂಗಳೂರು: ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರತಿ ಟ್ವೀಟ್ ಕೊನೆಗೆ ಉತ್ತರ ಕೊಡಿ ಮೋದಿ ಎಂದು ಹ್ಯಾಶ್ ಟ್ಯಾಗ್ ಬಳಸಿ ಪ್ರಶ್ನಿಸಿದ್ದಾರೆ.

    ಸಿದ್ದರಾಮಯ್ಯ ಟ್ವೀಟ್:
    ಕಾವೇರಿ ನೀರು ಹಂಚಿಕೆಯಲ್ಲಿ ಅನ್ಯಾಯ ಮಾಡಿದ್ರಿ, ಈಗ ಮಹದಾಯಿ ಯೋಜನೆಯನ್ನು ತಡೆದು ದ್ರೊಹ ಮಾಡುತ್ತಿದ್ದೀರಿ, ಚುನಾವಣಾ ಕಾಲದಲ್ಲಿ ನಿಮ್ಮ ಜಲಸಂಪನ್ಮೂಲ ಸಚಿವ ಹೇಳಿದ್ದೇನು? ಈಗ ಮಾಡಿದ್ದೇನು? ಕರ್ನಾಟಕದ ಜನರ ಬಗ್ಗೆ ನಿಮಗೆ ಯಾಕಿಷ್ಟು ದ್ವೇಷ, ಅಸೂಯೆ? ಕೇಂದ್ರ- ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ರಾಜ್ಯದ ಭಾಗ್ಯದ ಬಾಗಿಲು ತೆರೆಯುತ್ತೆ ಎಂದು ಭಾಷಣ ಮಾಡಿದ್ರಿ, ಅಮಾಯಕ ಜನ ನಿಮ್ಮ ಮಾತು ನಂಬಿ 25 ಸ್ಥಾನ ಗೆಲ್ಲಿಸಿಕೊಟ್ಟರು. ನಮ್ಮ ಭಾಗ್ಯದ ಬಾಗಿಲು ತೆಗೆಯಲಿಲ್ಲ, ಕರ್ನಾಟಕದ ಪಾಲಿಗೆ ನಿಮ್ಮ ಕಚೇರಿ ಬಾಗಿಲು ಮುಚ್ಚಿದ್ದೀರಿ, ಯಾಕೆ?

    ಆಪರೇಷನ್ ಕಮಲ ಮಾಡಿ ಹಿಂದಿನ ಬಾಗಿಲಿನಿಂದ ಸರ್ಕಾರ ರಚಿಸುತ್ತೀರಿ, ನೈತಿಕ ರಾಜಕಾರಣದ ಬಗ್ಗೆ ಭಾಷಣ ಮಾಡ್ತೀರಿ. ರಾಜಕೀಯ ವಿರೋಧಿಗಳ ಮೇಲೆ ಐಟಿ, ಇಡಿ, ಸಿಬಿಐ ಛೂ ಬಿಡ್ತೀರಿ, ಗಣಿಕಳ್ಳರು, ಭೂಕಳ್ಳರನ್ನು ನಿಮ್ಮ ಪಕ್ಷಕ್ಕೆ ಕರೆದು ಮುದ್ದಾಡ್ತೀರಿ. ಇದೇನಾ ನಿಮ್ಮ ”ಸ್ವಚ್ಚ ಭಾರತ್” ?

    ನೆರೆಹಾವಳಿಗೆ ಪರಿಹಾರ ಕೊಡಲಿಲ್ಲ, ಜಿಎಸ್ ಟಿ ನಷ್ಟಕ್ಕೆ ಪರಿಹಾರ ತುಂಬಿಕೊಡಲಿಲ್ಲ, ಕೇಂದ್ರ ಅನುದಾನದಲ್ಲಿ ನಮಗೆ ನೀಡಬೇಕಾದ ನ್ಯಾಯಬದ್ಧ ಪಾಲೂ ಕೊಡಲಿಲ್ಲ. ಈಗ ಯಾವ ಮುಖಹೊತ್ತು ರಾಜ್ಯಕ್ಕೆ ಬರ್ತಿದ್ದೀರಿ ಪ್ರಧಾನಿ ಮೋದಿ ಅವರೇ? ರಾಜ್ಯದ ಜನ ನೆರೆನೀರಲ್ಲಿ ಮುಳುಗಿದ್ದಾಗ ಕನಿಷ್ಠ ಸಾಂತ್ವನ ನೀಡಲು ನೀವು ಬರಲಿಲ್ಲ. ತುಟಿ ಅನುಕಂಪಕ್ಕಾದರೂ ನಿಮ್ಮಿಂದ ನಾಲ್ಕಕ್ಷರ ಸಮಾಧಾನದ ಮಾತು ಹೊರಡಲಿಲ್ಲ. ಈಗ ರೈತರ ಕಲ್ಯಾಣದ ಡೋಂಗಿ ಕಾರ್ಯಕ್ರಮಗಳ ಪ್ರಚಾರಕ್ಕೆ ನಮ್ಮ ಅಮಾಯಕ ಜನ ನೆನಪಾಗುತ್ತಿದ್ದಾರಾ? #ಉತ್ತರಕೊಡಿಮೋದಿ

  • ಕಾಂಗ್ರೆಸ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ: ಮೋದಿ

    ಕಾಂಗ್ರೆಸ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ: ಮೋದಿ

    ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಬಳಿಕ ನೇರವಾಗಿ ಬೆಂಗಳೂರಿನ ಹೆಚ್‍ಎಎಲ್ ಗೆ ಬಂದಿಳಿದರು.

    ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯಪಾಲ ವಜೂಭಾಯಿ ವಾಲಾ ಅವರು ಮೈಸೂರು ಪೇಟ ತೊಡಿಸಿ, ಹಾರ ಹಾಕಿ, ಶಾಲು ಹೊದಿಸಿ ಆದರದಿಂದ ಬರಮಾಡಿಕೊಂಡರು. ರಾಜ್ಯ ಬಿಜೆಪಿ ಘಟಕದಿಂದ ಹೆಚ್‍ಎಎಲ್ ಪಾರ್ಕಿಂಗ್ ಬಳಿ ಚಿಕ್ಕ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು. ಮೋದಿ ಅವರ ಮಾತುಗಳನ್ನು ಕೇಳಲು ಸಾವಿರಾರು ಕಾರ್ಯಕರ್ತರು ಸೇರಿದ್ದರು.

    ಕಾರ್ಯಕರ್ತರ ಒತ್ತಾಯದ ಮೇರೆಗೆ ಮೋದಿ ಮಾತನಾಡಿದರು. ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ನ್ನು ತರಾಟೆಗೆ ತೆಗೆದುಕೊಂಡರು. ಕರ್ನಾಟಕದ ಜನತೆ ಚುನಾವಣೆಗೂ ಮುನ್ನ ವಿಕಾಸ ಪಥವನ್ನು ಸೇರಲು ಕಾತುರರಾಗಿದ್ದಾರೆ. ಕರ್ನಾಟಕದಲ್ಲಿಯೂ ಅಭಿವೃದ್ಧಿ ಪಥದತ್ತ ಸಾಗಲಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

    ಇದನ್ನೂ ಓದಿ: ಮೀನೂಟ ತಿಂದುಬಂದ ಸಿಎಂ, ಉಪವಾಸದಲ್ಲೇ ಧರ್ಮಸ್ಥಳಕ್ಕೆ ಬಂದ ಮೋದಿ!

    ಕಾಂಗ್ರೆಸ್ ದೇಶದ ಭದ್ರತಾ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ದೇಶದ ಜನತೆಗೆ ಕಾಂಗ್ರೆಸ್ ಮೇಲೆ ಯಾವುದೇ ನಂಬಿಕೆ ಮತ್ತು ವಿಶ್ವಾಸಗಳಿಲ್ಲ. ಕಾಶ್ಮೀರಕ್ಕಾಗಿ ದೇಶದ ಎಲ್ಲ ರಾಜ್ಯದ ಜನರು ಬಲಿದಾನ ನೀಡಿದ್ದಾರೆ. ದೇಶಕ್ಕೆ ಬಲಿದಾನ ನೀಡಿದವರ ಬಗ್ಗೆ ರಾಜಕೀಯ ಮಾಡುವುದು ಎಷ್ಟು ಸರಿ. ಅಂಥವರಿಂದ ದೇಶದ ಅಭಿವೃದ್ಧಿ ಆಗುವುದಿಲ್ಲ. ಭಾರತದ ಶಿಸ್ತು, ಸಂಯಮ, ಧೈರ್ಯವನ್ನು ಡೋಕ್ಲಾಂ ಘಟನೆಯಿಂದ ಇಡೀ ವಿಶ್ವವೇ ನೋಡಿದೆ. ಕಾಂಗ್ರೆಸ್ ಡೋಕ್ಲಾಂ ಬಗ್ಗೆ ಸುಳ್ಳು ಸುದ್ದಿ ಹರಿಡಿದ್ದರು. ಇಂದು ಕಾಂಗ್ರೆಸ್ ತಾವು ನೀಡಿದ ಪ್ರತಿಯೊಂದು ಹೇಳಿಕೆಗೆ ದೇಶದ ಜನತೆಗೆ ಉತ್ತರ ನೀಡಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಮೋದಿ ಅವರು ಹೆಚ್‍ಎಎಲ್ ವಿಮಾನ ನಿಲ್ದಾಣದಿಂದ ನೇರವಾಗಿ ಮಧ್ಯಾಹ್ನ 3.30ರವರೆಗೆ ಸೌಂದರ್ಯ ಲಹರಿ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಂಜೆ 4.45ಕ್ಕೆ ಬೆಂಗಳೂರಿನಿಂದ ಬೀದರ್ ಗೆ ಪ್ರಯಾಣ ಬೆಳೆಸಿ ಸಂಜೆ 5.10ಕ್ಕೆ ಬೀದರ್-ಕಲಬುರಗಿ ರೈಲು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿಸಿ ಸಂಜೆ 6.20ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

    ಇದನ್ನೂ ಓದಿ: ಧರ್ಮಸ್ಥಳದಲ್ಲಿ ನಮೋ ಮೇನಿಯಾ- ಭಾಷಣದುದ್ದಕ್ಕೂ ಹೆಗ್ಗಡೆರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

    ಇದನ್ನೂ ಓದಿ: ಧರ್ಮಸ್ಥಳಕ್ಕೆ ನನ್ನನ್ನು ಕರೆದಿದ್ರೆ ಹೋಗುತ್ತಿದ್ದೆ: ಸಿಎಂ ಸಿದ್ದರಾಮಯ್ಯ